Friday 19 July 2019

ವೊ ದಿನ್ ಭೀ ಕ್ಯಾ ದಿನ್ ಥೆ..

ಹಾಗೇ  ಸುಮ್ಮನೇ... 

ವೋ ದಿನ್ ಭೀ ಕ್ಯಾ ದಿನ್ ಥೆ...

                "ನಾ ಇನ್ನ ಯಾವದೇ  ಧಾರ್ಮಿಕ ಕಾರ್ಯಕ್ರಮ ಮಾಡಸ್ಲಿಕ್ಕೆ ಹೋಗಬಾರದಂತ ಮಾಡೇನಿ...ಜನರೊಳಗ ಈಗ ಮೊದಲಿನ ಶೃದ್ಧಾ ಇಲ್ಲ..ಕಾಟಾಚಾರಕ್ಕ ಮಾಡಿ ಮುಗಸ್ತಾರ.. ಮಾಡಬೇಕು ಅನ್ನೋಕಿಂತ ತೋರ್ಸ್ಗೋಬೇಕನ್ನೋದ  ಭಾಳ ಇರ್ತದ...ಧರ್ಮ,ನಂಬಿಕೆ ಜಗದಾಗ,  ಬರೇ ಆಡಂಬರ ಇರ್ತದ...ಮಾಡಬೇಕಾದ್ದನ್ನು ಮೊಟಕ ಮಾಡಿ , ಬಿಡಬಹುದಾದದ್ದರ ಮೆರವಣಿಗಿ ನಡೀತದ...ಮನಸ್ಸಿಗೆ ಭಾಳಾ ಬ್ಯಾಸರಾಗ್ತದ...ಹೌದಪಾ ಸಂಸಾರದ...ಖರ್ಚದ ಅನ್ನೊ ದರ್ದ ಅಂತೂ ಇಲ್ಲ...ಅದರ ಬದ್ಲು ಶೃದ್ಧಾದ್ಲೆ ಕಲೀತೀವಿ ಅನ್ನೋರ್ಗೆ ಪಾಠ ಮಾಡೋದು ಛೊಲೋ..ಇಲ್ಲಾ ಅಂದ್ರ ನೆಮ್ಮದಿಯಿಂದ ನಮಗೇನ ಬೇಕೋ ಅದನ್ನ ಮಾಡ್ಕೊಂಡ ಇರಬಹುದು.."
             ಶಾಂತಿ,ಸಹನೆಯ ಪುರುಷಾವತಾರ ಎಂಬಂತಿದ್ದ ಪುರೋಹಿತರೊಬ್ಬರ ನೋವಿನ ನುಡಿಗಳಿವು..."ಧರ್ಮಕ್ಕಾಗಿಯೇ ಧರ್ಮದ ಪಾಲನೆ...ಹಣಕ್ಕಲ್ಲ ಎಂದು ನಂಬಿ ,ಅದನ್ನೇ ಬದುಕಿ, ಅದನ್ನೇ  ಹೇಳುತ್ತಾ, ದುಡ್ಡಿಗಾಗಿ ಎಂದೂ ಕೈ ಚಾಚದೇ,ಅಕಸ್ಮಾತ್ ಆಗ್ರಹದಿಂದ ಯಾರಾದರೂ ಕೊಟ್ಟರೆ ಕೆರೆಯ ನೀರು ಕೆರೆಗೆ ಎಂದಂದು ಧರ್ಮದ ಕಾರ್ಯಗಳಿಗೇನೆ ಅದನ್ನು ಬಳಸುತ್ತ," ಇನ್ನೂ ಇಂಥವರು ಉಳಿದಿದ್ದಾರೆಯೇ" ಎಂಬಂಥ ಅಚ್ಚರಿ ಹುಟ್ಟಿಸುತ್ತ, ಸಮಾಜ ತನಗೆ ಕೊಟ್ಟುದಕ್ಕೆ ಪ್ರತಿಯಾಗಿ ತನ್ನನ್ನೇ ಸಮಾಜಕ್ಕೆ ಕೊಟ್ಟುಕೊಂಡಂಥ  ಮಹನೀಯರ ಮನದಾಳದಮಾತುಗಳಿವು...
             ನನಗೂ ಹಲವಾರು ಬಾರಿ ಈ ತರಹ ಅನಿಸಿದ್ದಿದೆ...ಆತ್ಮೀಯರಾದ ಒಬ್ಬಬ್ಬರ ಮುಂದೆ ಗೊಣಗಿದ್ದೂ ಆಗಿದೆ...ಎಲ್ಲದಕ್ಕೂ ಹೆಸರಿಡುವ  ಸಿನಿಕರ ಗುಂಪಿಗೆ ನನ್ನನ್ನು ಸೇರಿಸಿಯಾರೆಂದು  ಮನದಲ್ಲೇ ದಬ್ಬಿ ಆ ಮಾತುಗಳನ್ನು ಹೂತಾಗಿದೆ...ಆದರೆ ಬಾಯಲ್ಲಿ ಹೇಳುವದಿಲ್ಲ ಅಂದ ಮಾತ್ರಕ್ಕೆ ಇಲ್ಲವೆಂದು ಹೇಗಾದೀತು?
           ನನ್ನ ,ನನ್ನ ಸಹೋದರ ಸಹೋದರಿಯರ ಮದುವೆಯ ಕಥೆ ಕೇಳಿದರೆ  ಬಹುಶಃ ಹಳಬರಿಗೆ ಅಚ್ಚರಿಯಾಗಲಿಕ್ಕಿಲ್ಲ.ಆದರೆ ಮೊಮ್ಮಕ್ಕಳು ಅಡಗೂಲಜ್ಜಿ ಕಥೆಗಳು ಅಂದಾರು ..ಕೆಲವೇ ಸಾವಿರಗಳಲ್ಲಿ,ಒಂದು ಗುಡಿಯ ಪ್ರಾಂಗಣದಲ್ಲಿ, ಇಡೀ ಊರಿನ ಜನ ನೆರೆದು ನೆರವೇರಿಸಿ ಕೊಟ್ಟ ಕಾರ್ಯಕ್ರಮಗಳವು..ಮಂತ್ರ,ವೇದ ಘೋಷಗಳ ಅರ್ಭಟ ಊರನ್ನೇ ತುಂಬುತ್ತಿತ್ತು..
ಕಾರ್ಯಕ್ರಮದ ನಾಲ್ಕು ದಿನ ಹಳ್ಳಿಯ ಯಾರ ಮನೆಯಲ್ಲೂ ಅಡಿಗೆ ಯಿಲ್ಲ. ಯಾರಿಗೂ ಹಾಗೆ ಮಾಡಿ ಹೀಗೇ ಮಾಡಿ ನಿರ್ದೇಶನವಿಲ್ಲ..
