Saturday 23 February 2019

ಹಾಗೇ ಸುಮ್ಮನೆ

ಹಾಗೇ ಸುಮ್ಮನೇ....

   'ಒಂದು ಮುಷ್ಟಿ ಆಕಾಶ'

    ‌‌‌‌‌‌‌ ಎಂಥ ಸುಂದರ,ಮನೋಜ್ಞ ಪದಗುಚ್ಛ ..ಈ ಹೆಸರಿನ ಕಿರುಚಿತ್ರವೊಂದು ಆಪ್ತಗೆಳತಿ ವಿಜಯಕ್ಕನಿಂದ ನಿರ್ಮಾಣವಾಗಿದೆ,ಫೆಬ್ರುವರಿ ೨೩ ಕ್ಕೆ ಸುಚಿತ್ರ ಫಿಲ್ಮ ಸ್ಟುಡಿಯೋದಲ್ಲಿ ಆಮಂತ್ರಿತರಿಗೆ ಅದರ ಪ್ರದರ್ಶನವಿದೆ ಎಂದು ತಿಳಿದಾಗಿನಿಂದ ಪ್ರಾರಂಭವಾದ ಕಾತರತೆ,ಚಡಪಡಿಕೆ ಇಂದು ಅಂತ್ಯ ಕಂಡಿತು..ಅದನ್ನಷ್ಟು ಕಾಯಲು ಮೂರು ಮುಖ್ಯ ಕಾರಣಗಳಿದ್ದವು..೧) ವಿಜಕ್ಕನ ನಿರ್ಮಾಣ೨) ನನ್ನ ಮೆಚ್ಚಿನ ಕಿರುತೆರೆಯ ನಟಿ ಸೀತಾಕೋಟೆ ನಾಯಕಿ..ಇನ್ನೊಬ್ಬ ಕಿರಿಗೆಳತಿ ಸುಷ್ಮಾಳ ಮೊದಲ ಕಿರುಚಿತ್ರ..೩) ಚಿತ್ರಣ ನನ್ನ ಆತ್ಮೀಯ ಗೆಳತಿ ಶಾಲಿನಿ ಮೂರ್ತಿಯವರ ವಿಶಾಲ ಮನೆಯಲ್ಲಿ...ಸಾಕಲ್ಲ ಕಾರಣಗಳು ಹುಚ್ಚು ಹಿಡಿಯಲು...
‌  ‌             ಕಾದ ದಿನವೂ ಬಂತು...ಪ್ರದರ್ಶನವೂ ಅದ್ಭುತವಾಗಿತ್ತು..ಥೇಟರ್ ಕಿಕ್ಕರಿದು ತುಂಬಿತ್ತಲ್ಲದೇ ಪ್ರದರ್ಶನದ ನಂತರದ ಚರ್ಚೆಯಲ್ಲಿ ಪ್ರೇಕ್ಷಕರು ತೋರಿದ ಉತ್ಸಾಹಕ್ಕೆ  ಸಾಟಿಯೇ ಇರಲಿಲ್ಲ....
            ‌   ಹಾಗೆಂದು ವಿಷಯ ಹೊಸದಲ್ಲ...ಬಹಳಷ್ಟು ಜನರ ಬದುಕಿನ ಭಾಗವೇ ಆದ ಒಂದು ಸಹಜ ಅನಿಸಿಕೆಯ ಅನಾವರಣ...EMPTINESS SYNDROME.
ಬಗ್ಗೆ..ಮಾನಸಿಕ ಶೂನ್ಯತೆಯ ಮನಸ್ಥಿತಿ...
                ಒಂದು ಹೆಣ್ಣಿಗೆ ' ಮಗು' ಹುಟ್ಟಿದಾಗ ಜೊತೆಜೊತೆಗೆ ಕನಸುಗಳೂ ಹುಟ್ಟುತ್ತವೆ...ಅದನ್ನು ಬೆಳೆಸುತ್ತ ಜೊತೆಗೆ ಅದರ ಹಾಗೂ ತನ್ನ ಕನಸುಗಳನ್ನೂ ಬೆಳೆಸುತ್ತಾಳೆ..ತನ್ನ ಅಸ್ತಿತ್ವ ಕಡೆಗಣಿಸಿ,  ಸರ್ವಸ್ವ ಧಾರೆಯರೆದು
ತನ್ನ ಮರಿಹಕ್ಕಿಯ ರೆಕ್ಕೆಗಳನ್ನು ಬಲಪಡಿಸಿ ಆಕಾಶದುದ್ದಗಲಕ್ಕೂ ಹಾರಿಬಿಡುತ್ತಾಳೆ... ಆ ಹಕ್ಕಿಯೂ ನವ ಅನ್ವೇಷಣೆಯ ಗುರಿಯಲ್ಲಿ ಅನಂತ ಆಕಾಶದ ಉದ್ದಗಲಗಳನ್ನು ಅಳೆಯುತ್ತ
ಅಮ್ಮನ ಕಣ್ಣಂಚಿನ ವ್ಯಾಪ್ತಿ ಮೀರಿ ಹಾರಿಹೋಗುತ್ತದೆ..ಪರಿಣಾಮ ಕಣ್ಣ ಕನಸುಗಳು ಕರಗಿ ಅಲ್ಲಿ ಉಳಿಯುವದು ಕಂಬನಿಗಳ ಮಹಾಪೂರ...
    ‌‌            ‌ಇಲ್ಲಿ ಆದದ್ದೂ ಅದೇ...ಬದುಕೆಂದರೆ ಮಗ...ಮಗನೇ ಜಗತ್ತು  ಎಂದುಕೊಂಡು ಕನಸುಗಳ ಬೆನ್ನು ಹತ್ತಿದ ಸೀತಾಳಿಗೆ  ಕನಸು ಕರಗಿ ಕಣ್ಣುಬಿಟ್ಟಾಗ ಹೌಹಾರುತ್ತಾಳೆ.ಚಲನ ಚಿತ್ರೋದ್ಯಮದಲ್ಲಿ ಸದಾನಿರತ ಗಂಡನಿಗೆ ಅವಳ ಬಗ್ಗೆ ಪ್ರೀತಿ ಇದೆ...ಗೌರವವಿದೆ..ಆದರೆ ಕೊಡಲು ಸಮಯವಿಲ್ಲ..ಮಗನಿಗೆ ಅಮ್ಮನೆಂದರೆ ಪ್ರಾಣ..ಆದರೆ ಅವನ ಬದುಕು ಅವನದು..
ಆಗ‌ ಅವಳನ್ನು ಕಿತ್ತು ತಿನ್ನುವ' ಒಂಟಿತನ' ಅವಳ ಪಾಲಿಗೆ  ಬೆನ್ನು ಬಿಡದ ಪೆಡಂಭೂತ...ಬದುಕೊಂದು ಬ್ರಹತ್ ಶೂನ್ಯ..ಸೇಬು ಕತ್ತರಿಸುವ ಚಾಕುವಿನಿಂದ ಮುಂಗೈ ನರಕತ್ತರಿಸಲು ಯೋಚಿಸುವಷ್ಟು,...ನಿದ್ರೆಗೆ ತೆಗೆದುಕೊಳ್ಳುವ ಒಂದು ಮಾತ್ರೆ ಕಂಡಾಗ ಎಲ್ಲವನ್ನೂ ಒಮ್ಮೆ ನುಂಗಿಬಿಡಬೇಕೆನ್ನುವಷ್ಟು ಮಾನಸಿಕ ವಿಕಲ್ಪತೆ ಅವಳನ್ನು ಕಾಡುತ್ತದೆ.. 'ಬೇಗ ಬರುತ್ತೇನೆ...ಸ್ವಲ್ಪು ಹೊತ್ತು ಮಲಗು' ಎಂದ ಗಂಡನನ್ನು ಕಾಯದಷ್ಟು, ಗೆಳತಿಗೆ ಮಾಡಿದ miss call ಗೆ ಉತ್ತರ ಸ್ವಲ್ಪು ಕಾದರೆ ಬರಬಹುದು ಎಂಬಷ್ಟೂ ಆಶೆ ಮನದಲ್ಲಿ ಉಳಿಯಲಾರದಷ್ಟು ಮಾನಸಿಕ ದಿವಾಳಿ ಅನುಭವಿಸುತ್ತಾಳೆ...ದೇವರು ದೊಡ್ಡವನು...ಗುಳಿಗೆಗಳು ಒಂದು ಕೈಯಲ್ಲಿ, ನೀರು ಇನ್ನೊಂದು ಕೈಯಲ್ಲಿ ಇರುವಾಗಲೇ ಆತ್ಮೀಯ ಗೆಳತಿ ಸುಷ್ಮಾಳ ಫೋನ್ ಬರುತ್ತದೆ..
"ಮಗನಿಗೆ ಆಕಾಶವನ್ನೇ ತೆರೆದಿಟ್ಟ ಅವಳು ತನಗೆಂದು ' ಒಂದು ಮುಷ್ಟಿ' ಆಕಾಶ ಇಟ್ಟುಕೊಳ್ಳದ ಬಗ್ಗೆ ದೂರುತ್ತಾಳೆ..ಮಕ್ಕಳ ಯಶಸ್ಸಿನೊಂದಿಗೆ ಬದುಕಿನದೊಂದು ಅಧ್ಯಾಯ ಮುಗಿಯುತ್ತದೆ..' ಬದುಕಲ್ಲ' ಎಂಬುದನ್ನು ನೆನಪಿಸುತ್ತಾಳೆ..ಇತರರಿಗಾಗಿ ಬದುಕಬೇಕಾದ ಅನಿವಾರ್ಯತೆ ಮುಗಿದಮೇಲೆ ತನ್ನ ಬದುಕಿನ ಹೊಸ ಅಧ್ಯಾಯಕ್ಕೆ ಅಣಿಯಾಗಲೇ ಬೇಕಾದ ಅನಿವಾರ್ಯತೆ ನೆನಪಿಸುತ್ತಾಳೆ..ಅವಳ ಹೊಸ ಪಯಣಕ್ಕೆ ಅಣಿಯಾಗುವ ಪೂರ್ವ ಸಿದ್ಧತೆಗೆ ಸಾಥ್ ಕೊಡುವದಕ್ಕಾಗಿ  ಬೆಳಿಗ್ಗೇ ಬರುವದಾಗಿ, ಒಂದು loooooong drive ಗೆ ಅಣಿಯಾಗಲೇಬೇಕೆಂದು ಆಗ್ರಹಿಸುತ್ತಾಳೆ...ಇದರಿಂದ convince ಆದ ಕಥಾನಾಯಕಿ ಮುಂಗೈ ನರ cut ಮಾಡಿಕೊಳ್ಳಲು ಇಟ್ಟ ಚಾಕುವಿನಿಂದ ಚಂದದ ಸೇಬನ್ನು ತಿನ್ನಲು ಹೆಚ್ಚಿಕೊಂಡು ಅದರ ಜೊತೆ ಜೊತೆಗೆ ಬದುಕನ್ನೂ ಆಸ್ವಾದಿಸುವ ಹೊಸ ನಿರ್ಧಾರದೊಂದಿಗೆ ಮುಗುಳ್ನಗೆಯೊಂದಿಗೆ ಸಿದ್ಧಳಾಗುತ್ತಾಳೆ..  
    ‌‌‌         ‌‌‌   ಇದಿಷ್ಟು ಕಥೆ..ವಿಷಯ ಸಾಮಾನ್ಯ...ಅದರ ವ್ಯಾಪ್ತಿ ಅಸಾಮಾನ್ಯ...ಕಣ್ಣೊಳಗೆ ಕಾಪಿಟ್ಟು ಬೆಳೆಸಿದ ಮಕ್ಕಳು ನಮಗೆ ಬೆನ್ನು ತೋರಿಸಿ ಬೈ ಹೇಳಿದಾಗ ಬದುಕೇ ಕೊನೆಯಾದಂತೆ ಅನಿಸುವದು ಈಗಿನ ಕಾಲದ ಅನಿವಾರ್ಯ ಅನುಭವ ..ಅದು ಆಗಬೇಕು ಎಂದು ಹಂಬಲಿಸಿ  ರಾತ್ರಿಗಳನ್ನೂ ಹಗಲಾಗಿಸಿ ದುಡಿಯುವ ಪಾಲಕರು  ನಂತರದ ಪರಿಣಾಮಕ್ಕೂ ಮಾನಸಿಕ ಸಿದ್ಧತೆ ಮಾಡಿಕೊಂಡಿರಬೇಕು..ದೂರದಾಲೋಚನೆಗಳಿಂದ  ಮಕ್ಕಳ ರೆಕ್ಕೆ ಬಲಿಸಿ ಹಾರಿಬಿಡುವ ಮುನ್ನ ನಿಮಗೂ  ' ಒಂದು ಮುಷ್ಟಿ ಆಕಾಶ' ವನ್ನಾದರೂ
ಉಳಿಸಿಕೊಳ್ಳಬೇಕು...ಆಕಾಶದಲ್ಲಿ ಬರೀ ಮೋಡಗಳೇ ಇರುವದಿಲ್ಲ..ಅವು ಕರಗಿದ ಮೇಲೊಬ್ಬ ಸೂರ್ಯ ಖಂಡಿತ ನಿಮಗಾಗಿ ಹೊಳೆಯುತ್ತಾನೆ...

