Wednesday, 25 January 2023

" ತತ್ವ ಸಿಲುಕದೆಮ್ಮಯ ತರ್ಕಶಾಂಕುಶಕೆ"

        ೧೯೭೨ ರ ಅಕ್ಟೋಬರ್ ತಿಂಗಳು. ನಮ್ಮ ಮದುವೆಯಾಗಿ ಕೇವಲ ಎರಡೇ ವರ್ಷ. ನನ್ನವರಿಗೆ ಮೊದಲ ಬಾರಿ ಲಘು ಹೃದಯಾಘಾತ ವಾಗಿತ್ತು.ನಾನು ಆ ಶಬ್ದವನ್ನೇ ಅದುವರೆಗೂ ಕೇಳಿರಲಿಲ್ಲ. ನಮ್ಮದೊಂದು ಪುಟ್ಟ 
ಹಳ್ಳಿ. ಕೆಳ ಮಧ್ಯಮ ವರ್ಗದ ಕುಟುಂಬ.ದುಡಿತ ಅನಿವಾರ್ಯ. ಹೆಚ್ಚು ಕಡಿಮೆ ಎಲ್ಲರದೂ ಅದೇ ಬದುಕು. ಹೀಗಾಗಿ ಗಟ್ಟಿ ಜೀವಗಳು.ಎಂಬತ್ತು/ ತೊಂಬತ್ತು ಎಂದರೆ ಮಧ್ಯ ವಯಸ್ಸು ಎಂಬಂಥ ಚಟುವಟಿಕೆ. ಯಾರಾದರೂ ಏಕಾಏಕಿ ಹೋದರೆ " ಕಲ್ಲು ಗುಂಡಿನ ಹಾಗಿದ್ದ, ಒಂದು ದಿನ ಛಟ್ ಅಂತ ಸೀತವನಲ್ಲ, ಕೂತು ಕೂತಲ್ಲೇ ಹೋದ ಪುಣ್ಯಾತ್ಮ"- ಎಂಬಂಥ ಮಾಮೂಲು ಶರಾ. ಹೀಗಾಗಿ ನನಗೆ ಆ ಹೆಸರು ಹೆದರಿಸಲೇಯಿಲ್ಲ. ಕ್ರಮೇಣ ಅದರ ಗಂಭೀರತೆಯ ಅರಿವಾದಾಗಲೇ ಅನಾವಶ್ಯಕ ಅಂಜಿಕೆ ಶುರುವಾದದ್ದು. ಅವರು ಮನೆಗೆ ಬರುವದು ತಡವಾದರೆ/ ರವಿವಾರ ಹೆಚ್ಚು ಹೊತ್ತು
ಮಲಗಿದರೆ/ ಹೊರಗಿನಿಂದ ನಾನೇನಾದರೂ ಬಂದಾಗ ಮನೆ ಮುಂದೆ ನಾಲ್ಕು ಜನ ಹೆಚ್ಚು ಕಂಡರೆ
ಎದೆ ಝಲ್ ಎನ್ನಲು ಶುರುವಾದದ್ದು. ಅವರನ್ನು ಕಳೆದುಕೊಂಡದ್ದು ೧೯೮೩ ಅಕ್ಟೋಬರ್...ಸರಿಯಾಗಿ ನಲವತ್ತು ವರ್ಷಗಳ ಹಿಂದೆ.
             
