Tuesday 29 June 2021

BUY ONE...GET ONE FREE...

"ಒಂದು ಕೊಂಡರೆ ಇನ್ನೊಂದು ಉಚಿತ..."
Buy one... Get one free...
ಇದೊಂದು ಇತ್ತೀಚಿನ  ವ್ಯಾಪಾರ ತಂತ್ರ ಎಂಬುದು ಎಲ್ಲರಿಗೂ ಗೊತ್ತು. 

ಆದರೆ ನಿಜ ಜೀವನದಲ್ಲೂ ಇದು ಸುಳ್ಳಲ್ಲ. ಅನೇಕ ರೀತಿಯಲ್ಲಿ 'ಇದೇ ಸರಿ' 
ಎಂದು ಸಾಬೀತು ಆಗಿದೆ.

ಬೇಕಾದರೆ ಪರೀಕ್ಷಿಸಿ,

'ಸಿಟ್ಟು' ಮಾಡಿ 'ಕೊಳ್ಳಿ'  
acidity free.

ಹೊಟ್ಟೆಕಿಚ್ಚು ಪಟ್ಟು'ಕೊಳ್ಳಿ' :
ತಲೆಶೂಲೆ free.

ಇತರರ ಬಗ್ಗೆ, ತಿರಸ್ಕಾರ ಪಟ್ಟು'ಕೊಳ್ಳಿ,
ಅಲ್ಸರ್ free.

ಮಾನಸಿಕ ಒತ್ತಡ ದೊಂದಿಗೆ,
blood pressure free.

ಹಾಗೆಂದು ಗಾಬರಿಯಾಗಬೇಕಿಲ್ಲ.
ಇದರ ಇನ್ನೊಂದು ಮಗ್ಗಲೂ ಕೂಡ ಇದೆ.

It's about better buy:

ನಂಬಿಕೆ 'ಕೊಳ್ಳಿ',
ಗೆಳೆತನ free.

ವ್ಯಾಯಮದೊಂದಿಗೆ
ಆರೋಗ್ಯ free.

ಮಾನಸಿಕ ನೆಮ್ಮದಿ ಕೊಳ್ಳಿ, 
ಸಮೃದ್ಧಿ (prosperity) free.

ಪ್ರಾಮಾಣಿಕತೆ ಕೊಳ್ಳಿ, 
ಸುಖ ನಿದ್ರೆ free.

ಪ್ರೀತಿಯನ್ನು ಕೊಳ್ಳಿ,
ಬಯಸಿದ್ದೆಲ್ಲ free.

ಕಾರಣ ಸರಿಯಾದ ಜ್ಞಾನದಿಂದ ಸರಿಯಾದದ್ದನ್ನೇ  ಕೊಂಡು 
ಆರೋಗ್ಯ/ ನೆಮ್ಮದಿ (ಆನೆ) ಯ ಬದುಕು ನಮ್ಮದಾಗಿಸಿಕೊಳ್ಳೋಣ ❤️👍🙏

Saturday 26 June 2021

ಅವ್ವ...

ಅವ್ವ

ನೀನಂದುಕೊಂಡಂತೆ
ನೀನೇನೂ  
ಕಡಿಮೆಯಲ್ಲ...
ನಿನ್ನ ಮೇಲೆ ನಿನಗೆ
ಅಸಡ್ಡೆ ಸಲ್ಲ...

ನೀನಿದ್ದರೆ 
ಮಮತೆಯ ವೃಷ್ಟಿ..
ಬಿಸಿಬಿಸಿ ರೊಟ್ಟಿ...
ಪ್ರೀತಿಯು ಗಟ್ಟಿ...

ನೀನಿದ್ದರೆ
ಮನೆಗೆ ಮರಳುವ 
ಮನಸು..
ಬೇಕೆಂದುದನ್ನು
ಉಣ್ಣುವ 
ಕನಸು...

ನೀನಿದ್ದರೆ
ಸಂಬಂಧಗಳ 
ಬಂಧ...
ನೆರೆಹೊರೆಯವರು 
ಚಂದ...

ನೀನಿದ್ದರೆ 
ಹಬ್ಬ...
ದೀವಳಿಗೆಯ 
ದೀಪ..
ಹೋಳಿಯ 
ರಂಗು-ರೂಪ...

ನೀನಿದ್ದರೆ
ಬರುವವರಿಗೆ
ತೆರೆದ ಬಾಗಿಲು..
ಮಮತೆ ತುಂಬಿದ 
ಮುಗಿಲು...
ಪ್ರೀತಿಯ 
ಕಡಲು...

ನೀನಿಲ್ಲದೇನಿಲ್ಲ
ಆದರೆ 
 ನೀನಿರುವವರೆಗದು
ತಿಳಿಯುವದಿಲ್ಲ.....

( ಹಿಂದಿಯಿಂದ)

Monday 21 June 2021

ಹೀಗೊಂದು ಸುಂದರ ಸಂಜೆ...

ಹೀಗೊಂದು ಸುಂದರ  ಸಂಜೆ...

     ‌ ‌ ಇದು ಇಪ್ಪತ್ತು ವರ್ಷಕ್ಕೂ ಹಿಂದಿನ ಮಾತು. ನನಗಾಗ ಐವತ್ತೈದು ವರ್ಷ. ಹೈಸ್ಕೂಲಿನಲ್ಲಿಯೂ ಹಿರಿಯ ಶಿಕ್ಷಕಿ ಪಟ್ಟ. ಮನೆಯಲ್ಲಿಯೂ 'ಅಜ್ಜಿ'ಯಾಗಿ ಆಗಿತ್ತು.ಈ ಎಲ್ಲ ಕಾರ್ಯಭಾರದಿಂದ
ತಲೆಭಾರವೆನಿಸಿ, ಒಂಚೂರು ಬದಲಾವಣೆಗೆ ಹಪಹಪಿಸಿದಾಗ ಅದಕ್ಕೊಂದು ಪರಿಹಾರ ಭೂಮಿಕಾ ತಂಡದ " ಮಾಯಾಮೃಗ" ಧಾರಾವಾಹಿಯಿಂದ ಸಿಕ್ಕಿದ್ದು ನನ್ನ ಪುಣ್ಯವಿಶೇಷವೆಂದೇ ಹೇಳಬೇಕು. .ಆಕಾಶವೇ ಬೀಳಲಿ ಮೇಲೆ, ಭೂಮಿಯೇ ಬಾಯ್ಬಿಡಲೀ ಇಲ್ಲೇ, ನಾ ನಿನ್ನ ನೋಡದೇ ಬಿಡೆನು '-  ಅನ್ನುವಂತೆ , ಅದೂ ಒಂದು ವೃತವೇನೋ ಎನ್ನುವ ಹಾಗೆ ಟೀವಿಯ ಮುಂದೆ ಪ್ರತಿಷ್ಠಾಪಿತಳಾಗುತ್ತಿದ್ದೆ. ಎಲ್ಲ ವರ್ಗಗಳ ,ಎಲ್ಲ ಹಂತಗಳ , ಎಲ್ಲ ವಯೋಮಾನದವರ ,ಸಾಮಾನ್ಯವಾಗಿ ಎಲ್ಲ ರೀತಿಯ ಸಮಸ್ಯೆಗಳನ್ನು ಒಳಗೊಂಡ ಆ ಧಾರಾವಾಹಿ ನನ್ನೊಳಗೆ ಅದೆಷ್ಟು ಒಳಗೆ ಇಳಿದಿತ್ತೆಂದರೆ , ಕೊನೆಗೊಮ್ಮೆ ಮುಗಿದಾಗ ಏನೋ ಕಳೆದುಕೊಂಡ ಭಾವನೆ. ದಟ್ಟದೊಂದು ಮೌನ ಹಾಸಿ ಹೊದ್ದು ಕೊಂಡಂತೆ ಭಾಸವಾಗುತ್ತಿತ್ತು . ಯಾವುದೋ ಒಂದು
ಸಮಸ್ಯೆ ಕಾಡತೊಡಗಿದರೆ ಆ ಧಾರಾವಾಹಿಯಲ್ಲಿ ದಿಢೀರನೇ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ
ಸಮಾಧಾನ ಸಿಗುತ್ತದೆ ಎಂಬ ಭಾವ ನನ್ನದು.
              ಇಂಥದೊಂದು ಧಾರಾವಾಹಿ ಮತ್ತೊಮ್ಮೆ ನೋಡಲು ಸಿಗುವದಿದೆ ಎಂದಾಗ ನಾನು ಮಾಡಿದ ಮೊದಲ ಕೆಲಸ, ಗುರುತು-ಪರಿಚಯವಿದ್ದ ಎಲ್ಲರಿಗೂ ಅದರ link share ಮಾಡಿದ್ದು. ತಪ್ಪದೇ ನೋಡಲು ಆಗ್ರಹಿಸಿದ್ದು.