Wednesday 20 February 2019

ಹಾಗೇ   ಸುಮ್ಮನೇ....

ಮುಚ್ಚಿದ ಕಣ್ಣುಗಳ ಹಿಂದೆ....

      ‌‌‌‌   ‌           ಅದು ೧೯೬೦-೬೧ ರ  ಸಾಲು...ನಾನಾಗ ಎಂಟನೇ ವರ್ಗದ ವಿದ್ಯಾರ್ಥಿನಿ...ನಮ್ಮ ಶಾಲೆ ಎರಡು -ಮೂರು ವರ್ಷಗಳ ಹಸುಗೂಸು...ನಮ್ಮದೇ ಎರಡನೇ ವರ್ಷದ batch ಎಂಬಂತೆ ನೆನಪು...ಮಾಧ್ಯಮಿಕ ಶಾಲೆ ಪ್ರಾರಂಭಿಸುವ ವಿಚಾರ ಬಂದಾಗ ಬಯಲಲ್ಲಿ ಆಡುವ ಹುಡುಗರನ್ನು ಕರೆದುಕೊಂಡು ಹೋಗಿ ಅವರ ವಯಸ್ಸಿಗನುಗುಣವಾಗಿ  ವರ್ಗಗಳಲ್ಲಿ ಕೂಡಿಸಿದ್ದರು..ಹೀಗಾಗಿ ನಮಗೆ ಶಾಲೆ 'ಜೇಲು' ಅನಿಸದೇ ಮನೆಯದೇ extended version
ಅನಿಸಿತ್ತು...ಅದಕ್ಕೆ ಶಾಲೆ ಎಂಬುದಕ್ಕಿಂತ ' 'ಪಡಸಾಲೆ' ಹೆಚ್ಚು ಸೂಕ್ತ ಹೆಸರು...
            ಶ್ರೇಣಿ,ರ್ಯಾಂಕ್,ಪ್ರಶಸ್ತಿ,ಸ್ಪರ್ಧೆಗಳೆಂಬ ಶಬ್ದಗಳು ನಮ್ಮ ಶಬ್ದಕೋಶದಲ್ಲಿರಲಿಲ್ಲ...ಕಾರ್ಯಕ್ರಮವೊಂದು ಮನೆಯಲ್ಲಿದ್ದರೆ ಮನೆಮಂದಿಯಲ್ಲ ಪಡಸಾಲೆಯಲ್ಲಿ ಹರಟುವದಿಲ್ಲವೇ...ಹಾಗೆ ಸನ್ನಿವೇಶವಿರುತ್ತಿತ್ತು..
          ‌‌‌        ಒಂದು ದಿನ ನಮ್ಮ ವಿಜ್ಞಾನದ ಗುರುಗಳ ಪಾಠ ನಡೆದಿತ್ತು..," ಕಣ್ಣುಗಳು ಹಾಗೂ ಅದರ ಕಾರ್ಯಗಳು' ಎಂಬುದು ವಿಷಯ..ಕರಿಹಲಿಗೆಯ ಮೇಲೆ ಎರಡು ಕಣ್ಣುಗಳು ಮೂಡಿದ್ದವು..ಅವರು ವಿವರಣೆ ಕೊಡುತ್ತಿದ್ದುದನ್ನು ನಾನು feel ಮಾಡುವದು ನಡೆದಿತ್ತು...ನಾನು ಸರ್ ಗೆ ಒಂದು ಪ್ರಶ್ನೆ ಕೇಳಿದೆ.." ಕಣ್ಣು camera ಇದ್ದಹಾಗೆ ಎಂದರೆ ಎರಡು ಕಣ್ಣುಗಳಿಗೆ  ಎರಡೆರಡು ಬಿಂಬಗಳು ಕಾಣಬೇಕು..ಒಂದೇ ಏಕೆ? " ಎಂದು..ಅವರೇನು ಉತ್ತರಿಸಿದರು ಎಂಬುದಿಲ್ಲಿ ಅಪ್ರಸ್ತುತ..ಮೇಲೆದ್ದು ಎರಡನೇ ಪ್ರಶ್ನೆ ತೂರಿದೆ,"ಬಲಗಣ್ಣು ಮುಚ್ಚಿದರೆ ಎಲ್ಲ ಸ್ಪಷ್ಟವಾಗಿ
ಕಾಣುತ್ತದೆ..ಅದೇ ಎಡಗಣ್ಣು ಮುಚ್ಚಿದರೆ ಏಕೆ ಕಾಣುವದಿಲ್ಲ?? "ಎಂದು..
      ‌‌‌‌‌    ‌‌    ‌‌ಸರ್ ಬೆಚ್ಚಿ ನನ್ನನ್ನು ತಮ್ಮ ಬಳಿ ಕರೆದು board ಮೇಲೆ ಬರೆದದ್ದು ಓದಲು ಹೇಳಿದರು...ಬಲಗಣ್ಣು ಮುಚ್ಚಿ ಕ್ಷಣಾರ್ಧದಲ್ಲಿ ಓದಿ ಮುಗಿಸಿದೆ..ಎಡಗಣ್ಣು ಮುಚ್ಚಿದಾಗ ಎಲ್ಲ ಸಾರಿಸಿದ ಹಾಗಿತ್ತು..ಆಗಲಿಲ್ಲ..ಮರುದಿನ ಸರ್ ಯಾರಾದರೂ ದೊಡ್ಡವರನ್ನು ಕರೆದುಕೊಂಡು ಬಾ ಅಂದರು..ಮನೆಗೆ ಹೋಗಿ ಸುದ್ದಿ ಹೇಳಿದೆ.
   ‌‌‌‌‌     ‌‌‌‌        ‌‌‌ಏಳು ಮಕ್ಕಳಲ್ಲಿ ನಾನು ನಾಲ್ಕನೇಯವಳು..ಹಿರಿಯರ ಜವಾಬ್ದಾರಿಯೂ ಇಲ್ಲ..ಕಿರಿಯರ ಅಕ್ಕರೆಯೂ ಇಲ್ಲ..ಯಾರೂ ನನ್ನನ್ನು ಗಂಭೀರವಾಗಿ ಪರಿಗಣೇಸಲೇಯಿಲ್ಲ..ಮತ್ತೊಮ್ಮೆ ಹೇಳಿದೆ..ನನ್ನ ಹಿರಿಯಣ್ಣ ತಮಾಷೆ ಮಾಡಿದ," ನಿಂಗ ಚಾಳೀಸ ಹಕ್ಕೊಂಡು ಸಾಲ್ಯಾಗ ಡೌಲು ಬಡೀಬೇಕಾಗೇದ ..ನಾವ್ಯಾರೂ ಬರೂದಿಲ್ಲ..ಒಂದ ಕಣ್ಣು ಸರಿ ಅದನೋ ಇಲ್ಲೋ
  ..ಸಾಕು ಹೋಗು..ಮುಂದ ನೋಡೋಣಂತ.."ಅಷ್ಟೇನೂ ಅನುಕೂಲಸ್ಥರಲ್ಲದ ನಮಗೆ ಅದು ಅನಿವಾರ್ಯವಾಗಿತ್ತು...ಅಲ್ಲದೇ ಆ ಕಾಲದಲ್ಲಿ ಚಿಕ್ಕ ಪುಟ್ಟ ತಕರಾರಿಗೆ ಯಾರೂ ಡಾಕ್ಟರರ ಹತ್ತಿರ ಹೋಗುವದು ತುಂಬಾನೇ ಅಪರೂಪ..ಅಲ್ಲದೇ ಸಮಸ್ಯೆಯ ಗಂಭೀರತೆಯ ಅರಿವೂ ಆಗದಿರುವ ಸಾಧ್ಯತೆಯುಂಟು...