ಯಾರಿಗೆ ಏನು ಬರುತ್ತೋ ,ಯಾರು ಯಾವ ಕೆಲಸದಲ್ಲಿ ನಿಪುಣರೋ ಅವರು ಯಾರಿಗೂ ಕಾಯದೇ ಕೆಲಸ ಮಾಡಿ ಮುಗಿಸುತ್ತಿದ್ದರು..ಎಂಟು ,ಹತ್ತು ದಿನ ಮೊದಲೇ ಪ್ರತಿಯೊಬ್ಬರ ಮನೆಗೂ ಹೋಗಿ ಔತಣ ನೀಡುವುದಲ್ಲದೇ ಆದಿನ ಅಕಸ್ಮಾತ್ ಯಾರಾದರೂ ನೆಂಟರ ಆಗಮನವಾದರೆ ಅಗಾವಾಗಿ  ಅವರನ್ನೂ ಸೇರಿಸಿ ಔತಣ ಕೊಟ್ಟು ಬರುತ್ತಿದ್ದುದೂ ಉಂಟು..ಯಾರ ಮನೆಯಲ್ಲಿ ಏನೇ ಆಗಲಿ ಅದು ಊರ ಜಾತ್ರೆಯಾಗಿಬಿಡುತ್ತಿತ್ತು..ಪ್ರತಿಯೊಬ್ಬರೂ ಮತ್ತೊಬ್ಬರಿಗೆ  ತೋರಿಸುವ  ಪರಸ್ಪರ ಕಾಳಜಿಯಿಂದ ಯಜಮಾನನ  ಹೊರೆ  ತಂತಾನೇ ತೂಕ ಕಳೆದುಕೊಳ್ಳುತ್ತಿತ್ತು..ಎಲ್ಲರೂ ಖುಶ್...ಹೀಗಾಗಿ ಎಷ್ಟೋ ವರ್ಷಗಳ ನಂತರವೂ ನೆನಪುಗಳ ಖಜಾನೆ ತುಂಬಿರುತ್ತಿತ್ತಲ್ಲದೇ ಕಿರಿಯರೆದುರು, ಬಂಧು ಬಳಗದೆದುರು ಸಮಯ ಸಿಕ್ಕಾಗ  ಮೆದ್ದು  ಸವಿಯಬಹುದಾದ ಮೇಜವಾನಿ ಊಟ ಉಂಡ ತೃಪ್ತಿ  ಸಿಗುತ್ತಿತ್ತು...
             ಈಗ ಎಲ್ಲವೂ ತದ್ವಿರುದ್ಧ...ಸ್ವತಃ ಮನೆಯವರಿಗೇನೇ ಯಾವುದೇ ಕಾರ್ಯಕ್ರಮಗಳಲ್ಲಿ ಕೆಲಸವಿರುವದಿಲ್ಲ.
              .ಸಾಮಾಜಿಕ ಜಾಲ ತಾಣಗಳಲ್ಲಿ ಒಂದು ಆಮಂತ್ರಣ/ ವಿಜ್ಞಾಪನೆ, ಒಂದೆರಡು ಫೋನ್ ಕರೆಗಳು, event  managers ಗಳಿಗೆ ಕೆಲಸದ ಆಧಾರದ  ಮೇಲೆ ಹಣ ಸಂದಾಯ ಮಾಡಿಬಿಟ್ಟರೆ ಮುಗಿಯಿತು..ನೀವೂ host ಗಳ ಬದಲು guest ಗಳೇ ಆಗಿಬಿಡಬಹುದು..ಸಧ್ಯದ ಜೀವನ ಶೈಲಿ, ಕೆಲಸದ ಒತ್ತಡ, ಕೈತುಂಬಿ ,ಕಿಸೆದುಂಬಿ ಬರುವ ಧಾರಾಳ ಹಣ, ಇವುಗಳಿಂದಾಗಿ ಸಂಬಂಧಿಸಿದವರ  ಜವಾಬ್ದಾರಿಯನ್ನೂ ಹಲವರ ಹೆಗಲಿಗೇರಿಸಿ  ಹಗುರವಾಗಿ ಬಿಡುವದು ಇಂದಿನವರ ಆಯ್ಕೆಯಾಗಿ, ಎಲ್ಲವೂ ಇದೆ..ಯಾರದೂ ಅಲ್ಲ ಎಂಬಂತಾಗಿದೆ..ಹಿಂದೆಲ್ಲ  ಉಡುಗೊರೆಯಾಗಿ ಬರುತ್ತಿದ್ದ ಅಷ್ಷಿಷ್ಟು ಹಣವೋ,ಸಾಮಾನೋ
ಆನಂದ  ತರುತ್ತಿದ್ದವು..ಈಗ ನಾವು ಕೊಟ್ಟದ್ದೇ ಅನೇಕ ಬಾರಿ ನಮಗೇ ಮರಳಿ ಬರುವಷ್ಟು ಅನಾದರಕೊಳಪಟ್ಟಿವೆ ಉಡುಗೊರೆಗಳು...ಎಲ್ಲರಬಳಿಯೂ ಎಲ್ಲವೂ ಇದ್ದದ್ದು ಒಂದು ಕಾರಣವಾದರೆ  ಯಾವುದಕ್ಕೂ ಬೆಲೆಯಿಲ್ಲದಿರುವದು ಇನ್ನೊಂದು ಕಾರಣ. ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುವದು ಸ್ವಾಭಾವಿಕ....ಸಮಯ ಹರಿಯುವ ನೀರು ಇದ್ದಂತೆ...ಅದಕ್ಕೆ ಮುಂದೆ ಹರಿಯುವದಷ್ಟೇ ಗೊತ್ತು..ತನ್ನ ಜೊತೆ ಸಿಕ್ಕಿದ್ದೆಲ್ಲವನ್ನೂ ಮುಂದೆ ದಾಟಿಸಿ ಬಿಡುವದು ಗೊತ್ತು..ಅವುಗಳಲ್ಲಿ ಅವಿಭಕ್ತ ಕುಟುಂಬಗಳು  ಒಡೆದು ಸಣ್ಣ ಸಣ್ಣ ಘಟಕಗಳಾಗಿ ದೂರ ದೂರ ಇರತೊಡಗಿದ ಮೇಲೆ ಅವರ ಮಧ್ಯೆ  ಕಂಡೂ ಕಾಣದ ಗೋಡೆಗಳು ಎದ್ದು
ಕುಟುಂಬ ವ್ಯವಸ್ಥೆಯ  ಬುಡವನ್ನೇ ಅಲುಗಿಸತೊಡಗಿದ್ದೂ ಒಂದು...ಹೀಗಾಗಿ  ಭದ್ರ ಅಡಿಪಾಯವಿಲ್ಲದ  ಇಂದಿನ ಕಟ್ಟಡಗಳಂತೆ ಸಂಬಂಧಗಳೂ ಸಹ  ಕಟ್ಟುವ ಹಂತದಲ್ಲಿಯೇ
ಕುಸಿಯತೊಡಗಿವೆ..
ಪರಸ್ಪರ ಪ್ರೀತಿ,ವಿಶ್ವಾಸ, ಅಭಿಮಾನದ ಜಾಗದಲ್ಲಿ, ಅನಾರೋಗ್ಯಕರ ಸ್ಪರ್ಧೆ,ಅಸೂಯೆ,ಅಸಹನೆಗಳಿಂದ ಯಾರಿಗೂ ಸಮಾಧಾನವಿಲ್ಲದ ವಾತಾವರಣ ಉಂಟಾಗಿದೆ.  ಏನೋ ಚಡಪಡಿಕೆ, ಅದಾವುದೋ ಉದ್ವೇಗ ,ಅವಸರಗಳಿಂದಾಗಿ ಮಾತು,ಕೃತಿ, ಎಲ್ಲವುಗಳಲ್ಲೂ  ಒಂದು ಕೃತ್ರಿಮತೆ ಎದ್ದು ಕಾಣುತ್ತದೆ.. ಅಪರಿಚಿತ ಭಾವ ಮೂಡಿ ಯಾವುದೂ ನಮ್ಮದಲ್ಲ ಅನಿಸುವ ಅನ್ಯ ಭಾವ  ಮೂಡಿದಾಗ  ಪರಿಣಾಮ ಅತಿ ಸ್ಪಷ್ಟ.. ಶುಷ್ಕತೆ, ಒಣ ಬಡಿವಾರ,ಆತ್ಮೀಯವೆನಿಸದ  ತೋರಿಕೆಯ ಛಾಪು ನಮ್ಮ ನಡೆ ನುಡಿಗಳಲ್ಲಲ್ಲದೇ ಎಲ್ಲಿ ಕಾಣ ಸಿಗಬೇಕು  ಹೇಳಿ???

