Monday, 25 December 2023

M Y MEDICAL KIT...

 A.
Emergency medicines...

*Tofisopam( toficalm)-50 mg.
30. (Relaxation+ anxiety free)

*Pantodac DSR 1-0-0 ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ.(Acute Acidity...)

*Cough syrup -Ascoril SF .
( Allergy cough)

*Ketorol- DT- 10 mg (toothache.)

B.
Regular prescription medicines

*1) Glycomet SR - 500 mg.- 60.
SUGAR PILLS.

2) Mixtard 30- penfills-INSULIN
A box - set of Five.

3) Telma AM - 40/5.( B.P. tablets)

4) Rozavel- 10 mg.( Blood thinner).

6) Mouth wash-Dentin 91.
7) METROHEX- Gum- gel...
8) Stolin- (Astringent...Gum Lotion)

9) Thyronorm-75 mg.( Thyroid).

10) Neurobion Forte.( General
Prescription for Nerves.).

11) sterile Lancets.

12) Blood testing strips.

13) ಹೊಟ್ಟೆಯುಬ್ಬರ- ಗ್ಯಾಸ್...

Tab. Sompraz 40 mg 1-0-1 (empty stomach)
Cap. Ganaton 50 mg 1-1-1 (before food)
Syp. Mucaine Gel 10 ml thrice a day before food 
All for 3 days

14 - 
COld-- cough- Allergies... ( Raju)
Tab. Abiways/ Pulmoclear N 1-0-1
Syp. Brozodex S/F 5ml thrice a day after food 
Tab. Allegra M 0-0-1
All after food 
For 5 Days

Thursday, 2 March 2023

ಮನದಾಳದ ಮಾತುಗಳು...
      ‌‌‌‌‌" ನಿಮ್ಮ ಪಲ್ಲಣ್ಣನ ಬಗ್ಗೆ ಒಂದು ಪುಸ್ತಕವನ್ನು ಮೊದಲು ಬರೆ. ಅವರ ಸಾಧನೆಗಳ ದಾಖಲೆಯಾಗಲೇಬೇಕು. ಅವು ಅನೇಕರಿಗೆ ಮುಂದೆ ದಾರಿದೀಪ ಗಳಾಗಬಹುದು, ಬದುಕಿನಲ್ಲಿ ಸ್ಫೂರ್ತಿ ಯಾಗಬಹುದು.ಛಲವೊಂದಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು-ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಹುದು- "ಎಂಬುದು ನಮ್ಮ ಪರಿಚಯದ ಹಲವಾರು ಜನರು, ಹಲವಾರು ಬಾರಿ ನನಗೆ ಹೇಳಿದ/ ಹೇಳುತ್ತಲೇ ಇದ್ದ ಮಾತು.
              ನಾನು ಹಾಗೆ ಮಾಡಲು ಹಿಂಜರಿದದ್ದಕ್ಕೆ ಹಲವಾರು  ಕಾರಣಗಳಿವೆ. ಮೊದಲನೇಯದಾಗಿ
ಸ್ವತಃ ಅವನಿಗೇ ಅದರ ಬಗ್ಗೆ ಆಸಕ್ತಿ ಯಿಲ್ಲ.ಏನೋ ಮುಜುಗರ.ಸಂಕೋಚ. ಅವನ ಮಟ್ಟಿಗೆ ತಾನು ಮಾಡಿದ್ದು ತನ್ನ  
ಮನಸ್ಸಿನ ಒತ್ತಾಸೆಗೊಂದು ಪ್ರಾಮಾಣಿಕ  ಪ್ರಯತ್ನ...ಎಂದೋ ಕಂಡ ಒಂದು ಕನಸಿನ ಸಾಕ್ಷಾತ್ಕಾರಕ್ಕೆ
ನಿಷ್ಠೆಯಿಂದ ದುಡಿದ ಫಲ. ಮಾಡಿದ್ದೇನೋ  ಹೌದು,ಆದರೆ ಮಾಡಬೇಕಾದದ್ದು ಬೆಟ್ಟದಷ್ಟಿದೆ.ಎಂಬ ಭಾವ. 
       ಎರಡನೇ ಕಾರಣವೆಂದರೆ ನಾನು ಅವನ ಬಗ್ಗೆ ಬರೆದರೆ ನಿಜವಾಗಿಯೂ ಅದಕ್ಕೆ ನ್ಯಾಯವನ್ನು ಸಲ್ಲಿಸಬಲ್ಲೆನೇ?
ಎಂಬುದು.ನನಗೂ / ಅವನಿಗೂ ಕೇವಲ ನಾಲ್ಕು ವರ್ಷಗಳ ಅಂತರ, ಇನ್ನೂ ನಾಲ್ಕು ತಿಂಗಳು ಕಡಿಮೆಯೇ...
ಏಳನೇ ಇಯತ್ತೆ ಮುಗಿಸಿ ಮುಂದಿನ ಓದಿಗೆ ರಾಣೆಬೆನ್ನೂರಿಗೆ ಅವನು ಹೋದಾಗ ನನಗಾಗಷ್ಟೇ ಎಂಟು ವರ್ಷಗಳಾಗಿರಬಹುದು. ಆಗಾಗ ಅವನು ಊರಿಗೆ ಬರುತ್ತಿದ್ದರೂ ನಮಗೆಂದು ಅವನು ದಕ್ಕಿದ್ದು ಅವನಿಗೆ
ನೌಕರಿ ಸಿಕ್ಕು ಧಾರವಾಡದಲ್ಲಿ ಮನೆ ಮಾಡಿದ ಮೇಲೆಯೇ...ಆಗಲೂ ತಂದೆಯ ಜವಾಬ್ದಾರಿಯನ್ನು ತನ್ನದೇ ಹೆಗಲಿಗೇರಿಸಿಕೊಂಡು ಸದಾ ಬದುಕಿನ ಹೋರಾಟ ನಡೆಸಿದ್ದ ಅವನ ಬಗ್ಗೆ
ಭಯ,ಗೌರವ ಸಾಕಷ್ಟು ಇದ್ದುದು ನಿಜವಾಗಿದ್ದರೂ ಮನಸ್ಸನ್ನು ಬಿಚ್ಚಿಟ್ಟು
ಹರಟಿ ನಿರಾಳವಾಗುವುದಕ್ಕೆ ವೇಳೆ/ ಆ
ರೀತಿಯ ಮನೆಯ ವಾತಾವರಣ ಎರಡೂ ಆ ಕಾಲದಲ್ಲಿ ಇರಲಿಲ್ಲ. ಅಂಥದರಲ್ಲಿ ಒಬ್ಬರ ಬಗ್ಗೆ ಏನನ್ನಾದರೂ ಬರೆಯುವಷ್ಟನ್ನು ನಾನು ಖಚಿತವಾಗಿ ತಿಳಿದುಕೊಂಡಿದ್ದೇನೆ ಎಂಬುದೇ ಉದ್ಧಟತನದ ಮಾತಾಗುವ
ಸಾಧ್ಯತೆಯೇ ಹೆಚ್ಚು.
     ‌    ‌‌   ಮೂರನೆಯದಾಗಿ ಪಲ್ಲಣ್ಣ ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ಅವನ ಸಾಹಿತ್ಯಾಸಕ್ತಿ ತೀವ್ರ.ಅವನ ಮಾತಿನ‌ ಆಳ/ ಅರ್ಥ/ ಗಳಿಗೆಗೊಮ್ಮೆ
ಉದಹರಿಸುವ ದೃಷ್ಟಾಂತಗಳು/ ಮಾತು ಮಾತಿಗೆ ಮಂಕು 
 ಕಗ್ಗಗಳು/ ಸಂಸ್ಕೃತ ಶ್ಲೋಕಗಳು/
ಓದಿದ- ಅನುಭವಿಸಿದ ಘಟನೆಗಳ 
ನೆನಪುಗಳು ,ಇವುಗಳನ್ನು ನೆನೆದರೆ
ಅವನೆದುರು ಬಾಯಿ ತೆರೆಯಲೂ ಆಗದೇ ಕೇವಲ‌ ಕೇಳುತ್ತಿರಬೇಕು ಎನಿಸಿದ್ದೇ ಹೆಚ್ಚು. ಹೀಗಾಗಿ 'ಅವನ‌ ಬಗ್ಗೆ ಬರೆಯಬಾರದೇಕೆ? ಎಂದು ಹಲವು ಬಾರಿ ಅನಿಸಿದರೂ  ಅದು ಸುಲಭವಾಗಿ ಕಾರ್ಯರೂಪಕ್ಕೆ ಬರಲೇಯಿಲ್ಲ.
               ನಾನು ನೌಕರಿಯಿಂದ‌ ನಿವೃತ್ತಳಾಗುವ ಹೊತ್ತಿಗೆ ಅವನ ಕನಸಿನ ಸಾಮ್ರಾಜ್ಯ ರೂಹು ಪಡೆದಾಗಿತ್ತು.ನಿವೃತ್ತಿಯ ನಂತರ ಧಾರವಾಡಕ್ಕೆ ಬಂದ ತಮ್ಮ ಸುಧೀಂದ್ರ ನ ನಿರಂತರ ಬೆಂಬಲ- ಸಹಕಾರದಿಂದ,
ತನ್ನ Software ನೌಕರಿ ಬಿಟ್ಟು ಹಂಚಿನಮನಿ ಕಾಲೇಜಿನ ಉಸ್ತುವಾರಿ
ಕೆಲಸಕ್ಕೆಂದೇ ಬಂದು ನಿಂತ ಮನೋಜನ ಸಹಾಯದ ಬೆಂಬಲದಿಂದ ಕಾಲೇಜು ತನ್ನ ರೆಕ್ಕೆ- ಪುಕ್ಕಗಳನ್ನು ಬಲಿಸಿಕೊಂಡು/ ಬೆಳಸಿಕೊಂಡು ಹೆಚ್ಚಿನ ಹಾರಾಟಕ್ಕೆ 
ಆಕಾಶದತ್ತ  ನೆಗೆಯುವ ಹಂತದಲ್ಲಿದ್ದು
ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
     ‌        ಆದರೆ ಇಷ್ಟನ್ನು ಸಾಧಿಸಲು
ಅವನು ಪಟ್ಟ ಪಾಡನ್ನೇ ಬರಹ ರೂಪದಲ್ಲಿ ಬರೆಯುವ ವಿಚಾರದ ಒತ್ತಡ ಸುರುವಾದಾಗಲೇ ನಾನು ನನ್ನೆರಡು ಪುಸ್ತಕಗಳನ್ನು ಬರೆದೆ. ಅದರಲ್ಲಿ ಅವನ ಬಗ್ಗೆಯೂ ಒಂದೆರಡು
ಲೇಖನಗಳನ್ನು ಸೇರಿಸಿದೆ, -ನನಗೆ ತಿಳಿದದ್ದು/ ತಿಳಿದಂತೆ. ಆದರೆ ಅದು ಅವನನ್ನು ಕುರಿತು ನನ್ನ ಬುದ್ಧಿಯ ಗ್ರಹಿಕೆಯಷ್ಟೇ ಹೊರತು ಅದರ ಹೊರತಾಗಿ ಇದ್ದದ್ದೇ ಹೆಚ್ಚು...ನಾವು ಮಹಾಸಾಗರದೆಡೆ ಮುಖ ಮಾಡಿ ನಿಂತರೂ ನಮಗೆ ದಕ್ಕುವದು ನಮ್ಮ ಬೊಗಸೆಯ ಅಳತೆಯಷ್ಟೇ...
            ಕೊನೆಗೆ ಒಂದೇ ಮಾತು... ಹೂವಿನ ಪರಿಮಳ/ ಶ್ರೀಗಂಧದ  
ಸುವಾಸನೆಗಳಿಗೆ ಯಾವುದೇ/ ಯಾರದೇ ಹಂಗಿಲ್ಲ.ಅವು ತಂತಾನೇ ಹರಡುತ್ತವೆ.ಹಾಗೆಯೇ ಸತ್ಕಾರ್ಯ ಗಳೂ ಸಹ.ನಮ್ಮ ಅಣ್ಣ ಏನೆಂದು
ನಾವು ಹೇಳಬೇಕಾಗಿಲ್ಲ, ಅವನ ಸಾಧನೆಗಳೇ ಆ ಕೆಲಸ ಮಾಡುತ್ತವೆ. ಅವನಿಂದ ಉಪಕೃತರಾದವರ ಸಂಖ್ಯೆ
ದೊಡ್ಡದು.ಅವರೆಲ್ಲರ ಶುದ್ಧ ಮನಗಳ ಹಾರೈಕೆ ಅವನ ಬೆಂಬಲಕ್ಕಿದೆ.ಎಂಬತ್ತರ
ವಯಸ್ಸಿನಲ್ಲೂ/ ತನ್ನದೇ  ಅನಾರೋಗ್ಯದ ಸಮಸ್ಯೆಗಳ ಮಧ್ಯದಲ್ಲಿಯೂ ಎದೆಗುಂದದೇ ಸದಾಕಾಲ ಕಾಲೇಜು/ ಮಕ್ಕಳು ಎಂದೇ
ಜಪಿಸುವ ಶುದ್ಧಾತ್ಮವನ್ನು ಭಗವಂತನೂ ಬೆಂಬಲಿಸುತ್ತಿದ್ದಾನೆ.
ಅವನಿಗೆ ಇನ್ನಿಷ್ಟು/ ಮತ್ತಷ್ಟು/ ಮಗದಷ್ಟು ಸಾಧಿಸಲು ಬೇಕಾದ ಆಯುರಾರೋಗ್ಯ/ ಅಗಾಧ ಶಕ್ತಿಯನ್ನು
ಆ ಸಾತೇನಹಳ್ಳಿಯ  ಶಾಂತೇಶ ಕರುಣಿಸಲೆಂಬುದೇ ನಮ್ಮೆಲ್ಲರ ಮನದ 
ಏಕೈಕ ಹಾರೈಕೆ...     ‌
    
     ‌        
               

     
                 

Wednesday, 22 February 2023

ಹಾಗೇ ಸುಮ್ಮನೇ...

       ೧೯೫೦ ರ ದಶಕ...ಆಗ ನಾನು ಇನ್ನೂ ಐದು  ವರ್ಷಗಳೂ ತುಂಬದ ಹುಡುಗಿ. ಸುತ್ತಮುತ್ತಲೂ ನಡೆಯುವ ದನ್ನು ಕಣ್ಣರಳಿಸಿ ನೋಡುವದು ಬಿಟ್ಟರೆ ಬೇರೇನೂ ಕೆಲಸವಿಲ್ಲದ ದಿನಗಳವು...

        ಆಗಿನ ಕಾಲದಲ್ಲಿ ಹಿತ್ತಾಳೆ, ತಾಮ್ರ, ಅಲ್ಯೂಮಿನಿಯಮ್ ಬಳಕೆ ಮಾತ್ರ ಇದ್ದ ಕಾಲ..ಕೆಲವರುಷ ಬಳಸಿದ ನಂತರ ತೆಳ್ಳಗಾಗಿ ಅಲ್ಲಲ್ಲಿ ತಳದಲ್ಲಿ ತೂತುಗಳು ಬಿದ್ದು ಬಳಕೆಗೆ ಬಾರದ ಅಲ್ಯೂಮಿನಿಯಮ್ ಪಾತ್ರೆಗಳು. ನಮ್ಮಮ್ಮ B.E. degree ಪಡೆಯದ ಇಂಜಿನಿಯರ್. ಅವುಗಳನ್ನು ಬೋರಲು ಹಾಕಿ ಸಾಲುಸಾಲಾಗಿ ಮೊಳೆಯಿಂದ ಅಂಥವೇ ಮತ್ತಷ್ಟು ತೂತು ಹೊಡೆದು ಸೊಪ್ಪು,ಕಾಳು ಬಸಿಯಲು,ತೊಳೆದು,ಹೆಚ್ಚಿದ ಸೊಪ್ಪು ಹಾಕಿ ಬೇಳೆಯ ಕೊಳಗದ ಮೇಲಿಟ್ಟು ಉಗಿಯಮೇಲೆ ಬೇಯಿಸಿ ವೇಳೆ, ಇಂಧನ ಎರಡೂ ಉಳಿಸಲು ಬಳಸುತ್ತಿದ್ದಳು.

