Thursday 29 July 2021

ನಿನ್ನ ಕೈಲಿಹ ಫೋನು...(ಕವನ).

ನಿನ್ನ ಕೈಲಿಹ ಫೋನು 
ಎಲ್ಲೊ ಮುಚ್ಚಿಟ್ಟು ಬಿಡು
ಮರೆತು ಹೋಗಲಿ ಒಂದು ವಾರದಲ್ಲಿ;
ಮರೆಯಾದ ಫೋನದುವೆ 
ತುಸುವೇ ನೆಮ್ಮದಿ ನೀಡೆ;
ಧನ್ಯವಾಯಿತು ಮೋಹ ಅರಿವಿನಲ್ಲಿ.

ನಿನ್ನ ಕೈಲಿಹ ಫೋನು, 
ಬಳಸದೆಯೆ ಇದ್ದುಬಿಡು
ಕಳೆದು ಹೋಗಲಿ ಕಾಲ ನಿನ್ನಿಚ್ಛೆಯಂತೆ;
ಮರೆಗೆ ಸರಿದಿಹ  ಭಾವ 
ಮತ್ತೆ ತುಂಬಲಿ ಜೀವ,
ಶಾಂತವಾಗಲಿ ಮನಸು ಮುನ್ನಿನಂತೆ...

ನಿನ್ನ ಕೈಲಿಹ ಫೋನು, 
ನಿನ್ನದೆಂದೆನಬೇಡ,
ದಾನದಲಿ ಕೊಟ್ಟುಬಿಡು ಮನಸು ಮಾಡಿ;
ಮರೆತ ಹವ್ಯಾಸಗಳು
ಮರುಜೀವ ಪಡೆಯಲಿ,
ಬುದ್ಧಿಮಾಗಲಿ ಕೊಂಚ ಅರಿವುಮೂಡಿ...

ಸ್ವಲ್ಪ ಹೊತ್ತಾದರೂ 
ಮನಸು ಕೇಳಲಿ ಮಾತು;
ಹಿಡಿತವನೆ ಬಿಡುವದು ಸೂಕ್ತವಲ್ಲ;
ಒಮ್ಮೆ ಸೂತ್ರವು ಹರಿದ
ಗಾಳಿಪಟವನೆ ನೋಡು;
ಬದುಕೆ ಬಲಿಕೊಡುವದು ಯುಕ್ತವಲ್ಲ...

Friday 16 July 2021

ಹಮ್ ಹೋಂಗೆ ಕಾಮಯಾಬ್...



              ಈ ಬದುಕೂ ತುಂಬಾ ವಿಚಿತ್ರ. ಎಷ್ಟೋ ಸಲ ಕಾರಣವಿಲ್ಲದೇ ಎಲ್ಲವೂ ಮುಗಿದು ಹೋಯಿತೇನೋ ಎಂಬ ಭಾವ ಕಾಡುತ್ತದೆ. ಯಾವುದರಲ್ಲಿಯೂ ಆಸಕ್ತಿ ಉತ್ಸಾಹ ಉಳಿಯುವದಿಲ್ಲ. ಆಗ ಸಂಪೂರ್ಣ ಕುಗ್ಗಿಹೋಗುತ್ತೇವೆ. ಇದು ಎಂಥವರನ್ನೂ ಬಿಟ್ಟಿಲ್ಲ. ಅರ್ಜುನನನ್ನು ಕೂಡ...
               ಒಮ್ಮೊಮ್ಮೆ ನಾವು ಕಾರಣವಿಲ್ಲದೇ ಸೋತು ಕೈಯೆತ್ತಿ ಬಿಡುತ್ತೇವೆ. ಶರಣಾಗುತ್ತೇವೆ. ಶಸ್ರಾಸ್ತ್ರ ಚಲ್ಲಿಬಿಡುತ್ತೇವೆ. ಹೋರಾಟಕ್ಕೆ ವಿಮುಖರಾಗುತ್ತೇವೆ. ಏನೂ  ಮಾಡಲೂ ಉತ್ಸಾಹ ಬರುವದೇ ಇಲ್ಲ. ಕೆಲಸಗಳನ್ನು ತಪ್ಪಿಸಿಕೊಳ್ಳುವದು, ಕಾರಣವಿಲ್ಲದೇ ಮುಂದೂಡುವದು ಅನಿವಾರ್ಯ ಅಭ್ಯಾಸವಾಗಿಬಿಡುತ್ತದೆ.