Friday 12 July 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ

"ರೋನೇ  ಕೋ ಏಕ ಕಂಧಾ  ಚಾಹಿಯೇ..."

             ನಿನ್ನೆ ಸಾಯಂಕಾಲ ಏಳು ಗಂಟೆ.ಕರೆಗಂಟೆ ಬಾರಿಸಿತು..ಎದ್ದುಹೋಗಿ ಬಾಗಿಲು ತೆರೆದಾಗ ನಮ್ಮದೇ ಕಾಲನಿಯ ಸವಿತಾ.' ಬನ್ನಿ ಒಳಗಡೆ ಎಂದೆ..' ನೀವೇ ಬನ್ನಿ ಆಂಟಿ..club house ನಲ್ಲಿ ಕೂತು ಮಾತಾಡೋಣ' ಎಂದಳು.ಹೆಚ್ಚು ಪ್ರಶ್ನಿಸದೇ ಹಿಂಬಾಲಿಸಿದೆ..ಕುರ್ಚಿಯ ಮೇಲೆ ಕೂಡುತ್ತಲೇ ಜೋರಾಗಿ ಅಳತೊಡಗಿದಳು..ನಾನು ಗಾಬರಿಯಾದೆ..ಅವಳನ್ನು ಈ ಮೊದಲು ನೋಡಿಯಷ್ಟೇ ಪರಿಚಯ. ಒಮ್ಮೆ ಮಾತ್ರ ಮಾತಾಡಿಸಿದ್ದು.. ಅದೂ ಕೇವಲ ಕೆಲವೇ ನಿಮಿಷ..ಹೆಚ್ಚೇನೂ ಗೊತ್ತಿರದ ನಾನು  ಅವಳನ್ನು ಹೇಗೆಂದು ಸಂತೈಸಲಿ?  ಕೈಹಿಡಿದು ಬೆನ್ನ ಮೇಲೆ ಕೈಯಾಡಿಸುತ್ತ ಕುಳಿತೆ..ಹತ್ತು ನಿಮಿಷ ಅತ್ತು ' sorry ಆಂಟಿ, ನಿಮ್ಗೆ disturb ಮಾಡಿದೆ..ನಮ್ಮಮ್ಮ ಸತ್ತು ಮೂರುತಿಂಗಳು ಆಂಟಿ, ಅವಳು ನನಗೆ ಗೆಳತಿಯ ಹಾಗಿದ್ದಳು.. ದಿನಾ ಅವಳೊಂದಿಗೆ ಮಾತಾಡಿದರೇ ನನಗೆ ಸಮಾಧಾನ..ಇದ್ದೊಬ್ಬ ಮಗ ವಿದೇಶದಲ್ಲಿದ್ದಾನೆ.ಅವನೂ ಬಿಟ್ಟು ಬರಲಾರ..ಕಿಡ್ನಿಯ ತೊಂದರೆ ಯಿಂದ ತುಂಬ ಅನುಭವಿಸಿ ಮೂರು ತಿಂಗಳಹಿಂದೆ ಇಲ್ಲವಾದಳು.ತಂದೆ ತಮ್ಮನೊಂದಿಗೆ ಸದ್ಯ ಇದ್ದಾರೆ.ತುಂಬ ಒಂಟಿಯಾಗಿದ್ದೇನೆ ಆಂಟಿ..ನನ್ನ ಗಂಡ ದಣಿದು ಬಂದಾಗ ನನ್ನ ಮೂಡು ಸರಿ ಇರದಿದ್ದರೆ ತುಂಬ ನೊಂದುಕೊಳ್ತಾರೆ..ನನಗೆ ಸಂಭಾಳಿಸಲಾಗುತ್ತಿಲ್ಲ.ಎರಡೂ ಮಕ್ಕಳು ತುಂಬ ಚಿಕ್ಕವರು..ಎಲ್ಲರೆದುರು ಎಲ್ಲ ಹೇಳಿಕೊಳ್ಳಲಾಗುತ್ತಿಲ್ಲ.ಒಳಗಿನ  ಒತ್ತಡಕ್ಕೆ ನನ್ನದೂ ತೂಕ ಕಡಿಮೆಯಾಗುತ್ತಿದೆ.pulse rate  ಹೆಚ್ಚಾಗುತ್ತಿದೆ..ನನಗೆ ಏನು ಮಾಡಲೂ ತೋಚುತ್ತಿಲ್ಲ...ಇಷ್ಟು ಹೇಳುತ್ತಲೇ  ಸಹಜವಾಗಿಯೇ ಮತ್ತೆ ದುಃಖ ಉಕ್ಕಿ ಬಂದು ಮಾತೇ ಆಡಲಿಲ್ಲ..ನಾನೂ ಮಾತನಾಡದೇ ಬರಿ ಕೇಳುವ ಕೆಲಸ ಮಾಡಿದೆ.ಈಗ  ಅಳು ಸ್ವಲ್ಪು ಹಿಡಿತಕ್ಕೆ ಬಂದು ಸಮಾಧಾನದಿಂದ ವಿವರವಾಗಿ ಹೇಳತೊಡಗಿದಳು.ಅಮ್ಮನಿಗೆ serious ಎಂದು ಗೊತ್ತಾದ ಕೂಡಲೇ ಆಸ್ಪತ್ರೆಗೆ ಹೋಗ ಬೇಕೆಂದರೆ  ತುಂಬಾದೂರ..ಮಳೆ ಹುಚ್ಚೆದ್ದು ಸುರಿಯುತ್ತಿತ್ತು..ಓಲಾ taxi ಮೂರು ನಾಲ್ಕು ಬಾರಿ cancel ಆಗಿ ಕೊನೆಗೊಮ್ಮೆ ಹೋಗುವ ಹೊತ್ತಿಗೆ ಅಮ್ಮ ಕೋಮಾದಲ್ಲಿ ಜಾರಿ I C U ಸೇರಿಯಾಗಿತ್ತು..ಇಷ್ಟೆಲ್ಲ ಮಾಡಿ,ಸದಾ ಜೊತೆಗಿದ್ದ ತಾಯಿಯ ಜೊತೆ ಕೊನೆ ಕ್ಷಣದಲ್ಲಿ ಇರಲಾಗದಕ್ಕೆ ಆದ ಆಘಾತ ಸುಲಭವಾಗಿ ಮರೆಯುವಂಥದು ಆಗಿರಲಿಲ್ಲ..
ನಾನಾದರೂ ಹೇಗೆ ಸಮಾಧಾನಿಸಲಿ? ಮಾತುಗಳು ಬರಿ ಶಬ್ದಗಳಾಗಿ ಉಳಿಯುವ ಅಪಾಯವೇ ಜಾಸ್ತಿ ಇಂಥ ಸಂದರ್ಭಗಳಲ್ಲಿ..ಮಾತನಾಡುವದು ಅನಿವಾರ್ಯ..ತಿಳಿದ ಮಾತು ಹೇಳುತ್ತ ಅವಳ ಮಾತುಗಳಿಗೆ ಕಿವಿಯಾದೆ . ಮನದಲ್ಲಿ ಕಟ್ಟಿನಿಂತ ಭಾವನೆಗಳು ಬರಿದಾಗುತ್ತಲೇ ಸ್ವಲ್ಪು  ಆರಾಮ ಎನಿಸಿದ ಸವಿತಾ ವೇಳೆಯಾಯಿತೆಂದು ನನಗೆ thanks ಹೇಳಿ  ಮತ್ತೆ ಭೇಟಿಯಾಗುವದಾಗಿ  ಹೇಳಿ ಮನೆ ಕಡೆ ಹೆಜ್ಜೆ ಹಾಕಿದಳು..
            ಮೇಲು ನೋಟಕ್ಕೆ ದಿನನಿತ್ಯದ ಒಂದು ಚಿಕ್ಕ ಘಟನೆಯಾದ ಈ ವಿಷಯ ಸಮಾಜದ  ಬಹುದೊಡ್ಡ ಸಮಸ್ಯೆ..ಮರೆಯಾಗುತ್ತಿರುವ ಕೂಡು ಕುಟುಂಬಗಳು ಕಣ್ಮರೆಯಾಗುತ್ತ  ಚಿಕ್ಕ ಚಿಕ್ಕ ಘಟಕಗಳಾಗತೊಡಗಿದ ನಂತರದ ಸಾಮಾಜಿಕ ಸವಾಲುಗಳಲ್ಲಿ ಒಂದು..ವಿಭಕ್ತ ಕುಟುಂಬಗಳಲ್ಲಿ ಗಂಡ_ ಹೆಂಡತಿ ,ಒಂದೋ ಎರಡೋ ಮಕ್ಕಳು ಮಾತ್ರವಿದ್ದು ಎಲ್ಲರೂ ತಮ್ಮತಮ್ಮ ವಲಯಗಳಲ್ಲಿ ಬಂಧಿತರಾಗಿ ಬೇರೆಯವರೊಂದಿಗೆ ಯಾವುದೇ ಭಾವ ಬಂಧ ವೇರ್ಪಡದೇ ದೊಡ್ಡದೊಂದು ' ನಿರ್ವಾತ'  ಏರ್ಪಟ್ಟಾಗ ಮನುಷ್ಯ ಮಾನಸಿಕ ತಬ್ಬಲಿತನ ಅನುಭವಿಸುತ್ತಾನೆ..ಅದರ ಪಾರ್ಶ್ವ ಪರಿಣಾಮಗಳು ಕುಟುಂಬದ ಮೇಲಾಗಿ ಒಟ್ಟು ಸಂಗತಿಗಳು ಅಸಮಾಧಾನಕರವಾಗಿ ಬದಲಾಗುತ್ತವೆ..ಮೇಲೆ ಮೇಲೆ ಎಲ್ಲವೂ ಸರಿಯಂದು ಕಂಡರೂ ಒಳಗೇ ಗೆದ್ದಲು ತಿಂದ ಮರವಾಗುತ್ತದೆ ಪರಿಸ್ಥಿತಿ...ಇದು ಪ್ರಗತಿಶೀಲ ಬೆಳವಣಿಗೆಯ ಅನಿವಾರ್ಯ ಭಾಗ ಎಂದುಕೊಂಡರೂ  ಆಗಬಹುದಾದ ಅಪಾಯಗಳಿಗೆ ಸುಲಭ ಪರಿಹಾರಗಳಿರುವದಿಲ್ಲ..ಹಾಗಾದಾಗ ಎಷ್ಟೋ 'ಸವಿತಾ' ಗಳು ಸದ್ದಿಲ್ಲದೇ ಮನೋಕ್ಲೇಶಕ್ಕೆ ತುತ್ತಾಗುತ್ತಾರೆ..ಗಂಡಸರೂ ಈ  ಸಂದಿಗ್ಧಗಳಿಗೆ ಬಲಿಯಾಗುವ ಸಾಧ್ಯತೆ ಇಲ್ಲದಿಲ್ಲ..
    ‌       ಬೆಂಕಿ ಪಕ್ಕದ ಮನೆಗೆ ಹತ್ತಿದೆ..ನಮ್ಮನೆಗಲ್ಲ.. ಅನ್ನುವಷ್ಟು ಸಮಸ್ಯೆ ಹಗುರವಾಗಿಲ್ಲ..ಎಲ್ಲರೂ ವಿಚಾರಮಾಡುವ ಕಾಲ ವಂತೂ ಸನ್ನಿಹಿತವಾಗಿದೆ, ಅನಿಸುತ್ತಿದೆ ನನಗಂತೂ..

Monday 8 July 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ,..

"God is in d heaven and all   is  right with the world"..   
          