          ದೀಪಾವಳಿಯಲ್ಲಿ ನಾವೆಲ್ಲ ಹಾರಿಸಿ ಬೀಸಿ ಒಗೆದ ಚುಚೇಂದ್ರಿಯ ಕಡ್ಡಿಗಳನ್ನಾರಿಸಿ,ಕಲ್ಲಿಗೆ ತಿಕ್ಕಿ, ಮದ್ದು ಉದುರಿಸಿ,ಹೊಳಪು ಬರಿಸಿ,ಸರಿ ಮಧ್ಯಭಾಗದಲ್ಲಿ U ಆಕಾರಕ್ಕೆ ಬಗ್ಗಿಸಿ ತುರುಬಿಗೆ ಅಕ್ಕಡ( ಆಗಿನ hairclip) ವಾಗಿಸುತ್ತಿದ್ದಳು..

               ನಮ್ಮದು ಮಣ್ಣಿನ ಮನೆ.. ಕೂಡಿಸಿಟ್ಟ ಕಾಳುಕಡಿಗೆ ಇಲಿಗಳು ಸಾಮಾನ್ಯ... ಇಲಿಯೇನಾದರೂ ಗೋಡೆಯಲ್ಲಿ ಗುದ್ದು ಮಾಡಿದರೆ ,ಇಟ್ಟಿಗೆ,ಕಲ್ಲುಗಳಿಂದ ಅದನ್ನು ಅರ್ಧ ಮುಚ್ಚಿ,ಇನ್ನರ್ಧಕ್ಕೆ ಒಡ್ಡುಕಟ್ಟಿ ,ಮೂರು ಗುಂಪುಗಳನ್ನಿಟ್ಟು ಒಂದು ಕಬ್ಪಿಣದ ಪಟ್ಟಿ ಹಾಕಿ ಮಣ್ಣಿನ ನೆಲದಲ್ಲೊಂದು ಹಾಲು/ ಚಹ  ಕಾಸಲು ಇದ್ದಲು ಒಲೆ ಸಿದ್ಧಮಾಡುತ್ತಿದ್ದಳು.ಹರಿದ ಸೀರೆಗಳ ನ್ನು  ನೀಟಾಗಿ ಕತ್ತರಿಸಿ ಜೋಡಿಸಿ ಕೈ ಹೊಲಿಗೆ ಹಾಕಿ ಮಕ್ಕಳಿಗೆ ದುಪ್ಪಟಿ ಗಳನ್ನು ಹೊಲಿದು ಮೈ ಮನ ಬೆಚ್ಚಗಾಗಿಸುತ್ತಿದ್ದಳು.

            ಹೇಳ ಹೊರಟರೆ ಒಂದು ಕಾದಂಬರಿಯಾದೀತು. ಈಗ ಅವಳ ಎಲ್ಲ ಮಕ್ಕಳು, ಮೊಮ್ಮಕ್ಕಳು ಬಹು ಮಹಡಿ ಕಟ್ಟಡದಲ್ಲಿದ್ದಾರೆ.ಮನೆಮುಂದೆ ಸಾಲುಸಾಲಾಗಿ ಕಾರುಗಳು ನಿಲ್ಲುತ್ತಿವೆ. ಎತ್ತರೆತ್ತರ ಬೆಳೆದಂತೆ ಬದುಕು ನೆಲದಿಂದ ದೂರವೇತಾನೇ!!!?? ನಾಲ್ಕು ತಲೆಮಾರುಗಳಿಗೆ ಸಾಕ್ಷಿಯಾದ ನಾನು ಮಾತ್ರ ನೆಲದಾಳದಿಂದ ಚಿಗುರೊಡೆದ ಬದುಕು ಬೆಳೆಬೆಳೆದು ಗಗನಚುಂಬಿ ಯಾದ ಪರಿಯನ್ನು ದಂಗಾಗಿ ನೋಡಿ ದ್ದೇನೆ...ಅನುಭವಿಸಿದ್ದೇನೆ...ಅನುಭಾವಿಸಿದ್ದೇನೆ...ಆಗಿನ ಹಿರೇಕೇರೂರು ತಾಲೂಕಿನ ರಟ್ಟೀಹಳ್ಳಿಯ ಮಣ್ಣಿನ ನೆಲದಿಂದೆದ್ದ ಧೂಳು ಧಾರವಾಡ, ಬೆಂಗಳೂರಿನ ಪರಿಸರದಲ್ಲಿ ಹಾದು, ಅಮೆರಿಕಾ/ ಸ್ವಿಜರ್ಲ್ಯಾಂಡ್/ಕೆನಡಾ/ ಆಸ್ಟ್ರೇಲಿಯಾ/  ಜರ್ಮನಿಯಂಥ ಅನೇಕ ವಿದೇಶೀ ನಗರಗಳ ಗಾಳಿಯಲ್ಲಿ ಲೀನವಾಗಿ ಅಲ್ಲಿಯದೇ ಎಂಬಂತೆ ಒಂದಾಗಿ ಹೋದ ಪವಾಡವನ್ನು ನಾನು
ನಿತ್ಯವೂ ಕಾಣುತ್ತಿದ್ದೇನೆ.ಮನೆಯಲ್ಲಿ ನಮ್ಮೆಲ್ಲರ ಒಟ್ಟು ಮೊಮ್ಮಕ್ಕಳ ಸಂಖ್ಯೆ
ಇಪ್ಪತ್ತಾರು - Not out...
                ಒಮ್ಮೊಮ್ಮೆ ಅನಿಸುತ್ತದೆ, ಅವರನ್ನು ಕೂಡಿಸಿಕೊಂಡು ಅಜ್ಜಿ/ ಮುತ್ತಜ್ಜಿಯರ ಕಥೆಗಳನ್ನು ಹೇಳಿದರೆ
ಅವರು ಹೇಗೆ ಪ್ರತಿಕ್ರಯಿಸಿಯಾರು???

Saturday, 11 February 2023

   ನಾನೊಮ್ಮೆ ಹಿಂದೆ TNS  Sir ಅವರನ್ನು ಕೇಳಿದ್ದೆ." ಯಾಕೆ ನಿಶ್ಚಿತ ವಾದ engagements ಗಳು ಸದಾ ಮುರಿಯುತ್ತವೆ/ ಮದುವೆಯಾದವರು
ಏಕೆ ಸುಖವಾಗಿ ಇರೋದಿಲ್ಲ/ ಏನೋ ಸರಿಯಾಯ್ತಲ್ಲ- ಅಂತ ನೆಮ್ಮದಿ
ಯಿಂದ‌ ಇರುವಾಗಲೇ ಆಕಸ್ಮಿಕವಾದ ದ್ದೊಂದು ನಡೆದು ಕಥೆ ಅನಿರೀಕ್ಷಿತ ತಿರುವು ಪಡೆಯುತ್ತದೆ."- ಎಂದು. ಆಗಾಗ ನಡೆವ ಸಂವಾದಗಳಲ್ಲೂ  ಇದೇ ಪ್ರಶ್ನೆಗಳು ಕೇಳಲ್ಪಟ್ಟಾಗ  ಅವರು ಹೇಳಿದ್ದು ಯಾವುದೋ ಒಂದು ಕೋನದಿಂದ ಸರಿಯೇ ಎಂದು ಒಪ್ಪಿಕೊಳ್ಳಲೇ ಬೇಕಾಯ್ತು., "ಸಂತೋಷದಲ್ಲಿ ಹುಟ್ಟುವ ಕಥೆಗಳಿಗಿಂತ ನೋವಿನಲ್ಲಿ ಹುಟ್ಟುವ ಕಥೆಗಳು ಅಪಾರ/ಅಸಂಖ್ಯ/ಅನಿರ್ದಿಷ್ಟ/ ಅಪರಿಮಿತ...ಹೀಗಾಗಿ
ದೊಡ್ಡ ' Canvas' ಸಿಗುತ್ತದೆ,ಕಥೆಗೆ 'ಕವಲು'ಗಳೂ ಹೆಚ್ಚು.ಹೆಚ್ಚು ಪಾತ್ರಗಳು/ ವಿಷಯಗಳು ಲಭ್ಯವಿರುವ
ದರಿಂದ ಧಾರವಾಹಿಗೂ 'ಗತಿ'  ಸುಲಭ
ವಾಗಿ ಸಿಗುತ್ತದೆ. ಹೆಚ್ಚು ಜನಸ್ಪಂದನೆಗೆ  ಕಾರಣವಾಗಿ ಬಹುಕಾಲ ಜನಮಾನಸ ದಲ್ಲಿ ಉಳಿಯುತ್ತದೆ. ಸುಖದಲ್ಲಿ  ಹಿತ 
ವಿರಬಹುದು, ಕಥೆ ಇರುವದಿಲ್ಲ,"-ಎಂದು.

            ಆಗ ನೆನಪಾದದ್ದು ನಾವು ನೋಡುತ್ತಿದ್ದ ಹಳೆಯ ಚಲನಚಿತ್ರಗಳು.
ಪಂಢರಿಬಾಯಿ/ ಮೀನಾಕುಮಾರಿ ಯರು ನೆನಪಿನಲ್ಲಿದ್ದಷ್ಟು ಗಿಡ- ಮರ ಸುತ್ತಿ duet ಹಾಡುತ್ತಿದ್ದವರಲ್ಲ. ಕೆಲವೇ ಕೆಲವರನ್ನು ಹೊರತು ಪಡಿಸಿದರೆ ನಟ- ನಟಿಯರ ಹಾಡುಗಳಿಂದಾಗಿ ಅವರನ್ನು ನೆನಪಿಸಿಕೊಳ್ಳುತ್ತಿದ್ದೆವೇ ವಿನಃ ಅವರ
ವ್ಯಕ್ತಿತ್ವದ ಪ್ರಭಾವದಿಂದಲ್ಲ ಎಂದು
ಈಗ ಅನಿಸುತ್ತದೆ.ಎರಡು ತಾಸು ಏನೇ ಕಥೆ ಬೆಳಸಿದರೂ ನಮಗೆ ಕೊನೆಗೆ ಎಲ್ಲರೂ ನಗುನಗುತ್ತ  ಒಂದು group photo/ ಶುಭಂ  ಬಂದಾಗಲೇ ಅವರೊಂದಿಗೆ ನಾವೂ ನಿರಾಳವಾಗು ವಷ್ಟು ಕಥೆಯಲ್ಲಿ ತಲ್ಲೀನರಾಗುತ್ತಿದ್ದೆವು. ಮೊದಲೇ ಎಲ್ಲವೂ ನಮ್ಮಾಶೆಗೆ/ ನಿರೀಕ್ಷೆಗೆ ತಕ್ಕುದಾಗಿ ನಡೆದುಬಿಟ್ಟರೆ ಸಿನೆಮಾ ಅರ್ಧ ಗಂಟೆಯಲ್ಲಿ ಮುಗಿದು
ನಂತರದಲ್ಲಿ ಪಾರ್ಟಿ/ ಮೇಜವಾನಿ/ ವಿದೇಶ ಪ್ರವಾಸ/share market/ Race course/ pub- bar ಗಳಲ್ಲಿ shooting ಆಗಬೇಕಾಗುತ್ತಿತ್ತು ಅನಿಸಿತು...
    ‌‌       



Friday, 10 February 2023

    ‌    ‌  ‌ಈ ಹಿಂದೆ ಎರಡು ವರ್ಷಗಳ ಕಾಲ ಕೊರೋನಾ ಹೆಸರಿನಲ್ಲಿ ಸಾರ್ವಜನಿಕರಿಗೆ ಸ್ಥಾನ ಬದ್ಧತೆಯ ಶಿಕ್ಷೆ
ಯಾಗಿತ್ತು.ಅದು ಜನರನ್ನು ಎಷ್ಟು ತಟಸ್ಥರಾಗಿಸಿತ್ತೆಂದರೆ ಅದಕ್ಕೇನೇ ಸಂಪೂರ್ಣ ಒಗ್ಗಿಕೊಂಡ ಜನ ಹೊರಹೋಗಲೇ ಬೇಸರಿಸತೊಡಗಿ 
ಮನೆಯಲ್ಲೇ ಇರತೊಡಗಿದರು. ನಮ್ಮ  ಸಖಿಯರೂ ಇದಕ್ಕೆ ಹೊರತಾಗಲಿಲ್ಲ. ಚಿಕ್ಕಪುಟ್ಟ get together ಆದರೂ ಮೊದಲಿನ ಆಸಕ್ತಿ /ವೇಗ ಪಡೆದಿರಲೂ ಇಲ್ಲ...
    ‌ ‌           ಈ‌ ರಿವಾಜನ್ನು ಪುನಃ ಸ್ಥಾಪಿಸಿದ್ದು ದೀಪಾ ಜೋಶಿ, ಅದ್ಧೂರಿ ಯಾಗಿ ಮಗನ ಮದುವೆ ಮಾಡಿ... ನನಗೂ ಆಮಂತ್ರಣ ಬಂದಾಗ ಹಲವು ಬಾರಿ ಯೋಚಿಸಿದೆ. ಕೊನೆಗೆ ಗೆದ್ದದ್ದು
- ಆದದ್ದಾಗಲೀ ಗೆಳತಿಯರನ್ನು ಕಾಣಲೇಬೇಕೆಂಬ ಹಂಬಲ-ವೇ. ಅದರ ಪರಿಣಾಮ ಕೆಳಗಿದೆ. ಸುಂಕವನ್ನೇನನ್ನೂ
ಹೆಚ್ಚು ತೆರುವ ಪ್ರಸಂಗ ಬರಲಿಲ್ಲ. ಕೆಲವೇ ಗಂಟೆಗಳ ಮೊಣಕಾಲು ನೋವಷ್ಟೇ.ಆದರೆ ಎಲ್ಲರೂ ಸೇರಿ ಕಳೆದ quality time ಗೆ ಬದಲಾಗಿ ಅಷ್ಟಾದರೂ ಕಷ್ಟ ಪಡದಿದ್ದರಾದೀತೆ?


Wednesday, 8 February 2023

'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು...

          ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ , ಅವರ ' ಶತಾಯುಷ್ಯದ' ಗುಟ್ಟೇನು ಎಂದು  ಸಂದರ್ಶಕನೊಬ್ಬ ಪ್ರಶ್ನೆ ಕೇಳಿದ."ಗುಟ್ಟೂ ಇಲ್ಲ, ಮಣ್ಣೂ ಇಲ್ಲ, ನನ್ನ  ಶತಾಯುಷ್ಯದ ಗುಟ್ಟೆಂದರೆ ನೂರು ವರ್ಷಗಳ ಹಿಂದೆ ನಮ್ಮವ್ವ ನನ್ನನ್ನು ಹಡೆದದ್ದು" ಎಂದಿದ್ದರಂತೆ.

