Saturday 31 December 2022

 ಭಾವ- ಋಣ...
   
        ಯಾವುದೇ ವಿಚಾರವೊಂದು ತಲೆಯಲ್ಲಿ  ಬೀಜಾಂಕುರವಾಗಿ ಆಕಾರಗೊಂಡು ಎರಡೂ ಬೊಗಸೆಗಳ ತುಂಬಾ ದಕ್ಕುವದೆಂದರೆ ಅದೂ ಒಂದು 'ಪ್ರಸವ' ಸಮಾನ ಕೆಲಸವೇ...

"ಗಂಡಸಿಗೆ ಪ್ರಸವ ವೇದನೆ  
ಇಲ್ಲ ಎಂದವರಾರು?
ಕವಿಗಳನ್ನೊಮ್ಮೆ ಕೇಳಿನೋಡಿ"-

ಇದು ನಾನು ಹಿಂದೊಮ್ಮೆ ಓದಿ
ಮೆಚ್ಚಿಕೊಂಡ ಒಂದು ಹನಿಗವನ.( ಯಾರದು ನೆನಪಿಲ್ಲ)ಈ ಪ್ರಕ್ರಿಯೆಯಲ್ಲಿ
ಅನೇಕರ ಆಶಯ, ಆಶೀರ್ವಾದ, ಅನುಗ್ರಹಗಳು ನೇಪಥ್ಯದಲ್ಲಿ ಕೆಲಸ ಮಾಡಿರುತ್ತವೆ.ಒಂದು ಹೆಸರು/ ಒಂದು ಯಾದಿ ಕೊಟ್ಟು  ಋಣ ತೀರಿಸುವ ಮಾತಲ್ಲ ಇದು.ಅಂತೆಯೇ ಇವು ನೇರ ಅನುವಾದಿತ ಕವನಗಳಲ್ಲದಿದ್ದರೂ ಅನೇಕ ಹೆಸರಾಂತ / ಕೆಲವೊಮ್ಮೆ ಹೆಸರು ಸಹ ತಿಳಿಯದ ಕವಿಗಳ ಕವನಗಳ ಎಳೆಯನ್ನು ಹಿಡಿದು ನಮ್ಮ ಭಾಷೆ/ ಸಂಸ್ಕೃತಿಗೆ ಅನುವಾಗುವಂತೆ
ಹೊಂದಿಸಿಕೊಂಡು ರೂಪಾಂತರ ಮಾಡಿದ ಕವನಗಳು.ಇದಕ್ಕೆ ಕಾರಣ ಆ ಕವಿತೆಗಳ ಬಗೆಗಿನ ನನ್ನ ಸೆಳೆತ, ಅವುಗಳಲ್ಲಿದ್ದ ಸಂದೇಶಗಳೇ ಹೊರತು ಬೇರೆ ಏನೂ ಇಲ್ಲ. ಅದಕ್ಕೆಂದೇ ಇವು ' ಭಾವ- ಋಣ'- ಕವಿತೆಗಳು...
            ನನ್ನೀ ಕಾರ್ಯದಲ್ಲಿ ಅನೇಕರು
ಅನೇಕ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ತಮಿಳು- ಕನ್ನಡ ಭಾಷೆಗಳ ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಸರು ಶ್ರೀ
K. ನಲ್ಲತಂಬಿಯವರದು. ನಾನು ಅವರನ್ನು ಒಂದೆರಡು ಸಲ ಭೇಟಿಯಾಗಿದ್ದರೂ ಸಾಹಿತ್ಯ ವಿಷಯಕ್ಕೆ
ಸಂಬಂಧಿಸಿ ಚರ್ಚೆಯಾದದ್ದಿಲ್ಲ. ಆದರೂ ನನ್ನ ಒಂದೇ ಒಂದು ವಿನಂತಿಗೆ
ಮನ್ನಣೆಯಿತ್ತು ,ಕವನಗಳನ್ನು ಓದಿ, ಸೂಕ್ತ ಸಲಹೆಗಳನ್ನು ಕೊಟ್ಟು ಅವುಗಳ ಬಗೆಗೆ ತಮ್ಮ ಅಭಿಪ್ರಾಯ ತಿಳಿಸಿದ ಅವರ ಉಪಕಾರ ಎಂದಿಗೂ ಸಹ ಮರೆಯದಂಥದು. ಒಮ್ಮೆ ಅದರ ಪ್ರತಿ
ಕೈ ಸೇರಿದ ಕೂಡಲೇ ಮುನ್ನುಡಿಗಾಗಿ ಹಿರಿಯ ಕನ್ನಡ ಲೇಖಕಿ ಶ್ರೀಮತಿ ಜಯಶ್ರೀ ದೇಶಪಾಂಡೆಯವರನ್ನು ವಿನಂತಿಸಿಕೊಂಡಾಗ ನನ್ನ ಆತ್ಯಂತ ಆತ್ಮೀಯ ಗೆಳತಿಯಾದ ಅವರೂ ಸಹ ಹೇಳಿದ ಸಮಯಕ್ಕೆ ಮುಂಚಿತ ವಾಗಿಯೇ ಮುನ್ನುಡಿ ಕೈ ಸೇರುವಂತೆ ನೋಡಿಕೊಂಡರು.  ಪುಸ್ತಕದ   ಮುಖ ಪುಟದ ಜವಾಬ್ದಾರಿ ರಾಷ್ಟ್ರೀಯ/ಅಂತರ್ ರಾಷ್ಟ್ರೀಯ ಮಟ್ಟದ ಖ್ಯಾತ ಕಲಾಕಾರ ಚಿತ್ರಮಿತ್ರ ಅವರದು.ಅವರ ಕುಂಚ ನನ್ನ ಕಲ್ಪನೆಯನ್ನೂ ಮೀರಿ ಕೆಲಸ ಮಾಡಿ ನನ್ನ ಸಂಕಲನದ  ಆಶಯವನ್ನು ಶಬ್ದಗಳ ಹಂಗೇ ಇಲ್ಲದೇ, ಬರಿಯ ನೋಟಮಾತ್ರದಿಂದ ಗ್ರಹಿಸುವ ಷ್ಟರ ಮಟ್ಟಿಗೆ ಸಶಕ್ತಗೊಳಸಿದ್ದಾರೆ. ಇದಕ್ಕೆಲ್ಲ ಕುಂದಣವಿಟ್ಟಂತೆ ಕೊನೆಯ ಪುಟವನ್ನು ತಮ್ಮ ಅನಿಸಿಕೆಗಳ ಮೂಲಕವೇ ಬೆನ್ನುಡಿಯಾಗಿ ಅಂದಗೊಳಿಸಿದ ಶ್ರೀಮತಿ ಕಿರಣ ರಾಜನಹಳ್ಳಿಯವರದು ಬಹುಶ್ರುತ 
ಹೆಸರು.ಚಿಕ್ಕ ವಯಸ್ಸಿನಿಂದಲೇ ಹಿರಿಯ ಸಾಧನೆಮಾಡಿ ಕರ್ನಾಟಕ ಸೇರಿದಂತೆ
ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಈ ಸಮಸ್ತ ಹಿರಿಯರ ಸಹಾಯ- ಸಹಕಾರ ಗಳಿಂದ ಇಂದು ನನ್ನ ಕನಸಿನ ಪುಸ್ತಕ ವೊಂದು ಪ್ರಕಟಗೊಳ್ಳುತ್ತಿದೆ.ಈ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. 
            ನನ್ನ ನಾಲ್ಕನೇ ಪುಸ್ತಕ  "ತುಂತುರು... ಇದು ನೀರ ಹಾಡು"- ಇದನ್ನು ಈ ಮೊದಲೇ ಅಂದವಾಗಿ ಮುದ್ರಿಸಿ ಕೊಟ್ಟ "ಮಹಿಮಾ ಪ್ರಕಾಶನ"ದ- ಮಾಲಿಕ ಶ್ರೀ ಶ್ರೀನಿವಾಸ ಅವರು ನನ್ನ ಈ ಪುಸ್ತಕದ ಮುದ್ರಣದ
ಹೊಣೆ ಹೊತ್ತು ಅಂದವಾಗಿ ಮುದ್ರಿಸಿ
ಸರಿಯಾದ ವೇಳೆಗೆ ನನ್ನ ಕೈಸೇರುವಂತೆ ಮಾಡಿದ್ದಾರೆ.
            ‌ಅಂದಮೇಲೆ ಈ ಪುಸ್ತಕದ ಶ್ರೇಯಸ್ಸು ಈ ಎಲ್ಲರಿಗೂ ಸಲ್ಲಲೇ ಬೇಕಾದ್ದು ನ್ಯಾಯ. ಅವರೆಲ್ಲರಿಗೂ ಮನಸಾ ವಂದಿಸಿ ಪುಸ್ತಕವನ್ನು ನಿಮ್ಮೆಲ್ಲರ ಓದಿಗಾಗಿ ಒದಗಿಸುತ್ತಿದ್ದೇನೆ.
   ‌    ಮತ್ತೊಮ್ಮೆ ಪ್ರತ್ಯಕ್ಷವಾಗಿ/ ಪರೋಕ್ಷವಾಗಿ ನನಗೆ ಈ ಕೆಲಸದಲ್ಲಿ ಸಹಕರಿಸಿದ ಎಲ್ಲರಿಗೂ ಹೃದಯಾಳದ 
ಕೃತಜ್ಞತೆಗಳು...
           ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ ನನ್ನ ಹೃತ್ಪೂರ್ವಕ ನಮನಗಳು...