              ಅವಳ ಹೆಸರು ಕವಿತಾ..ಬೀದರ ಜಿಲ್ಹೆಯ ರಾಜಗೀರ ಹಳ್ಳಿಯವಳು. ಶಾಲೆಯ ಮೆಟ್ಟಿಲು ಏರಿಲ್ಲ..ಹಿರಿಮಗಳ ಸಹಾಯದಿಂದ ತನ್ನ ಹೆಸರು ಬರೆಯಲು ಮಾತ್ರ ಕಲಿತಿದ್ದಾಳೆ.but she is a university by herself..
                'ಸುಶಿಕ್ಷಿತರೆಲ್ಲ ಸುಸಂಸ್ಕೃತರಲ್ಲ" ಎಂಬುದಾಗಿ ಮಾತೊಂದಿದೆ.ಅದನ್ನೇ ಇನ್ನೊಂದು ರೀತಿಯಲ್ಲೂ ಹೇಳಬಹುದು." ಅಶಿಕ್ಷಿತರೆಲ್ಲ ಅನಾಗರಿಕರಲ್ಲ.." ಇದು ಈ  ಐದು ವರ್ಷಗಳಲ್ಲಿ  ನಾನು ಕವಿತಾಳಿಂದ ಕಲಿತ ಪಾಠ..
              ಈ ಕವಿತಾ ನಮ್ಮ ಮನೆಯ domestic help..ನಮ್ಮ ಭಾಷೆಯಲ್ಲಿ' ಮನೆಗೆಲಸದವಳು" ದೂರದ ಬೀದರದಿಂದ ಹೊಟ್ಟೆ ಪಾಡಿಗಾಗಿ ಇತರರಂತೆ ವಲಸೆ ಬಂದವಳು.ಮನೆತನದ ಪರಿಸ್ಥಿತಿ ಅಷ್ಟೊಂದು ಹೀನಾಯವೇನೂ ಆಗಿರಲಿಲ್ಲ.. ಆದರೆ  ಮೂರು ನಾಲ್ಕು ವರ್ಷ ಸತತ  ಮಳೆ ಕೈಕೊಟ್ಟು ಬರದ ವಾತಾವರಣ ಅನುಭವಿಸುವಂತಾದುದು, ಮೊದಲ  ಮಗಳ ಮದುವೆ, ಆರು ಜನರ ತುಂಬು ಸಂಸಾರದ ಹೊಣೆಗಾರಿಕೆ ಇವೆಲ್ಲವುಗಳಿಂದ ದಿಕ್ಕೆಟ್ಟ ಸಂಸಾರವಾಗಿತ್ತದು...ಇದ್ದ ಹಳ್ಳಿಯಲ್ಲಿ,ಸುತ್ತುಮುತ್ತಲೂ ರೈತರ ಸರಣಿ ಆತ್ಮಹತ್ಯೆಗಳು ಧೈರ್ಯಗುಂದಿಸಿದಾಗ ಬೆಂಗಳೂರಿಗೆ ವಲಸೆ ಬರದೇ ಬೇರೆ ಮಾರ್ಗವಿರಲಿಲ್ಲ..ನಮಗೆ ಪರಿಚಯದವರಿಂದ ಅವಳ ಪರಿಚಯವಾಗಿ ನಮ್ಮ ಮನೆ, ಹಾಗೂ ಪರಿಚಯದ ಇನ್ನು ಕೆಲವು ಮನೆಗಳ ಕೆಲಸ ದೊರೆತು ನೆಮ್ಮದಿಯ ಉಸಿರು ಬಿಡುವಂತಾದುದು ಅವಳ ಅದೃಷ್ಟ..ಆದರೆ ಕಥೆ ಬೇರೆಯೇ ಇತ್ತು..
‌‌‌    ‌     ಅನಿವಾರ್ಯತೆಗೆ ಸಿಕ್ಕಸಿಕ್ಕಲ್ಲಿ, ಸಿಕ್ಕಷ್ಟು ಹಣ ಸಾಲ ಪಡೆದದ್ದು ,ಅದರ ಮೇಲೆ ಬಸಿರಿನಂತೆ ದಿನದಿನಕ್ಕೆ ಬೆಳೆಯುತ್ತಿರುವ ಬಡ್ಡಿ
ಅವಳನ್ನು ಅಷ್ಟು ಬೇಗ ಸಲೀಸಾಗಿ ಆರಾಮ ಇರಲು ಬಿಡುವ ಮಾತೇ ಇರಲಿಲ್ಲ..ಎಷ್ಟು ದುಡಿದರೂ ತಳವಿಲ್ಲದ ಹಂಡೆಗೆ ನೀರು ಸುರಿದಂತೆ  ಸೋರಿ ಹೋಗುತ್ತಿತ್ತು..ಅಡವಿಟ್ಟ ಹೊಲ ಕಳೆದುಹೋಗಬಾರದೆಂದು ಇಡೀ ಕುಟುಂಬ ಹಗಲಿರುಳೆನ್ನದೇ ದುಡಿದ ಹಣ ಬರಿ ಬಡ್ಡಿ ಲೆಕ್ಕಕ್ಕೆ ಸರಿಹೋಗುತ್ತಿತ್ತು. ಅದನ್ನು ನಮ್ಮಿಂದಲೇ online ತುಂಬಿಸುತ್ತಿದ್ದು, ಪ್ರತಿಸಲ ನಮಗೆ ಸಂಕಟವಾಗುತ್ತಿತ್ತು..ಆದರೂ ಅದು ಬರಿ ಬಡ್ಡಿಗೆ ಸರಿದೂಗಿ ಅಸಲು ಹೇಗಿತ್ತೋ,ಎಷ್ಟಿತ್ತೋ ಹಾಗೇ..ಅಷ್ಟೇ..
                ಕೊನೆಗೆ ನಾನು ಒಂದು ವಿಚಾರಮಾಡಿ ಅವರ ಮನೆಯವರನ್ನೆಲ್ಲ ಕರೆದು ಕೂಡಿಸಿ ಹೇಳಿದೆ. ಅವಳ ಒಂದೊಂದೇ ಸಾಲದ ಹಣವನ್ನು ಮುಂಗಡವಾಗಿ ನಾವು ತುಂಬುವದು-  advance payment_ ಅವರು ನಮಗೆ  ಕಂತಿನಲ್ಲಿ ತೀರಿಸುವದು..ಅಲ್ಲಿಯ ವರೆಗೂ ಕೆಲಸದ ಹಣ ಹೆಚ್ಚಿಸುವಂತಿಲ್ಲ.ಮನೆಗೆಲಸ ಬಿಡುವಂತಿಲ್ಲ.ಇದರಿಂದ ಒಂದೆರಡು ವರ್ಷ ಅಲ್ಪ ಮಟ್ಟಿನ ಬಡ್ಡಿಹಣ ನಮಗೆ ಇಲ್ಲವಾದರೂ ಅವಳ ಕುಟುಂಬಕ್ಕೆ ಅದರಿಂದ ಅಪಾರ ಸಹಾಯ ವಾಗುತ್ತಿತ್ತು..ಅದು ಅವಳ ನಂಬಿಕೆಗೆ,ಒಳ್ಳೆಯತನಕ್ಕೆ ,ಪ್ರಾಮಾಣಿಕತನಕ್ಕೆ ಸಲ್ಲಬೇಕಾದ ಗೌರವವದು ..ನಮಗೂ ತೀರ ಹೊಣೆಯಾಗದೆ ಒಂದು  ಉತ್ತಮ ಕುಟುಂಬ ನೆಲೆಗೊಳ್ಳುವದಾದರೆ ಒಳ್ಳೆಯದೇ, ಎಂದು ಬಂದ ವಿಚಾರವನ್ನು ಹೇಳಿದಾಗ ಎಚ್ಚರಿಸಿದವರು ಹಾಗೂ  ಅನುಮಾನಿಸಿದವರೇ ಹೆಚ್ಚು..ಆದರೆ ಕೇವಲ ಅವಳ ಸಜ್ಜನಿಕೆಯನ್ನು ನಂಬಿ,ಸ್ವಲ್ಪು ಮಟ್ಟಿಗೆ risk ತೆಗೆದುಕೊಂಡದ್ದು ಹುಸಿಹೋಗಲಿಲ್ಲ...
               ಈಗವಳು ಐದುವರ್ಷಳಿಂದ ನಮ್ಮ ಮನೆ ಸದಸ್ಯಳೇ ಆಗಿದ್ದಾಳೆ..ಈ ಅವಧಿಯಲ್ಲಿ ಒಂದೇ ಒಂದು ಪೈಸೆ ಕೂಡ ಮನೆಗೆ ಒಯ್ದಿಲ್ಲ.ಗಂಡ, ಮಗ ತರುವ  ಅಷ್ಟಿಷ್ಟು ಹಣದಲ್ಲಿ  ಮನೆ ತೂಗಿಸಿ ,ಉಳಿಸಿ ,ಶಕ್ತಿ ಮೀರಿ ಸಾಲ ತೀರಿಸಿದ್ದಾರೆ..ಕೊನೆಯ ಮೂವತ್ತು ಸಾವಿರ ಮುಂದಿನ ತಿಂಗಳಿಗೆ ಮುಗಿಯುತ್ತದೆ ಎಂಬ ಖುಷಿಯಲ್ಲಿ ಮುಖವೀಗ ಅರಳಿದ ಮಲ್ಲಿಗೆಯಾಗಿದೆ..ಇದೀಗ ಪುಟ್ಟ ಮನೆಯೊಂದರ ಕನಸು ಕುಡಿಯೊಡೆಯುತ್ತಿದೆ..ಅತಿ ದೊಡ್ಡದಲ್ಲದ ಸಹಾಯವಾದರೂ ನಮಗೆ ಕಹಿ ಅನುಭವ ನೀಡದೆ,ಒಂದು ಕುಟುಂಬವನ್ನು ಶಕ್ತ್ಯಾನುಸಾರ ದಡ ಮುಟ್ಟಿಸಿದ  ತೃಪ್ತಿ  ನಮಗೂ ಆನೆಬಲ ನೀಡಿದೆ..
         YES, God is in d heaven and all is right with d world....

     ‌"ಸಂಕಟದಲಿ ಸಂರಕ್ಷಿಸು
ಎಂಬುದು ಎನ್ನ ಪ್ರಾರ್ಥನೆಯೇ ಅಲ್ಲ...
ಸಂಕಟದಲಿ ಭಯವಿರದಿರೆ ಸಾಕೈ..
ಇದ್ದರದುವೇ ಸಾಕಲ್ಲಾ-"
          ತುಂಬಾ ನೆನಪಾಗುತ್ತಿದೆ...

.

Thursday 27 June 2019

Poem...translation

ಬದುಕಿನೋಟದಲ್ಲಿ
ಅನುಭವ ಪಕ್ವವಾಗಲೇಯಿಲ್ಲ...
ಇತರರಂತೆ ಚಾಲಾಕಿತನ
ಕಲಿಯಲಾಗಲೇ ಇಲ್ಲ..
ಮನಸ್ಸು ಮಾಗಬೇಕಿತ್ತು,
ಮಾಗಲೇಯಿಲ್ಲ..