" ಒಂದು ವರ್ಷ ನಮ್ಮ  ಆಯುಷ್ಯದಲ್ಲಿ ಹೆಚ್ಚಾಗುವದೆಂದರೆ, ನಮ್ಮ ಸಾವಿಗೆ  ಒಂದು ವರ್ಷ ನಾವು ಹತ್ತಿರವಾದಂತೆ. ಆಗ ಸಂಭ್ರಮಿಸುವದುವಿಚಿತ್ರವಲ್ಲವೇ? _ಹೀಗೆಂದು ಒಮ್ಮೆ ನಮ್ಮ ಗುರುಗಳನ್ನು ಕೇಳಿದ್ದೆ.
       ‌‌‌‌‌‌   " ಎಷ್ಟೋ ಮಕ್ಕಳು ಹುಟ್ಟುತ್ತವೆ, ಬೆಳಕು ಕಾಣುವ ಮೊದಲೇ ಕಣ್ಣು ಮುಚ್ಚುತ್ತವೆ.ಅನೇಕ ಮಕ್ಕಳಿಗೆ ತಾಯಿ ,ತಂದೆಯ ಭಾಗ್ಯವಿರುವದಿಲ್ಲ. ಲಾಲಿಸಿ, ಪಾಲಿಸುವವರಿರುವದಿಲ್ಲ.ಅನೇಕ ಮಕ್ಕಳು ಹುಟ್ಟುವಾಗಲೋ,ನಂತರ ವೋ  ಅಂಗವಿಕಲರಾಗಿರುತ್ತಾರೆ. ಅನೇಕರಿಗೆ ಬದುಕು ದಿನನಿತ್ಯದ ಹೋರಾಟವಾಗಿರುತ್ತದೆ. ಇದಾವುದೂ ಇಲ್ಲದೇ ಅಥವಾ ಇದನ್ನೆಲ್ಲ ಗೆದ್ದು  ದೈವೀ ಕೃಪೆಯಿಂದ ಕೆಲವರ್ಷಗಳನ್ನು ಕಳೆಯುವಂತಾದರೆ ಅದು ಸಂಭ್ರಮ ವಲ್ಲವೇ?"- ಎಂದಿದ್ದರು ಗುರುಗಳು.  ಮರುಮಾತಾಡದೇ ಒಪ್ಪಿಕೊಂಡಿದ್ದೆ.

   ‌‌‌           ‌   ಅಪರೂಪಕ್ಕೆ ಒಂದು ಮಗುವಾದರೆ ನಿತ್ಯ ಸಂಭ್ರಮ. ಹತ್ತು/ಹನ್ನೆರಡು ಮಕ್ಕಳ ಮಧ್ಯೆ ಇನ್ನೊಂದಾ ದರೆ ಅದು ಆಕಸ್ಮಿಕ. ನಮ್ಮ ವೇಳೆಯಲ್ಲಿ ಆಗುತ್ತಿದ್ದುದು ಅದೇ. 'ಬರಗಾಲದಲ್ಲಿ  ಅಧಿಕಮಾಸ' ಅಂದ ಹಾಗೆ, 'ಹತ್ತರ ಕೂಡ ಹನ್ನೊಂದು' ಅಂದ ಹಾಗೆ , ನಮ್ಮನ್ನು ನಮ್ಮ ಪಾಲಕರು ಬಹುಶಃ ಸ್ವೀಕಾರ ಮಾಡಿದ್ದು ಅನಿಸುತ್ತದೆ. ಅಂದಮೇಲೇ 'ಹುಟ್ಟು' 'ಹಬ್ಬ'ವಾಗು ವದು ಕಲ್ಪನಾತೀತ. ಇದು ಆಗಿನ ಕಾಲದ ಬಹುತೇಕ ಮನೆಗಳಲ್ಲೂ ನನಗೆ  ಕಂಡುಬಂದ ಸತ್ಯ.( ಕನಿಷ್ಠ ನನ್ನ ಪಾಲಿಗೆ).

      ‌‌  ನಮ್ಮ ಹೆಸರಲ್ಲೂ ಹುಟ್ಟುಹಬ್ಬ- ಗಳಾಗುತ್ತಿದ್ದವು.ಆದರೆ ಅದಕ್ಕೆ ಸಮೀಪದಲ್ಲಿ ಮುಂಬರುವ 
ಯಾವುದೋ ಒಂದು ಹಬ್ಬಕ್ಕಾಗಿ ನಾವು ಕಾಯಬೇಕಾಗುತ್ತಿತ್ತು. 'ಎರೆದು ಕೊಳ್ಳುವವರ ನಡುವೆ ಡೊಗ್ಗಿದಂತೆ'  ಅಂದೊಂದು ದಿನ ನಮ್ಮನ್ನು ಕೂಡಿಸಿ, ನೆತ್ತಿಗೆ ಎಣ್ಣೆವೊತ್ತಿ,
'ಆಯುಷ್ಯವಂತಳಾಗು.
'ಭಾಗ್ಯವಂತಳಾಗು.
'ಕಲ್ಲು ಖನಿಯಾಗು.
'ಕರಕಿ ಬೇರಾಗು.
-'ಮೂಡಿ'ದ್ದರೆ ಇನ್ನೂ ಇಷ್ಟು 'ಏನೇನೋ ' ಆಶೀರ್ವದಿಸಿ ಸ್ವಲ್ಪ ಹೆಚ್ಚು ನೀರು ಹಾಕಿ  ಎರೆದರೆ ಅದೇ ಹಬ್ಬ.ಅಂದು ಧಾರ್ಮಿಕ ಹಬ್ಬವೂ ಆದದ್ದರಿಂದ  ಸಹಜವಾಗಿಯೇ ಮಾಡುವ ಸಿಹಿ ತಿಂಡಿಯೇ  ನಮ್ಮ' ಹುಟ್ಟು ಹಬ್ಬದ' main ಮೆನ್ಯೂ'.

          ಆಶ್ಚರ್ಯವೆಂದರೆ ಯಾವ ಕಾಲಕ್ಕೂ ನಾವು ಇದಕ್ಕೂ  ಹೆಚ್ಚು ಏನನ್ನೂ  ಬಯಸುತ್ತಲೇ ಇರಲಿಲ್ಲ ಎಂಬುದು. ಒಂದು ರೀತಿಯಲ್ಲಿ ಬದುಕನ್ನೇ  'pre - programming ' ಮಾಡಿಟ್ಟ ಹಾಗೆ. ' ನಿರೀಕ್ಷೆ ಇಲ್ಲದೆಡೆ ನಿರಾಶೆಯೂ' ಇರುವುದಿಲ್ಲ ಎಂದು ಯಾರೂ ನಮಗೆ ಹೇಳಿಕೊಡದಿದ್ದರೂ  ನಾವು ಕಲಿತಿದ್ದು ನಮ್ಮ ಪಾಲಕರನ್ನು ಅವರ ಸಾದಾ ಬದುಕನ್ನು ನೋಡಿಕೊಂಡೇ ...

   ‌‌‌       ಇಂದಿಗೆ ನನಗೆ ಎಪ್ಪತ್ತೇಳು ಮುಗಿದು ಎಪ್ಪತ್ತೆಂಟಕ್ಕೆ ಕಾಲಿಟ್ಟೆ. ಮನುಷ್ಯನ ಸರಾಸರಿ ವಯಸ್ಸಿನ ಮಿತಿಯನ್ನೂ ದಾಟಿದ್ದಾಗಿದೆ.ಹಲವು ಬಗೆಯ ಸುಖ-ದುಃಖ, ಸವ್ಯ-ಅಪಸವ್ಯ, ಪ್ರೀತಿ-ದ್ವೇಷ, ಅನುಭವ - ಅನುಭಾವ ಗಳ ಅಗ್ನಿದಿವ್ಯ ಹಾದು ಬಂದದ್ದಾಗಿದೆ.  ಇದುವರೆಗೆ ಶಾಲೆ- ಕಾಲೇಜುಗಳು ನನಗೆ ಕಲಿಸಿದ್ದಕ್ಕಿಂತ ಬದುಕಿನಿಂದ ನಾನು ನೇರವಾಗಿ ಕಲಿತದ್ದೇ ಹೆಚ್ಚು.

                  ‌‌‌‌‌‌‌   ‌‌ಈಗ ನನಗೆ ಬೇಕಾದಂತೆ ಬದುಕಬಹುದಾದ ಸ್ವಾತಂತ್ರ್ಯ ಸಿಕ್ಕಿದೆ.
ಮೊಮ್ಮಕ್ಕಳೆಲ್ಲ ಹದಿಹರಯ ದಾಟಿ
ಅಪ್ಪ- ಅಮ್ಮಂದಿರ ವೃತ್ತಗಳಿಂದಲೂ ನಿಧಾನವಾಗಿ ಬಹಿರ್ಮುಖವಾಗಿ ಸ್ವಂತ
ವಲಯಗಳ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಎಲ್ಲರಿಗೂ ಈಗ ME TIME
ಹೆಚ್ಚು ದೊರಕುತ್ತಿದೆ. ಪರಿಣಾಮವಾಗಿ
ನಮ್ಮದೆಂದೇ ಒಂದು Work strategy
ಕಂಡುಕೊಳ್ಳುವದು ಸುಲಭವಾಗಿದೆ.

                  ನನ್ನದ್ಯಾವಾಗಲೂ ಒಂದು
Frame Work ನಲ್ಲೇ ಕೆಲಸ.ಬೆಳಗಿನ
ದಿನಚರಿ/ ಸ್ನಾನ/ break fast/ ಅರ್ಧ ಗಂಟೆ ಬಿಸಿಲು- ಸ್ನಾನ/ ಒಂದು ಗಂಟೆ face- book ಓದು- ಬರಹ/ ನಂತರ ಒಂದು ಗಂಟೆ ಅಡುಗೆ ಮನೆಯಲ್ಲಿ/ ಊಟದ ನಂತರ ವಿಶ್ರಾಂತಿ/ಒಂದೆರೆಡು
ಸೀರಿಯಲ್- U Tube ಆಯ್ದ ಕಾರ್ಯ
ಕ್ರಮಗಳು/ ಚಹ- ಒಂದೆರಡು ಫೋನುಗಳು ಹೀಗೆ...ಯಥಾಪ್ರಕಾರ
ಸಂಜೆ- ರಾತ್ರಿ...ಒಮ್ಮೊಮ್ಮೆ ಆಚೀಚೆ ಯಾಗುವದುಂಟು, ಆದರೂ ತುಂಬಾ ಕಡಿಮೆ...

            ‌   ಬದುಕು‌ ಏನೇ ಪರೀಕ್ಷೆ ಒಡ್ಡಲಿ, ತಕರಾರು ಮಾಡುವ ಹಂತ ಮೀರಿದ್ದೇನೆ.ಇಷ್ಟೂ ಸಿಗದ ಅನೇಕ ಹತಭಾಗ್ಯರನ್ನು ಕಂಡಿದ್ದೇನೆ/ ಓದಿದ್ದೇನೆ/ ಕೇಳಿದ್ದೇನೆ/ನನಗೆ ಬದುಕಿನ ಬಗ್ಗೆ ತಕರಾರಿಲ್ಲ. ಒಂದೊಮ್ಮೆ ಮುಖ್ಯ 'ಬಾಗಿಲನ್ನೇ'- ಮುಚ್ಚಿ ಹೆದರಿಸಿದ್ದರೂ ನಂತರದಲ್ಲಿ ನೂರು 'ಕಿಟಕಿ'ಗಳನ್ನು ನನಗಾಗಿ ತೆರೆದು, ಬದುಕು ನನ್ನ ದಾರಿ ಸುಗಮಗೊಳಿಸಿದೆ. ಅದಕ್ಕಾಗಿ‌ ನಾನದಕ್ಕೆ ಚಿರ ಋಣಿ... ಅದು ಕೊಟ್ಟದ್ದನ್ನು ಸಮರ್ಥವಾಗಿ ಬಳಸಿಕೊಂಡ ಬಗ್ಗೆ ನನಗೆ ತೃಪ್ತಿ/ ಹೆಮ್ಮೆ ಎರಡೂ ಇದೆ.  ಹೀಗೆಯೇ ಮುಂದೆಯೂ ನಡೆಯಬಹುದೆಂಬ ಕನಿಷ್ಟ ಆಸೆ- ಭರವಸೆ- ನಿರೀಕ್ಷೆ ಎಲ್ಲವುಗಳೊಂದಿಗೆ ಬದುಕಿನ ಶೇಷಭಾಗ ಕಳೆಯುವದೀಗ ನನ್ನ ಆದ್ಯತೆ...
    
     ‌   ‌‌‌‌  ಒಟ್ಟಿನಲ್ಲಿ, ಹುಟ್ಟುಹಬ್ಬವೆಂದರೆ,
10 % Functions.90% Emotions. ಇದು ನನ್ನ ಭಾವನೆ.

ಒಂದು ಹೊಸ ಉಡುಪು,
ಎರಡು ಮನ್ ಪಸಂದ್ ಖಾದ್ಯಗಳು...
ಮೂರು/ನಾಲ್ಕು  ಆತ್ಮೀಯ ಕರೆಗಳು...
ಮನೆ ಜನರೊಡನೆ ಒಂದಿಷ್ಟು  ರಸಗಳಿಗೆಗಳು...
THAT'S  IT...

Tuesday, 7 February 2023

ನಾವು ಕೂಡಿ ಕಳೆದ 
ಗಳಿಗೆಗಳು ಹಾಗೆ ನೋಡಿದರೆ  
ಹೆಚ್ಚೇನೂ ಅಲ್ಲ.
ಒಮ್ಮೆಲೇ ಹೋಗಿಬಿಡುವ
ಬದಲು, ಬಾಗಿಲಲ್ಲಿ 
ತುಸುಹೊತ್ತು‌ ನಿಲ್ಲು...
ಹೋಗುವ ಮೊದಲು
ಗುರುತೊಂದು 
ಬಿಟ್ಟು ಹೋಗು...
ಅದನ್ನು ಮರಳಿ ಪಡೆಯಲು
ಮತ್ತೊಮ್ಮೆ ಬರಬಹುದು...

Saturday, 4 February 2023

" ಬರೆಯುವುದು ಅನಿವಾರ್ಯ ಕರ್ಮ 
ನನಗೆ..."      

        ಮೊದಲಿನಿಂದಲೂ ನನಗೆ ಡೈರಿ ಬರೆಯುವ ಚಟವಿತ್ತು.ಹಾಗಂತ ನಮ್ಮದು ಅತಿ ಬಣ್ಣ ಬಣ್ಣದ ಬದುಕು/ ಅಥವಾ ಕಣ್ಣು ಕುಕ್ಕುವ ಬಿಸಿನೆಸ್ ಇರುವ ಜೀವನವೇನೂ ಅಲ್ಲ.ಒಬ್ಬ ಸಾಮಾನ್ಯ ಶಿಕ್ಷಕಿಯ ಮೇಲಿನ ಅಭಿಮಾನಕ್ಕೋ/ ಪ್ರೀತಿ-ಗೌರವ ಅಂತಲೋ ನನ್ನ ವಿದ್ಯಾರ್ಥಿಗಳಲ್ಲಿ ಕೆಲವರು ಹೊಸವರ್ಷದಂದು ಡೈರಿಗಳನ್ನು ಕಾಣಿಕೆಯಾಗಿ  ಕೊಡುತ್ತಿದ್ದರು.ಹೇಗೂ ಇದೆಯಲ್ಲ ಅಂತ ಪ್ರಾರಂಭಿಸಿ,ಶುರುವಾಗಿದೆಯಲ್ಲ  ಅಂತ ಬರೆಯುತ್ತಹೋಗಿ,ಬರೆದದ್ದನ್ನೇಕೆ
ನಿಲ್ಲಿಸಬೇಕು ಎಂದು ಮುಂದುವರಿಸಿ,
ಅದೇ ಹವ್ಯಾಸವಾಗಿ ಬೆಳೆದದ್ದು ಸಹಜ.