ಮತ್ತೆರೆಡು ವರ್ಷಗಳು ಉರುಳಿ ಓದುವದು ಹೆಚ್ಚಾದಾಗ ಧಾರವಾಡದಲ್ಲಿ ತೋರಿಸಲೇ ಬೇಕಾಯಿತು..
             ಸುಧೀರ್ಘ ತಪಾಸಣೆಯ ನಂತರ  ಗೊತ್ತಾದದ್ದು...ಈ ತಕರಾರು ಬಹಳ ಹಿಂದಿನದು..ಚಿಕ್ಕವಳಿದ್ದಾಗಲೇ ಏನೋ ಪೆಟ್ಟು ಇಲ್ಲವೇ ತೀವೃ ಜ್ವರಬಾಧೆಯಿಂದ ಕಣ್ಣಿನ ಸುತ್ತಮುತ್ತಲಿನ ನರಗಳು ಬಲ ಕಳೆದುಕೊಂಡಿವೆ..ಏನೂ ಮಾಡಲಾಗದು"
               ‌ಅಲ್ಲಿಗೆ ನಾನು ಶುಕ್ರಾಚಾರ್ಯರ ಮೊಮ್ಮಗಳು...ಪಟೌಡಿ ನವಾಬನ ಸಂಬಂಧಿಯಾದೆ..ಇನ್ನೊಂದು ಕಣ್ಣು ಪ್ರತಿಶತ ಇಪ್ಪತ್ತು ಮಾತ್ರ ಉಪಯೋಗ..ಆದರೆ ಓದು ಬರಹಕ್ಕೆ ಉಪಯೋಗವಿಲ್ಲ ಎಂಬುದನ್ನು ಅರಗಿಸಿಕೊಳ್ಳಲೇ ಬೇಕಾಯ್ತು...ಅದೃಷ್ಟವೆಂದರೆ ಇನ್ನೊಂದು ಕಣ್ಣು ಪರಿಪೂರ್ಣವಾಗಿ fit ಇದ್ದು ಎರಡರ ಕೆಲಸವನ್ನೂ ಸಂಭಾಳಿಸಿದೆ...ನನ್ನ ಕಣ್ಣಲ್ಲವೇ?!!..ನನ್ನಂತೆಯೇ ಕಿರಿವಯಸ್ಸಿಗೆ' ಸಾಥಿ' ಯನ್ನು ಕಳೆದುಕೊಂಡರೂ ಏಕಾಕಿಯಾಗಿ ಎರಡರದೂ ಜವಾಬ್ದಾರಿ ನಿಭಾಯಿಸಿ ದಡ ಮುಟ್ಟಿಸಿದೆ...
        ‌‌ಈಗ ನನಗೆ ಮಧುಮೇಹದ ತಕರಾರು..ಪ್ರತಿವರ್ಷ ಕಣ್ಣಿನ‌ ತಪಾಸಣೆ ಆಗಲೇಬೇಕು..ಮೊನ್ನೆ ಹೋದಾಗ ಕಣ್ಣಿಗೆ drops ಹಾಕಿ ನಲವತ್ತು ನಿಮಿಷ ಕಣ್ಮುಚ್ಚಿ ಕಾಯಲು ಹೇಳಿದಾಗ 'ಮುಚ್ಚಿದ 'ಕಣ್ಣುಗಳ ಹಿಂದೆ ' ಬಿಚ್ಚಿಕೊಂಡ ರೀಲು ಇದು..

       ‌           ‌‌‌‌  ‌‌‌‌
.

Tuesday 12 February 2019

ಹಾಗೇ ಸುಮ್ಮನೇ..

ಮಾಡುವದೋ..ಬಿಡುವದೋ..ನೀವೇ ಹೇಳಿ..

