Saturday 28 January 2023

ಇಂದಿನದು ಹೋದ ವಾರದ ತಿಳಿರು ತೋರಣದ ಮುಂದುವರಿದ ಭಾಗ-೨ ಅನಿಸಿತು ನನಗೆ. ವಿಷಯವೇ ಹಾಗಿದೆ.ಎಷ್ಟು ಹೆಸರುಗಳೋ ಅಷ್ಟು ' 'ಕುಸುರು'ಗಳು...ಕೆಲವು Natural ಆದರೆ ಇನ್ನು ಕೆಲವು  tailor made. ಆಸಕ್ತಿಕರ/ ಮೋಜಿನ ವಿಷಯವಾದ ಕಾರಣ  ಎಷ್ಟು ಬೇಕಾದರೂ ಹಿಗ್ಗಿಸ ಬಹುದು...ನನ್ನ ಮಗನಿಗೆ ' ನಾನಿ' ಅನ್ನುತ್ತಿದ್ದುದು ಈಗಾಗಲೇ ಹೇಳಿದ್ದೇನೆ. ನಮ್ಮ ಮನೆಯ ಕೆಲಸದವಳ ಹೆಸರು ಮೆಹರುನ್ನಿಸಾ ಇತ್ತು.ಅವಳ ಮೊಮ್ಮಕ್ಕಳು  ಅವಳನ್ನು ಕೇಳಿಕೊಂಡು
ಬಂದಾಗಲೆಲ್ಲ ಸಣ್ಣ ದನಿಯಲ್ಲಿ ' ನಾನಿ ಹೈ ಕ್ಯಾ?'ಎನ್ನುತ್ತಿದ್ದವು.ಮೊದಮೊದಲು ಹಾಗೆ ಅಂದಾಗೊಮ್ಮೆ ನನ್ನ ಮಗನನ್ನು ಕರೆದು ನಿಲ್ಲಿಸಿ ಎಪ್ರಿಲ್ ತಿಂಗಳ
ಹಂಗಿಲ್ಲದೇ ಹಲವು ಬಾರಿ ' fool'- ಆದದ್ದಿದೆ.

Friday 27 January 2023



The Example
  
Here's an example from
A Butterfly;
That on a rough, hard rock
Happy can lie;
Friendless and all alone
On this unsweetened stone.

Now let my bed be hard
No care take I;
I'll make my joy like this
Small Butterfly;
Whose happy heart has power
To make a stone a flower.

by- William Henry Davies


ಕಲ್ಲರಳಿ ಹೂವಾಗಿ...
ಉರುಟು ಬಂಡೆಯ ಮೇಲೂ ಸುಖವಾಗಿ ಇರಬಹುದು,
ಕುಣಿಕುಣಿದು ನಲಿಯುವಾ ಚಿಟ್ಟೆಯಂತೆ...
ಗೆಳೆಯರೇ ಇಲ್ಲದೆಯೂ
ಒಂಟಿಯಾಗಿರಬಹುದು
ಬಂಡೆ ಹೇಗೇ ಇರಲಿ-
ನನಗಿಲ್ಲ ಚಿಂತೆ...

ನನ್ನ ಹಾಸಿಗೆ ಇನ್ನು
ಹೇಗಿದ್ದರೂ ಚನ್ನ...
ಚಿಟ್ಟೆಯಂದದಿ ನಾನಿನ್ನು
ನಲಿದಾಡುವೆ...
ಆ ಕಲ್ಲು ಬಂಡೆಯನೇ
ಹೂವಾಗಿ ಅರಳಿಸುವೆ,
ನನ್ನೆದೆಯ ಜೇನನ್ನೇ
ಅದಕುಣಿಸುವೆ...

Thursday 26 January 2023

    ನಾನು ಹುಟ್ಟಿದ್ದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ. ಗಣರಾಜ್ಯಗಳ ಒಕ್ಕೂಟವಾದಾಗ ನನಗೆ ಕೇವಲ ನಾಲ್ಕು  ವರ್ಷಗಳು. .ಶಾಲೆಗೆ ಹೋಗುವವರೆಗೆ ಹೆಚ್ಚೇನೂ ಗೊತ್ತೂ ಇರಲಿಲ್ಲ. ಹೋಗ ತೊಡಗಿದ ಮೇಲೂ ಬಹುವರ್ಷಗಳವರೆಗೆ ಅದು ಧ್ವಜಾರೋಹಣ ಮಾಡುವ / ನಸುಕಿನಲ್ಲೆದ್ದು ಪ್ರಭಾತಫೇರಿಗೆ ಹೊರಡುವ, ಮಕ್ಕಳಿಗೆ ಸಿಹಿಹಂಚುವ ಹಬ್ಬವಾಗಿ ಕಂಡದ್ದೇ ಜಾಸ್ತಿ.ನಂತರವೂ ಹೆಚ್ಚೆಂದರೆ ಆ ದಿನ‌ ಭಾಷಣ 
ಮಾಡಬೇಕೆಂಬ ಮಕ್ಕಳಿಗೆ ನಾಲ್ಕು ಸಾಲು ಭಾಷಣ ಬರೆದುಕೊಟ್ಟು
ಬಿಟ್ಟರೆ ಮುಗಿದಹಾಗೆ.
    ‌‌               ನಾನು ಶಿಕ್ಷಕಿಯಾದ ಮೇಲೆ/ಸಕ್ರಿಯವಾಗಿ ಚಟುವಟಿಕೆಗಳ ಲ್ಲಿ ಭಾಗಿಯಾಗತೊಡಗಿದ ನಂತರ ಅದರೊಳಗೆ ಹೆಚ್ಚು ಹೆಚ್ಚು ಆಳಕ್ಕೆ ಇಳಿದ ಅನುಭವ/ ಖುಶಿ...ನಿವೃತ್ತಿ ಹೊಂದಿ ಮುಂದಿನ ವರ್ಷಕ್ಕೆ‌ ಇಪ್ಪತ್ತು 
ವರ್ಷಗಳು.ಅಚ್ಚರಿಯ ವಿಷಯ
ಎಂದರೆ gated community ಯಲ್ಲಿ ಇದ್ದ ಕಾರಣಕ್ಕೋ/ ನಿವೃತ್ತ ಹಿರಿಯ ಶಿಕ್ಷಕಿ ಎಂಬ ಸ್ಥಾನಕ್ಕೋ, ಒಟ್ಟಿನಲ್ಲಿ
ಈಗಲೇ ನಾನು ಅದರಲ್ಲಿ ಹೆಚ್ಚು ತೊಡಗಿಸಿಕೊಂಡಂತಾಗಿದೆ.‌ಎಲ್ಲ ಕಡೆಯೂ ಅತಿ ಉತ್ಸಾಹಿ ಯುವಕ- ಯುವತಿಯರ ಗುಂಪೊಂದು ಕಾರ್ಯಕ್ರಮಗಳನ್ನು ನಿಯೋಜಿಸು ವದರ ಫಲವಾಗಿ ನಮ್ಮಂಥವರನ್ನು ಪ್ರೀತಿಪೂರ್ವಕವಾಗಿ ಒತ್ತಾಯದಿಂದ ಎಳೆದುಕೊಂಡು ಹೋಗಿ ಮಧ್ಯದಲ್ಲಿ  ನಿಲ್ಲಿಸಿಕೊಂಡು ಸಂಭ್ರಮಿಸುತ್ತಾರೆ.
ಅದಕ್ಕಾದರೂ ಇರಲಿ ಎಂದು ಶುರುವಾದ ಪಯಣವಿದು.ನನ್ನ ಅತ್ಯಂತ ಪ್ರೀತಿಯ ಶುಭ್ರ ಶ್ವೇತ ಸೀರೆಯುಟ್ಟು ,ಗುಂಪಿನಲ್ಲಿ ನಗುನಗುತ್ತ ಒಂದು ಗಂಟೆ  ಕಳೆಯುವದು/ ಧ್ವಜಾರೋಹಣ/ ಅತಿಥಿ- ಆಹ್ವಾನಿತರ   ಅನುಭವದ  ನುಡಿಗಳನ್ನು ಆಲಿಸುವದು/ ಕಾರಣವಿಲ್ಲದಿದ್ದರೂ ನಗು- ಹಾಸ್ಯದ ಚಟಾಕಿಗಳು/ ಬರುವಾಗ ಕೈಯಲ್ಲೂ-ಮನಸ್ಸಿನಲ್ಲೂ ಸಿಹಿ ತುಂಬಿಕೊಂಡು ಬರುವದೆಂದರೆ ಅದರಲ್ಲೂ ವಿಶೇಷವಾಗಿ- ಕೋವಿಡ್ ನಂತರದ ಬದಲಾದ ನೀರಸ ವಾತಾವರಣ-ದಲ್ಲೊಂದು ಸದವಕಾಶ.
ಬೆಳಕಿನ‌ ಕಡೆಗೊಂದು ಕಿರು ಹೆಜ್ಜೆ...




