Thursday, 6 August 2026

" ನಾಳೆ ಸಂಜೆ ಶೋಭಾ ಯಾತ್ರೆ- ನಂತರ 
ಐವತ್ತೆರಡು ದಿನಗಳ ಕಾಲ ಧಾರವಾಡದ ಉತ್ತರಾಧಿಮಠ-ದಲ್ಲಿ ' ಚಾತುರ್ಮಾಸ'-
ದ ನಿಮಿತ್ಯ ಐವತ್ತೆರಡು ದಿನಗಳ ಕಾಲ ೧೦೦೮-ಸತ್ಯಾತ್ಮತೀರ್ಥ ಸ್ವಾಮೀಜಿಯವ ರಿಂದ ವಿಶೇಷ ಪೂಜೆಗಳು/ಭಕ್ತರಿಗೆ ಊಟ- ಫಲಹಾರ- ದ ವ್ಯವಸ್ಥೆ/ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಆಗಲೇ ಹಲವು ತಿಂಗಳಿನಿಂದ ಅದರ ವ್ಯವಸ್ಥೆ planning/ಇನ್ನಿತರ ಕಾರ್ಯಕ್ರಮಗಳನ್ನು ಸಿದ್ಧಪಡಿಸಿಟ್ಟು ಕೊಳ್ಳಲಾಗಿದೆ... ಹೆಂಗಸರು/ಗಂಡಸರು/ಮಕ್ಕಳು ಎಂಬ ಭೇದವಿಲ್ಲದೇ ಚಾತುರ್ಮಾಸ್ಯ ಕಾರ್ಯಕ್ರಮಗಳನ್ನು 'ನ ಭೂತೋ ನ ಭವಿಷ್ಯತಿ- ಎಂಬಂತೆ  ಶ್ರಮಪಟ್ಟು/ ಹಗಲು ರಾತ್ರಿಯನ್ನದೇ ದುಡಿದು
ಮಾಡುತ್ತಿರುವುದು ರಾಮದೇವರ ಕೃಪೆಯೋ ಎಂಬಂತೆ ಭಾಸವಾಗುತ್ತಿದೆ...

ಜೈ ಶ್ರೀರಾಮ್...

Tuesday, 4 August 2026

ಅಂದುಕೊಂಡದ್ದು...

           ನನ್ನದೀಗ ಬದುಕಿನಲ್ಲಿಯ ಮೂರನೇ ಅಧ್ಯಾಯ...ಮಗಳಾಗಿ/ ಅಮ್ಮನಾಗಿ ಮುಗಿದ ಮೇಲೆ ಇದೀಗ
ಅಜ್ಜಿಯಾಗಿ ನಡೆಯುತ್ತಿದ್ದೇನೆ.ಹಟ ಮಾಡಿ ಕೆಲಸ ಮಾಡುವುದಿಲ್ಲ- ಮೊಮ್ಮಕ್ಕ ಳಿಗೆ ಅನವಶ್ಯಕ ಸಲಹೆಗಳಿಲ್ಲ.ಬೇಕಾದಾಗ ನನ್ನಿಂದಾಗುವ ಒಂದಿಷ್ಟು ಕೆಲಸಗಳನ್ನು
ಮಾಡುತ್ತ ವೇಳೆ ಕಳೆಯುತ್ತೇನೆ.ಆಗುವಲ್ಲಿ
ಮಾತ್ರ ಇತರರೊಂದಿಗೆ ಹೊರಹೋಗು ತ್ತೇನೆ /ಅವಶ್ಯಕತೆಯಿದ್ದಲ್ಲಿ ಹಿಂಬಾಲಿಸು ತ್ತೇನೆ...ಸಂಕ್ಷಿಪ್ತವಾಗಿ ನನಗೂ/ನನ್ನ ಜೊತೆ ಗಿದ್ದವರಿಗೂ ವಿನಾಕಾರಣ ಅನಾನುಕೂಲ ವಾಗುವುದನ್ನು ತಪ್ಪಿಸಲು ನೋಡುತ್ತೇನೆ.

  ‌‌‌‌          ಉಳಿದಂತೆ ದಿನಕ್ಕೊಂದು ಪುಟ್ಟ
Post ಹಾಕುತ್ತೇನೆ-ವಿಷಯದ ಬಗ್ಗೆ ಹೆಚ್ಚು ವಿಚಾರ ಮಾಡುವುದಿಲ್ಲ..ದಿನದ ಘಟನೆ ಗಳನ್ನೇ ದಿನಚರಿಯ ಭಾಗದಂತೆ ಕಾಣಿಸು ತ್ತೇನೆ...ಮುಖ್ಯ ಕಾರಣ ವೇಳೆಯ
ಸದುಪಯೋಗ/ಬರೆಯುವುದರ ರೂಢಿ/
ತಲೆ+ ಕೈಗಳಿಗೆ ಚಟುವಟಿಕೆ...ಅಲ್ಜೈಮರ್
/ಡಿಮೆನ್ಶಿಯಾದಂಥ ಹಿರಿಯ ನಾಗರಿಕರ
ಸಮಸ್ಯೆಗಳನ್ನು ಕೈಲಾದಷ್ಟು ದೂರವಿರಿಸ ಲು ಸಣ್ಣದೊಂದು ಯುಕ್ತಿ- ಅಷ್ಟೇ...ಥಂಡಿ
ಯ ಕಾರಣದಿಂದ ಹೆಚ್ಚು walking ಮಾಡುವುದಿಲ್ಲ...ಕಾಲುಗಳಿಗೆ ತಡೆಯು ವಷ್ಟು ಒಂದೆರಡು ಸುತ್ತು.. ದೂರದರ್ಶನ ಯಾವಾಗಲೋ ದೂರವಾಗಿದೆ...ಆಗಾಗ
ಒಂದಿಷ್ಟು U-tube ನ ಬಳಕೆ...ಆಗಾಗ
ಒಂದೋ- ಎರಡೋ ಫೋನಗಳು- 

