Tuesday 18 December 2018

ನೀನು

ನೀನ
..

ನೀನೆಂದರೆ ನಿನ್ನ ವಯಸ್ಸಲ್ಲ...
ನೀ ಧರಿಸುವ ಬಟ್ಟೆಗಳಲ್ಲ..
ನಿನ್ನ ಆಕರ್ಷಕ ತೂಕವಲ್ಲ...
ನಿನ್ನ ಕೂದಲಿನ ಬಣ್ಣವಲ್ಲ...
ನಿನ್ನ ಗಲ್ಲದ ಗುಳಿಗಳಲ್ಲ...
ನಿನ್ನ ಹೆಸರು ಸರ್ವಥಾ ಅಲ್ಲ..

ನೀನೆಂದರೆ,

ನೀನು ಓದಿದ ಪುಸ್ತಕಗಳು..
ನೀನು ಆಡುವ ಮಾತುಗಳು..
ನಿನ್ನ ಬೆಳಗಿನ ಗೊಗ್ಗರು ದನಿ...
ನೀನು ಮುಚ್ಚಿಡಲೆತ್ನಿಸುವ ಮುಗುಳ್ನಗೆ..
ನೀನು ಏಕಾಗಿಯಾಗಿದ್ದಾಗ ಗುನುಗುವ ಹಾಡು...
ನೀನೆಲ್ಲೆಡೆ ಸುತ್ತಾಡಿ ಮರಳಿ ಬಂದ ನಿನ್ನದೇ ಮನೆ...
ನೀನೆಂದರೆ ನಿನ್ನವೇ ನಂಬಿಕೆಗಳು...
ನೀನೆಂದರೆ ನಿನ್ನ ಮುಗುಳ್ನಗೆಯ ಮಿಂಚು...
ನೀನೆಂದರೆ ಹನಿಗೂಡುವ ನಿನ್ನ ಕಣ್ಣಂಚು...
ನೀನು ಪ್ರೀತಿಸುವ,ನಿನ್ನನ್ನು ಪ್ರೀತಿಸುವ ಜನ...
ನೀನು ಪ್ರೀತಿಸುವ ನಿನ್ನ ಭವಿಷ್ಯದ ಕನಸುಗಳು...
ನೀನು ನಿನ್ನದೇ 'ಜೀವನ ಸೌಂದರ್ಯ...'

ಆದರೆ 'ನೀನಲ್ಲದ''ನಿನ್ನನ್ನು '
ಇತರರು ಬೇರೆಯಾಗಿ
ಬಣ್ಣಸಿದ್ದನ್ನು 
ನಂಬಿದಾಗಲೇ
ನೀನಾರು ಎಂಬುದನ್ನು
ನೀನು ಮರೆತೇಬಿಟ್ಟೆ...

( ಮೂಲ ಇಂಗ್ಲಿಷ  ಕವನ_Erin Hanson ರವರ NOT
ಭಾವಾನುವಾದ: ಶ್ರೀಮತಿ,ಕೃಷ್ಣಾ ಕೌಲಗಿ
ಕವನ ಕೃಪೆ: ರಾಧಾ ಕುಲಕರ್ಣಿಯವರ ಗೋಡೆಯಿಂದ)

Monday 17 December 2018

ನಾನೂ ಧಾರವಾಡೀ...

ಹಾಗೇ ಸುಮ್ಮನೇ....

ನಾನು ಧಾರವಾಡೀ...

       ‌‌‌‌         ನಾವು ಧಾರವಾಡದವರು...ಬಹಳೇ ಧಾರಾಳಿಗಳು..ಎಲ್ಲದರಲ್ಲೂ...ಅಂತೆಯೇ ಮಾತಿನಲ್ಲೂ...
ಎತ್ತರದ ಧ್ವನಿಯಲ್ಲಿ,ಅಲ್ಪಪ್ರಾಣ,ಮಹಾ ಪ್ರಾಣಗಳಿಗೆ ಕಿಂಚಿತ್ತೂ ಲೋಪ ಬರದಂತೆ,ಗಂಡು ಕನ್ನಡದಲ್ಲಿ ಹರಟೆ ಹೊಡೆಯುವದೇ  ನಮಗೆ ಹಬ್ಬ..
   ‌‌‌‌                  ನಾನಂತೂ ಶಿಕ್ಷಕಿ ಬೇರೆ..ಬಾಯಿ ತೆಗೆದರೆ ಕನಿಷ್ಠ ಒಂದು ಕೊಠಡಿಯಲ್ಲಿ ಕುಳಿತ ಐವತ್ತು ಹುಡುಗರು ಸದ್ದಿಲ್ಲದೇ ಕುಳಿತು ಕೇಳಬೇಕು,ಅಂಥ ದನಿ..ಅದು ಬೇಕೇಬೇಕು...ಇಲ್ಲದಿದ್ದರೆ ಐವತ್ತು ಚಿಲ್ಲರೆ ಧ್ವನಿಗಳ ಸದ್ದು ಕೇಳಬೇಕಾಗುತ್ತದೆ....ಒಂದು ರೀತಿಯಲ್ಲಿ ನಮ್ಮ ದನಿಯೇ ನಮ್ಮ( ಶಿಕ್ಷಕರ) identity....ಇದು ಎಲ್ಲರಿಗೂ ಗೊತ್ತು.
   ‌‌‌‌       ‌         ಹೀಗಾಗಿ ನನ್ನ ಧ್ವನಿ ಒಂದು ನಿರ್ದಿಷ್ಟ ಮಟ್ಟಕ್ಕೆ fix ಆಗಿತ್ತು..ಧಾರವಾಡದಲ್ಲಿ ಇರುವವರೆಗೆ ಅದು ಸಮಸ್ಯೆಯೂ ಆಗಿರಲಿಲ್ಲ...
          ‌‌‌         ‌‌‌‌‌‌‌‌    2006 ರಲ್ಲಿ ಬೆಂಗಳೂರಿಗೆ ವಲಸೆ ಬಂದಾಗ ಮೊದಲಸಲ ಅರಿವಾಯಿತು...ಬದಲಾವಣೆ ಅನಿವಾರ್ಯ ಎಂದು. Apartment ಸಂಸ್ಕೃತಿಯಿರುವ ಬೆಂಗಳೂರಿನಲ್ಲಿ ' ನಮ್ಮ ಮನೆ ಪೂರ್ತಿಯಾಗಿ ನಮ್ಮದಲ್ಲ.. ಎಡಗೋಡೆ ಅರ್ಧ ಎಡಕ್ಕೆ ಇರುವವರದು.ಬಲಗಡೆಯದು ಬಲಗಡೆಯ ಮನೆಗೂ ಸೇರಿದ್ದು...ನಮ್ಮ ಛತ್ತು ಮೇಲಿನವರ ನೆಲ..ನಮ್ಮ ನೆಲ ಕೆಳಗಿನವರ ಛತ್ತು...ಹೀಗಾಗಿ ಆಡುವ ಮಾತುಗಳೂ ಪೂರ್ತಿ ನಮ್ಮವಲ್ಲ..ಭಾಗಶಃ ಎಲ್ಲರವೂ...
            ‌‌‌‌    ಹೀಗಾಗಿ ನಾನು ಬಾಯಿ ತೆಗೆಯುವ ಮೊದಲೇ ಮಕ್ಕಳು ' ದನಿ ತಗ್ಗಿಸು' ಎಂಬಂತೆ ಕೈಸನ್ನೆ ಮಾಡುತ್ತಿದ್ದರು..
ಅವರಿಗೆ ನನ್ನಿಂದ ಮುಜುಗರಾಗುವದು ನನಗೂ ಇಷ್ಟವಿರದ್ದರಿಂದ voice modulation ಗೆ ನಾನೂ ತಯಾರಾಗಲೇಬೇಕಾಯಿತು...
    ‌‌‌                  ಹಾಗೆ ನಿರ್ಧರಿಸಿದ ದಿನವೇ ಧಾರವಾಡದಿಂದ ಒಂದು ಫೋನು ಬಂತು..ಮೈಯೆಲ್ಲಾ ಎಚ್ಚರಿಟ್ಟುಕೊಂಡು ಜೇನು ಧ್ವನಿಯಲ್ಲಿ ' ಹಲೋ 'ಎಂದೆ..
ಆ ಕಡೆಯವರು ಸಂದೇಹದ ಧ್ವನಿಯಲ್ಲಿ,ನಿಧಾನವಾಗಿ 'ಟೀಚರ್ ಇದ್ದಾರಾ? ' ಅಂದರು..
' ಹೇಳಿ ,ಯಾರು ಬೇಕಾಗಿತ್ತು?' _
ಧ್ವನಿಯ ನಿಯಂತ್ರಣ ಬಿಟ್ಟು ಕೊಡಲಿಲ್ಲ...
' ಕೌಲಗಿ ಟೀಚರ್ ಬೇಕಿತ್ತು.'
' ಹೇಳಿ, ನಾನೇ..ಟೀಚರೇ ಮಾತಾಡ್ತಿದ್ದೇನೆ'
ಧ್ವನಿಯ ಸುಳಿವು ಸಿಕ್ಕಿತೇನೋ..
' ಯಾಕ ಶ್ರೀಮತಿ, ಆರಾಮಿಲ್ಲೇನು?'_
ಗೆಳತಿಯ ಧ್ವನಿಯಲ್ಲಿ ಇನ್ನಿಲ್ಲದ ಆತಂಕ..
' ಯಾಕ ನನಗೇನಾಗ್ಬೇಕಿತ್ತು'?
' ಇಲ್ಲ,ನರಸತ್ತ ದನಿ ಬರಲಿಕ್ಹತ್ತದ..ನೀ ಮಾತಾಡ್ತಿ ಅನಿಸೇಒಲ್ಲದು..'
'ಏನಿಲ್ಲ,ನಾ ಇರೋಹಂಗ ಇದ್ದೇನಿ..'
' ಸುಳ್ಳು ಹೇಳಬ್ಯಾಡಾ..ನೀ ಆರಾಮ ತೊಗೋ..ನಾ ಆಮ್ಯಾಲ ಮಾಡ್ತೇನಿ?
'ಇಲ್ಲ ಮಾರಾಯ್ತಿ,ನನಗೇನೇನೂ ಆಗಿಲ್ಲ..ಹೇಳು..ಹೇಳು..'
ಹಿಂಗ ಸ್ವಲ್ಪು ಹಗ್ಗ ಜಗ್ಗಾಟ ಆತು..ನನಗೂ ತಾಳ್ಮೆ ಹೋತು..ಆದದ್ದಾಗಲೀ ಅಂತ ನನ್ನ ಮಾಮೂಲಿ ದನಿ ಒಳಗ ಮಾತಾಡಿದ ಮ್ಯಾಲನ ಅವಳಿಗೆ ನಾ ಆರಾಮ ಇದ್ದದ್ದು ನಂಬಿಕೆಯಾದದ್ದು...
            ‌ 
                     ಈ ಮಾತಿಗೆ ಹದಿಮೂರು ವರ್ಷ ಆಗ್ಲಿಕ್ಕೆ ಬಂತು. ಈಗ ' ವನವಾಸ' ' ಅಜ್ಞಾತವಾಸ' ಎರಡೂ ಮುಗುದ್ವು... ಈಗ ಯಾರದರ ಫೋನ್ ಬಂದ್ರ ಸ್ವಲ್ಪೂ ತ್ರಾಸಾಗುದಿಲ್ಲ..ಯಾಕಂದ್ರ ನನ್ನ ಧ್ವನಿಯ real volume ಉಳಿದವರಿಗೂ ರೂಢಿಯಾಗೇದ ಅಥವಾ ಮಾಡ್ಸೇನಿ ಅನ್ರಿ ಬೇಕಾರ.....ಮತ್ತ ಗೊತ್ತೂ ಆಗೇದ...ಬಾಯಿಷ್ಟ ಜೋರು ಧಾರವಾಡದ ಮಂದೀದು..ಮನಸ್ಸು ಧಾರವಾಡ ಫೇಡೆಗಿಂತಾನೂ sweet ಅಂತ...