Wednesday 25 January 2023

" ತತ್ವ ಸಿಲುಕದೆಮ್ಮಯ ತರ್ಕಶಾಂಕುಶಕೆ"

        ೧೯೭೨ ರ ಅಕ್ಟೋಬರ್ ತಿಂಗಳು. ನಮ್ಮ ಮದುವೆಯಾಗಿ ಕೇವಲ ಎರಡೇ ವರ್ಷ. ನನ್ನವರಿಗೆ ಮೊದಲ ಬಾರಿ ಲಘು ಹೃದಯಾಘಾತ ವಾಗಿತ್ತು.ನಾನು ಆ ಶಬ್ದವನ್ನೇ ಅದುವರೆಗೂ ಕೇಳಿರಲಿಲ್ಲ. ನಮ್ಮದೊಂದು ಪುಟ್ಟ 
ಹಳ್ಳಿ. ಕೆಳ ಮಧ್ಯಮ ವರ್ಗದ ಕುಟುಂಬ.ದುಡಿತ ಅನಿವಾರ್ಯ. ಹೆಚ್ಚು ಕಡಿಮೆ ಎಲ್ಲರದೂ ಅದೇ ಬದುಕು. ಹೀಗಾಗಿ ಗಟ್ಟಿ ಜೀವಗಳು.ಎಂಬತ್ತು/ ತೊಂಬತ್ತು ಎಂದರೆ ಮಧ್ಯ ವಯಸ್ಸು ಎಂಬಂಥ ಚಟುವಟಿಕೆ. ಯಾರಾದರೂ ಏಕಾಏಕಿ ಹೋದರೆ " ಕಲ್ಲು ಗುಂಡಿನ ಹಾಗಿದ್ದ, ಒಂದು ದಿನ ಛಟ್ ಅಂತ ಸೀತವನಲ್ಲ, ಕೂತು ಕೂತಲ್ಲೇ ಹೋದ ಪುಣ್ಯಾತ್ಮ"- ಎಂಬಂಥ ಮಾಮೂಲು ಶರಾ. ಹೀಗಾಗಿ ನನಗೆ ಆ ಹೆಸರು ಹೆದರಿಸಲೇಯಿಲ್ಲ. ಕ್ರಮೇಣ ಅದರ ಗಂಭೀರತೆಯ ಅರಿವಾದಾಗಲೇ ಅನಾವಶ್ಯಕ ಅಂಜಿಕೆ ಶುರುವಾದದ್ದು. ಅವರು ಮನೆಗೆ ಬರುವದು ತಡವಾದರೆ/ ರವಿವಾರ ಹೆಚ್ಚು ಹೊತ್ತು
ಮಲಗಿದರೆ/ ಹೊರಗಿನಿಂದ ನಾನೇನಾದರೂ ಬಂದಾಗ ಮನೆ ಮುಂದೆ ನಾಲ್ಕು ಜನ ಹೆಚ್ಚು ಕಂಡರೆ
ಎದೆ ಝಲ್ ಎನ್ನಲು ಶುರುವಾದದ್ದು. ಅವರನ್ನು ಕಳೆದುಕೊಂಡದ್ದು ೧೯೮೩ ಅಕ್ಟೋಬರ್...ಸರಿಯಾಗಿ ನಲವತ್ತು ವರ್ಷಗಳ ಹಿಂದೆ.
             
          ಆಮೇಲೆ ಸದಾಕಾಲ ನನಗೆ ಅನಿಸುತ್ತಿದ್ದುದು ಒಂದೇ.ಈಗಿನಂತೆ
ಆಗ ವೈದ್ಯಕೀಯ ಸೌಲಭ್ಯಗಳು ಇದ್ದರೆ!
ನಮ್ಮ ಬಳಿ ಮುಂಬೈ / ಬೆಂಗಳೂರಿಗೆ ಹೋಗಿ ಚಿಕಿತ್ಸೆ ಮಾಡಿಸುವಷ್ಟು ದುಡ್ಡಿದ್ದರೆ ! ಸ್ವಲ್ಪ ಮೊದಲೇ ತಿಳಿದಿದ್ದರೆ. ಹಾಗಾಗಿದ್ದರೆ...ಹೀಗಾಗಿದ್ದರೆ...ಎಂದು. 
          ‌
                ಈಗ ಗೊತ್ತಾಗುತ್ತಿದೆ, ಏನಿದ್ದರೂ ಏನೂ ಆಗುತ್ತಿರಲಿಲ್ಲ, ಆಗುವದೇ ಆಗುತ್ತಿತ್ತು...ಅದೆಲ್ಲ ಕಾಲ ನಿರ್ಣಿತ.ಅದಕ್ಕೆ ಇಂದಿನ ವಿದ್ಯಮಾನ ಗಳೇ ಸಾಕ್ಷಿ...ಎಲ್ಲರಲ್ಲೂ ಸಾಕಷ್ಟು ದುಡ್ಡಿದೆ...ಮನುಷ್ಯನ ಹೃದಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ತೆರೆದ ಹೃದಯ ಚಿಕಿತ್ಸೆ  ಮಾಡುವಷ್ಟು ವಿಜ್ಞಾನ ಮುಂದುವರೆದಿದೆ...ಹೆಜ್ಜೆಗೊಂದು multi speciality hospitals ಕಾಣ ಸಿಗುತ್ತವೆ.
             ಆದರೂ ಹುಡುಗರು/ ಮುದುಕರು ಎನ್ನದೇ  ನಿಂತಲ್ಲೇ ಕುಸಿದು ಬೀಳುತ್ತಾರೆ.ಈಗ ಇದ್ದವರು ಕ್ಷಣವೊಂದು ಕಳೆಯುವದರಲ್ಲಿ  ಇಲ್ಲವಾಗುತ್ತಿದ್ದಾರೆ. Golden hour ದಲ್ಲೂ ಉಪಚಾರ ಫಲಪ್ರದವಾಗುತ್ತಿಲ್ಲ
" ಹೃದಯಾಘಾತಗಳನ್ನು ತಡೆಯುವದು ಹೇಗೆ ಎಂಬ ಬಗ್ಗೆ ಅಂತರ್ ರಾಷ್ಟೀಯ ಮಟ್ಟದಲ್ಲಿ ಉಪನ್ಯಾಸ ಕೊಡಬೇಕಾಗಿದ್ದವರು ಭಾಷಣದ ವೇಳೆಯಲ್ಲಿಯೇ/ ವೇದಿಕೆಯ ಮೇಲೆಯೇ ಇಲ್ಲವಾದ ಸುದ್ದಿಗಳನ್ನು ಓದುತ್ತಿದ್ದೇವೆ. ಪತ್ರಿಕೆಗಳಲ್ಲಿ/ ಫೋನುಗಳಲ್ಲಿ/ face book ನಲ್ಲಿ ಇಂಥವೇ ಸುದ್ದಿಗಳ ಸದ್ದು
ಹೆಚ್ಚಾಗುತ್ತಿವೆ.ಬದುಕಿನ ಶೈಲಿ/ ವಿಶ್ರಾಂತಿ ರಹಿತ ಜೀವನ/ ಸುಲಭ ಸಾಧ್ಯವಲ್ಲದ ಕುಟುಂಬದ ಬೆಂಬಲ/ 
ಹೆಚ್ಚುತ್ತಿರುವ ಮಹತ್ವಾಕಾಂಕ್ಷೆ  ಇಂಥ
ಹಲವಾರು ಕಾರಣಗಳೇನೇ ಕೊಡಲು ಇದ್ದರೂ ಅಂತಿಮ ಸತ್ಯ ಒಂದೇ...

" ನಾವು ' ಕೇವಲ‌' ಮನುಷ್ಯರು"-ಬದುಕಿನ ಜಟಕಾ ಬಂಡಿಯ ' ಸಾಹೇಬ ಬೇರೆಯೇ ಇದ್ದಾನೆ".

                
  
 

Tuesday 24 January 2023

 ಜಬ್ ವೋ  ದೇತಾ ಹೈ , ಛಪ್ಪಡ ಫಾಡ್ಕೆ ದೇತಾ ಹೈ...

      ಒಂದು ಕಾಲದಲ್ಲಿಯ ಒತ್ತಡದ ಬದುಕು ನನಗೆ ಬಳುವಳಿಯಾಗಿ ಕೊಟ್ಟದ್ದು BP ಹಾಗೂ Sugar complaints... ಹೆದರಿಕೆಯೇನೂ ಇಲ್ಲ ಬಿಡಿ. ಎರಡರದೂ ಹದಿನೈದು ವರ್ಷಗಳಿಗೂ ಮೀರಿದ ಸ್ನೇಹ.ಆದರೂ ಈಗಿನ ಕಾಲದಲ್ಲಿ ಸ್ನೇಹಿತರನ್ನೂ ಒಂದು ಹಂತದವರೆಗೆ ಮಾತ್ರ ನಂಬಬೇಕು, ಹೀಗಾಗಿ ಆಗಾಗ ಪರೀಕ್ಷಿಸುತ್ತಲೇ ಇರಬೇಕಾದ ಅನಿವಾರ್ಯತೆ ನನಗೆ.
ಅದಕ್ಕಾಗಿ ಒಂದು Gluco Meter ಖರೀದಿ ಮಾಡಿದ್ದೆ.ಎಲ್ಲದಕ್ಕೂ ಒಂದು Expiry date ಅಂತ ಇರುತ್ತದೆ. ಹೀಗಾಗಿ ಅದು ತೊಂದರೆ ಕೊಡತೊಡಗಿದಾಗ ಇನ್ನೊಂದು ಖರೀದಿಸಬಹುದು ಎನಿಸಿತು.

   ‌‌              ಅದಾಗಲೇ ತಂಗಿಯ ಮನೆಯಲ್ಲಿ ಏನೋ ಕಾರ್ಯಕ್ರಮ ನಡೆದು 'ನಿನಗೆ ಸೀರೆ ಕೊಡಿಸುತ್ತೇನೆ
ನಡಿ'- ಅಂದಳು."ಈಗಾಗಲೇ ಎರಡು ಕಪಾಟು ಸೀರೆ ಬಿದ್ದಿವೆ. ಹೊರಹೋಗು ವದೂ ಕಡಿಮೆಯಾಗಿದೆ "- ಬೇಡ ಎಂದೆ. 'ಬೇಕು- ಬೇಡ'ದ ಬಿಸಿ ಹೆಚ್ಚಾಗಿ
" ಸರಿ ಏನಾದರೂ ನಿನಗೆ ಬೇಕಾದ್ದೇ ಕೊಡಿಸುತ್ತೇನೆ ಹೇಳು- ಎನ್ನುವದಕ್ಕೆ ಬಂದು ನಿಂತಿತು.ನಾನು ಹೊಸ Gluco Metre order ಮಾಡಿದೆ.

             ವಾರದಲ್ಲಿ ತಮ್ಮನ ಮನೆಗೆ
ಹೋದೆ. ಮಾತು ಮಾತಿನಲ್ಲಿ ವಿನುತಾ
" ಮನೆಯಲ್ಲಿ ಅವರು ಬಳಸುತ್ತಿದ್ದ sugar test  machines ಹಾಗೇ ಉಳಿದಿದೆ.ಇತ್ತೀಚೆಗೆ ಖರೀದಿಸಿದ್ದು, ಬೇಕಾ? "-  ಅಂದಳು.ಬೇಡವೆನ್ನಲು ಮನಸ್ಸಾಗಲಿಲ್ಲ, ತೆಗೆದು ನೋಡಿದರೆ ಎಲ್ಲ plastic cover ಸಮೇತ ಈಗ ತಂದಂತೆ.ಅದು ನನ್ನ ತಮ್ಮನ speciality.ಎಲ್ಲದರಲ್ಲೂ Military ಶಿಸ್ತು. ಅವನೇ ಜೊತೆಯಲ್ಲಿದ್ದ ಭಾವ.
ಬೇಡವೆನ್ನಲು ಆಗಲೇಯಿಲ್ಲ.