               ‌ನಿವೃತ್ತಳಾಗಿ ಮನೆ ಬದುಕಿಗೆ ಒಗ್ಗಿಕೊಂಡ ಮೇಲೆ ಸೊರಗುತ್ತ ಹೋದ
ಆ ಹವ್ಯಾಸ ಇಲ್ಲವಾಗುವ ಭಯ ಹುಟ್ಟುವ ಮೊದಲೇ face book ಬಂದು ಅದಕ್ಕೆ ಮತ್ತೆ ಜೀವ ತುಂಬಿತು. ಕನ್ನಡ/ಇಂಗ್ಲಿಷ್ typing ಕಲಿತು/ practice ಇರಲಿ ಎಂದು ಬೇಕಾದ್ದು/ ಬೇಡದ್ದು ಕುಟ್ಟುತ್ತ ಹೋಗಿ 'ಹಾಡ್ಹಾಡ್ತ ರಾಗ' ಅಂದ ಹಾಗೆ ಒಂದು ಲಯ ಕಂಡು,ಅನೇಕ ಲಘು ಬರಹಗಳು ಸಂಗ್ರಹವಾಗಿ ' ನೀರಮೇಲೆ ಅಲೆಯ ಉಂಗುರ'- ಎಂಬ ಪುಸ್ತಕ ರೂಪದಲ್ಲಿ ಹೊರಬಂತು.
             ‌ ‌‌‌‌  ಈಗ ನನ್ನ ಅದರ ಸಖ್ಯ ಅವಿನಾಭಾವ ಸಂಬಂಧದಂತೆ.ಒಂದು ರೀತಿಯಲ್ಲಿ ನನ್ನ personal diary ಅನ್ನಬಹುದು.ಮನಸ್ಸಿನಲ್ಲಿ ಮೂಡಿ,
ತಲೆಯಲ್ಲಿ ವಿಚಾರರೂಪದಲ್ಲಿ ಬಂದು ವೈಯಕ್ತಿಕವಾಗಿ ಅನಿಸಿದ್ದನ್ನೂ ಸಹಿತ
ಅತಿ ವೈಯಕ್ತಿಕ ಅನ್ನಿಸದಂತೆ 
generalise ಮಾಡಿ ದಾಖಲಿಸುವ ಕೆಲಸಕ್ಕೆ ಅಂಟಿಕೊಂಡೆ.ಪರಿಣಾಮ ನನ್ನ ಎರಡನೇ ಪುಸ್ತಕ ' ತುಂತುರು...ಇದು ನೀರಹಾಡು...' ಬಂತು. Face book ನಲ್ಲಿಯ ನನಗೆ ಸೇರಿದ/ ಇತರರಿಗೆ ಪ್ರಯೋಜನವಾಗುವ  ಇತರರ post 
ಗಳನ್ನೂ  share ಮಾಡುವದು, ಮೆಚ್ಚಿದ  ಇತರ ಭಾಷೆಯ ಕವನಗಳನ್ನು
ಕನ್ನಡಕ್ಕೆ ಭಾವಾನುವಾದ ಮಾಡುವದು
ಮುಂತಾದ ಚಟುವಟಿಕೆಗಳು ಈಗಲೂ ಜಾರಿಯಲ್ಲಿ ಇವೆ.
           " ಎಲ್ಲ ಓದಲಿ ಎಂದು ನಾನು ಬರೆಯುವದಿಲ್ಲ, ಬರೆಯುವದು ಅನಿವಾರ್ಯ ಕರ್ಮ ನನಗೆ"- ಎನ್ನಬಹುದು.ಮೊದಲಿನಂತೆ ಜಾಸ್ತಿ ಹೊರಹೋಗುವದಿಲ್ಲ ಎಂಬುದೊಂದು
ಕಾರಣವಾದರೆ ಆದಾಗ/ ಆದಷ್ಟು/ ಆದಂತೆ ಬರೆಯುವದರ ರೂಢಿ ತಪ್ಪಬಾರದು,ಆ ಕಾರಣದಿಂದಲಾದರೂ
ಚಟುವಟಿಕೆಗಳಿಗೊಂದು 'ಗತಿ' ಇರಲಿ
ಎಂಬುದಷ್ಟೇ ನನ್ನ ಉದ್ದೇಶ.
                ನಿನ್ನೆ ಧಾರವಾಡದ‌ ಪೋಸ್ಟ
ಒಂದನ್ನು share ಮಾಡಿದ್ದೆ.ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಯ ಸಮಯದಲ್ಲಿ ಉಟ್ಟುಕೊಂಡದ್ದು ಧಾರವಾಡದ ಕಸೂತಿ ಸೀರೆ - ಎಂಬ ಸುದ್ದಿ ರಾಷ್ಟ್ರೀಯ
ಮಟ್ಟದಲ್ಲಿ ಸದ್ದು ಮಾಡಿದ ವೇಳೆಯಲ್ಲಿ
ಧಾರವಾಡದವಳಾದ ನಾನು ಸುಮ್ಮನೇ
ಕೂಡಲಾದೀತೇ?
   ‌‌‌      ‌‌‌     ಇಂದು ಬೆಳಿಗ್ಗೆ ನನಗೆ ಬಂದ
ಮೊದಲ  ಸಂದೇಶ ಆ ಸುದ್ದಿಯನ್ನು ಪ್ರಸಾರ ಮಾಡಿದ ವಾಹಿನಿಯವರದು.
ಇಷ್ಟು ಸರಳವಾಗಿ/ ಸುಲಭವಾಗಿ/ 
ಧನ್ಯವಾದಗಳು ಕೂಡಿಬೀಳುವದಾದರೆ
ಅವಕಾಶ ಯಾಕ್ರೀ  ಬಿಟ್ಟು ಕೊಡಬೇಕು!? ನಮಗಂತೂ ಪ್ರಚಾರ ಗಿಟ್ಟಿಸಿಕೊಳ್ಳುವ  ಭಾಗ್ಯವಿಲ್ಲ.ಪ್ರಚಾರ ವಾಹಿನಿಯ ಧನ್ಯವಾದಗಳಾದರೆ ಅದೇ
ಆದೀತು...


                 
                 

   

    

            





Friday, 3 February 2023

ನಾವು ಕೂಡಿ ಕಳೆದ 
ಗಳಿಗೆಗಳು 
ಹಾಗೆ ನೋಡಿದರೆ  
ಹೆಚ್ಚೇನೂ ಅಲ್ಲ.
ಒಮ್ಮೆಲೇ ಹೋಗಿಬಿಡುವ
ಬದಲು, 
ಬಾಗಿಲಲ್ಲಿ ತುಸುಹೊತ್ತು‌ 
ನಿಲ್ಲು...
ಹೋಗುವ ಮೊದಲು
ಗುರುತೊಂದನಾದರೂ 
ಬಿಟ್ಟು ಹೋಗು...
ಅದನ್ನು ಮರಳಿ 
ಪಡೆಯಲು
ಮತ್ತೊಮ್ಮೆಯಾದರೂ 
ಬರಬಹುದು...

ನಾವು ಜೊತೆಯಾಗಿ ಕಳೆದ ಕೆಲವು ಗಂಟೆ-ನಿಮಿಷಗಳು ಬರೇ ಕ್ಷಣಗಳು. ತೆರೆದ ಬಾಗಿಲ ಹೊಸ್ತಿಲ ಪೂರ್ತಿ ದಾಟದಿರು.. ಈ ಕಡೆ ಒಂದಿಷ್ಟು ಇರು. ದಾವಣಿಯ ಒಂದಿಂಚು ಅಂಚು ಆ ಚಿಲಕವನ್ನು ಹಿಡಿಯಲಿ.. ಬಾಗಿಲ ಮುಚ್ಚದಿರು, ಮುಚ್ಚಲೇ ಬೇಕಾದರೆ *ಒಳ ಅಗುಳಿ ಹಾಕು.*
-MN

Friday, 27 January 2023



The Example
  
Here's an example from
A Butterfly;
That on a rough, hard rock
Happy can lie;
Friendless and all alone
On this unsweetened stone.

Now let my bed be hard
No care take I;
I'll make my joy like this
Small Butterfly;
Whose happy heart has power
To make a stone a flower.

by- William Henry Davies


ಕಲ್ಲರಳಿ ಹೂವಾಗಿ...
ಉರುಟು ಬಂಡೆಯ ಮೇಲೂ ಸುಖವಾಗಿ ಇರಬಹುದು,
ಕುಣಿಕುಣಿದು ನಲಿಯುವಾ ಚಿಟ್ಟೆಯಂತೆ...
ಗೆಳೆಯರೇ ಇಲ್ಲದೆಯೂ
ಒಂಟಿಯಾಗಿರಬಹುದು
ಬಂಡೆ ಹೇಗೇ ಇರಲಿ-
ನನಗಿಲ್ಲ ಚಿಂತೆ...

ನನ್ನ ಹಾಸಿಗೆ ಇನ್ನು
ಹೇಗಿದ್ದರೂ ಚನ್ನ...
ಚಿಟ್ಟೆಯಂದದಿ ನಾನಿನ್ನು
ನಲಿದಾಡುವೆ...
ಆ ಕಲ್ಲು ಬಂಡೆಯನೇ
ಹೂವಾಗಿ ಅರಳಿಸುವೆ,
ನನ್ನೆದೆಯ ಜೇನನ್ನೇ
ಅದಕುಣಿಸುವೆ...

Wednesday, 25 January 2023

" ತತ್ವ ಸಿಲುಕದೆಮ್ಮಯ ತರ್ಕಶಾಂಕುಶಕೆ"

        ೧೯೭೨ ರ ಅಕ್ಟೋಬರ್ ತಿಂಗಳು. ನಮ್ಮ ಮದುವೆಯಾಗಿ ಕೇವಲ ಎರಡೇ ವರ್ಷ. ನನ್ನವರಿಗೆ ಮೊದಲ ಬಾರಿ ಲಘು ಹೃದಯಾಘಾತ ವಾಗಿತ್ತು.ನಾನು ಆ ಶಬ್ದವನ್ನೇ ಅದುವರೆಗೂ ಕೇಳಿರಲಿಲ್ಲ. ನಮ್ಮದೊಂದು ಪುಟ್ಟ 
ಹಳ್ಳಿ. ಕೆಳ ಮಧ್ಯಮ ವರ್ಗದ ಕುಟುಂಬ.ದುಡಿತ ಅನಿವಾರ್ಯ. ಹೆಚ್ಚು ಕಡಿಮೆ ಎಲ್ಲರದೂ ಅದೇ ಬದುಕು. ಹೀಗಾಗಿ ಗಟ್ಟಿ ಜೀವಗಳು.ಎಂಬತ್ತು/ ತೊಂಬತ್ತು ಎಂದರೆ ಮಧ್ಯ ವಯಸ್ಸು ಎಂಬಂಥ ಚಟುವಟಿಕೆ. ಯಾರಾದರೂ ಏಕಾಏಕಿ ಹೋದರೆ " ಕಲ್ಲು ಗುಂಡಿನ ಹಾಗಿದ್ದ, ಒಂದು ದಿನ ಛಟ್ ಅಂತ ಸೀತವನಲ್ಲ, ಕೂತು ಕೂತಲ್ಲೇ ಹೋದ ಪುಣ್ಯಾತ್ಮ"- ಎಂಬಂಥ ಮಾಮೂಲು ಶರಾ. ಹೀಗಾಗಿ ನನಗೆ ಆ ಹೆಸರು ಹೆದರಿಸಲೇಯಿಲ್ಲ. ಕ್ರಮೇಣ ಅದರ ಗಂಭೀರತೆಯ ಅರಿವಾದಾಗಲೇ ಅನಾವಶ್ಯಕ ಅಂಜಿಕೆ ಶುರುವಾದದ್ದು. ಅವರು ಮನೆಗೆ ಬರುವದು ತಡವಾದರೆ/ ರವಿವಾರ ಹೆಚ್ಚು ಹೊತ್ತು
ಮಲಗಿದರೆ/ ಹೊರಗಿನಿಂದ ನಾನೇನಾದರೂ ಬಂದಾಗ ಮನೆ ಮುಂದೆ ನಾಲ್ಕು ಜನ ಹೆಚ್ಚು ಕಂಡರೆ
ಎದೆ ಝಲ್ ಎನ್ನಲು ಶುರುವಾದದ್ದು. ಅವರನ್ನು ಕಳೆದುಕೊಂಡದ್ದು ೧೯೮೩ ಅಕ್ಟೋಬರ್...ಸರಿಯಾಗಿ ನಲವತ್ತು ವರ್ಷಗಳ ಹಿಂದೆ.
             
          ಆಮೇಲೆ ಸದಾಕಾಲ ನನಗೆ ಅನಿಸುತ್ತಿದ್ದುದು ಒಂದೇ.ಈಗಿನಂತೆ
ಆಗ ವೈದ್ಯಕೀಯ ಸೌಲಭ್ಯಗಳು ಇದ್ದರೆ!
ನಮ್ಮ ಬಳಿ ಮುಂಬೈ / ಬೆಂಗಳೂರಿಗೆ ಹೋಗಿ ಚಿಕಿತ್ಸೆ ಮಾಡಿಸುವಷ್ಟು ದುಡ್ಡಿದ್ದರೆ ! ಸ್ವಲ್ಪ ಮೊದಲೇ ತಿಳಿದಿದ್ದರೆ. ಹಾಗಾಗಿದ್ದರೆ...ಹೀಗಾಗಿದ್ದರೆ...ಎಂದು. 
          ‌
                ಈಗ ಗೊತ್ತಾಗುತ್ತಿದೆ, ಏನಿದ್ದರೂ ಏನೂ ಆಗುತ್ತಿರಲಿಲ್ಲ, ಆಗುವದೇ ಆಗುತ್ತಿತ್ತು...ಅದೆಲ್ಲ ಕಾಲ ನಿರ್ಣಿತ.ಅದಕ್ಕೆ ಇಂದಿನ ವಿದ್ಯಮಾನ ಗಳೇ ಸಾಕ್ಷಿ...ಎಲ್ಲರಲ್ಲೂ ಸಾಕಷ್ಟು ದುಡ್ಡಿದೆ...ಮನುಷ್ಯನ ಹೃದಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ತೆರೆದ ಹೃದಯ ಚಿಕಿತ್ಸೆ  ಮಾಡುವಷ್ಟು ವಿಜ್ಞಾನ ಮುಂದುವರೆದಿದೆ...ಹೆಜ್ಜೆಗೊಂದು multi speciality hospitals ಕಾಣ ಸಿಗುತ್ತವೆ.
             ಆದರೂ ಹುಡುಗರು/ ಮುದುಕರು ಎನ್ನದೇ  ನಿಂತಲ್ಲೇ ಕುಸಿದು ಬೀಳುತ್ತಾರೆ.ಈಗ ಇದ್ದವರು ಕ್ಷಣವೊಂದು ಕಳೆಯುವದರಲ್ಲಿ  ಇಲ್ಲವಾಗುತ್ತಿದ್ದಾರೆ. Golden hour ದಲ್ಲೂ ಉಪಚಾರ ಫಲಪ್ರದವಾಗುತ್ತಿಲ್ಲ
" ಹೃದಯಾಘಾತಗಳನ್ನು ತಡೆಯುವದು ಹೇಗೆ ಎಂಬ ಬಗ್ಗೆ ಅಂತರ್ ರಾಷ್ಟೀಯ ಮಟ್ಟದಲ್ಲಿ ಉಪನ್ಯಾಸ ಕೊಡಬೇಕಾಗಿದ್ದವರು ಭಾಷಣದ ವೇಳೆಯಲ್ಲಿಯೇ/ ವೇದಿಕೆಯ ಮೇಲೆಯೇ ಇಲ್ಲವಾದ ಸುದ್ದಿಗಳನ್ನು ಓದುತ್ತಿದ್ದೇವೆ. ಪತ್ರಿಕೆಗಳಲ್ಲಿ/ ಫೋನುಗಳಲ್ಲಿ/ face book ನಲ್ಲಿ ಇಂಥವೇ ಸುದ್ದಿಗಳ ಸದ್ದು
ಹೆಚ್ಚಾಗುತ್ತಿವೆ.ಬದುಕಿನ ಶೈಲಿ/ ವಿಶ್ರಾಂತಿ ರಹಿತ ಜೀವನ/ ಸುಲಭ ಸಾಧ್ಯವಲ್ಲದ ಕುಟುಂಬದ ಬೆಂಬಲ/ 
ಹೆಚ್ಚುತ್ತಿರುವ ಮಹತ್ವಾಕಾಂಕ್ಷೆ  ಇಂಥ
ಹಲವಾರು ಕಾರಣಗಳೇನೇ ಕೊಡಲು ಇದ್ದರೂ ಅಂತಿಮ ಸತ್ಯ ಒಂದೇ...