Sunday 16 December 2018

ಮತ್ತೊಂದು ಕಪ್ ಚಹ

ಮತ್ತೊಂದು ಕಪ್ ಚಹ..

ಚಹದ ಕಪ್ ಹಿಡಿದು
ಕಿಟಕಿಯ ಹತ್ತಿರ
ಕುಳಿತಿದ್ದೆ....
ಹೊರಗಿನ ಸುಂದರ
ದೃಶ್ಯಗಳ
ಸವಿಯುತ್ತ
ಗುಟುಕು ಸವಿಯುತ್ತಿದ್ದೆ
ಅರೆ,ಸಕ್ಕರೆ ಮರೆತೇಹೋಗಿದೆ..
ಸಪ್ಪೆ...ಸಪ್ಪೆ...

ಅಯ್ಯೋ! ಮತ್ತಾರು ಹೋಗಬೇಕು ..
ಸಕ್ಕರೆ ತಂದು ಹಾಕಬೇಕು..
ಬೇಏಏಏಜಾರು...
ಇವತ್ತೊಂದು ದಿನ
ಇದೇ ಸಪ್ಪೆ ಚಹ ಕುಡಿದರಾಯಿತು...
....  ....  .... .... .... .... ....
ಖಾಲಿ ಕಪ್ ಕಡೆ
ನೋಡಿದೆ...
ಕಪ್ಪಿನ ಕೆಳಗೆ ಕರಗದೇ
ಉಳಿದ ಸಕ್ಕರೆ...
ನೆನಪು ಬಂದು ನಕ್ಕೆ...
ಹೌದು,ಚಮಚ ಸಿಕ್ಕಿರಲಿಲ್ಲ..
ಆನಂತರ ಮರತೇಬಿಟ್ಟಿದ್ದೆ..

ನಮ್ಮ ಬದುಕೂ ಹೀಗೇ...
ನಮ್ಮ ಸುತ್ತು ಮುತ್ತಲೂ
ಎಷ್ಟೋ ಅಂದದ
ಚಂದದ ಖುಶಿಯ ಕ್ಷಣಗಳು
ಕೈಗೆ ಸಿಗುವಂತೆಯೇ
ಇರುತ್ತವೆ...
ಅದೇ ಕಪ್ಪಿನ ತಳದಲ್ಲಿಯ
ಕರಗದ ಸಕ್ಕರೆಯಂತೆ..

ಸ್ವಲ್ಪು ಯೋಚಿಸಿ..
ಇತರರೊಡನೆ
ನಗುನಗುತ್ತ
ಮಾತಾಡುವಂತೆ
ಹಕ್ಕಿನಿಂದಲೇ ಸಿಟ್ಟಿಗೂ
ಏಳಬೇಕು...ಸಾಧ್ಯವಿದ್ದರೆ
ಅವರ ಕಣ್ಣೀರು
ಒರೆಸಬೇಕು...
ನಮ್ಮವರೇ ಆದವರಲ್ಲಿ
ಮಾನ ಅಪಮಾನವೆಲ್ಲಿ ಬಂತು?!!
ಆದಷ್ಟೂ ' ಸರಳ' ವಾಗಿರೋಣ..
Smart ಆಗಿರಲೇಬೇಕಿಲ್ಲ..
ಯಾಕೆಂದರೆ ನಾವೇನೂ
Samsung phone ಅಲ್ಲ..

( ಹಿಂದಿ ಮೂಲದಿಂದ ಕನ್ನಡಕ್ಕೆ ಅನುವಾದ_
ಕೃಷ್ಣಾ ಕೌಲಗಿ)

Friday 7 December 2018

ಹೆಣ್ಣು....

ಎಲೆ ಹೆಣ್ಣೆ,
ನಿನಗೆ ಪುರುಷನಾಗುವ
ಹಂಬಲ ಬೇಡ...
ಎಲ್ಲಿಂದ ತರುವಿ
ಆ ಕಠಿಣ ಮನಸ್ಸು...??!!

ಬುದ್ಧನಾಗುವ ಬಯಕೆಯೇ?
ಜ್ಞಾನದ ಹಸಿವು 'ಬುದ್ಧ'ನಿಗೆ ಮಾತ್ರವೇ?
ನಿನಗೂ ಬೇಕೆನಿಸಿದಾಗ
ಗಂಡ,ನವಜಾತ ಶಿಶುವನ್ನು ತೊರೆದು
ನಡುರಾತ್ರಿ ಹೊರಟು ಬಿಡಬಲ್ಲೆಯಾ?....
ಎಲ್ಲಿಂದ ತರುವಿ ಆ ಕಠಿಣ ಮನಸ್ಸು??!!

ಮರ್ಯಾದೆಪುರುಷ ರಾಮನಾಗುವೆಯಾ?
ಮಾಡದ ತಪ್ಪಿಗೆ ಹೆಂಡತಿಯ
ಅಪರಾಧಿಯನ್ನಾಗಿಸಿ
ಕಾಡಿಗಟ್ಟ ಬಲ್ಲೆಯಾ?
ಪರರ ಮಾತು ಕೇಳಿ ಇಲ್ಲದ
ಸಂಬಂಧ ಆರೋಪಿಸಿ
ಅಗ್ನಿಪರೀಕ್ಷೆಗೆ ಗುರಿಮಾಡಬಲ್ಲೆಯಾ?
ಎಲ್ಲಿಂದ ತರುವಿ ಆ ಕಠಿಣ ಮನಸ್ಸು??!!