   ‌‌‌             ‌‌‌ಇದು ಇಪ್ಪತೈದು ವರ್ಷಕ್ಕೂ ಮಿಕ್ಕಿದ ಹಿಂದಿನ ಕಥೆ...ನಾನಾಗ K.E.B' high School ನಲ್ಲಿ ಶಿಕ್ಷಕಿಯಾಗಿದ್ದೆ..ನನ್ನ ಜೊತೆಗೇ ಸಂದರ್ಶನ,ನೇಮಕವಾದ ಒಬ್ಬ ಶಿಕ್ಷಕಿ ನನ್ನ ಆಪ್ತ ಸ್ನೇಹಿತೆಯಾದುದು  ನನ್ನ ಭಾಗ್ಯ...ಅವರೇ ಶ್ರೀಮತಿ,ಸುನೀತಾ ದೇಸಾಯಿ...ತುಂಬಾ ಪಾಂಡಿತ್ಯವುಳ್ಳ ಮೇಧಾವೀ ಮಹಿಳೆ..ಸಾಲಿ  ರಾಮಚಂದ್ರರಾಯರ ಮೊಮ್ಮಗಳು...ಶ್ರೀ, ಹರಪನಹಳ್ಳಿ ಸರ್ ಅವರ ಮಗಳು..S.S.L.C ಯಿಂದ ಹಿಡಿದು B.A( maths) M.A ( ಸಂಸ್ಕೃತದಲ್ಲಿ), B.Ed ಎಲ್ಲದರಲ್ಲೂ ಪ್ರಥಮಸ್ಥಾನ...ತುಂಬಾ ಶಿಸ್ತು...ಸ್ವಲ್ಪು ಹೆಚ್ಚೇ ಅನಿಸುವಷ್ಟು ನೇರ ನಡೆ..ಆದರೆ ಕಲಿಸುವ ವಿಷಯದಲ್ಲಿ  ಅತ್ಯಂತ ಪ್ರಾಮಾಣಿಕ..committed...
                       ಆಗಿನ ಕಾಲದಲ್ಲಿ S.S.L.C ವಿದ್ಯಾರ್ಥಿಗಳಿಗೆ ಮಾರ್ಗದರ್ಶನಕ್ಕೆಂದು ಅನೇಕ magazines print ಆಗುವ ಪರಿಪಾಠವಿತ್ತು...ಹದ,ಮಿತ್ರ, ಸ್ನೇಹಿತ ,ಶಿಕ್ಷಕ,ಬಂಧು ಅಂತ ಹಲವಾರು ಏಕ ಕಾಲಕ್ಕೆ ಬರುತ್ತಿದ್ದುದರಿಂದ ಪೈಪೋಟಿ ಸಹಜವಾಗಿಯೇ ಇತ್ತು..ನುರಿತ ಶಿಕ್ಷಕರಿಂದ notes ಬರೆಸುವದರಲ್ಲೂ ಸ್ಪರ್ಧೆ..
                       ಶ್ರೀಮತಿ, ದೇಸಾಯಿ ಟೀಚರ್ ಗೂ offer ಬಂದದ್ದರಲ್ಲಿ ಆಶ್ಚರ್ಯವೇನು? ಸರಿ, ತಮ್ಮ ಯೋಗ್ಯತೆಯನ್ನು ಪಣಕ್ಕಿಟ್ಟು ಏನೇನೋ ಓದಿ, ಎಲ್ಲ ಮಕ್ಕಳಿಗೂ ಮುಟ್ಟಲೆಂಬ ಸದುದ್ದೇಶದಿಂದ  Extensive Notes ಬರೆದು ಕೊಟ್ಟೂ ಆಯ್ತು...ತಯಾರಿ ಒಂದು PHD ಗೆ  ಸರಿದೂಗುವಂತೆ ...April/ May ಎರಡೂ ತಿಂಗಳು  ಅದರಲ್ಲೇ  ಕಳೆದುಹೋದದ್ದೂ ಆಯ್ತು..ಪ್ರತಿದಿನ ಅದರ ಬಗ್ಗೆ ನನ್ನ ಜೊತೆ ಮಾತಾಗುತ್ತಿತ್ತು...ಅವರಿಗೆ ಅದಕ್ಕಾಗಿ ಆಗ ಸಿಕ್ಕದ್ದು ರೂ .೫೦೦/-.
   ‌‌    ‌    ‌‌‌      ‌‌ಜೂನ್ ತಿಂಗಳಲ್ಲಿ  ವರ್ಗಗಳು ಪ್ರಾರಂಭವಾದಾಗ ನಮ್ಮ ಟೀಚರ್  ನಿರಾಳ..ಎಲ್ಲ ತಯಾರಿ ರಜದಲ್ಲಿ ಸಿದ್ಧವಾದದ್ದರಿಂದ ಹಗುರವಾಗಿದ್ದರು... ಆದರೆ ಎರಡು ತಿಂಗಳು ಪೂರ್ತಿಯಾಗುತ್ತ ಬಂದಂತೆ
ಕ್ರಮೇಣ ಸಂಸ್ಕೃತ ವರ್ಗಗಳ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹಾಜರಿ ಕಡಿಮೆಯಾಗ ತೊಡಗಿತು..ಮಕ್ಕಳನ್ನು ಉಪಾಯವಾಗಿ ಕೇಳಿದಾಗ ಬಂದ  ಉತ್ತರ ಆಘಾತಕಾರಿಯಾಗಿತ್ತು..
             ‌‌‌‌‌‌‌‌" ಅವರು ಹೇಳುವ ವಿಷಯ,ಕೊಡುವ 
notes ಹೂಬೇಹೂಬು " ____  magazine
ನ ಕಾಪಿಯಿದೆ...ಎಲ್ಲವೂ ready ಸಿಕ್ಕದ್ದರಿಂದ ಹುಡುಗರು ಕಡಿಮೆಯಾಗುತ್ತಿದ್ದಾರೆ"...
                ‌‌‌‌ತಮ್ಮ ಸಂಪೂರ್ಣ ಸಾಮರ್ಥ್ಯ ಒರೆಗೆ ಹಚ್ಚಿ ಮಕ್ಕಳಿಗೆ ಏನು ಬೇಕೋ ಅದೆಲ್ಲ ' ಎಲ್ಲ S.S.L.C ಮಕ್ಕಳಿಗೂ'  ದಕ್ಕಲೆಂದು ಪಟ್ಟ ಶ್ರಮ ಹೀಗೆ back fire ಆಗಿತ್ತು..ಜಾಣ ಹುಡುಗರಿಗೇನೂ ವ್ಯತ್ಯಾಸವಾಗದೇ ಹೆಚ್ಚೇ ಪ್ರಯೋಜನಕಾರಿಯಾಗಿದ್ದರೂ ನೆವ ಹುಡುಕುವ
ಮಧ್ಯಮ ವಿದ್ಯಾರ್ಥಿಗಳಿಗೆ ಸೋಮಾರಿತನ ಕಲಿಯಲು ಸಾಧ್ಯವಿತ್ತು..
                 ಕೊನೆಗೆ ನಾವು ಅವರಿಗೆ ,notes ಗಳು ಯಾರದೋ ' copy' ಅಲ್ಲವೆಂದೂ,ಆ magazine ಗಳಿಗೆ ಬರೆದವರೇ ಇವರೆಂದೂ ,ಉಳಿದವರೇ ಅವರ ಸಹಾಯ ಪಡೆಯುತ್ತಿದ್ದಾರೆಂದೂ, ಅಂಥವರಿಂದ ಪ್ರತ್ಯಕ್ಷ ಕಲಿಕೆ  ಮಕ್ಕಳ  ಸೌಭಾಗ್ಯ ಎಂದೂ ತಿಳಿಸಿ  ಹೇಳಿದ  ಮೇಲೆ ಕೆಲವೇ ವಾರಗಳಲ್ಲಿ class ಗಳು ಮೊದಲಿನಂತೆ
ತುಂಬಿ ತುಳುಕ ಹತ್ತಿದವು...
                ಈ ಘಟನೆ ಅವರಿಗಷ್ಟೇ ಅಲ್ಲ...ನಮಗೆಲ್ಲರಿಗೂ ಒಂದು ಪಾಠವಾಗಿ ಏನಾದರೂ ಒಂದು ಹೊಸ ಕೆಲಸ ಮಾಡಬೇಕೆನ್ನುವಾಗ ' TO  be...or..Not be' ಎಂಬಂತೆ ' To do... or ..Not to do'' ಎಂದು ಮನಸ್ಸನ್ನು ಗೊಂದಲಗೊಳಿಸಿಕೊಂಡದ್ದು ಮಾತ್ರ ನಿಜ..
                ‌‌  ಮುಂದಿನ  ತಿಂಗಳು ೧೧ ಕ್ಕೆ ಅವರಿಲ್ಲವಾಗಿ ೨೩ ವರ್ಷ..ನನ್ನ ಗೆಳತಿ, ಅಕ್ಕ, ಮಾರ್ಗದರ್ಶಿ, ಬೆಂಬಲಿಗಳಾಗಿ ಅವಶ್ಯವಿದ್ದಾಗ ಇಡೀ ಕುಟುಂಬ ಸಮೇತ ಸದಾಕಾಲ ನನ್ನ ಬೆಂಬಲಿಕ್ಕೆ ನಿಂತಿದ್ದ ಅವರು ನನ್ನ ಪಾಲಿಗೆಂದೂ ವ್ಯಕ್ತಿಯಲ್ಲ....ಒಂದು ಮಹಾಶಕ್ತಿ...