ಅಷ್ಟೇ...

          

         ‌ ‌





Thursday, 2 July 2026

*ಅಮೆರಿಕಕ್ಕೆ ಭೇಟಿ ನೀಡಿರುವ ಹಿರಿಯ ನಾಗರಿಕರೊಬ್ಬರ ಸಲಹೆ:*

ಆತ್ಮೀಯ ಸ್ನೇಹಿತರೇ,
ನಾವು ಕಳೆದ ಎರಡು ತಿಂಗಳಿನಿಂದ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ವಾಸಿಸುತ್ತಿದ್ದೇವೆ. ನಾವು ಭಾರತದಿಂದ ಹೊರಡುವಾಗ ನನ್ನ ಹೆಂಡತಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಸ್ಥಿತಿಯನ್ನು ಪರಿಗಣಿಸಿ, ನಾವು ಸಾಕಷ್ಟು ಔಷಧಿಗಳನ್ನು ನಮ್ಮೊಂದಿಗೆ ತಂದಿದ್ದೆವು. ಅಮೆರಿಕದಲ್ಲಿ ಆ ಔಷಧಿಗಳನ್ನು ಬಳಸಿದ ನಂತರ, ಅವರು ಬಹುತೇಕ ಚೇತರಿಸಿಕೊಂಡಿದ್ದರು.
ಆದಾಗ್ಯೂ, ನಮ್ಮ ಸಂಗ್ರಹ ಖಾಲಿಯಾದ ಕಾರಣ, ನಮ್ಮ ಪ್ರವಾಸದ ಸಮಯದಲ್ಲಿ ಅವರ ಉಸಿರಾಟದ ಸಮಸ್ಯೆ ಮರುಕಳಿಸಬಹುದೆಂದು ನಾನು ಚಿಂತಿತನಾದೆ. ಆದ್ದರಿಂದ, ನಾನು ನನ್ನ ಮಗಳಿಗೆ ಸಿಯಾಟಲ್‌ನಲ್ಲಿರುವ ಶ್ವಾಸಕೋಶಶಾಸ್ತ್ರಜ್ಞರ (ಉಸಿರಾಟದ ತಜ್ಞ) ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಕೇಳಿದೆ.
ಆದರೆ ನನ್ನ ಮಗಳಿಗೆ ನೇರವಾಗಿ ತಜ್ಞರನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿದರು; ನಾವು ಮೊದಲು ಸಾಮಾನ್ಯ ವೈದ್ಯರನ್ನು(general ) ಸಂಪರ್ಕಿಸಬೇಕಾಗಿತ್ತು. ಒಂದು ವಾರದ ನಂತರ ನಮಗೆ ಅಪಾಯಿಂಟ್‌ಮೆಂಟ್ ಸಿಕ್ಕಿತು - ಅದು ಕೂಡ ವೀಡಿಯೊ ಕರೆಯ ಮೂಲಕ ಮಾತ್ರ.
ನಾವು ವೈದ್ಯರೊಂದಿಗೆ ಸುಮಾರು 10 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡಿದೆವು ಮತ್ತು ನನ್ನ ಹೆಂಡತಿ ಭಾರತದಲ್ಲಿ ಬಳಸುತ್ತಿದ್ದ ಔಷಧಿಗಳನ್ನು ವಿವರಿಸಿದೆವು. ಅವರು ಸಮಸ್ಯೆಯನ್ನು ಅರ್ಥಮಾಡಿಕೊಂಡರು ಮತ್ತು ಸೂಕ್ತವಾದ ಔಷಧಿಗಳನ್ನು ಸೂಚಿಸಿದರು, ನಾವು ಅವುಗಳನ್ನು ಔಷಧಾಲಯದಿಂದ ಪಡೆಯಬಹುದು ಎಂದು ಹೇಳಿದರು.  ಆದರೆ, ನಾವು ಔಷಧಾಲಯದಲ್ಲಿ ವಿಚಾರಿಸಿದಾಗ, ಔಷಧಿಗಳು ತಕ್ಷಣ ಲಭ್ಯವಿಲ್ಲ ಮತ್ತು ಬರಲು 4–5 ದಿನಗಳು ಬೇಕಾಗುತ್ತದೆ ಎಂದು ನಮಗೆ ತಿಳಿಸಲಾಯಿತು.