ಗೋಪಿಲೋಲ ಕೃಷ್ಣನಾಗುವ ಬಯಕೆಯೇ?
ಕೃಷ್ಣ- ರಾಧೆಯರಂತೆ ಬೇರೆ ಹೆಣ್ಣುಗಳೊಂದಿಗೆ
ಸಂಬಂಧ ಕಲ್ಪಿಸಿದ್ದೇ ಆದರೆ
ನೀನೇ ಚರಿತ್ರ ಹೀನಳಾಗುವಿ...
ಇತರರೊಡನೆ ಎರಡು ಮಾತನಾಡಿದರೂ
ಕಲಂಕ ಹೊರಬೇಕಾದೀತು....
ಎಲ್ಲಿಂದ ತರುವಿ ಆ ಕಠಿಣ ಮನಸ್ಸು??!!

ಧರ್ಮವೇ ಉಸಿರಾದ ಯುಧಿಷ್ಟಿರನಾಗಬೇಕೇ?
ಜೂಜಿನಲ್ಲಿ ಮಡದಿಯನ್ನು
ಪಣಕ್ಕೊಡ್ಡಬಲ್ಲೆಯಾ?
ಅವಳ ವಸ್ತ್ರಾಪಹರಣ
ಎಲ್ಲರೊಂದಿಗೆ ಕುಳಿತು ನೋಡಬಲ್ಲೆಯಾ?
ಎಲ್ಲಿಂದ ತರುವಿ ಆ ಕಠಿನ ಮನಸ್ಸು??!!

ಬೇಡ..ನಿನಗೆ ಪುರುಷನಾಗುವ
ಹಂಬಲ ಬೇಡ...
ನೀನೆಂದರೆ_
ಸೂಕ್ಷ್ಮ..ಸಹಜ,..
ಸರಳ...ಕೋಮಲ...
ನಿರ್ಮಲ...ನಿಶ್ಚಲ...
ನೀನೆಂದರೆ _
ನೀತಿ...ಜೀವನ ಪ್ರೀತಿ..
ಅದಕ್ಕೇ ನೀನು ಹೆಣ್ಣು..

ನಿನಗೆ ಪುರುಷನಾಗುವ ಹಂಬಲ ಬೇಡ..
ಎಲ್ಲಿಂದ ತರುವಿ ಆ ಕಠಿಣ ಮನಸ್ಸು..??!!

(ಹಿಂದಿಯಿಂದ ಕನ್ನಡಕ್ಕೆ__ ಶ್ರೀಮತಿ ,ಕೃಷ್ಣಾ ಕೌಲಗಿ..)

Saturday 1 December 2018

ವಯಸ್ಸೆಷ್ಟು????

ನಿನಗೆಷ್ಟು ವಯಸ್ಸು?????

"ನಿನಗೆಷ್ಟು ವಯಸ್ಸು"
ಉತ್ತರಿಸಲು ನನಗಿಲ್ಲ ಮನಸ್ಸು..
ಹೇಳಬಾರದೆಂದೇನೂ ಇಲ್ಲ..
ಅದೆಂದೂ ನನ್ನ ವಿಚಾರ ಅಲ್ಲವೇ ಅಲ್ಲ...

ವಯಸ್ಸೆಂಬುದು ಕೇವಲ ಒಂದು ಸಂಖ್ಯೆ..
ಬದಲಾಗುವ ಬದುಕಿನ ಎಲ್ಲ ಮಜಲುಗಳನ್ನು
ಅನುಭವಿಸಬೇಕೆಂಬುದೇ ಬದುಕಿನ ವ್ಯಾಖ್ಯೆ..

ಮೊಮ್ಮಕ್ಕಳೊಂದಿಗೆ ಕಾರ್ಟೂನ್ಸ
ನೋಡುವಾಗ ಮಗುವಾಗಬೇಕು...
ಹಾಡಿನ ಗುಂಗಿಗಿಳಿದು ಕಾಲು ಕುಣಿಸುವಾಗ
ಥೇಟ್ ಕಿಶೋರರಾಗಬೇಕು...
ಹಿರಿಯರೊಡನೆ ಹರಟೆಗಿಳಿದರೆ
ಅವರ ವಿಚಾರಗಳನ್ನರಗಿಸಿಕೊಳ್ಳಬೇಕು...

ಇಡಿಯಾಗಿ ಬದುಕುವದೂ ಒಂದು ಕಲೆ...
ಅದರಲ್ಲಿಯೇ ಇದೆ ಬದುಕಿನ ನಿರಂತರ ಸೆಲೆ...
ಸೂರ್ಯನ ಕಿರಣಗಳ,ಚಂದಿರನ ಬೆಳದಿಂಗಳ,
ಕಾಲದ ಪರಿವೆಯಿಲ್ಲದೇ ಹರಿವ ನದಿ ನೀರಿನ
ವಯಸ್ಸೆಂದಾದರೂ ಕೇಳಿದ್ದೀರಾ???

ಹಾಗೆಯೇ ನಮ್ಮ ಬದುಕು...
ಅಂದಮೇಲೆ ಕಳೆದ,ಮುಂದೆ ಕಳೆಯಬೇಕಾದ
ದಿನಗಳ ಲೆಕ್ಕವೇಕೆ ಬೇಕು...????
ಪ್ರತಿ ಗಳಿಗೆಯನ್ನೂ "ನನ್ನದು...ನನ್ನದು ಮಾತ್ರ"
ಎಂಬಂತೆ ಮನಃಪೂರ್ತಿ ಕಳೆದುಬಿಡಬೇಕು..
ಒಂದಿಲ್ಲ ಒಂದು ದಿನ ಇಲ್ಲಿಂದ ಹೊರಡಲೇಬೇಕು...
ಅದುವರೆಗೂ ವಯಸ್ಸು ಲೆಕ್ಕಹಾಕದೇಉಳಿದುಬಿಡಬೇಕು...

( WhatsApp ಸಂದೇಶವೊಂದರ ಭಾವಾನುವಾದ - ಶ್ರೀಮತಿ, ಕೃಷ್ಣಾ ಕೌಲಗಿ..)

Saturday 24 November 2018

ಗೊತ್ತಾಗಲೇ ಇಲ್ಲ...

ದಿನಗಳು ಕಳೆದವು,..ಹೇಗೆ ಕಳೆದವು...
ಗೊತ್ತಾಗಲೇ ಇಲ್ಲ...
ಬದುಕಿನ ಓಟದಲ್ಲಿ ಉರುಳಿದವು ವರ್ಷಗಳು
ಗೊತ್ತಾಗಲೇ ಇಲ್ಲ...

ಹೆಗಲೇರಿ ಆಡುತ್ತಿದ್ದ ಮಕ್ಕಳು
ಹೆಗಲವರೆಗೆ ಬೆಳೆದದ್ದು ,ಗೊತ್ತಾಗಲೇ ಇಲ್ಲ...
ಬಾಡಿಗೆಯ ಪುಟ್ಟ ಮನೆಯಿಂದ
ಸ್ವಂತ ಗೂಡಿನೊಳ ಹೊಕ್ಕದ್ದು
ಗೊತ್ತಾಗಲೇ ಇಲ್ಲ...

ಸೈಕಲ್ನಲ್ಲಿ ' ಏರಿ' ಏರಿ ಏದುಸಿರು
ಬಿಡುತ್ತಿದ್ದ ನಾವು
ಯಾವಾಗ ಕಾರಿನಲ್ಲಿ ನುಸುಳಿದೆವೋ ಗೊತ್ತಾಗಲೇ ಇಲ್ಲ...
ಅಮ್ಮ- ಅಪ್ಪನ ಹೊರೆಯಾಗಿದ್ದ ನಾವು
ಮಕ್ಕಳ ಹೊರೆ ಯಾವಾಗ ಹೊತ್ತೆವೋ ಗೊತ್ತಾಗಲೇ ಇಲ್ಲ...

ಗಂಟೆಗಟ್ಟಲೇ ಮಲಗಿ ಗೊರಕೆ ಹೊಡೆಯುತ್ತಿದ್ದ
ನಮ್ಮ ನಿದ್ರೆ ಯಾವಾಗ ಹಾರಿತೋ
ಗೊತ್ತಾಗಲೇ ಇಲ್ಲ...
ದಟ್ಟ ಕರಿ ಕೂದಲಿನಲ್ಲಿ ಬೆರಳಾಡಿಸಿ ಸುಖಿಸಿದ,
ನಮ್ಮ ಕೂದಲು ಬಿಳಿಯಾಗತೊಡಗಿದ್ದು ಗೊತ್ತಾಗಲೇ ಇಲ್ಲ...

ಕೈಯಲ್ಲಿ ಅರ್ಜಿ ಹಿಡಿದು ಕಚೇರಿ,ಕಚೇರಿ ಅಲೆದ ನಮಗೆ
ನಿವೃತ್ತಿಯ ಗಳಿಗೆ ಬಂದುದು ಗೊತ್ತಾಗಲೇ ಇಲ್ಲ...
ಮಕ್ಕಳು,ಮಕ್ಕಳೆಂದು ಹಲುಬುತ್ತ ಗಳಿಸಿ ಉಳಿಸುವಲ್ಲಿ
ಆ ಮಕ್ಕಳೇ ದೂರವಾದದ್ದು
ಗೊತ್ತಾಗಲೇ ಇಲ್ಲ...