             ಇದು ಎರಡು ವಾರಗಳ ಹಿಂದಿನ ಮಾತು. ಆ  ಹತ್ತೂ ಎಪಿಸೋಡುಗಳನ್ನು ಮತ್ತೆ ಮತ್ತೆ ನೋಡಿದ್ದೇನೆ.ನೋಡಿದವರೊಂದಿಗೆ ಚರ್ಚಿಸಿಯಾಗಿದೆ.ಆಗಾಗ ಅದಕ್ಕೆ comments ಬರೆಯುವುದೂ ಉಂಟು.
ಆದರೆ ಕಳೆದ ವಾರ ನನಗೊಂದು pleasant surprise ಕಾದಿತ್ತು.' 'ಮಾಯಾಮೃಗ' ದಲ್ಲಿ ನಿಮಗೆ ಅತಿ ಮೆಚ್ಚುಗೆಯಾದ ಐದು ಅಂಶಗಳನ್ನು ಬರೆದು ಕಳಿಸಿ ಎಂಬ quiz ಗೆ ಎಂದಿನಂತೆ ಬರೆದು post ಮಾಡಿದ್ದೆ.
ಅದು ಉತ್ತಮ review ಎಂದು select ಆಗಿದೆ ಎಂದೂ, ವಾರಾಂತ್ಯದ online reunion  zoom  ಕಾರ್ಯಕ್ರಮದಲ್ಲಿ  ನಾವು ಭಾಗವಹಿಸಿ ನಿರ್ದೇಶಕರು/ ಪಾತ್ರಧಾರಿಗಳೊಂದಿಗೆ ಸಂವಾದದಲ್ಲಿ ಚರ್ಚಿಸುವ ಅವಕಾಶವಿದೆಯಂದೂ ತಿಳಿಸಲಾಗಿತ್ತು.

    ‌             ಓದಿದ ಕೂಡಲೇ ಹೇಗೆ    
ಪ್ರತಿಕ್ರಯಿಸಬೇಕೆಂದೇ ನನಗೆ
ಗೊಂದಲವಾಯಿತು.ಒಂದುಕಡೆ ಸಂಭ್ರಮ, ಇನ್ನೊಂದೆಡೆ  ದಿಗಿಲು. ನನಗೆ ಬರವಣಿಗೆ ಹೊಸದಲ್ಲ.ನೂರಾರು ರೆಡಿಯೋ ಕಾರ್ಯಕ್ರಮಗಳು, ಇಂಗ್ಲಿಷ್/ ಹಿಂದಿಯಿಂದ ಅನುವಾದಗಳು, ಒಂದೆರಡು ಪುಸ್ತಕಗಳನ್ನೂ ಬರೆದ ಅನುಭವಗಳೇನೊ ಇದೆ. ಪರಿಚಯದವರೊಂದಿಗೆ  ಮಾತಿಗೂ ಸೈ.ಆದರೆ  modern technology is definitely not my cup of tea. ಸರಿಹೊಂದದೇ ಇದದ್ದು ಮಾಡಲು ತುಂಬಾನೇ ಭಯ, ಅದೂ ಪ್ರತಿಷ್ಠಿತ ನಿರ್ದೇಶಕರು, ಜನಪ್ರಿಯ ಹಿರಿಯ ನಟರು, ವಾಗ್ಮಿಗಳು ಇದ್ದರಂತೂ ಇದ್ದಲ್ಲೇ ನಡುಕ ಶುರು. ಏನಾದರೂ ಅಚಾತುರ್ಯವಾದರೇ...
ಅಲ್ಲದ್ದು  ಘಟಿಸಿದರೇ...ಇಂಥವೇ ಅನುಮಾನಗಳ ಸರದಿ ನನ್ನ ನಡೆಯನ್ನು ಹಿಮ್ಮೆಟ್ಟಿಸುತ್ತವೆ. ಇದಕ್ಕೆ ಇವತ್ತು T.N Seetharam ಸರ್ ತುಂಬಾ ಚೆಂದದ ಕಾರಣ ಕೊಟ್ಟರು," ಗೌರವದಿಂದ ಹುಟ್ಟುವ ಭಯ", ಭಯದಿಂದ ಹುಟ್ಟುವ ಗೌರವ" ಎಂದು. ಇದಕ್ಕೂ ಚೆಂದದ ವಿವರಣೆ ನನಗೆ ದಕ್ಕಲಿಕ್ಕಿಲ್ಲ. ಖಂಡಿತಕ್ಕೂ  ಇದೇ ನಾನು ಭಾಗವಹಿಸದೇ ಇದ್ದುದಕ್ಕೆ ಕಾರಣ. ಇದು ಹದಿನಾರಾಣೆ ಸತ್ಯ. ಬಾಗಿಲಿಗೆ ಬಂದ ಅದೃಷ್ಟ ನಾನು ಬಳಸಿಕೊಳ್ಳಲು ಆಗಲಿಲ್ಲ. ಆ ಬಗ್ಗೆ ನನಗೆ ಪಶ್ಚಾತ್ತಾಪವಿದೆ.
                 ಆದರೆ ಒಂದು ಮಾತು.ನಾನದನ್ನು ಒಪ್ಪಿಕೊಂಡಿದ್ದರೆ, ಅದನ್ನು ನಿಭಾಯಿಸುವ ಒತ್ತಡದಲ್ಲಿ ಆ ಎಲ್ಲ ಇತರರ ಸ್ವಾರಸ್ಯಕರ, ಸ್ವಾನುಭವದ
ಮಾತುಗಳನ್ನು ಒಮ್ಮನಸ್ಸಿನಿಂದ
ನಿರಾಳವಾಗಿ ಆಸ್ವಾದಿಸುವ ಅವಕಾಶ ಬಹುಶಃ ಕಳೆದುಕೊಳ್ಳುವ ಸಾಧ್ಯತೆಯಿತ್ತು. ಮೊದಲೇ ಕಾರಣ ಹೇಳಿ team ನ ಒಪ್ಪಿಗೆ ಪಡೆದ ಕಾರಣಕ್ಕೆ ನಿಶ್ಚಿಂತಳಾಗಿ ಅಂಥ ಸಹಜ, ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಖುಶಿ ನನ್ನದು.