ನಾವು ಅಂತಿಮವಾಗಿ ಐದನೇ ದಿನ ಔಷಧಿಗಳನ್ನು ಪಡೆದುಕೊಂಡೆವು. ಆಶ್ಚರ್ಯಕರವಾಗಿ, ಔಷಧಿಗಳನ್ನು 'ಸಿಪ್ಲಾ' ತಯಾರಿಸಿದ್ದು ಮತ್ತು 'ಭಾರತದಲ್ಲಿ ತಯಾರಿಸಲಾಗಿದೆ' ಎಂಬ ಲೇಬಲ್ ಅನ್ನು ಹೊಂದಿತ್ತು. US ವೈದ್ಯಕೀಯ ವಿಮೆಯ ಮೂಲಕ 50% ರಿಯಾಯಿತಿಯ ನಂತರವೂ, ನಾವು ಇನ್ನೂ ₹21,000 ಗೆ ಸಮಾನವಾದ ಹಣವನ್ನು ಪಾವತಿಸಬೇಕಾಗಿತ್ತು. ಇದರರ್ಥ ಭಾರತದಲ್ಲಿ ಕೇವಲ ₹2,500 ಬೆಲೆಯ ಔಷಧಿಗಳು US ನಲ್ಲಿ ₹42,000 ವೆಚ್ಚವಾಗುತ್ತವೆ.

ಭಾರತದ ಯಾವುದೇ ಔಷಧಾಲಯದಲ್ಲಿ ಸುಲಭವಾಗಿ ಲಭ್ಯವಿರುವ ಔಷಧಿಗಳನ್ನು ಇಲ್ಲಿ ಪಡೆಯಲು ನಮಗೆ 12 ದಿನಗಳು ಬೇಕಾಯಿತು. ಒಂದು ವಾರದ ನಂತರ, ವೈದ್ಯರ ಸಮಾಲೋಚನೆ ಶುಲ್ಕಕ್ಕಾಗಿ ನಮಗೆ $283 (ಸುಮಾರು ₹23,000) ಬಿಲ್ ಬಂದಿತು.

ನಿಮ್ಮ ನಿವೃತ್ತಿಯ ವರ್ಷಗಳಲ್ಲಿ ಭಾರತದಲ್ಲಿ ವಾಸಿಸುತ್ತಿದ್ದರೆ ನೀವೇ ಅದೃಷ್ಟವಂತರು.

ನಾವು "ಉತ್ತಮ ಜೀವನ" ವನ್ನು ಹುಡುಕುತ್ತಾ ವಿದೇಶಗಳಿಗೆ ಹೋಗುತ್ತೇವೆ.  ಆದರೆ ನಾವು ಸ್ವಲ್ಪ ಯೋಚಿಸಿದರೆ... ಲಂಡನ್ ಅಥವಾ ನ್ಯೂಯಾರ್ಕ್‌ನಲ್ಲಿರುವ ಕೋಟ್ಯಾಧಿಪತಿಗಳಿಗೂ ಲಭ್ಯವಿಲ್ಲದ ಅನೇಕ ದೈನಂದಿನ ಅನುಕೂಲಗಳು ಭಾರತದ ಮಧ್ಯಮ ವರ್ಗಕ್ಕೆ ಸುಲಭವಾಗಿ ಸಿಗುತ್ತವೆ.

ನಮ್ಮ ದೇಶದಲ್ಲಿ ಸಾಮಾನ್ಯ ವ್ಯಕ್ತಿಯ ಜೀವನವೂ **ವಿಐಪಿ ಜೀವನಶೈಲಿ** ಎಂದು ತೋರಿಸುವ 7 ಉದಾಹರಣೆಗಳು ಇಲ್ಲಿವೆ:

1. *ಡೇಟಾ ಲಭ್ಯತೆ:*

ಪ್ರಪಂಚದಾದ್ಯಂತದ ದೇಶಗಳು ಮೂಲ ಇಂಟರ್ನೆಟ್‌ಗಾಗಿ ತಿಂಗಳಿಗೆ $50 (ಸುಮಾರು ₹4,000) ಗಿಂತ ಹೆಚ್ಚು ಖರ್ಚು ಮಾಡುತ್ತಿದ್ದರೆ, ನಾವು ಕೇವಲ ₹300 ಕ್ಕೆ ಹೈ-ಸ್ಪೀಡ್ 5G ಡೇಟಾವನ್ನು ಆನಂದಿಸುತ್ತೇವೆ. ನಮ್ಮಲ್ಲಿ ವಿಶ್ವದಲ್ಲೇ ಅತ್ಯಂತ ಅಗ್ಗದ ಡೇಟಾ ಇದೆ! ಇದು ನಮ್ಮ ಆರ್ಥಿಕತೆಯನ್ನು ಡಿಜಿಟಲ್ ಆಗಿ ಪರಿವರ್ತಿಸಿದೆ.