ನಾವು,ನಮ್ಮವರೆಂದು ಎದೆಯುಬ್ಬಿಸಿ ಮೆರೆದ ನಮಗೆ
ಅವರೆಲ್ಲ ದೂರಾಗಿ , ಒಂಟಿಯಾದುದು ಗೊತ್ತಾಗಲೇ ಇಲ್ಲ...
ನಮಗಾಗಿ ಏನಾದರೂ ಮಾಡಬೇಕೆಂದಾಗ
ದೇಹ ಸಹಕರಿಸುವದನ್ನು ನಿಲ್ಲಿಸಿದ್ದು ಗೊತ್ತಾಗಲೇ ಇಲ್ಲ...

( ಹಿಂದಿ WhatsApp ಕವಿತೆ ಆಧರಿತ: Trans- creation by Krishna Koulagi)

*Nice Poem About Life* ,

समय चला , पर कैसे चला,
पता ही नहीं चला ,
ज़िन्दगी की आपाधापी में ,
कब निकली उम्र हमारी यारो ,
*पता ही नहीं चला ,*

कंधे पर चढ़ने वाले बच्चे ,
        कब कंधे तक आ गए ,
*पता ही नहीं चला ,*

किराये के घर से शुरू हुआ था सफर अपना ,
  कब अपने घर तक आ गए ,
*पता ही नहीं चला ,*

साइकिल के पैडल मारते हुए                      हांफते थे उस वक़्त,
कब से हम कारों में घूमने लगे हैं ,
*पता ही नहीं चला ,*

कभी थे जिम्मेदारी हम माँ बाप की ,
कब बच्चों के लिए हुए जिम्मेदार हम ,
*पता ही नहीं चला ,*

एक दौर था जब दिन में भी
            बेखबर सो जाते थे ,
कब रातों की उड़ गई नींद ,
*पता ही नहीं चला ,*

जिन काले घने बालों पर
     इतराते थे कभी हम ,
कब सफेद होना शुरू कर दिया ,
*पता ही नहीं चला ,*

दर दर भटके थे नौकरी की खातिर ,
        कब रिटायर होने का समय आ गया ,
*पता ही नहीं चला ,*

बच्चों के लिए कमाने बचाने में  
                       इतने मशगूल हुए हम ,
                        कब बच्चे हमसे हुए दूर ,
*पता ही नहीं चला ,*

भरे पूरे परिवार से सीना चौड़ा रखते थे हम ,
अपने भाई बहनों पर गुमान था ,
  उन सब का साथ छूट गया ,
कब परिवार एक पर सिमट गया ,
*पता ही नहीं चला ,*

अब सोच रहे थे कि अपने
   लिए भी कुछ करे ,
पर शरीर ने कब साथ देना बंद कर दिया ,
*पता ही नहीं चला ,

Thursday 1 November 2018

ಭಿನ್ನ...

ನಿನ್ನ ಗುಣಗಳನ್ನು
ನೀ ಪೋಷಿಸು...
ದೋಷ ಗುರುತಿಸಲು ಜನರಿದ್ದಾರೆ....

ಹೆಜ್ಜೆ ಇಡುವದಾದರೆ
ಮುಂದೆ ಮುಂದೆ ಇಡು...
ಹಿಂದೆ ಎಳೆಯಲು
ಜನರಿದ್ದಾರೆ....

ಕನಸು ಕಾಣುವದಾದರೆ
ಎತ್ತರಕ್ಕೇರುವ ಕನಸು ಕಾಣು...
ಕೆಳಗಿಳಿಸುವ ಜನರಿದ್ದಾರೆ....

ಹೊತ್ತಿಸುವದಾದರೆ
ಮನದಲ್ಲಿ ಚೈತನ್ಯದ ಕಿಡಿ ಹೊತ್ತಿಸು...
ಮನದಲ್ಲಿ ಕುದಿಯುವ
ಸಾಕಷ್ಟು ಜನರಿದ್ದಾರೆ...

ಕಟ್ಟಿಕೊಳ್ಳುವದಾದರೆ
ಸವಿನೆನಪುಗಳ ಕಟ್ಟಿಕೋ...
ಮಾತಿನ ಮಹಲು ಕಟ್ಟುವ
ಜನವಿದ್ದಾರೆ...

ಪ್ರೀತಿಸುವಿಯಾದರೆ
ನಿನ್ನ ನೀ ಪ್ರೀತಿಸು...
ದ್ವೇಷಿಸಲು ಜನರಿದ್ದಾರೆ...

ಇರುವಿಯಾದರೆ ಮುಗ್ಧಮನದ
ಮಗುವಿನಂತೆ ಇರು..
ತಿಳುವಳಿಕೆ ಕೊಡಲು ಸಾಕಷ್ಟು
ಜನರಿದ್ದಾರೆ...

ನಂಬಿಗೆ ಇಡುವದಾದರೆ
'ಸ್ವಂತ' ದ ಮೇಲಿಡು....
ಸಂಶಯಿಸಲು ಜನರಿದ್ದಾರೆ...

ನಿನ್ನನ್ನು ನೀನು ಬೆಳೆಸಿಕೋ
ಕನ್ನಡಿ ತೋರಿಸಲು
ಜನರಿದ್ದಾರೆ...

ಇತರರಿಗೆ ಭಿನ್ನನಾಗಿ ಬೆಳೆ...
ಗುಂಪಿನಲ್ಲಿ ಗೋವಿಂದ
ಎನ್ನಲು ಜನರಿದ್ದಾರೆ...

ಬದುಕಲ್ಲಿ ಏನನ್ನಾದರೂ
ಸಾಧಿಸಿ ತೋರಿಸು...
ಚಪ್ಪಾಳೆ ತಟ್ಟಲು ಬೇಕಾದಷ್ಟು
ಜನರಿದ್ದಾರೆ..

( WhatsApp ಹಿಂದಿ ಸಂದೇಶದ ಅನುವಾದ- ಕೃಷ್ಣಾ ಕೌಲಗಿ)

Saturday 27 October 2018

( Thanks Radha Kulkarni for sending this beautiful GAZAL of Gulzar Saheb for TRANS- CREATION...)

ಎಲೆ,ಬದುಕೆ...
ಸ್ವಲ್ಪ ನಿಧಾನ...
ಇರಲಿ ಕೊಂಚ ವ್ಯವಧಾನ...

ಇನ್ನೂ ಎಷ್ಟೋ
ಋಣಸಂದಾಯ ಮಾಡಬೇಕಿದೆ...
ನೋವುಗಳ ನಿವಾರಿಸಬೇಕಿದೆ...
ಕೆಲಸಗಳ ಮಾಡಿ ಮುಗಿಸಬೇಕಿದೆ...
ಸ್ವಲ್ಪು ನಿಧಾನ...
ಇರಲಿ ಕೊಂಚ ವ್ಯವಧಾನ..

ಎಷ್ಟೋಜನ  ಮುನಿದಿದ್ದಾರೆ...
ಕೆಲವರು ಹಿಂದೆ ಉಳಿದಿದ್ದಾರೆ...
ಮುನಿದವರ ಮನವೊಲಿಸಬೇಕು..
ಅಳುವವರ  ಮನ ಅರಳಿಸಬೇಕು..
ಸ್ವಲ್ಪು ನಿಧಾನ....
ಇರಲಿ ಕೊಂಚ ವ್ಯವಧಾನ..

ಎಷ್ಟೋ ಸಂಬಂಧಗಳು
ಬೆಳೆಯುತ್ತ ಮುರಿದಿವೆ...
ಮತ್ತೆಷ್ಟೋ ಬೆಳೆವಾಗಲೇ ಮುಗಿದಿವೆ...
ಅಳಿದುಳಿದವುಗಳ
ಉಳಿಸಿಕೊಳ್ಳಬೇಕು...
ಸ್ವಲ್ಪು ನಿಧಾನ....
ಇರಲಿ ಕೊಂಚ ವ್ಯವಧಾನ.....

ಎಷ್ಟೋ ..
ಕನಸುಗಳಿನ್ನೂ ಉಳಿದಿವೆ..
ಕೆಲ ಮನದಾಸೆಗಳು ಫಲಿಸಬೇಕಿವೆ..
ಬದುಕಿನ ಗೋಜಲುಗಳ
ಬಿಡಿಸಬೇಕಿದೆ...
ಸ್ವಲ್ಪು ನಿಧಾನ...
ಇರಲಿಕೊಂಚ ವ್ಯವಧಾನ...

ಉಸಿರು ನಿಲ್ಲುವ ವೇಳೆ
ಕಳೆದು ಕೊಳ್ಳುವದೇನು??
ಉಳಿಸಿ ಕೊಳ್ಳುವದೇನು??
ಹಟಮಾರಿ ಮನಸಿಗೆ
ಅರಿವಾಗಿಸಬೇಕಿದೆ...
ಸ್ವಲ್ಪು ನಿಧಾನ...
ಇರಲಿ ಕೊಂಚ ವ್ಯವಧಾನ..