Sunday 10 February 2019

ಹಾಗೇ ಸುಮ್ಮನೇ...
Un honoured_ Un sung_
Heroes/ heroines...
                2015 ನೇ ಇಸ್ವಿ...ಹೊಸಮನೆ ಖರೀದಿಸಿ ಅಲ್ಲಿಗೆ shift ಆಗುವ ಬಗ್ಗೆ ವಿಚಾರ ನಡೆದಿತ್ತು..ಹೊಸ ಕಾಲನಿ ...ಇನ್ನೂ ಬಹಳಷ್ಟು  ಮನೆಗೆ ಜನ ಬಂದಿರಲಿಲ್ಲ.ಹೀಗಾಗಿ ಮನೆಗೆಲಸದವರ ವ್ಯವಸ್ಥೆ ಇಲ್ಲಿಂದಲೇ ಮಾಡ
ಬೇಕಿತ್ತು..ಸರಿ..ಬಹಳ ದಿನಗಳಿಂದ ಒಂದು ಮನೆಯಲ್ಲಿ ಕೆಲಸ ಮಾಡುವವಳೊಬ್ಬಳನ್ನು ವಿಚಾರಿಸಲಾಗಿ ಹದಿನೈದು ದಿನ ಕಾದರೆ ತನ್ನ ಅಣ್ಣ , ಅತ್ತಿಗೆಯನ್ನೇ ಕರೆಸುತ್ತೇನೆ ಅಂದಳು..ಆಯ್ಕೆಯಿರಲಿಲ್ಲ..ಕಾದದ್ದಾಯಿತು..ಅವಳು ಬಂದದ್ದೂ ಆಯ್ತು...
                   ಮೊದಲ ಬಾರಿ ಊರು ಬಿಟ್ಟು ಬಂದವಳು..ಅದೂ ಬೆಂಗಳೂರಿಗೆ...ಶಾಲೆಯ ಮುಖ ನೋಡಿದವಳಲ್ಲ..ಹೊರಗೆ ಕೆಲಸಕ್ಕೆ ಹೋದವಳಲ್ಲ..ಪುಟ್ಟ ಮನೆ,ಒಂದು ತುಂಡು ಜಮೀನು ಹೇಗೋ ಸಂಭಾಳಿಸಿಕೊಂಡು ಮನೆ ನಡೆಸಿದವಳು..ಈಗ ಮೂರು ನಾಲ್ಕು ವರ್ಷಗಳಿಂದ ಮಳೆಯಿಲ್ಲ...ಸಾಲ ಪಡೆದು ತೆಗೆಸಿದ ಬೋರಿನ ಬಾವಿಗಳಲ್ಲಿ  ಇದ್ದು ಬಿದ್ದ ನೀರು ಇಂಗಿಹೋಗಿದೆ.ವರುಷದ ಹಿಂದೆ ಮೊದಲ ಮಗಳ ಮದುವೆಯಾಗಿದೆ...ಮೈತುಂಬ ಸಾಲ...ತೀರಿಸುವ ಹಾದಿ ಸುಗಮವಿಲ್ಲ..ಸಾಲು ಸಾಲು ರೈತರ ಆತ್ಮಹತ್ಯೆಗಳು ಎಲ್ಲರನ್ನೂ ಕಂಗೆಡಿಸಿದ ವೇಳೆಯದು...
           ‌ನಾನೂ ಕೆಲ ಪರಿಚಯದವರ ಮನೆಗೆಲಸ ಕೊಡಿಸಿದೆ...ಹದಿನೈದು ಸಾವಿರ ಸಿಗತೊಡಗಿತು...ಇಡೀದಿನ ಕೆಲಸ...ದೂರುವಂತಿಲ್ಲ..ಪೈ ಪೈ ಕೂಡಿಸಿ ವೃತವೆಂಬಂತೆ ಸಾಲಕ್ಕೆ ಕಟ್ಟತೊಡಗಿದಳು...ಆದರೆ ಖಾಸಗಿ ಸಾಲಕ್ಕೆ ಬಡ್ಡಿ ಬಹಳವಿದ್ದ ಕಾರಣ ಎಷ್ಟು ತುಂಬಿದರೂ ಬಡ್ಡಿ ಮಾತ್ರ ತುಂಬಿದಂತಾಗಿ ಅಸಲು ಯಥಾ ಪ್ರಕಾರ ಹಾಗೇ ಉಳಿಯುತ್ತಿತ್ತು...ನಾನು ವಿಚಾರಮಾಡಿದೆ.ಆಪತ್ಕಾಲಕ್ಕೆಂದು ಇಟ್ಟ FD ಗೆ
ಅತಿ ಹೆಚ್ಚೆಂದರೆ 7./.ಬಡ್ಡಿ.. ಒಂದೆರಡು ವರ್ಷ ಬಿಟ್ಟುಕೊಟ್ಟರೆ  ಅತಿಯಾದ ಹಾನಿಯೇನೂ ಅಲ್ಲ...ಆದರೆ ಸಾಲ ತೀರಿದರೆ ಅವಳಿಗಾಗುವ ಬಡ್ಡಿಯ ಉಳಿತಾಯ ಗಣನೀಯ..ಹೀಗೆಂದು ನಾವೆಲ್ಲ ಯೋಚಿಸಿ ಅವಳ ಒಬ್ಬಿಬ್ಬರು ಜನರನ್ನು ಕೂಡಿಸಿ  ಕೆಲವು ಚಿಕ್ಕ ಪುಟ್ಟ ಕರಾರು ಹಾಕಿ ನಾವು ಮಾಡಬೇಕೆಂದ ಸಹಾಯದ ಬಗ್ಗೆ ಹೇಳಿದಾಗ ಅವಳಿಗೆ ತುಂಬಾನೇ ಸಂತೋಷವಾಯಿತು..
                    ಆ ಮಾತಿಗೀಗ  ಎರಡೂವರೆ, ಮೂರು ವರ್ಷಗಳಾಗುತ್ತ ಬಂತು...ನಮ್ಮ ಮನೆಗವಳು ಬಂದು ನಾಲ್ಕು ವರ್ಷಗಳಾಗುತ್ತವೆ ಬರುವ April ಗೆ...ಒಂದು clear ಆದಮೇಲೆ ಇನ್ನೊಂದು ತೀರಿಸುತ್ತಿದ್ದಾಳೆ ಅಖಂಡವಾಗಿ...ಪೂರ್ತಿ ವಿಶ್ವಾಸ ಬಂದಿದೆ ಬದುಕಿನ ಬಗ್ಗೆ...ಒಂದು ಪೈಸೆ ಹೆಚ್ಚು ಬಂದರೂ ಕೂಡಿಟ್ಟು ಸಾಲಕ್ಕೆ  ತುಂಬುತ್ತಾಳೆ..ಇನ್ನು ಮೂರು - ನಾಲ್ಕು ತಿಂಗಳಿಗೆ ಸಂಪೂರ್ಣ ಋಣಮುಕ್ತಳಾಗುತ್ತಾಳೆ...ಈಗಲೇ ಚಿಕ್ಕ ಪುಟ್ಟ ಕನಸುಗಳು ಕಣ್ಣು ತುಂಬತೊಡಗಿವೆ....ಮಗನ ಮದುವೆ,ಬೆಂಗಳೂರಿನಲ್ಲೊಂದು ಪುಟ್ಟ ಮನೆ ಹೀಗೆ....ಮನೆ ಮಗಳಿಗಿಂತ ಹೆಚ್ಚಾಗಿ ನಡೆದುಕೊಳ್ಳುತ್ತಿದ್ದಾಳೆ..ಈ ಮೂರು ವರ್ಷಗಳಲ್ಲಿ ಒಂದು ತಿಂಗಳೂ ಮನೆಗೆ ತನ್ನ ದುಡಿತದ ದುಡ್ಡು ಒಯ್ದಿಲ್ಲ..ಗಂಡನ  ಅಷ್ಟಿಷ್ಟು ದುಡಿಮೆಯಲ್ಲಿ ಮನೆ  ತೂಗಿಸಿ  ನಾಳೆಗಳನ್ನು ಕಟ್ಟಿಕೊಳ್ಳುತ್ತಿದ್ದಾಳೆ..
                   ನಮಗಾದ  ಲೆಕ್ಕಕ್ಕಿಲ್ಲದ ಸ್ವಲ್ಪು ಬಡ್ಡಿಹಣದ ಲುಕ್ಸಾನು ಬಿಟ್ಟರೆ ಅವಳಿಗಾದ ಲಾಭ, ಅದರಿಂದ ನಮಗೆ ಸಿಕ್ಕ  ಸಮಾಧಾನಕ್ಕೆ ಬೆಲೆ ಕಟ್ಟಲಾದೀತೆ??ಹಣ ತರಬಹುದು..ಬೆಂಗಳೂರಿನಂಥ ಮಹಾನಗರದಲ್ಲಿ  ವಿಶ್ವಾಸವೆಲ್ಲಿಂದ ತರುವದು..!?
ಅದು ನಮಗೆ ಸಿಕ್ಕಿದೆ...ಅದೂ ಒಬ್ಬ  ಶಾಲೆಯ ಮೆಟ್ಟಿಲು ಕಂಡಿರದ ,ಹಳ್ಳಿಯ,ಬಡಕುಟುಂಬದ ' ಹೃದಯ  ಶ್ರೀಮಂತ' ಹೆಣ್ಣುಮಗಳೊಬ್ಬಳಿಂದ...ಈಗ    ಅವಳಿಲ್ಲದೇ ನಮ್ಮ ಮನೆ ನಡೆಯುವಂತಿಲ್ಲ ಎಂಬಷ್ಟು ಮನೆಯವಳಾಗಿದ್ದಾಳೆ..
                 ಇಂದು ಮುಂಜಾನೆ paper ಪುಟ ಬಿಚ್ಚಿದೊಡನೆ ವಿಜಯ ಮಲ್ಯನ ಸುದ್ದಿ...ಹಿಂದಿನಿಂದಲೇ ನೀರವ ಮೋದಿ,ಲಲಿತ ಮೋದಿ,ಸತ್ಯಂನ ಮಹಾಲಿಂಗಂ,_42000 ಕೋಟಿ ಸಾಲಮಾಡಿಕೊಂಡು ದಿವಾಳಿ ಅರ್ಜಿ ಗುಜರಾಯಿಸುತ್ತಿರುವ ಅನಿಲ ಅಂಬಾನಿ ಎಲ್ಲ ವಂಚಕರ ಸಾಲು ಸಾಲು ಪಟ್ಟಿ ನೆನಪಿಗೆ ಬಂದು 
ಕಣ್ಣು ಕತ್ತಲೆಯಿಟ್ಟಾಗ ನಡುವೆ ಹೊಳೆದ ಮಿಂಚಿನ ಬೆಳಕು ಇದು...