" ನಾವು ' ಕೇವಲ‌' ಮನುಷ್ಯರು"-ಬದುಕಿನ ಜಟಕಾ ಬಂಡಿಯ ' ಸಾಹೇಬ ಬೇರೆಯೇ ಇದ್ದಾನೆ".

                
  
 

Tuesday, 24 January 2023

 ಜಬ್ ವೋ  ದೇತಾ ಹೈ , ಛಪ್ಪಡ ಫಾಡ್ಕೆ ದೇತಾ ಹೈ...

      ಒಂದು ಕಾಲದಲ್ಲಿಯ ಒತ್ತಡದ ಬದುಕು ನನಗೆ ಬಳುವಳಿಯಾಗಿ ಕೊಟ್ಟದ್ದು BP ಹಾಗೂ Sugar complaints... ಹೆದರಿಕೆಯೇನೂ ಇಲ್ಲ ಬಿಡಿ. ಎರಡರದೂ ಹದಿನೈದು ವರ್ಷಗಳಿಗೂ ಮೀರಿದ ಸ್ನೇಹ.ಆದರೂ ಈಗಿನ ಕಾಲದಲ್ಲಿ ಸ್ನೇಹಿತರನ್ನೂ ಒಂದು ಹಂತದವರೆಗೆ ಮಾತ್ರ ನಂಬಬೇಕು, ಹೀಗಾಗಿ ಆಗಾಗ ಪರೀಕ್ಷಿಸುತ್ತಲೇ ಇರಬೇಕಾದ ಅನಿವಾರ್ಯತೆ ನನಗೆ.
ಅದಕ್ಕಾಗಿ ಒಂದು Gluco Meter ಖರೀದಿ ಮಾಡಿದ್ದೆ.ಎಲ್ಲದಕ್ಕೂ ಒಂದು Expiry date ಅಂತ ಇರುತ್ತದೆ. ಹೀಗಾಗಿ ಅದು ತೊಂದರೆ ಕೊಡತೊಡಗಿದಾಗ ಇನ್ನೊಂದು ಖರೀದಿಸಬಹುದು ಎನಿಸಿತು.

   ‌‌              ಅದಾಗಲೇ ತಂಗಿಯ ಮನೆಯಲ್ಲಿ ಏನೋ ಕಾರ್ಯಕ್ರಮ ನಡೆದು 'ನಿನಗೆ ಸೀರೆ ಕೊಡಿಸುತ್ತೇನೆ
ನಡಿ'- ಅಂದಳು."ಈಗಾಗಲೇ ಎರಡು ಕಪಾಟು ಸೀರೆ ಬಿದ್ದಿವೆ. ಹೊರಹೋಗು ವದೂ ಕಡಿಮೆಯಾಗಿದೆ "- ಬೇಡ ಎಂದೆ. 'ಬೇಕು- ಬೇಡ'ದ ಬಿಸಿ ಹೆಚ್ಚಾಗಿ
" ಸರಿ ಏನಾದರೂ ನಿನಗೆ ಬೇಕಾದ್ದೇ ಕೊಡಿಸುತ್ತೇನೆ ಹೇಳು- ಎನ್ನುವದಕ್ಕೆ ಬಂದು ನಿಂತಿತು.ನಾನು ಹೊಸ Gluco Metre order ಮಾಡಿದೆ.

             ವಾರದಲ್ಲಿ ತಮ್ಮನ ಮನೆಗೆ
ಹೋದೆ. ಮಾತು ಮಾತಿನಲ್ಲಿ ವಿನುತಾ
" ಮನೆಯಲ್ಲಿ ಅವರು ಬಳಸುತ್ತಿದ್ದ sugar test  machines ಹಾಗೇ ಉಳಿದಿದೆ.ಇತ್ತೀಚೆಗೆ ಖರೀದಿಸಿದ್ದು, ಬೇಕಾ? "-  ಅಂದಳು.ಬೇಡವೆನ್ನಲು ಮನಸ್ಸಾಗಲಿಲ್ಲ, ತೆಗೆದು ನೋಡಿದರೆ ಎಲ್ಲ plastic cover ಸಮೇತ ಈಗ ತಂದಂತೆ.ಅದು ನನ್ನ ತಮ್ಮನ speciality.ಎಲ್ಲದರಲ್ಲೂ Military ಶಿಸ್ತು. ಅವನೇ ಜೊತೆಯಲ್ಲಿದ್ದ ಭಾವ.
ಬೇಡವೆನ್ನಲು ಆಗಲೇಯಿಲ್ಲ.

    ‌‌‌‌‌‌‌‌‌        ಕೊನೆಯದಾಗಿ ಮೊಟ್ಟ ಮೊದಲನೇಯದನ್ನು ಕೊನೆಯಬಾರಿ
ಪರೀಕ್ಷಿಸಿ ಎಸೆಯೋಣ ಎಂದು ಹೊಸ 
Battery ಹಾಕಿಸಿದೆ. Perfect ಆಗಿ ಬಿಡಬೇಕೇ? 
*ಒಂದು  old love... 
*ಎರಡನೇಯದು ತಂಗಿಯ   ಉಡುಗೊರೆ ...
*ಮೂರನೇಯದು ತಮ್ಮನ ನೆನಪು...
-ಯಾರು  ಹಿತವರು ನಿನಗೆ ಈ   ಮೂವದರೊಳಗೆ?- 
     ‌‌‌         ಅನ್ನುವ ಮಾತೇಯಿಲ್ಲ... ಪ್ರತಿಯೊಂದಕ್ಕೂ ಒಂದೊಂದು ಭಾವ... ಹಿನ್ನೆಲೆ. ಆದರೆ ಹಾಗೆಂದು 
ಮೂರೂ ಬಳಕೆಯಾಗುವಷ್ಟು ಸಕ್ಕರೆ
ಮಟ್ಟ ಹೆಚ್ಚಲಿ ಎಂದು ಬೇಡಲಾದೀತೆ?
ಬೇಡಿದರೂ ಅದು ಕಡಿಮೆಯಾಗುವು ದೇ ಅನುಮಾನ...ಏಕೆಂದರೆ ನನ್ನ ಬಳಿ ಇರುವವು machine ಗಳಲ್ಲ... 
ಸಿಹಿ ಸಿಹಿಯಾದ - ಅತಿ ಮಧುರ ಭಾವಗಳು.



Monday, 23 January 2023

   ‌        ರವಿವಾರದಂದು  ನಮ್ಮಲ್ಲಿ 
ಕೆಲಸದ ನಿರಾಳತೆ ಕಡಿಮೆ.ಇಡೀ ವಾರದ ದೈನಂದಿನ ಚೌಕಟ್ಟಿನಲ್ಲಿ ಕೂಡದ ಕೆಲಸಗಳಿಗೆಲ್ಲ ಅಂದು ಮಹೂರ್ತ.ಹೀಗಾಗಿ ಅರ್ಧ/ ಒಂದು ಗಂಟೆ ತಡವಾಗಿ ಏಳುವದನ್ನು ಬಿಟ್ಟರೆ
ನಂತರದ್ದು express high way ಪಯಣ.
         ‌   ‌ನಿನ್ನೆ ಆದದ್ದೂ ಅದೇ.ಬೆಳಗಿನ ಸಮಯ  ಹತ್ತು ಗಂಟೆ. ಎಂದಿನಂತೆ
ಹಿತ್ತಲಲ್ಲಿ ಕಾಲುಚಾಚಿಕೊಂಡು Sun bath - ಗೆಂದು ಬಿಸಿಲಲ್ಲಿ ಕುಳಿತಿದ್ದೆ. ಅದಕ್ಕೆ ಹತ್ತರಿಂದ- ಹತ್ತೂವರೆ ಗಂಟೆಯ Schedule...ಕರೆಗಂಟೆ ಬಾರಿಸಿತು. ಮೊಮ್ಮಗ ' ಅಜ್ಜಿ, ಸ್ವಲ್ಪು ಯಾರೆಂದು ನೋಡು'- ಎಂದು ಕೂಗಿದ.ಹೀಗೆಂದೂ ಹೇಳಿದವನೇ ಅಲ್ಲ
ಅವನು.ನಾನಾಗೇ ಬಂದರೆ " ಅಜ್ಜಿ, ನಾನು ನೋಡ್ತೇನೆ ಬಿಡು" ಅನ್ನುವವ.ಏನೋ ಮಾಡ್ತಿರಬೇಕು
ಎಂದುಕೊಂಡು,ಆರಾಮಾಗಿ/ ಯಾವುದೂ ಗಡಿಬಿಡಿಯೇ ಇಲ್ಲದೇ
ಹೋಗಿ ಬಾಗಿಲು ತೆಗೆದೆ. ಚೀರುವದೊಂದು ಬಾಕಿ...ಆರು ಫೂಟಿನ ಚೌಕಟ್ಟಿನ ಬಾಗಿಲುದ್ದಕ್ಕೂ ಹರಡಿ ನನ್ನ ಮಗ ನಿಂತಿದ್ದಾನೆ.ದೂರದ ಅಮೇರಿಕದಲ್ಲಿ ಇರಬೇಕಾದವ ನಸುಕಿನ ಗಾಳಿಯೊಂದಿಗೆ ತೇಲಿ ಬಂದಂತೆ... ಒಂದು ಉದ್ಗಾರ/ ಒಂದು ಚೀರುದನಿಯ ಸ್ವಾಗತ/ ಒಂದು ಅಪ್ಪುಗೆ ಬಾಗಿಲಲ್ಲೇ ಆಯ್ತು .ಅದರ ಬಿಸುಪನ್ನು ಇನ್ನಷ್ಟು ಹೆಚ್ಚಿಸುವ ಚಂದದ ಸ್ವೆಟರನ್ನು ಮೈಮೇಲೆ ಹೊದಿಸಿದ.ನಂತರ ಗೊತ್ತಾದದ್ದು- ಈ ಬಗ್ಗೆ ಎಲ್ಲರಿಗೂ ಮೊದಲೇ ಗೊತ್ತಿತ್ತು, ಎಲ್ಲರೂ ಮಾತನಾಡಿಕೊಂಡೇ ನನಗೆ surprise ಕೊಡುವ ಆಟ ಆಡಿದ್ದರು.
               ನಂತರ ಮಾಮೂಲು ಹರಟೆ, ಸೊಸೆ / ಮೊಮ್ಮಕ್ಕಳೊಂದಿಗೆ
ವೀಡಿಯೋ ಕಾಲ್/ ಒಂಚೂರು ಸುತ್ತಾಟವಾದ ನಂತರ ತನ್ನ  ಮನೆಗೆ ಹೋದ.ಇನ್ನೂ ಎರಡುವಾರಇರುತ್ತಾನೆ. ಮೈಸೂರನ್ನೂ ಸೇರಿಸಿ ಒಂದೆರಡು programs ಆಗಬಹುದು...
               ಇದೇನೂ ಮಹಾ ಸ್ಫೋಟಕ/
ಅಥವಾ breaking news ಅಲ್ಲ 
ಗೊತ್ತು.ಆದರೆ ದಿನಗಳೆದಂತೆ ಬಾಡುವ ಹೂಗಳಿಗೆ ನಾಲ್ಕು ಹನಿ ನೀರು ಮತ್ತೆ ಸಿಂಪಡಿಸಿದಂತೆ.ಅಷ್ಟೇ ಹೊಸ ಭಾವ, ಹೊಸ ಚೇತನ.ಇಂಥ ಕೆಲ surprise ಗಳೇ ಅಲ್ಲವೇ ಬದುಕಿನ ಚಂದವನ್ನು ಕಟ್ಟಿ ಕೊಡುವದು!!! ನೀರು ಬೊಗಸೆಯಷ್ಟೇ ಆದರೇನು ಅದು  ಜೀವ ಜಲವೇ ತಾನೇ!!!
     



Saturday, 21 January 2023

ನಾನು ಹುಟ್ಟಿದ ಹನ್ನೊಂದು ದಿನಕ್ಕೇನೇ
ಶ್ರೀಮತಿ-ಯಾದವಳು.ಅಂದರೆ ಕುಮಾರಿ ಶ್ರೀಮತಿ. ಮೊದಲೆಲ್ಲ ಎಂಥ ಚಂದದ ಹೆಸರು ಎಂದು ಉಬ್ಬಿ ಸಂಭ್ರಮಿಸಿದವಳಿಗೆ ಪೇಚಾದದ್ದು ನಾನು BEd ಮಾಡಲು ಕುಮಠಾ ಸೇರಿದಾಗ...ಮನಿಯಾರ್ಡರ್ ಬಂದಾಗ
ನನ್ನದೇ ಎಂದು ಖಾತ್ರಿಮಾಡಿಕೊಳ್ಳುತ್ತಿ ದ್ದ postman ಶ್ರೀಮತಿ ಗೊತ್ತಾತ್ರಿ,.. ಮುಂದ ಹೇಳ್ರಿ ಅಂತ...ಮದುವೆಯಾದ ಮೇಲೆ ನನ್ನವರದು ಸ್ವಲ್ಪು ಕೈ ಬಿಗಿ.ನಾನೋ ಧಾರಾಳಿ.ಹೀಗಾಗಿ ಏನೇನೋ ಲೆಕ್ಕ ಒಪ್ಪಿಸಿ ಹಣ ಪಡೆಯಬೇಕಾಗುತ್ತಿತ್ತು," ಅಪ್ಪ/ ಅವ್ವ
ಸರೀ ಹೆಸರಿಟ್ಟಾರ್ನೋಡು,' ಶ್ರೀ' ಯನ್ನು
ಲಪಟಾಯಿಸೋದ್ರಲ್ಲಿ  ಸಮಸ್ತ ' ಮತಿ'-
ಯನ್ನು ಬಳಸ್ತೀ- ಇದು ನನ್ನವರ ಕಾಯಂ ಜೋಕು.ಮಗನ ಹೆಸರು ' ನಾರಾಯಣ'_ ಉತ್ತರಕರ್ನಾಟಕದಲ್ಲಿ' ನಾನಿ...ನಮ್ಮಲ್ಲಿಯ ಟೀಚರ್ ಒಬ್ರು
ತುಂಬ ತಮಾಷೆ." ಕೌಲಗಿ ಟೀಚರsss ಮಗಾ ಅರ್ಭಾಟ ಇದ್ದಾನ.ದೊಡ್ಡವ ಆಗ್ಲಿ ನೋಡ್ರಿ, ಹುಡಿಗ್ಯಾರು- ನಾ- ನೀ,
ನಾ- ನೀ ಅಂತ ದುಂಬಾಲ ಬೀಳ್ತಾರ ಅಂತ ಛೇಡಸ್ತಿದ್ರು. ಮಗಳಿಗೆ 'ಚಂದಲಾ' ಅಂತ ಕುಲ ದೇವತೆ (ಚಂದಲಾ ಪರಮೇಶ್ವರಿ)ಯ ಹೆಸರು
ಇಟ್ವಿ...ಎಲ್ಲರೂ' ಏನ್  ಚಂದಲಾ?'- 'ಎಷ್ಟ ಚಂದಲಾ? 'ಭಾಳ ಚಂದಲಾ? '-
ಸುರುವಾತು...ಇನ್ನೊಂದು ಹೆಸರು ಇತ್ತು, ನಮಿತಾ ಅಂತ - ಶಾಲೆಗೆ ಅದನ್ನ
ಹಚ್ಚಬೇಕಾಯ್ತು.ನಮ್ಮ ಗೆಳತಿಯ ಹೆಸರು ಗೀತಾ,ಅವಳ ತಂಗಿಯರು ಲತಾ/ ಸವಿತಾ/ ವನಿತಾ/ ಕವಿತಾ. ಅವರ ತಮ್ಮ ತುಂಬ ತಮಾಷೆ.'ತಾ' ದಿಂದ ಮುಗಿಯುವ ಹೆಸರುಗಳು ಮುಗಿದ ಮೇಲೆಯೇ ನಮ್ಮಮ್ಮ ಹೆಣ್ಣು
ಹಡೆಯುವದು ಮುಗಿಸಿದ್ದು - ಎಂದು ನಗಿಸುತ್ತಿದ್ದ.ಇನ್ನೊಬ್ಬ ಮಗಳ ಹೆಸರು,
' ಚೇತನಾ' ಚಿಕ್ಕವಳಿದ್ದಾಗ ತುಂಬ ಅಳುತ್ತಿದ್ದಳು.ಕೆಲವೊಮ್ಮೆ ' ಚೇತಿ' ನೂ
ಆಗುತ್ತಿತ್ತು.ನನ್ನ ತಮ್ಮ ಅವಳೆದುರು ಹಾಡುತ್ತಿದ್ದ,
ಬೇಕಾದಷ್ಟು ತಿಂತಿ
ಬೇಕಾದಾಗ ಉಣ್ತಿ
ಆದರೂ ಯಾಕಷ್ಟ ಅಳತಿ?
ಹೇಳವ್ವಾ ಚೇತಿ... ಅಂತ...
          ನನ್ನ ಅಣ್ಣನ ಹೆಸರು ಪ್ರಹ್ಲಾದ.
ಉತ್ತರ ಕರ್ನಾಟಕದಲ್ಲಿ ' ಪಲ್ಯಾ' ಅವನ ಮಗ ' ನನಗ ಆ ಪಲ್ಯ ಬ್ಯಾಡಾ ಸೇರೂದಿಲ್ಲ ಅಂತ ಯಾವುದಾದರೂ ಪಲ್ಯಕ್ಕೆ ಹೇಳಿದರೆ,ಅವನ ಪ್ರಶ್ನೆ," ನಿನಗ ಖರೇನ ಸೇರೂದಿಲ್ಲೋ? ಏನ್ ನನ್ನ ಹೆಸರು ಪಲ್ಯಾ - ಅಂತ ಅದನ್ನ ತಿನ್ನೋದಿಲ್ಲೋ...? ಇವಿಷ್ಟಾದ್ರೂ ನಮ್ಮನೀ ಹೆಸರsss ಮುಗದಿಲ್ಲ.ಎಲ್ಲಾ ಬರದ್ರ ನಂದೂ ಒಂದು ಅಂಕಣ ಬರಹ
ಆಗೋದು ಗ್ಯಾರಂಟಿ...