Saturday 10 December 2022

ಬದುಕೊಂದು ಬಹುರೂಪ ದರ್ಶಕ...

      ಎರಡು ದಿನ ಮೈಸೂರಿನಲ್ಲಿ ಮಗಳ
 ನೂತನ ಮನೆಯ ಗ್ರಹಪ್ರವೇಶವಿತ್ತು.
ತಿಂಗಳಿಗೂ ಮೀರಿ ಕಾಡುತ್ತಿದ್ದ ಬೆನ್ನು ನೋವು/ ಅಲರ್ಜಿ ಕೆಮ್ಮಿನಿಂದಾಗಿ
ನನ್ನ ಪಾತ್ರ ಕೇವಲ ಒಂದೆಡೆಗೆ ಕೂತು
ನೋಡಿ ಖುಶಿಪಡುವದಕ್ಕೆ ಸೀಮಿತವಾಗಿತ್ತು.ನಂತರ ಗೊತ್ತಾದದ್ದು
ನಾನೇ ಎಲ್ಲಕ್ಕಿಂತಲೂ ಹೆಚ್ಚು ಫಲಾನುಭವಿ ಎಂದು.
         ‌       ಒಳಗೊಳ್ಳುವಿಕೆ ಇಲ್ಲದೇ ದೂರದಲ್ಲಿ ನಿಂತು ಏನೋ ಒಂದನ್ನು
ನೋಡಿ ಅನುಭವಿಸುವದರ ಮೋಜು
ನನಗೆ ಪ್ರತಿಶತ ನೂರರಷ್ಟು ಸಿಕ್ಕದ್ದು ಈ ಸಲದ ವಿಶೇಷ.
                ತೊಂಬತ್ತರ ವಯಸ್ಸಿನವರು
/ ಅಥವಾ ಅದಕ್ಕೆ ಸಮೀಪವಿದ್ದವರ
ಗುಂಪೊಂದು ಒಂದೆಡೆ ಕೂತು ತಮ್ಮ ಕಾಲದ/ ಈ ಕಾಲದ  ಸ್ಥಿತ್ಯಂತರಗಳ
ತುಲನೆಯಲ್ಲಿ ತೊಡಗಿಕೊಂಡು ಅದರ
ಮೌಲ್ಯಮಾಪನ ನಡೆಸಿ ಲಾಭಾಲಾಭದ
ಸರಿದೂಗಿಸುವಿಕೆಯಲ್ಲಿ ತಲ್ಲೀನರಾಗಿದ್ರೆ
' ಎರಡು+' ವಯಸ್ಸಿನ ಮಕ್ಕಳ ಪಾಲಕರ ಥಕ ಥೈ- ನೋಡುಗರಿಗೆ ಹಬ್ಬ.
ಗೊತ್ತುಗುರಿಯಿಲ್ಲದೆ ತಮ್ಮಷ್ಟಕ್ಕೆ ತಾವೇ ಅಲ್ಲಿಲ್ಲಿ ಓಡಾಡಿಕೊಂಡು / ಆಟ ಗಳಲ್ಲಿದ್ದರೂ ಆತಂಕ, ಏನೋ ಮಾಡಿಕೊಂಡು ಒಮ್ಮೆಲೇ ಅಳಲು ಸುರುವಾದರೂ ಆತಂಕ.ಅಮ್ಮ/ ಅಪ್ಪ/ ಅಜ್ಜ- ಅಜ್ಜಿಯರ ಭಾಗದೌಡು...
           ‌‌"ಅದು ತನ್ನಿ, ಇದು ಮಾಡಿ-"
ಇಂಥ ಸಣ್ಣ- ಪುಟ್ಟ ಸುಗ್ರೀವಾಜ್ಞೆ ಪಾಲಿಸುವ ಯುವ ಪಡೆ ಒಂದು ಕಡೆಯಾದರೆ, " ಕಾಫಿ ಬೇಕಾ? ಟೀ ಬೇಕಾ? ಶುಗರ್ ಇರಲಿಯಾ?/ ಬೇಡವಾ? ಗಳನ್ನು ಕೇಳಿಕೊಂಡು ಕೂತಲ್ಲೇ ಒದಗಿಸುತ್ತಿರುವ ಅಡುಗೆ ಯವರ ಸಹಾಯಕರ ರಂಗ ಪ್ರವೇಶ 
ಮಧ್ಯೆ ಮಧ್ಯೆ...ನಿರಂತರವಾಗಿ ಬರುತ್ತಿರುವ ಆಮಂತ್ರಿತರು ಯಾರ ಕಡೆಯವರು? ಮನೆ ಜನರ ಕಡೆಯಿಂದ ಮನೆಗೇ ಬಂದವರಾ, ಈಗ ಮಾತ್ರ ಕಾರ್ಯಕ್ರಮಕ್ಕೆ ಬಂದವರಾ? ತಿಳಿಯದೇ ಒಂದು ರೀತಿಯಲ್ಲಿ ಕಂಗಾಲಾದರೂ ದೇಶಾವರಿಯ ನಗೆ ನಕ್ಕು ಪರಿಸ್ಥಿತಿ ಸಂಭಾಳಿಸುವ ಹೊಣೆಗಾರಿಕೆ ಹೊತ್ತ ಸ್ವಾಗತಕಾರರ
ಪುಟ್ಟದೊಂದು ತಾಕಲಾಟ...ಏನೋ ಗಟ್ಟಿಯಾದದ್ದೊಂದು ಮಾಡಲಾಗದೇ/ ಹಾಗೇ ಸುಮ್ಮನೇ ಕೂಡಲೂ ಮುಜುಗರ ಪಡುವ ಕೆಲ ಸಹೃದಯ
ಮಧ್ಯವಯಸ್ಕರ ಗುರಿಯಿಲ್ಲದ ಅತ್ತಿಂದಿತ್ತ/ ಇತ್ತಿಂದತ್ತ ನಡೆದ ಪಥ ಸಂಚಲನ, ಸದ್ದು ಗದ್ದಲವಿಲ್ಲದೇ,ಒಂದು ಕಪ್ ಚಹವನ್ನೂ ಕುಡಿಯದೇ ದುಡಿಯಲೇ ಹುಟ್ಟಿದಂತಿದ್ದವರ 'ಪರೋಪಕಾರಾರ್ಥಂ ಇದಂ ಶರೀರಮ್'- ಗುಂಪು ಒಂದು ಕಡೆಯಾದರೆ, ಹಾಕಿದ ಶಾಮಿಯಾನಾ
