Saturday 25 May 2019

ಹಾಗೇ ಸುಮ್ಮನೇ...

ಉಪ್ಪು ತಿಂದವರು ನೀರು ಕುಡಿಯಲೇಬೇಕು...
   
           ಒಮ್ಮೆ ಬಡ ಬ್ರಾಹ್ಮಣನೊಬ್ಬ ಧರ್ಮರಾಯನ ಬಳಿ ಸಹಾಯ ಯಾಚಿಸಿ ಬಂದ..ಧರ್ಮಜ ಅವನಿಗೆ ಮರುದಿನ ಬರುವಂತೆ ಕೇಳಿಕೊಂಡ.ವಿಷಯ ತಿಳಿಯುತ್ತಲೇ ಭೀಮ ಊರ ತುಂಬ ಡಂಗುರ ಹೊಡೆಸಿದ," ನಮ್ಮ ಅಣ್ಣ ಒಂದು ದಿನದ ಮಟ್ಟಿಗೆ ಸಾವನ್ನು ಗೆದ್ದಿದ್ದಾನೆ"_ ಎಂದು..ಒಂದು ದಿನವಂತೂ ಸಾಯುವದಿಲ್ಲವೆಂಬ ನಂಬಿಕೆ ಅವನಲ್ಲಿ ಹೇಗೆ ಬಂತು ಎಂಬ ಉಡಾಫೆ ಅದರಲ್ಲಿ ಕಾಣುತ್ತದೆ ಎಂದು ತಿಳಿದ ಯುಧಿಸ್ಟಿರ  ನಾಚಿಕೆಯಿಂದ ಬ್ರಾಹ್ಮಣನನ್ನು ವಾಪಸ್ ಕರೆಸಿ ಅವನಿಗೆಸಹಾಯಮಾಡುತ್ತಾನೆ_ ಇದು  ಮಹಾಭಾರತದ ಒಂದು ಉಪಕಥೆ..ನಿಜವಾ..ಸುಳ್ಳಾ...ಬದಿಗೆ ಇಟ್ಟು ಸಾರವನ್ನಷ್ಟೇ ಕೆದಕೋಣ...
    ‌  ‌" ಸಾವು ಅಂತಿಮ ತೀರ್ಪು...ಅದು ಶಾಶ್ವತ ಸತ್ಯ... ಅನಿಶ್ಚಿತ..ಜೀವನ್ಮರಣದೊಂದಿಗೆ ಸೆಣಸಾಡುವ. ರೋಗಿ ವರ್ಷಗಟ್ಟಲೇ ಬದುಕಬಹುದು...election ಗೆದ್ದ ಉಮೇದುವಾರ  ಸಂಭ್ರಮಾಚರಣೆಯ ವೇಳೆ ಹೃದಯಾಘಾತದಿಂದ ಸಾಯಬಹುದು...ಅಷ್ಟೊಂದು  ನಶ್ವರ  ಈ ಬದುಕು...ಸಾವು_ ಬದುಕಿನ ಮಧ್ಯೆ ಒಂದೇ ಉಸಿರಿನ ಅಂತರ...ಇದ್ದರೆ  ಬದುಕು...ಬಿದ್ದರೆ  ಸಾವು...
      ‌‌‌‌    " ಜಗತ್ತಿನಲ್ಲಿ ಅತಿ ಅಚ್ಚರಿಯ ಸಂಗತಿ ಯಾವುದು? "_ ಇದು ಧರ್ಮರಾಯನಿಗೆ ಯುಧಿಷ್ಟಿರನ ಪ್ರಶ್ನೆ 
... ...
    ‌‌‌"ಪ್ರತಿದಿನ ಮನುಷ್ಯರು ಯಮನಮನೆಗೆ ದಾಳಿ ಇಡುವದನ್ನು( ಸಾಯುತ್ತಿರುವದನ್ನು) ಮಾನವ ನೋಡುತ್ತಲೇ ಇರುತ್ತಾನೆ..ಆದರೆ ತಾನು ಮಾತ್ರ ಈ ಜಗತ್ತಿನಲ್ಲಿ ಶಾಶ್ವತ..ತನಗೆ ಸಾವೆಂಬುದೇ ಇಲ್ಲ ಎಂಬಂತೆ ಎಲ್ಲವನ್ನೂ,ಎಲ್ಲರನ್ನೂ ಧಿಕ್ಕರಿಸುತ್ತಲೇ ಬದುಕುತ್ತಾನೆ...ಇದೊಂದು ಪರಮಾಶ್ಚರ್ಯದ ಸಂಗತಿ _ ಇದು ಧರ್ಮರಾಯನ ಉತ್ತರ...
          ‌‌‌ನಿನ್ನೆಯ ಚುನಾವಣಾ ಫಲಿತಾಂಶ, ಚುನಾವಣಾಪೂರ್ವ ದೊಂಬರಾಟ,ಚುನಾವಣೋತ್ತರ  ಪ್ರತಿಕ್ರಿಯೆ, ಹತಾಶೆ ನಿರಾಸೆಗಳನ್ನು ಕಂಡಾಗ ಯಾಕೋ ಇದೆಲ್ಲ ನೆನಪಾಯಿತು...
          ‌ ಇದೊಂದು ಸುನಾಮಿ ಸದೃಶ ಸನ್ನಿವೇಶ ಇದ್ದ ಹಾಗೆ...ಬರುತ್ತದೆ...ಅಬ್ಬರಿಸುತ್ತದೆ...ಕೆಲವರನ್ನು ನುಂಗುತ್ತದೆ...ಇನ್ನು ಕೆಲವರನ್ನು ದಡಕ್ಕೆಸೆಯುತ್ತದೆ...ನಂತರ ಎಲ್ಲವೂ ತಣ್ಣಗಾಗಿ ಹೊಸ ಅಧ್ಯಾಯವೊಂದು  ಬಿಚ್ಚಿಕೊಳ್ಳುತ್ತದೆ...ಎಂದಿನಿಂದಲೂ ಆಗುತ್ತ ಬಂದದ್ದೇ ಇದು...ಹಿಂದೆ ಗೆದ್ದವರಾರೂ ಶಾಶ್ವತ ಅಜೇಯರಾಗಿಲ್ಲ...ಮಣ್ಣು ಮುಕ್ಕಿದವರೆಲ್ಲ ಶಾಶ್ವತವಾಗಿ ಕಣ್ಮರೆಯಾಗಿಲ್ಲ...
           ಇದು ನಾನು ಹೇಳಿದ್ದಲ್ಲ...ಎಲ್ಲರೂ ಕಣ್ಣಾರೆ ಕಂಡು ಅನುಭವಿಸಿದ್ದು..ಇತಿಹಾಸದಲ್ಲಿ ದಾಖಲಾದದ್ದು...ಕೆಲ ಅದೃಷ್ಟವಂತರು ಹೆಚ್ಚುಕಾಲ ಇದ್ದಾರು...ಅದೃಷ್ಟ ಬೆಂಬಲಿಸದವರು ಅಲ್ಪ ಕಾಲ...
         ‌‌‌ಆದರೆ ಆ ವೈಭವ, ಅಧಿಕಾರ,ಹಣ,ಅಂತಸ್ತು ಕಾಯಂ ಬೇಕೆಂಬ ದುರಾಶೆಗಾಗಿ ಆಡುವ ಆಟಗಳು ವಿಪರೀತ ಅಸಹ್ಯ ತರಿಸುತ್ತವೆ...ಕಣದಲ್ಲಿದ್ದು ಕಷ್ಟಪಟ್ಟು ಗಳಿಸಿಕೊಂಡದ್ದು ಹೆಚ್ಚುಕಾಲ ಇರಲೆಂದು ಬಯಸುವದು ಸಹಜ...ಅದಕ್ಕಾಗಿ ಸತತ ದುಡಿಯಲಿ,ಉಳಿಸಿಕೊಳ್ಳಲಿ, ಜನಪರ ಕೆಲಸ ಮಾಡುತ್ತ ಹೋಗಿ ಜನಾದರ ಪಡೆದರೆ ಖಂಡಿತಕ್ಕೂ ಅದು ಅಸಾಧ್ಯವೇನಲ್ಲ...ಅದನ್ನು ಬಿಟ್ಟು ಸ್ವಂತ ಉದ್ಧಾರದಲ್ಲಿ ತೊಡಗಿ,ಜನ ಸಾಮಾನ್ಯರ ಬೆನ್ನಮೇಲೆ ಕಾಲಿಟ್ಟು ಮೇಲೆ ಹೋಗಿ ಅವರನ್ನು ಒದ್ದರೆ ತಿಳಿಯಲಾರದಷ್ಟು ಮೂರ್ಖರಲ್ಲ ಜನ...ಅರಿಯಲು ಸ್ವಲ್ಪು ತಡವಾದೀತು...ಆದರೆ ಅದು ಜನ ಮೂರ್ಖರೆಂದಲ್ಲ..ಹಸು ಮುಖದ ಹುಲಿಗಳ ಕಪಟತನದಿಂದಾಗಿ...
         ಬದುಕಿನಲ್ಲಿ ಎಲ್ಲವೂ ಇರಲಿ ಎಂಬುದು ಒಂದು ಆಶಯ...ಆದರೆ ಅದಕ್ಕಾಗಿ ಆಡುವ ಮೋಸದಾಟ, ಅಶ್ಲೀಲ ಭಾಷೆಗಳ ಬಳಕೆ,ಅನುಚಿತ ತಂತ್ರಗಳು,ಏನಕೇನ ಪ್ರಕಾರೇಣ ಗೆಲುವಿನ ಹಂಬಲ ಇವು ಅಸಹ್ಯ ಹುಟ್ಟಿಸುತ್ತವೆ...ಅಲ್ಲದೇ ತಡವಾಗಿಯಾದರೂ ಪರೀಕ್ಷೆಗೊಡ್ಡಲ್ಪಟ್ಟು ಶಿಕ್ಷೆ ಅನುಭವಿಸುತ್ತವೆ...
           ಹಿಂದೆಲ್ಲ ಆದದ್ದೂ ಇದೇ..ನಿನ್ನೆ ಆದದ್ದೂ ಇದೇ..ಮುಂದೆಯೂ ಆಗುವದೂ ಇದೇ...

Wednesday 22 May 2019

ಹಾಗೇ ಸುಮ್ಮನೇ....

ಹಾಗೇ ಸುಮ್ಮನೇ...

ಜಿಂದಗಿ..ಏಕ ಸಫರ್ ಹೈ ಸುಹಾನಾ....

           ‌‌ ಒಬ್ಬ ಹಿರಿಯರು ದಿನಾಲೂ ಬೆಳಿಗ್ಗೆ walking ಹೋಗುತ್ತಿದ್ದರು..ಪ್ರತಿದಿನವೂ ಅವರಿಗೆ ಒಂದು ದೊಡ್ಡ  ಬಂಡೆಯ ಮೇಲೆ ಮಲಗಿ ತಾಸುಗಟ್ಟಲೇ ಆಕಾಶ ದಿಟ್ಟಿಸುವ ಹದಿಹರೆಯದ ಹೈದ ನೋಡಲು ಸಿಗುತ್ತಿದ್ದ..ಎರಡು ದಿನ ಮುಗುಳ್ನಕ್ಕು ಮುಂದೆ ಹೋದ ಅವರು ಮೂರನೇದಿನ ಅವನ ಬಳಿ ಹೋಗಿ ಕುಳಿತರು.. ಬಹುಶಃ ಧುಮ್ಮಿಕ್ಕಿ ಹರಿಯುವ ಕಾವೇರಿ ನೀರು ಕಂಡಾಗ ವಿಶ್ವೇಶ್ವರಯ್ಯ ಅವರಿಗೆ ಅನಿಸಿದ ಹಾಗೆ," Oh!! What a waste of energy" ಅನಿಸಿರಲು ಸಾಕು...
          ಬಳಿ ಕುಳಿತ ಹಿರಿಯರನ್ನು ಕಂಡ. ಯುವಕ ಮುಗುಳ್ನಕ್ಕು ಎದ್ದು ಕೂತ...

ಹಿರಿಯರು_ " ಏನಪ್ಪಾ, ಏನ್ ಮಾಡ್ಕೊಂಡಿದೀಯಾ"?

ಯುವಕ_ ಸಧ್ಯಕ್ಕೆ ಏನೂ ಇಲ್ಲ ತಾತ?

ಹಿ_ ಯಾಕೆ ಏನಾದ್ರೂ ಮಾಡೋದಲ್ವಾ? ತುಂಬಾನೇ ಹುಶಾರಿದ್ದಹಾಗೆ ಕಾಣ್ತೀಯಾ...

ಯು_ ಯಾಕೆ ತಾತ?

ಹಿ_ ದುಡಿಯೋಕೆ ಅಂತ ವಯಸ್ಸಿರುತ್ತೆ ಮಗು...
ಆಗ ದುಡಿದಿಟ್ಟುಕೊಳ್ಳಬೇಕು..

ಯು_ ಅಂದ್ರೆ ಏನಾಗುತ್ತೆ?

ಹಿ_ ಆಮ್ಯಾಲೆ ಚಿಂತೆನೇ ಇರಲ್ಲ ಕಣಯ್ಯ...ಬೇಕಾದಷ್ಟು ಜನ ನಿನ್ಮ ಮೆಚ್ಚಿ ನಿನಗೆ ಹೆಣ್ಣು ಕೊಡಲು ನಾ ಮುಂದು..ನೀ ಮುಂದು ಅಂತಾ ಬರ್ತಾರೆ...