ಬೇಕೆಂದಾಗ
ನಕ್ಕು
ಬೇಕಾದ ಹಾಗೆ
ಅತ್ತು
ಕಳೆದುಬಿಟ್ಟಿತು
ಬಾಲ್ಯ...

ಈಗ ಮುಗುಳ್ನಗೆಗೂ
ಬಿಂಕ...
ಕಣ್ಣೀರಿಗೂ ಏಕಾಂತದ ಸುಂಕ...

ನಗಬೇಕೆಂದೇ ನಕ್ಕ
ಕೆಲ
ಮುಕ್ತ ಕ್ಷಣಗಳಿವೆ
ಹಳೆಯ  ಪಟಗಳಲ್ಲಿ....
ಮಾಸಿದ ನೆನಪಿನ
ಪುಟಗಳಲ್ಲಿ...

ನಕ್ಕ ಕಾರಣ 'ಈಗ'
ತಿಳಿಯಬೇಕಿದೆ...
ನಗು ನಮ್ಮನ್ನು
ನಾವು ನಗುವನ್ನು
ಹುಡುಕಬೇಕಿದೆ...

ಮೂಲ_ ಗುಲ್ಜಾರ್..
ಅನು_ ಕೃಷ್ಣಾ ಕೌಲಗಿ..

Thursday 20 June 2019

ಹಾಗೇ ಸುಮ್ಮನೆ

ಹಾಗೇ ಸುಮ್ಮನೆ...

"ದಿಲ್  ಥಾ  ಛೋಟಾ ಸಾ....ಛೋಟಿ ಸಿ ಆಶಾ..."

                ‌‌1970 ರ ದಶಕ..ಮದುವೆಯಾಗಿ ಮೂರು ಮಕ್ಕಳಾಗಿದ್ದವು....ನನ್ನವರಿಗಾಗಲೇ ಹೃದಯಾಘಾತವಾಗಿತ್ತು... Doctor ಸಲಹೆಯ ಮೇರೆಗೆ  ಹೆಚ್ಚು ಆಯಾಸಮಾಡಿಕೊಳ್ಳುವ ಹಾಗಿರಲಿಲ್ಲ..ಕರ್ನಾಟಕ ಹೈಸ್ಕೂಲ್ ಯಾವ ಕಡೆಯಿಂದ ಏರಿದರೂ  ದಿಬ್ಬ ಹತ್ತಬೇಕಾಗುತ್ತಿತ್ತು..ಸೈಕಲ್ ಮೇಲೆ ಅಲ್ಲಿಯ ವರೆಗೆ ಹೋಗಿ ಹೇಗೋ ಒದ್ದಾಡುತ್ತ ಶಾಲೆ ತಲುಪಬೇಕಾಗಿತ್ತು..( ಕೊನೆಗೆ ಅನಿವಾರ್ಯವಾಗಿ ವಿದ್ಯಾರಣ್ಯ ಹೈಸ್ಕೂಲ್ಗೆ ವರ್ಗಮಾಡಬೇಕಾಯಿತು) ನನಗೋ ವಿಪರೀತ ಹೆದರಿಕೆ..ಆದರೆ ಅನ್ನುವ ಹಾಗಿಲ್ಲ ..ಬಿಡುವ ಹಾಗೂ ಇಲ್ಲ....ಒಂದು ರೀತಿಯ ಬಿಸಿತುಪ್ಪ...ನಾನು ಶಾಲೆಯಿಂದ ಬಂದಾಗ ಮನೆಯದುರು ಸಣ್ಣದೊಂದು ಗುಂಪು ಇದ್ದರೂ ಏನೇನೋ ಊಹಿಸಿಕೊಂಡು ಎದೆ ಧಸ್ ಎನ್ನುತ್ತಿತ್ತು...ಏಳುವದು ಸ್ವಲ್ಪ ತಡವಾದರೂ ವಿಚಲಿತಳಾಗಿಬಿಡುತ್ತಿದ್ದೆ...
ಹಾಗೆಂದು ಅವರ ಆರೋಗ್ಯ ಕುರಿತಾದ ಚರ್ಚೆ ಮಾಡುವದು ಅವರಿಗೆಂದೂ ಸೇರುತ್ತಿರಲಿಲ್ಲ...ನನಗೆ ಒಂದು ರೀತಿಯ tension ನ್ನು ಸದಾ...
ನನಗೋ ಅವರೊಂದು ಲೂನಾ  ಆದರೂ ತೆಗೆದು ಕೊಳ್ಳಲಿ ಎಂಬ ಆಸೆ..ಆದರೆ ಪಗಾರ ನಾಲ್ಕಂಕಿಯೂ ಇಲ್ಲದ ದಿನಗಳವು...ಅಡಚಣಿಗೆ ಮಾಧ್ಯಮಿಕ  ಶಿಕ್ಷಕರ ಸಹಕಾರ ಸಂಘದಿಂದ ಸಾಲ ಪಡೆವ ಸೌಲಭ್ಯವಿತ್ತು..ಆದರೆ ನಂತರ  ಐದು ಜನರ ಸಂಸಾರ ತೂಗಿಸಿಕೊಂಡು ಅಷ್ಟು ಸಾಲ ಮರುಪಾವತಿಸುವದೂ ಸುಲಭದ ಮಾತಾಗಿರಲಿಲ್ಲ...ಅಂತೂ ಅವರ ಲೂನಾದ ಕನಸು, ಕನಸಾಗಿಯೇ ಮುಂದುವರಿಯಿತು...ನಾನೂ ಕುಮಠಾದಲ್ಲಿ BEd ಮುಗಿಸಿಬಂದು ನೌಕರಿಗೆ ಸೇರಿಕೊಂಡ ಮೇಲೆ ನಮ್ಮ ಕನಸುಗಳು ಬಣ್ಣಕಟ್ಟತೊಡಗಿದವು.. ಆರೋಗ್ಯ ಪರಿಸ್ಥಿತಿ ಹೆಚ್ಚು ಬಿಗಡಾಯಿಸಿ ನಡೆಯುವದು ಹೆಚ್ಚು ತ್ರಾಸದಾಯಕ ಅನಿಸಿದಾಗ ನಾನು ಗಾಡಿ ಖರೀದಿಸಲು ಆಗ್ರಹ ಪಡಿಸ ತೊಡಗಿದೆ..ಮುಂಬೈಗೆ ಒಮ್ಮೆ ಹೋಗಿ ಬಂದಮೇಲೆ ಆಗ ಬಹುದಾದ ಖರ್ಚು_ ವೆಚ್ಚ ನೋಡಿ ನಂತರ ಗಾಡಿ ಎಂದು ಅವರು  ಹಟ ಹಿಡಿದಾಗ ನಾನೇನೂ  ಮಾಡುವ ಹಾಗೆ ಇರಲೇಯಿಲ್ಲ...ಒಪ್ಪಲೇಬೇಕಾದ ಅನಿವಾರ್ಯತೆ.
             ನಾವು ಒಂದು ಬಗೆದರೆ ದೈವ ಇನ್ನೊಂದು ಬಗೆಯಿತು..ಮುಂಬೈಗೆ ಹೋದವರು ಮರಳಿಬರಲಿಲ್ಲ...ಕೊನೆಗೂ ಅವರ  ಪುಟ್ಟ ಕನಸು ಕನಸಾಗಿಯೇ ಉಳಿಯಿತು...
        ‌‌     ಆ ಮಾತಿಗೆ ಮೂವತೈದು ವರ್ಷ...ಪರಿಸ್ಥಿತಿಯಲ್ಲಿ ಅಜಗಜಾಂತರ ವ್ಯತ್ಯಾಸವಾಗಿದೆ..ಮಕ್ಕಳು ಶೃದ್ಧೆಯಿಂದ ಓದಿ ಅತ್ಯುತ್ತಮ ನೌಕರಿಯಲ್ಲಿದ್ದಾರೆ...ಎಲ್ಲರೂ ಎರಡೆರಡು ಕಾರುಗಳನ್ನಿಟ್ಟುಕೊಂಡಿದ್ದಾರೆ...ದೇಶ ವಿದೇಶ ಎಗ್ಗಿಲ್ಲದೇ ಸುತ್ತಿದ್ದಾರೆ..ನನ್ನನ್ನೂ ಸಾಕು ಸಾಕೆನಿಸುನಿಸುವಷ್ಟು ಸುತ್ತಿಸಿದ್ದಾರೆ...ಆದರೆ ಯಾವುದೇ ಒಂದು ಗಾಡಿಯಮೇಲೆ ಅವರ ವಯಸ್ಸಿನವರು ಕಂಡರೆ ನನ್ನವರ ಅಪೂರ್ಣ ಕನಸು ಕಣ್ಣು ತುಂಬಿ ಬಿಡುತ್ತದೆ...ಮಕ್ಕಳ high end ಕಾರುಗಳಲ್ಲಿ ತೇಲಿದಂತೆ ಹೋಗುವಾಗಲೆಲ್ಲ ನನ್ನವರು ಏದುಸಿರು ಬಿಡುತ್ತಾ ಕರ್ನಾಟಕ ಹೈಸ್ಕೂಲ್ ದಿಬ್ಬ ಏರುತ್ತಿರುವ ದೃಶ್ಯ ನೆನಪಾಗಿ ಸಂಕಟವಾಗುತ್ತದೆ...
                ನಾವೇನೂ ಅಸಾಧ್ಯವೆನಿಸಬಹುದಾದ ಕನಸು ಕಂಡಿರಲಿಲ್ಲ..ನಾವು ಬೇಡಿದ್ದು ಒಂದಿಷ್ಟು ಕಾಲಾವಕಾಶ...ಒಂದು ಅತಿ ಸಾದಾ ಅನಿಸುವಂಥ ಪುಟ್ಟ ಕನಸು...ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನೇ ಕಂಡಿದ್ದ ಜೀವವೊಂದು ಮುಂದಿಟ್ಟ ಪುಟ್ಟದೊಂದು ಆಸೆ...
      ‌       ನನಗೆ ಈಗ ಬದುಕಿನ ಬಗ್ಗೆ ಪ್ರಶ್ನೆಗಳಿಲ್ಲ..ಗೊಂದಲಗಳಿಲ್ಲ...
ತಕರಾರುಗಳಂತೂ ಮೊದಲೇಯಿಲ್ಲ...ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ದೊರೆತಿದೆ....ಅದಕ್ಕಾಗಿ  ದೈವಕ್ಕೆ ನಾನು ಜೀವನಪರ್ಯಂತ ಋಣಿ..ಆದರೆ
ಇದರಲ್ಲಿ ಸ್ವಲ್ಪು  ಕಡಿತ ಮಾಡಿಯಾದರೂ ನನ್ನವರ ಆ ಪುಟ್ಟ ಬಯಕೆ ಈಡೇರಿಸಿದ್ದರೆ ಎಂಬ ಮಾತು ಮಾತ್ರ ನಾನಿರುವವರೆಗೂ ನನ್ನನ್ನು ಬಿಡುವಂತೆ ಕಾಣುವದಿಲ್ಲ...