    ‌‌‌‌‌‌‌‌‌        ಕೊನೆಯದಾಗಿ ಮೊಟ್ಟ ಮೊದಲನೇಯದನ್ನು ಕೊನೆಯಬಾರಿ
ಪರೀಕ್ಷಿಸಿ ಎಸೆಯೋಣ ಎಂದು ಹೊಸ 
Battery ಹಾಕಿಸಿದೆ. Perfect ಆಗಿ ಬಿಡಬೇಕೇ? 
*ಒಂದು  old love... 
*ಎರಡನೇಯದು ತಂಗಿಯ   ಉಡುಗೊರೆ ...
*ಮೂರನೇಯದು ತಮ್ಮನ ನೆನಪು...
-ಯಾರು  ಹಿತವರು ನಿನಗೆ ಈ   ಮೂವದರೊಳಗೆ?- 
     ‌‌‌         ಅನ್ನುವ ಮಾತೇಯಿಲ್ಲ... ಪ್ರತಿಯೊಂದಕ್ಕೂ ಒಂದೊಂದು ಭಾವ... ಹಿನ್ನೆಲೆ. ಆದರೆ ಹಾಗೆಂದು 
ಮೂರೂ ಬಳಕೆಯಾಗುವಷ್ಟು ಸಕ್ಕರೆ
ಮಟ್ಟ ಹೆಚ್ಚಲಿ ಎಂದು ಬೇಡಲಾದೀತೆ?
ಬೇಡಿದರೂ ಅದು ಕಡಿಮೆಯಾಗುವು ದೇ ಅನುಮಾನ...ಏಕೆಂದರೆ ನನ್ನ ಬಳಿ ಇರುವವು machine ಗಳಲ್ಲ... 
ಸಿಹಿ ಸಿಹಿಯಾದ - ಅತಿ ಮಧುರ ಭಾವಗಳು.



Monday 23 January 2023

   ‌        ರವಿವಾರದಂದು  ನಮ್ಮಲ್ಲಿ 
ಕೆಲಸದ ನಿರಾಳತೆ ಕಡಿಮೆ.ಇಡೀ ವಾರದ ದೈನಂದಿನ ಚೌಕಟ್ಟಿನಲ್ಲಿ ಕೂಡದ ಕೆಲಸಗಳಿಗೆಲ್ಲ ಅಂದು ಮಹೂರ್ತ.ಹೀಗಾಗಿ ಅರ್ಧ/ ಒಂದು ಗಂಟೆ ತಡವಾಗಿ ಏಳುವದನ್ನು ಬಿಟ್ಟರೆ
ನಂತರದ್ದು express high way ಪಯಣ.
         ‌   ‌ನಿನ್ನೆ ಆದದ್ದೂ ಅದೇ.ಬೆಳಗಿನ ಸಮಯ  ಹತ್ತು ಗಂಟೆ. ಎಂದಿನಂತೆ
ಹಿತ್ತಲಲ್ಲಿ ಕಾಲುಚಾಚಿಕೊಂಡು Sun bath - ಗೆಂದು ಬಿಸಿಲಲ್ಲಿ ಕುಳಿತಿದ್ದೆ. ಅದಕ್ಕೆ ಹತ್ತರಿಂದ- ಹತ್ತೂವರೆ ಗಂಟೆಯ Schedule...ಕರೆಗಂಟೆ ಬಾರಿಸಿತು. ಮೊಮ್ಮಗ ' ಅಜ್ಜಿ, ಸ್ವಲ್ಪು ಯಾರೆಂದು ನೋಡು'- ಎಂದು ಕೂಗಿದ.ಹೀಗೆಂದೂ ಹೇಳಿದವನೇ ಅಲ್ಲ
ಅವನು.ನಾನಾಗೇ ಬಂದರೆ " ಅಜ್ಜಿ, ನಾನು ನೋಡ್ತೇನೆ ಬಿಡು" ಅನ್ನುವವ.ಏನೋ ಮಾಡ್ತಿರಬೇಕು
ಎಂದುಕೊಂಡು,ಆರಾಮಾಗಿ/ ಯಾವುದೂ ಗಡಿಬಿಡಿಯೇ ಇಲ್ಲದೇ
ಹೋಗಿ ಬಾಗಿಲು ತೆಗೆದೆ. ಚೀರುವದೊಂದು ಬಾಕಿ...ಆರು ಫೂಟಿನ ಚೌಕಟ್ಟಿನ ಬಾಗಿಲುದ್ದಕ್ಕೂ ಹರಡಿ ನನ್ನ ಮಗ ನಿಂತಿದ್ದಾನೆ.ದೂರದ ಅಮೇರಿಕದಲ್ಲಿ ಇರಬೇಕಾದವ ನಸುಕಿನ ಗಾಳಿಯೊಂದಿಗೆ ತೇಲಿ ಬಂದಂತೆ... ಒಂದು ಉದ್ಗಾರ/ ಒಂದು ಚೀರುದನಿಯ ಸ್ವಾಗತ/ ಒಂದು ಅಪ್ಪುಗೆ ಬಾಗಿಲಲ್ಲೇ ಆಯ್ತು .ಅದರ ಬಿಸುಪನ್ನು ಇನ್ನಷ್ಟು ಹೆಚ್ಚಿಸುವ ಚಂದದ ಸ್ವೆಟರನ್ನು ಮೈಮೇಲೆ ಹೊದಿಸಿದ.ನಂತರ ಗೊತ್ತಾದದ್ದು- ಈ ಬಗ್ಗೆ ಎಲ್ಲರಿಗೂ ಮೊದಲೇ ಗೊತ್ತಿತ್ತು, ಎಲ್ಲರೂ ಮಾತನಾಡಿಕೊಂಡೇ ನನಗೆ surprise ಕೊಡುವ ಆಟ ಆಡಿದ್ದರು.
               ನಂತರ ಮಾಮೂಲು ಹರಟೆ, ಸೊಸೆ / ಮೊಮ್ಮಕ್ಕಳೊಂದಿಗೆ
ವೀಡಿಯೋ ಕಾಲ್/ ಒಂಚೂರು ಸುತ್ತಾಟವಾದ ನಂತರ ತನ್ನ  ಮನೆಗೆ ಹೋದ.ಇನ್ನೂ ಎರಡುವಾರಇರುತ್ತಾನೆ. ಮೈಸೂರನ್ನೂ ಸೇರಿಸಿ ಒಂದೆರಡು programs ಆಗಬಹುದು...
               ಇದೇನೂ ಮಹಾ ಸ್ಫೋಟಕ/
ಅಥವಾ breaking news ಅಲ್ಲ 
ಗೊತ್ತು.ಆದರೆ ದಿನಗಳೆದಂತೆ ಬಾಡುವ ಹೂಗಳಿಗೆ ನಾಲ್ಕು ಹನಿ ನೀರು ಮತ್ತೆ ಸಿಂಪಡಿಸಿದಂತೆ.ಅಷ್ಟೇ ಹೊಸ ಭಾವ, ಹೊಸ ಚೇತನ.ಇಂಥ ಕೆಲ surprise ಗಳೇ ಅಲ್ಲವೇ ಬದುಕಿನ ಚಂದವನ್ನು ಕಟ್ಟಿ ಕೊಡುವದು!!! ನೀರು ಬೊಗಸೆಯಷ್ಟೇ ಆದರೇನು ಅದು  ಜೀವ ಜಲವೇ ತಾನೇ!!!
     



