#ಕಾಲಿಂದಿ
(ಕಿರುಕಾದಂಬರಿ)
(ನಿವೇದನೆ: ಸಮಾಜ ಆರೋಗ್ಯಕರ ಸಮಾಜವಾಗಿ ಉಳಿಯಬೇಕಾದರೆ ಅದನ್ನು ಕಟ್ಟಿ ನಿಲ್ಲಿಸುವ ನಾಗರಿಕರು ತಮ್ಮ ಹಕ್ಕು ಬಾಧ್ಯತೆಗಳನ್ನು, ಅರಿತು ಬಾಳಬೇಕು. ಯಾರದೋ ಒಬ್ಬರ ಸ್ವಾರ್ಥವು ಅಮಾಯಕ ಜೀವವೊಂದನ್ನು ಬಲಿ ಪಡೆದರೆ ಅದು ಸ್ವಸ್ಥ ಸಮಾಜವಲ್ಲ. ದಶಕಗಳ ಹಿಂದೆ ನಡೆದ ಸತ್ಯ ಘಟನೆಯೊಂದು ಈ ಕಾದಂಬರಿಯ ಮೂಲವಸ್ತು. ಅಂದಿನಿಂದ ಇಲ್ಲಿಯ ವರೆಗೆ ಗಂಗೆಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ, ಪರಿವರ್ತನೆಗಳ ಹೊಸ ಗಾಳಿ ಬೀಸಿದೆ ಆದರೂ ದುರಂತವೊಂದರ ಇನ್ನೊಂದು ಮುಖ ಹೀಗೂ ಇರುತ್ತದೆ ಎಂದರೆ ಆಶ್ಚರ್ಯವಾಗದು)
**********
ಕಾಲಿಂದಿ
ಹಾಲ್ ನಲ್ಲಿ ಇದ್ದ ಗೋಡೆಗಡಿಯಾರ ಹತ್ತು ಬಾರಿ ಗಂಟೆ ಹೊಡೆದು ಸಮಯ ಎಷ್ಟಾಗಿದೆ ಎಂಬುದನ್ನು ಸೂಚಿಸಿತು. ಕ್ಯಾಲೆಂಡರ್ ನಲ್ಲಿ ಕಾಣಿಸುತ್ತಿದ್ದ ತಾರೀಖು 22ಅಕ್ಟೋಬರ್ 1998 ಎಂದು ಸೂಚಿಸುತ್ತಿತ್ತು. ಇಂದು ಯಾವೆಲ್ಲ ಮಹತ್ವದ ಕೆಲಸಗಳನ್ನು ಪೂರೈಸಬೇಕು ಎಂಬ ಯೋಚನೆಯಲ್ಲೇ ಮನಸ್ಸು ಮುಳುಗಿರುತ್ತಿದ್ದರೂ ಆದಷ್ಟು ಬೇಗ ಆಫೀಸಿಗೆ ಹೊರಟುಬಿಡುವ ಇರಾದೆಯಿಂದ ಸಿದ್ಧರಾಗುತ್ತಿದ್ದ ಶ್ರೀನಿವಾಸಮೂರ್ತಿ ಟೈ ಗಂಟು ಹಾಕಿಕೊಳ್ಳುತ್ತ ಹೊರಬಂದು, "ಅಮ್ಮಾ ನನಗೆ ಹೊತ್ತಾಗಿದೆ ಬರಲೇ ನಾನು?'' ಎನ್ನುತ್ತ ತಮ್ಮ ಬ್ರೀಫ್ ಕೇಸನ್ನು ಎತ್ತಿಕೊಂಡರು.
"ಆಗಲೇ ಹತ್ತು ಗಂಟೆ ಆಯ್ತೇನೋ ಶೀನೂ'’ ಎನ್ನುತ್ತ ಹೊರಬಂದರು ತಾಯಿ ಅಂಬುಜಮ್ಮ.
'’ಹೌದಮ್ಮ, ತುಂಬಾ ಕೆಲಸವಿದೆ. ಈ ವಾರದಲ್ಲೇ ಟೂರಿಗೆ ಬೇರೆ ಹೋಗಬೇಕಿದೆ" ಎಂದವರು ಹೊರಬಾಗಿಲು ದಾಟುವಷ್ಟರಲ್ಲೇ ಪೋಸ್ಟ್ ಮ್ಯಾನ್ ಬಂದಿದ್ದ. 'ಟೆಲಿಗ್ರಾಂ ಸರ್' ಎಂದು ಅವರೆದುರು ಪೆನ್ನು ಚಾಚಿದ ಸಹಿಗಾಗಿ.(ಟೆಲಿಗ್ರಾಂ ಇನ್ನೂ ಮಹತ್ವದ ಸಂಪರ್ಕ ಸಾಧನವಾಗಿದ್ದ ಸಮಯವದು)
"ಕಾಲಿಂದಿ ಸೀರಿಯಸ್ ತಕ್ಷಣ ಬರಬೇಕು" ಎಂದಿತ್ತು ತಂತಿಯಲ್ಲಿ, ಒಂದುಕ್ಷಣ ಏನೂ ತೋಚದಂತಾಗಿ ಸುಮ್ಮನೆ ನಿಂತರು ಶ್ರೀನಿವಾಸಮೂರ್ತಿ,
"ಏನೋ ತುರ್ತು ಟೆಲಿಗ್ರಾಂ ಬಂದಿದೆಯಾ?''