ದಲ್ಲಿ,ಯಾರಿಗೂ ತೊಂದರೆಯಾಗದಂತೆ
ಸ್ಥಳಹುಡುಕಿಕೊಂಡು ' ಕರೆದಾಗ ಒಂದು ನಗೆಯೊಂದಿಗೆ ತಟ್ಟನೇ ಹಾಜರಾಗಿ ಹೇಳಿದ ಕೆಲಸ ಮುಗಿಸಿ ಮತ್ತೆ ಮರಳಿ ಸುಖಾಸೀನರಾಗುವ ' ನಿರುಪದ್ರವಿಗಳ'
ನಿರಾಳದ ತಂಡದ್ದು ಇನ್ನೊಂದು ದೃಶ್ಯ.
            ‌‌‌‌‌‌ಇಡೀ ವಾತಾವರಣವನ್ನೇ
ಒಂದು ಸೂತ್ರದಿಂದ ಬಂಧಿಸಿ ರಾಜ-ಮಹಾರಾಜರ ವಂದಿ ಮಾಗಧರ ಕಂಚಿನ ಕಂಠದಲ್ಲಿ ಮಂತ್ರೋಚ್ಚಾರಣೆ
ಮಾಡುತ್ತ ಸದಭಿರುಚಿಯ ಸಜ್ಜನರನ್ನು
ಮಂತ್ರಮುಗ್ಧರಾಗಿಸುವ ಪುರೋಹಿತ ತಂಡದವರ ಸಮ್ಮೋಹಿನಿಯದೇ ಒಂದು ಸೆಳೆತವಾದರೆ, ಕ್ಷಣಕ್ಕೊಂದು ಹೊಸ ಸೀರೆಯುಟ್ಟು ಗುಂಪುಗುಂಪಾಗಿ
ಹಾಡು- ಕುಣಿತ/ ಮೋಜು- ಮಸ್ತಿ mood ಗಳಲ್ಲಿ ,ಫೋಟೋ sessions ಮಾಡುತ್ತ  ವಯಸ್ಸಿನ ಭೇದವನ್ನೇ ಸಂಪೂರ್ಣ ಮರೆತುಬಿಟ್ಟು ಸಂಭ್ರಮಿಸುತ್ತಿದ್ದ ಹೂಮನಸ್ಸಿನವರ
ಪಡೆ ,ನಮ್ಮಂತೆ ಒಂದೆಡೆ ಕುಳಿತು  
ಆನಂದ ಪಡೆಯುತ್ತಿದ್ದ ಗುಂಪಿಗೆ ಚೇತೋಹಾರಿ...
         ‌‌‌  ಏನೂಂತ ಹೇಳುತ್ತ ಹೋಗುವದು? ಬಿಚ್ಚಿದಷ್ಟೂ ತೆರೆದು ಕೊಳ್ಳುವ  ಸಡಗರ ನೋಡಿದ ಮೇಲೆ ಕೊನೆಗೆ ನನಗನಿಸಿದ್ದು ' ಅಸಂಖ್ಯಾತ ಸಂದರ್ಭಗಳಿಗೆ ಧಾರ್ಮಿಕ ದಿರಿಸು ತೊಡಿಸಿ, ಯಾವುದೋ ಕಾರಣ ಕೊಟ್ಟು
ಜನರನ್ನು ಒಗ್ಗೂಡಿಸಿ, ದಿನದ ಆಗು ಹೋಗುಗಳನ್ನು ಒಂದು ದಿನವಾದರೂ ಮೈಮರೆಸುವಂತೆ ಮಾಡಿ,
 ಸಾರ್ವಜನಿಕ ಬದುಕನ್ನು ಹದಗೊಳಿಸಿದ  ಹರಕಾರರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ...




     ‌‌ ‌      ‌


Wednesday 7 December 2022

Chandrala Parameshwari temple details..



ನಮ್ಮ ಕುಲದೇವರು ಶ್ರೀ ಚಂದ್ರಲಾಂಬ ಪರಮೇಶ್ವರಿ ಸನ್ನತಿ.

Dear All... anyone is interested to visit Shri kshetra Chandrala parameshwari temple Sannati.

Small helpfull brief.

From Bangalore-There are plenty of trains which goes to Mumbai ( Udyan Express,KK Express,Nanded Express n many more.you can book either Yadgir or Nalwar.

Nalwar is 20 KMS...you will get rickshaw @ for Rs 300 to 400/- for 3 seats...buses are quite few..so don't wait for bus.

Once you reach sannati.. directly go to office n get room for Rs 400/- with hot water facility.