ಯು_ ಬಂದ್ರೆ ?

ಹಿ_ ಮುದ್ದಾದ ಮಡದಿಯಿಂದ ಮುದ್ದಾದ ಮಕ್ಕಳು ಪಡೆದು,ಅವರನ್ನು ನಿಮಗೆ ಬೇಕಾದಂತೆ ಬೆಳೆಸಿ ಸಂತೋಷವಾಗಿರ್ಬಹುದು_

ಯು_ ಆಮ್ಯಾಲೆ??

ಹಿ_ಮಕ್ಕಳನ್ನು ಓದಿಸಿ,ಮದುವೆ ಮಾಡಿ ಅವರನ್ನು ವಿದೇಶಕ್ಕೆ ಕಳಿಸಿ ನೀವೂ ಆರಾಮಾಗಿರಬಹುದು ಅಂತ ನಿನಗೆ ಅನಿಸೊಲ್ವಾ?

ಯು_ಏನ್ ತಾತ ನೀವು! ಈಗ ಬಯ್ತಿರೋದು ಏನ್ ಈ ಪರಿ ಆರಾಮಾಗಿದೆಯಾ ..ಅಂತಾನೇ ತಾನೆ?ನೀವು ಹೇಳಿದ  ಆ ಎಲ್ಲಾ ಸರ್ಕಸ್ ಮಾಡ್ಬಿಟ್ಟೆ ಅಂತಾನೇ ಇಟ್ಕೊಳ್ಳಿ..ಕೊನೆಗೆ ಸಿಗೋದೂ ಆರಾಮವೇ ತಾನೇ? ಈಗಲೇ ಅದನ್ನ ಅನುಭೋಗ್ಸತಿದೀನಿ ತಾತಾ ನಾನು ..."

  ‌‌‌‌‌‌        ಅರೇ ಹೌದಲ್ವಾ? ಅನಿಸುವದಿಲ್ಲವೇ  ಒಂದು ಕ್ಷಣ...ಮದುವೆ ,ಮಕ್ಕಳು,ಸಂಸಾರ,ಅದರ ಜಂಜಾಟ, ಅದರ ಪಾರ್ಶ್ವ ಪರಿಣಾಮಗಳಾದ ಬಿಪಿ,ಶುಗರ್,ಒತ್ತಡ  ಎಲ್ಲದರಲ್ಲೂ ಹಾಯುವಾಗ ಮನಸ್ಸು ಆನೆ( ಆರಾಮ,ನೆಮ್ಮದಿ) ಬಯಸುತ್ತದೆ...ಎಲ್ಲ odds ಗಳ ನಡುವೆ ಹೋರಾಡಿ ಅದನ್ನು ಪಡೆಯಲು ಸೆಣಸುತ್ತದೆ... ಕೊನೆಗೊಮ್ಮೆ ಮನಶ್ಶಾಂತಿ ಸಿಕ್ಕಾಗ ನೆಮ್ಮದಿಯಿಂದ ಉಸಿರಾಡಿಸುತ್ತದೆ...
   ‌‌‌‌‌      ಅದು ಅನಾಯಾಸವಾಗಿ ಸಿಕ್ಕಾಗ ಅನುಭವಿಸಬೇಕೆಂಬುದೂ ಒಂದು ತರ್ಕವೇನೋ ಹೌದು...It is absolutely o.k. to be lazy sometimes....but not always...ಅದೇ ಶಾಶ್ವತ ಪರಿಹಾರವಲ್ಲ...ನಮ್ಮೆಲ್ಲ ಶಕ್ತಿ ,ಸಾಮರ್ಥ್ಯ ಬಳಸಿ ಯುದ್ಧ  ಗೆದ್ದು  ಬೀಗುವದೂ ಒಂದು ಖುಶಿ.ರಣರಂಗದಿಂದ ಓಡಿ ಹೋಗಿ ಬಚಾವಾಗುವದಲ್ಲ...ಬದುಕಿನಲ್ಲಿ ಎಲ್ಲವನ್ನೂ ಆಸ್ವಾದಿಸ ಬೇಕು...ಒಂದು ಹಂತದ ವರೆಗೆ..ಬೇಡೆನಿಸಿದಾಗ  quit option ಇರುತ್ತದೆ...ಬೇಕೆನಿಸಿದರೆ..
  ‌‌‌        ಬದುಕೆಂದರೆ" ಒಳಗೆ ಹುರಿದ ಸೇಂಗಾ ಇಟ್ಟ ಇಲಿಬಲೆ...ಹೊರಗಿನ ಇಲಿಗೆ ಒಳಗಿನ ಸೆಂಗಾಗಳ ಮೇಲೆ ಕಣ್ಣು...ಒಳಗೆ ಸಿಗಿ ಬಿದ್ದುದಕ್ಕೆ ಹೊರಗಿರುವ ಇಲಿಯ ಸ್ವಾತಂತ್ರ್ಯದ ಮೇಲೆ ಗಮನ..
ಎರಡಕ್ಕೂ ಇರುವದೆಲ್ಲವ ಬಿಟ್ಟು  ಇರದಿರುವದರ ಕಡೆಗೆ ತುಡಿತ..ಹಾಗೆಯೇ ಮದುವೆಯಾಗಿ ಸಂಸಾರ ಮಾಡಿ ಗೆಲ್ಲುವದು" ತಿಂದರೂ ..ತಿನ್ನದಿದ್ದರೂ ಕೊನೆಗೆ ಪರಿತಪಿಸುವಂತೆ ಮಾಡುವ ಲಡ್ಡು"
             ಹಾಗಾದರೆ ಮಧ್ಯ ಮಾರ್ಗವೇನು? There is  a golden mid point... ಬಾಲ್ಯದಲ್ಲಿ ಮನಸಾರೆ ಆಡಿ, ಹರಯದಲ್ಲಿ ಏನಾದರೂ ಬದುಕಿನಲ್ಲಿ ಸಾಧಿಸಿ, ವಾನಪ್ರಸ್ಥದಲ್ಲಿ  ಮಕ್ಕಳು ಮರಿಗಳ ತುಂಬು  ಸಂಸಾರದ ಸುಖ ಅನುಭವಿಸಿ ಸಾವಧಾನವಾಗಿ detachment ಬೆಳೆಸಿಕೊಳ್ಳುವದು..ಬಾಲ್ಯದಲ್ಲಿಯೇ ಅಳತೆ ಮೀರಿದ ಪ್ರೌಢಿಮೆ, ಯೌವನದಲ್ಲಿ ಅತಿಯಾದ ಹುಡುಗಾಟ, ಮಧ್ಯವಯಸ್ಸಿನಲ್ಲಿ ಹಣದ ಹಿಂದೆ ಓಡುವದು,ಮುದುಕರಾದಮೇಲೂ ಕುಟುಂಬದ ನಿಯಂತ್ರಣ ಬೇಕೆನ್ನುವದೂ ಅನಪೇಕ್ಷಿತ ಅಷ್ಟೇ ಅಲ್ಲ, ಆತ್ಮದುದ್ದಾರಕ್ಕೂ ಅಡ್ಡಿ...ಅದು ನಿಯಮ ಬಾಹಿರವೂ ಅಹುದು..

    ‌      ಇದೇನೋ ಭಾರಿ ತತ್ವಬೋಧನೆಯಲ್ಲ...ಹಾಗೆ ನಾನು ಬದುಕಿಬಿಟ್ಟಿದ್ದೇನೆ ಅಂತಂತೂ ಸರ್ವಥಾ ಅಲ್ಲ....ಹಾಗೆ  ಬದುಕಿದವರ  ಬದುಕಿನಿಂದ ,ಅದರ ಚಲುವಿನಿಂದ,ಅದರ ಧನಾತ್ಮಕ ಪರಿಣಾಮಗಳಿಂದ ಕಲಿಯುತ್ತ ಬಂದ ,ಪಾಠಗಳು...ಒಂದು ಹಂತದಲ್ಲಿ ಈ ತರಹದ ಬದುಕಿಗೆ ಅಣಿಯಾಗದಿದ್ದರೆ ಮಾನಸಿಕವಾಗಿ ನೆಮ್ಮದಿ ಕಳೆದುಕೊಂಡು ಬದುಕು ನರಕ ಸದೃಶ ವಾಗುವದನ್ನು ಯಾರಿಂದಲೂ ತಪ್ಪಿಸಲಾಗುವದಿಲ್ಲ...

Monday 20 May 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ....

ಮುನ್ನೂರು ಮೈಲು ಪ್ರವಾಸದ ಮೊದಲ ಮೂರು ಹೆಜ್ಜೆಗಳು....