Wednesday 19 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ..
       
ಅದೊಂದು ಕಾಲ...ಇದೂ ಒಂದು ಕಾಲ....

            ಸುಮ್ಮನೇ ಫೇಸ್ ಬುಕ್ ನೋಡುತ್ತ ಕುಳಿತಿದ್ದೆ...ಅದೊಂದು ಪುಟ್ಟ ಪ್ರಪಂಚದಂತೆ ಕಂಡರೂ  ವ್ಯಾಪ್ತಿ ಬಹು ದೊಡ್ಡದು...ವಿಕ್ರಮನ ಹೆಗಲನೇರಿದ ಬೇತಾಳದಂತೆ... ಇದಿಲ್ಲದಿದ್ದಾಗ ಹೇಗಿದ್ದೆವು? ಎಂದು ನನಗೆ ನಾನೇ ಕೇಳಿಕೊಂಡೆ..' ಹೆಚ್ಚು ಚನ್ನಾಗಿ" ಎಂದು ಉತ್ತರ ತಕ್ಷಣ ಬಂತು...internet ಬಳಕೆ ಒಂದು ಅತ್ಯದ್ಭುತ ಆವಿಷ್ಕಾರ. ಅದರಲ್ಲಿ ಎರಡು ಮಾತಿಲ್ಲ..ಇಡಿ ಜಗತ್ತನ್ನೇ ಅಂಗೈಯಲ್ಲದು  ಸೆರೆ ಹಾಕಿದೆ...ಜಗತ್ತಿನ ಇಂಚಿಂಚು ಮಾಹಿತಿಯೂ ನಡೆದ ಸ್ಥಳದಷ್ಟೇ ಕ್ಷಿಪ್ರವಾಗಿ ಕಣ್ಣೆದುರು ತಡವಿಲ್ಲದೇ ತೆರೆದುಕೊಳ್ಳುತ್ತದೆ...ಆದರೆ ದೀಪದ ಬುಡದಲ್ಲೇ ಕತ್ತಲೆಯೂ ಉಂಟು...ಅದರ ಇನ್ನೊಂದು ಮುಖ ಅಷ್ಟೊಂದು ಆಕರ್ಷಕವಾಗಿರದೇ ಸ್ವಲ್ಪು ಮಟ್ಟಿಗೆ  ಕರಾಳವಾಗಿದೆ ಎಂಬುದೂ ಅಷ್ಟೇ ಸತ್ಯ...ಆದರೆ ಸಿಗರೇಟು ಪ್ಯಾಕ್ಮೇಲೆ ಚಂದ ಚಂದದ  ಸಿಗರೇಟು ತೋರಿಸಿ  " smoking is injurious to health" ಅನ್ನುವದನ್ನು ದುರ್ಬೀನು ಹಿಡಿದೇ ನೋಡುವಂತೆ ಬರೆದಿರುವದಿಲ್ಲವೇ ಹಾಗೆ
ಕಂಡೂ ಕಾಣದಂತೆ ಅದು ಇರುತ್ತದೆ..ನಮ್ಮ ಕ್ರಿಯಾಶಕ್ತಿ ಕ್ರಮೇಣ ಜಡವಾಗಿ ಕೈ ಕೊಡುತ್ತದೆ...ತಾಸುಗಟ್ಟಲೇ ಕುಳಿತೇ ಇರುವದರಿಂದ ಸೋಮಾರಿತನ ವೃದ್ಧಿಸುತ್ತಿದೆ...ಮನೆಯ ಜನರೊಂದಿಗೇನೇ ಸಂಪರ್ಕ,ಸಂವಹನ ಕಡಿಮೆಯಾಗುತ್ತದೆ..ಒಂದು ಫ್ಲೋರ್ದಿಂದ  ಇನ್ನೊಂದು ಫ್ಲೋರ್ಗೆ ಮಾತಿನ ಬದಲು ಸಂದೇಶಗಳು ರವಾನೆಯಾಗುವದೇ ಹೆಚ್ಚು.....ಮೆದುಳು ಚುರುಕಾದಷ್ಟೂ ಹೃದಯ ಮಿಡಿತ ಮಂದವಾಗುತ್ತದೆ...ಎಲ್ಲರೂ ಸುಖದ ಭ್ರಮೆಯಲ್ಲಿ ಬದುಕುತ್ತಿದ್ದಾರೆ...ಆದರೆ ಒಳಗೆಲ್ಲೋ ಎಲ್ಲವೂ ಸೋರಿಹೋದ ಹತಾಶೆ ಕಾಣುತ್ತಿದೆ..
ಇದೆಲ್ಲವೂ ಪರ್ಯಾಯವಾಗಿ fb ಯಲ್ಲಿ  ಪ್ರದರ್ಶಿತವಾಗುತ್ತಿರುವದು
ಗುಟ್ಟಾಗಿಯೇನೂ ಉಳಿದಿಲ್ಲ...ಜನರಲ್ಲಿ ಸಹನಶಕ್ತಿ ಕಡಿಮೆಯಾಗಿ
ಅಸಹನೆ,ಅಪನಂಬಿಕೆ,ಅವಿಶ್ವಾಸ,ಅಪರಿಹಾರ್ಯ ಸಮಸ್ಯೆಗಳು ತಲೆ ಎತ್ತುತ್ತಿವೆ...ಸಣ್ಣ ಸಣ್ಣ ವಿಷಯಗಳನ್ನು ಹಿಗ್ಗಿಸುವದು,ವಾದಗಳನ್ನು,ಬೆಳೆಸುವದು,ಅನವಶ್ಯಕ ಅಪನಂಬಿಕೆಗಳು ಹೆಚ್ಚಾಗಿ ಉದ್ವೇಗದಲ್ಲಿ ಸಲ್ಲದ ನಿರ್ಣಯಕ್ಕೆ ಬಂದು ಮನಸ್ಸು ಕಹಿ ಮಾಡಿಕೊಳ್ಳುವದು ಹೆಚ್ಚಾಗಿದೆ..ಇವೆಲ್ಲ ಇಲ್ಲದ ಕಾಲಕ್ಕೆ ಎಲ್ಲವೂ ಸರಿಯಿತ್ತು ಎಂದೇನೂ ನಾನು ಹೇಳುವದಿಲ್ಲ..ಆದರೆ ಹೆಚ್ಚು ಜಿದ್ದಿಗೆ ಬೀಳದೇ ಸ್ವಲ್ಪೇ ಹೊತ್ತಿನಲ್ಲಿ ಸರಿ ಪಡಿಸಿಕೊಳ್ಳುವ ತಾಳ್ಮೆಯಿತ್ತು.. .ಅನಿವಾರ್ಯತೆ ಯಿತ್ತು..
'ಕಹಿ' ಹೆಚ್ಚು ಹೊತ್ತು ಕಹಿಯಾಗಿಯೇ ಉಳಿಯುತ್ತಿರಲಿಲ್ಲ ಅನಿಸುತ್ತದೆ..
    ‌‌‌‌‌    ಅದೇ fb ನೋಡುತ್ತಿದ್ದೆ ಅಂದೆನಲ್ಲ...ಅದರಲ್ಲಿಯ ಕೆಲವು post ಗಳನ್ನು ನೋಡಿದಾಗ ಹೀಗೆಲ್ಲ ವಿಚಾರಬಂತು..ಬಾಲ್ಯದ ಅಮಾಯಕತೆ ಕಳೆದುಕೊಂಡು , ನನ್ನನ್ನು ನಾನೇ ಅರ್ಥೈಸಿಕೊಳ್ಳ ತೊಡಗಿದಾಗಿನ ಫಲಿತಾಂಶವಿದು...ಬಹುಶಃ ಎಲ್ಲರಿಗೂ ಒಮ್ಮಿಲ್ಲ ಒಮ್ಮೆ ಅನಿಸುವಂಥದ್ದೇ...
      ‌‌‌ಎರಡು ತಾಸಿನ ಹಿಂದೆ
ನಾನೊಂದು post ಹಾಕಿದೆ,

_ಅವನು  ಬಸವ...
_ ಅವಳು ಕಮಲ...
_ಕಮಲ ಬಸನ
ವನ  ತಂಗಿ..