2. *"10-ನಿಮಿಷಕ್ಕೆ" ಮನೆ ಬಾಗಿಲಿಗೆ ವಿತರಣೆ:*

ನಿಮ್ಮ ಚಹಾಕ್ಕಾಗಿ ಶುಂಠಿ ಖಾಲಿಯಾಗಿದೆಯೇ ಅಥವಾ ಹಾಲು ಖಾಲಿಯಾಗಿದೆಯೇ? ಬ್ಲಿಂಕಿಟ್, ಜೆಪ್ಟೊ ಅಥವಾ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಆರ್ಡರ್ ಮಾಡಿ,ಒಲೆ ಮೇಲಿಟ್ಟಿರುವ ನೀರು ಕುದಿಯುವ ಮೊದಲೇ ಐಟಂ ನಿಮ್ಮ ಕೈಯಲ್ಲಿದೆ. ಯುರೋಪ್‌ನಲ್ಲಿ, ಇದಕ್ಕೆ ವಿರುದ್ಧವಾಗಿ, ನೀವು ಕೋಟ್ ಹಾಕಿಕೊಂಡು ಅಂಗಡಿಗೆ 15 ನಿಮಿಷಗಳ ಕಾಲ ಚಳಿಯಲ್ಲಿ ನಡೆಯಬೇಕಾಗುತ್ತದೆ - ಆದರೂ ಅಂಗಡಿ ಈಗಾಗಲೇ ಮುಚ್ಚಿರುತ್ತದೆ.

 3. *ತ್ವರಿತ ಆರೋಗ್ಯ ರಕ್ಷಣೆ:*

ತಜ್ಞರನ್ನು ಭೇಟಿ ಮಾಡಬೇಕೇ? ನೀವು ನೇರವಾಗಿ ಆಸ್ಪತ್ರೆಗೆ ಹೋಗಬಹುದು. ರಕ್ತ ಪರೀಕ್ಷೆ ಬೇಕೇ? ಪ್ರಯೋಗಾಲಯ ತಂತ್ರಜ್ಞರು ಬೆಳಿಗ್ಗೆ 6 ಗಂಟೆಗೆ ನಿಮ್ಮ ಮನೆಗೆ ಮಾದರಿಯನ್ನು ಸಂಗ್ರಹಿಸಲು ಬರುತ್ತಾರೆ ಮತ್ತು ವರದಿ ಮಧ್ಯಾಹ್ನದ ಒಳಗೆ ನಿಮ್ಮ WhatsApp ನಲ್ಲಿ ಬರುತ್ತದೆ.
ಮೂರು ತಿಂಗಳ ತನಕ ಕಾಯುವ ಅಥವಾ ಕ್ಷುಲ್ಲಕ ಕಾಯಿಲೆಗಳಿಗೆ ಸಹ "ವಿಮಾ ಅನುಮೋದನೆಗಳ" ಪಚೀತಿ ನಮಗಿಲ್ಲ.

4. *ಕೆಲಸಗಾರರ ವ್ಯವಸ್ಥೆ:*

ಮನೆ ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು ಮತ್ತು ಡ್ರೈವಿಂಗ್ ಮಾಡಲು, ಸಹಾಯ ಮಾಡಲು ಜನರನ್ನು ನೇಮಿಸಿಕೊಳ್ಳುವುದು ಇಲ್ಲಿನ ಶ್ರೀಮಂತರಿಗೆ ಮಾತ್ರ ಮೀಸಲಾಗಿರುವ ಐಷಾರಾಮಿ ಅಲ್ಲ; ಇದು ಮಧ್ಯಮ ವರ್ಗದ ಜೀವನದ ಬೆನ್ನೆಲುಬು. ಇದರಿಂದ ಎಷ್ಟೋ ಸಮಯ ಉಳಿತಾಯವಾಗುತ್ತದೆ.

5. *UPI ಕ್ರಾಂತಿ:*

₹5 ರಸ್ತೆಬದಿಯ ಚಹಾದಿಂದ ₹50,000 ಲ್ಯಾಪ್‌ಟಾಪ್‌ವರೆಗೆ - ಎಲ್ಲವೂ ಕೇವಲ ಸ್ಕ್ಯಾನ್ ಮೂಲಕ ದೊರೆಯುತ್ತದೆ! ವ್ಯಾಲೆಟ್‌ಗಳ ಅಗತ್ಯವಿಲ್ಲ, "ಕಾರ್ಡ್ ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ" ಎಂಬಂತಹ ಯಾವುದೇ ನೆಪಗಳಿಲ್ಲ ಮತ್ತು ಯಾವುದೇ ವಹಿವಾಟು ಶುಲ್ಕವಿಲ್ಲ. ಈ ನಿಟ್ಟಿನಲ್ಲಿ,  ಪ್ರಪಂಚದ ಉಳಿದ ಭಾಗ ನಮ್ಮಿಂದ ಬಹಳ ಹಿಂದುಳಿದಿದೆ.