       ‌‌ ಹಿಂದೆಯೂ ನಾನದನ್ನು ಬಿಡದೇ ನೋಡಿದ್ದೆ.ಆದರೆ ಆಗಿನ ನನ್ನ ಮಾನಸಿಕ, ಬೌದ್ಧಿಕ, ಅನುಭವಕ್ಕೆ ನಿಲುಕಬಹುದಾದಷ್ಟು ಮಾತ್ರವೇ ಅರ್ಥವಾಗಿತ್ತು. ಈಗಿನ ನನ್ನ ಅನುಭವದ ವ್ಯಾಪ್ತಿಯ ವಿಸ್ತಾರದಲ್ಲಿ ಇನ್ನೂ ಹೆಚ್ಚು ಹೆಚ್ಚು  ವ್ಯಾಪಕವಾದ ರೀತಿಯಲ್ಲಿ ಧಾರಾವಾಹಿ ಬಿಚ್ಚಿ ಕೊಳ್ಳುತ್ತಿದೆ.ಆ ಕಾರಣಕ್ಕೆ ಅದು ಎಂದಿಗೂ ಹಳತಾಗುವದಿಲ್ಲ. ಅಂತೆಯೇ ಎಲ್ಲರೂ ನೋಡಿ ಆನಂದಿಸಲಿ ಎಂಬ ಕಾರಣಕ್ಕೆ ನಾನು ಎಲ್ಲರಿಗೂ ಅದನ್ನು ತಲುಪಿಸಲು
ಪ್ರಯತ್ನಿಸಿದ್ದು. ನಾನೂ ಹೊಸದೇ ಉತ್ಸಾಹದಿಂದ ಪ್ರತಿವಾರ ಅದನ್ನು ಕಾಯುತ್ತಿದ್ದುದು....ಕಾಯುತ್ತಲೇ ಇರುವುದು...
         ‌ 





Saturday 19 June 2021

ಹಾಗೇ ಸುಮ್ಮನೇ..
        
ಅದೊಂದು ಕಾಲ...ಇದೂ ಒಂದು ಕಾಲ....

            ಸುಮ್ಮನೇ ಫೇಸ್ ಬುಕ್ ನೋಡುತ್ತ ಕುಳಿತಿದ್ದೆ...ಅದೊಂದು ಪುಟ್ಟ ಪ್ರಪಂಚದಂತೆ ಕಂಡರೂ  ವ್ಯಾಪ್ತಿ  ದೊಡ್ಡದು...ವಿಕ್ರಮನ ಹೆಗಲನೇರಿದ ಬೇತಾಳ... ಇದಿಲ್ಲದಿದ್ದಾಗ ಹೇಗಿದ್ದೆವು? ಎಂದು ನನಗೆ ನಾನೇ ಕೇಳಿಕೊಂಡೆ..' ಹೆಚ್ಚು ಚನ್ನಾಗಿ" ಎಂದು ಉತ್ತರ ಬಂತು...internet ಬಳಕೆ ಒಂದು ಅತ್ಯದ್ಭುತ ಆವಿಷ್ಕಾರ..ಅದರಲ್ಲಿ  ಎರಡು ಮಾತಿಲ್ಲ...ಅದು  ಇಡಿ ಜಗತ್ತನ್ನೇ ಅಂಗೈಯಲ್ಲಿ ಸೆರೆ ಹಾಕಿದೆ...ಜಗತ್ತಿನ ಇಂಚಿಂಚು ಮಾಹಿತಿಯೂ ನಡೆದ ಸ್ಥಳದಷ್ಟೇ ಕ್ಷಿಪ್ರವಾಗಿ ಕಣ್ಣೆದುರು ತೆರೆದುಕೊಳ್ಳುತ್ತದೆ...ಆದರೆ ದೀಪದ ಬುಡದಲ್ಲೇ ಕತ್ತಲೆಯೂ ಉಂಟು...ಅದರ ಇನ್ನೊಂದು ಮುಖ ಅಷ್ಟೊಂದು ಆಕರ್ಷಕವಾಗಿರದೇ ಕರಾಳವಾಗಿದೆ...ಆದರೆ ಸಿಗರೇಟು ಪ್ಯಾಕ್ಮೇಲೆ ಚಂದ ಚಂದದ  ಸಿಗರೇಟು ತೋರಿಸಿ  " smoking is injurious to health" ಅನ್ನುವದನ್ನು ದುರ್ಬೀನು ಹಿಡಿದೇ ನೋಡುವಂತೆ 
(ಕಂಡೂ ಕಾಣದಂತೆ) ಕೊನೆಯಲ್ಲಿ ಬರೆದಿರುತ್ತಾರೆ....ಅದನ್ನು ಬೆನ್ನು ಹತ್ತಿ ನಮ್ಮ ಕ್ರಿಯಾಶಕ್ತಿ ಜಡವಾಗಿ ಕೈ ಕೊಡುತ್ತದೆ...ತಾಸುಗಟ್ಟಲೇ ಕುಳಿತೇ ಇರುವದರಿಂದ ಸೋಮಾರಿತನ ವೃದ್ಧಿಸುತ್ತಿದೆ...ಮನೆಯ ಜನರೊಂದಿಗೇನೇ ಸಂಪರ್ಕ,ಸಂವಹನ ಕಡಿಮೆಯಾಗುತ್ತಿದೆ..ಒಂದು ಫ್ಲೋರ್ದಿಂದ  ಇನ್ನೊಂದು ಫ್ಲೋರ್ಗೆ ಮಾತಿನ ಬದಲು ಸಂದೇಶಗಳು ರವಾನೆಯಾಗುವದೇ ಹೆಚ್ಚು.....ಮೆದುಳು ಚುರುಕಾದಷ್ಟೂ ಹೃದಯ ಮಿಡಿತ ಮಂದವಾಗುತ್ತದೆ...ಎಲ್ಲರೂ ಸುಖದ ಭ್ರಮೆಯಲ್ಲಿ ಬದುಕುತ್ತಿದ್ದಾರೆ...ಆದರೆ ಒಳಗೆಲ್ಲೋ ಎಲ್ಲವೂ ಸೋರಿಹೋದ ಹತಾಶೆ ಕಾಣುತ್ತಿದೆ..
ಇದೆಲ್ಲವೂ ಪರ್ಯಾಯವಾಗಿ fb ಯಲ್ಲಿ  ಪ್ರದರ್ಶಿತವಾಗುತ್ತಿರುವದು
ಗುಟ್ಟಾಗಿಯೇನೂ ಉಳಿದಿಲ್ಲ...ಜನರಲ್ಲಿ ಸಹನಶಕ್ತಿ ಕಡಿಮೆಯಾಗಿ
ಅಸಹನೆ,ಅಪನಂಬಿಕೆ,ಅವಿಶ್ವಾಸ,ಅಪರಿಹಾರ್ಯ ಸಮಸ್ಯೆಗಳು ತಲೆ ಎತ್ತುತ್ತಿವೆ...ಸಣ್ಣ ಸಣ್ಣ ವಿಷಯಗಳನ್ನು ಹಿಗ್ಗಿಸುವದು,ವಾದಗಳನ್ನು ಬೆಳೆಸುವದು,ಅನವಶ್ಯಕ ಅಪನಂಬಿಕೆಗಳು ಹೆಚ್ಚಾಗಿ ಉದ್ವೇಗದಲ್ಲಿ ಸಲ್ಲದ ನಿರ್ಣಯಕ್ಕೆ ಬಂದು ಮನಸ್ಸು ಕಹಿ ಮಾಡಿಕೊಳ್ಳುವದು ಹೆಚ್ಚಾಗಿದೆ..ಇವೆಲ್ಲ ಇಲ್ಲದ ಕಾಲಕ್ಕೆ ಎಲ್ಲವೂ ಸರಿಯಿತ್ತು ಎಂದೇನೂ ಅಲ್ಲ..ಆದರೆ ಹೆಚ್ಚು ಜಿದ್ದಿಗೆ ಬೀಳದೇ ಸ್ವಲ್ಪೇ ಹೊತ್ತಿನಲ್ಲಿ ಸರಿ ಪಡಿಸಿಕೊಳ್ಳುವ ತಾಳ್ಮೆಯಿತ್ತು..'ಕಹಿ' ಹೆಚ್ಚು ಹೊತ್ತು ಕಹಿಯಾಗಿಯೇ ಆಗ ಉಳಿಯುತ್ತಿರಲಿಲ್ಲ ಅನಿಸುತ್ತದೆ..
    ‌‌‌‌‌    ಅದೇ fb ನೋಡುತ್ತಿದ್ದೆ ಅಂದೆನಲ್ಲ...ಅದರಲ್ಲಿಯ ಕೆಲವು post ಗಳನ್ನು ನೋಡಿದಾಗ ಹೀಗೆಲ್ಲ ವಿಚಾರಬಂತು..ಬಾಲ್ಯದ ಅಮಾಯಕತೆ ಕಳೆದುಕೊಂಡು , ನಮ್ಮನ್ನು ನಾವೇ ಅರ್ಥೈಸಿಕೊಳ್ಳ ತೊಡಗಿದಾಗಿನ ಫಲಿತಾಂಶವಿದು...ಬಹುಶಃ ಎಲ್ಲರಿಗೂ ಒಮ್ಮಿಲ್ಲ ಒಮ್ಮೆ ಅನಿಸುವಂಥದ್ದೇ...
      ‌‌‌ಎರಡು ತಾಸಿನ ಹಿಂದೆ
ನಾನೊಂದು post ಹಾಕಿದ್ದೆ..,