           ಇಷ್ಟೇ ನಾನು ಬರೆದದ್ದು..ತಾಸೊಂದರಲ್ಲಿ ಅರವತ್ತರಷ್ಟು ಜನ ಆ ದಿನಗಳಿಗೆ ಹೋಗಿ ಆ ಇಡೀ ಪಾಠವನ್ನು,ಆ ಪಠ್ಯದ ಕವಿತೆಗಳನ್ನು ಹಾಕಿ ಅಂದಿನ ದಿನಗಳನ್ನು ಮರು ಜೀವಿಸಿದ್ದಾರೆ..ಮೂಲಾಕ್ಷರಗಳ ಕಲಿಕೆ ಮುಗಿದ ಮೇಲೆ ವಾಕ್ಯ ರಚನೆಗಳನ್ನು ಪರಿಚಯಿಸುವಾಗಿನ ಕನಿಷ್ಠ ಶಬ್ದ ಬಳಕೆಯ ವಾಕ್ಯಗಳು ಅವು..
ಅದರಲ್ಲಿ ಜಾಣತನವಿಲ್ಲ..
ಹೆಗ್ಗಳಿಕೆಯಿಲ್ಲ...ನೆನಪಿರಲೇ ಬೇಕೆಂಬ ಅಂಶಗಳಿಲ್ಲ..
ಆದರೆ ಅಮಾಯಕ ಬಾಲ್ಯದ ಮುಗ್ಧತೆಯಿದೆ..ಕಲಿಕೆಯ
ಜಂಭವಿದೆ...ಕಲಿತ ಆನಂದವಿದೆ...ಸುಂದರ ನೆನಪಿನ  ಭಂಡಾರವೇ ಇದೆ..ಅದಕ್ಕೊಂದು ಆತ್ಮೀಯ ಸಂವೇದನೆಯಿದೆ...ಅಂತೆಯೇ ಅರವತ್ತು/ ಎಪ್ಪತ್ತರ ವಯಸ್ಸಿನವರೂ ಚಿಕ್ಕವರಾಗಿ, ಬಾಲ್ಯಕ್ಕೆ ಮರಳಿ ಸ್ಪಂದಿಸಿದ್ದಾರೆ..ಆನಂದಿಸಿದ್ದಾರೆ....
         ನಾವು ಎಷ್ಟೇ ದೊಡ್ಡವರಾಗಲೀ ,ಎಷ್ಟೇ ಮುಖವಾಡ ಧರಿಸಲೀ, ಅದು ಹೇಗೋ ಒಮ್ಮೊಮ್ಮೆ ಅನಾವರಣ ವಾಗಿ ಗೊತ್ತಿಲ್ಲದೇ ಬತ್ತಲೆಯಾಗಿ ಬಿಡುತ್ತೇವೆ...ಹಾಗೆ ಮಾಡಿಸುವದೊಂದು ಶಕ್ತಿ  ಅದೆಲ್ಲೋ ಅದಮ್ಯವಾಗಿದ್ದು ಕಾಲ ಬಂದಾಗ ಹೊರಬರುತ್ತದೆ...
            ಒಟ್ಟಿನಲ್ಲಿ ಇದುವರೆಗಿನ ಬದುಕಿನಲ್ಲೊಂದು  ಸುತ್ತು ಹೋಗಿ ಬಂದಾಗ "ಮಾನಸಿಕ google search" ನಲ್ಲಿ
ನನಗೆ ಅನಿಸಿದ ಭಾವನೆಗಳಿವು...ನನ್ನೊಡನೆ ಬಾಲ್ಯಕ್ಕೆ ಮರಳಿದ ಎಲ್ಲರಿಗೂ ಧನ್ಯವಾದಗಳು/ ಅಭಿನಂದನೆಗಳೂ ಸಹ..

Sunday 16 June 2019

ಹಾಗೇ ಸುಮ್ಮನೇ...

ಹಾಗೇ ಸುಮ್ಮನೇ ಅಲ್ಲ...
         