  ‌‌‌   ‌     ‌    ‌‌ನಾವು ಈಗಿರುವ ಮನೆಗೆ ಬಂದು ನಾಲ್ಕು ವರ್ಷ.ಮೊದಲ ಮನೆಯಿಂದ ಕೇವಲ ಒಂದೇ ಕಿಲೋಮೀಟರ್ ದೂರದಲ್ಲಿ  ಹೊಸಮನೆ ಇದ್ದರೂ ಅಲ್ಲಿಯವರ ಯಾರ ಪರಿಚಯವೂ ನನಗಿರಲಿಲ್ಲ..ಪ್ರಸಂಗವೂ ಬಂದಿರಲಿಲ್ಲ.
      ‌       ‌ಹೀಗಾಗಿ ಇಲ್ಲಿ ಬಂದಮೇಲೆ ಆದ ಗೆಳತಿಯರಲ್ಲಿ ಪರಭಾಷೆಯವರೂ ಕೆಲವರಿದ್ದರು.ಅವರಲ್ಲಿ ಶ್ರೀ/ ಶ್ರೀಮತಿ  ಭಗಾಡೆಯವರೂ ಇಬ್ಬರು...ಮೂಲತಃ ನಾಗಪುರದವರು..ಮರಾಠಿ ಮನೆಮಾತು...ಶ್ರೀಮತಿಯವರು ಯೋಗ/ ಪ್ರಾಣಾಯಾಮ/ ಧ್ಯಾನಗಳಲ್ಲಿ ಪರಿಣಿತರಿದ್ದು ಹಿರಿಯ ನಾಗರಿಕರಿಗೆ ಉಚಿತ ವರ್ಗ ನಡೆಸುತ್ತಿದ್ದರು..ಅವರು ಉಪಯೋಗಿಸುವ ಹಿಂದಿ ಬಹುಜನರಿಗೆ ಅರ್ಥವಾಗದಿದ್ದಾಗ ಕನ್ನಡ ಕಲಿಯುವ ಮನಸ್ಸು ಮಾಡಿದ್ದಲ್ಲದೇ ಪತಿಯೊಡಗೂಡಿ ಸಮಾನ ವಯಸ್ಕರನ್ನು ,ಸಮಾನ ಮನಸ್ಕರನ್ನು  ಕಲೆಹಾಕಿ ಅಂಕಲಿಪಿ,ಹಾಗೂ ಪ್ರಾಥಮಿಕ ಅಕ್ಷರ ಜ್ಞಾನ ಕೊಡಬಲ್ಲ ಪಠ್ಯಪುಸ್ತಕ ಗಳನ್ನು ಖರೀದಿಸಿ club house ನ ಒಂದು ಮೂಲೆಯಲ್ಲಿ ಪ್ರಾರಂಭಿಸಿಯೇ ಬಿಟ್ಟರು..
ಕೆಲವೇ ದಿನಗಳಲ್ಲಿ ಸ್ವರ,ವ್ಯಂಜನ,,ಸಂಯುಕ್ತಾಕ್ಷರ ಗಳನ್ನು ಕಲಿತು dictation ಕೊಟ್ಟರೆ ತಪ್ಪಿಲ್ಲದೇ ಬರೆಯಬಲ್ಲವರಾದರು...ಆದರೆ ಅದು ಕಾಪಿ ಅಷ್ಟೇ..ಸ್ವಾಧ್ಯಾಯದ ಮೊದಲ ಮೆಟ್ಟಿಲು..
ವಿಷಯ ಮಾಹಿತಿಗಾಗಿ ಕೆಲವರ ಸಹಾಯ ಬೇಕೇಬೇಕೆಂದಾಗ,ಕನ್ನಡ ಬಲ್ಲವರು ಸಾಕಷ್ಟು  ಜನ ಇದ್ದರೂ ಅವರಿಗೆ ಅರ್ಥವಾಗಿಸಲು ಹಿಂದಿ/ ಇಂಗ್ಲಿಷ ಬಳಕೆ ಮಾಡಿ ಕಲಿಸುವವರ ಅನಿವಾರ್ಯತೆ ಎದುರಾಯಿತು....
  ‌‌‌‌ ‌      ‌ ಪರಿಣಾಮ‌ ಅವರು ನನ್ನ ಕಡೆ ಬಂದರು..ಮೊದಲಿದ್ದ ಮನೆಯಲ್ಲಿ ನಾನು ಇನ್ನೊಬ್ಬ ಗೆಳತಿಯೊಂದಿಗೆ ಸೇರಿ ಕನ್ನಡೇತರರಿಗೆ ಕನ್ನಡದ ಉಚಿತ ವರ್ಗಗಳನ್ನು ನಡೆಸುತ್ತಿದ್ದುದು ಅದು ಹೇಗೋ ಇಲ್ಲಿಯವರಿಗೆ ಗೊತ್ತಾಗಿತ್ತು..ನಾನೂ ಒಪ್ಪಿ ವಾರಕ್ಕೆ ಮೂರುದಿನ ಕಲಿಸುವದಾಗಿಯೂ,ಉಳಿದ ಅವಧಿಯಲ್ಲಿ ತಾವೇ  ಕೈಲಾದಷ್ಟು ಅಭ್ಯಾಸ ಮಾಡಿ ,ಸಮಸ್ಯೆಗಳ ಪಟ್ಟಿ ಮಾಡಿ ತಂದರೆ ಅದಷ್ಟೇ classನಲ್ಲಿ  ಕಲಿತು ಕಲಿಕೆಯ ವೇಗ ಹೆಚ್ಚಿಸ ಬಹುದೆಂದೂ ಮಾತಾಯಿತು..ವಾಕ್ಯ ರಚನೆಗಳು,ಪ್ರಾರಂಭಿಕ ವ್ಯಾಕರಣ,ಯಾವುದೇ ವಿಷಯವಾಗಿ ಎರಡು ಮೂರು ವಾಕ್ಯಗಳನ್ನು ಬರೆಯುವದು ಮುಂತಾದ ಮೂಲ ಕಲಿಕೆಯೊಂದಿಗೆ ವರ್ಗಗಳ ಪ್ರಾರಂಭವಾಯಿತು..ಜೊತೆಗೆ ಕನ್ನಡ ಬರಲಿ, ಬಿಡಲಿ ಮಾತಾಡುವದು ಕಡ್ಡಾಯಗೊಳಿಸಲಾಯಿತು...ಎರಡು ಮೂರು ತಿಂಗಳಲ್ಲಿ ಇತರರು ಯಥಾಶಕ್ತಿ ಪ್ರಯತ್ನ ಮಾಡಿದರೂ ಭಗಾಡೆ ದಂಪತಿಗಳು ವಿಶೇಷ ಪರಿಶ್ರಮದಿಂದ  ಎಲ್ಲರಿಗಿಂತ ಮುಂದೆ  ಆಗಿ ಕನ್ನಡ ಗೀತೆಗಳ ಸಂಯೋಜನೆ, ಕನ್ನಡ ರಾಜ್ಯೋತ್ಸವ ದಂದು ಯುಗಳಗೀತೆಗಳನ್ನು ಹಾಡುವದು,ಯಾರೇ ಯಾವುದೇ ಭಾಷೆ ಮಾತಾಡಲಿ ತಾವು ಮಾತ್ರ ಕನ್ನಡದಲ್ಲಿಯೇ ಉತ್ತರಿಸಲು ಪ್ರಯತ್ನಿಸುವದು, ಎಲ್ಲ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುವದು ಮುಂತಾದವುಗಳಿಂದ  ಪ್ರಯತ್ನ ಜಾರಿಯಿಟ್ಟರು..
         ‌‌  ಎಷ್ಟು ? ಏಕೆ? ಹೇಗೆ ? ಕಲಿತರು ಎಂಬ ಜಿಜ್ಞಾಸೆ ಬದಿಗಿಟ್ಟು ಅವರ ಕಲಿಯುವ ಉತ್ಸಾಹಕ್ಕೆ ಅವರು ಕೇಳಿದಾಗಲೆಲ್ಲ ಕೈಲಾದಷ್ಟು ಸಹಾಯ ಮಾಡಿದ್ದು ಬಿಟ್ಟರೆ ನನ್ನ ಪಾತ್ರ ನಗಣ್ಯ..
ಇಂದಿಗೂ ಎಲ್ಲೇ ಭೇಟಿಯಾಗಲೀ ಬಗಲ ಚೀಲವೊಂದರಲ್ಲಿ ಟಿಪ್ಪಣಿ ಪುಸ್ತಕ,ಒಂದು ಪೆನ್ನು, ಸದಾ ಸಿದ್ಧವಾಗಿರುತ್ತದೆ..ಆಗಾಗ ಗೊತ್ತಾಗದ ವಿಷಯಗಳನ್ನು ಬರೆದಿಟ್ಟುಕೊಂಡು ನನ್ನ ಸಮಯಾನುಕೂಲ ಕೇಳಿಕೊಂಡು  ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಾರೆ..ಹೊಸ ಪದವೇನಾದರೂ ನನ್ನಿಂದ ಪ್ರಯೋಗವಾದರೆ ತತ್ಷಣ note ಮಾಡಿಟ್ಟುಕೊಳ್ಳುತ್ತಾರೆ....ಭಾಷೆ ಕಲಿಯಲೆಂದೇ ಕನ್ನಡ channel ನೋಡುತ್ತಾರೆ...ಇತ್ತೀಚಿನ ಬೆಳವಣಿಗೆಯಂದರೆ.ತಮ್ಮ apartment ನಲ್ಲಿಯ ಇತರರಿಗೆ ವಾರಕ್ಕೆ ಮೂರು ದಿನ ಕನ್ನಡ class ತೆಗೆದುಕೊಳ್ಳುತ್ತಿದ್ದಾರೆ.. ಕಲಿಕೆ/ ಕಲಿಸುವಿಕೆ ಏಕ ಕಾಲಕ್ಕೆ...
                ಅಂದಹಾಗೆ ಶ್ರೀ ಭಗಾಡೆಯವರಿಗೆ 74, ಅವರ ಶ್ರೀಮತಿಯರಿಗೆ 67... ಏನೋ ಅಸಾಧ್ಯವಾದುದನ್ನು ಸಾಧಿಸಿದ್ದಾರೆ ಎಂದು ನಾನು ಹೇಳುವದಿಲ್ಲ...ಅಂಥವರೆಲ್ಲಿದ್ದರೂ ,ಯಾವ ಮೂಲೆಯಲ್ಲಿದ್ದರೂ ನನ್ನದೊಂದು ಹಾರ್ದಿಕ ನಮನ...ಆದರೆ ಕನ್ನಡ ಬಂದೂ ಬಳಸದವರ,ಕನ್ನಡದವರೇ ಇದ್ದೂ ಭಾಷೆಯ ತಪ್ಪು/ ಒಪ್ಪುಗಳನ್ನು ಗಂಭೀರವಾಗಿ ಪರಿಗಣಿಸದ,ಕನ್ನಡವನ್ನು fashion ಹೆಸರಿನಲ್ಲಿ ತಿರುಚುವ,ಅಸಭ್ಯ ಅಸಂಸ್ಕೃತ ಭಾಷೆಯನ್ನು ಯಾವುದೇ ಎಗ್ಗಿಲ್ಲದೇ ಬಳಸಲು ಮುಂದಾಗುವ ನಮ್ಮಲ್ಲಿಯ ಜನರಲ್ಲೇ ಕೆಲವರನ್ನು ಕಂಡಾಗ ಇವರ ಬಗ್ಗೆ ಮನಸ್ಸು ತುಂಬಿ ಬಂದು ಅನುಭವ ಹಂಚಿಕೊಳ್ಳ ಬೇಕೆನಿಸಿತು..ಅಷ್ಟೇ...ಮತ್ತೇನಿಲ್ಲ..

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ...

ಜನ ಮರುಳೋ...
ಜಾತ್ರೆ ಮರುಳೋ...
      
          ನಿಮ್ಮ ಮನೆ ಅಡಿಗೆ ರುಚಿಯಾಗ್ತಾ ಇಲ್ವಾ? ಅಮ್ಮನ ಮನೆಯಿಂದ SUN GOLD ತರಿಸಿಕೊಳ್ಳಿ...ನಂತರ ರುಚಿ ನೋಡಿ..!!!

     ‌‌‌‌‌   ಯಾಕೋ ಬಟ್ಟೆಗಳಲ್ಲಿ ಹೊಲಸು ಹಾಗೇ ಉಳಿಯುತ್ತಿದೆಯಾ?? ಅಮಿತಾಬ ಬಚ್ಚನ್ ಬರ್ತಾನೆ ಬಿಡಿ..ಎರಡು ಸ್ಕ್ರೂ ಹಾಕಿ ತೆಗೆದಮೇಲೆ ಅವನು ಹೇಳಿದ ಸೋಪಿನ ಪುಡಿ ಬಳಸಿ..problem ಖತಂ..

         ‌ ‌ ಬಚ್ಚಲು ಮನೆಯಲ್ಲಿ ನಿಲ್ಲೋಕಾಗ್ತಾ ಇಲ್ವಾ? ಒಂದು refreshener ತೂಗು ಹಾಕಿ...ಕುಣಿಕುಣೀತಾ ಹಲ್ಲುಜ್ತೀರಾ...ಬಚ್ಚಲೇನೂ ಉಜ್ಜಬೇಕಾಗಿಲ್ಲ...

             ಬಚ್ಚಲು ಉಜ್ಜಲೇ ಬೇಕಾ? ಚಿಂತೆ ಬೇಡ..ಅಕ್ಷಯ ಕುಮಾರನನ್ನು ನೆನೆಯಿರಿ..ಏನು? ಎಷ್ಟು ?ಹಾಕಿ ಬಚ್ಚಲು ಸ್ವಚ್ಛಮಾಡಬಹುದೆಂಬ ಮಂತ್ರ ಕ್ಷಣಾರ್ಧದಲ್ಲಿ ಲಭ್ಯ..

    ‌‌     ‌‌‌     ಮದುವೆಗೆ ಹೋಗಬೇಕೆನ್ನುವಾಗಲೇ ಒಂದು ಬಿಳಿ ಕೂದಲು ತಲೆಯಲ್ಲಿ ಕಂಡಿತಾ?..ಅಯ್ಯೋ ದೈವವೇ!! Pls ಆತ್ಮಹತ್ಯೆ ಮಾಡಿಕೊಳ್ಳಬೇಡಿ...ಕೇವಲ ಎರಡೇ ನಿಮಿಷ ತಾಳಿ ..ಗೆಳತಿ hair dye ಎಂಬ ರಾಮಬಾಣದೊಂದಿಗೆ ಬರುತ್ತಾಳೆ..
ಆಗ ನೋಡಿ ಮಜಾ..ಮದುವೆಯಲ್ಲಿ ಮದುಮಗಳೇ ನಿಮ್ಮ bride maid ಆಗಿಬಿಡುತ್ತಾಳೆ..

          ಓಹೋ! ಮಗ ಹಾಲು ಕುಡಿಯದೇ ನಾಯಿಗೆ ಹಾಕುತ್ತಿದ್ದಾನಾ? ಮಾತೃ ಹೃದಯ ನೋಯದಿರುತ್ತಾ? ಹಳಹಳಿಸಬೇಡಿ..ನಾಲ್ಕು ಅವರು ಹೇಳಿದ ಬಿಸ್ಕಿಟ್ನೊಂದಿಗೆ ಕೊಡಿ ..ನಾಯಿಗೇ ಉಪವಾಸ ಮಾಡಿಸುತ್ತಾನೆ ನಿಮ್ಮ ಮಗ...ಆಗ ನೀವೂ/ ಮಗ ಇಬ್ಬರೂ ಖುಶ್...

       ‌    ‌‌‌  ಅಯ್ಯೋ ಹಲ್ಲುನೋವು..ಏನೂ ತಿನ್ನೋಕೆ ಆಗ್ತಾಯಿಲ್ಲ ಅಲ್ವಾ? Hospital ಗೇನೂ ಹೋಗಬೇಕಾಗಿಲ್ಲ ..ಆ! ಎಂದು ಚೀರಿ ವಸಡಿಗೆ ಕೈಯಿಡಿ...ಎಲ್ಲಿಂದಲೋ ಕ್ಷಣಾರ್ಧದಲ್ಲಿ ದೇವತೆಯೊಬ್ಬಳು ಪ್ರತ್ಯಕ್ಷಳಾಗಿ ಉಪ್ಪಿರುವ Colgate paste ಕೊಡುತ್ತಾಳೆ..ಉಜ್ಜಿನೋಡಿ..
ಹಲ್ಲೇ..sorry .sorry.ನೋವು ಮಾಯ...ಇಲ್ಲದಿದ್ದರೆ ನಿಮಗೂ ಆ paste ಖರೀದಿಸಿ ತಂದ ಅಮ್ಮನ್ನೋ,ಅಪ್ಪನ್ನೋ ಬದಲಾಯಿಸಿ ಬಿಡುವ ಮನಸ್ಸಾಗಿದ್ದರೆ ಏನು ಗತಿ ಹೇಳಿ...?

           ನಿಮ್ಮ fan ಗಳು dust ನಿಂದ ಅಲರ್ಜಿ ತೊಂದರೆ ಕೊಡುತ್ತಿವೆಯಾ? ಒರೆಸಿ ಸ್ವಚ್ಛಗೊಳಿಸುವ ಗೋಜಿಲ್ಲ...ಡಾಕ್ಟರ್ ಬಳಿ ಹೋಗಿ ಸೀನಲು ಪ್ರಾರಂಭಿಸಿ...ಅವರು ರೂಮಿಗೊಂದರಂತೆ ಹೊಸ fan ಗಳನ್ನು prescribe ಮಾಡುತ್ತಾರೆ..ಖರೀದಿಸಿ ಬದಲಾಯಿಸಿ..
ಆಗ dust ಕಮ್ಮಿ...trust ಜಾಸ್ತಿ...