Bheema river also backside of Temple,you can take bath there also on river bank.

Can take receipt for any puja which you desire... suppose if you willing to do SARWA SEVA..it will cost you Rs 1500/-which includes KUMKUM archanne,Pallakki Seva,lunch for 4 people.

Breakfast can be ordered in small hotel,just in infront of temple,which is customiesd..like Upma,Garam Avalakki or Susla { No onion,No Garlic).

Do offer Saree & complete puja items to Amma & take blessings,they will also in return give you Saree of Devi as a prasada
Please carry as much as  possible flower of all variety,as that place don't get flower.

Pallakki Seva will be evening by 7pm...So ideally stay over night...Dinner will be served by 8.30 to 9pm.

Next day you can proceed as per your planned scheduled.

Contact Pradhan Archak-Pawankumar Archak-9515228300 (Every 15 days they change the archak Seva duty)

Hope this breif might help any devotees who wants to visit.

Thank you .
'Gruha Bhojana'pure veg
Girinagar, Bangalore-560085
Ph-9108609944
ಅತೀ ಪರಿಚಯಾತ್...ಅವಜ್ಞಾತ್...
( familiarity breeds the contempt...)
       ‌ ‌‌‌
       ಅತ್ಯಂತ ರುಚಿಯಾದ, ಸ್ವಾದಿಷ್ಟ ಊಟ ಯಾವುದು? ಎಂಬ ಪ್ರಶ್ನೆಗೆ, "- ಅತಿ ಹಸಿದು/ಕಾದು ಉಣ್ಣಲು ಎತ್ತಿಕೊಂಡ ಮೊದಲ ತುತ್ತು-"ಇದು... ಖಂಡಿತಕ್ಕೂ ಹೌದು.ಇಲ್ಲದಿದ್ದರೆ,  -ತುಂಬಿದ ಹೊಟ್ಟೆಗೆ ಹುಗ್ಗಿ ಮುಳ್ಳು- ಅಂದಂತಾಗುತ್ತದೆ. ಸುಲಭದಲ್ಲಿ ಸಿಕ್ಕರೆ, demand ಗಿಂತಲೂ supply ಹೆಚ್ಚಾದರೆ ಅಸಡ್ಡೆ ಆಗುವದು ಸಹಜ.ಯಾವುದಕ್ಕೂ ಮೊದಲೊಂದು
ಇಚ್ಛೆ ಇರಬೇಕು, ಸುಲಭವಾಗಿ ಸಿಗುವಂತಿರಬಾರದು,ಕಾಡಿ, ಕಾಡಿಸಿ
ಲಭ್ಯವಾಗಬೇಕು.ಆಗ ಸಿಗುವ ರಾಜ ಮರ್ಯಾದೆಯೇ ಬೇರೆ.
                ಕೆಲ ದಿನಗಳಿಂದ ಈ ಮಾತು ಪದೇಪದೇ ನೆನಪಾಗುತ್ತಿದೆ.
ಎಲ್ಲದರಲ್ಲೂ...ಅಷ್ಟೇ ಏಕೆ face book ವಿಷಯಕ್ಕೂ...
                
  ‌‌‌       ನಾನು fb ಗೆ ಬಂದು ಹನ್ನೆರಡು ವರ್ಷಗಳಾದವು.ಮೊದಲ smart phone ನ್ನು ಚೊಚ್ಚಿಲ ಮಗುವನ್ನು ಎತ್ತಿಕೊಂಡಷ್ಟೇ ಪ್ರೀತಿಯಿಂದ ಕೈಯಲ್ಲಿ ಹಿಡಿದಿದ್ದೆ. ಮಕ್ಕಳು/ ಮೊಮ್ಮಕ್ಕಳು/ ನೆರೆಹೊರೆ ಯವರು/ ನನ್ನ ಹಳೆಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಎಲ್ಲರ ನೆರವಿನಿಂದ ದಿನಕ್ಕೊಂದು ಹೊಸ ವಿದ್ಯೆ ಕಲಿತೆ. ಚುಟುಕು ಪದ್ಯ/ ಹೃಸ್ವಕತೆಗಳು/ ಹಿಂದಿ,ಇಂಗ್ಷಿಷ ಅನುವಾದಗಳು/ ಸ್ವಂತ ರಚನೆಗಳು ಅಂತ post ಹಾಕಿದ್ದೇ ಹಾಕಿದ್ದು. ಹಗಲು- ರಾತ್ರಿಯ ಪರಿವೆಯಿಲ್ಲದೇ ಅತಿ ಪ್ರೀತಿಯಲ್ಲಿ ಹುಚ್ಚಾದ ಪ್ರೇಮಿಗಳ ಕತೆಯಾಯ್ತು ಕೆಲ ದಿನಗಳ ವರೆಗೆ...
   ‌‌‌‌        
          Likes/ comments ಖುಶಿ ಕೊಡುತ್ತಿದ್ದವು.' ಬರಹ ಚನ್ನಾಗಿದೆ ಅಂದರೆ ಏನೋ ಅಮಲು. ನಿಮ್ಮನ್ನು
Follow ಮಾಡ್ತೀನಿ ಅಂದುಬಿಟ್ಟರಂತೂ
ಸ್ವರ್ಗಕ್ಕೆ ಮೂರೇ ಮೊಳ ಅನಿಸುತ್ತಿತ್ತು. ಹೊತ್ತೇರಿದಂತೆ ಮತ್ತೇರಿದ ಅನುಭವ.
ಹಾಲು ಉಕ್ಕುತ್ತಿತ್ತು, ಕುಕ್ಕರ್ ಸೀಟಿಯ ಮೇಲೆ ಸೀಟಿಗಳಾಗುತ್ತಿದ್ದವು. Calling bell ಸ್ವಲ್ಪು ಹೊತ್ತು ಧ್ವನಿಮಾಡಿ ತಂತಾನೇ ಬಂದಾಗುತ್ತಿತ್ತು. ಊಟಕ್ಕೆ    ಕರೆದರೆ  'ಹಸಿವೆ ಇರುತ್ತಿರಲಿಲ್ಲ'- ಹೀಗೇನೇನೋ ಹಳವಂಡಗಳು...
  ‌‌‌‌        
        ವರ್ಷಗಳು ಉರುಳಿದಂತೆ ಎಲ್ಲ ಆರಂಭಕ್ಕೂ ಒಂದು ಅಂತ್ಯವಿದೆ ಎಂದು ಅರಿವಾಗತೊಡಗಿತು. ಒಮ್ಮೆಲೇ
ನಿಲ್ಲದಿದ್ದರೂ ವೇಗ ಕುಂಠಿತವಾಯಿತು. 
ಆಭ್ಯಾಸ ಮರೆಯಬಾರದು ಎಂದು
Post ಹಾಕಿದರೂ ಅದರಲ್ಲಿ ಮೊದಲ ಉತ್ಸಾಹ ಕಾಣುತ್ತಿಲ್ಲ.ಕಣ್ಣಿನ ತೊಂದರೆ
ಅದಕ್ಕೆ ಸಾಥ್ ಕೊಡುತ್ತಿದೆ.