          ಆಮೇಲೆ ಸದಾಕಾಲ ನನಗೆ ಅನಿಸುತ್ತಿದ್ದುದು ಒಂದೇ.ಈಗಿನಂತೆ
ಆಗ ವೈದ್ಯಕೀಯ ಸೌಲಭ್ಯಗಳು ಇದ್ದರೆ!
ನಮ್ಮ ಬಳಿ ಮುಂಬೈ / ಬೆಂಗಳೂರಿಗೆ ಹೋಗಿ ಚಿಕಿತ್ಸೆ ಮಾಡಿಸುವಷ್ಟು ದುಡ್ಡಿದ್ದರೆ ! ಸ್ವಲ್ಪ ಮೊದಲೇ ತಿಳಿದಿದ್ದರೆ. ಹಾಗಾಗಿದ್ದರೆ...ಹೀಗಾಗಿದ್ದರೆ...ಎಂದು. 
          ‌
                ಈಗ ಗೊತ್ತಾಗುತ್ತಿದೆ, ಏನಿದ್ದರೂ ಏನೂ ಆಗುತ್ತಿರಲಿಲ್ಲ, ಆಗುವದೇ ಆಗುತ್ತಿತ್ತು...ಅದೆಲ್ಲ ಕಾಲ ನಿರ್ಣಿತ.ಅದಕ್ಕೆ ಇಂದಿನ ವಿದ್ಯಮಾನ ಗಳೇ ಸಾಕ್ಷಿ...ಎಲ್ಲರಲ್ಲೂ ಸಾಕಷ್ಟು ದುಡ್ಡಿದೆ...ಮನುಷ್ಯನ ಹೃದಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ತೆರೆದ ಹೃದಯ ಚಿಕಿತ್ಸೆ  ಮಾಡುವಷ್ಟು ವಿಜ್ಞಾನ ಮುಂದುವರೆದಿದೆ...ಹೆಜ್ಜೆಗೊಂದು multi speciality hospitals ಕಾಣ ಸಿಗುತ್ತವೆ.
             ಆದರೂ ಹುಡುಗರು/ ಮುದುಕರು ಎನ್ನದೇ  ನಿಂತಲ್ಲೇ ಕುಸಿದು ಬೀಳುತ್ತಾರೆ.ಈಗ ಇದ್ದವರು ಕ್ಷಣವೊಂದು ಕಳೆಯುವದರಲ್ಲಿ  ಇಲ್ಲವಾಗುತ್ತಿದ್ದಾರೆ. Golden hour ದಲ್ಲೂ ಉಪಚಾರ ಫಲಪ್ರದವಾಗುತ್ತಿಲ್ಲ
" ಹೃದಯಾಘಾತಗಳನ್ನು ತಡೆಯುವದು ಹೇಗೆ ಎಂಬ ಬಗ್ಗೆ ಅಂತರ್ ರಾಷ್ಟೀಯ ಮಟ್ಟದಲ್ಲಿ ಉಪನ್ಯಾಸ ಕೊಡಬೇಕಾಗಿದ್ದವರು ಭಾಷಣದ ವೇಳೆಯಲ್ಲಿಯೇ/ ವೇದಿಕೆಯ ಮೇಲೆಯೇ ಇಲ್ಲವಾದ ಸುದ್ದಿಗಳನ್ನು ಓದುತ್ತಿದ್ದೇವೆ. ಪತ್ರಿಕೆಗಳಲ್ಲಿ/ ಫೋನುಗಳಲ್ಲಿ/ face book ನಲ್ಲಿ ಇಂಥವೇ ಸುದ್ದಿಗಳ ಸದ್ದು
ಹೆಚ್ಚಾಗುತ್ತಿವೆ.ಬದುಕಿನ ಶೈಲಿ/ ವಿಶ್ರಾಂತಿ ರಹಿತ ಜೀವನ/ ಸುಲಭ ಸಾಧ್ಯವಲ್ಲದ ಕುಟುಂಬದ ಬೆಂಬಲ/ 
ಹೆಚ್ಚುತ್ತಿರುವ ಮಹತ್ವಾಕಾಂಕ್ಷೆ  ಇಂಥ
ಹಲವಾರು ಕಾರಣಗಳೇನೇ ಕೊಡಲು ಇದ್ದರೂ ಅಂತಿಮ ಸತ್ಯ ಒಂದೇ...

" ನಾವು ' ಕೇವಲ‌' ಮನುಷ್ಯರು"-ಬದುಕಿನ ಜಟಕಾ ಬಂಡಿಯ ' ಸಾಹೇಬ ಬೇರೆಯೇ ಇದ್ದಾನೆ".