Saturday 21 January 2023

ನಾನು ಹುಟ್ಟಿದ ಹನ್ನೊಂದು ದಿನಕ್ಕೇನೇ
ಶ್ರೀಮತಿ-ಯಾದವಳು.ಅಂದರೆ ಕುಮಾರಿ ಶ್ರೀಮತಿ. ಮೊದಲೆಲ್ಲ ಎಂಥ ಚಂದದ ಹೆಸರು ಎಂದು ಉಬ್ಬಿ ಸಂಭ್ರಮಿಸಿದವಳಿಗೆ ಪೇಚಾದದ್ದು ನಾನು BEd ಮಾಡಲು ಕುಮಠಾ ಸೇರಿದಾಗ...ಮನಿಯಾರ್ಡರ್ ಬಂದಾಗ
ನನ್ನದೇ ಎಂದು ಖಾತ್ರಿಮಾಡಿಕೊಳ್ಳುತ್ತಿ ದ್ದ postman ಶ್ರೀಮತಿ ಗೊತ್ತಾತ್ರಿ,.. ಮುಂದ ಹೇಳ್ರಿ ಅಂತ...ಮದುವೆಯಾದ ಮೇಲೆ ನನ್ನವರದು ಸ್ವಲ್ಪು ಕೈ ಬಿಗಿ.ನಾನೋ ಧಾರಾಳಿ.ಹೀಗಾಗಿ ಏನೇನೋ ಲೆಕ್ಕ ಒಪ್ಪಿಸಿ ಹಣ ಪಡೆಯಬೇಕಾಗುತ್ತಿತ್ತು," ಅಪ್ಪ/ ಅವ್ವ
ಸರೀ ಹೆಸರಿಟ್ಟಾರ್ನೋಡು,' ಶ್ರೀ' ಯನ್ನು
ಲಪಟಾಯಿಸೋದ್ರಲ್ಲಿ  ಸಮಸ್ತ ' ಮತಿ'-
ಯನ್ನು ಬಳಸ್ತೀ- ಇದು ನನ್ನವರ ಕಾಯಂ ಜೋಕು.ಮಗನ ಹೆಸರು ' ನಾರಾಯಣ'_ ಉತ್ತರಕರ್ನಾಟಕದಲ್ಲಿ' ನಾನಿ...ನಮ್ಮಲ್ಲಿಯ ಟೀಚರ್ ಒಬ್ರು
ತುಂಬ ತಮಾಷೆ." ಕೌಲಗಿ ಟೀಚರsss ಮಗಾ ಅರ್ಭಾಟ ಇದ್ದಾನ.ದೊಡ್ಡವ ಆಗ್ಲಿ ನೋಡ್ರಿ, ಹುಡಿಗ್ಯಾರು- ನಾ- ನೀ,
ನಾ- ನೀ ಅಂತ ದುಂಬಾಲ ಬೀಳ್ತಾರ ಅಂತ ಛೇಡಸ್ತಿದ್ರು. ಮಗಳಿಗೆ 'ಚಂದಲಾ' ಅಂತ ಕುಲ ದೇವತೆ (ಚಂದಲಾ ಪರಮೇಶ್ವರಿ)ಯ ಹೆಸರು
ಇಟ್ವಿ...ಎಲ್ಲರೂ' ಏನ್  ಚಂದಲಾ?'- 'ಎಷ್ಟ ಚಂದಲಾ? 'ಭಾಳ ಚಂದಲಾ? '-
ಸುರುವಾತು...ಇನ್ನೊಂದು ಹೆಸರು ಇತ್ತು, ನಮಿತಾ ಅಂತ - ಶಾಲೆಗೆ ಅದನ್ನ
ಹಚ್ಚಬೇಕಾಯ್ತು.ನಮ್ಮ ಗೆಳತಿಯ ಹೆಸರು ಗೀತಾ,ಅವಳ ತಂಗಿಯರು ಲತಾ/ ಸವಿತಾ/ ವನಿತಾ/ ಕವಿತಾ. ಅವರ ತಮ್ಮ ತುಂಬ ತಮಾಷೆ.'ತಾ' ದಿಂದ ಮುಗಿಯುವ ಹೆಸರುಗಳು ಮುಗಿದ ಮೇಲೆಯೇ ನಮ್ಮಮ್ಮ ಹೆಣ್ಣು
ಹಡೆಯುವದು ಮುಗಿಸಿದ್ದು - ಎಂದು ನಗಿಸುತ್ತಿದ್ದ.ಇನ್ನೊಬ್ಬ ಮಗಳ ಹೆಸರು,
' ಚೇತನಾ' ಚಿಕ್ಕವಳಿದ್ದಾಗ ತುಂಬ ಅಳುತ್ತಿದ್ದಳು.ಕೆಲವೊಮ್ಮೆ ' ಚೇತಿ' ನೂ
ಆಗುತ್ತಿತ್ತು.ನನ್ನ ತಮ್ಮ ಅವಳೆದುರು ಹಾಡುತ್ತಿದ್ದ,
ಬೇಕಾದಷ್ಟು ತಿಂತಿ
ಬೇಕಾದಾಗ ಉಣ್ತಿ
ಆದರೂ ಯಾಕಷ್ಟ ಅಳತಿ?
ಹೇಳವ್ವಾ ಚೇತಿ... ಅಂತ...
          ನನ್ನ ಅಣ್ಣನ ಹೆಸರು ಪ್ರಹ್ಲಾದ.
ಉತ್ತರ ಕರ್ನಾಟಕದಲ್ಲಿ ' ಪಲ್ಯಾ' ಅವನ ಮಗ ' ನನಗ ಆ ಪಲ್ಯ ಬ್ಯಾಡಾ ಸೇರೂದಿಲ್ಲ ಅಂತ ಯಾವುದಾದರೂ ಪಲ್ಯಕ್ಕೆ ಹೇಳಿದರೆ,ಅವನ ಪ್ರಶ್ನೆ," ನಿನಗ ಖರೇನ ಸೇರೂದಿಲ್ಲೋ? ಏನ್ ನನ್ನ ಹೆಸರು ಪಲ್ಯಾ - ಅಂತ ಅದನ್ನ ತಿನ್ನೋದಿಲ್ಲೋ...? ಇವಿಷ್ಟಾದ್ರೂ ನಮ್ಮನೀ ಹೆಸರsss ಮುಗದಿಲ್ಲ.ಎಲ್ಲಾ ಬರದ್ರ ನಂದೂ ಒಂದು ಅಂಕಣ ಬರಹ
ಆಗೋದು ಗ್ಯಾರಂಟಿ...

 ಮನೆಯಲ್ಲಿಯೇ ಒಂಟಿಯಾಗಿ... 

          " An idle mind is a devil's
WIRKSHOP ಅನ್ನುವ ಮಾತೊಂದಿದೆ. ನಮ್ಮ ಕನ್ನಡದಲ್ಲಿಯ" ಉದ್ಯೋಗವಿಲ್ಲ ದ ಬಡಗಿ ಏನೋ ಕೆತ್ತಿ ಮಣೆ ಮಾಡಿದ"...ಎನ್ನುವದೂ ಇದನ್ನೇ ಧ್ವನಿಸುತ್ತದೆ.ಒಂದು ಖಚಿತವಾದ ಉದ್ದೇಶವಿಲ್ಲದೇ ಹೊತ್ತು ಕಳೆಯಲು  ಏನಾದರೂ ಮಾಡಿದರಾಯಿತು ಬಿಡು- ಅಂತ ಮಾಡಿದರೆ ಅದರಲ್ಲಿ ಯಾವುದೇ ಗತಿ/ಲಯ/ ತಾಳವಿರುವದಿಲ್ಲ. ಉದಾಹರಣೆಗೆ ಅದು ಕನ್ನಡಿಯ ಮುಂದೆ ನಿಂತುಕೊಂಡು ದೇಹದ ಇಂಚು ,ಇಂಚನ್ನು ಅಳೆದು ನೋಡುವ ದಾಗಿರಬಹುದು, ಬೇಕೆನಿಸಿದ ಕಿಟಕಿ ಯೊಂದನ್ನು ಆರಿಸಿಕೊಂಡು ಕಪ್ಪಿನ ಮೇಲೆ ಕಪ್ಪು ಕಾಫಿ ಮಾಡಿಕೊಂಡು ಹೊರಗೆ ನೋಡುತ್ತ ,ತನ್ನದೇ ಮನಸ್ಸಿನ ಒಳಗೆ ಹಣಿಕಿಕ್ಕುತ್ತಾ ಸ್ವ ವಿಮರ್ಶೆ/ ಸ್ವ ಚಿಂತನೆಗೆ ಇಳಿಯುವದಾಗಲೀ,ದೂರದಲ್ಲಿದ್ದ ಹೆಂಡತಿಯನ್ನು ಗಳಿಗೆ- ಗಳಿಗೆಗೊಮ್ಮೆ ನೆನೆಯುತ್ತ ಅವಳ ಛೇಡಿಸುವಿಕೆ, ರಮಿಸುವಿಕೆಯಲ್ಲಿ ಕಳೆದು ಹೋಗುವದಾಗಲಿ, ಹಳೆಯ ಅಲ್ಬಮ್ವೊಂದನ್ನು ತೆರೆದು, ಹಿಂದೆಂದೋ  ಸೈಕಲ್ನಿಂದ ಬಿದ್ದ ಮಗನ ಕಾಲಿಗೆ ಹಾಕಿದ ಬ್ಯಾಂಡೇಜು ನೆನೆದು ಕಣ್ಣೀರಾಗುವುದು, ಅವನದೇ ಆ ಮೊದಲಿನ ಆಟ/ ಓಟ/ ಊಟಗಳನ್ನು ನೆನೆದು ಆರ್ದ್ರವಾಗುವದು,ಇಲ್ಲದ ಹೆಂಡತಿಯ ಅಧಿಕಾರದ/ಅಕ್ಕರೆಯ/ ತಕರಾರಿನ ದಿನಗಳಿಗಾಗಿ ಕಂಗೆಟ್ಟು ಹಂಬಲಿಸುವದಾಗಲಿ, ಇಂಥವೇ " ಹುಚ್ಚು ಮನಸ್ಸಿನ ಹತ್ತು ಮುಖಗಳ"- ಮೆರೆದಾಟದ ಹಳವಂಡಗಳ ರೀಲು
ಬಿಚ್ಚಿಕೊಂಡರೆ ಆಶ್ಚರ್ಯವಿಲ್ಲ...
               ಮನಸ್ಸೊಂದೇ ಆದರೂ ‌ಏಕಾಂತದಲ್ಲಿ ಅದರ 'ಅಂತರಂಗ' ‌ಬಹಿರಂಗವಾದಾಗ ಅದು ಬೇರೆಯೇ ಆಟವಾಡುತ್ತದೆ‌.ತನಗಿರುವ ‌ಚೌಕಟ್ಟನ್ನು ‌ಮೀರಿಸ್ವತಂತ್ರವಾಗಿ,‌ಯಾವುದೇ ‌‌ಹೊರ ‌‌ಒತ್ತಡದ ‍ಹಂಗಿಲ್ಲದೇ ‌ಅನಾವರಣಗೊಳ್ಳುತ್ತದೆ.ಆಗಇದ್ದದ್ದು ‌ಇಲ್ಲದ್ದಾಗಿ, ಇಲ್ಲದ್ದುಇದ್ದಂತೆ ‌ಭ್ರಮೆಯುಂಟಾಗಬಹುದು.
ತಪ್ಪಿಲ್ಲದೇ ಮರುಗಬಹುದು.ತಪ್ಪು ಮಾಡಿದ್ದನ್ನು ‌ಸಮರ್ಥಿಸಿಕೊಳ್ಳಬಹುದು
‌ಏಕೆಂದರೆ ‌ನಾವು ‌ಮನುಷ್ಯನನ್ನು‌ ‍ಕಟ್ಟಿಹಾಕಬಹುದು...ಅವನ ‌ಮನಸ್ಸನ್ನಲ್ಲ...
  ‌‌‌        ಇದು ‌ಕಥಾ ‌ಸಂಕಲನದ ‌ಕೊನೆಯ‌‌‌ ‌ಕತೆ
ಯಾದರೂ ಅದು ‌ತೆರೆದಿಟ್ಟ ‌ವಿಷಯ
ವಸ್ತುವಿಗೆ ‌ಕೊನೆಯೆಂಬುದಿಲ್ಲ.‌ಏಕೆಂದರೆ ಮನುಷ್ಯನ ಮರ್ಕಟ ಮನಸ್ಸಿಗೆ/ ಅದರ ‌ಮೂಡುಗಳಿಗೆ ‌ಹತ್ತಾರು ‌ಬಾಗಿಲುಗಳು...‌ವಿಶಾಲವಾದ French Window ‌ಗಳು...
   ‌‌‌‌‌   




ಆರು ಕತೆಗಳ ನಂತರ 'ನನ್ನದೇ' ಏಳನೇಯದು...