Friday 26 October 2018

ಸಾವು....

ದೇಶ ನೋಡದಿದ್ದರೆ...
ಕೋಶ ಓದದಿದ್ದರೆ...
ಬದುಕಿನ ಬದಲಾಗುವ ಬಣ್ಣಗಳ
ಅರಿಯದಿದ್ದರೆ...
ನಮ್ಮನ್ನೇ ನಾವು ಪ್ರೀತಿಸದಿದ್ದರೆ...
ನಿಧಾನವಾಗಿ..
ಇಂಚಿಂಚು
ಸಾಯುತ್ತೇವೆ...

ನಮ್ಮ ಬಗ್ಗೆ ನಮಗೇ
ಗೌರವವಿರದಿದ್ದರೆ....
ಇತರರ ಹಂಗೇ ಬೇಡೆಂದು
ಕೊಡವಿಕೊಂಡರೆ....
ನಮ್ಮ ಚಟಗಳಿಗೆ ನಾವೇ
ದಾಸರಾದರೇ...
ನಡೆದ ದಾರಿಯನ್ನೇ
ನಡೆಯುತ್ತಿದ್ದರೆ...
ಬದುಕನ್ನು ಬದಲಾವಣೆಗೆ
ಒಡ್ಡದಿದ್ದರೆ...
ನಿಧಾನವಾಗಿ
ಇಂಚಿಂಚು
ಸಾಯುತ್ತೇವೆ....

ಬದುಕಿನ ತಿರುವುಗಳ
ಒಪ್ಪದಿದ್ದರೆ...
ಅಪರಿಚಿತರೊಡನೆ
ಬೆರೆಯದಿದ್ದರೆ...
ಹುಚ್ಚೊಂದ ತಗಲಿಸಿಕೊಳ್ಳದಿದ್ದರೆ...
ಸುನಾಮಿಯ ಸುಳಿಯ
ಎದುರಿಸದಿದ್ದರೆ...
ಆಹ್ವಾನಗಳು ಕಂಗಳಿಗೆ
ಹೊಳಪು ತರದಿದ್ದರೆ...
ಹೃದಯದ ಬಡಿತಗಳ
ತೇಜಗೊಳಿಸದಿದ್ದರೆ...
ನಿಧಾನವಾಗಿ
ಇಂಚಿಂಚು
ಸಾಯುತ್ತೇವೆ...

ಬೇಡವೆನಿಸಿದ್ದು
ಬಿಡದಿದ್ದರೆ..
ಸಲ್ಲದ ಪ್ರೀತಿ
ಮರೆಯದಿದ್ದರೆ...
ಪರಿಸರ,ಪರಸ್ಥಿತಿಗೆ ಬದ್ಧತೆ
ತೋರದಿದ್ದರೆ....
ಕಂಡ ಕನಸು
ಕಾಡದಿದ್ದರೆ
ನಿಧಾನವಾಗಿ
ಇಂಚಿಂಚು
ಸಾಯುತ್ತೇವೆ...

( Pablo Neruda- ಅವರ English ಕವನದ Trans- creation)

Thursday 25 October 2018

ಹಾಗೇ ಸುಮ್ಮನೇ...

ಸಂ- ಸ್ಖಾರ...

                 ಈಗೊಂದು ವಾರದ ಹಿಂದೆ ಒಂದು ಮನೆಯ ಗ್ರಹಪ್ರವೇಶಕ್ಕೆ ಹೋಗಿದ್ದೆ.ಊಟಕ್ಕೆ ಕುಳಿತಾಗ ಎದುರುಗಡೆ ಸಾಲಿನಲ್ಲಿ ಒಂದು ಗುಂಪು ಕುಳಿತಿತ್ತು.ಬಹುಶಃ ಅತಿಥೇಯರ ಕಡೆಯವರಿರಬೇಕು- ಅವರೆಲ್ಲರ ವಿಶೇಷ ಕಾಳಜಿಗಾಗಿ ಒಬ್ಬ ಮಹಾಶಯ ಅತ್ತಿಂದಿತ್ತ ಓಡಾಡಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ...ಅತಿಥೇಯನೊಬ್ಬನ ಆದರ್ಶಮಾದರಿಯಾಗಿ ಕಂಡು  ನನಗೆ ತುಂಬಾನೇ ಖುಶಿಯಾಗಿಹೋಯಿತು...

                ಸ್ವಲ್ಪ ಹೊತ್ತಿನಲ್ಲಿಯೇ
‌‌‌‌ಪದಾರ್ಥಗಳನ್ನು ಬಡಿಸತೊಡಗಿದರು...ಕುಳಿತವರು ಹಸಿವೆಗೋ,ಸುಮ್ಮನೇಕೂಡಲಾರದ್ದಕ್ಕೋ,ಅಥವಾ ಅವರವರ ಅಭ್ಯಾಸವೋ ಬಡಿಸಿದಂತೆ ತಮಗೆ ಬೇಕಾದುದನ್ನು ತಿನ್ನಲಾರಂಭಿಸಿದರು....ಅತಿಥೇಯ ಮಹಾಶಯನೂ ತನ್ನ ಆಪ್ತ(?) ಸ್ನೇಹಿತರ ಎಲೆಗಳಿಂದ ಅದು- ಇದನ್ನು ಅಷ್ಟಿಷ್ಟು ಬಾಯಿಗೆಸೆದುಕೊಳ್ಳಲು ಪ್ರಾರಂಭಿಸಿದ...ಅದೂ ಅಷ್ಟೇನೂ ಆಕ್ಷೇಪಣೀಯವೆನಿಸದೇ ನೋಡುತ್ತಲೇ ಇದ್ದೆ.ಅಥವಾ ನನಗೆ ನೇರವಾಗಿ ಆ ಸಾಲು ಇದ್ದು ತಾನಾಗೇ ಕಾಣಿಸುತ್ತಲೇ ಇತ್ತು..

                     ಮುಂದಿನದು ಮಾತ್ರ ನಾನೆಂದೂ ಕಂಡು,ನೋಡಿ,ಕೇಳದ ಮಾತು...ಆ ಮಹಾಶಯ ಎಲ್ಲರ ಎಲೆಯಲ್ಲಿ ಬೇಕಾದ್ದನ್ನು ಹಾಕಿಸಿಕೊಂಡು ತಾನೇ ಕಲಿಸಿ ಎಲೆಯ ಮುಂದುಗಡೆಯಿಂದ ಆ ಎಲೆಯ ಒಡೆಯನೊಡನೆ ಸಹ ಭೋಜನ ಶುರು ಮಾಡಿದ...ಒಬ್ಬನೊಡನಾದರೆ ಓ.ಕೆ...ಪ್ರಾಣಸ್ನೇಹಿತರಿರಬಹುದು  ..ಅಂಥವರಿಗೆ ಎಂಜಲು ಏನು ಲೆಕ್ಕ ಅನಬಹುದು....

            ‌ಆದರೆ ಅವನು ಮಾಡುತ್ತಿದ್ದುದೇ ಬೇರೆ..ಒಂದು ಎಲೆಯಿಂದ ಅನ್ನ, ಇನ್ನೊಬ್ಬನೆಲೆಯಿಂದ ಪಲ್ಯ,ಮತ್ತೊಬ್ಬ ನಿಂದ ಮತ್ತೇನೋ ತೆಗೆದುಕೊಂಡು ಎಲ್ಲರ ಎಲೆಗಳನ್ನೂ ಕಲಸು ಮೇಲೋಗರ ಮಾಡಿ ಅವರೇನಂದುಕೊಂಡಾರು ಎಂಬುದನ್ನು ಲೆಕ್ಕಿಸದೇ ಇಡೀ ಸಾಲನ್ನೇ ಆವರಸಿಕೊಂಡಾಗ ಮಾತ್ರ ನನ್ನ ಊಟ ನನಗೇ ಜಿಗುಪ್ಸೆ ಅನಿಸಲು ಸುರುವಿಟ್ಟುಕೊಂಡಿತು..