ಹಾಗೇ ಸುಮ್ಮನೆ

ಹಾಗೇ ಸುಮ್ಮನೇ...

ನಾನು ಹಳ್ಳಿಯ ಹಿನ್ನೆಲೆಯಿಂದ ಬಂದ ಹುಡುಗಿ ಎಂದು ಹಲವುಬಾರಿ ಹಿಂದೆಯೇ ಹೇಳಿದ್ದೇನೆ.ಗಾಂಧಿಜಿಯವರು ಸದಾಕಾಲ ಹೇಳುತ್ತಿದ್ದ simple living  ನಮ್ಮದು..'ಆದರ್ಶ'ಕ್ಕಾಗಿ ಅಲ್ಲ.. 'ಅಭಾವ'ಕ್ಕಾಗಿ..' ಅನಿವಾರ್ಯಕ್ಕಾಗಿ...ನಮ್ಮಲ್ಲಿ ಬಟ್ಟೆಗಳಿಡುವ ಕಪಾಟುಗಳಿರಲಿಲ್ಲ..ಏಕೆಂದರೆ ಇಡಲು ಬಟ್ಟೆಗಳಿರಲಿಲ್ಲ...ಒಂದು ಮೈಮೇಲೆ..ಇನ್ನೊಂದು ಕೋಲಮೇಲೆ...ಶಾಲೆಯೆಂಬ  ಶಬ್ದ ಅಂಗಳದಲ್ಲಿ ಆಡಿಕೊಂಡಿದ್ದ ನಮ್ಮನ್ನು ದರದರ ಎಳೆದೊಯ್ದು  ಒಂದು ಹಾಳು ಬಿದ್ದ ಗುಡಿಯಲ್ಲೋ, ಮನೆಯಲ್ಲೋ ಕೂಡಿ ಹಾಕಿದಾಗಲೇ ಕೇಳಿದ್ದು...ಇನ್ನು 'ಹುಟ್ಟು 'ಯಾವಾಗಲೂ ' ಹಬ್ಬ ' ಎನಿಸುತ್ತಿದ್ದುದು ಮಾತ್ರ ನಿಜ...ಯಾಕೆಂದರೆ ಕುಟುಂಬ ಯೋಜನೆ ಎಂಬ ಮಾತು ಮನೆಯವರೆಗೆ ಬಾರದ ದಿನಗಳವು...ಹೋಗುವವವೆಲ್ಲ ಹೋಗಿ ಉಳಿದ ಐದು ಹೆಣ್ಣುಮಕ್ಕಳು,ಮೂರು ಜನ ಗಂಡು ಮಕ್ಕಳ ಹುಟ್ಟಿದ ದಿನವನ್ನು ಮುಂದೆ ಬರಬಹುದಾದ,ಹಬ್ಬವೊಂದನ್ನು ಆರಿಸಿ  ಒಂದು ಸಿಹಿ ಮಾಡುವದು ಕಡ್ಡಾಯ ಎಂಬಂಥ ದಿನಗಳನ್ನು ಆಯ್ದುಕೊಂಡೇ ಮಾಡುವಂಥ ಅನಿವಾರ್ಯತೆ...ನೆತ್ತಿಗೆ ಒಂದು  ಬೊಟ್ಟು ಎಣ್ಣೆ ಹಿರಿಯರು ಕೂಡಿಸಿ 'ಹಚ್ಚಿ' ಹರಸಿದರೆ ಅಲ್ಲಿಗೆ ಮುಗಿಯಿತು ಸಂಭ್ರಮ...
" ಕಲ್ಲು ಖಣಿ( ಗಣಿ) ಯಾಗು...
" ಕರಕಿ ಬೇರಾಗು.." ( ಜಿಗುಟುತನ) "ಆಯಷ್ಯವಂತೆಯಾಗು"
"ಭಾಗ್ಯ ವಂತೆಯಾಗು.."

ಇಂಥ ಬಾಯಿ ತುಂಬ ಮಾಡುವ ಹರಕೆಗಳ ಅರ್ಥಕೂಡ ಅರಿಯದ ಮುಗ್ಧತೆ..ಆದರೆ ಒಂದು ಮಾತು..ಈ ತರಹದ ಜೀವನ ಹೊರತು ಪಡಿಸಿ ಬೇರಿನ್ನೇನೋ
ಬೇಡುವ ಬಯಕೆ ಕೂಡ ಬರುತ್ತಲೇಯಿರಲಿಲ್ಲ ಮನಸ್ಸಿಗೆ ಅಂದರೆ ನಂಬಬೇಕು ನೀವು...
              ಕಾಲ ಬದಲಾಯಿತು.. ತಕ್ಕಂತೆ ನಾವೂ ಬದಲಾದೆವು..ಧಾರವಾಡ, ಬೆಂಗಳೂರು ಅನ್ನುತ್ತನ್ನುತ್ತಲೇ ಅಮೆರಿಕಾ, ಇಂಗ್ಲಂಡ್,ಪ್ಯಾರಿಸ್,ದುಬೈ ,ಸಿಂಗಾಪುರ,ದಂಥ ಒಂಬತ್ತು ದೇಶಗಳನ್ನು ಮಕ್ಕಳ ಪುಣ್ಯದಿಂದ ಸುತ್ತಾಡಿ ಒಂದನ್ನು ಸೇರಿಸಿ ಹತ್ತು ಮಾಡಿ ಮುಗಿಸುವ  ಹಂಬಲದಲ್ಲಿದ್ದೇನೆ.ಇದನ್ನು ಹೇಳಲು ಕಾರಣವುಂಟು..ಊರಮುಂದಿನ ಓರ್ವ ತಿರುಕ ಧರ್ಮಶಾಲೆಯಲ್ಲಿ ಆನೆಯಿಂದ ಮಾಲೆ ಹಾಕಿಸಿಕೊಂಡ ಕನಸು ಕಂಡಿದ್ದ...ನಾವು ಅಂಥ ತಿರುಕನ ಕನಸಿಗೂ ಹೊರತಾದ ಮಂದಿ ..ನಮ್ಮಣ್ಣ ವಾರದ ಹುಡುಗನಾಗಿದ್ದವ  ಒಂದು ಬಹುಮಹಡಿಯ ಕಾಲೇಜು ಕಟ್ಟುವ  ಕನಸೊಂದನ್ನು ಅದಾವಾಗ ಮನಸ್ಸಿನಲ್ಲಿ ಕಾಪಿಟ್ಟು ಕೊಂಡಿದ್ದನೋ ಅದನ್ನು ನೀರೆರೆದು ಪೋಷಿಸಿ ಬೆಳೆಸಿದ್ದನೋ ಯಾರೂ ಅರಿಯರು..ಅವನ ಬಿಡುವಿರದ ದುಡಿತ,ಬೆವರಿನ ಬೆಲೆ ,ಆಧಾರ,ಅರ್ಹತೆ,ಅಂತಃ ಕರಣ ಗಳು ಮಾಡಿದ ಬಹು ದೊಡ್ಡ " ಪವಾಡ" ವಿದು..
              ನಿನ್ನೆಯ ನನ್ನ ಹುಟ್ಟುಹಬ್ಬದ ಶುಭಾಶಯಗಳು ಸುನಾಮಿಯೋಪಾದಿಯಲ್ಲಿ ಬರುವದು ಇನ್ನೂ ನಿಂತಿಲ್ಲ...ದೂರ ದೂರದ ದೇಶಗಳಲ್ಲಿರುವ  ಮಕ್ಕಳು ತಮ್ಮ ಹಗಲು - ರಾತ್ರಿಯ ಅಂದಾಜಿನಲ್ಲಿ  ಮೂರುದಿನಗಳಿಂದ ಹಾರೈಕೆ ಕಳಿಸುತ್ತಲೇ ಇದ್ದಾರೆ...ಬರುತ್ತಲೇ ಇವೆ..
            ಅದೇ hang over ನಲ್ಲಿ ಇರುವ ನಾನು, ಮಕ್ಕಳು ಕೊಟ್ಟ ಆರಾಮಕುರ್ಚಿಯಲ್ಲಿ ಕುಳಿತು ,ಅವರೇ ತಂದ mug ನಲ್ಲಿ ಕಾಪಿ ಹೀರುತ್ತ, ನೆನೆದ ಹುಟ್ಟುಹಬ್ಬಗಳ ಸುಂದರ saga ಇದು..

Saturday 2 February 2019

[01/02, 6:34 pm] krishnakoulagi: ಭಾರ್ಗಿಯ ಸ್ವಗತ...

(ಎಲ್ಲರೂ ಎಲ್ಲ ತರಹದ comments ಹಾಕಿರ್ತಾರೆ..ಬರೆದದ್ದೇ ಬರೆದರೆ ಚನ್ನಾಗಿರೋಲ್ಲ..ನನಗೆ ತಿಳಿದ
ಮಟ್ಟಿಗೆ 'ಮಗಳು ಜಾನಕಿ' ಯ ಪಾತ್ರಗಳ ವಿಶ್ಲೇಷಣೆ...)