_ಅವನು  ಬಸವ...
_ ಅವಳು ಕಮಲ...
_ಕಮಲ ಬಸವನ ತಂಗಿ....

                ಇಷ್ಟೇ ನಾನು ಬರೆದದ್ದು..ತಾಸೊಂದರಲ್ಲಿ ಅರವತ್ತರಷ್ಟು ಜನ ಆ ದಿನಗಳಿಗೆ ಹೋಗಿ ಆ ಇಡೀ ಪಾಠವನ್ನು,ಆ ಪಠ್ಯದ ಕವಿತೆಗಳನ್ನು ಹಾಕಿ ಅಂದಿನ ದಿನಗಳನ್ನು ಮರು ಜೀವಿಸಿದ್ದಾರೆ..ಮೂಲಾಕ್ಷರಗಳ ಕಲಿಕೆ ಮುಗಿದ ಮೇಲೆ ವಾಕ್ಯ ರಚನೆಗಳನ್ನು ಪರಿಚಯಿಸುವಾಗಿನ ಕನಿಷ್ಠ ಶಬ್ದ ಬಳಕೆಯ ವಾಕ್ಯಗಳು ಅವು..
ಅದರಲ್ಲಿ ಜಾಣತನವಿಲ್ಲ..
ಹೆಗ್ಗಳಿಕೆಯಿಲ್ಲ...ನೆನಪಿರಲೇ ಬೇಕೆಂಬ ಅಂಶಗಳಿಲ್ಲ..
ಆದರೆ ಅಮಾಯಕ ಬಾಲ್ಯದ ಮುಗ್ಧತೆಯಿದೆ..ಕಲಿಕೆಯ
ಜಂಭವಿದೆ...ಕಲಿತ ಆನಂದವಿದೆ...ಸುಂದರ ನೆನಪಿನ  ಭಂಡಾರವೇ ಇದೆ..ಅದಕ್ಕೊಂದು ಆತ್ಮೀಯ ಸಂವೇದನೆಯಿದೆ...ಅಂತೆಯೇ ಅರವತ್ತು/ ಎಪ್ಪತ್ತರ ವಯಸ್ಸಿನವರೂ ಚಿಕ್ಕವರಾಗಿ, ಬಾಲ್ಯಕ್ಕೆ ಮರಳಿ ಸ್ಪಂದಿಸಿದ್ದಾರೆ..ಸ್ಪಂದಿಸುತ್ತಲೇ ಇದ್ದಾರೆ...ಬಾಲ್ಯವೊಂದು golden era ಎಲ್ಲರ ಪಾಲಿಗೆ...
          ನಾವು ಎಷ್ಟೇ ದೊಡ್ಡವರಾಗಲೀ ,ಎಷ್ಟೇ ಮುಖವಾಡ ಧರಿಸಲೀ, ಅದು ಹೇಗೋ ಒಮ್ಮೊಮ್ಮೆ ತಂತಾನೇ ಅನಾವರಣ ವಾಗಿ ಗೊತ್ತಿಲ್ಲದೇ ಬತ್ತಲೆಯಾಗಿ ಬಿಡುತ್ತೇವೆ...ಹಾಗೆ ಮಾಡಿಸುವದೊಂದು ಶಕ್ತಿ  ಅದೆಲ್ಲೋ ಅದಮ್ಯವಾಗಿದ್ದು ಕಾಲ ಬಂದಾಗ ಹೊರಬರುತ್ತದೆ...
            ಒಟ್ಟಿನಲ್ಲಿ ಇದುವರೆಗಿನ ಬದುಕಿನಲ್ಲೊಂದು  ಸುತ್ತು ಹೋಗಿ ಬಂದಾಗ "ಮಾನಸಿಕ google search" ನಲ್ಲಿ 
ನನಗೆ ಅನಿಸಿದ ಭಾವನೆಗಳಿವು...ನನ್ನೊಡನೆ ಬಾಲ್ಯಕ್ಕೆ ಮರಳಿದ ಎಲ್ಲರಿಗೂ ಧನ್ಯವಾದಗಳು/ ಅಭಿನಂದನೆಗಳೂ ಸಹ..

Wednesday 16 June 2021

ತನ್ನಂತೆ ಪರರ ಬಗೆದೊಡೆ....

ತನ್ನಂತೆ ಪರರ ಬಗೆದೊಡೆ...