   ‌‌‌‌      ಈಗಲೂ ಬರೆಯುತ್ತಿದ್ದರೂ ಓದುವದೇ  ಹೆಚ್ಚುಚ್ಚು ಹಿತವೆನಿಸುತ್ತಿದೆ.
ಅದೂ ಹೆಚ್ಚು ಸಾಧ್ಯವಾಗುತ್ತಿಲ್ಲ ಎಂಬ ಕೊರಗೂ ಕಾಡುತ್ತಿದೆಯಾ?- ಗೊತ್ತಿಲ್ಲ.
ಅಥವಾ ' ಅದೇ ಹಸಿವಿಲ್ಲದಾಗಿನ ಊಟವಾ? ಅರ್ಥವಾಗುತ್ತಿಲ್ಲ...
   

     ‌
   ‌‌



Monday 5 December 2022

 ಇಷ್ಟು  ಸಾಕೇ ಸಾಕು...

ಬದುಕಿನಲಿ ಏನೇ ಬರಲಿ,
ಹೃದಯವೆಷ್ಟೇ ಭಾರವಾಗಿರಲಿ,
ಸುತ್ತೆಲ್ಲ ಬರಿ ಕತ್ತಲೆ ಕವಿದಿರಲಿ,
ಒಂದು ಗಳಿಗೆ ಸಹಿಸಿದರೆ ಸಾಕು...

ಜಗವೆಲ್ಲ ವಿರೋಧಿಸಲಿ,
ಜನವೆಲ್ಲ ಎದುರಾಗಲಿ,
ಜಗದೀಶನ ದಯೆಯಿದೆ
ಎಂಬ ಭಾವವೊಂದು  ನನ್ನೆದೆ ತಂಪಾಗಿಸಲು ಸಾಕು...

ಮನಸಿಗೆ ಅನಿಸಿದ್ದನ್ನು 
ನಾನು ನಂಬುವವರೆಗೂ...
ಅದು ಸುತ್ತ ಕವಿದ ಕತ್ತಲನ್ನು ಕರಗಿಸುವವರೆಗೂ
ನನ್ನ ನಂಬುಗೆ/ವಿಶ್ವಾಸಗಳು 
ನನಗೆ ಸಾಕು...

ಅರಿವೊಂದು ನನ್ನ 
ಕೈ ಹಿಡಿವವರೆಗೂ...
ದೇವರು ಇದಕ್ಕೂ
ಕೊನೆ ಹಾಡುವ ನಂಬುಗೆ  ಇರುವವರೆಗೂ...
ಜೀವನದ ಸವಾಲುಗಳನ್ನೆಲ್ಲ
ಎದುರಿಸುವ ಛಾತಿ ನನ್ನದಾಗಿರುವವರೆಗೂ...
ಬದುಕಿನ ಏನೊಂದೂ
ನನ್ನ ಕೂದಲು ಸಹ ಕೊಂಕಿಸಲಾರದೆಂಬ
ಭಾವವೊಂದೇ ಸಾಕು...