(ರಾಜರತ್ನಂ ಅವರ ಕ್ಷಮೆ ಕೇಳಿ)

ಮಾನವನಾಗಿ ಹುಟ್ಟಿದ್ಮೇಲೆ
ಮಾಡ್ಬೇಕ್ ಒಂದಿಷ್ಟ್  ದುಡ್ನಾ...
ಕೈಗೆ ಬಂದದ್ ಬಿಟ್ಕೋಡೋಕೆ
ನಾನೇನಂಥಾ  ಹೆಡ್ನಾ???

ಅಧಿಕಾರ್ಸಿಗೋದ್ ಪುಕ್ಕಟಲ್ಲಾ..
ಮಾಡ್ಬೇಕೊಂದಿಷ್ಟ್  ಯತ್ನ...
ಸಿಕ್ಬಿಟ್ರಾಯ್ತು ಆಮ್ಯಾಕಿಂದ
ಮಾಡ್ಕೋಬೌದು  ಜತ್ನ....

ಹೆಂಡ್ರು,ಮಕ್ಳು,ಸಂಸಾರಂತ
ಎಷ್ಟೊದ್ದಾಡಿದ್ರೇನು?
ಅದು ಮುಗಿಯೋ ಕಥೆನೇ ಅಲ್ಲ..
ಅದ್ಕೆ  ಬಾಕೀದ್ಬಿಡ್ಬೇಕೇನೂ...??

ಸಣ್ಣಾ ಪುಟ್ಟಾ ಅಡ್ಡಿ ಬಂದ್ರೆ
ಕಿತ್ಹಾಕ್ಬೇಕು ಮುಳ್ಳು...
ಇಂಥಾದ್ರಲ್ಲಿ ಅಡ್ಬರ್ಬಾರ್ದು
ನಮ್ ನಿಮ್ ಅಂಬೋ ಕಳ್ಳು...

" ಸೋಲು- ಗೆಲ್ವು ಇದ್ದದ್ದೇನೆ"- (ಅಂತ..)
ಮಾಡ್ಕೋಬಾರ್ದು ರಾಜಿ...
ಗೆದ್ದೇ ತೀರೋ ಛಲವಿರ್ಬೇಕು
ಬಿಟ್ಕೊಡ್ಬಾರ್ದು  ಬಾಜಿ...

ಯತ್ನಮಾಡೋ 'ರತ್ನಂ'ಗೇನೇ
ಒಲಿದು ಬರ್ತೈತೆ ದೈವ...
'"ಏನೇ ಬರ್ಲಿ ಗೆದ್ದೇಗೆಲ್ತೀನ್"
ಮನದಲ್ಲಿರ್ಬೇಕ್  ಭಾವ...

ಅವ್ಕಾಶ್ ಸಿಕ್ದಾಗ್ ಬಾಚ್ಗೋಬೇಕು
ಸದಾ ಸಿಗೋಲ್ಲಾ chanceಉ..
ಬಿಟ್ಬಿಟ್ವಂದ್ರೆ  ಹೋಗ್ಬಿಟ್ ಹಾಗೇ..
ಚೆಕ್ ಆದ್ಹಂಗೇ bounceಉ....
        _______ ______ ______

* ಹೆಡ್ಡನಾ_ ದಡ್ಡನಾ.?
ಆಮ್ಯಾಕಿಂದ_ ನಂತರದಲ್ಲಿ- ಆ ನಂತರ
ಜತ್ನ_ ಜತನ_ ಕಾಯ್ದುಕೊಳ್ಳು.
ಕಳ್ಳು_ ಕರುಳು_ ಅಂತಃಕರುಣ
[01/02, 6:43 pm] krishnakoulagi: C.S.P._ ಸ್ವಗತ...

'ಒಳ್ಳೆ ಜನಕ್ ಕಾಲವೇ'_ಯಿಲ್ಲ
ಕೇಳ್ತಿದ್ದೆ ಈ ಮಾತ್ನ...
ನಂಗೀಗ ಅರ್ಥ ಆಗ್ತಾಐತೆ..
ಮಾಡ್ತಿದ್ದೀನಿ ತಿಳ್ಕೊಳ್ಳೊ ಯತ್ನ...

ಹತ್ತಾರ್ ಕೇಸೂ ಹಿಡಿಯೋ ಹಾಗೆ
ಹಿಡ್ದೆ ಭಾರ್ಗೀದೂ ಕೇಸು...
ಈಗ್ನೋಡ್ದ್ರೆ ಅನಸ್ತಾ ಐತೆ
ಬಿಟ್ಬಿಟ್ಟಿದ್ರೆ ಆಗ್ತಿತ್ತು ಲೇಸು...

ಬೇತಾಳಾಗಿ ಬೆನ್ ಬಿದ್ದವ್ನೆ
ಮನಸ್ಗಿಲ್ಲ ಶಾಂತಿ...
ಜಾನಕಿ  ಬದಕನ್ನೆನಿಸ್ಗೊಂಡ್ರೆ
ಆದ್ಹಂಗೇ  ಮತಿಭ್ರಾಂತಿ...

ನನ್ ಮ್ಯಾಗೆ  ಕೋಪ ಇರ್ಲಿ
ಅದ್ರಲ್ಲಿ ಅವ್ಳದೇನಿದೆ ತಪ್ಪು...??
' ಗುಬ್ಬಿ ಮ್ಯಾಕದು ಬ್ರಮ್ಹಾಸ್ತ್ರ'
ತಿಳ್ಕೋಬಾರ್ದೆ  ' ಬೆಪ್ಪು'...

ಧೈರ್ಯ ಇದ್ರೆ ಎದರಿಗ್ ಬರ್ಲಿ
ಯಾಕ್ ಪರದೆ ಹಿಂದ್ಗಡೆ ಆಟ...??
ನಾನೇನಂತ್ಹೇಳಿ ತೋರ್ಸೇ ಬಿಡತೇನ್
ಕಲಿಸೇ ಬಿಡ್ತೇನ್ ಒಂದ್ಪಾಠ...

ಎಷ್ಟ ಹಾರಾಡ್ತಾನ್ ಹಾರೇಬಿಡ್ಲಿ
ಆಮ್ಯಾಲ್ ನೋಡ್ತೇನ್ ಒಂದ್ ಕೈ...
ಪಾಪದ್ಕೊಡ ತುಂಬಿಡ್ಲಿ ಒಮ್ಮೆ
ಅಂದೇಬಿಡ್ತೀನ್ ' ಜೈ '
[01/02, 6:57 pm] krishnakoulagi: ನಿರಂಜನನ ಸ್ವಗತ...

( ಜಿ.ಪಿ.ರಾಜರತ್ನಂ ಅವರ ಕ್ಷಮೆ ಕೇಳಿ...)

ನೀವೇ ಹೇಳಿ ನಾನೇನ್ಮಾಡ್ದೆ
ಅಂತಿಷ್ಟೊಂದು ಕ್ವಾಪ...
ದುಡ್ಬೇಕಿತ್ತು..ಹೇಳಿದ್ಮಾಡ್ದೆ
ನಂದೊಬ್ಬಂದೇ  ತಪ್ಪಾ?.

ಆದದ್ದಾಯ್ತು...ಸರಿ ಮಾಡಾಣ..
ನಂದೊಂದಿಷ್ಟು ಕೇಳು...
ಅಂದ್ರೆ ಕೇಳ್ದೆ ಸೆಟ್ಗೊಂಡು ಕುಂತ್ರೆ
ನಾನೇನ್ಮಾಡ್ಬೇಕ್ ಹೇಳು....

ಅಮ್ಮಂಜೊತೆ ನಿಮ್ಮಪ್ಪಂದು
ಮುಗೀಲಾರದ್ ಜಗ್ಳಾ...
ನಮ್ಮಪ್ಪನ್ನೂ ಅಂಗೇ ಬಿಡ್ಲಾ
ನೀನೊಡ್ತೀಯಾ ಅವರ್ಗೋಳಾ...

ಮಾತ್ಮಾತಲ್ಲಿ ಇರಿಯೋದ್ಯಾಕೆ..?
ನಾನೂ ಅಂಗೇ ಮಾಡ್ಲಾ..?
ತಲೆಕೆಟ್ಟೊಮ್ಮೆ ನಿಂತ್ರೆ ನೋಡು..
ಕಣ್ತೆರೆದೆಲ್ಲ ಸುಡ್ಲಾ??.

ಎಷ್ಟೊಂದ್ ಜನ್ರು ಒದ್ದಾಡ್ಬೇಕು
ನಮ್ಮಿಂದಾಗಿ ನೋಡು..
ಹಟದ್ಮ್ಯಾಲೆ  ಹಟ ಹಿಡ್ದ್ರೆ
ಕೊನೆಗ್  ನಾಯೀಪಾಡು...