           ವಿಪರೀತ ನೆಗಡಿಯಿಂದ ಮೂಗು ಊದಿಕೊಂಡು ಚಹ ಕುಡಿಯುವಾಗ ಅಡ್ಡಡ್ಡ ಬರುತ್ತಿದೆಯೋ? ಒಂದೇ second... TV ಯವರು ಒಂದು ಇನ್ ಹೇಲರ್ ಹೇಳುತ್ತಾರೆ... ..ಬಳಸಿನೋಡಿ..ಚಹ direct ಆಗಿ ಸುಲಭವಾಗಿ ಮೂಗಿನಲ್ಲೇ ಹೋಗದಿದ್ದರೆ ಕೇಳಿ...

         ‌‌‌ಬದುಕೆಷ್ಟು ಸುಂದರ ಅಲ್ವಾ? ಸಮಸ್ಯೆಗಳಿಗೆ ವಿಚಲಿತರಾಗಬೇಕಾಗಿಲ್ಲ... TV ಮುಂದೆ ಕೂತುಬಿಡಿ ಸಾಕು..ಅವರೇ ನಿಮ್ಮೆಲ್ಲ ಸಮಸ್ಯೆಗಳಿಗೆ ರಾಮ ಬಾಣ..

  ‌  ‌     ‌ಅವರು ಹೇಳಿದಷ್ಟು ಮಾಡಿ...ಮುಂದಿನದು ತೆರೆಯ ಮೇಲೆ ನೋಡಿ..

  ‌‌‌        ‌‌ ‌ ‌‌‌ಇಷ್ಟು ನಿರಾತಂಕ,ನಿಶ್ಚಿಂತ,ನಿರಾಳ,ನಿರ್ಯೋಚಿತ ಬದುಕು ಯಾರಿಗುಂಟು!!...ಯಾರಿಗಿಲ್ಲ!!!
  ‌‌‌   ‌‌     ENJOY ಸಿ...Best of luck...👍👍👍👍

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ...

ಮನಸಾಗಿ  ಕಾಡಿತ್ತು  ' ಮಾಯೆ'.....
          
      ‌" ಸುತ್ತಲೂ ಯಾರಿಲ್ಲದೇ ಒಬ್ಬಂಟಿಯಾಗಿದ್ದಾಗ
ಬಾ ಅಂದಿದ್ದೆ ನಿನಗೆ...
ಈಗೇಕೆ ಬಂದೆ..?"
ಕೇಳಿದೆ ಕಣ್ಣೀರಿಗೆ..

"ಗುಂಪಿನಲ್ಲಿಯೂ
ಒಬ್ಬಂಟಿಗಳಾಗಿಯೇ
ಕಂಡೆ ನೀನೆನಗೆ"-
ತಣ್ಣಗೇ ಹೇಳಿತು
ಕಣ್ಣೀರೆನಗೆ...

   ‌‌‌‌      ಇದು ವಾಸ್ತವ...ವಿಷಯಗಳು ಮೇಲ್ಕಂಡಂತೆ ಇರುವದಿಲ್ಲ..Things are not what they seem to me.. ಅಥವಾ " ಜಸ ದಿಸ್ತ...ತಸ ನಸ್ತ.... ಈ ಹೇಳಿಕೆಗಳ ಅರ್ಥವೂ ಇದೇ...
          ವಾಸ್ತವಕ್ಕೂ ಕಲ್ಪನೆಗೂ ಇರುವ ವ್ಯತ್ಯಾಸವೇ ಅದು..ಇಂಗ್ಲಂಡಿನ ರಾಣಿಯಾಗುವದು ಬಹುಶಃ ಕೈಗೆಟುಕದು ಎನ್ನುವಂಥ ಕನಸು..ಆದರೆ ಪ್ರಿನ್ಸೆಸ್ ಡಯಾನಾ ತನ್ನ ಉಡಿಯಲ್ಲಿದ್ದ ಪಟ್ಟವನ್ನು ಇನ್ನಿಲ್ಲದಂತೆ ಒದರಿ ಹೊರಬಂದಳು..ನಮ್ಮವನೇ ಆದ ಸಿದ್ಧಾರ್ಥ ಮಾಡಿದ್ದೂ ಅದನ್ನೇ..
ಯಾವ ನಟರನ್ನು ನೋಡಲು ಕನಸುಕಾಣುತ್ತೇವೋ ಅಂಥವರ ಹೆಂಡಂದಿರು ಅವರಿಂದ ವಿಚ್ಛೇದನ ಪಡೆದು ಬೇರೆಯಾಗುತ್ತಾರೆ..ಶರಂಪರ ಕಿತ್ತಾಡುತ್ತಾರೆ...ಮನೆಯ ಕಥೆಗಳಿಗೆ TRP ಹೆಚ್ಚಿಸುತ್ತಾರೆ... ಇದೆಲ್ಲ ಮನಸೆಂಬ ಮಂಗನ ದೊಂಬರಾಟವೇ...
              ಇಂಥವೇ ಉದಾಹರಣೆಗಳನ್ನು ಕೊಡಲೂ ಕಾರಣವಿದೆ..ಇವರೆಲ್ಲ ಸಪನೋಂಕಾ ಸೌದಾಗರ್ ಗಳು...ಕನಸುಗಳನ್ನು ಮಾರುವವರು ಅಷ್ಟೇ...ಅವರ ಸ್ವಂತ ಕನಸುಗಳು ಭಯಂಕರವಾಗಿರುವದೇ ಹೆಚ್ಚು...
  ‌‌  ‌   ‌‌‌    ಇದಕ್ಕೆಲ್ಲ ಕಾರಣ ಅವರವರ ಮನಸ್ಥಿತಿ...ಮನಸ್ಸು ಹುಚ್ಚುಖೋಡಿ...ಬಹಳ ಚಂಚಲ...ಅದರ ವೇಗವನ್ನು ಗಾಳಿಯ ವೇಗವೂ ಹಿಮ್ಮೆಟ್ಟಿಸಲಾರದು..ಆ ಮಂಗ ಮನಸ್ಸಿಗೆ ಕಡಿವಾಣವಿಲ್ಲ..ಅಂತೆಯೇ ಅದರ ನಿಯಂತ್ರಣವೂ ಆಗದ ಮಾತು..
        ‌‌    ನನ್ನ ಗೆಳತಿಯೊಬ್ಬಳು ಫೇಸ್ ಬುಕ್ಕಿನಿಂದ ಬಹುದೂರ..ಕಾರಣ ಕೇಳಿದಾಗ ಹೇಳಿದ್ದು...," ಆರಾಮಾಗಿದ್ದೀಯಾ ಇರಬಾರದೇ..ಅದೆಲ್ಲ ಓದಿ ಮರೆಯುವ ಮನಸ್ಸಿದ್ದವರಿಗೆ..ನಿನ್ನಂಥ ಭಾವುಕ ಮನದವರಿಗಲ್ಲ...ಎಲ್ಲರೂ ಅದರಲ್ಲಿ ತಾವಿರುವದಕ್ಕಿಂತ ಭಿನ್ನ  ಚಿತ್ರಣವನ್ನೇ ಕೊಟ್ಟಿರುತ್ತಾರೆ...ಅರ್ಧಕ್ಕಿಂತ ಹೆಚ್ಚು ವಾಸ್ತವ ಹಾಗಿರುವದಿಲ್ಲ..
ಅದನ್ನೇ ನಿಜವೆಂದೂ ನಿಮ್ಮನ್ನು ಅದಕ್ಕೆ ಹೋಲಿಸಿಕೊಂಡು ಒದ್ದಾಡುವ ಮನಸ್ಸಿನವರಿಗೆ ಖಂಡಿತ ಸಲ್ಲದು ಎಂದು ಅವಳ ಮಕ್ಕಳ ಅಭಿಪ್ರಾಯ" ಎಂದಾಗ ಮರು ಮಾತಾಡಲು ಹೊಳೆಯಲೇ ಇಲ್ಲ..
ಇದು ನಿಜವೋ..ಸುಳ್ಳೋ...ನಿಜ/ ಸುಳ್ಳುಗಳ ಪ್ರಮಾಣವೆಷ್ಟು ಅದು ಬೇರೆಯೇ ವಿಷಯ..ಆದರೆ ಹುಚ್ಚು ಮನಸ್ಸಿಗೆ ಹತ್ತು ಮುಖಗಳಿರಬಹುದೆಂಬುದನ್ನು ಯಾರೂ ಅಲ್ಲಗಳೆಯಲಾರರು...ಸಮಯ / ಸಂದರ್ಭಕ್ಕೆ ಊಸರವಳ್ಳಿಯಂತೆ ಬದಲಾಗುವದೂ ಅಷ್ಟೇ ಸತ್ಯ...ಅಂದಮೇಲೆ ಅದನ್ನು ನಂಬುವದಾದರೂ ಹೇಗೆ?
ಹೀಗಾಗಿ ಪೇಟೆಯಲ್ಲಿ ಮುಖವಾಡಗಳ ಸಂತೆ ವ್ಯಾಪಾರ ಹೆಚ್ಚಿರುವದೂ ಇದೇ ಕಾರಣಕ್ಕೆ.. ಅದು ಸೃಷ್ಟಿಸುವ ಭ್ರಮೆಯ ಜಗತ್ತು ಬೇರೆಯೇ ರೂಪದ್ದು..
   ‌‌‌     ‌‌‌‌ ‌ಆದರೆ ಹೀಗೆಯೇ ಇರುವದು ಅನಿವಾರ್ಯವೇನೋ..!! ಮನಸ್ಸು ಬತ್ತಲಾದರೆ ಆಗುವ ಆಘಾತ ಕಲ್ಪನಾತೀತ...ಉರಿವ ಸೂರ್ಯನನ್ನು ಬರಿಗಣ್ಞಿನಿಂದ ನೋಡಲಾದೀತೆ?? ಸತ್ಯದ ಪ್ರಖರತೆ ಅದನ್ನೂ ಮೀರಿದ್ದು..ಹರಿಶ್ಚಂದ್ರನನ್ನೇ ನಲುಗಿಸಿದ  ಸಂಗತಿಯದು..ಅಂದಮೇಲೆ  ನಮ್ಮಂಥವರ ಪಾಡೇನು? ಅಪಾಯದ ಗಂಟೆ ಬಾರಿಸಿತೋ ಮನಸ್ಸಿನದೊಂದು ನಾಗಾಲೋಟ...ಬಣ್ಣ ಬದಲಿಸಿ ಸುಳ್ಳಿನ ಸೆರಗಿನಲ್ಲಿ ಮರೆಮಾಚಿಕೊಂಡೇ ಬಿಡುತ್ತದೆ...
          ನಾವು ಕೇವಲ ಮನುಷ್ಯರು..*ಮನ ದರಪನ ಕಹಲಾಯೆ.. ಭಲೆ ಬುರೆ ಸಾರೇ ಕರಮೊಂಕೊ ದೇಖೆ.. ಔರ ದಿಖಾಯೆ* ..ಎಂಬ ಗೀತೆಯಲ್ಲಿ ಮನಸ್ಸು ಬೆಳಗಿದರೆ ಜಗತ್ತೇ ಬೆಳಗುತ್ತದೆ ಎಂಬುದೊಂದು ಅರ್ಥವಿದೆ..ಜಗತ್ತಿ ನಿಂದ ಓಡಿ ಹೋಗಬಹುದು..ನಮ್ಮ ಮನಸ್ಸಿನಿಂದೆಂದೂ ಓಡಿಹೋಗಲಾರೆವೆಂಬುದೂ ಒಂದು ನಿರ್ದಯ ಸತ್ಯವನ್ನು ನಮಗೆ ಬೇಕಾಗಲೀ ಬೇಡವಾಗಲೀ ಒಪ್ಪಿಕೊಳ್ಳುವದು ಅನಿವಾರ್ಯ ಎಂದಾಗ,ಆ ಮನಸ್ಸನ್ನು ಮಮತೆಯಿಂದ ಆದಷ್ಟು ಮಣಿಸಿ,ಮನವೊಲಿಸಿ, ಮನಃಪೂರ್ವಕ  ಆದರಿಸಿ
ಮನಸ್ಸಂತೋಷ ನಮ್ಮದಾಗುವಂತೆ ಬದುಕುವದರಲ್ಲಿ  ಸಂತಸವಿದೆ ಎಂಬುದನ್ನು ಒಪ್ಪಿ ಅಪ್ಪಿಕೊಳ್ಳೋಣ..