                
  
 

Wednesday, 18 January 2023

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವೆಯಿತ್ತೇ.... ಗೆಳತಿ ||
ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೆ
ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೆ ಕಾಡಿತ್ತೆ
ಅಣ್ಣನ ಕೀಟಲೆ ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ || ೧ ||
ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೆ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು ಬೆಲ್ಲವ ಮೀರಿತ್ತೆ
ಸುಳ್ಳೇ ನೆರಿಗೆಯ ಚಿಮ್ಮುವ ನಡಿಗೆಗೆ ಬಳ್ಳಿಯ ಬೆಡಗಿತ್ತೆ || ೨ ||
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಕಾಣದ ಕೈಯಿ ಎಲ್ಲ ಕದ್ದು ಉಳಿಯಿತು ನೆನಪಷ್ಟೇ ||
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಎಲ್ಲಿ ಜಾರಿತೋ ಮನವು...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ...
ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ
ಎಲ್ಲಿ ಜಾರಿತೋ...
ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೇ ಮೀರಿತೋ, ಇಲ್ಲದಾಯಿತೋ...
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ತೊರೆದು ಹೋಗದಿರೋ ಜೋಗಿ....
ತೊರೆದು ಹೋಗದಿರೋ ಜೋಗಿ.
ಅಡಿಗೆರಗಿದ ಈ ದೀನಳ ಮರೆತು,
ಸಾಗುವೆ ಏಕೆ ವಿರಾಗಿ.
ಪ್ರೇಮ ಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆ ಎನಗೆ.
ನಿನ್ನ ವಿರಹದಲಿ ಉರಿದು ಹೋಗಲು
ಸಿದ್ಧಳಿರುವ ನನಗೆ.
ಹೂಡುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ,
ಉರಿ ಸೋಕಿಸು ಪ್ರಭುವೇ,
ಚಿತೆಗೆ ಪ್ರೀತಿಯಿಂದ ನೀನೇ.
ಉರಿದು ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ.
ಮೀರಾಪ್ರಭು ಗಿರಿಧರನೇ, ಜ್ಯೋತಿಯು
ಜ್ಯೋತಿಯ ಸೇರಲಿ ಹೀಗೆ.
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಬಂದೇ ಬರತಾವ ಕಾಲ...
ಬಂದೇ ಬರತಾವ ಕಾಲ
ಮಂದಾರ ಕನಸನು
ಕಂಡಂಥ ಮನಸನು
ಒಂದು ಮಾಡುವ ಸ್ನೇಹಜಾಲ
- ಬಂದೇ ಬರತಾವ ಕಾಲ
ಮಾಗಿಯ ಎದೆ ತೂರಿ
ಕೂಗಿತೊ ಕೋಗಿಲ,
ರಾಗದ ಚಂದಕೆ
ಬಾಗಿತೊ ಬನವೆಲ್ಲ,
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ
- ಬಂದೇ ಬರತಾವ ಕಾಲ
ಹುಣ್ಣಿಮೆ ಬಾನಿಂದ
ತಣ್ಣನೆ ಸವಿಹಾಲು
ಚೆಲ್ಲಿದೆ ಮೆಲ್ಲನೆ
ತೊಯಿಸಿದೆ ಬುವಿಯನು
ಮುಸುಕಿದೆ ಮಾಯೆ ಜಗವನು
ಬುವಿ ಬಾನು ಸೇರಿ ಹರಸ್ಯಾವ ಬಾಳನು
- ಬಂದೇ ಬರತಾವ ಕಾಲ
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಅಂಥಿಂಥ ಹೆಣ್ಣು ನೀನಲ್ಲ
ನಿನ್ನಂಥ ಹೆಣ್ಣು ಇನ್ನಿಲ್ಲ.
ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!
ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.
ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!
ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.
ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.
ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.
ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.
-- ಕೆ.ಎಸ್.ಎನ್

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.
ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.
ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.
ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.
-- ಕೆ.ಎಸ್.ಎನ್

Chetu' s Khata...

Chetana Koulagi... 40000/-  15-8-26...