             ಮಧ್ಯಾನ್ಹ ಹನ್ನೆರಡರ ಉರಿಬಿಸಿಲು..ಸೂರ್ಯನಿಗೂ ಬೆವರಿಡುವ ಸಮಯ...ಕೂದಲಿಲ್ಲದ ಬಕ್ಕನೆತ್ತಿಯ ಮೇಲೆ ಇಪ್ಪತೈದು kg ಅಕ್ಕಿಯ ಮೂಟೆ ಹೊತ್ತು ತಂದು ಪಡಸಾಲೆಯಲ್ಲಿ ಇಳಿಸಿ ನಾಲ್ಕು ಬೆರಳುಗಳಿಂದ ಬೆವರು ಗೀರಿ ತೆಗೆದರೆ ಒಂದು ಲೋಟ ತುಂಬಬೇಕು..ಯಾರಿಗೋ ಒಬ್ಬರಿಗೆ ಐದು/ಹತ್ತು ರೂಪಾಯಿ ಕೂಲಿ  ಕೊಟ್ಟರೆ  ಮನೆವರೆಗೂ ತರಬಹುದಾದದ್ದಕ್ಕೂ ಶ್ರಮ ಪಡುವ ಅನಿವಾರ್ಯತೆ ಆಗ ನಮ್ಮಪ್ಪನಿಗೆ...ಎಂಟು ಮಕ್ಕಳು,ಅಮ್ಮ - ಅಪ್ಪ- ಅಜ್ಜಿ ಹನ್ನೊಂದು ಜನರ ಸಂಸಾರದಲ್ಲಿ ' ಉಳಿತಾಯ' ಬಿಟ್ಟರೆ ಬೇರೆ ಇನ್ನೊಂದು ಪದಕ್ಕೆ ಮಹತ್ವವೇ ಇಲ್ಲ ಎಂಬಂತಿದ್ದ ಬದುಕು...ಕಾಯಂ ಅಲ್ಲದ ಪುಟ್ಟ ನೌಕರಿ..ದೊಡ್ಡ ಪೋಸ್ಟನಿಂದ wholesale ನಲ್ಲಿ  ಕಾರ್ಡು,ಇನ್ಲ್ಯಾಂಡ್, ಪೋಸ್ಟ cover ಗಳು,ರೆವಿನ್ಯೂ stamps, money order forms ನಂಥ ಎಲ್ಲ  ಸರಕು- ಸಾಮಗ್ರಿ ತಂದು ಕಮೀಶನ್ ಮೇಲೆ ಊರಲ್ಲಿ ಕೊಡುವದು...ಪುಟ್ಟ ಒಂದು ಕೋಣೆಯ ಮನೆ, ಒಂದಿಷ್ಟು ಜಮೀನು ಇದ್ದುದರಿಂದ ಹೊಟ್ಟೆ ಪಾಡಿಗೆ ಚಿಂತೆಯಿಲ್ಲದಿದ್ದರೂ ಸ್ವಲ್ಪು ತಲೆಗೆಳೆದರೆ ಕಾಲಿಗೆ,ಕಾಲಿಗೆಳೆದರೆ ತಲೆಗೆ ಸಾಲದ ಬದುಕು...ಆದರೆ ಕೊರತೆಗಳ  ಬಗ್ಗೆ ಒಂದೇ ಒಂದು ದಿನವೂ ಮನೆಯಲ್ಲಿ ಮಾತುಗಳಾದ ನೆನಪು ನನಗಿಲ್ಲ..ಸ್ವಲ್ಪು ಹೆಚ್ಚು ,ಸ್ವಲ್ಪು ಕಡಿಮೆ ಎಲ್ಲರದೂ ಅದೇ ಸ್ಥಿತಿಯಿತ್ತೋ,ಬದುಕೆಂದರೆ ಇಷ್ಟೇ ಎಂಬುದು ಪೂರ್ವ ಗ್ರಹಿತವಿತ್ತೋ ಇಂದಿಗೂ ಒಗಟು ನನಗೆ.ಇಷ್ಟಾದರೂ
ಮಧ್ಯಾಹ್ನದ ವೇಳೆ ಯಾರೇ ಪರೂರಿಂದ ಬರಲಿ ಅವರು ನಮ್ಮನೆಯಲ್ಲಿ ಉಣಲೇಬೇಕು ಎನ್ನುವಷ್ಟು ಔದಾರ್ಯ...
            ಆಗ ಸೌದೆ ಒಲೆಗಳ ಕಾಲ...ಕಡಿದ ಕಟ್ಟಿಗೆ ತುಂಬಾ ತುಟ್ಟಿ ...ಮರದ ಬೊಡ್ಡೆಗಳನ್ನು ಖರೀದಿಸಿ ಬೆಳಿಗ್ಗೆ ಎರಡು ಗಂಟೆ ಕಟ್ಟಿಗೆ ಕಡಿಯುವ ಕೆಲಸ..ಚಹ ಕುಡಿದು,ಬಾಯಲ್ಲಿ ಎಲೆ,ಅಡಿಕೆ ತುಂಬಿ ನಮ್ಮಪ್ಪ 'ರಾಮ'ಣ್ಣ 'ಪರಶು ರಾಮಣ್ಣ'ನಾಗುತ್ತಿದ್ದ...ನಮ್ಮ ಕೆಲಸ ಒಡೆದು ಗುಡ್ಡೆ ಹಾಕಿದ ಕಟ್ಟಿಗೆಗಳನ್ನು ಚಾಚಿದ ಕೈಗಳ ಮೇಲೆ ಬೇರೊಬ್ಬರಿಂದ ಏರಿಸಿಕೊಂಡು ಸೌದೆ ರೂಮಿಗೆ ಸಾಗಿಸುವದು...ಎಳೆಯ ಕೈಗಳು,ಕಟ್ಟಿಗೆ ಚುಚ್ಚಿ ಇನ್ನೇನು ರಕ್ತ ಚಿಮ್ಮತ್ತೇನೋ ಅನ್ನುವಂತಾದ ಮೇಲೆಯೇ ವಿರಾಮ..ಕೈಗಳ ಮೇಲೆ ತಣ್ಣೀರು ಸುರಿದುಕೊಂಡು ಕೊಬ್ಬರಿ ಎಣ್ಣೆ ಸವರಿಕೊಳ್ಳುತ್ತಿದ್ದ ನೆನಪು ಈಗಲೂ...
           ‌ ನಂತರ ದೇವರ ಪೂಜೆ ಮುಗಿಸಿ ಒಂದು ಸುತ್ತು ಹೊರಗೆ ಹೋಗಿ ಬಂದರೆ ಕೈಗಳಲ್ಲಿ ಕನಿಷ್ಟ ಒಂದೆರಡು ಪುಸ್ತಕಗಳು ಇರಲೇ ಬೇಕು...ಖರೀದಿಯಲ್ಲ...ಕೈಗಡ...ಅವನ ಪುಸ್ತಕ ಪ್ರೀತಿ  ಜನ ಜನಿತವಾದ್ದರಿಂದ  ಪರಿಚಯಸ್ಥರು  ತಾವೇ ಕರೆದು ಪುಸ್ತಕ ಕೊಡುತ್ತಿದ್ದರು... ಕುರ್ಚಿಗೆ
ಒರಗಿ ಕುಳಿತು ಸಾರಸ್ವತ ಹೊಕ್ಕರೆ  ಅದೊಂದು ರೀತಿ ಸಮಾಧಿಯೇ...
       ೧೯೦೯ ರಲ್ಲಿ ಹುಟ್ಟಿ ೨೦೦೦ ರದಲ್ಲಿ ೯೦ ನೇ ವರ್ಷಕ್ಕೆ ಸತ್ತರೂ ಒಂದೇ ರೀತಿಯ ಬದುಕು..ಶುದ್ಧ ಖಾದಿಧಾರಿ...ಮನೆತುಂಬಾ ಗಾಂಧಿ,ನೆಹರೂ,ರವೀಂದ್ರನಾಥ ಟ್ಯಾಗೋರ್,ಚಿತ್ತರಂಜನ ದಾಸ,ಲಾಲಬಹದ್ದೂರ ಶಾಸ್ರಿಗಳಂಥ ದೇಶ ಭಕ್ತರ ಫೋಟೋಗಳು..ಮಾತಿನಲ್ಲೂ ನೇರ,ದಿಟ್ಟ...ತಮಾಷೆಗೂ ಕಡಿಮೆ ಇರಲಿಲ್ಲ...ಡಾಕ್ಟರರ ಬಳಿ ಹೋದಾಗ,ಏನಾಗಿದೆ ಎಂದವರು ಕೇಳಿದರೆ," ನೀವು ತಾನೇ ಡಾಕ್ಟರ್.. ನೀವು ಹೇಳಬೇಕು..ನನಗೆ ಗೊತ್ತಿದ್ದರೆ ನಿಮ್ಮ ಬಳಿ ಏಕೆ ಬರುತ್ತಿದ್ದೆ? " ಎಂಬ ಉತ್ತರ...
              ಅವನು ಓದಿದ್ದು ಏಳನೇ ಇಯತ್ತೆ...ಇಂಗ್ಲಿಷ ,ಕನ್ನಡ ತುಂಬ ಚೊಕ್ಕ...ಒಂದೇ ಒಂದು ತಪ್ಪು ಸಾಧ್ಯವೇ ಇಲ್ಲ...ನಾವು ಹಾಕಿದ ಪತ್ರಗಳಲ್ಲಿ ತಪ್ಪುಗಳೇನಾದರೂ ಇದ್ದರೆ ಅವುಗಳನ್ನು ತಿದ್ದಿ ತಂತಿಗೆ ಸಿಕ್ಕಿಸಿಟ್ಟು ನಾವು ಊರಿಗೆ ಹೋದಾಗ ಮೊದಲ ಕೆಲಸ
ಅದನ್ನು ಮುಖಕ್ಹಿಡಿದು ಮಂಗಳಾರತಿ ಮಾಡುವದು....ಅವನಿಗೆ ಬರೆಯುವಾಗ ತಪ್ಪಾದರೆ ಎಂಬ ಗಾಬರಿಯಿಂದಲೇ
ಹೆಚ್ಚು,ಹೆಚ್ಚು ತಪ್ಪಾಗುತ್ತಿದ್ದುದೂ ಉಂಟು...
            ಪರೋಪಕಾರದ ಆಯ್ಕೆಯ ಪ್ರಸಂಗಬಂದರೆ  ಯಾವಾಗಲೂ ಪರರ ಪರ...ಮನೆಮಂದಿ ಕೊನೆಗೆ...ವಿಪರೀತ ಅಂತಃಕರುಣಿ...ಆದರೆ ಕೃತಿಯಿಂದ..ತೋರಿಕೆ ಶಬ್ದ ನಿಘಂಟುವಿನಲ್ಲೇ ಇರಲಿಲ್ಲ...ಒಂದೇ ಒಂದು ಸಲ ನಮ್ಮನ್ನು ಅಪ್ಪಿ ಮುದ್ದಾಡಿದ ನೆನಪಿಲ್ಲ...ಆದರೆ ಯಾವ ಮಕ್ಕಳಿಗಾದರೂ ಅಜಾರಿಯಾದರೆ ಊಟ ಬಿಟ್ಟು ಓಡಾಡಿದ್ದು ಕಂಡ ಅನುಭವಗಳಿವೆ.. ಅತಿ ಸಲಿಗೆ ಮಕ್ಕಳಿಗೆ ಸಲ್ಲದು ಎಂಬ ನಿಲುವು...ಮಾತು ಜೋರು ಅನಿಸುತ್ತಿದ್ದರೂ ಅದರ ಹಿಂದೆ ಕಳಕಳಿ ಎದ್ದು ಕಾಣುವಷ್ಟು ಪಾರದರ್ಶಕ...ತನಗೆ ಎಂಬತ್ತಾದರೂ ತನ್ನ ಹಿರಿಯರ ಮುಂದೆ ಚರ್ಚಿಸದೇ ಒಂದೇ ಒಂದು ನಿರ್ಣಯ ತೆಗೆದುಕೊಂಡವನಲ್ಲ..ಎದುರು ಆಡಿದವನಲ್ಲ..
ಇದ್ದಾಗ ಬಿಡಿ,ಸತ್ತ ಮೇಲೂ ಹಿರಿಯರ ' ಶ್ರಾದ್ಧ' ಕರ್ಮಗಳನ್ನು ಮಾಡುವಾಗ ತನ್ನೆಲ್ಲ ಶೃದ್ಧೆಯಿಂದ ಎಲ್ಲ ಅಡಚಣಿಗಳನ್ನು ಪಣಕ್ಕಿಟ್ಟು ದೇವರಾರಾಧನೆಯ ರೂಪವನ್ನದಕ್ಕೆ ಕೊಟ್ಟು ಬಿಡುತ್ತಿದ್ದ..ಅದಕ್ಕೆ ಹಣ ಜೋಡಿಸಿ ಇದ್ದುದೆಲ್ಲ ಖರ್ಚು ಮಾಡಿ, ಜನರನ್ನು ಕೂಡಿಸಿ ಆಚರಿಸಿದಾಗ ನಾವು ತಮಾಷೆ ಮಾಡುತ್ತಿದುಂಟು, "ಇದು ಸತ್ತವರದಲ್ಲ.. ಇದ್ದವರ ಶ್ರಾದ್ಧ" ಎಂದು...
  ‌‌‌           ಸ್ವಾವಲಂಬನೆ ಅವನ ಇನ್ನೊಂದು ಹೆಗ್ಗುರುತು. ಸಾಯುವ ಮೊದಲಿನ ಕೆಲ ತಿಂಗಳು ಬಿಟ್ಟರೆ ತನ್ನ ಬಟ್ಟೆ ತಾನೇ ಒಗೆದು ಒಣಗಿಸಿ,ಇಟ್ಟುಕೊಳ್ಳುತ್ತಿದ್ದ..ಎಂದಿಗೂ ತನ್ನ ಕೆಲಸ ತಾನೇ ಮಾಡಿಕೊಂಡರೇನೆ  ಅವನಿಗೆ ತೃಪ್ತಿ..
          ಹೀಗೆ ಸರಳ,ಸಹಜ,ಆಡಂಬರರಹಿತ,ಪರೋಪಕಾರದ,ಬದುಕು ಬದುಕಿ ನಮಗೆ  ದೃಷ್ಟಾಂತವಾದ ನಮ್ಮ ಅಪ್ಪನ ನೆನಪು ಒಂದೇ ದಿನವಲ್ಲ...ನಾವಿರುವವರೆಗೂ ನಿರಂತರ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...