Thursday 16 May 2019

ಬಯಲು ಆಲಯದೊಳಗೋ... ಆಲಯವು ಬಯಲೊಳಗೋ... ‌‌‌‌‌‌ ಮುಖ ಹೊತ್ತಿಗೆಯ ಬಹುತೇಕ ಓದುಗರಿಗೆ ಈಗಾಗಲೇ ಒಂದು ವಿಷಯ ಗಮನಕ್ಕೆ ಬಂದಿರಬಹುದು...ಈಗ 65 ರಿಂದ 75 ವಯಸ್ಸಿನವರೆಲ್ಲರ ಬಾಲ್ಯವೂ ಏಕರೂಪವಾಗಿತ್ತು ಎಂದು..ಗೊತ್ತಿಲ್ಲದವರು ಆ ವಯಸ್ಸಿನವರ post ಗಳನ್ನು ಹಾಗೂ comments ಗಳನ್ನು ಗಮನಿಸಿದರೆ ಒಂದು ಸಾಮ್ಯ ಎದ್ದುಕಾಣುತ್ತದೆ..ಎಲ್ಲರೂ ಆದಷ್ಟು ಮನೆಯಿಂದ ಹೊರಗೇ ಆಟವಾಡುತ್ತಿದ್ದುದು...ಇದ್ದವರು,ಇರದವರ ನಡುವೆ ಯಾವದೊಂದೂ ಅಂತರ ಕಾಣಿಸದೇ ಇರುವದು,ಮತ್ತೆ ಆದಷ್ಟು ಪ್ರಕೃತಿಯಲ್ಲಿ ಲಭ್ಯವಿದ್ದ ವಸ್ತುಗಳೆಲ್ಲವನ್ನೂ ಆಟಕ್ಕೆ ಬಳಸುವದು...ಆಡಲುಬೇಕಾದ ಸಾಮಾನುಗಳು ಪೇಟೆಯಲ್ಲಿಯೂ ದೊರೆಯಬಹುದೆಂಬ ಸಾಮಾನ್ಯ ಜ್ಞಾನಕ್ಕೂ ಹೊರತಾದ ಬಾಲ್ಯ...ಮಣ್ಣು,ಕಲ್ಲು,ದಂಟು,ಹುಣಿಚೆ, ಬೇವಿನ ಬೀಜ,ಗಜ್ಜುಗ, ಒಡೆದ ಬಳೆಚೂರುಗಳು,ಸೇಂಗಾ ಸಿಪ್ಪೆ,ಕಪ್ಪೆಚಿಪ್ಪು,ಏನೆಲ್ಲ ಸಿಗುತ್ತಿತ್ತೋ ಎಲ್ಲವನ್ನೂ ಬಳಸಿದ ಖ್ಯಾತಿ ನಮ್ಮದು...ಏನೂ ಆಟಿಗೆಗಳ ಅವಶ್ಯಕತೆಯೇ ಇಲ್ಲದ ಆಟಗಳಿಗೂ ಕಡಿಮೆ ಇರಲಿಲ್ಲ.. ಗಿಡ ,ಮರ ಹತ್ತಿ ಗಿಡಮಂಗನಾಟ,ಇಳಿಬಿದ್ದ ಟೊಂಗೆಗಳ ಹಿಡಿದು ಜೋಕಾಲಿ,ಬಳಸಿ ಒಗೆದ ಸೈಕಲ್ ಗಾಲಿಗೆ ಅಡ್ಡಕೋಲು ಕೊಟ್ಟು ಓಡಿಸುವದು,ಗಾಳಿಗೆ ಬಿದ್ದ ತೆಂಗಿನ ಗರಿಯ ಮೇಲೆ ಮಕ್ಕಳನ್ನು ಕೂಡಿಸಿ ಎಳೆಯುವದು ಅಬ್ಬಾ! ಏನೆಲ್ಲ ಮೇಧಾವೀ ತಲೆಗಳು...ಒಂದು ಕಲ್ಲಿನಾಟದಲ್ಲೂ ಹಲವಾರು ಬಗೆಯ ಆಟಗಳ ಶೋಧ...ಬಿಳಿದಾಗಿ ಗುಂಡಗಿರುವ ಕಲ್ಲು ಗಳನ್ನು ಕಟೆದು ಆಣಿಕಲ್ಲು ಆಡುವದು,ಅತಿ ಚಿಕ್ಕ ಕಲ್ಲುಗಳನ್ನು ಹುಲಿಮನೆ ,ಚೌಕಾಭಾರಕ್ಕೆ ಬಳಸುವದು,ಚಪ್ಪಟೆ ಕಲ್ಲುಗಳಿಂದ ಕುಂಟಲಪಿ,ಆಕಾರವೇ ಇಲ್ಲದ ಕಲ್ಲುಗಳ ಸಂಗ್ರಹಿಸಿ ಒಂದರಮೇಲೊಂದು ಇಟ್ಟು,ಬೇರೆ ಕಲ್ಲಿನಿಂದ ಹೊಡೆದುರುಳಿಸುವ ಲಗೋರಿ,ಒಂದೇ ಎರಡೇ...ನೆನೆಸಿದರೆ ಆಡಿದ ನಮಗೇ ಅಚ್ಚರಿಯಾಗಬೇಕು.. ‌‌‌‌ ‌‌ನಿಸರ್ಗದ ಮಧ್ಯದ ವಸ್ತುಗಳಿಂದ ಆಡಿ ಸಿಕ್ಕ ಆನಂದವೂ ಪಕ್ಕಾ ನೈಸರ್ಗಿಕ...ಏನಾದರೂ ಬಿದ್ದು ಗಾಯವಾದರೆ ವೀಳೆದೆಲೆಯಂಥ ಯಾವುದೋ ಔಷಧೀಯ ಗುಣವಿರುವ ಎಲೆಗಳನ್ನು ತಿಕ್ಕಿ ರಸ ಗಾಯಕ್ಕೆ ಹಾಕಿದರೆ ಎರಡು ದಿನಗಳಲ್ಲಿಯೇ ಗಾಯ ಮಾಯ...ಇನ್ನು ಆಟಿಗೆ ಸಾಮಾನುಗಳನ್ನು ಸಂಗ್ರಹಿಸುವ,ಕಳೆದುಕೊಳ್ಳವ,ಮನೆಗೆ ಜೋಪಾನವಾಗಿ ಮನೆಗೆ ತರುವ ಗೋಜೇ ಇಲ್ಲ.ಎಲ್ಲಿ ಬೇಕೆಂದಲ್ಲಿ,ಯಾವಾಗೆಂದರೆ ಆವಾಗ , ಎಷ್ಟು ಬೇಕಾದಷ್ಟು, ಲಭ್ಯ...ಅನಂತವಾಗಿ, ಅನಾಯಾಸವಾಗಿ,ಅಕ್ಷಯವಾಗಿ ದೊರೆಯುತ್ತಿದ್ದ ಸರಕುಗಳೇ ಎಲ್ಲವೂ.. ‌‌‌ ‌ಬಹುತೇಕ ಆಟಗಳು outdoor games ಗಳೇ...ಆಗಿನ್ನೂ ನರ್ಸರಿ,ಮಾಂಟೆಸರಿ,day care ಗಳಂಥ ಮಕ್ಕಳ ಜೇಲುಗಳು ಹುಟ್ಟಿರಲಿಲ್ಲ..ಆರು ವರ್ಷಗಳಿಗೆ ಶಾಲಾ ಜೀವನ ಪ್ರಾರಂಭ..ಆದರೆ ಸುಲಲಿತವಾಗಿ ನಡೆಯಲು ಬಂತೋ,ಯಾವ ಮಗುವೂ ಮನೆಯಲ್ಲಿ ಉಳಿಯುತ್ತಿಲಿಲ್ಲ..ಅಣ್ಣನೋ,ಅಕ್ಕನೋ ಹೊರಟರೆ ಗಾಳಿಪಟದ ಬಾಲಂಗಸಿಯಾಗಿ ರಸ್ತೆಗೆ ಬಂದೇ ಬಿಡುವದು..ಅಂಥ ಮಕ್ಕಳು ಆಡಲು ಹಟಮಾಡಿದರೆ ಒಂದು ವಿಶೇಷ ಹೆಸರು ಅವಕ್ಕೆ..'ಎಣ್ಣಿಗುಂಡಿ'.. 'ಆಟಕ್ಕುಂಟು..ಲೆಕ್ಕಕ್ಕಿಲ್ಲ' ಎಂಬುದರ ಬಳಕೆ ಆಗಲೇ ಬಂದಿರಬೇಕು, ದೊಡ್ಡಹುಡುಗರು ಪರಸ್ಪರ ಕಣ್ಣು ಹೊಡೆದು ಆ ಹುಡುಗನ ಆಟ ಲೆಕ್ಕಕ್ಕಿಲ್ಲ ಎಂಬ ನಿರ್ಣಯಕ್ಕೆ ಬರುತ್ತಿದ್ದರು...ಆಯಿತು ನಂಟರೂ ಉಂಡರು.. ಅಕ್ಕಿಯೂ ಉಳಿಯಿತು..ಎಂಬ ಲೆಕ್ಕ... ಯಾವ ನಿಯಮಗಳಿಲ್ಲದ,ಸ್ಪರ್ಧೆಗಳಿಲ್ಲದ, ಪ್ರಶಸ್ತಿ ,,ಅಷ್ಟೇಕೆ ಯಾವ ಬಿಗುಮಾನವೂ ಇಲ್ಲದ, ರೊಕ್ಕ,ಅಂತಸ್ತುಗಳು ಅಡ್ಡಬರದ,ಆಟಕ್ಕಾಗಿ ಆಟ,ಶುದ್ದ ಮನರಂಜನೆಗಾಗಿ ಆಟ, ದೇಹದ ಆರೋಗ್ಯಕಾಗಿ ಆಟ,ಸಮಾಜದ ಭಾಗವಾಗಿ ಮಕ್ಕಳನ್ನು ಬೆಳೆಸುವ ಆಟಗಳೀಗ ನೋಡಲೂ ಸಿಗುವದಿಲ್ಲ... ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುವ ಹಾದಿಯಲ್ಲೊಂದು JAIN FARM RESORT ಅಂತಿದೆ..ಒಂದು ದಿನದ ವಾಸ್ತವ್ಯಕ್ಕೆ ಒಬ್ಬರಿಗೆ ರೂ,3000/- ಅಲ್ಲಿ welcome drink ಇಂಗು ಮಜ್ಜಿಗೆ...ರೂಮು ಹುಲ್ಲುಹೊದಿಕೆಯ ಗುಡಿಸಲು...ಬೆಳಕು ಲಾಟೀನಿನದು,ಒಂದು round ಚಕ್ಕಡಿ ಸವಾರಿಗೆ 25/- ಅಲ್ಲಲ್ಲಿ ಬಯಲುಗಳಲ್ಲಿ ಕಲ್ಲು ಹಾಗಸುಗಳು, ಮೇಲೆ ತೆಂಗಿನ ಗರಿಗಳ ಥಾಟು...ನಡುನಡುವೆ ಬಾಯಾಡಿಸಲು ಕುರುದಿನಸುಗಳು, ಮಣ್ಣಿನ ಗಡಿಗೆಗಳಲ್ಲಿ ಅಂಥಿಂಥ ಕುರುದಿನಿಸುಗಳು...ರಾತ್ರಿ ಜಾನಪದ ಕಾರ್ಯಕ್ರಮ,ಕೋಲಾಟ,ಮುಂತಾದವು..ಜಾತಕ/ ಭವಿಷ್ಯ ಹೇಳುವವರು, ಮದರಂಗಿ ಬಳೆಯುವವರು,ಮೂಗು/ ಕಿವಿ ಚುಚ್ಚುವವರು ಎಲ್ಲರೂ.. ‌‌‌ ಇದ್ದುದನ್ನು ಬಿಟ್ಟು ಇರದುದರೆಡೆಗೆ ತುಡಿಯುವದೇ ಜೀವನ ಎಂಬ ಮಾತು ನೂರಕ್ಕೆ ನೂರು ನಿಜ,ಸುಗ್ರಾಸ ಉಣ್ಣುವಷ್ಟು ಗಳಿಸಿ ,ರಸ್ತೆ ತಿಂಡಿಗಳನ್ನು ತಿನ್ನುವದು,ಮನೆಯಲ್ಲಿ ಎರಡೆರಡು ಕಾರುಗಳಿದ್ದೂ ರೂಮಿನಲ್ಲಿ gadgets ಗಳೊಂದಿಗೆ ಬಂದಿಯಾಗುವದು,ನಾಲ್ಕು/ ಐದು bedrooms ಗಳ ಮನೆಗಳನ್ನು ಕಟ್ಟಿಕೊಂಡು ಅವುಗಳು ಮನೆಮಂದಿಗಳಿಗಿಂತ ಹೆಚ್ಚಾಗಿ maids ಗಳಿಗೆ ಬಳಕೆಯಾಗುವ ಅನಿವಾರ್ಯತೆ,cricket/ foot ball ನಂಥ ಆಟಗಳನ್ನೂ ರಿಮೋಟಾಧಾರಿತ computer game ಗಳನ್ನಾಗಿ ಮಾಡಿರುವದೂ ನೋಡಿದಾಗ ಮೇಲಿಂದ ಮೇಲೆ ಅಜಾರಿಬಿದ್ದು ದವಾಖಾನೆಗೆ ಹೋಗುವದು,ಸರಿಯಾಗಿ ಏನನ್ನೂ ತಿನ್ನಲಾಗದು ಎಂಬ ಪರಿಸ್ಥಿತಿ ಬರುವದರ ಕಾರಣ ಸ್ಪಷ್ಟ.. ‌ ಚಿಕ್ಕಾಸು ಖರ್ಚಾಗದ,ಹೆಚ್ಚು ಕಾಳಜಿವಹಿಸುವ ಕಾರಣವಿಲ್ಲದ,ಸಾಮಾಜಿಕ ಜೀವನದ ಭದ್ರ ಬುನಾದಿಯಾಗಿ ಮಗುವನ್ನು ತರಬೇತಿಗೊಳಿಸುತ್ತಿದ್ದ,ಬಡವ- ಬಲ್ಲಿದ ಭೇದ ತಲೆಗೆ ಬಿಲ್ಕುಲ್ ಇಳಿಯದ ಪರಿಶುದ್ಧ,ನಿಷ್ಕಳಂಕ,ಆನಂದಮಯ,ನಿಜವಾದ ಅರ್ಥದಲ್ಲಿ ಮಗುಮನಸ್ಸಿನ ಅಂದಿನ ಜೀವನ ದಿಂದ ಪಡೆದ ಸಂತೋಷ ಈಗಿನ ಮಕ್ಕಳಿಗೆ ಸಿಗದ ಬಗ್ಗೆ ನನಗೆ ಯಾವಾಗಲೂ ಒಂದು ಬಗೆಯ ಕನಿಕರ..