ಧಾರವಾಡದ  ಹೆಂಬ್ಲಿಿ  ಓಣಿಯ  ನಮ್ಮ ಮನೆ ಅತಿ ದೊಡ್ಡದು. ಅದಕ್ಕೆ ತಕ್ಕಂತೆ ಹಿತ್ತಲವೂ ಇತ್ತು. ನನಗೂ ಹೂ ಗಿಡಗಳ ಹುಚ್ಚು. ಹೀಗಾಗಿ ಎಲ್ಲ ರೀತಿಯ ಹೂಬಳ್ಳಿಗಳು, ಹೂವಿನ/ಹಣ್ಣಿನ ಗಿಡಗಳೂ ಇದ್ದವು. ನಿಂಬೆ, ಕರಿಬೇವು, ಹಸಿಮೆೆಣಸಿನಕಾಯಿ, ಪೇರಲ,   ಇನ್ನೂ
ಏನೇನೋ..." ಶ್ರೀಮತಿ, ಸ್ವಲ್ಪ ಎಣ್ಣೆ, ರವಾ ಇಟ್ಟುಬಿಡು.ಬಂದವರು ಉಪ್ಪಿಟ್ಟು
ಮಾಡಿಕೊಂಡು ತೋಟದಲ್ಲಿಯೇ
ತಿಂದು ಹೋಗುತ್ತಾರೆ" ಎಂದು ತಮಾಷೆಯಾಗಿ ಹೇಳುವವರೂ ಇದ್ದರು. 

       ಅನಿವಾರ್ಯವಾಗಿ ಬೆಂಗಳೂರಿಗೆ ಬಂದಮೇಲೂ ನನಗೇನೂ  ಹೆಚ್ಚು ವ್ಯತ್ಯಾಸವಾಗಲಿಲ್ಲ. ಏಕೆಂದರೆ  ನಾವು ಇಲ್ಲಿಯೂ ಅಪಾರ್ಟ್ಮೆಂಟ್ನಲ್ಲಿ  ಇರದೇ  ಸ್ವತಂತ್ರ ಮನೆಗಳಲ್ಲಿಯೇ
ಇದ್ದುದರಿಂದ ತೋಟದ ಸಂಸ್ಕೃತಿಗೆ
ಧಕ್ಕೆಯಾಗದಂತೆ ನಡೆದುಹೋಯಿತು. ನನ್ನನ್ನು ಹೊರತುಪಡಿಸಿ ಎಲ್ಲರೂ ಸದಾ busy ಇರುತ್ತಿದ್ದುದರಿಂದ ತೋಟದ ಚಿಕ್ಕ ಪುಟ್ಟ ಕೆಲಸಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ/ತ್ತಿದ್ದೇನೆ. ನನಗೆ ಮೀರಿದ್ದು ಇದ್ದರೆ ಮೆಂಟೇನನ್ಸ  ವಿಭಾಗದಿಂದ ತೋಟದ ಉಸ್ತುವಾರಿ ಮಾಡುವವರಿಗೆ ಹೇಳಿ ಮಾಡಿಸಿಕೊಳ್ಳಬೇಕು/ ಮಾಡಿಸಿಕೊಳ್ಳುತ್ತೇವೆ...

           ‌.      LOCKDOWN ಅವಧಿಯಲ್ಲಿ  ಹೊರಗಿನವರಿಗೆ
ಮನೆಯ ಒಳಗೆ ಪ್ರವೇಶ ಸಂಪೂರ್ಣ ನಿಷೇಧವಿದ್ದುದರಿಂದ ತೋಟದ ಕೆಲಸ ತುಂಬಾ ದಿನಗಳಿಂದ ಬಾಕಿ ಇತ್ತು. ನಿನ್ನೆಗೆ lockdown ನಿಯಮ  ಸಡಿಲಿಸಿದ್ದರಿಂದ ಕೆಲಸದವರೆಲ್ಲ ಹಾಜರಾದರು .ನಾನೂ mask ಹಾಕಿಕೊಂಡು ದೂರದಿಂದಲೇ ಅವರಿಗೆ guide ಮಾಡಲು ನಿಂತೆ,

 " ಎಲ್ಲ ಒಣಗಿನಿಂತ ಗಿಡಗಳನ್ನೂ ,ಇನ್ನು
ಚಿಗುರುವದಿಲ್ಲ ಅನಿಸುವ ಗಿಡಗಳನ್ನು ತೆಗೆದು ಬಿಡಿ, ಈಗ ಮಳೆಗಾಲ. ಬೇರೆ ಹಚ್ಚೋಣ. ಅವುಗಳ ಜಾಗ ಖಾಲಿಯಿಡಿ.
ದೊಡ್ಡ ಗಿಡಗಳಲ್ಲಿ ಯಾವುದೇ ಟೊಂಗೆ ಒಣಗಿ ಬಾಡಿದ್ದರೆ ಕತ್ತರಿಸಿಬಿಡಿ. ಒಟ್ಟಿನಲ್ಲಿ
ತೋಟ ಹಸಿರಾಗಿ ನಳನಳಿಸಬೇಕು, ಹಾಗಿರಲಿ. ಖಾಲಿ ಜಾಗದ ಮಣ್ಣು ಸಡಿಲಿಸಿ ಎರಡು ದಿನ ಮಳೆ ಬಾರದಿದ್ದರೆ ನೀರು ಹಾಕಿ ಮೆದು ಮಾಡಿ - ಹೊಸ ಗಿಡಗಳನ್ನು ತಂದು ನಡೋಣ,"-
ಮುಂತಾಗಿ ಸಲಹೆ ಕೊಟ್ಟು  ಎಲ್ಲ ಕಡೆ ಓಡಾಡುವ ಅವರ ಜೊತೆಗೆ  ಹೆಚ್ಚು ಕಾಲ ಇರುವುದು ಕ್ಷೇಮವಲ್ಲಾ ಅನಿಸಿ ಒಳಗೆ ಬಂದೆ.
‌‌           ಕೊನೆಗೊಮ್ಮೆ ಮತ್ತೆ  ಹೋಗಿ ನೋಡುವುದು ಇದ್ದುದರಿಂದ  ತಾತ್ಕಾಲಿಕ
ಕೆಲಸವೇನಾದರೂ ಇದ್ದದ್ದಾದರೆ ಮಾಡೋಣವೆಂದರೂ ಏಕೋ
ಮನಸ್ಸಾಗದೇ ಹಾಗೇ ಕುಳಿತೆ. ನಾನು ಅವರಿಗೆ ಹೇಳಿದ ಕೆಲಸಗಳನ್ನು ನೆನೆದು ಮತ್ತೇನಾದರೂ ಹೇಳಲುಂಟೇ ಎಂದು ನಿಧಾನವಾಗಿ ಯೋಚನೆ ಮಾಡತೊಡಗಿದಾಗ ಮನಸ್ಸಿನಲ್ಲಿ ಏನೋ ವಿಚಾರ ಬಂದು ಬೆಚ್ಚಿದೆ.