ಕತ್ತಲೆಯ ಕೂಪದಲ್ಲೇ ಇರಲಿ...
ನನಗೆ ಭಯ ಹುಟ್ಟಿಸುವ 
ಗಾಢ ಸಂಚೇ ನಡೆದಿರಲಿ...
ಪ್ರತಿರಾತ್ರಿಗೂ ಒಂದು
ಬೆಳಗಿದೆ ಎಂಬ ಅರಿವು
ನನಗೆ ಸಾಕು...
All is well and wisely put...        
   ‌‌  
        ಒಂದು ಸೆಂಟಿಪೆಡ್ - ಶತಪದಿ 
ತನ್ನಷ್ಟಕ್ಕೆ ತಾನೇ ತೆವಳುತ್ತಾ ಮುನ್ನಡೆಯುತ್ತಿತ್ತು. ಒಂದು ಕಪ್ಪೆ ಅದನ್ನು ನೋಡಿತು, ನೋಡುತ್ತಲೇ ಇತ್ತು.ಅದಕ್ಕೋ ಗೊಂದಲ. ಎರಡು / ನಾಲ್ಕು ಕಾಲುಗಳುಳ್ಳವರೇ ಎಡವಿ/ ತಡವರಿಸಿ/ ಮುಗ್ಗರಸಿ ಬೀಳುವದುಂಟು.ಈ ಶತಪದಿ ನೂರು ಕಾಲುಗಳನ್ನಿಟ್ಟುಕೊಂಡು ಅದು ಹೇಗೆ
Confusion ಆಗದೇ ನಡೆಯುತ್ತಿದೆ. ಎಷ್ಟು ನೋಡಿದರೂ ಸಮಸ್ಯೆ ಬಗೆಹರಿಯದಾದಾಗ ಅದು ಶತಪದಿಯ ಬಳಿಗೇನೇ ಹೋಗಿ ಕೇಳಿತು," ನೀನು ಅದು ಹೇಗೆ  ನಡೆಯುವಾಗ ನೂರು ಕಾಲುಗಳನ್ನು ಸಂಭಾಳಿಸುತ್ತೀಯಾ? ಯಾವುದನ್ನು ಯಾವಾಗ ಇಡಬೇಕು ಎಂದು ಅದ್ಹೇಗೆ ನಿರ್ಧರಿಸುತ್ತೀಯಾ?- ಎಂದು. ಶತಪದಿಗೆ ನಡೆಯುವದಷ್ಟೇ ಗೊತ್ತು. ಹೇಗೆ ಎಂದು ಅದೆಂದೂ ಯೋಚಿಸಿದ್ದೇ ಇಲ್ಲ.ಈಗ ಅದಕ್ಕೆ ಗೊಂದಲ. ಉತ್ತರ ಹೊಳೆಯಲಿಲ್ಲ. ತಾನೇ ಪರೀಕ್ಷಿಸತೊಡಗಿತು, ಈಗ ಯಾವ ಕಾಲಿಟ್ಟೆ, ಮುಂದಿನದು ಯಾವುದು? ಅದರ ಲಕ್ಷ್ಯ( ಗಮನ )ಹಳಿ ತಪ್ಪಿತು. ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಹೊಯ್ದಾಡಿ ಪಕ್ಕದ ಗುಂಡಿಯೊಳಗೆ ಬಿದ್ದೇ ಬಟ್ಟಿತು. 
              ‌
           ಇದು ನಮ್ಮದೂ ಕತೆ ಹೌದು.
ಯಾರೋ ಏನೋ  ತಮಗೆ ಬೇಕಾದದ್ದು
ತಮಗೆ ಬೇಕಾದ ವೇಗದಲ್ಲಿ/ರೀತಿಯಲ್ಲಿ
ತಮಗೆ ತಿಳಿದಂತೆ ಮಾಡುತ್ತಿರುತ್ತಾರೆ.
ಅದು ಚನ್ನಾಗಿಯೇ ನಡೆದಿರುತ್ತದೆ. ಅವರೂ ಅದರೊಂದಿಗೆ comfortable ಆಗಿಯೇ ಇರುತ್ತಾರೆ.
ಜಗತ್ತಿನಲ್ಲಿ ತನ್ನಷ್ಟಕ್ಕೆ ಎಲ್ಲವೂ 
ಹಗಲು/ ರಾತ್ರಿಯಂತೆ ತನ್ನ ಪಾಡಿಗೆ ನಡೆದಿರುತ್ತದೆ.ಆದರೆ ಅದನ್ನು ಸಹಿಸದ
ಕಪ್ಪೆಗಳಿಗೇನೂ ಬರವಿಲ್ಲ.ಸ್ವಭಾವ ದೋಷವೋ/ ಚಟವೋ/ ಸುಮ್ಮನೇ ಕೂಡಲಾಗದ್ದಕ್ಕೋ/ ಉದ್ದೇಶಪೂರ್ವಕವಾಗಿ ಮಾಡುವ ಕಿತಾಪತಿಯೋ/ ಅಥವಾ ಏನು ಮಾಡಿದರೆ ಪರಿಣಾಮ ಮುಂದೆ  ಏನಾಗಬಹುದು ತಿಳಿಯದ ಅಮಾಯಕತೆಯೋ/ ಉಂಡ ಅನ್ನ ಕರಗಲಾಗದ್ದಕ್ಕೋ/ ಬೇರೆ ಯಾವುದೇ ಕೆಲಸವಿಲ್ಲದ್ದಕ್ಕೋ ಅಂತೂ ಉಪದ್ವ್ಯಾಪ ಮಾಡಿ ಒಂದು ಕೊಕ್ಕೆ ಹಾಕಿಯೇ ಬಿಡುತ್ತಾರೆ. ಅದು ಕೆಲವರಿಗೆ
ನಿಭಾಯಿಸಿ ಗೊತ್ತಿದ್ದರೆ ಸರಿ. ಇಲ್ಲದಿದ್ದರೆ
ಮೊದಲೇ ಅನುಮಾನ/ ಆತ್ಮವಿಶ್ವಾಸ ದ ಕೊರತೆ/ ತಮ್ಮ ಬಗ್ಗೆ ತಮಗೇ  ಒಂದು ಗೊಂದಲವಿದ್ದು ಸ್ಪಷ್ಟತೆ ಇಲ್ಲದೇ ಇರುವವರಿಗೆ/ಬೇರೆಯವರ ಮಾತನ್ನು
ಎಷ್ಟು/ ಯಾವಾಗ/ ಪರಿಗಣಿಸಬೇಕು
ಎಂಬ ಅರಿವಿಲ್ಲದವರಿಗೆ ನೇರ ಗುರಿ ತಪ್ಪಿ, ವಿಚಲತೆಯಿಂದ /ಭ್ರಮೆಯಿಂದ
ದಾರಿ ತಪ್ಪಿದವರಾಗುತ್ತಾರೆ. ಪರಿಣಾಮ ವೆಂದೂ ಅಪೇಕ್ಷಿತವಾಗಿರುವದಿಲ್ಲ.
           ‌  
           ಇದರರ್ಥ ಒಂದು ಪ್ರಶ್ನೆ/ ಸಲಹೆ / ಮಾರ್ಗದರ್ಶನ ತಪ್ಪು ಎಂದಲ್ಲ. ಆದರೆ ಅದು ಅನವಶ್ಯಕ ಮೂಗು ತೂರಿಕೆಯಾಗದಂತೆ ಪುಟ್ಟದೊಂದು ಎಚ್ಚರಿಕೆ ಸದಾ ಇರಬೇಕು.ಆ ಇನ್ನೊಬ್ಬರಿಗೆ ಮಧ್ಯಪ್ರವೇಶ ಬೇಕಾ?ಬೇಕಿದ್ದರೆ ಯಾವಾಗ?ಅವರು ಅದನ್ನು
ಸ್ವೀಕರಿಸುವ ಮನಸ್ಥಿತಿ ಇದ್ದವರಾ? 
ಅದರ ಪರಿಣಾಮವೇನಾಗಬಹುದು?
ಇಂಥ ಚಿಕ್ಕ ಪುಟ್ಟ ಪ್ರಶ್ನೆಗಳನ್ನು ಸ್ವಂತಕ್ಕೆ ಒಮ್ಮೆ ಕೇಳಿಕೊಂಡು ಮುಂದುವರಿಯುವದು ಕ್ಷೇಮ...ಅಷ್ಟೇ...