 ಮನೆಯಲ್ಲಿಯೇ ಒಂಟಿಯಾಗಿ... 

          " An idle mind is a devil's
WIRKSHOP ಅನ್ನುವ ಮಾತೊಂದಿದೆ. ನಮ್ಮ ಕನ್ನಡದಲ್ಲಿಯ" ಉದ್ಯೋಗವಿಲ್ಲ ದ ಬಡಗಿ ಏನೋ ಕೆತ್ತಿ ಮಣೆ ಮಾಡಿದ"...ಎನ್ನುವದೂ ಇದನ್ನೇ ಧ್ವನಿಸುತ್ತದೆ.ಒಂದು ಖಚಿತವಾದ ಉದ್ದೇಶವಿಲ್ಲದೇ ಹೊತ್ತು ಕಳೆಯಲು  ಏನಾದರೂ ಮಾಡಿದರಾಯಿತು ಬಿಡು- ಅಂತ ಮಾಡಿದರೆ ಅದರಲ್ಲಿ ಯಾವುದೇ ಗತಿ/ಲಯ/ ತಾಳವಿರುವದಿಲ್ಲ. ಉದಾಹರಣೆಗೆ ಅದು ಕನ್ನಡಿಯ ಮುಂದೆ ನಿಂತುಕೊಂಡು ದೇಹದ ಇಂಚು ,ಇಂಚನ್ನು ಅಳೆದು ನೋಡುವ ದಾಗಿರಬಹುದು, ಬೇಕೆನಿಸಿದ ಕಿಟಕಿ ಯೊಂದನ್ನು ಆರಿಸಿಕೊಂಡು ಕಪ್ಪಿನ ಮೇಲೆ ಕಪ್ಪು ಕಾಫಿ ಮಾಡಿಕೊಂಡು ಹೊರಗೆ ನೋಡುತ್ತ ,ತನ್ನದೇ ಮನಸ್ಸಿನ ಒಳಗೆ ಹಣಿಕಿಕ್ಕುತ್ತಾ ಸ್ವ ವಿಮರ್ಶೆ/ ಸ್ವ ಚಿಂತನೆಗೆ ಇಳಿಯುವದಾಗಲೀ,ದೂರದಲ್ಲಿದ್ದ ಹೆಂಡತಿಯನ್ನು ಗಳಿಗೆ- ಗಳಿಗೆಗೊಮ್ಮೆ ನೆನೆಯುತ್ತ ಅವಳ ಛೇಡಿಸುವಿಕೆ, ರಮಿಸುವಿಕೆಯಲ್ಲಿ ಕಳೆದು ಹೋಗುವದಾಗಲಿ, ಹಳೆಯ ಅಲ್ಬಮ್ವೊಂದನ್ನು ತೆರೆದು, ಹಿಂದೆಂದೋ  ಸೈಕಲ್ನಿಂದ ಬಿದ್ದ ಮಗನ ಕಾಲಿಗೆ ಹಾಕಿದ ಬ್ಯಾಂಡೇಜು ನೆನೆದು ಕಣ್ಣೀರಾಗುವುದು, ಅವನದೇ ಆ ಮೊದಲಿನ ಆಟ/ ಓಟ/ ಊಟಗಳನ್ನು ನೆನೆದು ಆರ್ದ್ರವಾಗುವದು,ಇಲ್ಲದ ಹೆಂಡತಿಯ ಅಧಿಕಾರದ/ಅಕ್ಕರೆಯ/ ತಕರಾರಿನ ದಿನಗಳಿಗಾಗಿ ಕಂಗೆಟ್ಟು ಹಂಬಲಿಸುವದಾಗಲಿ, ಇಂಥವೇ " ಹುಚ್ಚು ಮನಸ್ಸಿನ ಹತ್ತು ಮುಖಗಳ"- ಮೆರೆದಾಟದ ಹಳವಂಡಗಳ ರೀಲು
ಬಿಚ್ಚಿಕೊಂಡರೆ ಆಶ್ಚರ್ಯವಿಲ್ಲ...
               ಮನಸ್ಸೊಂದೇ ಆದರೂ ‌ಏಕಾಂತದಲ್ಲಿ ಅದರ 'ಅಂತರಂಗ' ‌ಬಹಿರಂಗವಾದಾಗ ಅದು ಬೇರೆಯೇ ಆಟವಾಡುತ್ತದೆ‌.ತನಗಿರುವ ‌ಚೌಕಟ್ಟನ್ನು ‌ಮೀರಿಸ್ವತಂತ್ರವಾಗಿ,‌ಯಾವುದೇ ‌‌ಹೊರ ‌‌ಒತ್ತಡದ ‍ಹಂಗಿಲ್ಲದೇ ‌ಅನಾವರಣಗೊಳ್ಳುತ್ತದೆ.ಆಗಇದ್ದದ್ದು ‌ಇಲ್ಲದ್ದಾಗಿ, ಇಲ್ಲದ್ದುಇದ್ದಂತೆ ‌ಭ್ರಮೆಯುಂಟಾಗಬಹುದು.
ತಪ್ಪಿಲ್ಲದೇ ಮರುಗಬಹುದು.ತಪ್ಪು ಮಾಡಿದ್ದನ್ನು ‌ಸಮರ್ಥಿಸಿಕೊಳ್ಳಬಹುದು
‌ಏಕೆಂದರೆ ‌ನಾವು ‌ಮನುಷ್ಯನನ್ನು‌ ‍ಕಟ್ಟಿಹಾಕಬಹುದು...ಅವನ ‌ಮನಸ್ಸನ್ನಲ್ಲ...
  ‌‌‌        ಇದು ‌ಕಥಾ ‌ಸಂಕಲನದ ‌ಕೊನೆಯ‌‌‌ ‌ಕತೆ
ಯಾದರೂ ಅದು ‌ತೆರೆದಿಟ್ಟ ‌ವಿಷಯ
ವಸ್ತುವಿಗೆ ‌ಕೊನೆಯೆಂಬುದಿಲ್ಲ.‌ಏಕೆಂದರೆ ಮನುಷ್ಯನ ಮರ್ಕಟ ಮನಸ್ಸಿಗೆ/ ಅದರ ‌ಮೂಡುಗಳಿಗೆ ‌ಹತ್ತಾರು ‌ಬಾಗಿಲುಗಳು...‌ವಿಶಾಲವಾದ French Window ‌ಗಳು...
   ‌‌‌‌‌   




ಆರು ಕತೆಗಳ ನಂತರ 'ನನ್ನದೇ' ಏಳನೇಯದು...

   ‌‌   * " ನಾನು ಪುಸ್ತಕಗಳನ್ನು ಓದುತ್ತೇನೆ...

*ಪುಸ್ತಕಗಳನ್ನು ಬಿಟ್ಟು ಬೇರೇನೂ ಓದಲಾರೆ...

* ನಾನು ಓದುವುದು ಬರಿ ಪುಸ್ತಕಗಳನ್ನು ಮಾತ್ರ...
               ಎಂದು ಭಗವದ್ಗೀತೆಯ ಮೇಲೆ ಕೈಯಿಟ್ಟು ಆಣೆಯನ್ನೇನೂ ಮಾಡಿರಲಿಲ್ಲ, ನಿಜ.ಆದರೆ ಬಾಲ್ಯದಲ್ಲಿ ನಡೆದುಕೊಂಡದ್ದು ಮಾತ್ರ ಹಾಗೇ... ಭರ್ತಿ ಹನ್ನೊಂದು ಜನರ ಕುಟುಂಬ ದಲ್ಲಿ ಮಧ್ಯಮಳಾಗಿ ಅತ್ತ ಹಿರಿಯರ ಲೆಕ್ಕಕ್ಕೂ/ ಇತ್ತ ಕಿರಿಯರ ಲೆಕ್ಕಕ್ಕೂ ಸಲ್ಲದ ನನ್ನದು ತ್ರಿಶಂಕು ಸ್ಥಿತಿ. ಹಿರಿಯ ಮಗಳೆಂಬ‌ ಗೌರವ, ಕಿರಿಯಳೆಂಬ ಕಕ್ಕುಲಾತಿ ಎರಡೂ  ಇಲ್ಲದೇ
' ತೌಡು ಹಾಕಿ ತಂದೆವು' - ಅಂತಿದ್ದರಲ್ಲ
ಹಾಗೆ ಇದ್ದವಳು.ಅದು ನನಗೆ ವರವೇ ಆಯಿತು.ಕೊಳ್ಳಲು ಸಾಮರ್ಥ್ಯ ಇಲ್ಲದಿದ್ದರೂ ನನಗಿದ್ದ ಗೆಳತಿಯರು/ ಪರಿಚಯಸ್ಥರಿಂದ ದೈನಂದಿಕ/ ಸಾಪ್ತಾಹಿಕ/ ಪಾಕ್ಷಿಕ/ ಮಾಸಿಕ/ದ್ವೈಮಾಸಿಕ/ ವಾರ್ಷಿಕ ಎಲ್ಲ ಪತ್ರಿಕೆಗಳನ್ನು ಕಡಪಡೆದು/ ಜವಾಬ್ದಾರಿಯಿಂದ ಹಿಂದಿರುಗಿಸಿ ಅದೇ ವಿಶ್ವಾಸದ ಭರವಸೆಯ ಮೇಲೆ ಸಿಕ್ಕ ಕಾದಂಬರಿಗಳನ್ನೂ ಓದುತ್ತಾ/ ಶಕ್ಯವಿದ್ದಷ್ಟು ಅರಗಿಸಿಕೊಳ್ಳುತ್ತ ಹೈಸ್ಕೂಲಿನಲ್ಲಿರುವಾಗಲೇ ಅಷ್ಟಿಷ್ಟು ಗೀಚುವ ಗೀಳು ಅಂಟಿ, ಬೆಳೆದು,
ಮುಂದೊಮ್ಮೆ ಮೂವತ್ತೇಳನೇ
ವರ್ಷಕ್ಕೇನೆ ಒಂಟಿ ಹೆಗಲ ಮೇಲೆ ಸಂಸಾರದ ಭಾರ ಬಿದ್ದಾಗ,ಅದನ್ನೇ ಬಳಸಿಕೊಂಡು, ಆಕಾಶವಾಣಿಯಲ್ಲಿ ನಿಯಮಿತವಾಗಿ ಕಾರ್ಯಕ್ರಮಗಳನ್ನು
ಕೊಡುತ್ತ ನನ್ನ ಆದಾಯಕ್ಕೆ/ ಖರ್ಚಿಗೆ
ಹೊಂದಾಣಿಕೆ ಮಾಡಿಕೊಂಡದ್ದೀಗ 
ಇತಿಹಾಸ.ಆದರೆ ಓದು- ಬರಹ ಅಷ್ಟಕ್ಕೇ ಸೀಮಿತವಾದದ್ದು ನನ್ನ ದುರ್ದೈವ.ಮುಂದೆ ನಿವೃತಳಾದರೂ
ಅದಕ್ಕೆ ಮೈ ಮನಸ್ಸು ಒಗ್ಗಲೇಯಿಲ್ಲ." It's O.K.to be LAZY- ಅಂದುಕೊಂಡು ಹಾಯಾಗಿಯೇ ಇದ್ದೆ.
ಹತ್ತು ವರ್ಷಗಳ ಹಿಂದೆ Smart phone/ advance technology
ಬಂದಮೇಲೆ ನನ್ನ ಸುತ್ತ ಬೆಳೆದ ಹುತ್ತ
ತಂತಾನೇ ಸಡಿಲಾಗಿ ಮತ್ತೆ ಬರಹಕ್ಕೆ ಹಿಂದಿರುಗಿ ಮೂರು ಪುಸ್ತಕಗಳನ್ನು
ಬರೆದೆ. But it was too late... ಆಗಲೇ ಬಂದ Covid- 19 ಮಹಾಮಾರಿ ಎರಡು ವರ್ಷಗಳ‌ ಕಾಲ ಉಳಿದು ಅಗತ್ಯವಾದ ನನ್ನ ಕಣ್ಣಿನ Operation ನನ್ನು ಮುಂದೂಡುತ್ತಲೇ
ಹೋಗುವಂತೆ ಮಾಡಿ ನನ್ನ ಓದು- ಬರಹದ ರೂಢಿಯನ್ನು ನಿರ್ದಯವಾಗಿ
ಕಸಿದುಕೊಂಡು ಮನಸ್ಸು ಬಂದರೆ ಎರಡು ಪುಟ ಓದುವದು/ ಎರಡು ಸಾಲುಗಳನ್ನು ಗೀಚುವುದಕ್ಕೆ ತಂದು ನಿಲ್ಲಿಸಿತ್ತು.
              ನಾನೇನೂ ' ಉದ್ದಾಮ' ಬರಹಗಾರಳಲ್ಲ- ' ಮುದ್ದಾಂ ಬರಹಗಾರಳು.' ' ಬಡವಾ,ನೀ ಮಡಗಿದ್ಹಂಗಿರು'- ಅಂತ ಹಾಯಾಗಿ ಇದ್ದೇನೆ.ಆದರೆ ಯಾರಾದರೂ ಪುಸ್ತಕ ಕಳುಹಿಸಿದರೆ thanks ಹೇಳಿ ಸುಮ್ಮನೇ ಕೂಡುವುದಾದರೂ ಹೇಗೆ? K. Nallatambi ಯವರೂ ಎರಡು ಪುಸ್ತಕಗಳನ್ನು ಕಳುಹಿಸಿದ್ದರು.ಅವರಿಗೆ
ನನ್ನ ಸಮಸ್ಯೆ ನಿವೇದಿಸಿಕೊಂಡು ಸಮಯ ಬೇಡಿದ್ದೆ.ಆಗ ಮೂರನೇಯ ದಾಗಿ ಅವರ ಆರೇ ಅನುವಾದಿತ ಕಥೆಗಳ ಸಂಕಲನ  post ನಲ್ಲಿ ಬಂತು. ದಿನಕ್ಕೊಂದೇ ಓದಿ ಅದರ ಬಗ್ಗೆ ಒಂದು
Paragraph ಬರೆಯುವ ನಿರ್ಧಾರ ತೆಗೆದುಕೊಂಡೆ.ಬರೆದು ಕಳಿಸುತ್ತಲೂ ಬಂದೆ.ಅವರು ಅಭಿಮಾನದಿಂದ
ಅವುಗಳನ್ನು ಪ್ರೀತಿಯಿಂದ fb ಯಲ್ಲಿ ಹಂಚಿಕೊಂಡಾಗ ನಾನು ಆ ಕೆಲಸಕ್ಕೆ
ಪ್ರೀತಿಯಿಂದಲೇ Commit ಆದೆ, ತೋಚಿದ್ದು ಬರೆದೆ.ಅದು ಖಂಡಿತ
ಅವರ ಅನುವಾದದ ಕತೆಗಳ ವಿಮರ್ಶೆಯಲ್ಲ. ನಾನು ಅವುಗಳನ್ನು
 ಓದಿ/ಅರ್ಥೈಸಿಕೊಂಡ ರೀತಿ ಮಾತ್ರ...
ಆದರೆ ಅದೊಂದು ವಾರದ Task ಆಗಿ,
ನನ್ನನ್ನು ಅದಕ್ಕೆ ಸಿದ್ಧಗೊಳಿಸಿ, ಸಮರ್ಥವಾಗಿ ಮಾಡಿ ಗೆದ್ದದ್ದು ಸಂತೋಷವಾದರೆ ಅದಕ್ಕೆ ಮೂಲ ಕಾರಣ ನಲ್ಲತಂಬಿ ಸರ್ ಮಾತ್ರ ಕಾರಣ...ಅವರಿಗೆ, ಅವರ ಪ್ರೀತಿ- ಅಭಿ
ಮಾನಗಳಿಗೆ, ಅವರ ಕೊಟ್ಟ task ಗೆ,
ಅವುಗಳನ್ನು ಹಂಚಿಕೊಂಡು ಪ್ರೋತ್ಸಾಹಿಸಿದ್ದಕ್ಕೆ, ಮುಖ್ಯವಾಗಿ
ಮತ್ತೊಮ್ಮೆ ಓದು- ಬರಹಕ್ಕೆ ನನ್ನನ್ನು ತಾತ್ಪೂರ್ತಿಕವಾಗಿಯಾದರೂ ಮರಳಿ
ತಂದದ್ದಕ್ಕೆ ನನ್ನ ಹಾರ್ದಿಕ ಧನ್ಯವಾದಗಳು...