 6. *"ಉಚಿತ" ಪುಟ್ಟ ಸಂತೋಷಗಳು:*

ನೀವು ಯಾವುದೇ ರೆಸ್ಟೋರೆಂಟ್‌ಗೆ ಭೇಟಿ ನೀಡಿದರೂ, ನಿಮಗೆ ಒಂದು ಲೋಟ ಕುಡಿಯುವ ನೀರು ಉಚಿತವಾಗಿ ಸಿಗುತ್ತದೆ (ಆದರೆ ಬೇರೆಡೆ ಅವರು ನಿಮಗೆ $5(₹480) ವಿಧಿಸುತ್ತಾರೆ). ನಮ್ಮ ತ್ವರಿತ ಅಗತ್ಯಗಳನ್ನು ಪೂರೈಸಲು ಬೀದಿಯ ಕೊನೆಯಲ್ಲಿ ಒಬ್ಬ ಇಸ್ತ್ರಿ ಮಾಡುವ ವ್ಯಕ್ತಿ / ಚಾಯ್ ವಾಲಾ ಇದ್ದಾರೆ. ಜೀವನವನ್ನು ಸುಗಮವಾಗಿ ನಡೆಸುವುದು ಈ ಸಣ್ಣ ವಿಷಯಗಳೇ.

7. *ಸಾಮಾಜಿಕ ಬಂಧಗಳು (ಸಾಮಾಜಿಕ ಸುರಕ್ಷತಾ ಜಾಲ):*

ನಾವು ಕಾನೂನು ಸೂಚನೆಗಳು ಮತ್ತು ನ್ಯಾಯಾಲಯಗಳ ಸಂಸ್ಕೃತಿಯಲ್ಲಿ ವಾಸಿಸುವುದಿಲ್ಲ; ನಾವು ಸಂಬಂಧಗಳ ಸಂಸ್ಕೃತಿಯಲ್ಲಿ ವಾಸಿಸುತ್ತೇವೆ. ನಾವು ಸಮಸ್ಯೆಯನ್ನು ಎದುರಿಸಿದರೆ, ನೆರೆಹೊರೆಯವರು ನ್ಯಾಯಾಲಯದ ನೋಟೀಸ್ ಕಳುಹಿಸುವುದಿಲ್ಲ - ಅವರು ಪ್ರೀತಿಯಿಂದ ಅಡುಗೆ , ತಿಂಡಿ ಕಳುಹಿಸುತ್ತಾರೆ.

*ಬಾಟಮ್ ಲೈನ್:*

 _ಭಾರತವು ಕೇವಲ ಒಂದು ದೇಶವಲ್ಲ; ಇದು ಪ್ರತಿ ತಿರುವಿನಲ್ಲಿಯೂ ಅನುಕೂಲಗಳಿಂದ ತುಂಬಿರುವ ಅದ್ಭುತ ಜಗತ್ತು. ಪಾಶ್ಚಿಮಾತ್ಯ ದೇಶಗಳಲ್ಲಿನ ಜನರು ತಮ್ಮ ಅರ್ಧದಷ್ಟು ಜೀವನವನ್ನು ಸ್ವತಃ - ಹುಲ್ಲುಹಾಸನ್ನು ಕತ್ತರಿಸುವುದರಿಂದ ಹಿಡಿದು ಪ್ಲಂಬಿಂಗ್ ಗಳಲ್ಲಿ- ಕಳೆಯುತ್ತಾರೆ, ಆದರೆ *ಭಾರತದಲ್ಲಿ ನಾವು ಸೇವಾ-ಆಧಾರಿತ ಜೀವನಶೈಲಿಯನ್ನು ಹೊಂದಿದ್ದೇವೆ, ಅಲ್ಲಿ ನಾವು ನಿರಂತರವಾಗಿ ನೆಮ್ಮದಿಯಿಂದ ಬದುಕಬಹುದು._* 

 > *ಇಲ್ಲಿ, ನಾವು ಕೇವಲ ಬದುಕುತ್ತಿಲ್ಲ... ಪ್ರತಿ ಕ್ಷಣವೂ ನಮ್ಮನ್ನು ನೋಡಿಕೊಳ್ಳುವ ಒಂದು ವ್ಯವಸ್ಥೆ ಇದೆ! "ಈ ಭಾರತೀಯ ಐಷಾರಾಮಿ ವ್ಯವಸ್ಥೆ" - ಪ್ರಪಂಚದ ಉಳಿದ ಭಾಗಗಳು ಅಸೂಯೆಪಡುವಂತೆ ಮಾಡುವ ವಾಸ್ತವ!* 🇮🇳🇮🇳*🇮🇳 ನಾಗರತ್ನಯ್ಯ ವಜ್ಜನಕುರಿಕೆ ನಾಗಣ್ಣ .*

Saturday, 27 June 2026

Friday, 19 June 2026

ಹಾಗೇ ಸುಮ್ಮನೇ ಅಲ್ಲ...

ಹೀಗೊಬ್ಬ  'ಕನಸು'ಗಾರ ಶಿಕ್ಷಕನಾದ ಕಥೆ..