       ‌‌‌‌‌            ವೈಯಕ್ತಿಕ  ಸ್ವಾತಂತ್ರ್ಯ ಗಮನದಲ್ಲಿಟ್ಟು ನೋಡಿದರೆ ಇದನ್ನು ಪ್ರಶ್ನಿಸುವ ಹಕ್ಕು ನನಗಿಲ್ಲ...ಆಕ್ಷೇಪಿಸ ಬೇಕಾದವಳೂ ನಾನಲ್ಲ.ಹಾಗೆ ಮಾಡಿದರೆ ನನ್ನದೇ ತಪ್ಪು..
ಆದರೆ ಸಾಮೂಹಿಕವಾಗಿ ಒಬ್ಬ ವ್ಯಕ್ತಿಯ ನಡವಳಿಕೆಯ ಪ್ರಶ್ನೆ ಬಂದಾಗ ಇದು ಸರಿ ಅಲ್ಲ...ನಾನು ಅವನ ಸ್ನೇಹಿತರನ್ನು ಗಮನಿಸುತ್ತಿದ್ದೆ.ಮೊದಲಸಲ ತೆಗೆದುಕೊಂಡಾಗ ಖುಶಿಯಿಂದ ಇದ್ದ ಅವರು ನಂತರ ಕಿರಿಕಿರಿ ಅನುಭವಿಸುವರಂತೆ ಕಾಣತೊಡಗಿದರು..ಕೆಲವೊಬ್ಬರು ಅವನು ಕೈ ಹಾಕಿದ ಪದಾರ್ಥ ಬಿಟ್ಟು ಉಳಿದುದು ತಿಂದರೆ  ಒಬ್ಬಿಬ್ಬರು ಏನೂ ಮಾಡಲು ತಿಳಿಯದೇ ಅತ್ತಿತ್ತ ನೋಡತೊಡಗಿದರು..ಒಬ್ಬರಂತೂ ಹಿಂದೆ ಆತು ಕುಳಿತು ಎಲೆಯೇ ತನ್ನದಲ್ಲ ಎಂಬಂತೆ ನೋಡುತ್ತಿದ್ದರು....

                    ನನಗಿನ್ನೂ ಗೊಂದಲ....ಈ ರೂಢಿ ಈಗೀಗ fashion ಏನಾದರೂ ಆಗಿದೆಯಾ?ಎಂಜಲದ ಮಾತು ಬಿಟ್ಟು ಬಿಡೋಣ..ಆರೋಗ್ಯದ ದೃಷ್ಟಿಯಿಂದಲಾದರೂ ಅದು ಓಕೆನಾ? ಒಬ್ಬರ ಎಲೆಯಿಂದ ತಿಂದು ಬೆರಳುಗಳನ್ನು ಚನ್ನಾಗಿ ಚೀಪಿ ಇನ್ನೊಬ್ಬರ ಎಲೆಯ ಪದಾರ್ಥ ಮುಟ್ಟುವದು ಅಸಹ್ಯವಲ್ವಾ? ಇಷ್ಟು' mean and cheap' ಆಗಿ ವಿಚಾರಮಾಡುವ ನಾನು old model ಆಗಿ expiry date ಗೆ ಹತ್ತಿರದವಳಾ? ತಮ್ಮ ಜೊತೆ ತಾವು ಗೆಳೆಯರಷ್ಟೇ ಅಲ್ಲದೇ ಇತರ ಹಿರಿ ಕಿರಿಯರೂ ಕುಳಿತಿರುವಾಗ ಸಾಮೂಹಿಕ ನಡವಳಿಕೆ ಅಪೇಕ್ಷಿಸಲಾರದ ಹಂತಕ್ಕೆ ನಾವು ಹೋಗುತ್ತಿದ್ದೇವಾ? ಸರಿ,ತಪ್ಪು ತಿಳಿಸಬೇಕೆಂದರೆ ಹೇಗೆ? ಅಥವಾ ಏನಾದರೂ ಹೇಳಲೆಣಿಸುವದು
ವೈಯಕ್ತಿ ಸ್ವಾತಂತ್ರ್ಯ ಉಲ್ಲಂಘಿಸಿದಂತಾಗುತ್ತದಾ?

    ‌          ಹತ್ತಾರು ಪ್ರಶ್ನೆಗಳು....ಉತ್ತರದ ಹಾದಿ ಬಹು ದೂರದಲ್ಲೂ ಕಾಣಿಸುತ್ತಿಲ್ಲ....

Tuesday 23 October 2018

ವಾಸ್ತು

ಮನೆಯು ಹೇಗೇ ಇರಲಿ
ಮನೆಮಂದಿ ಒಗ್ಗೂಡಿ
ಮನಸಾರೆ ನಗಲೆರಡು
ಮೂಲೆಗಳು ಇರಲಿ...

ಸೂರ್ಯನೆಲ್ಲೇ ಇರಲಿ
ಸೂರ್ಯ ರಶ್ಮಿಗಳ್ಹರಡಿ
ಮನೆಯ ಅಂಗಳಕೊಂದು
ಶೋಭೆ ತಂದಿರಲಿ..

ಮುದ್ದು ಮಕ್ಕಳು ಸೇರಿ
ಗೆದ್ದ ಭಾವದಲಿ ಸದಾ
ಬಿದ್ದೆದ್ದು ಆಡಲು
ಬಿಡಿ- ಅಂಗಳೊಂದಿರಲಿ..

ಪುಟ್ಟುಟ್ಟ ದೋಣಿಗಳು
ಬೀಳುತೇಳುತ ಸಾಗಿ
ನಲಿವ ಹುಟ್ಟಿಸುವಂಥ
ಮಳೆ ಝರಿಗಳಿರಲಿ....

ನಡುನಡುವೆ ಮೇಲೇರಿ
ಮಿನುಗುತಿಹ ತಾರೆಗಳ
ಲೆಕ್ಕ ಗುಣಿಸಲು ಒಂದು
ಮಾಳಿಗೆಯು ಇರಲಿ...

ಬಾನಿನುದ್ದಗಲಕ್ಕೂ
ಹಾರಾಡಿ ಹಿಡಿಕಾಳು
ಹೆಕ್ಕಿ ಗುಟುಗಿಕ್ಕಲು
' ಮರಗೂಡೊಂದು' ಇರಲಿ...

ಮುಂಜಾನೆ ಮುಗುಳ್ನಗೆಗೆ
ಸ್ನೇಹದಾಲಿಂಗನಕೆ
ಹೊರೆಯಾಗದಂತೆರಡು
ನೆರೆ- ಹೊರೆಗಳಿರಲಿ...

ಮನೆಯು ಹೇಗೇ ಇರಲಿ
ಮನೆಮಂದಿ ಒಗ್ಗೂಡಿ
ನಲಿಯುವಾ ಗಳಿಗೆಗಳ
ಬರವು ಬರದಿರಲಿ...

( ಗೆಳತಿ ಮೀರಾ ಕುಲಕರ್ಣಿ ಕಳಿಸಿದ ಹಿಂದಿ ಕವನದ ಭಾವಾನುವಾದ- Thank you Meera)

Saturday 20 October 2018

ಹಾಗೇ ಸುಮ್ಮನೇ...