ಹಾಗೇ ಸುಮ್ಮನೇ...

Thursday 9 May 2019

ಹಾಗೇ ಸುಮ್ಮನೇ..
ಹಾಗೇ ಸುಮ್ಮನೇ...

T.R.P. ಎಂಬುದಿಟ್ಟನೋ..ನಮ್ಮ ಶಿವ ಕಾಣದಂತೆ ಮಾಯವಾದನೋ..     

          "ನಿಮ್ಮ ಅಕ್ಕ ಇದ್ದಾಳಲ್ಲಾ..,ಅವಳು ಇದೇ ಮನೇಲಿದ್ರೆ ನರಕ ತೋರಿಸ್ತೀನಿ ನರಕ..ಅದು ಹೇಗೆ ಕಾಪಾಡ್ಕೋತೀಯೋ...ಕಾಪಾಡ್ಕೋ..ನಾನೂ ನೋಡ್ತೀನಿ..."

* " ಮುಗಿಸ್ಬೇಕು"
"Address? "
" details ನಿನ್ನ ಮೊಬೈಲ್ಗೆ ಬರುತ್ತೇ..."

* ನಾನು ನಿನ್ನನ್ನ ಈ ಜನ್ಮದಲ್ಲಿ ಕ್ಷಮಿಸೋಲ್ಲ.."

* ನೋಡ್ತಿರು...ನಿನ್ನ ಒಂದೊಂದು ರಹಸ್ಯಾನೂ ನಿನ್ನ ನೆಮ್ಮದೀನ ಹೇಗೆ ಕಿತ್ಕೊಳ್ತವೆ ಅಂತಾ.."

* ಅವಶ್ಯಕತೆಗಿಂತ ಹೆಚ್ಚು ಅನುಕಂಪ ಗಿಟ್ಟಿಸ್ಕೋಕೆ ನೋಡಿದ್ರೆ ಪರಿಣಾಮ ಚನ್ನಾಗಿರೋಲ್ಲ...ಗೊತ್ತಿರ್ಲಿ...ಹೂಂ, ಹೊರಡು.."

     * ನಿನ್ನ ಮೇಲೆ ನಿನ್ನೆ ರಾತ್ರಿ ಒಂದು ಕೊಲೆ ಪ್ರಯತ್ನ ನಡೀತು...ಯಾರು ಮಾಡಿಸಿದ್ದು ಗೊತ್ತಾಯ್ತೇನೆ?  ಅದು ನಾನೇಏಏಏ"

      ‌‌      ಇದೇನು ಗೊತ್ತಾಯ್ತಾ? ಇಲ್ವಾ? ಕನ್ನಡ ಧಾರವಾಹಿ ನೋಡೋರ್ನ  ಕೇಳಿ..ಗೊತ್ತಿರುತ್ತದೆ.....'ಮಗಳು ಜಾನಕಿ',' week end with Ramesh..' ಈ ಎರಡನ್ನು ಬಿಟ್ಟರೆ ನಾನು TV .ನೋಡುವದಿಲ್ಲ...ನೋಡಬಾರದೆಂಬ ವೃತ ಅಥವಾ ಹಟವೇನೂ ಇಲ್ಲ..ನೋಡಲಾಗುವದಿಲ್ಲ ಅಷ್ಟೇ...(ಹಾಗಾದರೆ ಮೇಲೆ ಬರೆದದ್ದು ಹೇಗೆ ತಿಳಿಯಿತು ಅಂತಾನಾ? ಅವು ಧಾರವಾಹಿಗಳ ಮಧ್ಯದಲ್ಲಿ ಬರುವ ಉಳಿದ ಧಾರವಾಹಿಗಳ  ಜಾಹೀರಾತು..) ಎಲ್ಲವೂ ಅಲ್ಲ, ಆದರೆ ಬಹುಪಾಲು ಧಾರವಾಹಿಗಳಲ್ಲಿ ,ಸುದ್ದಿ ಪ್ರಸಾರಗಳಲ್ಲಿ, ಅವಾಸ್ತವಿಕತೆ, ಜಗಳ, ದ್ವೇಷ,ಸಂಚು,ದೌರ್ಜನ್ಯ, ಅದಿಲ್ಲದಿದ್ದರೆ ಹಾಸ್ಯದ ಹೆಸರಿನಲ್ಲಿ ' ಹಾಸ್ಯಾಸ್ಪದ'  ಧಾರವಾಹಿಗಳು...ರಿಯಾಲಿಟಿ ಶೋಗಳೇನೋ ಚನ್ನಾಗಿರುತ್ತವೆ.ಆದರೆ ಅವಕ್ಕೂ TRP ದಾಹ...ಎಸ್.ಪಿ.ಬಿ ಅಂಥವರ ' ಎದೆ ತುಂಬಿ ಹಾಡಿದೆನು'  ಮೂಲ ಶೋ ಪ್ರಾರಂಭದಲ್ಲಿ ಸಾಕಷ್ಟು ಜನಮೆಚ್ಚುಗೆ ಪಡೆದ ಧಾರವಾಹಿ...ಈಗ ಅಂಥ ಎಲ್ಲ ಕಾರ್ಯಕ್ರಮಗಳು film fare events ಆಗಿ ಕಂಗೊಳಿಸುತ್ತಿವೆ..ಕಿರುಚಾಟ, ಅಬ್ಬರ, dance ಹೆಸರಿನಲ್ಲಿ ದೊಂಬರಾಟ,ಇನ್ನೂ ಸರಿಯಾಗಿ  ಕಣ್ತೆರೆಯದ ಮಕ್ಕಳಲ್ಲಿ ಇಲ್ಲದ ಪೈಪೋಟಿ, ವಾಸ್ತವಿಕತೆ ಇಲ್ಲದ  ವಿಶ್ಲೇಷಣೆ, ವಿಮರ್ಶೆ ಇವೆಲ್ಲ TV ಕಾರ್ಯಕ್ರಮಗಳನ್ನು ನೋಡುವವರ ಸಹನೆ ಪರೀಕ್ಷೆ ಮಾಡುತ್ತಿವೆ..ನಿನ್ನೆ ಕನ್ನಡದ ಕೋಗಿಲೆಯ ಕಾರ್ಯಕ್ರಮ ಜಾನಪದ ವಿಶೇಷವಿತ್ತು..ಹಾಡುಗಳು,ಹಾಡುಗರು ಚನ್ನಾಗಿಯೇ ಪ್ರಸ್ತುತ ಪಡಿಸಿದರು..ಆದರೆ ಜಾನಪದ ಪರಿಸರ ಮಾತ್ರ ಶೂನ್ಯ...ಹಾಡುಗರು/ ಉಳಿದ ಮಕ್ಕಳು ' ಹಸೆ ಮಣೆ ಏರುವ ಮದುವಣಗಿತ್ತಿಯರ ಅಲಂಕಾರಗಳಲ್ಲಿ...ಮೊದಲೆಲ್ಲ ಇಳಕಲ್ ಸೀರೆ,ಕೈತುಂಬ ಬಳೆ,ಎತ್ತಿ ಕಟ್ಟಿದ ಕಚ್ಚೆ,ದೊಡ್ಡ ಕುಂಕುಮ,ಕಂಚಿನ ಕಂಠ,ಅತಿ ಕಡಿಮೆ ಆದರೆ ಗ್ರಾಮೀಣ  ಹಿನ್ನಲೆವಾದ್ಯಗಳು  ಪೂರಕ  ವಾತಾವರಣವನ್ನು ಸೃಷ್ಟಿಸುತ್ತಿದ್ದವು..TRP ಹೆಚ್ಚಳದ ಹಣವನ್ನು ಧನಾತ್ಮಕವಾಗಿ,ಮೌಲ್ಯಯುತವಾಗಿ ಬಳಸಿದರೆ ಕಾರ್ಯಕ್ರಮಗಳು ಇನ್ನೂ ಶ್ರೀಮಂತಗೊಳ್ಳ ಬಲ್ಲವು...ಆದರೆ ಇಲ್ಲಿಯ ಪಾತ್ರಧಾರಿಗಳೆಲ್ಲವೂ ಅಂಬಾನಿ,ಅದಾನಿ ಕುಟುಂಬದವರೇ..ರಾತ್ರಿ ಮಲಗಿದಾಗಲೂ ಮೊಳದಗಲ ಜರಿ ಸೀರೆ,ಮೈಮೇಲೆ ಕುತ್ತಿಗೆಯನ್ನು ಹಿಂದೆ ಮುಂದಕ್ಕೆ ಜಗ್ಗುವ ಭಾರದ ಆಭರಣಗಳು,ಎಲ್ಲೆಲ್ಲೂ ಐಷಾರಾಮಿ ಕಾರುಗಳು...

ಆದರೆ  ಮನೆಗಳು ಮಾತ್ರ,

' ಸುಖ 'ವಿಲ್ಲಾ'
ಸಮಾಧಾನ  ವಿಲ್ಲಾ'
'ಆನಂದ 'ವಿಲ್ಲಾ'
ಶಾಂತ 'ವಿಲ್ಲಾ'...ದಂಥ ವಿಲ್ಲಾಗಳೇ...
  
           ಇವುಗಳು ಈಗಿರುವ ಸಮಾಜವನ್ನು ಬಿಂಬಿಸುತ್ತಿವೆಯೋ? ಸಮಾಜವೇ ಹೀಗೆ ಬದಲಾಗುತ್ತಿದೆಯೋ ಗೊಂದಲ...ಹಿರಿಯರು ಬೇಕಾದರೆ ನೋಡಿಯಾರು..ಬೇಡವಾದರೆ ಬಿಟ್ಟಾರು...ಆದರೆ ಮಕ್ಕಳ ಗತಿ? ನೆನೆದರೆ ಗಾಬರಿಯಾಗುತ್ತದೆ..
             ನಮಗೆ ಹತ್ತನೇ ವರ್ಗದಲ್ಲಿ 'ಚತುರ ಚಾಣಕ್ಯ' ಎಂಬ non detailed text ಪಠ್ಯವಾಗಿತ್ತು..ನಂದರಿಂದಾದ ಅಪಮಾನದ ಸೇಡು ತೀರಿಸಿಕೊಳ್ಳಲು  ಚಾಣಕ್ಯ ಚಂದ್ರಗುಪ್ತನನ್ನು ಎತ್ತಿಕಟ್ಟಿ,ಸೋಲಿಸಿ, ಮೌರ್ಯ ಸಾಮ್ರಾಜ್ಯ  ಸ್ಥಾಪಿಸುವ ಒಂದುಕಥೆ..ಅದರಲ್ಲಿ ' ವಿಷಕನ್ಯೆಯರ' ಪ್ರಸ್ತಾಪ ಬರುತ್ತದೆ. ಹುಟ್ಟಿದ ಹೆಣ್ಣುಮಕ್ಕಳಿಗೆ  ಅವರ ವಯಸ್ಸು ಗಮನದಲ್ಲಿಟ್ಟುಕೊಂಡು ಸ್ವಲ್ಪ ಸ್ವಲ್ಪ  ಹೆಚ್ಚಿಸುತ್ತ ವಿಷಕೊಡುತ್ತಹೋದರೆ
ಅವರು ವಿಷಕನ್ಯೆಯರಾಗಿ ಬೆಳೆದು ,ಅವರ ಸಂಗಮಾಡಿದವರು ವಿಷ ಏರಿ ಸದ್ದಿಲ್ಲದೇ ಇಲ್ಲವಾಗುತ್ತಿದ್ದರು, ಹೀಗಾಗಿ ಶತ್ರು ಸಂಹಾರಕ್ಕೆ ಅವರ ಬಳಕೆಯೊಂದು ಕುಟಿಲತೆಯ ಭಾಗವಾಗಿತ್ತು ಎಂದು ಓದಿದ ನೆನಪು... ಕೇಳಿದ್ದು ನಿಜವೋ ,ಅಲ್ಲವೋ ಇಲ್ಲಿ ಬೇಡ...ಆದರೆ ಸಮಾಜಕ್ಕೆ ಪೂರಕವಲ್ಲದ್ದನ್ನು ನೋಡಿ ,ಕೇಳಿ, ಕಂಡು, ಅಳವಡಿಸಿಕೊಳ್ಳುವದನ್ನು ನಿಯಂತ್ರಸಲಾಗದೇ ಹೋದರೆ ಖಂಡಿತ  ಅಪಾಯ ಹತ್ತಿರದಲ್ಲಿದೇ ಎಂದಲ್ಲವೇ?
             ಮೊದಲೇ ಹೇಳಿದ್ದೇನೆ..ನಾನು ಧಾರವಾಹಿಗಳ  ನಿಯಮಿತ ನೋಡುಗಳಲ್ಲ..ಎಲ್ಲವೂ ಹೀಗೇ ಇರುತ್ತದೆ ಎಂದೂ ಅರ್ಥವಲ್ಲ...ಅನೇಕ ಘಟಾನುಘಟಿಗಳ ಕಾರ್ಯಕ್ರಮಗಳನ್ನು ಕಾಲು ಜೋಮು ಹಿಡಿಯುವ ವರೆಗೆ ಕುಳಿತು ನೋಡಿದ್ದೇನೆ..ಈಗಲೂ ಚನ್ನಾಗಿದ್ದರೆ ಹಾಗೆಯೇ ಕುಳಿತು ನೋಡುತ್ತೇನೆ..ನೋಡುವವರನ್ನು ಗೌರವಿಸುತ್ತೇನೆ..ಆದರೆ ಎಲ್ಲವೂ ಮೊದಲಿ ನಂತಿಲ್ಲ ಎಂಬುದು ಪ್ರಾರಂಭದ ಕೆಲ ಧಾರವಾಹಿಗಳ ಮೇಲಿನ ಸಂಭಾಷಣೆಗಳು ಹೇಳುತ್ತಿಲ್ಲವೇ?...