                      ಅದೊಂದು ಕಾಲವಿತ್ತು.ಆಸಕ್ತಿ,ಅರ್ಹತೆ,ಅನುಕೂಲಗಳು ಇದ್ದವರು ಮಾತ್ರ ಶಿಕ್ಷಣದ ಬಗ್ಗೆ  ಯೋಚಿಸುತ್ತಿದ್ದರು.ಬಹುತೇಕ ಜನ ಕುಲಕಸುಬನ್ನು ಅಲಿಖಿತ ಒಪ್ಪಂದದಂತೆ ಸ್ವೀಕರಿಸಿ ಬದುಕುವವರೇ ಜಾಸ್ತಿ.ನಮ್ಮ ಮನೆಯಲ್ಲಿ ಬಹಳಷ್ಟು ಆಸಕ್ತಿ, ಒಂದಿಷ್ಟು ಅರ್ಹತೆ ಬಿಟ್ಟರೆ ಅನುಕೂಲಗಳು ಶೂನ್ಯ.

           ‌"ಒಂದೂರಿನಲ್ಲಿ ಒಬ್ಬ ಬಡ ಬ್ರಾಮ್ಹಣನಿದ್ದ.. ಅವನಿಗೆ ಮನೆತುಂಬ ಮಕ್ಕಳು" ಎಂದು ಕಥೆ ಸುರುವಾದರೆ " ನಮ್ಮದಲ್ಲ ತಾನೇ" ಅನಿಸಿಬಿಡುವಷ್ಟು ಸಾಮ್ಯತೆ.  ನಮ್ಮ ಅಣ್ಣನಿಗೋ ಹೇಗಾದರೂ ಕಲಿಯಲೇ ಬೇಕು ಎಂಬ ಹಟ.  ಊರಲ್ಲಿ ಹೈಸ್ಕೂಲ್ ಇರಲಿಲ್ಲವಾದ್ದರಿಂದ ಪರ ಊರುಗಳಲ್ಲಿ ಇರಬೇಕು. ಅವನು ತಯಾರಿದ್ದರೂ ಇಟ್ಟುಕೊಳ್ಳುವವರು ಬೇಕಲ್ಲ.!ಕೊನೆಗೆ ಕೈಹಿಡಿದದ್ದು ವಾರಕರಿ.  ದಿನಕ್ಕೊಬ್ಬರ ಮನೆಯಲ್ಲಿ ಊಟ.  ಕೆಲವರು ನಿಜವಾದ ಸಹಾನುಭೂತಿಯಿಂದ ಊಟ ಹಾಕಿದರೆ, ಇನ್ನು ಕೆಲವರಿಗೆ ಅದು ಒತ್ತಾಯದ ಮಾಘಸ್ನಾನ. ಅತ್ತ ಯೋಚಿಸುವ ಹಾಗೇ ಇಲ್ಲ. ಕಠಿಣ ಪಯಣಕ್ಕೆ ಸಿದ್ಧನಾಗಲೇ ಬೇಕಾದ ಅನಿವಾರ್ಯತೆ  .ಆದದ್ದೂ ಆಯಿತು.  ಅಣ್ಣ ಊರು ಬಿಟ್ಟು  ರಾಣೇಬೆನ್ನೂರು ಸೇರಬೇಕಾಯಿತು..

               ವಿವಿಧ ಜನ..ವಿವಿಧ ಮನಸ್ಸುಗಳು..ವಿವಿಧ ಪರಿಸರ..ಜೊತೆಗೆ ಆರ್ಥಿಕ ಮುಗ್ಗಟ್ಟು..ಆದರೂ ಒಂದನ್ನೂ  ಮನೆಯವರೆಗೆ ತರದೇ ಎಲ್ಲವನ್ನೂ ಸದ್ದಿಲ್ಲದೇ ನುಂಗಿ  ನಂಜುಂಡನಾಗಿ  ಅದ್ಹೇಗೆ  ಹೈಸ್ಕೂಲ್ ಮುಗಿಸಿದನೋ ಗೊತ್ತಿಲ್ಲ. 

                    ಮುಂದೇನು??? ಬಗೆಹರಿಯದ ಪ್ರಶ್ನೆ.  ಕೊನೆಗೆ ಬೆಳಗಾವಿಯಲ್ಲಿ ದೂರದ ಬಂಧುಗಳೊಬ್ಬರ ಮನೆಯಲ್ಲಿದ್ದು  ಅವರಿವರ ಅಲ್ಪ ಸ್ವಲ್ಪು ಸಹಾಯ, ಟ್ಯೂಶನ್, scholorship ಮುಂತಾದ  ಹತ್ತು ಹಲವು  ಮಾರ್ಗಗಳಿಂದ ಕಾಲೇಜು  
ಶಿಕ್ಷಣದ  ಪ್ರಾರಂಭವಾಯಿತಾದರೂ
ದಿನವೊಂದು ಕಳೆದರೆ ಸಾಕಪ್ಪಾ ಎಂಬ ಅನಿಸಿಕೆ. ಬೇಕಾಗಿ ಆಯ್ದುಕೊಂಡ ದಾರಿ, ಗೊಣಗುವಂತಿಲ್ಲ..ಫೀ ತುಂಬುವ ವೇಳೆಗೆ ಪ್ರತಿವರ್ಷ ಮನೆಯಲ್ಲಿದ್ದ ಒಂದೇ ಒಂದು ಪಿತ್ರಾರ್ಜಿತ ಬೆಳ್ಳಿಯ ತಟ್ಟೆ ಅಕ್ಕಸಾಲಿಗರ  ಅಂಗಡಿ ಕಂಡು, ಅಣ್ಣನ  scholarship ಹಣ ಕೈಗೆ ಬಂದ ತಕ್ಷಣ ಪುನಃ  ಮನೆ ಸೇರುತ್ತಿತ್ತು.  ಅಪ್ಪ ಅದನ್ನು ಪಂಜೆಯಲ್ಲಿ ಸುತ್ತಿ ಬಗಲಲ್ಲಿಟ್ಟು ಹೊರಟರೆ  ಪರೀಕ್ಷೆ ಬಂತು ಎಂಬುದರ ಸೂಚಕ.