ಅಂಬುಜಮ್ಮ ಅವರ ಬದಿಯಲ್ಲೇ ಬಂದು ನಿಂತು ಕೇಳಿದಾಗ, "ಹೌದಮ್ಮಾ ಕಾಲಿಂದಿಗೆ ಹುಶಾರಿಲ್ಲವೆಂದು ಅವರ ಮಾವ ತಂತಿ ಕಳಿಸಿದ್ದಾರೆ" ಎಂದರು.
"ಎಂಟತ್ತು ದಿನದ ಹಿಂದೇನೇ ಅಲ್ಲವೇನೋ ನೀನು ಬೆಂಗಳೂರಿಗೆ ಹೋಗಿ ಅವರನ್ನೆಲ್ಲ ಮಾತನಾಡಿಸಿ ಬಂದಿದ್ದೆ ಕಾಲಿಂದಿ ಚೆನ್ನಾಗಿದ್ದಾಳೆ, 'ಇಲ್ಲಿಗೆ ಬಾಮ್ಮಾ' ಅಂತ ಕರೆದರೂ ಅತ್ತೆಮಾವನ್ನ ಬಿಟ್ಟು ಬರ್ಲಿಕ್ಕೆ ಒಲ್ಲೆ ಅಂದಳೂಂತ ಹೇಳಿದೆ. ಈಗ ಇದ್ದಕ್ಕಿದ್ದಂತೆ ಏನಾಯ್ತಪ್ಪಾ ಮಗೂಗೆ?"
ಶ್ರೀನಿವಾಸಮೂರ್ತಿಯೂ ಯೋಚನೆಯಲ್ಲಿ ಸಿಲುಕಿದ್ದರು. ಮೊನ್ನೆಯಷ್ಟೇ ಭೇಟಿಯಾಗಿತ್ತು. ಆರೋಗ್ಯವಾಗಿ ನಗುನಗುತ್ತಿದ್ದ ಮಗಳು, "ನಾನೀಗ ಅತ್ತೆ ಮಾವನ್ನ ಬಿಟ್ಟು ತುಮಕೂರಿಗೆ ಬಂದರೆ ಅವರಿಗೆ ತುಂಬ ಕಷ್ಟವಾದೀತು ಅಪ್ಪ. ನಾವೀ ಹೊಸ ಮನೆಗೆ ಬಂದು ಇನ್ನೂ ಹದಿನೈದು ದಿನವೂ ಕಳೆದಿಲ್ಲ. ಸಾಮಾನು ಸಹ ಎಲ್ಲ ಸರಿಯಾಗಿ ಜೋಡಿಸಿದ್ದಾಗಿಲ್ಲ. ಎಲ್ಲಾ ಹೊಸ ವಾತಾವರಣ, ಹೊಂದಿಕೊಳ್ಳಲು ಸಮಯಬೇಕು. ನೋಡೋಣ ಸಾಧ್ಯವಾದ್ರೆ ಮುಂದಿನ ತಿಂಗಳು ಬತ್ತೇನೆ" ಎಂದಿದ್ದಳು.
ಈ ಹೆಣ್ಣು ಮಕ್ಕಳೇ ಹೀಗೆ, ಹುಟ್ಟಿದ ಮನೆ ತೊರೆದು ಸೇರಿದ ಮನೆಯಲ್ಲಿ ಎಷ್ಟು ಬೇಗ ಬೆರೆತುಹೋಗ್ತಾರೆ? ಮದುವೆಯಾಗಿ ಇನ್ನೂ ಒಂದೇ ವರ್ಷವಾಗಿದೆ. ಆಗಲೇ ಅತ್ತೆ ಮಾವನನ್ನು ಹೇಗೆ ನಯವಿನಯದಿಂದ ಗೆದ್ದುಕೊಂಡಿದ್ದಾಳೆ. ಪತಿ ಇಲ್ಲಿಲ್ಲ, ವಿದೇಶದಲ್ಲಿದ್ದಾನೆ ಎಂದು ಹಾಯಾಗಿ ತವರಿಗೆ ಬಂದಿರಲು ಮನಸ್ಸು ಮಾಡಲಿಲ್ಲ ಕಾಲಿಂದಿ. ತಾವೇ ಬಲವಂತ ಮಾಡಿದ್ದರು. "ಒಂದು ಹದಿನೈದು ದಿನವಾದರೂ ಬಾಮ್ಮ ತುಮಕೂರಿಗೆ, ನಿನ್ನ ಅಜ್ಜಿ ಹಂಬಲಿಸ್ತಾಳೆ ನಿನ್ನ ನೋಡಲಿಕ್ಕೆ" ಕಾಲಿಂದಿ ನಕ್ಕಿದ್ದಳು. “ಅಜ್ಜಿಯ ನೆನಪು ನನಗೂ ತುಂಬ ಆಗುತ್ತೆ ಅಪ್ಪ. ಬೇಗನೇ ಬರುತ್ತೇನಂತ ಹೇಳಿ ಅವಳಿಗೆ ನಗುನಗುತ್ತಲೇ ಬೀಳ್ಕೊಟ್ಟಿದ್ದಳು ತಮ್ಮನ್ನು. ಈಗ ಇದ್ದಕ್ಕಿದ್ದಂತೆ ನರ್ಸಿಂಗ್ ಹೋಮಿಗೆ ಸೇರಿಸುವಂಥ ಕಾಯಿಲೆ ಏನಾಗಿರಬೇಕು ಅವಳಿಗೆ?