   ‌‌   * " ನಾನು ಪುಸ್ತಕಗಳನ್ನು ಓದುತ್ತೇನೆ...

*ಪುಸ್ತಕಗಳನ್ನು ಬಿಟ್ಟು ಬೇರೇನೂ ಓದಲಾರೆ...

* ನಾನು ಓದುವುದು ಬರಿ ಪುಸ್ತಕಗಳನ್ನು ಮಾತ್ರ...
               ಎಂದು ಭಗವದ್ಗೀತೆಯ ಮೇಲೆ ಕೈಯಿಟ್ಟು ಆಣೆಯನ್ನೇನೂ ಮಾಡಿರಲಿಲ್ಲ, ನಿಜ.ಆದರೆ ಬಾಲ್ಯದಲ್ಲಿ ನಡೆದುಕೊಂಡದ್ದು ಮಾತ್ರ ಹಾಗೇ... ಭರ್ತಿ ಹನ್ನೊಂದು ಜನರ ಕುಟುಂಬ ದಲ್ಲಿ ಮಧ್ಯಮಳಾಗಿ ಅತ್ತ ಹಿರಿಯರ ಲೆಕ್ಕಕ್ಕೂ/ ಇತ್ತ ಕಿರಿಯರ ಲೆಕ್ಕಕ್ಕೂ ಸಲ್ಲದ ನನ್ನದು ತ್ರಿಶಂಕು ಸ್ಥಿತಿ. ಹಿರಿಯ ಮಗಳೆಂಬ‌ ಗೌರವ, ಕಿರಿಯಳೆಂಬ ಕಕ್ಕುಲಾತಿ ಎರಡೂ  ಇಲ್ಲದೇ
' ತೌಡು ಹಾಕಿ ತಂದೆವು' - ಅಂತಿದ್ದರಲ್ಲ
ಹಾಗೆ ಇದ್ದವಳು.ಅದು ನನಗೆ ವರವೇ ಆಯಿತು.ಕೊಳ್ಳಲು ಸಾಮರ್ಥ್ಯ ಇಲ್ಲದಿದ್ದರೂ ನನಗಿದ್ದ ಗೆಳತಿಯರು/ ಪರಿಚಯಸ್ಥರಿಂದ ದೈನಂದಿಕ/ ಸಾಪ್ತಾಹಿಕ/ ಪಾಕ್ಷಿಕ/ ಮಾಸಿಕ/ದ್ವೈಮಾಸಿಕ/ ವಾರ್ಷಿಕ ಎಲ್ಲ ಪತ್ರಿಕೆಗಳನ್ನು ಕಡಪಡೆದು/ ಜವಾಬ್ದಾರಿಯಿಂದ ಹಿಂದಿರುಗಿಸಿ ಅದೇ ವಿಶ್ವಾಸದ ಭರವಸೆಯ ಮೇಲೆ ಸಿಕ್ಕ ಕಾದಂಬರಿಗಳನ್ನೂ ಓದುತ್ತಾ/ ಶಕ್ಯವಿದ್ದಷ್ಟು ಅರಗಿಸಿಕೊಳ್ಳುತ್ತ ಹೈಸ್ಕೂಲಿನಲ್ಲಿರುವಾಗಲೇ ಅಷ್ಟಿಷ್ಟು ಗೀಚುವ ಗೀಳು ಅಂಟಿ, ಬೆಳೆದು,
ಮುಂದೊಮ್ಮೆ ಮೂವತ್ತೇಳನೇ
ವರ್ಷಕ್ಕೇನೆ ಒಂಟಿ ಹೆಗಲ ಮೇಲೆ ಸಂಸಾರದ ಭಾರ ಬಿದ್ದಾಗ,ಅದನ್ನೇ ಬಳಸಿಕೊಂಡು, ಆಕಾಶವಾಣಿಯಲ್ಲಿ ನಿಯಮಿತವಾಗಿ ಕಾರ್ಯಕ್ರಮಗಳನ್ನು
ಕೊಡುತ್ತ ನನ್ನ ಆದಾಯಕ್ಕೆ/ ಖರ್ಚಿಗೆ
ಹೊಂದಾಣಿಕೆ ಮಾಡಿಕೊಂಡದ್ದೀಗ 
ಇತಿಹಾಸ.ಆದರೆ ಓದು- ಬರಹ ಅಷ್ಟಕ್ಕೇ ಸೀಮಿತವಾದದ್ದು ನನ್ನ ದುರ್ದೈವ.ಮುಂದೆ ನಿವೃತಳಾದರೂ
ಅದಕ್ಕೆ ಮೈ ಮನಸ್ಸು ಒಗ್ಗಲೇಯಿಲ್ಲ." It's O.K.to be LAZY- ಅಂದುಕೊಂಡು ಹಾಯಾಗಿಯೇ ಇದ್ದೆ.
ಹತ್ತು ವರ್ಷಗಳ ಹಿಂದೆ Smart phone/ advance technology
ಬಂದಮೇಲೆ ನನ್ನ ಸುತ್ತ ಬೆಳೆದ ಹುತ್ತ
ತಂತಾನೇ ಸಡಿಲಾಗಿ ಮತ್ತೆ ಬರಹಕ್ಕೆ ಹಿಂದಿರುಗಿ ಮೂರು ಪುಸ್ತಕಗಳನ್ನು
ಬರೆದೆ. But it was too late... ಆಗಲೇ ಬಂದ Covid- 19 ಮಹಾಮಾರಿ ಎರಡು ವರ್ಷಗಳ‌ ಕಾಲ ಉಳಿದು ಅಗತ್ಯವಾದ ನನ್ನ ಕಣ್ಣಿನ Operation ನನ್ನು ಮುಂದೂಡುತ್ತಲೇ
ಹೋಗುವಂತೆ ಮಾಡಿ ನನ್ನ ಓದು- ಬರಹದ ರೂಢಿಯನ್ನು ನಿರ್ದಯವಾಗಿ
ಕಸಿದುಕೊಂಡು ಮನಸ್ಸು ಬಂದರೆ ಎರಡು ಪುಟ ಓದುವದು/ ಎರಡು ಸಾಲುಗಳನ್ನು ಗೀಚುವುದಕ್ಕೆ ತಂದು ನಿಲ್ಲಿಸಿತ್ತು.
              ನಾನೇನೂ ' ಉದ್ದಾಮ' ಬರಹಗಾರಳಲ್ಲ- ' ಮುದ್ದಾಂ ಬರಹಗಾರಳು.' ' ಬಡವಾ,ನೀ ಮಡಗಿದ್ಹಂಗಿರು'- ಅಂತ ಹಾಯಾಗಿ ಇದ್ದೇನೆ.ಆದರೆ ಯಾರಾದರೂ ಪುಸ್ತಕ ಕಳುಹಿಸಿದರೆ thanks ಹೇಳಿ ಸುಮ್ಮನೇ ಕೂಡುವುದಾದರೂ ಹೇಗೆ? K. Nallatambi ಯವರೂ ಎರಡು ಪುಸ್ತಕಗಳನ್ನು ಕಳುಹಿಸಿದ್ದರು.ಅವರಿಗೆ
ನನ್ನ ಸಮಸ್ಯೆ ನಿವೇದಿಸಿಕೊಂಡು ಸಮಯ ಬೇಡಿದ್ದೆ.ಆಗ ಮೂರನೇಯ ದಾಗಿ ಅವರ ಆರೇ ಅನುವಾದಿತ ಕಥೆಗಳ ಸಂಕಲನ  post ನಲ್ಲಿ ಬಂತು. ದಿನಕ್ಕೊಂದೇ ಓದಿ ಅದರ ಬಗ್ಗೆ ಒಂದು
Paragraph ಬರೆಯುವ ನಿರ್ಧಾರ ತೆಗೆದುಕೊಂಡೆ.ಬರೆದು ಕಳಿಸುತ್ತಲೂ ಬಂದೆ.ಅವರು ಅಭಿಮಾನದಿಂದ
ಅವುಗಳನ್ನು ಪ್ರೀತಿಯಿಂದ fb ಯಲ್ಲಿ ಹಂಚಿಕೊಂಡಾಗ ನಾನು ಆ ಕೆಲಸಕ್ಕೆ
ಪ್ರೀತಿಯಿಂದಲೇ Commit ಆದೆ, ತೋಚಿದ್ದು ಬರೆದೆ.ಅದು ಖಂಡಿತ
ಅವರ ಅನುವಾದದ ಕತೆಗಳ ವಿಮರ್ಶೆಯಲ್ಲ. ನಾನು ಅವುಗಳನ್ನು
 ಓದಿ/ಅರ್ಥೈಸಿಕೊಂಡ ರೀತಿ ಮಾತ್ರ...
ಆದರೆ ಅದೊಂದು ವಾರದ Task ಆಗಿ,
ನನ್ನನ್ನು ಅದಕ್ಕೆ ಸಿದ್ಧಗೊಳಿಸಿ, ಸಮರ್ಥವಾಗಿ ಮಾಡಿ ಗೆದ್ದದ್ದು ಸಂತೋಷವಾದರೆ ಅದಕ್ಕೆ ಮೂಲ ಕಾರಣ ನಲ್ಲತಂಬಿ ಸರ್ ಮಾತ್ರ ಕಾರಣ...ಅವರಿಗೆ, ಅವರ ಪ್ರೀತಿ- ಅಭಿ
ಮಾನಗಳಿಗೆ, ಅವರ ಕೊಟ್ಟ task ಗೆ,
ಅವುಗಳನ್ನು ಹಂಚಿಕೊಂಡು ಪ್ರೋತ್ಸಾಹಿಸಿದ್ದಕ್ಕೆ, ಮುಖ್ಯವಾಗಿ
ಮತ್ತೊಮ್ಮೆ ಓದು- ಬರಹಕ್ಕೆ ನನ್ನನ್ನು ತಾತ್ಪೂರ್ತಿಕವಾಗಿಯಾದರೂ ಮರಳಿ
ತಂದದ್ದಕ್ಕೆ ನನ್ನ ಹಾರ್ದಿಕ ಧನ್ಯವಾದಗಳು...