       ‌‌     ಕಾಲ ಯಾರಿಗಾಗಿಯೂ, ಯಾವತ್ತಿಗೂ  ನಿಂತ ಉದಾಹರಣೆಯಿಲ್ಲ.degree ಮುಗಿಯಿತು. ಅಣ್ಣನ ಕಲಿಕೆಯ  ದಾಹತೀರಲಿಲ್ಲ.

                ಆದರೆ ಈಗ ಅವನು ಕಷ್ಟಗಳಿಗೆ ಪಕ್ವವಾಗಿದ್ದ. ಅವುಗಳ ಜೊತೆ ತಕರಾರಿಲ್ಲದೇ  ಬದುಕುವದನ್ನು ರೂಢಿಸಿಕೊಂಡಿದ್ದ. ಕಲಿಯಬೇಕೆಂಬ ಹಟವೊಂದಕ್ಕೆ ಏನು ಬೇಕಾದರೂ ಮಾಡಲು ಸಿದ್ಧನಿದ್ದ.

                 ಅರ್ಜಣಗಿ ರಾಮಣ್ಣ ಅವರ ವಿದ್ಯಾರ್ಥಿ ನಿಲಯ  ಮಾಳಮಡ್ಡಿ ಧಾರವಾಡ ಅವನ ಮುಂದಿನ ನೆಲೆಯಾಯ್ತು. MSc ಯ ಹುಡುಗ,ದೊಡ್ಡವನಾಗಿದ್ದ. ಅಡ್ಡಾಡಿ ಚಂದಾ ವಸೂಲಿ ಮಾಡಲಾಗದೇ ನಿಲಯದ ವಿದ್ಯಾರ್ಥಿಗಳ  ಅಡಿಗೆ ಜವಾಬ್ದಾರಿ ವಹಿಸಿಕೊಂಡು ಬಾಣಸಿಗನಾದ. ಕಲಿಯಲೇಬೇಕೆಂಬ ದುರ್ಯೋಧನನ ಛಲ ಅವನಿಗೆ ಬದುಕಿನ ಹಲವು ಮಜಲುಗಳನ್ನು ಪರಿಚಯಿಸಿ ಅಗ್ನಿಯಲ್ಲಿ ಹಾಯಿಸಿ ಅಪರಂಜಿಯಾಗಿಸಿತು.ಯಾವ ಕಷ್ಟವೂ ಕಷ್ಟವೇಅಲ್ಲ, ಒಳ್ಳೆಯದಕ್ಕೇ ಎಂಬ ಭಾವ ಎಲ್ಲ ಅಗ್ನಿ ಪರೀಕ್ಷೆಗಳಲ್ಲೂ ಕಡೆಹಾಯಿಸಿ ಕಲಿತ ಕಾಲೇಜಿನಲ್ಲೇ ಉಪನ್ಯಾಸಕನಾದ.

               ಆದರೆ ಆಗಿನ್ನೂ JSS college ಧರ್ಮಸ್ಥಳದ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ಸಂಸ್ಥೆ  ಆರ್ಥಿಕ ಮುಗ್ಗಟ್ಟಿನಲ್ಲಿದ್ದು ಹಲವಾರು ತಿಂಗಳುಗಳ ವರೆಗೆ ವೇತನವೇ ಸಿಗುತ್ತಿರಲಿಲ್ಲ.  ಆದರೂ ನೌಕರಿಯಿದೆ ಎಂಬ ಸಮಾಧಾನದಲ್ಲಿ ಅಲ್ಲಿಲ್ಲಿ ಕೈಗಡ ಮಾಡಿ ಕೆಲವರ್ಷಗಳನ್ನು ಹಾಗೂ ಹೀಗೂ  ಕಳೆದು,ತಮ್ಮ- ತಂಗಿಯರಿಗಲ್ಲದೇ ಊರಿಂದ ಬರುವ ಅರ್ಹ,ಬಡ ವಿದ್ಯಾರ್ಥಿಗಳನ್ನೂ ತೆಕ್ಕೆಗೆಳೆದುಕೊಂಡು ದಡ ಕಾಣಿಸಿ ಅವರವರ ಬದುಕು ಕಟ್ಟಿಕೊಳ್ಳಲು , ಗಟ್ಟಿಗೊಳ್ಳಲು ಆಸರೆಯಾಗಿ ನಿಂತ  ದೊಡ್ಡತನ ಅವನದು.