"ಶೀನೂ" ತಾಯಿ ಕರೆದಾಗ ಬೆಚ್ಚಿ ಯೋಚನೆಯ ಗುಂಗಿನಿಂದ ಹೊರಬಂದರು. 'ಅಂ, ಅದು... ಅವರು ಹಳೆಮನೆ ಬದಲಾಯಿಸಿ ಜಯನಗರದ ಹೊಸ ಮನೆಗೆ ಹೋಗಿದ್ದಾರಲ್ಲಮ್ಮಾ, ನೀರುಗೀರು ಬದಲಾಯಿಸಿ ಜ್ವರ-ಪರ ಬಂದಿರಬೇಕು. ಮನೆಯಲ್ಲಿ ಅವಳ ಅತ್ತೆ ಮಾವ ಇಬ್ಬರೇ ಇರುವದಲ್ಲವ? ಅದಕ್ಕೇ ನನಗೆ ತಿಳಿಸಿದ್ದಾರೆ. ಯಾವುದಕ್ಕೂ ನಾನೊಮ್ಮೆ ಹೋಗಿ ನೋಡಿಕೊಂಡು ಬತ್ತೇನೆ... ನೀನು ಚಿಂತೆ ಮಾಡೋದು ಬೇಡ ಮ್ಮ" ಎಂದರು. ಮಗಳಿಗೆ ಸೀರಿಯಸ್ ಎಂಬ ವಿಷಯವನ್ನು ತಾಯಿಗೆ ಈಗಲೇ ಹೇಳುವದು ಬೇಡ ಸುಮ್ಮನೆ ಒದ್ದಾಡುತ್ತಾಳೆ ಎಂದು ಯೋಚಿಸುತ್ತಾ ಬ್ರೀಫ್ ಕೇಸಿನಲ್ಲಿ ಒಂದೆರಡು ಬಟ್ಟೆಗಳನ್ನು ತುಂಬಿಸಿಕೊಂಡು ಹೊರಡಲಣಿಯಾದರು.
"ಮಗು ಬೇಗ ಗುಣವಾಗಲಪ್ಪಾ, ತಾಯಿ ಇಲ್ಲದ ಕಂದ, ಶೀನೂ, ಬರುವಾಗ ಅವಳನ್ನ ಹೇಗಾದ್ರೂ ಮಾಡಿ ಇಲ್ಲಿಗೇ ಕಕ್ಕೊಂಡು ಬಾರಪ್ಪ. ಇಲ್ಲೇ ಡಾಕ್ಟರಿಗೆ ತೋರಿಸೋಣ ಬೇಕಾದ್ರೆ ನಾಕುದಿನ ಎಣ್ಣೆನೀರು ಹಾಕಿ. ಒಳ್ಳೆ ಊಟತಿಂಡಿ ಮಾಡಿ ಹಾಕ್ತಿನಿ ಸುಧಾರಿಸಿಕೊಂಡ ಮೇಲೆ ಬೇಕಾದ್ರೆ ಮತ್ತೆ ಕರೊಂಡು ಹೋಗಿಬಿಡುವೆಯಂತೆ" ಎಂದರು ಅಂಬುಜಮ್ಮ.
"ಆಗಲಮ್ಮಾ' ಎಂದರು. ದೇವರ ಕೋಣೆಯತ್ತ ನಡೆದ ಅಂಬುಜಮ್ಮ ತುಪ್ಪದ ದೀಪವೊಂದನ್ನು ಹಚ್ಚಿಟ್ಟು ಕಾಲಿಂದಿಗೆ 'ಆರೋಗ್ಯಭಾಗ್ಯ ನೀಡು ದೇವ' ಎಂದು ಕೈ ಮುಗಿದರು.
{ಮುಂದುವರಿಯುತ್ತದೆ}
ಜಯಶ್ರೀ ದೇಶಪಾಂಡೆ
************