ಯಾರೋ ಒಬ್ಬರು, 

" ಈ ವಯಸ್ಸಾದ ಹಿರಿಯರಿಂದ ಏನೂ ಆಗುವುದಿಲ್ಲ,  ಸುಮ್ಮನೇ ಸಾಕುವುದು ಭಾರ, ಇವರಿಗೆ ಔಷಧೋಪಚಾರ ದಂಡ.
ಪ್ರಯೋಜನವಿಲ್ಲ, ಇಂಥವರಿಂದ ಮುಕ್ತರಾಗಲು ಏನು ಮಾಡಬೇಕು"-
ಎಂದು ಎಲ್ಲ ತರುಣ ಪೀಳಿಗೆ ಯೋಚಿಸತೊಡಗಿದರೆ ನಿಮ್ಮಂಥವರ ಗತಿ ಮುಂದೆ ಏನಾಗಬಹುದು? ಯೋಚಿಸಿದ್ದೀರಾ? " -ಎಂದು ಕೇಳಿದಂತೆ
ಭಾಸವಾಗಿ ವಿಷಣ್ಣಳಾದೆ. ಕಣ್ಣೆದುರು ಇತರರ/ ಮಕ್ಕಳ  ಅವಕೃಪೆಗೆ ಒಳಗಾಗಿ ಅಸಹಾಯಕರಾಗಿ ಸಾಲುಸಾಲಾಗಿ  ವೃದ್ಧರು ಕಾಣಿಸಿದಂತಾಗಿ , ಅವರನ್ನು ಒತ್ತಾಯದಿಂದ ಮನೆಯಿಂದ ಹೊರಡಿಸಿ ವೃದ್ಧಾಶ್ರಮಕ್ಕೆ ಸೇರಿಸಿ ಕೈತೊಳೆದು ಕೊಂಡಂತೆ  ಅನಿಸತೊಡಗಿ ತಲೆ ತಿರುಗಿದಂತಾಗ ತೊಡಗಿತು.

           ಒಣಗಿದ ಹಾಗೂ  ಹೂ - ಕಾಯಿಗಳನ್ನು ಬಿಡದ ಗಿಡಮರಗಳು ಹಿತ್ತಲಕ್ಕೆ, ನಮಗೆ, ಭಾರವೆನಿಸಿ  ಅವುಗಳನ್ನೆಲ್ಲ ಕಡಿದು ,ಟೊಂಗೆ ಕತ್ತರಿಸಿ ಒಗೆದು ಹೊಸದಕ್ಕೆ ದಾರಿಮಾಡುವದಕ್ಕೂ ಮೇಲಿನ ವಿಚಾರಕ್ಕೂ ವ್ಯತ್ಯಾಸವೇ ಅನಿಸಲಿಲ್ಲ.
ಎಲ್ಲೋ ಮನದಲ್ಲಿ ಕಳಮಳ/ ಸಂಕಟ.
ಕೂಡಲೇ ಹೊರಹೋಗಿ ಅವರಿಗೆ ಹೇಳಿದೆ,  
             " ಒಣಗಿದ ಯಾವುದನ್ನೂ ಕಡಿಯಲು ಹೋಗಬೇಡಿ, ಸ್ವಲ್ಪ ದಿನ ಕಾಯೋಣ,  ತಾನೇ ಕಳಚಿ ಬಿದ್ದಾಗ ಮುಂದಿನದು ನೋಡೋಣ.ಉಳಿದ ಭಾಗ clean ಮಾಡಿಬಿಡಿ ಸಾಕು."

           ‌ಕೆಲಸದ ಬಗ್ಗೆ ಜೋರು ದನಿಯಲ್ಲಿ  ಇಷ್ಟುದ್ದ ಪಟ್ಟಿ ಕೊಟ್ಟ ಇವರಿಗೆ ಇಷ್ಟರಲ್ಲಿ  ಏನಾಯಿತು? ಎಂದು ನನ್ನನ್ನೇ ನೋಡುತ್ತಾ ನಿಂತಿದ್ದ ಕೆಲಸದವರ ಕಣ್ತಪ್ಪಿಸಿ ಒಳಗೆ ಜಾರಿಕೊಂಡೆ...

                ನನ್ನ ಈ ನಡೆಗೆ  ಕಾರಣ, ನಿಜವಾದ  ಪರಿಸರ ಪ್ರೀತಿಯೋ, ಅಥವಾ
ಅದರೊಳಗಡಗಿದ ನನ್ನದೇ ಮನದ ಭೀತಿಯೋ ಇನ್ನೂ ಸ್ಪಷ್ಟವಾಗಿಲ್ಲ.




                  

Tuesday 15 June 2021

ಬದುಕು ಬದಲಿಸಬಹುದು...

ಹುಟ್ಟು 'ಹಬ್ಬ'ವಾಗಬಹುದಿತ್ತು,
ಬದುಕು 'ಕಬ್ಬ'ವಾಗಬಹುದಿತ್ತು,
ಅದರ ಸಂಗದಲಿ ಸುಖವಿತ್ತು,
ದುಃಖದಿಂದ ಬಹುದೂರ
ನನ್ನ ಮುಖವಿತ್ತು,

ಇಜ್ಜಲೊಲೆಯ ಕೆಂಡದಲ್ಲಿ
ಬಿಸಿಬಿಸಿ ಚಹಾ/ಕಾಫಿಯಿತ್ತು,
ಯಾವುದು, ಎಷ್ಟು ಕುಡಿದರೂ 
ಮಾಫಿ ಇತ್ತು...

ಪುಟ್ಟ ಪುಟ್ಟ ಖುಶಿ- ಗಳಿಗೂ 
ರೆಕ್ಕೆ ಗಳಿದ್ದವು...
ಅಲ್ಲಿ,ಇಲ್ಲಿ ಇದ್ದ ಚಿಂತೆಗಳೂ ಬೇರೆಯವರ ತೆಕ್ಕೆಗಳಲ್ಲಿದ್ದವು...

ಹಕ್ಕಿಗಳ ಕೊರಳುಗಳಲ್ಲಿ
ಹಾಡುಗಳಿದ್ದವು...
ಎಲ್ಲರಿಗೂ ತಮ್ಮವೇ ಆದ
'ಪಾಡು'ಗಳಿದ್ದವು..

ಇದ್ದುದೆಲ್ಲವ ಮರೆತು
ಬಿಡಬೇಕಿರಲಿಲ್ಲ...
ಇಲ್ಲದಿರುವುದಕ್ಕೆ
ತುಡಿಯಬೇಕಿರಲಿಲ್ಲ...
ವಿಷಾದ ಗೀತೆಗಳಿಗೆ
ತಲೆ ಕೆಡಿಸಿಕೊಳ್ಳ
ಬೇಕಿರಲಿಲ್ಲ...

ಬದುಕು ಎಲ್ಲರನ್ನೂ, 
ಯಾವಾಗಲೂ ಬಡಿಯುವದಿಲ್ಲ...
ಧೂಳೆಬ್ಬಿಸಿ ಹಾರುವ
ಚಿಂತೆಗಳನ್ನು ವಿನಾಕಾರಣ
ಹಿಡಿಯುವುದಿಲ್ಲ...

Sunday 13 June 2021

ನಿಂಗಮ್ಮ ಹಾಗೂ ಉದ್ದ ಕೂದಲು...

" ‌‌ಏ! ಯವ್ವಾ, ಈ ನನ್ನ ಕೂದಲು ಉದುರಿ ಬಿದ್ದು ಹೋಗೊಕಿಷ್ಟು  ಏನರ ಔಸ್ದಿ ಹೇಳಬೇ, ಸಾಕಾಗಿ ಹೋಗೇತಿ ನಂಗ" - ನಿಂಗಮ್ಮನ ದಿನನಿತ್ಯದ ಅಳಲು ಇದು.