Friday 20 January 2023

ಐದನೇ ಕಥೆ...
ಕನ್ನಡಿ...
       ‌‌‌‌     ಈ ಕತೆ ಓದಿ ಮುಗಿಸಿದಾಗ ನನಗೆ ನೆನಪಾದದ್ದು ಹಿಂದೆ ಏಳನೇ ಇಯತ್ತೆಯ ಇಂಗ್ಲಿಷ ಪುಸ್ತಕ ದಲ್ಲಿದ್ದ
The magic wand - ಎಂಬ ಕಥೆ.ಫ್ರೆಂಜ್ ಎಂಬುವವನೊಬ್ಬ ಬಡಹುಡುಗ.ಹಸಿವೆ ನೀಗಿಸಲು ಕೆಲಸದ ಹುಡುಕಾಟದಲ್ಲಿದ್ದ ಅವನಿಗೆ ದುಡ್ಡಿಗಿಂತಲೂ ಒಬ್ಬ ಒಳ್ಳೆಯ ಮಾಲಿಕನ  ಅವಶ್ಯಕತೆ ಇತ್ತು.ಆಗ ಒಬ್ಬ  ಅವನಿಗೆ ಮಾಂತ್ರಿಕ ಶಕ್ತಿ ಇರುವ 
ದಂಡವೊಂದನ್ನು ಕೊಟ್ಟು ಅದನ್ನು ಯಾವ ವ್ಯಕ್ತಿಗೆ ತಾಗಿಸುತ್ತಾನೋ ಅವನ ಮನಸ್ಸಿನ ಯೋಚನೆಗಳನ್ನು ಅವನಿಗೆ ಹೇಳುತ್ತದೆ ಎಂದು ಹೇಳುತ್ತಾನೆ. ಅದರ ಸಹಾಯದಿಂದ ಅವನು ತನ್ನ ಮಾಲಿಕನನ್ನು ಹುಡುಕಿಕೊಳ್ಳುವಲ್ಲಿ
ಸಫಲವಾಗುವಲ್ಲಿಗೆ ಕಥೆ ಮುಕ್ತಾಯವಾಗುತ್ತದೆ.ಇಲ್ಲಿ ದಂಡದ ಬದಲು 'ಕನ್ನಡಿ' ಆ ಕೆಲಸ ಮಾಡಿದ ಹಾಗೆ ಅನಿಸಿತು.
            ಕಥೆಯ ಮೊದಲ ಪರಿಚ್ಛೇದದಲ್ಲಿ ಹೇಳಿದಂತೆ ಮಾತನಾಡುವವರಲ್ಲಿ ಹಲವು ಹತ್ತು
ಬಗೆಗಳಿದ್ದರೂ ಪ್ರತಿ ಮನುಷ್ಯನಿಗೂ
ತನ್ನದೇ ಆದ signature manner
ಎಂಬುದೊಂದು ಇರುತ್ತದೆ.ಇಲ್ಲಿ ಕಥಾನಾಯಕ ಕನ್ನಡಿಯನ್ನೇ  ಮಾಧ್ಯಮವಾಗಿಸಿ ತನ್ನ ಹೆಂಡತಿ/ ಮಗ/ ನಾರಾಯಣ/ ಮ್ಯಾನೇಜರ್/ MD ಅಷ್ಟೇ ಏಕೆ ಒಂದು ಹಲ್ಲಿಯ ಲೊಚಗುಟ್ಟುವಿಕೆಯನ್ನೂ ಬಳಸಿ ತನ್ನ
ಅಂತರಂಗವನ್ನೇ ಬಹಿರಂಗವಾಗಿ/ ಪರೋಕ್ಷವಾಗಿ/ ತನ್ನಿಚ್ಛೆಗೆ ಅನುಗುಣವಾಗಿ ಬಿಚ್ಚಿ ಹರಹುತ್ತಾನೆ. ಅವರು ಮಾತನಾಡಿದ್ದೆಲ್ಲವೂ ಅವನೊಳಗಣ ಅವ್ಯಕ್ತ ಭಾವನೆಗಳ/ ಯೋಚನೆಗಳ ಬಹಿರಂಗ ಶಬ್ದರೂಪ ಗಳೇ ಹೊರತು ಅವರವಲ್ಲ.ಇದು ಈ ಕಥಾ ಸಂಕಲನದ ಉಳಿದ ಕಥೆಗಳಿಂದ ಈ ಕಥೆಯ ಹಂದರವನ್ನು ಭಿನ್ನವಾಗಿ ಸಿದೆ. ಏನೇ ಆದರೂ ಕಲ್ಪನೆಗೆ
/ ಯೋಚನೆಗೆ/ ವಿಚಾರ ಲಹರಿಗೆ ವಾಸ್ತವದಂತೆ ಮೂಲ ದ್ರವ್ಯಗಳ ಗಟ್ಟಿ ಆಧಾರವಿರುವದಿಲ್ಲ. ಅವುಗಳಿಗೆ ಕೊಂಡಿ ಕಳಚುವವರೆಗೆ ಮಾತ್ರ
ಅಸ್ತಿತ್ವವಿರುತ್ತದೆ, ಒಮ್ಮೆ ಅದು ಕಳಚಿತೋ ಕೆಳಕ್ಕೆ ಒಗೆದ ಕನ್ನಡಿಯಂತೆ
ಕ್ಷಣವೊಂದರಲ್ಲಿ  ಚೂರು ಚೂರು...
ಈ ಕಥೆಯ ಅಂತ್ಯದಲ್ಲಿ ಆದದ್ದೂ ಇದೇ...ಆ ಎಲ್ಲ ಚೂರುಗಳಲ್ಲೂ ಅವನವೇ ಹಲವು ಬಗೆಯ ಚದುರಿದ 
ಮುಖಗಳು...ಸ್ವಂತ ಹೆಂಡತಿಗೆ ಮುಂದೆ
ಬರಬಹುದಾದ  ಯಾವೋ ' ಗ್ರಹಚಾರಗಳು...'
         

Thursday 19 January 2023

ನಾಲ್ಕನೇ ಕಥೆ 
'ಆಲ್ಬರ್ಟ್ ಕಮೂವಿನ ಔಟ್ ಸೈಡರ್'

             ಈ ಕಥೆ ಹೆಸರಿಗೆ ಸಣ್ಣಕಥೆ ಯಾದರೂ ಓದಿದಾಗ ಬಾಲಕೃಷ್ಣ ಪುಟ್ಬ ಬಾಯಿ ತೆರೆದಾಗ ಕಂಡ ' ವಿರಾಟ ರೂಪ' ದರ್ಶನವಾದಂತಾಗುತ್ತದೆ.
 ‌‌‌‌       'ಸ್ಟಾರ್ ಕ್ರೂಜ'- ಒಂದರ ಅಪರ್ ಡೆಕ್ ನಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ ಆರಂಭವಾದ ಕತೆ, ಕಥಾನಾಯಕ ಅನಿರುದ್ಧನ ಅಲ್ಬರ್ಟ್ ಕಮೂವಿನ- Out sider- ಪುಸ್ತಕದ ಓದಿನೊಂದಿಗೆ   ಶುರುವಾಗಿ , ಅವರ ಶಿವಮೊಗ್ಗೆಯ 
ಕೂಡು ಕುಟುಂಬದ ಪರಿಚಯ/ಆ ಕುಟುಂಬದ ಹಿರಿಯ ಮಗನ ಮಗನಾದ ಅನಿರುದ್ಧನಿಗೆ ಸಿಕ್ಕ ವಿಶೇಷ ಸ್ಥಾನಮಾನ- ಸವಲತ್ತುಗಳು/  ಅವುಗಳಿಂದಾಗಿ ಮಾಡಿಕೊಂಡ ತಾತ್ಪೂರ್ತಿಕ ಸ್ನೇಹವಲಯದಿಂದ
ಎಡವಟ್ಟಾದ ಹಸಿಬಿಸಿ/ಕಚ್ಚಾ ಹರೆಯದ ಪೀಕಲಾಟಗಳು/ಅನನುಭವ ಜನ್ಯ ಮಾನಸಿಕ ತೊಳಲಾಟಗಳು/ ಆದರೂ
ಕೂಡುಕುಟುಂಬದ ಸಂಸ್ಕೃತಿಯ ಪರಿಣಾಮವೋ, ಎಲ್ಲೋ ಒಂದುಕಡೆ
ದಾರಿ ತಪ್ಪದಂತೆ ಕಾವಲಿಗೆ ನಿಂತ ವಿವೇಕವೋ ಅವನು ಅದರಿಂದ ಪಾರಾಗಿ ನೌಕರಿಗಾಗಿ ಊರುಬಿಟ್ಟು ಸ್ನೇಹಿತನ ನೆರವಿನಿಂದ ಪಟ್ಟಣ ಸೇರಿ ಓದಿದರೂ ಕೈ ಹಿಡಿಯದ ಅದೃಷ್ಟದಿಂದಾಗಿ ಹಸಿದು ಕಂಗಾಲಾಗಿ
ಪುಸ್ತಕದಂಗಡಿಯಿಂದ ಒಂದು ಪುಸ್ತಕ ಕದ್ದು, ಸಿಕ್ಕುಬಿದ್ದು, ಮ್ಯಾನೇಜರ್ ನ ಕರುಣೆಯಿಂದಾಗಿ ಪಾರಾಗುತ್ತಾನೆ. 'ಹಿಂದಿನ ಬಾಗಿಲಿನಿಂದ ಹೋಗು'- ಎಂಬ ಅವನ ಮಾತು/ ಹೊರಡುವ ಸಮಯದಲ್ಲಿ ಅವನು ಅನಿರುದ್ಧನ ಕೈಗಿತ್ತ ಹತ್ತರ ಎರಡು ನೋಟುಗಳು
ಅವನ ವ್ಯಕ್ತಿತ್ವವನ್ನುಸಂಕುಚಿತಗೊಳಿಸಿ  ಹಿಡಿಗಾತ್ರಕ್ಕೆ ಇಳಿಸಿದ್ದಲ್ಲದೇ ಇಡೀ ಬೆಂಗಳೂರೇ ತನ್ನನ್ನು ಬೆತ್ತಲಾಗಿಸಿ ನೋಡುತ್ತಿದೆ ಎಂಬ ಭಾವ ಬಲಿತು
ಕುಗ್ಗಿಹೋದಾಗ, ಆಕಸ್ಮಿಕವಾಗಿ ಈ ಹಿಂದೆ ಕೊಟ್ಟ ಸಂದರ್ಶನವೊಂದರಲ್ಲಿ
ಆಯ್ಕೆಯಾಗಿ Travel agency ಒಂದರಲ್ಲಿ ಕೆಲಸ ಸಿಕ್ಕು ಅವನ ಬದುಕಿನ ಜೊತೆ ಜೊತೆಗೆ ಕಥೆಯೂ  ಬ್ರಹತ್ ತಿರುವು ಪಡೆಯುತ್ತದೆ. ಮುಂದೆ ಶ್ರದ್ಧೆಯಿಂದ ದುಡಿದು ಹಂತಹಂತವಾಗಿ ಬದುಕಿನಲ್ಲಿ/ವೃತ್ತಿಯಲ್ಲಿ ಮೇಲೇರುತ್ತ ಹೋಗಿ ಇಚ್ಛಿತ ಗುರಿ ತಲುಪಿದ ಎಷ್ಟೋ ವರ್ಷಗಳ ನಂತರ ಆ ಪುಸ್ತಕದ ಅಂಗಡಿಗೆ ಹೋಗಿ ಹತ್ತುರೂಪಾಯಿಗಳ ಎರಡು ನೋಟು ಹಿಂದಿರುಗಿ ಕೊಡಲು ಹೋದಾಗ ಅವರಿಂದ ಗೌರವಾದರ ಪಡೆದು ಧನ್ಯತಾ ಭಾವ ಅನುಭವಿಸುತ್ತಾನೆ. ನಮಸ್ಕರಿಸಿ  ಹೊರಡುವ ಸಮಯದಲ್ಲಿ ಮ್ಯಾನೇಜರ್ ಅವನ ಕೈಗೊಂದು ಕವರ್ ಕೊಟ್ಟು " ಮುಂದಿನ ಬಾಗಿಲದಿಂದ ಹೋಗು" ಎಂಬಲ್ಲಿಗೆ
ಕಥೆ ಮುಕ್ತಾಯವಾಗುತ್ತದೆ.ಆ ಕವರ್ ನಲ್ಲಿ ಹಿಂದೊಮ್ಮೆ ಕದ್ದು ಅಪಮಾನಿತ ನಾದ ಅಲ್ಬರ್ಟ್ ಕಮೂವಿನ " Out sider" ಪುಸ್ತಕದ ಪ್ರತಿಯೇ ಇರುತ್ತದೆ. 
    ‌‌‌‌          ' ಹಿಂದಿನ ಬಾಗಿಲು'/ ಮುಂದಿನ ಬಾಗಿಲುಗಳು ಅನಿರುದ್ಧನ ಜೀವನಸ್ತರದ ಸಾಂಕೇತಿಕ ಚಿನ್ಹೆಗಳಾಗಿ
ಮೂಡಿಬಂದಿವೆ. ಕಥೆಯುದ್ದಕ್ಕೂ ಬರುವ ವಿಭಿನ್ನ ಘಟನೆಗಳನ್ನು ಹೆಣೆದ ರೀತಿ ಲೇಖಕನ‌ ಚಾಕಚಕ್ಯತೆಗೆ ಸಾಕ್ಷಿ...
ಏಕೆಂದರೆ ಓದುಗನೊಬ್ಬ  ಓದಿನುದ್ದಕ್ಕೂ ಒಂದು ಗಳಿಗೆಗೂ Out sider ನಾಗಿ ಉಳಿಯಲು ಸಾಧ್ಯವಾಗದೇ ಕಥೆಯಗುಂಟ ತಾನೂ ಒಳಹೊಕ್ಕು ಪಾತ್ರಗಳ ಒಂದು ಭಾಗವೇ ಆಗಿಬಿಡುವಷ್ಟು ಏಕಾತ್ಮನಾಗುತ್ತಾನೆ ಅಂದರೆ ಅದು ಕಥೆಯ/ ಕಥೆಗಾರನ ಯಶಸ್ಸೇ ಸರಿ...