ನನ್ನನ್ ಜೇಲ್ಗೆ ಅಟ್ಲೇಬೇಕಾ?
ನಾನ್   ಯಾವಾಗ್ಲೂ  ಸಿದ್ಧ...
ಅಮ್ಮ,ಅಪ್ಪ ಖುಶಿ ಖುಶಿ ಇದ್ರೆ
ನನ್ ತಪ್ಪಿಗ್ ನಾನೇ ಬದ್ಧ....

ನಿಂಗೆನ್ಬೇಕು ಹೇಳ್ಬಿಡು ಒಮ್ಮೆ..
ಇಬ್ರೂ ಹಾಯಾಗೋಣ...
ಮಾತ ನ್ನಾಡ್ದೆ  ಮುಖ ಬಿಕ್ಕೊಂಡ್ರೆ
ನಾವಾದ್ರೂ ಏನ್ ಮಾಡಾಣ...
[01/02, 7:00 pm] krishnakoulagi: ಶಾಮಲತ್ತೇ ಸ್ವಗತ...

" ಯಾರ್ಮುಂದೇನು ಹೇಳ್ಬೇಕಂಬೋ
ಬುದ್ಧಿಯಿಲ್ಲ ನಿಂಗೆ...
ಅಂತ್ಹೇಳಿ ಚಂದ್ರಣ್ಣ ಬಯ್ತಿರ್ತಾನೇ
ಹಗಲೂ- ರಾತ್ರಿ ನಂಗೇ..

ಬೆಳ್ಗಿಂದೆಲ್ಲ ಹಾಲಂತ ನಂಬೋ
ಮಗುವಿನ್ ಮನಸ್  ನಂದು...
ಎಲ್ಲಾರ್ ಖುಶಿ ಖುಶಿ ಯಾಗಿರ್ಬೇಕು
ಅನ್ನೋ ಕಾರಣಾನೂ ಒಂದು..

ರಶ್ಮಿ, ಜಾನ್ಕಿ, ಮಧು ಎಲ್ಲಾ
ನಮ್ಮ ಜನಾನೇ  ಅಲ್ವಾ!!!?
ಒಬ್ರಿಗೊಬ್ರು ಚಂದಾಕಿದ್ರೆ
ಎಲ್ರೂ  ತಿಂದ್ಂಗೆ  ಹಲ್ವಾ...

ಗಂಡ, ಮಕ್ಳು  ಕಳ್ದ್ಹೋಗೋ ನೋವು
ನಾನ್ ಚನ್ನಾಗಿ  ಬಲ್ಲೆ...
ಯಾರೂ ಅಂಗೆ ನೊಂದ್ಕೋಬಾರ್ದು....
ಕಷ್ಟಾ ಕೊಡೋಕ್ ಒಲ್ಲೆ..

ಚಂದ್ರಣ್ಣಂದೂ ಬಾಯ್ಮಾತ್ ಜೋರು
ಮನಸ್ ಬೆಣ್ಣೆ ಮುದ್ದೆ..
ನಕ್ಕೋತ್ ನಕ್ಕೋತ್ ಎಲ್ರೂ ಇದ್ರೆ
ಬೇಕಿನ್ನೇನ್??? ನಾನ್  ಗೆದ್ದೆ....

ಸುದ್ದಿ ಅತ್ತಿತ್ ಹೇಳ್ತೀನ್ ನಿಜ,
" ಸುದ್ದಿ- ಸೂರಕ್ಕಲ್ಲ..."
ಒಳ್ಳೇದ್ಮಾಡೋ ಉದ್ದೇಶಷ್ಟೇ
ಅಷ್ಟ್  ಗೊತ್ತಾಗ್ಬೇಕ್ ನಿಮ್ಗೆಲ್ಲ....
            ‌**********
[01/02, 7:31 pm] krishnakoulagi: ಜಾನಕಿಯ " ಸ್ವಗತ"( soliloquy)

ನನ್ನಲ್ಲಿ ನಿಮ್ಮನೆಯ  ಮಗಳ ಕಂಡಿರಿ..
ಅರಳುವ  ಪೂರ್ವ 'ಮುಗುಳು 'ಕಂಡಿರಿ..
' ನರಳಿ -ನರಳಿಸುವ ' ಗೋಳು ' ಕಂಡಿರಿ...
ಅಷ್ಟು  ಸಾಕು...

ಬದುಕು' ಬವಣೆ 'ಮಾಡಿದ ಸುಳ್ಳು ಕಂಡಿರಿ..
ಯಾರೋ ಮಮತೆಯಿತ್ತ ಕಳ್ಳು ಕಂಡಿರಿ..
ಅಪರಿಮಿತ ಸಿರಿವಂತಿಕೆಯ' ಜೊಳ್ಳು' ಕಂಡಿರಿ..
ಅಷ್ಟು ಸಾಕು...

ನಮ್ಮವರು " ಪರರಾದ" ಪರಿಯ ಕಂಡಿರಿ..
ಪರರು 'ನಮ್ಮವರಾದ' ಸಿರಿಯ ಕಂಡಿರಿ...
ಮಾನವ ಸಂಬಂಧಗಳ ಸರಾಸರಿಯ ಕಂಡಿರಿ..
ಅಷ್ಟುಸಾಕು..

"ಕಂಡದ್ದೆಲ್ಲ ನಿಜವಲ್ಲ"- ಎಂಬ ಸತ್ಯ ಕಂಡಿರಿ...
ಉಂಡದ್ದೆಲ್ಲ ದಕ್ಕುವದಿಲ್ಲ - ತಥ್ಯ ಕಂಡಿರಿ..
ಮಾತಿಗೂ ಮನಸಿಗೂ ಇರುವ ಮಿಥ್ಯ ಕಂಡಿರಿ...
ಅಷ್ಟುಸಾಕು...

ಬದುಕಿನ ಆಯ್ಕೆ ಸುಲಭವಲ್ಲ- ರೀತಿ  ಕಂಡಿರಿ...
ಕಳೆದು ಹೋಗಿ ಕನಸಾಗಿದ್ದ ಪ್ರೀತಿ ಕಂಡಿರಿ...
ಕೈಲಾದುದ ಮಾಡು, ದೇವರಿಗೆ ಬಿಡು"..ನೀತಿ ಕಂಡಿರಿ..
ಅಷ್ಟು ಸಾಕು...
[02/02, 9:10 am] krishnakoulagi: 'ದೇವ'ಕಿ...(ದೇವರಿಗೆ..)

ಸ್ವಗತವಲ್ಲ

ಏನ್ ಪಾಪ ಮಾಡೀವ್ನೀಂತ
ನನ್ಮ್ಯಾಕ್ ಇಷ್ಟೊಂದು ಕ್ವಾಪ...?
ಇಷ್ಟೆಲ್ಲಾ ಜನಾ ಇದ್ದಾಗ್ಲೂನೂ
ನನ್ನೊಬ್ಳಿಗ್ಯಾಕ್  ಶಾಪ???

ಮನೆಗ್ ಗಂಡು ದಿಕ್ಕಲ್ದ್ಹಂಗೆ
ಗಂಡನ್ನೋಡ್ಸಿದೆ ಮನೆಬಿಟ್ಟು..
ಅಣ್ಣ- ತಮ್ಮ ಹಾಯಾಗಿದ್ರು..
ಈಗ್ ಅವರ್ ಬದ್ಕೂ ಎಡವಟ್ಟು...

ತಪ್ಮಾಡವ್ರೆ....ನಿಜಾ ಐತೆ...
ಮಾಡಿದ್ಯಾಕೆ  ನೋಡು..
ಚಂದಕ್ಕಲ್ಲ...ಚೈನಿಗಲ್ಲ...
ಕಣ್ಬಿಟ್ ನೋಡವರ ಪಾಡು...

' ಕರುಣಾ ಸಿಂಧು' ಅಂತಾರ್ನಿಂಗೆ
ಇದೇನಾ ನಿನ್ನಯ  ಕರುಣೆ???
' ಅನಾಥ ಬಂಧು ' ಅನ್ಸೊಂಡವನ್ಗೆ
ಕಾಣ್ತಿಲ್ವಾ ನಮ್ ಬವಣೆ????

ಮನೆಗ್ಬಂದ್ ಮಗಳ್ಗೆ ಸುಖಾಯಿಲ್ಲ
ಮೊಮ್ಮಗ್ಳ ಗತಿ ಏನು???
ಒಂದಿಷ್ಟಾದ್ರೂ ಯೋಚ್ನೆ ಬೇಡ್ವಾ?
' ಬಡವರ ಬಂಧು' ನೀನು...

' ಹಾಲಲ್ಹಾಕು...ನೀರಲ್ಹಾಕು'
ಮಂಗ್ಳಾ  ಹಾಡೊಮ್ಮೀ ಕಥೆಗೆ... 
ದಿನಾ ಸತ್ಸತ್  ಸಾಕಾಗೈತೆ
ಒಮ್ಮೆ ಗತೀ ಕಾಣ್ಸೀ ವ್ಯಥೆಗೆ..

      ‌‌‌‌   ******    ******  ******

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...