           ಮತ್ತೆ ಕೆಲವೇ ವರ್ಷಗಳಲ್ಲಿ ತನ್ನದೇ ಟ್ಯೂಶನ್ class ಗಳನ್ನು ಪ್ರಾರಂಭಿಸಿ ಅದು ಸರಿಯಾದ ಲಯ ಕಂಡುಕೊಂಡಮೇಲೆ ಇನ್ನೂ ಸಾಕಷ್ಟು ವರ್ಷ ಕೆಲಸ ವಿದ್ದರೂ ಸ್ವಯಂ ನಿವೃತ್ತಿ ಪಡೆದು ತನ್ನದೇ ಒಂದು ಕಾಲೇಜು ಪ್ರಾರಂಭಿಸಿದ.ಅದಕ್ಕಾಗಿ , ವಿದ್ಯಾರ್ಥಿಗಳಿಗಾಗಿ  ತನ್ನ ಸ್ವಂತ ಮನೆಯನ್ನು ಬಿಟ್ಟು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ರೂಮ್ ಮಾಡಿಕೊಂಡು ವಾಸ್ತವ್ಯವನ್ನೇ ಕಾಲೇಜಿಗೆ ಸ್ಥಳಾಂತರಿಸಿದ.ಈಗ ಕಾಲೇಜೇ ಅವನ ಮನೆ. ಸಾವಿರಾರು ವಿದ್ದಾರ್ಥಿಗಳೂ ಸ್ವಂತ ಮೂರು ಮಕ್ಕಳ ಜೊತೆಗೆ ಸೇರ್ಪಡೆಯಾಗಿದ್ದಾರೆ.

             ಹೋದ ವರ್ಷವಷ್ಟೇ ವಿಜಯಕರ್ನಾಟಕದ " ಶಿಕ್ಷಣ ಕ್ಷೇತ್ರದಲ್ಲಿ ಸಾಧಕ"ರ ಪಟ್ಟಿಯಲ್ಲಿ ಸ್ಥಾನ ಪಡೆದು ಪ್ರಶಸ್ತಿ ಪಡೆದದ್ದು ಅವನಿಗೆ ವೈಯಕ್ತಿಕ ನೆಲೆಯಲ್ಲಿ ವ್ಯತ್ಯಾಸವೆನಿಸದಿದ್ದರೂ ನಮಗೆಲ್ಲ ಹೆಮ್ಮೆ.

     ‌‌‌‌‌        ಹಲವಾರು legendary figures  ಗಳಲ್ಲಿ ನಮ್ಮ ಅಣ್ಣನನ್ನೂ ಸೇರಿಸುವಂತಾದುದು ನಮ್ಮ ಸುದೈವ. ಇತ್ತೀಚೆಗೆ ಆರೋಗ್ಯ ಮೊದಲಿನಂತಿಲ್ಲ. ಆದರೂ ತನ್ನ class ಗಳ ಸಂಖ್ಯೆಯಲ್ಲಿ ಕಡಿತವಿಲ್ಲ.  ದಿನಚರಿಯಲ್ಲಿ ವ್ಯತ್ಯಾಸವಿಲ್ಲ. ಅಂತಃಕರಣದಲ್ಲಿ ಬೇರಾರೂ ಸಾಟಿಯಿಲ್ಲ. ಅವನೊಂದು ದೊಡ್ಡ‌ ಆಲದಮರ..ಅದರ ಕೆಳಗೆ ನಮ್ಮಂಥ ಲಕ್ಷಾನುಗಟ್ಟಲೇ ದಾರಿಹೋಕರು. ತಂಪೋ ತಂಪು.
             ಇಂದು ಶಿಕ್ಷಕರ ದಿನ.  ನಮ್ಮೆಲ್ಲರಿಂದ ಈ ಸಾಧಕನಿಗೆ ಎರಡೂ ಕೈಯೆತ್ತಿ ಸಾಷ್ಟಾಂಗ ನಮಸ್ಕಾರಗಳು.ಅವನಂಥ
ವರ  ಸಂತತಿ ಊರ್ಜಿತವಾಗಲಿ.  ನಮ್ಮ ಅಣ್ಣ ನಮ್ಮೆಲ್ಲರ ಹೆಮ್ಮೆ.🙏🙏🙏🙏🙏🙏

" ನಾಳೆ ಸಂಜೆ ಶೋಭಾ ಯಾತ್ರೆ- ನಂತರ  ಐವತ್ತೆರಡು ದಿನಗಳ ಕಾಲ ಧಾರವಾಡದ ಉತ್ತರಾಧಿಮಠ-ದಲ್ಲಿ ' ಚಾತುರ್ಮಾಸ'- ದ ನಿಮಿತ್ಯ ಐವತ್ತೆರಡು ದಿನಗಳ ಕಾಲ ೧೦೦೮-ಸತ...