ಮೈಕೆಲ್ ಜಾಕ್ಸನ್ ಗೆ ನೂರೈವತ್ತು ವರ್ಷ ಬದುಕಬೇಕೆಂಬ ಅಭಿಲಾಷೆಯಿತ್ತು.ಯಾರದಾದರೂ ಕೈಕುಲುಕುವಾಗ ಕೈಗವುಸು ಧರಿಸುತ್ತಿದ್ದ.ಜನರ ಮಧ್ಯ ಹೋಗುವಾಗ ಮುಖವನ್ನು ಮಾಸ್ಕದಿಂದ ಮುಚ್ಚಿಕೊಳ್ಳುತ್ತಿದ್ದ. ಪ್ರತಿದಿನದ ಆರೋಗ್ಯ ತಪಾಸಣೆಗೆ ಹನ್ನೆರಡು ಜನರ ವೈದ್ಯರ ತಂಡದ ನಿಯುಕ್ತಿಯಾಗಿತ್ತು.ತಲೆಯ ಕೂದಲಿನಿಂದ ಹಿಡಿದು ಕಾಲಿನ ಉಗುರುಗಳ ತಪಾಸಣೆ ಪ್ರತಿದಿನ ಆಗಲೇಬೇಕಿತ್ತು....ಅವನುಣ್ಣುವ ಆಹಾರವನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿದ ನಂತರವೇ ಅವನಿಗೆ ಕೊಡಲಾಗುತ್ತಿತ್ತು..ನಿತ್ಯದ ವ್ಯಾಯಾಮ ತರಬೇತಿಗೆ ಹದಿನೈದು ಜನರ team ಸದಾ ಸಿದ್ಧವಿರುತ್ತಿತ್ತು.. ಮೂಲವಾಗಿ ಕರಿಜನಾಂಗಕ್ಕೆ ಸೇರಿದ Jackson ಚರ್ಮದ plastic surgery ಯಿಂದ ಬಿಳಿಯನಾಗಿದ್ದ.oxygen ನ ಹಾಸಿಗೆಯ ಮೇಲೆಯೇ ಮಲಗುತ್ತಿದ್ದ.ಆಪತ್ಕಾಲದಲ್ಲಿ ಬೇಕಾದರೆ ಎಂದು ಕಿಡ್ನಿ,ಹೃದಯ,ಮುಂತಾದ ಅಂಗಾಂಗ ದಾನಮಾಡುವವರನ್ನೂ ಸಿದ್ಧಮಾಡಿಟ್ಟುಕೊಂಡಿದ್ದ.2009ದಲ್ಲಿ ಜೂನ್೨೫ ರಂದು ಹೃದಯಬಡಿತದಲ್ಲಿ ಇಳಿಕೆ ಪ್ರಾರಂಭವಾದಾಗ ಹನ್ನೆರಡು ಜನ ವೈದ್ಯತಂಡಕ್ಕೂ ಏನೂ ಮಾಡಲಾಗಲಿಲ್ಲ.ನೂರೈವತ್ತು ವರ್ಷ ಇರಬೇಕೆಂಬ ಅವನಾಸೆ ಅವನ ಜೊತೆಗೆ ಅಕಾಲವಾಗಿ  ಕೊನೆಯುಸಿರೆಳೆಯಿತು..
       ‌‌‌  ಪೋಸ್ಟ ಮಾರ್ಟಮ್ ಮುಗಿದಾಗ ಅವನೊಂದು ಅಸ್ಥಿಪಂಜರಮಾತ್ರವಾಗಿದ್ದ.ಮೈಮೇಲೆ ಅಸಂಖ್ಯಾತ ಸೂಜಿಚುಚ್ಚಿದ ಗುರುತುಗಳಿದ್ದವು.ನೋವುನಿವಾರಕ ಚುಚ್ಚುಮದ್ದಿನ ಪರಿಣಾಮಗಳವು. ಹಣದಿಂದ ಬದುಕನ್ನು ಖರೀದಿಸಿ ಇಟ್ಟುಕೊಳ್ಳ ಬಹುದೆಂಬ ಭ್ರಮೆಯೊಂದರ ದಾರುಣ ಅಂತ್ಯವಾದದ್ದು ಹೀಗೆ...
       ‌ ‌‌‌ಮೃತ್ಯುವನ್ನು ಗೆಲ್ಲುವದು ಆಗದ ಮಾತು.ಕೃತಕ ಬದುಕು ಬದುಕಬೇಕೆಂಬುವವರ ಮರಣವೂ ಸ್ವಾಭಾವಿಕವಾಗಿರುವದಿಲ್ಲವೆಂಬುದಕ್ಕೊಂದು ಸಶಕ್ತ ಉದಾಹರಣೆ.ತಮ್ಮ,ಆಸ್ತಿ,ಅಂತಸ್ತು,ಅಧಿಕಾರದ ಮದದಿಂದ ಮೆರೆಯುವವರಿಗೊಂದು ಸದಾ ನೆನಪಿರಲೇಬೇಕಾದ  ಜೀವನಪಾಠ.

Friday 19 October 2018

( ರಾವಣರ ಮುಖವಾಡ ಬಯಲಾಗುತ್ತಿರುವ
ಸಂದರ್ಭದಲ್ಲಿ..ಒಂದು ಪುಟ್ಟ ಆತ್ಮಾವಲೋಕನ..ಮನಸ್ಸಿದ್ದವರಿಗಾಗಿ)

ರಾವಣನಾಗುವದು
ಸುಲಭವಲ್ಲ...

ರಾವಣನೆದೆಯಲ್ಲಿ
ಅಹಂಕಾರವಿತ್ತು...ನಿಜ..
ಜೊತೆಗೆ ಪಶ್ಚಾತ್ತಾಪ ಕೂಡ...

ಲಾಲಸೆ ಯಿತ್ತು..ನಿಜ..
ಆತ್ಮ_ಸಂಯಮ  ಕೂಡ...

ಸೀತೆಯನ್ನು ಅಪಹರಿಸುವ ಸಾಮರ್ಥ್ಯವಿತ್ತು...
ನಿಜ  ....
ಆದರೆ ಒತ್ತಾಯದಿಂದ
ಭೋಗಿಸಬಾರದೆಂಬ ಸಂಕಲ್ಪ ಕೂಡ....

ಸೀತೆ ಪ್ರಾಣಸಹಿತ ಮರಳಿಸಿಕ್ಕದ್ದು
ರಾಮನ ಶಕ್ತಿಯಿಂದ  ನಿಜ...
ಆದರೆ ನಿಷ್ಕಳಂಕಳಾಗಿ ಸಿಕ್ಕದ್ದು
ರಾವಣನ ಸಂಸ್ಕಾರದಿಂದ...

ಮಹಾಪ್ರಭು, ಶ್ರೀರಾಮನೇ,
ನಿನ್ನ ಯುಗದ ರಾವಣ
ಒಳ್ಳೆಯವನಾಗಿದ್ದ...

ಇದ್ದ ಹತ್ತೂ ಮುಖಗಳು
ಯಾವುದೇ ಮುಖವಾಡಗಳಿಲ್ಲದೇ
ಬಹಿರಂಗವಾಗಿದ್ದವು...

ವರುಷಕ್ಕೊಮ್ಮೆ ಸುಟ್ಟು
ಭಸ್ಮವಾಗುವ ರಾವಣನ
ಮನದಲ್ಲೇನಿದೆ?
ಒಮ್ಮೆಯಾದರೂ ಯೋಚಿಸಿದ್ದೀರಾ?

" ನನ್ನನ್ನು ಸುಡಲು ನೆರೆದ
ಗುಂಪಿನಲ್ಲಿ ಒಬ್ಬನಾದರೂ
ರಾಮನಿದ್ದೀರಾ?"...

ಎಂದು ಮತ್ತೆ ಮತ್ತೆ ಕೇಳುವ
ಧ್ವನಿ ಕೇಳಿದ್ದೀರಾ?

( ಮೂಲ- WhatsApp ದಿಂದ...ಬರೆದವರ ಹೆಸರಿಲ್ಲ...
Trans_ creation- ಶ್ರೀಮತಿ ಕೃಷ್ಣಾ ಕೌಲಗಿ...)

Thursday 18 October 2018

ಹಾಗೇ ಸುಮ್ಮನೇ

ಹಾಗೇ  ಸುಮ್ಮನೇ...

Comfort zone....

ನಿನ್ನೆ ನನ್ನ ಹೊಸ mobile ಬಂತು...book ಮಾಡಿದ ದಿನದಿಂದ ಬರುವದನ್ನೇ ಕಾಯುತ್ತಿದ್ದೆ.set ಮಾಡಿಯೂ ಆಯಿತು..ಇದರ size ಸ್ವಲ್ಪ ದೊಡ್ಡದು...design ನಲ್ಲೂ ಕೊಂಚ ವ್ಯತ್ಯಾಸ...ಎರಡು ವರ್ಷಗಳಿಂದ ಬಳಸುತ್ತಿದ್ದ ಹಳೆ mobile ಎಡಗೈ, ಬಲಗೈ ಅನ್ನದೇ ಬಳಸುವಷ್ಟು ಸಲೀಸಾಗಿತ್ತು...ಹೊಸದೆಂತಲೋ, ನನ್ನ ಚಡಪಡಿಕೆ,ಅವಸರಗಳ ಮಾನದಲ್ಲೋ ಇದು ತುಂಬಾನೇ uncomfortable ಅನಿಸಹತ್ತಿತು..ತಲೆಗೆ ಒಂದೇಟು ಹಾಕಿ  ನೆನಪಿಸಿಕೊಂಡೆ." ಇದು ಹೊಸತು..ಇನ್ನೂ ಏನೆಲ್ಲ ಗೊತ್ತುಮಾಡಿಕೊಳ್ಳಲು ಕನಿಷ್ಟ ನಾಲ್ಕೈದು ದಿನಗಳು ಬೇಕೇಬೇಕು" _ ಎಂದು...ಅವಸರವಿದ್ದರೆ ಹಳೆಯದು,ವೇಳೆ ಇದ್ದರೆ ಹೊಸತರ ಬಳಕೆ ನಡೆದಿದೆ..
                ಇಷ್ಟೆಲ್ಲ ಆದಮೇಲೆ ಬದುಕಿನ ಒಂದು ಸತ್ಯ ನನ್ನನ್ನು ಅಚ್ಚರಿಗೊಳಿಸಿತು....ನಮ್ಮ ಮನೆ ಬಿಟ್ಟು ಬೇರೆ ಕಡೆ ಹೆಚ್ಚು ಇರಲಾಗುವದಿಲ್ಲ...ಬೇರೆಯವರು ನಮ್ಮಲ್ಲಿ ಬಂದರೆ ಇರುಸು- ಮುರುಸಿನ ಅನುಭವವಾಗುತ್ತದೆ...ಒಂದು ವಯಸ್ಸಾದ ಮೇಲೆ ಬೇರೆ ಜಾಗಕ್ಕೆ ಹೋಗಲೂ ಇಷ್ಟವಾಗುವದಿಲ್ಲ...Best place on the earth is OUR HOME ಎನಿಸೋಕೆ ಸುರುವಾಗುತ್ತೆ..ಇದೆಲ್ಲ ನಮ್ಮ comfort zone ಕಮಾಲ್..ನಮ್ಮದೇ ವ್ಯಾಪ್ತಿಯಲ್ಲಿ ಆರಾಮಾಗಿ ಇರುವಷ್ಟು ಬೇರೆಲ್ಲೂ ಇರುವದಕ್ಕಾಗುವದಿಲ್ಲ...ಚಿಕ್ಕ ಪುಟ್ಟ ಬದಲಾವಣೆಗಳೂ ಮನಸ್ಸಿಗೇನೋ ಕಿರಿಕಿರಿ ಮಾಡತೊಡಗುತ್ತವೆ...ಅಂತೆಯೇ ಬಹುಶಃ ಸೊಸೆ ಹೊಸದಾಗಿ ಬಂದಾಗ ಎರಡೂ ಬಣದವರ ಬಣ್ಣ ಮಾಸಲಾಗುವದು...
            ‌‌‌   ಇದು ನನ್ನ ಐದನೇ ಫೋನ್..ಪ್ರತಿಸಲ ಬದಲಾದಾಗಲೂ ಒಂದುವಾರ ಹಿಡಿದು- ಬಿಟ್ಟು ಅನುಭವವಾಗುತ್ತದೆ.ಸ್ವಲ್ಪು ದಿನ 
ತಡೆದುಕೊಂಡರೆ ತಾನೇ ಸರಿಹೋಗುವ,ಸಮಸ್ಯೆಯೇ ಆಗಿರದ ಅತಿ ಸಣ್ಣ ಕಿರಿಕಿರಿಯ ವಿಷಯ...
          ‌    ಆದರೂ - ನಿಮ್ಮ ವಿಷಯ ಗೊತ್ತಿಲ್ಲ- ನಾನೇಕೆ ಹೀಗೆ...?ಅಥವಾ ನಿಮಗೂ ಹೀಗೇ ಏನಾದರೂ...
            ದಯವಿಟ್ಟು ಕನ್ನಡದಲ್ಲಿ ' ನಾನೂ ಹೀಗೇ... ಅನ್ನಿ...ಇಂಗ್ಲಿಷ ವ್ಯಾಮೋಹದಲ್ಲಿ ME TOO ಅಂದೀರಿ ಜೋಕೆ..ಹಾಹಾಹಾ..