Wednesday 18 January 2023

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವೆಯಿತ್ತೇ.... ಗೆಳತಿ ||
ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೆ
ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೆ ಕಾಡಿತ್ತೆ
ಅಣ್ಣನ ಕೀಟಲೆ ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ || ೧ ||
ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೆ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು ಬೆಲ್ಲವ ಮೀರಿತ್ತೆ
ಸುಳ್ಳೇ ನೆರಿಗೆಯ ಚಿಮ್ಮುವ ನಡಿಗೆಗೆ ಬಳ್ಳಿಯ ಬೆಡಗಿತ್ತೆ || ೨ ||
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಕಾಣದ ಕೈಯಿ ಎಲ್ಲ ಕದ್ದು ಉಳಿಯಿತು ನೆನಪಷ್ಟೇ ||
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಎಲ್ಲಿ ಜಾರಿತೋ ಮನವು...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ...
ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ
ಎಲ್ಲಿ ಜಾರಿತೋ...
ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೇ ಮೀರಿತೋ, ಇಲ್ಲದಾಯಿತೋ...
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ತೊರೆದು ಹೋಗದಿರೋ ಜೋಗಿ....
ತೊರೆದು ಹೋಗದಿರೋ ಜೋಗಿ.
ಅಡಿಗೆರಗಿದ ಈ ದೀನಳ ಮರೆತು,
ಸಾಗುವೆ ಏಕೆ ವಿರಾಗಿ.
ಪ್ರೇಮ ಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆ ಎನಗೆ.
ನಿನ್ನ ವಿರಹದಲಿ ಉರಿದು ಹೋಗಲು
ಸಿದ್ಧಳಿರುವ ನನಗೆ.
ಹೂಡುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ,
ಉರಿ ಸೋಕಿಸು ಪ್ರಭುವೇ,
ಚಿತೆಗೆ ಪ್ರೀತಿಯಿಂದ ನೀನೇ.
ಉರಿದು ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ.
ಮೀರಾಪ್ರಭು ಗಿರಿಧರನೇ, ಜ್ಯೋತಿಯು
ಜ್ಯೋತಿಯ ಸೇರಲಿ ಹೀಗೆ.
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಬಂದೇ ಬರತಾವ ಕಾಲ...
ಬಂದೇ ಬರತಾವ ಕಾಲ
ಮಂದಾರ ಕನಸನು
ಕಂಡಂಥ ಮನಸನು
ಒಂದು ಮಾಡುವ ಸ್ನೇಹಜಾಲ
- ಬಂದೇ ಬರತಾವ ಕಾಲ
ಮಾಗಿಯ ಎದೆ ತೂರಿ
ಕೂಗಿತೊ ಕೋಗಿಲ,
ರಾಗದ ಚಂದಕೆ
ಬಾಗಿತೊ ಬನವೆಲ್ಲ,
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ
- ಬಂದೇ ಬರತಾವ ಕಾಲ
ಹುಣ್ಣಿಮೆ ಬಾನಿಂದ
ತಣ್ಣನೆ ಸವಿಹಾಲು
ಚೆಲ್ಲಿದೆ ಮೆಲ್ಲನೆ
ತೊಯಿಸಿದೆ ಬುವಿಯನು
ಮುಸುಕಿದೆ ಮಾಯೆ ಜಗವನು
ಬುವಿ ಬಾನು ಸೇರಿ ಹರಸ್ಯಾವ ಬಾಳನು
- ಬಂದೇ ಬರತಾವ ಕಾಲ
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಅಂಥಿಂಥ ಹೆಣ್ಣು ನೀನಲ್ಲ
ನಿನ್ನಂಥ ಹೆಣ್ಣು ಇನ್ನಿಲ್ಲ.
ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!
ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.
ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!
ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.
ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.
ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.
ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.
-- ಕೆ.ಎಸ್.ಎನ್

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.
ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.
ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.
ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.
-- ಕೆ.ಎಸ್.ಎನ್
ಇಂದು ಓದಿನ ಎರಡನೇ ದಿನ.'ಫಿಂಕ್ ಆ್ಯಾಂಡ್ ಬ್ಲೂ ' ಓದಿದೆ. Personification ಯಥೇಚ್ಛವಾಗಿ ಬಳಸಿಕೊಂಡ ಬರಹದ ಶೈಲಿ ಬಹಳೇ ಹಿಡಿಸಿತು.ನಮ್ಮ ಕಾಲೇಜು ದಿನಗಳಲ್ಲಿ
ಶುರುವಾದ ಶೈಲಿಯದು.ಆದರೆ ವ್ಯಕ್ತಿ ಗಳನ್ನು ಬಳಸಿಕೊಳ್ಳುತ್ತಿದ್ದುದೇ ಹೆಚ್ಚು. ನಿಮ್ಮ ಕಥೆಯಲ್ಲಿ ಅವರಲ್ಲದೇ ನದಿ/ಊರು/ ಟಾಕೀಜ/ರೆಸ್ಟೊರೆಂಟ್/ ಸರ್ವ ಸುಗಂಧಿ ಮರ/ಕಾಲ/ ಕಲರ್ಸ( ಪಿಂಕ್ ಆ್ಯಾಂಡ್ ಬ್ಲೂ)ಲಲಿತ ಮಹಲ್ ಪ್ಯಾಲೇಸ್ ಎಲ್ಲವೂ ಸಾಕ್ಷಿಯಾಗಿ ನಿಂತಿವೆ.ಎಲ್ಲಿಯೂ ಅತಿರೇಕವೆನಿಸದ/ ಹೇಳಬೇಕೆಂದ ಎಲ್ಲವನ್ನೂ ಕೆಲವೊಮ್ಮೆ
ಬಹಿರಂಗವಾಗಿ/ ಕೆಲವೊಮ್ಮೆ ಸೂಚ್ಯವಾಗಿ ಹೇಳಿ ಮುಗಿಸಿದ ನಿರಾಳವಾದ ಕಥಾಶೈಲಿ ಅತ್ಯಾಪ್ತವೆನಿ ಸಿತು.ಕಥೆಯ ಅನೂಹ್ಯವಾದ ಅಂತ್ಯ  
ಕಥೆ ಮುಗಿದಮೇಲೂ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.