Sunday 5 May 2019

ಹಾಗೇ ಸುಮ್ಮನೇ.. ಮನವೊಂದಿರಲಿ.... ಮಾರ್ಗವಿದ್ದೇ ಇದೆ... ಅದು 1965-66 ನೇ ಸಾಲಿನ‌ ಶೈಕ್ಷಣಿಕ ವರ್ಷ .ಧಾರವಾಡಕ್ಕೆ ವಲಸೆ ಬಂದು ಒಂದು ವರ್ಷದ PUC ಮುಗಿದಿತ್ತು.ಆಗ PUC ಇದ್ದುದು ಒಂದೇ ವರ್ಷ..ಮುಂದೆ B.A . ಪದವಿಗೆ ಆಯ್ಕೆಮಾಡಬೇಕಾದ ವಿಷಯಗಳ ಚರ್ಚೆ ಮನೆಯಲ್ಲಿ ನಡೆದಿತ್ತು...ನಾನು ಪಿಯುಸಿಗೆ Sociology ವಿಷಯದಲ್ಲಿ ಅತಿ ಹೆಚ್ಚು marks ಪಡೆದಿದ್ದುದರಿಂದ ಅದನ್ನು ಆಯ್ಕೆ ಮಾಡಿಕೊಂಡರೆ ಪದವಿ ಮುಗಿಯುವ ವರೆಗೂ ಆ ವಿಷಯಕ್ಕಿದ್ದ Ensminger Scholarship ಸಿಗುವದಿದ್ದುದರಿಂದ ನಾನು excite ಆಗಿದ್ದೆ...ಆದರೆ ಅದೇ college ದಲ್ಲಿ ಲೆಕ್ಚರರ್ ಆಗಿದ್ದ ಅಣ್ಣ ನನ್ನ ಪೂರ್ತಿ education ಹೊಣೆ ಹೊತ್ತವನೂ ಆದ್ದರಿಂದ ಅವನ ಅಭಿಪ್ರಾಯಕ್ಕೆ ಸಹಜವಾಗಿಯೇ ಹೆಚ್ಚು ತೂಕವಿತ್ತು..ಅಲ್ಲದೇ ಮೊದಲೇ ಧಾರವಾಡಕ್ಕೆ ಬಂದ ಅವನ ಅನುಭವಕ್ಕೆ ಬೆಲೆಯೂ ಸ್ವಾಭಾವಿಕವಾಗಿ ಜಾಸ್ತಿಯಿತ್ತು. ‌‌‌" ಯಾವುದೋ ಒಂದು ವಿಷಯಕ್ಕೆ ಬಂದ scholarship ಆಧರಿಸಿ ವಿಷಯಗಳ ಆಯ್ಕೆ ಮಾಡದೇ ಮುಂದೆಯೂ ಉಪಯೋಗಕ್ಕೆ ಬರುವ ವಿಷಯವನ್ನು ಆಯ್ಕೆ ಮಾಡುವದೇ ವಿವೇಕ ಎಂಬುದು ಅವನ ಪ್ರಾಮಾಣಿಕ ಅನಿಸಿಕೆಯಾಗಿತ್ತು...ಆಗ ಎಷ್ಟೇ ಜಾಣರಿರಲಿ ಹೆಣ್ಣುಮಕ್ಕಳು ನೌಕರಿ ಮಾಡುವ ಆಯ್ಕೆ ಅಷ್ಟಾಗಿ ಇನ್ನೂ ಇರಲಿಲ್ಲ..ಅತಿ ಮುಂದುವರೆದವರಲ್ಲಿ ಅಷ್ಟಿಷ್ಟು ಅವಕಾಶವಿದ್ದರೂ ಅದು ಮನೆಮಂದಿಯ ಅನುಮತಿಯಿಂದಲೇ ಹೊರತು ಮಹಿಳಾ ಸಮಾನತೆ, ಸಬಲೀಕರಣ, ಅಸ್ಮಿತೆಯಂಥ ಮಹಾಮಹಾ ಶಬ್ದಗಳ ಪರಿಚಯದಿಂದ ಆಗಿರಲಿಲ್ಲ...ಬದುಕನ್ನು ಆಯ್ದಿಟ್ಟ ದಾರಿಯಲ್ಲಿ ಒಪ್ಪಿಕೊಂಡು ಎಲ್ಲರ ಮಾತುಗಳನ್ನು ಮನ್ನಿಸಿ ಕುಟುಂಬ ಸಾಮರಸ್ಯಕ್ಕೆ ಭಂಗ ಬರದಂತೆ ಬದುಕುವದೇ ಪದವಿಯಾಗಿತ್ತು." ನೀನು ಭಾಷೆಗಳನ್ನು ಅಭ್ಯಸಿಸು...English Major/ Hindi, minor ಇರಲಿ..ನೌಕರಿ ಮಾಡದಿದ್ದರೂ ಸ್ವಯಂ ವ್ಯಕ್ತಿತ್ವಕ್ಕೆ ಭಾಷೆಗಳು ಭೂಷಣ..ನಾಳೆ ಮಕ್ಕಳು,ಮೊಮ್ಮಕ್ಕಳ ಕಾಲಕ್ಕೂ out dated ಅನಿಸುವದಿಲ್ಲ ಎಂದು ಅಣ್ಣ ಹೇಳಿದಾಗ ಹೆಚ್ಚು ಯೋಚಿಸದೇ ಹೂಗುಟ್ಟಿ ಅದರಂತೆಯೇ ಪದವಿ‌ಮುಗಿಸಿದೆ..ಆಗ ಅಭ್ಯಾಸಕ್ಕೆ ಇಷ್ಟು ವಿಷಯಗಳ ವೈವಿಧ್ಯವೂ ಇರಲಿಲ್ಲ...ಪ್ರೊಫೆಸರ್ ಆಗಲು BA/ Bsc, bank/ LIC ಯಂಥ ನೌಕರಿಗಳಿಗೆ ವಾಣಿಜ್ಯ( commerce) ವಿಭಾಗ,ಹಣವಂತ ಜಾಣ ,ಅದೂ ಮನೆಯಲ್ಲಿ ಹಿರಿಯ ಡಾಕ್ಟ ರ್ ಗಳಿದ್ದರೆ ಅಪರೂಪಕ್ಕೆ MBBS. ಹೀಗೆ ಕೆಲವು ಸಿದ್ಧ ಮಾರ್ಗಗಳೇ ಜಾಸ್ತಿಯಾಗಿದ್ದ ಕಾಲಘಟ್ಟವದು. ‌‌‌‌‌ ‌‌‌‌‌ ನಾನು ಹೇಳಹೊರಟಿದ್ದ ವಿಷಯಕ್ಕೆ ಈಗ ಬರುತ್ತೇನೆ..ನಾನು ಅತಿ ಜಾಣ ವಿದ್ಯಾರ್ಥಿನಿ ಅಲ್ಲದಿದ್ದರೂ ಪ್ರಾಮಾಣಿಕವಾಗಿ ಓದಿ ಬರೆದು ವರ್ಷ ವರ್ಷವೂ ಪಾಸಾಗಿ ಮೂರು ವರ್ಷಗಳ degree ಮುಗಿದ ಒಂದು ವರ್ಷದಲ್ಲೇ ಮದುವೆಯಾಗಿ ಹತ್ತು ವರ್ಷಗಳಲ್ಲಿ ಮೂರು ಮಕ್ಕಳಾಗಿ ನಾನೇನು ಓದಿದ್ದೆ,?ಎಲ್ಲಿ,?ಏಕೆ? ಎಂಬ ಎಲ್ಲ ಪೂರ್ವಾಶ್ರಮದ ವಿವರಗಳು ಸಂಪೂರ್ಣ ಹಿನ್ನೆಲೆಗೆ ಸರಿದಾಗ ನಡುನಡುವೆ ಚಾಟಿಯೇಟಿನಂತೆ ನನ್ನವರಿಗೆ ಎರಡು ಹೃದಯಾಘಾತ ಗಳಾಗಿದ್ದರಿಂದ ,ಮುಂಜಾಗ್ರತೆ ಕ್ರಮವಾಗಿ ಕುಮಠಾದಲ್ಲಿ BEd ಮುಗಿಸಿ ಬಂದೆ. ಆಗ ನನ್ನ ಆಪದ್ಬಾಂಧವರಾಗಿ ಕೈಹಿಡಿದದ್ದು ನನ್ನವರು ನೌಕರಿ ಮಾಡುತ್ತಿದ್ದ K.E.B' s ಸಂಸ್ಥೆ, ಹಾಗೂ ನನ್ನಣ್ಣನ ಆಶಯದ ಮೇರೆಗೆ ಆಯ್ದುಕೊಂಡ ಭಾಷಾ ವಿಷಯಗಳು..ನನಗೂ ನೌಕರಿ ಸಿಕ್ಕಮೇಲೆ ಅದಕ್ಕಾಗಿಯೇ ಕಾದವರಂತೆ ಒಂದು ವರ್ಷ ಮುಗಿದು job approval ಬಂದ ಒಂದೇ ವರ್ಷದಲ್ಲಿ ನನ್ನವರು ಇಲ್ಲವಾದರು... ನನ್ನ ಹಣೆಬರಹ ಬರೆದವರಿಗಿಂತ ಚನ್ನಾಗಿ "ನನಗೇನು ಬೇಕಿತ್ತು?" ಎಂಬುದನ್ನು ಬೇರಾರು ಬಲ್ಲರು...!!! ಅದನ್ನು ಆಗಲೇ ತಿಳಿದು ನನ್ನ ಬದುಕಿಗೊಂದು ಶಾಶ್ವತ ಪರಿಹಾರವೊದಗಿಸಿದ ಆ ದೈವಕ್ಕೆ ನಾನು ಋಣಿ.. ‌ ನಾನು ನಿವೃತ್ತಳಾಗಿ ಸರಿಯಾಗಿ ಹದಿನೈದು ವರ್ಷಗಳು ಸಂದಿವೆ...ಅಂದಿನ ನನ್ನ ಆಯ್ಕೆ ನನ್ನ ನಿವೃತ್ತಿ ನಂತರದ ವರ್ಷಗಳನ್ನು ಸಹನೀಯವಾಗಿಸಿವೆ...ಕನ್ನಡ ಹೊರತಾದ ಬೆಂಗಳೂರಿನ ವಾತಾವರಣದಲ್ಲಿ ಎಲ್ಲರೊಂದಿಗೆ ಬೆರೆತು ಸಂವಹನ ನಡೆಸಲು ಪೂರಕವಾಗಿವೆ... ನಮ್ಮನೆಯಲ್ಲಿ ಶುದ್ದ ಕನ್ನಡದ್ದೇ ವಾತಾವರಣವಿದ್ದರೂ ಪರದೇಶಗಳಲ್ಲಿ ಮಕ್ಕಳ ನೆರೆಹೊರೆಯವರೊಂದಿಗೆ ಭೇದವಿಲ್ಲದೇ ಇರಲು, ಮಮ್ಮಕ್ಕಳ ಸ್ನೇಹಿತರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು, ಬಿಡುವಿನ ವೇಳೆಯಲ್ಲಿ ಸಾಹಿತಿಗಳು,ಸಾಹಿತ್ಯಾಸಕ್ತರ ಗುಂಪಿನಲ್ಲಿ ಗುರುತಿಸಿಕೊಳ್ಳಲು ಸಹಾಯಕವಾದದ್ದು ನನ್ನ ಭಾಷಾ ಆಯ್ಕೆಗಳೇ ಎಂಬುದನ್ನು ಹೇಗೆ ಮರೆಯಲಿ? ‌‌ ಇದೆಲ್ಲ ಈಗೇಕೆ?/ ಇಂದೇಕೆ ?? ಇದು ಫಲಿತಾಂಶದ ತಿಂಗಳು..ಮಕ್ಕಳು ಬೇರೆಬೇರೆ ಹಂತಗಳಲ್ಲಿ, ಬೇರೆ ಬೇರೆ ಶ್ರೇಣಿಗಳಲ್ಲಿ ಪಾಸಾಗುತ್ತಾರೆ..ಏನೇ results ಬರಲಿ ಅನೇಕ ಪರ್ಯಾಯ ಮಾರ್ಗಗಳಿರುತ್ತವೆ..ಅವರ performance ಹೇಗೇ ಇರಲಿ ಮಕ್ಕಳೊಂದಿಗೆ ಚರ್ಚಿಸಿ ಅವರಿಗೆ ನಿಮ್ಮ ಒತ್ತಡ ಹೇರದೇ ಅವರ ಆಯ್ಕೆಯ ಶಿಕ್ಷಣ ಕೊಡಿಸಿ..ಆದ್ಯತೆಗಳು ಬದಲಾಗುತ್ತಿರುತ್ತವೆ ಎಂಬುದಕ್ಕೆ ಜನಪ್ರಿಯತೆಯಲ್ಲಿ ಇಳಿಕೆ ಯಾಗುತ್ತಿರುವ ಇಂಜನಿಯರಿಂಗ್/ medical course ಗಳೇ ಸಾಕ್ಷಿ... ‌ ‌ ಮುಂದೇ ಏನೇ ಪರಿಸ್ಥಿತಿ ಬಂದರೂ ಅದನ್ನೆದುರಿಸುವಂತೆ ಮನಸ್ಸನ್ನು ಸಿದ್ಧ ಗೊಳಿಸುವದೇ ಈಗ ನಿಜವಾದ ಪದವಿಯಾಗಿದೆ...ಈಗಿನ ಮಕ್ಕಳು ಸುದೈವಿಗಳು.ಇನ್ನಿಲ್ಲದ ಅನುಕೂಲತೆಗಳು, ಪಾಲಕರ ಕಾಳಜಿ, ಏನು ಮಾಡ ಬೇಕೆಂದರೂ ಅಸಾಧ್ಯವಲ್ಲದ ಹಣಕಾಸಿನ ಸ್ಥಿತಿ , ಶಿಕ್ಷಣಕ್ಕೆ ಪೂರಕ loan / scholarshipsಗಳ ಅನುಕೂಲತೆ ಏನೆಲ್ಲ ಇವೆ..ಉಳಿದಂತೆ ಬೇಕಾದದ್ದು " ಮನಸ್ಸುಗಳು" ಮಾತ್ರ...ಮಾರ್ಗಗಳು ಉದ್ದ ಗಲಕ್ಕೂ ಚಾಚಿಕೊಂಡಿವೆ... 'ಕಾಲ'ದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದ್ದೇ ಇದೆ....ನಿರಾಶೆ ಬೇಡ...