Monday 15 October 2018

" ಒಳ್ಳೆಯವನಿದ್ದ..
ಅವನು ನಿಜಕ್ಕೂ ಒಳ್ಳೆಯವನಾಗಿದ್ದ..." 

ನೀನು ಹೀಗೆ ಹೇಳಿದ್ದು
ಮುಲಾಜಿಗೋ..?
ಅವನ ಶವದೆದುರು
ಏನೋ ಒಂದು ಹೇಳಲೇ ಬೇಕಿತ್ತೆಂದೋ?
ಇಲ್ಲದಿದ್ದರೆ ಜಗತ್ತು ನಿನಗೆ
ಹೆಸರಿಡುತ್ತಿತ್ತು...ಎಂದೋ..?

ಒಳ್ಳೆಯವನಾಗಿದ್ದರೆ
ಅವನಿದ್ದಾಗಲೇ..ಅವನಿಗೇ
ಹೇಳಬೇಕಿತ್ತು...
ಅವ ಖುಶಿಯಿಂದ ಹುಚ್ಚನಾಗುತ್ತಿದ್ದ...

ಅವನು ಏನನ್ನೋ ಹೇಳುತ್ತಲೇ ಇದ್ದ...
ಯಾಕೆ ಕೇಳಿಸಿಕೊಳ್ಳಲಿಲ್ಲ...
" ನನ್ನ ಬದುಕಿನಲ್ಲಿ ಕಷ್ಟವೊಂದನ್ನು ಬಿಟ್ಟು
ಬೇರೇನೂ ಬರದೇಯಿಲ್ಲವೇ?"
ಅವನೆಂದಾಗ ನೀನು ಹೇಳಿದ್ದೇನು?"
" ನಿನ್ನ ಬಳಿ ಈ ಪ್ರಶ್ನೆ ಬಿಟ್ಟು ಬೇರೆ
ವಿಷಯವೇಯಿಲ್ಲವೇ?...

ಆ ನಗೆಯ ಹಿಂದಿನ ನೋವು ನೋಡಬೇಕಿತ್ತು ನೀನು..
ನಿನ್ನ ಭೇಟಿಯ ನಂತರ ಅವನೆಂದೂ
ಮನೆಗೆ ಹೋಗಲೇಯಿಲ್ಲ...
ಇಲ್ಲೇ ಮರದಾಸರೆಯಲ್ಲಿ,ರಸ್ತೆಯ ಬದಿಗಳಲ್ಲಿ
ಕುಳಿತು ಹೋಗು ಬರುವವರ ನೋಡುತ್ತಿದ್ದ...
ಈ ಜೀವನದಲ್ಲಿ ನಾನಾರಿಗೂ
ಬೇಕಾಗಿಲ್ಲವೆಂದು ಮರುಗುತ್ತಿದ್ದ...

ಒಂದುವೇಳೆ ನೀನವನ ಪಕ್ಕ ಕುಳಿತು
ಹೆಗಲಮೇಲೆ ಕೈಯಿರಿಸಿ
ಒಂದು ಸಾಂತ್ವನ,
ಒಂದೇಒಂದು ಭರವಸೆ ಕೊಟ್ಟಿದ್ದರೆ
ಅವ ಊಟಬಿಟ್ಟು ಎಚ್ಚರ ತಪ್ಪುತ್ತಿರಲಿಲ್ಲ...
ಮಾತನಾಡುತ್ತ ಆಡುತ್ತ ಮೌನದೊಳಗೆ
ಇಳಿಯುತ್ತಿರಲಿಲ್ಲ...
ತನ್ನ ಡೈರಿಗಿಂತ ಹೆಚ್ಚು
ಖಾಲಿ ಗೋಡೆ,ಸೂರು
ದಿಟ್ಟಿಸುತ್ತಿರಲಿಲ್ಲ...

ನಮ್ಮಲ್ಲಿ ಒಬ್ಬರೇಒಬ್ಬರು ಬಳಿಯಿದ್ದರೂ
ಅವನು ಆ ಬಾಟಲಿ ತೆರೆಯುತ್ತಿರಲಿಲ್ಲ...
ಅವನೆದುರು ಸತ್ತ ಅಪ್ಪನ ಫೋಟೋಯಿತ್ತು...
ತನ್ನವನೆಂಬ ಒಬ್ಬನೇ ಒಬ್ಬನಿರಲಿಲ್ಲ...
ಬದುಕಲು ಬೇಕಾಗುವ ಒಂದೇಒಂದು
ಕನಸಿರಲಿಲ್ಲ...
ಬೇಕಾದಷ್ಟು ಗೆಳೆಯರಿದ್ದರು..
ಒಬ್ಬ ಆಪ್ತನಿರಲಿಲ್ಲ...

ಅವನಿಗೆ " ಹೋಗುವದೇ ಲೇಸು ಎನಿಸಿರಬೇಕು"
'ಇದಕ್ಕಾರೂ ಕಾರಣವಲ್ಲ' - ಎಂದು ಬರೆದು
ನಡೆದುಬಿಟ್ಟ...

ಈಗ ಬಿಳಿ ಬಟ್ಟೆ ತೊಟ್ಟು 'ವಿದಾಯ' ಹೇಳಲು
ಬಂದಿರುವಿ..

ಅವನ ಸಮಾಧಿಗೆ ಹೂ ಅರ್ಪಿಸಲು ಹೋದಾಗ
ಕಿವಿಗೊಟ್ಟು ಕೇಳು..,
ಮಣ್ಣಿನಾಳದಿಂದ
ಬರುವ ಪಿಸುನುಡಿಯ..

"ಇನ್ನಾದರೂ
ಮುಂದೆ
ನನ್ನಂಥವನೇನಾರೂ ನಿನಗೆ
ಸಿಕ್ಕರೆ....
ಅವನ ಹೆಗಲಮೇಲೆ ಕೈಯಿಡು..
ಸಾಂತ್ವನದ ಎರಡು ಮಾತು ಹೇಳು..
ಬಾಟಲಿಗಳು ಕಂಡರೆ ಕಿಟಕಿಯ ಹೊರಗೆಸೆ...
ಸಂತಸದ ನುಡಿ ಹಂಚಿಕೋ..
ಆಗ ಅವನೂ ಆನಂದದ ದಿನ ಕಳೆದಾನು...
ನಿನಗೂ ಒಳ್ಳಯದು ಮಾಡಿದ ಸಾರ್ಥಕತೆ ದಕ್ಕೀತು....

( world depression day ಅಂಗವಾಗಿ ಪ್ರಸಾರವಾದ ಹಿಂದಿ ಕವನದ ಕನ್ನಡರೂಪ- ಶ್ರೀಮತಿ ಕೃಷ್ಣಾ ಕೌಲಗಿ)

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...