ನಿಂಗಮ್ಮ ಎಪ್ಪತ್ತರ ದಶಕದಲ್ಲಿ ನಮ್ಮ ಧಾರವಾಡದ ಹೆಂಬ್ಲಿ ಓಣಿಯ ನಮ್ಮನೆಯ ಕೆಲಸದಾಳು. ತುಂಬಾ ಚೆಲುವೆ ಇದ್ದಿರಬೇಕು ಯೌವನದ ದಿನಗಳಲ್ಲಿ. ಕೆಂಪು ಬಣ್ಣ, ಚೂಪು ಮೂಗು, ನೀಳವಾದ ಮೈಕಟ್ಟು, ಆಗಲೂ ಇತ್ತು ಅವಳಿಗೆ. ಅರವತ್ತು ವರ್ಷಗಳಿರಬೇಕು. ಅದೂ ಅವಳಿಗೆ ಗೊತ್ತಿಲ್ಲ. "ನಿಂಗೆಷ್ಟು ವರ್ಷಗಳು ನಿಂಗಮ್ಮ?" ಅಂದರೆ "ಯಾರಿಗೆ ಗೊತ್ತsss ನನ್ನವ್ವಾ, ನಾ ಹುಟ್ಟಿದಾಗ ಆ ಹುಣಚೀಮರ ಈಟಿತ್ತಂತ ನೋಡು"- ಇದು ಅವಳ ಉತ್ತರ, ಜೊತೆಗೆ ಒಂದು ಅಳತೆಯಲ್ಲಿ ಅದರ ಎತ್ತರದ ಕೈತೋರಿಸುವದು. ಅಲ್ಲಿಗೆ ವಯಸ್ಸು ಕೇಳಿದವರು ಹುಣಶಿಮರದ ಹುಟ್ಟು, ಬೆಳವಣಿಗೆಯ ಲೆಕ್ಕ ಹಾಕಿಕೊಂಡು ಅವಳ ವಯಸ್ಸು ಅಂದಾಜು ಮಾಡಿಕೊಳ್ಳಬೇಕು.😂

              ನಿಂಗಮ್ಮ ಒಂದು ರೀತಿಯಲ್ಲಿ  ಸಂಸಾರವಿದ್ದ ಸನ್ಯಾಸಿನಿ. ಗಂಡನಿಲ್ಲದ ಅನಾಥೆಯಾದರೂ  ತಂಗಿಯ ಮಗನನ್ನು
ಸಾಕಿಕೊಂಡಿದ್ದಳು. ಅವನೋ ಹುಟ್ಟು ಸೋಮಾರಿ, ಅವನ ಸಂಸಾರವೂ ಇವಳದೇ ಹೆಗಲಿಗೆ. ಹೀಗಾಗಿ ದುಡಿತ ಈ ವಯಸ್ಸಿನಲ್ಲಿಯೂ ಬೆನ್ನು ಬಿಡದಾಗಿತ್ತು ಅವಳಿಗೆ.

       ಒಂದೇ ಓಣಿಯಲ್ಲಿ ಕೆಲವು ಮನೆಗಳ  ಕೆಲಸ  ಮಾಡುತ್ತಿದ್ದರೂ ಸರಕಾರೀ ಅಧಿಕಾರಿಗಳ ಶಿಸ್ತು.( ಆಗಿನ ಕಾಲದಲ್ಲಿ) ಅವಳನ್ನು ನೋಡಿ ಗಡಿಯಾರ ಬದಲಿಸಬಹುದಾದಷ್ಟು ಸಮಯಪ್ರಜ್ಞೆ
ಅವಳದು. ಬೆಳಿಗ್ಗೆ ಏಳು/ ಮಧ್ಯಾನ್ಹದ ಒಂದು ಗಂಟೆಗೆ ಬಾಗಿಲಲ್ಲಿ ಪ್ರತ್ಯಕ್ಷ. ಒಂದೇ ಒಂದು ದಿನ ತಪ್ಪಿಸಿಕೊಳ್ಳುವವಳಲ್ಲ.
ಸದಾ ನಗುಮೊಗದ ಚೆಲುವೆ.' ಯವ್ವಾ!' ಎಂದರೆ ಆ ಆರ್ದ್ರತೆಗೆ ಎಂಥ ಮನಸ್ಸೂ ಕರಗಬೇಕು. ಬೆನ್ನು ಬಾಗಿಸಿಕೊಂಡು  ಭಿರಭಿರನೇ ನಡೆದರೆ ನಮ್ಮ ಆಲಸ್ಯಕ್ಕೆ ನಮಗೇ ನಾಚಿಕೆಯಾಗಬೇಕು.
          
           ಇಂತಿಪ್ಪ ನಿಂಗವ್ವಳಿಗೂ ಒಂದು ಚಿಂತೆ. ಅವಳ ಉದ್ದ ಕೂದಲದ್ದು. ಆ ವಯಸ್ಸಿನಲ್ಲೂ ಗಂಟು ಕಟ್ಟಿದರೆ ಅವಳ ತಲೆಯ ಆಕಾರವನ್ನು ಮೀರಿಸುತ್ತಿತ್ತು ಅದು.ಅದರ ಆರೈಕೆ, ಅವಳ ಹೊಟ್ಟೆಯ ಪಾಡಿನಲ್ಲಿ ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ಅವು ಸಿಕ್ಕು ಬೀಳುವುದು, ತಲೆಯಲ್ಲಿ ಹೇನುಗಳಾಗುವದು ಇದೆಲ್ಲದರ ಕಿರಿಕಿರಿ." ಎವ್ವಾ! ಎಲ್ಲಾರ್ನೂ ಕೇಳ್ದೆ, ಹೇಳಿದ್ದೆಲ್ಲ ಮಾಡ್ದೆ, ಯಾರೋ 
ಉಪ್ಪು ನೀರಾಗ ಕೂದಲಾ ತೊಳೀ ಅಂದ್ರು.ಅದೂ ಆತು. ಏನೂ ಉಪಯೋಗ ಆಗ್ಲೇಯಿಲ್ಲಬೇ, ಜೀವನ ರೋಸಿ ಹೋಗೇತಿ ನನಗ, ನಿಮ್ಮಂಥವರಿಗೆ ಇದ್ರ ಉಪಚಾರ ಕಾಣ್ತಾವು. ನಮ್ಮಂಥಾ ಪಾಪಿ/ ಪರದೇಶಿ ಗಳಿಗೆ ಯಾಕೆ ಬೇಕು?"- ಇದು ಅವಳ ನಿತ್ಯ ಸುಪ್ರಭಾತ.
ಅವಳ ದೃಷ್ಟಿಯಲ್ಲಿ ಕೂದಲಿನ ಆರೈಕೆಗೆ ಹಾಕುವ ಸಮಯದಲ್ಲಿ ಮತ್ತೆರಡು ಮನೆ ಕೆಲಸಮಾಡಿದರೆ ರೊಟ್ಟಿಗೆ ಕಾರಬ್ಯಾಳಿ ಜೊತೆ ಒಂದು ಪಲ್ಯಾನೂ ಮಾಡಿ ಉಣಲಿಕ್ಕಾದೀತು, ಎಂಬುದು ಅವಳ ಲೆಕ್ಕ. ಅದು 'ಬದುಕಿನ' ಲೆಕ್ಕವಾಗಿತ್ತು.
     ‌‌ 
ಇಂದು ರವಿವಾರ. ನನ್ನ ತಲೆಸ್ನಾನದ ದಿನ.ಕೂದಲು ತೊಳೆದುಕೊಂಡು ಹೊರಗೆ ಒಣಗಿಸುತ್ತ ನಿಂತಿದ್ದೆ.
ದಿನೇ ದಿನೇ ತೆಳ್ಳಗೆ/ ಬೆಳ್ಳಗೇ ಆಗುತ್ತ ನಡೆದಿರುವ ನನ್ನ ಕೂದಲನ್ನು ಕಂಡಾಗ ಆದ ನನ್ನ ಚಡಪಡಿಕೆ, ನನ್ನನ್ನು ಐವತ್ತು ವರ್ಷಗಳ ಹಿಂದಿನ ನಿಂಗವ್ವಳ ಚಡಪಡಿಕೆಗೆ ಕೊಂಡೊಯ್ದು ಕಾಡಿದ್ದು ಹೀಗೇ...