 ‌‌    ‌ ‌‌‌    

Sunday 4 December 2022

   ‌‌‌    ಒಬ್ಬ ವ್ಯಕ್ತಿಯಿದ್ದ.ಅವನಿಗೆ ಮೈ ತುಂಬ ಬಟ್ಟೆ ಹಾಕ್ಕೊಂಡ್ರೆ ಏನೋ ಇರುಸು ಮುರಿಸು. ಹೀಗಾಗಿ ಎಲ್ಲೆ ಹೋದರೂ ಕನಿಷ್ಟತಮ ಬಟ್ಟೆಯಲ್ಲೇ ತಿರುಗುತ್ತಿದ್ದ. ಒಂದುಸಲ ಪರಿಚಯದ ವ್ಯಕ್ತಿಯೊಬ್ಬರು ," ಯಾಕಯ್ಯಾ, ಏನಿದು
ಅವತಾರ? ಹೊರಗಡೆಯಾದರೂ ಚಂದಾಗಿ dress ಮಾಡಿ ಅಡ್ಡಾಡಬಾರ್ದೇ"- ಅಂದರು.ಅವನು
ಹೇಳಿದ," ಎಂಥ ವಿಚಿತ್ರ ನೋಡಿ ಸಾರ್,
ನಾನೂ ನಿಮನ್ನು ಒಂದು ಪ್ರಶ್ನೆ  ಕೇಳ್ಬೇಕೂಂತಾನೇ ಇದ್ದೆ,ಅದೇಕೆ ಸಾರ್, ಸದಾ ಉಸಿರುಗಟ್ಟುವ ಹಾಗೇ ಮೈತುಂಬಾ ಬಟ್ಟೆ ಸುತ್ಗೋತೀರಾ? ಸ್ವಲ್ಪು ಸಡಿಲಾಗಿ ಎಷ್ಟು ಬೇಕು ಅಷ್ಟೇ
Dress ಮಾಡಿ ಹಾಯಾಗಿ ಉಸರಾಡ್ಕೊಂಡು ಇರ್ಬಾರ್ದಾ?"
ಎಂದು ಕೇಳಿದ...
              ‌ಯಾರದು ಸರಿ? ಯಾರದು
ತಪ್ಪು? ಅವರವರಿಗೆ ಅವರವರದೇ ಸರಿ. ಯಾಕೆಂದರೆ ಅವೆಲ್ಲ ವೈಯಕ್ತಿಕ
ನಿಲುವುಗಳು.ಆಚಾರ, ವಿಚಾರದಂತೆ
ಉಡುಪು ಸಹ ವ್ಯಕ್ತಿಗತ ವಿಷಯ. ನಮ್ಮ ಅಭಿಪ್ರಾಯ ಅಲ್ಲಿ ಅನಗತ್ಯ. ಹಾಗೆಯೇ ನಮ್ಮ ಅನಿಸಿಕೆಗಳು ನಮ್ಮವು.ಅವು ಇತರರಿಗೆ ಯಾವುದೇ ರೀತಿಯಲ್ಲಿ ಅಡ್ಡ ಪರಿಣಾಮವಾಗದಿದ್ರೆ  ಕೇಳುವ ಅವಶ್ಯಕತೆಯಿಲ್ಲ.
             " ಹೌದು, ಇದು ನನ್ನ ನಿಲುವು. ನಾನು ಅತಿ ಓದಿದವಳಲ್ಲ.ಯಾವುದೇ
'ಇಸಂ' ಗೆ ಸೇರಿದವಳಲ್ಲ.ಹೀಗೇ ಇರಬೇಕು ಎಂಬ ಹಟವಿಲ್ಲ. ಹೀಗೇ ಎಂದು ಹಟಹಿಡಿದು  ಸಾಧಿಸುವಷ್ಟು ಜ್ಞಾನ ಸಂಪಾದನೆಯೂ ನನ್ನದಲ್ಲ.ನನ್ನ
ಅರಿವಿಗೆ ಬಂದಷ್ಟು ಬರೆದುಕೊಂಡು, ತಿಳಿದಷ್ಟು ಅರಗಿಸಿಕೊಂಡು, ನನ್ನದೇ
ಒಂದು ಮಿತಿಯಲ್ಲಿ ಬದುಕುವದನ್ನು ಕಲಿತಿದ್ದೇನೆ.ಆದರೆ ನನ್ನ ಸ್ನೇಹಿತ ವರ್ಗ ತುಂಬ ವಿಶಾಲ ಹಾಗೂ ವೈವಿಧ್ಯಮಯ
ಎಲ್ಲನಮೂನೆಯ ಪ್ರತಿಭಾವಂತರಿದ್ದಾರೆ
ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಬೆಳೆದು ನಿಂತ ವರಿದ್ದಾರೆ.ಅದನ್ನು ಯಾವುದೇ  ಪೂರ್ವಾಗ್ರಹವಿಲ್ಲದೇ ಅನುಭವಿಸಿ
ಆನಂದಿಸುತ್ತೇನೆ.- ಎಂದೆಲ್ಲ ನನ್ನ ಮಟ್ಟಿಗೆ ನಾನು ಅಂದುಕೊಂಡದ್ದಿದೆ.
ಎಲ್ಲರನ್ನೂ ಮೀರಿದ ಅರಿವು ನನಗಿದೆ, ಪರವಾಗಿಲ್ಲ ಎಂಬುದೊಂದು ಸಣ್ಣ ಜಂಬವಿತ್ತಾ? ಗೊತ್ತಿಲ್ಲ.
      ‌‌‌         ತಿಳಿರು- ತೋರಣ ಮಾಲಿಕೆ ಯಲ್ಲಿ ಶ್ರೀವತ್ಸ ಜೋಶಿಯವರ ಇಂದಿನ ಕಂತು ಓದಿ, ಪ್ರತಿಕ್ರಿಯೆ ನೀಡಿ, ಆದಮೇಲೆ ಸಾಯಂಕಾಲ ಅವರದೇ ಒಂದು ಶತಾವಧಾನದ ಹಳೆಯ ವೀಡಿಯೋ ನೋಡಿ ಅದೇ ಗುಂಗಿನಲ್ಲಿದ್ದಾಗ ಜೋಶಿಯವರಿಗೆ ಧನ್ಯವಾದಗಳನ್ನು ಹೇಳಿದ ಶತಾವಧಾನಿ ಆರ್ ಗಣೇಶ್ ಅವರ ಧ್ವನಿಯ ಆಡಿಯೋ ಕೇಳಿದೆ.ನನ್ನ ಅಹಂ ನ ಬಲೂನಿಗೆ ಸೂಜಿ ಚುಚ್ಚಿದಂತಾಗಿ  ಚಪ್ಪಟೆಯಾದದ್ದು ಇನ್ನೂ ಸರಿಯಾಗಿಲ್ಲ...

       