Friday, 20 January 2023

ಐದನೇ ಕಥೆ...
ಕನ್ನಡಿ...
       ‌‌‌‌     ಈ ಕತೆ ಓದಿ ಮುಗಿಸಿದಾಗ ನನಗೆ ನೆನಪಾದದ್ದು ಹಿಂದೆ ಏಳನೇ ಇಯತ್ತೆಯ ಇಂಗ್ಲಿಷ ಪುಸ್ತಕ ದಲ್ಲಿದ್ದ
The magic wand - ಎಂಬ ಕಥೆ.ಫ್ರೆಂಜ್ ಎಂಬುವವನೊಬ್ಬ ಬಡಹುಡುಗ.ಹಸಿವೆ ನೀಗಿಸಲು ಕೆಲಸದ ಹುಡುಕಾಟದಲ್ಲಿದ್ದ ಅವನಿಗೆ ದುಡ್ಡಿಗಿಂತಲೂ ಒಬ್ಬ ಒಳ್ಳೆಯ ಮಾಲಿಕನ  ಅವಶ್ಯಕತೆ ಇತ್ತು.ಆಗ ಒಬ್ಬ  ಅವನಿಗೆ ಮಾಂತ್ರಿಕ ಶಕ್ತಿ ಇರುವ 
ದಂಡವೊಂದನ್ನು ಕೊಟ್ಟು ಅದನ್ನು ಯಾವ ವ್ಯಕ್ತಿಗೆ ತಾಗಿಸುತ್ತಾನೋ ಅವನ ಮನಸ್ಸಿನ ಯೋಚನೆಗಳನ್ನು ಅವನಿಗೆ ಹೇಳುತ್ತದೆ ಎಂದು ಹೇಳುತ್ತಾನೆ. ಅದರ ಸಹಾಯದಿಂದ ಅವನು ತನ್ನ ಮಾಲಿಕನನ್ನು ಹುಡುಕಿಕೊಳ್ಳುವಲ್ಲಿ
ಸಫಲವಾಗುವಲ್ಲಿಗೆ ಕಥೆ ಮುಕ್ತಾಯವಾಗುತ್ತದೆ.ಇಲ್ಲಿ ದಂಡದ ಬದಲು 'ಕನ್ನಡಿ' ಆ ಕೆಲಸ ಮಾಡಿದ ಹಾಗೆ ಅನಿಸಿತು.
            ಕಥೆಯ ಮೊದಲ ಪರಿಚ್ಛೇದದಲ್ಲಿ ಹೇಳಿದಂತೆ ಮಾತನಾಡುವವರಲ್ಲಿ ಹಲವು ಹತ್ತು
ಬಗೆಗಳಿದ್ದರೂ ಪ್ರತಿ ಮನುಷ್ಯನಿಗೂ
ತನ್ನದೇ ಆದ signature manner
ಎಂಬುದೊಂದು ಇರುತ್ತದೆ.ಇಲ್ಲಿ ಕಥಾನಾಯಕ ಕನ್ನಡಿಯನ್ನೇ  ಮಾಧ್ಯಮವಾಗಿಸಿ ತನ್ನ ಹೆಂಡತಿ/ ಮಗ/ ನಾರಾಯಣ/ ಮ್ಯಾನೇಜರ್/ MD ಅಷ್ಟೇ ಏಕೆ ಒಂದು ಹಲ್ಲಿಯ ಲೊಚಗುಟ್ಟುವಿಕೆಯನ್ನೂ ಬಳಸಿ ತನ್ನ
ಅಂತರಂಗವನ್ನೇ ಬಹಿರಂಗವಾಗಿ/ ಪರೋಕ್ಷವಾಗಿ/ ತನ್ನಿಚ್ಛೆಗೆ ಅನುಗುಣವಾಗಿ ಬಿಚ್ಚಿ ಹರಹುತ್ತಾನೆ. ಅವರು ಮಾತನಾಡಿದ್ದೆಲ್ಲವೂ ಅವನೊಳಗಣ ಅವ್ಯಕ್ತ ಭಾವನೆಗಳ/ ಯೋಚನೆಗಳ ಬಹಿರಂಗ ಶಬ್ದರೂಪ ಗಳೇ ಹೊರತು ಅವರವಲ್ಲ.ಇದು ಈ ಕಥಾ ಸಂಕಲನದ ಉಳಿದ ಕಥೆಗಳಿಂದ ಈ ಕಥೆಯ ಹಂದರವನ್ನು ಭಿನ್ನವಾಗಿ ಸಿದೆ. ಏನೇ ಆದರೂ ಕಲ್ಪನೆಗೆ
/ ಯೋಚನೆಗೆ/ ವಿಚಾರ ಲಹರಿಗೆ ವಾಸ್ತವದಂತೆ ಮೂಲ ದ್ರವ್ಯಗಳ ಗಟ್ಟಿ ಆಧಾರವಿರುವದಿಲ್ಲ. ಅವುಗಳಿಗೆ ಕೊಂಡಿ ಕಳಚುವವರೆಗೆ ಮಾತ್ರ
ಅಸ್ತಿತ್ವವಿರುತ್ತದೆ, ಒಮ್ಮೆ ಅದು ಕಳಚಿತೋ ಕೆಳಕ್ಕೆ ಒಗೆದ ಕನ್ನಡಿಯಂತೆ
ಕ್ಷಣವೊಂದರಲ್ಲಿ  ಚೂರು ಚೂರು...
ಈ ಕಥೆಯ ಅಂತ್ಯದಲ್ಲಿ ಆದದ್ದೂ ಇದೇ...ಆ ಎಲ್ಲ ಚೂರುಗಳಲ್ಲೂ ಅವನವೇ ಹಲವು ಬಗೆಯ ಚದುರಿದ 
ಮುಖಗಳು...ಸ್ವಂತ ಹೆಂಡತಿಗೆ ಮುಂದೆ
ಬರಬಹುದಾದ  ಯಾವೋ ' ಗ್ರಹಚಾರಗಳು...'
         

Thursday, 19 January 2023

ನಾಲ್ಕನೇ ಕಥೆ 
'ಆಲ್ಬರ್ಟ್ ಕಮೂವಿನ ಔಟ್ ಸೈಡರ್'

             ಈ ಕಥೆ ಹೆಸರಿಗೆ ಸಣ್ಣಕಥೆ ಯಾದರೂ ಓದಿದಾಗ ಬಾಲಕೃಷ್ಣ ಪುಟ್ಬ ಬಾಯಿ ತೆರೆದಾಗ ಕಂಡ ' ವಿರಾಟ ರೂಪ' ದರ್ಶನವಾದಂತಾಗುತ್ತದೆ.
 ‌‌‌‌       'ಸ್ಟಾರ್ ಕ್ರೂಜ'- ಒಂದರ ಅಪರ್ ಡೆಕ್ ನಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ ಆರಂಭವಾದ ಕತೆ, ಕಥಾನಾಯಕ ಅನಿರುದ್ಧನ ಅಲ್ಬರ್ಟ್ ಕಮೂವಿನ- Out sider- ಪುಸ್ತಕದ ಓದಿನೊಂದಿಗೆ   ಶುರುವಾಗಿ , ಅವರ ಶಿವಮೊಗ್ಗೆಯ 
ಕೂಡು ಕುಟುಂಬದ ಪರಿಚಯ/ಆ ಕುಟುಂಬದ ಹಿರಿಯ ಮಗನ ಮಗನಾದ ಅನಿರುದ್ಧನಿಗೆ ಸಿಕ್ಕ ವಿಶೇಷ ಸ್ಥಾನಮಾನ- ಸವಲತ್ತುಗಳು/  ಅವುಗಳಿಂದಾಗಿ ಮಾಡಿಕೊಂಡ ತಾತ್ಪೂರ್ತಿಕ ಸ್ನೇಹವಲಯದಿಂದ
ಎಡವಟ್ಟಾದ ಹಸಿಬಿಸಿ/ಕಚ್ಚಾ ಹರೆಯದ ಪೀಕಲಾಟಗಳು/ಅನನುಭವ ಜನ್ಯ ಮಾನಸಿಕ ತೊಳಲಾಟಗಳು/ ಆದರೂ
ಕೂಡುಕುಟುಂಬದ ಸಂಸ್ಕೃತಿಯ ಪರಿಣಾಮವೋ, ಎಲ್ಲೋ ಒಂದುಕಡೆ
ದಾರಿ ತಪ್ಪದಂತೆ ಕಾವಲಿಗೆ ನಿಂತ ವಿವೇಕವೋ ಅವನು ಅದರಿಂದ ಪಾರಾಗಿ ನೌಕರಿಗಾಗಿ ಊರುಬಿಟ್ಟು ಸ್ನೇಹಿತನ ನೆರವಿನಿಂದ ಪಟ್ಟಣ ಸೇರಿ ಓದಿದರೂ ಕೈ ಹಿಡಿಯದ ಅದೃಷ್ಟದಿಂದಾಗಿ ಹಸಿದು ಕಂಗಾಲಾಗಿ
ಪುಸ್ತಕದಂಗಡಿಯಿಂದ ಒಂದು ಪುಸ್ತಕ ಕದ್ದು, ಸಿಕ್ಕುಬಿದ್ದು, ಮ್ಯಾನೇಜರ್ ನ ಕರುಣೆಯಿಂದಾಗಿ ಪಾರಾಗುತ್ತಾನೆ. 'ಹಿಂದಿನ ಬಾಗಿಲಿನಿಂದ ಹೋಗು'- ಎಂಬ ಅವನ ಮಾತು/ ಹೊರಡುವ ಸಮಯದಲ್ಲಿ ಅವನು ಅನಿರುದ್ಧನ ಕೈಗಿತ್ತ ಹತ್ತರ ಎರಡು ನೋಟುಗಳು
ಅವನ ವ್ಯಕ್ತಿತ್ವವನ್ನುಸಂಕುಚಿತಗೊಳಿಸಿ  ಹಿಡಿಗಾತ್ರಕ್ಕೆ ಇಳಿಸಿದ್ದಲ್ಲದೇ ಇಡೀ ಬೆಂಗಳೂರೇ ತನ್ನನ್ನು ಬೆತ್ತಲಾಗಿಸಿ ನೋಡುತ್ತಿದೆ ಎಂಬ ಭಾವ ಬಲಿತು
ಕುಗ್ಗಿಹೋದಾಗ, ಆಕಸ್ಮಿಕವಾಗಿ ಈ ಹಿಂದೆ ಕೊಟ್ಟ ಸಂದರ್ಶನವೊಂದರಲ್ಲಿ
ಆಯ್ಕೆಯಾಗಿ Travel agency ಒಂದರಲ್ಲಿ ಕೆಲಸ ಸಿಕ್ಕು ಅವನ ಬದುಕಿನ ಜೊತೆ ಜೊತೆಗೆ ಕಥೆಯೂ  ಬ್ರಹತ್ ತಿರುವು ಪಡೆಯುತ್ತದೆ. ಮುಂದೆ ಶ್ರದ್ಧೆಯಿಂದ ದುಡಿದು ಹಂತಹಂತವಾಗಿ ಬದುಕಿನಲ್ಲಿ/ವೃತ್ತಿಯಲ್ಲಿ ಮೇಲೇರುತ್ತ ಹೋಗಿ ಇಚ್ಛಿತ ಗುರಿ ತಲುಪಿದ ಎಷ್ಟೋ ವರ್ಷಗಳ ನಂತರ ಆ ಪುಸ್ತಕದ ಅಂಗಡಿಗೆ ಹೋಗಿ ಹತ್ತುರೂಪಾಯಿಗಳ ಎರಡು ನೋಟು ಹಿಂದಿರುಗಿ ಕೊಡಲು ಹೋದಾಗ ಅವರಿಂದ ಗೌರವಾದರ ಪಡೆದು ಧನ್ಯತಾ ಭಾವ ಅನುಭವಿಸುತ್ತಾನೆ. ನಮಸ್ಕರಿಸಿ  ಹೊರಡುವ ಸಮಯದಲ್ಲಿ ಮ್ಯಾನೇಜರ್ ಅವನ ಕೈಗೊಂದು ಕವರ್ ಕೊಟ್ಟು " ಮುಂದಿನ ಬಾಗಿಲದಿಂದ ಹೋಗು" ಎಂಬಲ್ಲಿಗೆ
ಕಥೆ ಮುಕ್ತಾಯವಾಗುತ್ತದೆ.ಆ ಕವರ್ ನಲ್ಲಿ ಹಿಂದೊಮ್ಮೆ ಕದ್ದು ಅಪಮಾನಿತ ನಾದ ಅಲ್ಬರ್ಟ್ ಕಮೂವಿನ " Out sider" ಪುಸ್ತಕದ ಪ್ರತಿಯೇ ಇರುತ್ತದೆ. 
    ‌‌‌‌          ' ಹಿಂದಿನ ಬಾಗಿಲು'/ ಮುಂದಿನ ಬಾಗಿಲುಗಳು ಅನಿರುದ್ಧನ ಜೀವನಸ್ತರದ ಸಾಂಕೇತಿಕ ಚಿನ್ಹೆಗಳಾಗಿ
ಮೂಡಿಬಂದಿವೆ. ಕಥೆಯುದ್ದಕ್ಕೂ ಬರುವ ವಿಭಿನ್ನ ಘಟನೆಗಳನ್ನು ಹೆಣೆದ ರೀತಿ ಲೇಖಕನ‌ ಚಾಕಚಕ್ಯತೆಗೆ ಸಾಕ್ಷಿ...
ಏಕೆಂದರೆ ಓದುಗನೊಬ್ಬ  ಓದಿನುದ್ದಕ್ಕೂ ಒಂದು ಗಳಿಗೆಗೂ Out sider ನಾಗಿ ಉಳಿಯಲು ಸಾಧ್ಯವಾಗದೇ ಕಥೆಯಗುಂಟ ತಾನೂ ಒಳಹೊಕ್ಕು ಪಾತ್ರಗಳ ಒಂದು ಭಾಗವೇ ಆಗಿಬಿಡುವಷ್ಟು ಏಕಾತ್ಮನಾಗುತ್ತಾನೆ ಅಂದರೆ ಅದು ಕಥೆಯ/ ಕಥೆಗಾರನ ಯಶಸ್ಸೇ ಸರಿ...