"ಪ್ರೀತಿ ಅಂದರೆ ಕಾಡು ಹುಲ್ಲು...ಅದು ಬೀಜವಿಲ್ಲದೆಯೇ ಮೊಳೆಯುತ್ತದೆ/ ಬೆಳೆಯುತ್ತದೆ"- ಎಂಬ ಮಾತು ನಿಜ...

 

Tuesday 17 January 2023

       ‌‌    ಹಗಲು ರಾತ್ರಿಯೆನ್ನದೇ ಇರಬಹುದಾದ ತಮ್ಮದೇ ಕೆಲಸಗಳ ಒತ್ತಡದ ಹೊರತಾಗಿಯೂ ತಮ್ಮ  ಹೆಂಡತಿ/ ಮಕ್ಕಳಿಗಾಗಿ ದುಡಿಯುವ ವರು/ ಸದಾ ಒತ್ತಾಸೆಯಾಗಿ ನಿಲ್ಲುವವರು/ ಎಲ್ಲ ಕೆಲಸಗಳಲ್ಲಿ ಸಮಬಾಳು/ಸಮಪಾಲು ಎಂಬುವವರನ್ನು ಕಂಡಾಗ ಹಿಂದಿನ ಭಾವ ಏನಿರಬಹುದು?-ಎಂದು ನನಗೆ ಕುತೂಹಲವಾಯಿತು. ಉತ್ತರವಾಗಿ ಹೊಳೆದ possible answers...

* ನಾನು ಕೆಲಸವನ್ನು ತುಂಬಾ ಪ್ರೀತಿಸುತ್ತೇನೆ...

* ನನ್ನ ಪ್ರೀತಿ ಪಾತ್ರರಿಗೆ ಖುಶಿ/ಆರಾಮು ಕೊಡುವದು ನನಗೂ  ಖುಶಿ
ಕೊಡುತ್ತದೆ.

* ಇತರರಿಗೆ ಹೇಳಿ ಮಾಡಿಸುವದಕ್ಕಿಂತ
ಮಾಡುವದು ಸುಲಭ...

*ಅನಿವಾರ್ಯತೆ ಇದ್ದಾಗ ಮಾತ್ರ ಇತರರಿಗೆ ತೊಂದರೆ ಕೊಡಬೇಕು...

* Self help is the best help...

* ನನಗೆ ಬೇಕಾದ ರೀತಿಯಲ್ಲಿ ನಾನು ಮಾಡುವ ಸ್ವಾತಂತ್ರ್ಯ ನನಗಿರುತ್ತದೆ...

* ಬೇರೆಯವರು ನಾನಂದುಕೊಂಡಂತೆ
ಮಾಡುವ ಬಗ್ಗೆ ನನಗೆ ಸಂಶಯ...

* 'ನಮ್ಮವರಿಗೆ ನಾನು ಮಾಡಿದೆ'-
ಎಂಬ ಭಾವದ ಒಳಸುಖ...

*' ಪರಸ್ಪರರಿಗಾಗಿ ಒಳಗೊಳ್ಳುವಿಕೆ '-
ಆಪ್ತಭಾವ ಸ್ಫುರಿಸಿ ' ಧನಾತ್ಮಕ-ವಾತಾವರಣ- positive Vibes -
ಸೃಷ್ಟಿಸಲು ಸಹಕಾರಿ...

* ಮಕ್ಕಳು ದೊಡ್ಡವರಾಗಿ ಸ್ವತಂತ್ರರಾದ ಮೇಲೆ ಹೇಗೋ ಏನೋ...ಈ ಒಡನಾಟದ ಸುಖ ಸಿಕ್ಕಾಗಲೇ ದಕ್ಕಿಸಿಕೊಳ್ಳಬೇಕು ಎಂಬ ಸಹಜ ಭಾವ...

* ಗ್ರಹಸ್ಥ ಜೀವನ-ದ ಸಹಜೀವನವನ್ನು ಅಮೂಲ್ಯವಾಗಿಸಿ ಸಿಹಿ ನೆನಪುಗಳಿಗೆ
ಪರಿವರ್ತಿಸುವ ಪ್ರಾಮಾಣಿಕವಾದುದೊಂದು
ಪ್ರಯತ್ನ...

* ಇದಾವುದೂ ಮನಸ್ಸಿನಲ್ಲಿ/ ತಲೆಯಲ್ಲಿ ಇಲ್ಲದೆಯೇ ರಕ್ತಗತವಾಗಿ ಬಂದ (ಆ ಜನ್ಮ‌ರೂಢಿಗತ) ಕಾರ್ಯವೈಖರಿ...


ಚಿಟ್ಟೆಯನ್ನು ಅಟ್ಟಿಸಿಕೊಂಡು ಹೋಗಬೇಡ.ಒಂದು ಬಂಡೆಯ ಮೇಲೆ

* ಚಿಟ್ಟೆಯನ್ನು ಅಟ್ಟಿಸಿಕೊಂಡು ಓಡಬೇಡ.ಕಣ್ಮುಚ್ಚಿ ಒಂದು ಬಂಡೆಯಮೇಲೆ ಕುಳಿತು ಕೋ.ಅದೇ ಹುಡುಕಿಕೊಂಡು ಬರುತ್ತದೆ.

*ಕನಸುಗಳಿಗೆ ಬಹಳ ಶಕ್ತಿ ಇರುತ್ತದಂತೆ.
ತೀವ್ರವಾಗಿ ಬಯಸಿದರೆ ಲೋಕವೇ ಅದನ್ನು ಒದಗಿಸಿಕೊಡಲು ಸಹಾಯ ಮಾಡುತ್ತದೆ.

* Compliments ಗಳಿಗೆ ಪ್ರತಿಕ್ರಿಯಿಸುವದು ನನಗೆ ತಿಳಿಯದು,ಅನೇಕ ಸಲ ಅದು ಔಪಚಾರಿಕವೋ/ ಮುಖಸ್ತುತಿಯೋ/ ವ್ಯಂಗವೋ/ ನಿಜವೋ ಅರ್ಥವಾಗುವದಿಲ್ಲ...

* ರೂಮ್ ತುಂಬ ಚಿಟ್ಟೆಗಳು ಹಾರಿದವು...

* ಹುಣ್ಣಿಮೆಯ ರಾತ್ರಿಯಲ್ಲಿ ಅಲೆಗಳು ಬಂದು ತಮ್ಮನ್ನು ಮುಟ್ಟುವದು ಇಷ್ಟವೆಂದು ಮರಳು ಕಣಗಳು ಮಾತಾಡಿಕೊಂಡದ್ದು ಇಬ್ಬರಿಗೂ ಕೇಳಿಸಿತು...

* ಹಗಲು ಘನ ಆಕೃತಿಗಳಾಗುತ್ತಿದ್ದ ನಾವು  ರಾತ್ರಿಯಾದರೆ ದ್ರವವಾಗಿ ಹೋಗುತ್ತಿದ್ದೆವು...

* ನನ್ನ ಮಾತು ಕದಿಯುತ್ತಿದ್ದಾಳೆ,  'ಸುಂದರ ರಾಕ್ಷಸಿ'

* ಈ ಬಂಧವ( ಅಪ್ಪುಗೆಯ)ನ್ನು ಯಾರು  ಬಿಡುವವರು? ಯಾರು ಬಿಡಿಸಿಕೊಳ್ಳಬೇಕು...
 ‌‌      ‌ನಿಮ್ಮ ಅತ್ತರ್ -ಕಥಾ ಸಂಕಲನದ
ಮೊದಲ ಕಥೆಗೇ ಫಿದಾ ಆದೆ. ಅದೊಂದು ರೂಪಕಗಳಿಂದ ತುಂಬಿದ  ದೃಶ್ಯಕಾವ್ಯ ಅನಿಸಿತು.ಬಹಳ ದಿನಗಳಾಗಿತ್ತು, ಕೂತಪೆಟ್ಟಿಗೆ ಒಂದು ಕಥೆಯನ್ನು ಓದಿ ಮುಗಿಸಿದ್ದು.ಪುಸ್ತಕದ ಅಕ್ಷರಗಳು ಸ್ವಲ್ಪ ಮಟ್ಟಿಗೆ ಚಿಕ್ಕ  ಗಾತ್ರದವು ಇವೆ.ನನ್ನ ಅಶಕ್ತ ಕಣ್ಣುಗಳು
ಮೊದಲು ಸಹಕರಿಸಲಿಲ್ಲ, ನೀರು ತುಂಬುತ್ತಿತ್ತು.ಆದರೆ ಕಥೆಯ ಸೆಳೆತ ಎಷ್ಟಿತ್ತು ಎಂದರೆ ನಾನೂ ನಡುವೆ ಬಿಡಲು ಸುತರಾಂ ಒಪ್ಪಲಿಲ್ಲ. ಕೆಲ ಸಾಲುಗಳನ್ನು ಮತ್ತೆ ಮತ್ತೆ ಓದಿದೆ. ತುಂಬ ಖುಶಿಯಾಯ್ತು. ದಿನಕ್ಕೊಂದೇ ಓದಿ ಅದರ ಸ್ವಾದ ಸುಖಿಸುವ ಮನಸ್ಸಿದೆ. ಕಳಿಸಿದ್ದಕ್ಕೆ ಧನ್ಯವಾದಗಳು. ಅನಿವಾರ್ಯವಾಗಿ ನಾನೀಗ ಓದಿನಲ್ಲಿ ತುಂಬಾನೇ choosy ಆಗಲೇ ಬೇಕಾಗಿದೆ. ಅಂಥದ್ದರಲ್ಲಿ ಈ ಪುಸ್ತಕದಂಥ ಆಯ್ಕೆ ಬೇರಿಲ್ಲ ಅನಿಸಿತು. ಸುಂದರ ಶೈಲಿ/ ಆಪ್ತ ವಿಷಯ/ಒಂದು ಸಲಕ್ಕೆ ಕೆಲವೇ ಪುಟಗಳ ಓದು/ ಅಷ್ಟೇ ಮಟ್ಟಕ್ಕೆ ಅರಗಿಸಿಕೊಳ್ಳುವಿಕೆ ಹಿತವೆನಿಸಿತು. ಹೀಗಾದರೂ ನನ್ನ ಓದು ಮತ್ತೊಮ್ಮೆ ನನಗೆ ಒಲಿಯಲಿ ಎಂಬ ಆಶೆ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...