Saturday 3 December 2022

ನಾನೂ ಧಾರವಾಡದಲ್ಲಿ ಅವರ ಅಷ್ಟಾವಧಾನ ಕಾರ್ಯಕ್ರಮಗಳನ್ನು ನೋಡಿದ್ದೇನೆ.ಒಂದಂತೂ ನಮ್ಮ school ನಲ್ಲೇ ಆಯೋಜಿತವಾಗಿತ್ತು. ಸಂಸ್ಕೃತದಲ್ಲಿ ನನಗೆ ಹೆಚ್ಚಿನ ಜ್ಞಾನ ವಿಲ್ಲದಿದ್ದರೂ ಯಾವುದೇ ಪದಗಳನ್ನು ಕ್ಷಣಾರ್ಧದಲ್ಲಿ ಹೊಂದಿಸಿ/ ಪೋಣಿಸಿ ಪದ್ಯ ರಚಿಸಿ ಹೇಳುವ ಅವರ ಜಾಣ್ಮೆಗೆ
ತೆರೆದ ಬಾಯಿ ಮುಚ್ಚದೇ ನೋಡುತ್ತಿದ್ದ ನೆನಪು.ಆ ಅಪ್ರಸ್ತುತ ಅಧಿಕ ಪ್ರಸಂಗಿಯ ತಲೆ- ಬುಡವಿಲ್ಲದ ಪ್ರಶ್ನೆಗಳಂತೂ ನಮ್ಮ ತಲೆಯನ್ನು ಗಿರಿಗಿರಿ ತಿರುಗಿಸಿಬಿಟ್ಟರೆ ಅವಧಾನಿಗಳು ಎಲ್ಲಿಂದಲೋ ಕೊಂಡಿ
ಸೃಷ್ಟಿಸಿ ಧಿಡೀರ್ ಉತ್ತರ ಕೊಡುತ್ತಿದ್ದರು
ರಘು ಅಪಾರವರ  ' ಚೌ- ಚೌಪದಿ- ಯಲ್ಲಿ ಎಲ್ಲಿಂದಲೋ ಹೆಕ್ಕಿ ತೆಗೆದ ನಾಲ್ಕು ಪದಗಳನ್ನು ಬಳಸಿ ಬರೆಯಬೇಕಾದ ಆಶು- ಕವನಗಳಿಗೆ 
ಇವರ ಅಷ್ಟಾವಧಾನ ನೋಡಿದ ಅನುಭವದ ಆಧಾರದ ಮೇಲೆಯೇ
 ಬರೆದ ಕವನಗಳನ್ನು ಅದೇ ಹೆಸರಿನಲ್ಲಿ
ಪ್ರಕಟಿಸಿದ್ದು ನನ್ನ ಮೊದಲ ಪ್ರಯತ್ನ...
ಇದೀಗ 'ಜ್ಞಾನ- ಗಣಿ'ಗಳು ಅರವತ್ತು ಸಂವತ್ಸರಗಳ ಒಂದು ಸುತ್ತು ಮುಗಿಸಿ
ಎರಡನೇ ಸುತ್ತು ಓಡಲು ಅಣಿಯಾಗಿದ್ದಾರೆ.ಅವರಿಗೆ ಆಯುರಾರೋಗ್ಯ/ ದೀರ್ಘಾಯುಷ್ಯ
ನೀಡಿ ವಿಶೇಷವಾಗಿ ಆಶೀರ್ವದಿಸಲು ಆ ದೇವರಲ್ಲಿ ಪ್ರಾರ್ಥನೆ...
            ನನಗೀಗ ಎಪ್ಪತ್ತೇಳು ವರ್ಷ. ನಡೆದು ಬಂದ ದಾರಿ ವೈವಿಧ್ಯಮಯ, ಹೊಸ ಹೊಸ ಪ್ರಯೋಗಗಳ ಹಂತ ಗಳನ್ನು ದಾಟಿ ಇಲ್ಲಿಯವರೆಗೆ ಬಂದದ್ದು. ಸೌದೆಯಿಂದ ಸೋಲಾರ್ ವರೆಗೆ, ಬಯಲು ಶೌಚದಿಂದ ಕಮೋಡ ವರೆಗೆ, ಸಾಲೆ ಗುಡಿಯಿಂದ ವಿಶ್ವವಿದ್ಯಾ ಲಯದ ವರೆಗೆ, ರಟ್ಟೀಹಳ್ಳಿಯಿಂದ 
ಒಂಬತ್ತು ದೇಶಗಳ‌ ಪರ್ಯಟನದ ವರೆಗೆ, ಕಚ್ಚೆ ಸೀರೆಯಿಂದ ಚೂಡಿ
ದಾರದ ವರೆಗೆ... List goes endless.
  ‌‌            ಆದರೆ ಈ ಬದುಕು ಎಲ್ಲರಿಗೂ ಏನನ್ನೋ ಕೊಡುತ್ತದಾದರೂ ಏನೋ ಒಂದನ್ನು ಕಸಿದುಕೊಂಡೇ ಕೊಡುತ್ತದೆ. ಹಣವಿದ್ದ ರೆ ಗುಣವಿಲ್ಲ.ಪ್ರತಿಭೆ ಇದ್ದರೆ ಬಡತನ, ಎರಡೂ ಇದ್ದರೆ ಆರೋಗ್ಯ ಸಮಸ್ಯೆ. ಎಲ್ಲ ನೆಟ್ಟಗಿದೆಯೋ ಮಕ್ಕಳು ಇಲ್ಲ ವೆಂಬ ಚಿಂತೆ. ಅಷ್ಟೇ ಆದರೆ  ಒಂದೇ ಸಮಸ್ಯೆ, ಇದ್ದರೆ ನೂರಾರು...ಹೀಗೇ...
  ‌‌‌‌           ಬಹುತೇಕ ಬದುಕಿಗಿರುವಷ್ಟು
ಉಪಮಾನ/ ಉಪಮೇಯಗಳು ಬೇರೆಯದಕ್ಕೆ ಇಲ್ಲವೇನೋ.  ಅದೊಂದು ಒಗಟು (ಪಹೇಲಿ) ಅನ್ನುವದರಿಂದ ಹಿಡಿದು ಬದುಕೊಂದು ಸಂಗ್ರಾಮ ಅನ್ನುವದರ ನಡುವೆ ನೀವು ಏನನ್ನೇ ಸೇರಿಸಿ, ಹೀರಿಕೊಳ್ಳುತ್ತದೆ, ಅಷ್ಟು ದೊಡ್ಡ ಒಡಲು ಅದಕ್ಕೆ...
                ‌  
     ‌‌        ಬಾಲ್ಯಕ್ಕೆ ಮುಗ್ಧತೆಯಿದೆ,
ಸಮಯವಿದೆ,ನಿಷ್ಕಲ್ಮಷ ಪ್ರೀತಿಯಿದೆ-ಜೊತೆಗೆ ಅಭ್ಯಾಸದ ಒತ್ತಡ, ಅನಾರೋಗ್ಯಕರ ಪೈಪೋಟಿ, ಮೊಬೈಲ್/ ಕಂಪ್ಯೂಟರ್ ಗಳ ಅಪರಿಮಿತ ಸೆಳೆತವಿದೆ... ಯೌವನಕ್ಕೆ ಶಕ್ತಿಯಿದೆ,ಕನಸಿನ ಹಾದಿಗಳಿವೆ, ವೇಗದ ಬದುಕಿನ ಒತ್ತಡವೂ ಇದೆ. ಹೀಗಾಗಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಬಹಳವಿದೆ. ಮುಪ್ಪಿಗೆ ವಿಶ್ರಾಂತಿಯಿದೆ, ಮಕ್ಕಳ ಭಾಗ್ಯವಿದೆ,ಆದರೆ ನೆಮ್ಮದಿಯ
ಖಚಿತತೆ ಕಡಿಮೆ...
              ಇಷ್ಟೆಲ್ಲ ಪುರಾಣಕ್ಕೂ ಒಂದು ಹಿನ್ನೆಲೆಯಿದೆ.ಬೆಳಿಗ್ಗೆ ಸೋನೂ ವೇಣುಗೋಪಾಲ ಅವಳ ವೀಡಿಯೋ ಒಂದು ನೋಡಿದೆ.
        
        " ಬದುಕು ರಾಜಾಜಿನಗರವಿದ್ದಂತೆ" - ಒಂದು ಬದಿ 'ನವರಂಗ'- ಇನ್ನೊಂದು ಬದಿ ' ಹರಿಶ್ಚಂದ್ರ ಘಾಟ್ '- ಅಂದಳು.
ಹಸಿಗೋಡೆಗೆ ಹರಳು ಒಗೆದಂತೆ ನೆಟ್ಟಿತು.ಅದರ ಬಗ್ಗೆಯೇ ವಿಚಾರ ಲಹರಿ ಹರಿದಾಗ ಹೊರಬಂದ ಹೂರಣವಿಷ್ಟು...




      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...