#Sundaysnacks.

ಚಿತ್ರ ಕೃಪೆ: ಗೂಗಲ್.

Monday 7 June 2021

ಅಮ್ಮನ ಮನೆ...

ಆ ಮನೆಯ  ತೊರೆದು,
ಈ ಮನೆಯ ಪೊರೆದು,
ವರ್ಷಗಳೇ ಕಳೆದವು...
ಯಾಕೋ ದಿನಗಳೆದಂತೆ 
ಮರಮರಳಿ ನೆನಪುಗಳೇ 
ಬೆಳೆದವು...

ಹೊತ್ತೇರಿದಂತೆ ದಿನವೂ
ಕಿವಿಯಲ್ಲಿ ಅಮ್ಮನ ಇನಿದನಿ...
ಅವಳ ಅಡಿಗೆಯ ಘಮಲು...
ಆ ಗೌಜು, ಗದ್ದಲ ,ನಗು,
ಕೇಕೆಗಳ ಅಮಲು...

ಅಪ್ಪ ಬಂದನೋ 
ಚಹಾದ ಹಾವಳಿ...
ಆ ದಿನದ ದಿನಚರಿ 
ಒಪ್ಪಿಸಲು ಪಾಳಿ...
ಬಂಧು ಬಾಂಧವರ 
ನಿಲ್ಲದ ಭೇಟಿ...
ಮಾತು, ಹರಟೆಗಳೋ 
ಎಲ್ಲ ಭಾಷೆ, ಗಡಿಗಳ ದಾಟಿ...

ಕಳೆದ ದಿನಗಳೀಗ 
ಬರಿ  ಕನಸುಗಳು...
ಮನದಲ್ಲಿ ಅಮ್ಮನವೇ 
ನೆನಹುಗಳು...
ಅವಳ ಮಾತುಗಳನ್ನು
ಇಂದಿಗೂ ಪಾಲಿಸುತ್ತೇನೆ.
ನನ್ನ ದುಃಖ ನುಂಗಿ
ಇತರರ ಲಾಲಿಸುತ್ತೇನೆ...

ಒಮ್ಮೊಮ್ಮೆ ಹಂಬಲಿಸುತ್ತೇನೆ...
ಸಂಜೆಯಾಗದಿರಲಿ,
ಇಲ್ಲವೇ...
ಅಮ್ಮನ ಮನೆಯೇ
ನೆನಪಾಗದಿರಲಿ...

Thursday 3 June 2021

ಮಕ್ಕಳು-(ಕವಿತೆ)

ಮಕ್ಕಳು...

ನಿಮ್ಮ ಮಕ್ಕಳು ನಿಮ್ಮವಲ್ಲ...
ನಿಮ್ಮ 'ಬಯಕೆ'ಯ ಕೂಸುಗಳು...
ನಿಮ್ಮ ಮುಖಾಂತರ ಬಂದಿರಬಹುದು...
ನಿಮಗಾಗಿಯೇ ಅಲ್ಲ,
ನಿಮ್ಮ ಜೊತೆಗಿರಬಹುದು, 
ಆದರೂ ನಿಮ್ಮವರಲ್ಲ.

ಅವರಿಗೆ ನಿಮ್ಮ ಪ್ರೀತಿ ಕೊಡಬಲ್ಲಿರಿ...
ನಿಮ್ಮ ಯೋಚನೆಗಳನ್ನಲ್ಲ...
ಅವರಿಗೆ ತಮ್ಮವೇ ವಿಚಾರಗಳುಂಟು.
ನೀವವರ ಶರೀರಗಳಿಗೆ ಆಸರೆ ಕೊಡಬಲ್ಲಿರಿ...ಮನಸ್ಸುಗಳಿಗಲ್ಲ.
ಅವರ ಆತ್ಮ/ ಮನಸ್ಸುಗಳು 
ಅವರ 'ನಾಳೆ' ಗಳಲ್ಲಿವೆ...

ನೀವು ತಪ್ಪಿಯೂ ಕನಸಿನಲ್ಲಿಯೂ
ಅವುಗಳನ್ನು ಮುಟ್ಟಲಾರಿರಿ.
ಅವರಂತೆ ನಿಮಗೆ ಆಗಬೇಕೆನಿಸುವಷ್ಟು
ಚಂದದ ಬದುಕು ಅವರದಾಗಬಹುದು.
ಬದುಕೆಂದೂ ಹಿಮ್ಮುಖವಾಗಿ ಹರಿಯಲಾರದು, 
ಅದಕ್ಕೆ  ಕಿಂಚಿತ್ತೂ 'ನಿನ್ನೆ'ಯ ಹಂಗಿಲ್ಲ...

ಮುಂದೆ ಚಿಮ್ಮುವ ಬಾಣಗಳಿಗೆ 
ನೀವು ಬರೀ 'ಬಿಲ್ಲು' ಮಾತ್ರ...
ನಿಮ್ಮ ಮಕ್ಕಳದು ಮುಂದಿರುವ ತಮ್ಮ ಗುರಿಯತ್ತ ನೆಟ್ಟ ನೋಟ, 
ತಮಗೆ  ಬೇಕಾದಂತೆ ನಿಮ್ಮನ್ನು 
ಬಾಗಿಸಿ ಆದಷ್ಟೂ ದೂರ
ತಮ್ಮ ಬಾಣ ಚಿಮ್ಮಿಸುವ ಆಶೆಯವರದು...

ಗುರಿಕಾರನ ಮರ್ಜಿಗೆ 
ಬಾಗುವದೊಂದೇ ನಿಮ್ಮ ಖುಶಿ...
ಆ ದೇವರಿಗೂ ತಾ ಬಿಡುವ ಬಾಣ 
ದೂರ ಹೋಗಲೇಬೇಕು ಎಂದು
ಇದ್ದಂತೆ, ಅದನ್ನು ಚಿಮ್ಮಿಸುವ ಬಿಲ್ಲೂ
ಗಟ್ಟಿಯಾಗಿರಬೇಕೆಂಬಾಸೆ...🙏🙏🙏

ಮೂಲ:ಖಲೀಲ್ ಗಿಬ್ರಾನ್...
ಕನ್ನಡಕ್ಕೆ: ಶ್ರೀಮತಿ, ಕೃಷ್ಣಾ ಕೌಲಗಿ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...