Wednesday 1 May 2019

ಹಾಗೇ ಸುಮ್ಮನೇ..

ಮೌಲ್ಯ ಮಾಪನ_ಬಗೆಹರಿಯದ ಜಿಜ್ಞಾಸೆ ..

          ಅಂದು SSLC ಪರಿಣಾಮ ಬಂದಿತ್ತು..result sheet ಎದುರಿಟ್ಟು ಕೊಂಡು ಕೂತ ಮುಖ್ಯಾಧ್ಯಾಪಕರು ನನಗೊಂದು  ಪ್ರಶ್ನೆ ಕೇಳಿದರು;

" ಏನು ಟೀಚರ್ SSLC ಮಕ್ಕಳು core subjects
ಗಳಲ್ಲಿ 90/95 ರ ಮೇಲೆ ಆರಾಮಾಗಿ ತಗೊಳ್ತಾರೆ? ಇಂಗ್ಲಿಷನಲ್ಲಿ  ಅದ್ಯಾಕೆ  ಸಾಧ್ಯವಾಗುತ್ತಿಲ್ಲ?"

        " ಸರ್ ಅದು ಭಾಷೆ..ಗಣಿತ,ವಿಜ್ಞಾನಗಳಂತೆ ಅಲ್ಲ...ಸಿದ್ಧಾಂತ,ಪ್ರಮೇಯ,ಚಲನೆಯ ಸಿದ್ಧ ನಿಯಮಗಳಿರುವದಿಲ್ಲ..
2+2_ ಜಗತ್ತಿನ ಯಾವ ಮೂಲೆಗೆ ಹೋದರೂ ನಾಲ್ಕೇ ಉತ್ತರ...ನ್ಯೂಟನ್ ಚಲನೆಯ ನಿಯಮಗಳು, ಜ್ಯಾಮಿಟ್ರಿಯ ಪ್ರಮೇಯಗಳು ಬದಲಾಗುವದಿಲ್ಲ...ಆದರೆ ಭಾಷೆ ಅನಂತ...ತಾಯಿಯ ಮೇಲೆ ಒಂದು ಪರಿಚ್ಛೇದ ಬರೆಯ ಹೇಳಿದರೆ ಒಬ್ಬರಂತೆ ಇನ್ನೊಬ್ಬರು ಖಂಡಿತ ಬರೆಯುವದಿಲ್ಲ..ಅಷ್ಟೇ ಏಕೆ, ಒಬ್ಬನೇ ವಿದ್ಯಾರ್ಥಿ ಎರಡು ಸಲ ಬರೆದರೂ ಭಿನ್ನವಾಗಿಯೇ ಬರೆಯುತ್ತಾನೆ..ಅಲ್ಲಿ ತುಲನಾತ್ಮಕ ಮೌಲ್ಯ ಮಾಪನ ನಡೆಯ ಬಹುದು...ಅಲ್ಲಿ ಅಂದರೆ ಭಾಷೆಗಳ ವಿಚಾರದಲ್ಲಿ ಸದಾ change for better ಸಾಧ್ಯವಿದೆ...ಉದಾ: beauty/ look  ಗೆ ವಿಶೇಷಣ ಬೇಕಾದರೆ ಅಕ್ಷರಕ್ಕೊಂದು ಪರ್ಯಾಯ ಪದ  ಕೊಡಬಹುದು..
A- awesome
B- beautiful
C- charming
D-dazzling
E- eye catching
F- fascinating
G- good looking.....
               ಹೀಗೆ...ಈ ಅವಕಾಶ ಭಾಷೆಗಳನ್ನು ಹೊರತು ಪಡಿಸಿ ಉಳಿದ ವಿಷಯಗಳಿಗಿಲ್ಲ...ವಿಷಯ ವ್ಯಾಪ್ತಿ, ಪ್ರಸ್ತಾವನೆ, ಗುಣಗಳಿಗೆ ತಕ್ಕ ವಿಷಯ ಪ್ರಸ್ತಾಪ, ಬರಹದ ಚಿನ್ಹಗಳ ಸೂಕ್ತ ಸರಿಯಾದ ಬಳಕೆ.ಏನೆಲ್ಲ ಉಂಟು..ಅಲ್ಲದೇ ಭಾಷೆಗಳಿಗೆ stagnation ಇಲ್ಲವೇ ಇಲ್ಲ...ಅದು ಚೈತ್ರ ಪಲ್ಲವದಂತೆ ನಿತ್ಯ ಹರಿದ್ವರ್ಣ...ಒಂದೇ ಮಾತು, ಸ್ವತಃ ಕಲಿಸಿದ ಗುರುಗಳೂ ತಮಗೆ ತಾವೇ ಪೂರ್ಣ ಅಂಕಗಳನ್ನು ಕೊಟ್ಟುಕೊಳ್ಳಲಾರರು/ಕೊಟ್ಟುಕೊಳ್ಳ ಬಾರದು...
             ಇಷ್ಟು ಹೇಳಿದಾಗ ಮುಖ್ಯಾಧ್ಯಾಪಕರು ಹೌದೆಂದು ತಲೆ ಹಾಕಿದರು.
ಆದರೆ ಮುಂದೆ ಕೆಲವೇ ವರ್ಷಗಳಲ್ಲಿ ಇಂಗ್ಲಿಷಿಗೂ
97/98 ಬೀಳತೊಡಗಿದವು..ಅದೇ ಶಿಕ್ಷಕರು,ಅದೇ ವಿದ್ಯಾರ್ಥಿ ವೃಂದ,ಅವೇ ಪರೀಕ್ಷೆಗಳು.ಆದರೆ ಪ್ರಶ್ನೆಪತ್ರಿಕೆಗಳಲ್ಲಿ  ದೀರ್ಘ ಉತ್ತರಗಳ ಬದಲಿಗೆ, objective type ಹೆಚ್ಚಾಯಿತು.. ಬರೆಯುವಲ್ಲಿ ವಿಚಾರ ಮಾಡಬೇಕಾದ ಪ್ರಮೇಯವೇ ಇಲ್ಲದಂತೆ copy/ dictation ಸುಲಭ ವಾಗುವ ರೀತಿ ಹೆಚ್ಚಾಯಿತು..ನರ್ಸರಿಯಂಥ ಪ್ರಾಸ ಕೇಳಿದ ಪದಗಳಿಗೂ  ಪ್ರಶ್ನೆಪತ್ರಿಕೆಯಲ್ಲಿ ಮಾದರಿ ಉತ್ತರಗಳು!!!!!!!

Beat_ heat/ seat..

ಹೀಗೆ...ಬಹುಶಃ  ಆಂಗ್ಲ ಭಾಷೆಯಿಂದಾಗಿ ಆಗಬಹುದಾದ SSLC ಪರಿಣಾಮದ ಕುಸಿತ ತಡೆಯುವ ಕ್ರಮವಿತ್ತೋ ಏನೋ..
ಕಾರಣ ವೇನೇ ಇರಲಿ ಶಿಕ್ಷಕರಿಗೆ ಸಮಾಧಾನವಾಗುವಂತೆ ಪರಿಣಾಮ ಬರಲು ಇದರಿಂದ ಸಾಧ್ಯವಾಯಿತು..ನನ್ನ ೫೮ ನೇ ವರ್ಷದಲ್ಲಿ ನಿವೃತ್ತಿ ಯಾಗುವ ಮೊದಲು ಆರೇಳು ವರ್ಷಗಳಲ್ಲಿ ನನ್ನ ವಿದ್ಯಾರ್ಥಿಗಳೂ ,ನನ್ನ ಕಲಿಸುವ ಕ್ರಮ ಬದಲಾಗದಿದ್ದಾಗಲೂ ದಂಡಿಯಾಗಿ ೯೭/೯೮ ಪಡೆದು ಶಿಕ್ಷಕರಿಗೂ / ಶಾಲೆಗಳಿಗೂ ಕೀರ್ತಿ ತಂದರು😳
‌‌‌          ಅದರೆ ಒಂದು ಮಾತು...ನಂತರದಲ್ಲಿ ಒಮ್ಮೆಲೇ ಬದಲಾಗುವ/  ಕಠಿಣವೂ ಆಗುವ  PUC ಪರೀಕ್ಷೆಗಳಲ್ಲಿ ನಿಜವಾದ ಜಾಣ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಕಡಿಮೆ ಅಂಕ ಪಡೆಯುವ/ ಅನುತ್ತೀರ್ಣ ರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಸ್ಥಿತ್ಯಂತರ ಕಾಣತೊಡಗಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಸಿದು ಹೋಗುವ ಪ್ರಸಂಗಗಳು ಹೆಚ್ಚಾದವು..
               ಸರಿಯಾದ ಮೌಲ್ಯಮಾಪನವಾಗದ ,ಕಾಪಿ ಮಾಡಿ ಅಂಕಗಳನ್ನು ಪಡೆಯಲು ಸುಲಭವಾಗುವ ಪರೀಕ್ಷಾ ಪದ್ಧತಿಯಿದು..
            ‌Examination is a necessary evil ಎಂಬ ಮಾತಿದೆ. ಗ್ರಾಮೀಣ ಮಕ್ಕಳಿಗೆ ಈ ಪದ್ಧತಿ ಸುಲಭವಾಗಿ ಪಾಸಾಗಲು,ಅನುಕೂಲ ಕರವಾಗಿದೆ ಎಂಬಲ್ಲಿ ಎರಡು ಮಾತಿಲ್ಲ...ಒಂದು pass/ fail ಮಗುವಿನ ಭವಿಷ್ಯಕ್ಕೆ ಮಾರಕವಾಗಲೇ ಬಾರದು..ಈ ದೃಷ್ಟಿಯಿಂದ ಒಬ್ಬರ food ಇನ್ನೊಬ್ಬರಿಗೆ poison...ಬೇರೆ ಹಾದಿಯಿಲ್ಲ..heterogeneous class room ಗಳಲ್ಲಿ ಇವಕ್ಕೆಲ್ಲ ಸುಲಭ ಪರಿಹಾರಗಳಿರುವದಿಲ್ಲ...ಪರಿಸ್ಥಿತಿಯ ಕೈಗೊಂಬೆಯಾಗಿಯೇ ಎಲ್ಲವನ್ನೂ ನಿಭಾಯಿಸ ಬೇಕಾಗುತ್ತದೆ...ಆದರೆ ಸಾಧಾರಣ ಮಕ್ಕಳಂತೆ, ನಿಜವಾದ ಮೇಧಾವಿ ಮಕ್ಕಳಿಗೂ ತಮ್ಮ ಮಿತಿಯರಿಯುವಂತೆ ಮೌಲ್ಯ ಮಾಪನ ಮಾಡುವದು,ಕನಿಷ್ಟ ಭಾಷೆಗಳಿಗಾದರೂ ಕೆಲ ಅಂಕಗಳನ್ನು ತಡೆ ಹಿಡಿಯುವದು ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ವೆನಿಸುವದಿಲ್ಲವೇ?
             ನಿನ್ನಿನ ಫಲಿತಾಂಶದ ನಂತರದ ವಿವಿಧ post ಗಳನ್ನು ಕಂಡಾಗ ಇಷ್ಟಾದರೂ ಹೇಳಬೇಕೆನಿಸಿತು..

     
               ‌_

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...