Wednesday, 18 January 2023

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವೆಯಿತ್ತೇ.... ಗೆಳತಿ ||
ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೆ
ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೆ ಕಾಡಿತ್ತೆ
ಅಣ್ಣನ ಕೀಟಲೆ ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ || ೧ ||
ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೆ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು ಬೆಲ್ಲವ ಮೀರಿತ್ತೆ
ಸುಳ್ಳೇ ನೆರಿಗೆಯ ಚಿಮ್ಮುವ ನಡಿಗೆಗೆ ಬಳ್ಳಿಯ ಬೆಡಗಿತ್ತೆ || ೨ ||
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಕಾಣದ ಕೈಯಿ ಎಲ್ಲ ಕದ್ದು ಉಳಿಯಿತು ನೆನಪಷ್ಟೇ ||
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಎಲ್ಲಿ ಜಾರಿತೋ ಮನವು...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ...
ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ
ಎಲ್ಲಿ ಜಾರಿತೋ...
ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೇ ಮೀರಿತೋ, ಇಲ್ಲದಾಯಿತೋ...
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ತೊರೆದು ಹೋಗದಿರೋ ಜೋಗಿ....
ತೊರೆದು ಹೋಗದಿರೋ ಜೋಗಿ.
ಅಡಿಗೆರಗಿದ ಈ ದೀನಳ ಮರೆತು,
ಸಾಗುವೆ ಏಕೆ ವಿರಾಗಿ.
ಪ್ರೇಮ ಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆ ಎನಗೆ.
ನಿನ್ನ ವಿರಹದಲಿ ಉರಿದು ಹೋಗಲು
ಸಿದ್ಧಳಿರುವ ನನಗೆ.
ಹೂಡುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ,
ಉರಿ ಸೋಕಿಸು ಪ್ರಭುವೇ,
ಚಿತೆಗೆ ಪ್ರೀತಿಯಿಂದ ನೀನೇ.
ಉರಿದು ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ.
ಮೀರಾಪ್ರಭು ಗಿರಿಧರನೇ, ಜ್ಯೋತಿಯು
ಜ್ಯೋತಿಯ ಸೇರಲಿ ಹೀಗೆ.
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಬಂದೇ ಬರತಾವ ಕಾಲ...
ಬಂದೇ ಬರತಾವ ಕಾಲ
ಮಂದಾರ ಕನಸನು
ಕಂಡಂಥ ಮನಸನು
ಒಂದು ಮಾಡುವ ಸ್ನೇಹಜಾಲ
- ಬಂದೇ ಬರತಾವ ಕಾಲ
ಮಾಗಿಯ ಎದೆ ತೂರಿ
ಕೂಗಿತೊ ಕೋಗಿಲ,
ರಾಗದ ಚಂದಕೆ
ಬಾಗಿತೊ ಬನವೆಲ್ಲ,
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ
- ಬಂದೇ ಬರತಾವ ಕಾಲ
ಹುಣ್ಣಿಮೆ ಬಾನಿಂದ
ತಣ್ಣನೆ ಸವಿಹಾಲು
ಚೆಲ್ಲಿದೆ ಮೆಲ್ಲನೆ
ತೊಯಿಸಿದೆ ಬುವಿಯನು
ಮುಸುಕಿದೆ ಮಾಯೆ ಜಗವನು
ಬುವಿ ಬಾನು ಸೇರಿ ಹರಸ್ಯಾವ ಬಾಳನು
- ಬಂದೇ ಬರತಾವ ಕಾಲ
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಅಂಥಿಂಥ ಹೆಣ್ಣು ನೀನಲ್ಲ
ನಿನ್ನಂಥ ಹೆಣ್ಣು ಇನ್ನಿಲ್ಲ.
ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!
ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.
ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!
ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.
ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.
ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.
ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.
-- ಕೆ.ಎಸ್.ಎನ್

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.
ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.
ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.
ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.
-- ಕೆ.ಎಸ್.ಎನ್

Tuesday, 17 January 2023

       ‌‌    ಹಗಲು ರಾತ್ರಿಯೆನ್ನದೇ ಇರಬಹುದಾದ ತಮ್ಮದೇ ಕೆಲಸಗಳ ಒತ್ತಡದ ಹೊರತಾಗಿಯೂ ತಮ್ಮ  ಹೆಂಡತಿ/ ಮಕ್ಕಳಿಗಾಗಿ ದುಡಿಯುವ ವರು/ ಸದಾ ಒತ್ತಾಸೆಯಾಗಿ ನಿಲ್ಲುವವರು/ ಎಲ್ಲ ಕೆಲಸಗಳಲ್ಲಿ ಸಮಬಾಳು/ಸಮಪಾಲು ಎಂಬುವವರನ್ನು ಕಂಡಾಗ ಹಿಂದಿನ ಭಾವ ಏನಿರಬಹುದು?-ಎಂದು ನನಗೆ ಕುತೂಹಲವಾಯಿತು. ಉತ್ತರವಾಗಿ ಹೊಳೆದ possible answers...

* ನಾನು ಕೆಲಸವನ್ನು ತುಂಬಾ ಪ್ರೀತಿಸುತ್ತೇನೆ...

* ನನ್ನ ಪ್ರೀತಿ ಪಾತ್ರರಿಗೆ ಖುಶಿ/ಆರಾಮು ಕೊಡುವದು ನನಗೂ  ಖುಶಿ
ಕೊಡುತ್ತದೆ.

* ಇತರರಿಗೆ ಹೇಳಿ ಮಾಡಿಸುವದಕ್ಕಿಂತ
ಮಾಡುವದು ಸುಲಭ...

*ಅನಿವಾರ್ಯತೆ ಇದ್ದಾಗ ಮಾತ್ರ ಇತರರಿಗೆ ತೊಂದರೆ ಕೊಡಬೇಕು...

* Self help is the best help...

* ನನಗೆ ಬೇಕಾದ ರೀತಿಯಲ್ಲಿ ನಾನು ಮಾಡುವ ಸ್ವಾತಂತ್ರ್ಯ ನನಗಿರುತ್ತದೆ...

* ಬೇರೆಯವರು ನಾನಂದುಕೊಂಡಂತೆ
ಮಾಡುವ ಬಗ್ಗೆ ನನಗೆ ಸಂಶಯ...

* 'ನಮ್ಮವರಿಗೆ ನಾನು ಮಾಡಿದೆ'-
ಎಂಬ ಭಾವದ ಒಳಸುಖ...

*' ಪರಸ್ಪರರಿಗಾಗಿ ಒಳಗೊಳ್ಳುವಿಕೆ '-
ಆಪ್ತಭಾವ ಸ್ಫುರಿಸಿ ' ಧನಾತ್ಮಕ-ವಾತಾವರಣ- positive Vibes -
ಸೃಷ್ಟಿಸಲು ಸಹಕಾರಿ...

* ಮಕ್ಕಳು ದೊಡ್ಡವರಾಗಿ ಸ್ವತಂತ್ರರಾದ ಮೇಲೆ ಹೇಗೋ ಏನೋ...ಈ ಒಡನಾಟದ ಸುಖ ಸಿಕ್ಕಾಗಲೇ ದಕ್ಕಿಸಿಕೊಳ್ಳಬೇಕು ಎಂಬ ಸಹಜ ಭಾವ...

* ಗ್ರಹಸ್ಥ ಜೀವನ-ದ ಸಹಜೀವನವನ್ನು ಅಮೂಲ್ಯವಾಗಿಸಿ ಸಿಹಿ ನೆನಪುಗಳಿಗೆ
ಪರಿವರ್ತಿಸುವ ಪ್ರಾಮಾಣಿಕವಾದುದೊಂದು
ಪ್ರಯತ್ನ...

* ಇದಾವುದೂ ಮನಸ್ಸಿನಲ್ಲಿ/ ತಲೆಯಲ್ಲಿ ಇಲ್ಲದೆಯೇ ರಕ್ತಗತವಾಗಿ ಬಂದ (ಆ ಜನ್ಮ‌ರೂಢಿಗತ) ಕಾರ್ಯವೈಖರಿ...


ಚಿಟ್ಟೆಯನ್ನು ಅಟ್ಟಿಸಿಕೊಂಡು ಹೋಗಬೇಡ.ಒಂದು ಬಂಡೆಯ ಮೇಲೆ

* ಚಿಟ್ಟೆಯನ್ನು ಅಟ್ಟಿಸಿಕೊಂಡು ಓಡಬೇಡ.ಕಣ್ಮುಚ್ಚಿ ಒಂದು ಬಂಡೆಯಮೇಲೆ ಕುಳಿತು ಕೋ.ಅದೇ ಹುಡುಕಿಕೊಂಡು ಬರುತ್ತದೆ.

*ಕನಸುಗಳಿಗೆ ಬಹಳ ಶಕ್ತಿ ಇರುತ್ತದಂತೆ.
ತೀವ್ರವಾಗಿ ಬಯಸಿದರೆ ಲೋಕವೇ ಅದನ್ನು ಒದಗಿಸಿಕೊಡಲು ಸಹಾಯ ಮಾಡುತ್ತದೆ.

* Compliments ಗಳಿಗೆ ಪ್ರತಿಕ್ರಿಯಿಸುವದು ನನಗೆ ತಿಳಿಯದು,ಅನೇಕ ಸಲ ಅದು ಔಪಚಾರಿಕವೋ/ ಮುಖಸ್ತುತಿಯೋ/ ವ್ಯಂಗವೋ/ ನಿಜವೋ ಅರ್ಥವಾಗುವದಿಲ್ಲ...

* ರೂಮ್ ತುಂಬ ಚಿಟ್ಟೆಗಳು ಹಾರಿದವು...

* ಹುಣ್ಣಿಮೆಯ ರಾತ್ರಿಯಲ್ಲಿ ಅಲೆಗಳು ಬಂದು ತಮ್ಮನ್ನು ಮುಟ್ಟುವದು ಇಷ್ಟವೆಂದು ಮರಳು ಕಣಗಳು ಮಾತಾಡಿಕೊಂಡದ್ದು ಇಬ್ಬರಿಗೂ ಕೇಳಿಸಿತು...

* ಹಗಲು ಘನ ಆಕೃತಿಗಳಾಗುತ್ತಿದ್ದ ನಾವು  ರಾತ್ರಿಯಾದರೆ ದ್ರವವಾಗಿ ಹೋಗುತ್ತಿದ್ದೆವು...

* ನನ್ನ ಮಾತು ಕದಿಯುತ್ತಿದ್ದಾಳೆ,  'ಸುಂದರ ರಾಕ್ಷಸಿ'

* ಈ ಬಂಧವ( ಅಪ್ಪುಗೆಯ)ನ್ನು ಯಾರು  ಬಿಡುವವರು? ಯಾರು ಬಿಡಿಸಿಕೊಳ್ಳಬೇಕು...
 ‌‌      ‌ನಿಮ್ಮ ಅತ್ತರ್ -ಕಥಾ ಸಂಕಲನದ
ಮೊದಲ ಕಥೆಗೇ ಫಿದಾ ಆದೆ. ಅದೊಂದು ರೂಪಕಗಳಿಂದ ತುಂಬಿದ  ದೃಶ್ಯಕಾವ್ಯ ಅನಿಸಿತು.ಬಹಳ ದಿನಗಳಾಗಿತ್ತು, ಕೂತಪೆಟ್ಟಿಗೆ ಒಂದು ಕಥೆಯನ್ನು ಓದಿ ಮುಗಿಸಿದ್ದು.ಪುಸ್ತಕದ ಅಕ್ಷರಗಳು ಸ್ವಲ್ಪ ಮಟ್ಟಿಗೆ ಚಿಕ್ಕ  ಗಾತ್ರದವು ಇವೆ.ನನ್ನ ಅಶಕ್ತ ಕಣ್ಣುಗಳು
ಮೊದಲು ಸಹಕರಿಸಲಿಲ್ಲ, ನೀರು ತುಂಬುತ್ತಿತ್ತು.ಆದರೆ ಕಥೆಯ ಸೆಳೆತ ಎಷ್ಟಿತ್ತು ಎಂದರೆ ನಾನೂ ನಡುವೆ ಬಿಡಲು ಸುತರಾಂ ಒಪ್ಪಲಿಲ್ಲ. ಕೆಲ ಸಾಲುಗಳನ್ನು ಮತ್ತೆ ಮತ್ತೆ ಓದಿದೆ. ತುಂಬ ಖುಶಿಯಾಯ್ತು. ದಿನಕ್ಕೊಂದೇ ಓದಿ ಅದರ ಸ್ವಾದ ಸುಖಿಸುವ ಮನಸ್ಸಿದೆ. ಕಳಿಸಿದ್ದಕ್ಕೆ ಧನ್ಯವಾದಗಳು. ಅನಿವಾರ್ಯವಾಗಿ ನಾನೀಗ ಓದಿನಲ್ಲಿ ತುಂಬಾನೇ choosy ಆಗಲೇ ಬೇಕಾಗಿದೆ. ಅಂಥದ್ದರಲ್ಲಿ ಈ ಪುಸ್ತಕದಂಥ ಆಯ್ಕೆ ಬೇರಿಲ್ಲ ಅನಿಸಿತು. ಸುಂದರ ಶೈಲಿ/ ಆಪ್ತ ವಿಷಯ/ಒಂದು ಸಲಕ್ಕೆ ಕೆಲವೇ ಪುಟಗಳ ಓದು/ ಅಷ್ಟೇ ಮಟ್ಟಕ್ಕೆ ಅರಗಿಸಿಕೊಳ್ಳುವಿಕೆ ಹಿತವೆನಿಸಿತು. ಹೀಗಾದರೂ ನನ್ನ ಓದು ಮತ್ತೊಮ್ಮೆ ನನಗೆ ಒಲಿಯಲಿ ಎಂಬ ಆಶೆ...

*ಅಮೆರಿಕಕ್ಕೆ ಭೇಟಿ ನೀಡಿರುವ ಹಿರಿಯ ನಾಗರಿಕರೊಬ್ಬರ ಸಲಹೆ:* ಆತ್ಮೀಯ ಸ್ನೇಹಿತರೇ, ನಾವು ಕಳೆದ ಎರಡು ತಿಂಗಳಿನಿಂದ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ವಾಸಿಸುತ್ತಿದ್ದೇವೆ. ...