          ಆದರೆ ನೆನಪಿರಲಿ. ಇದೇ ಕೊನೆಯಲ್ಲ. ಕಾರ್ಯಮಧ್ಯದ ಚಿಕ್ಕಚಿಕ್ಕ ವಿಶ್ರಾಂತಿಗಳು ಗುರಿಗಳನ್ನು ಹೆಚ್ಚು ಗಟ್ಟಿಗೊಳಿಸುತ್ತವೆ.  ಮುಂದಿನ ಹಾದಿಯನ್ನು ಸುಗಮಗೊಳಿಸುತ್ತವೆ. ಹೆಚ್ಚು ಉತ್ಸಾಹ ತುಂಬಿಸಿ ಹೋರಾಟಕ್ಕೆ ಸನ್ನದ್ಧಗೊಳಿಸುತ್ತವೆ. ಕಾರಣ ಯಾವುದಾದರೂ ಕಾರಣಕ್ಕೆ ಜೀವನದಲ್ಲಿ 'ಖಾಲಿತನ ಕಾಡಿದರೆ ಖೇದಗೊಳ್ಳಬೇಕಿಲ್ಲ, ಹತಾಶರಾಗಬೇಕಿಲ್ಲ. ಖಾಲಿತನಕ್ಕೂ ತನ್ನದೇ ಆದ ತೂಕವಿದೆ...ಅದು ಅರ್ಥಪೂರ್ಣವೂ ಆಗಿದೆ...

      ಅಂತೆಯೇ ಬದುಕಿಗೊಂದು ಬಿನ್ನಹವಿರಲಿ...ಅದು ತನ್ನ ಕಷ್ಟ ನಷ್ಟ, ಅವಶ್ಯಕತೆಗಳನ್ನು ತಾನೇ ಸರಿದೂಗಿಸುತ್ತ ನಿರಂತರ ಚಲನೆಯಲ್ಲಿರಲಿ...ಅದು ಬತ್ತಲಾರದಂತೆ ಚಂದಗೊಳಿಸುತ್ತಲೇ ಇರೋಣ...ಖಾಲಿ ಅನಿಸಿದರೆ ತುಂಬೋಣ...

                ಇದರಲ್ಲಿ ಏನೂ ತಪ್ಪಿಲ್ಲ . ಹಿಮ್ಮೆಟ್ಟುವದು ಹೇಡಿತನವೇನೂ ಅಲ್ಲ.
ದಣಿವಿನ ಅರ್ಥ ಸಂಪೂರ್ಣ ಬಿಟ್ಟು ಕೊಡುವದಲ್ಲ...ಅದು ಮನಸ್ಸು ಕ್ಷಣಕಾಲ  ಅಸ್ಥಿರವಾಗಿದ್ದರ  ನಿಮಿತ್ತವಾಗಿರಲೂ ಬಹುದು. ಒಂದು ದೊಡ್ಡ ಜಿಗಿತಕ್ಕೆ ಮೊದಲಿಗೆ ಹಾಕುವ ಒಂದೆರಡು ಅವಶ್ಯಕ ಹೆಜ್ಜೆಗಳಿರಬಹುದು.

                ‌ಅಂತೆಯೇ ಬದುಕಿನ ಚಿಕ್ಕ ಪುಟ್ಟ ಅಡ್ಡಿಗಳು ನಮಗೆ ಮುಂದಿನ ಜಿಗಿತಕ್ಕೆ ' ಚಿಮ್ಮು ಹಲಿಗೆ'ಗಳಾಗಲಿ. 

Thursday 15 July 2021

ಒಂದು ಅಲ್ಬಮ್ ಕಥೆ...

 ಕಳೆದ ಮೇ ತಿಂಗಳಲ್ಲಿ ನನ್ನ ಎರಡನೇ ಮಗಳ ಮದುವೆಯ ಇಪ್ಪತ್ತೊಂದನೆಯ
ವಾರ್ಷಿಕೋತ್ಸವವಿತ್ತು. ಲಾಕ್ ಡೌನ್ ಇದ್ದ ಕಾರಣ ಹೊರಗೆ ಹೋಗುವ ಮಾತೇ ಇರಲಿಲ್ಲ. ಮನೆಯಲ್ಲಿಯೇ ಏನೋ ಕೆಲ ಕಾರ್ಯಕ್ರಮಗಳು plan ಆಗಿತ್ತು.ನಾನು ಅವರ ಮದುವೆಯ ಅಲ್ಬಮ್ ನೋಡಲೆಂದು  ಹೊರಗಿಟ್ಟಿದ್ದೆ. ಇಪ್ಪತ್ತು ವರ್ಷಗಳಲ್ಲಿ  ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ನೋಡುವದು ನನ್ನ ಉದ್ದೇಶವಾಗಿತ್ತು. ಅದನ್ನು ಸಾಕಷ್ಟು ಮಜಾ ತೆಗೆದುಕೊಂಡು ನೆನಪುಗಳನ್ನು ಮರಳಿ ಮರಳಿ ಹಸಿರಾಗಿಸಿಕೊಂಡದ್ದಾಯಿತು. ಅಲ್ಬಮ್ ತುಂಬಾ ದೊಡ್ಡದಿದ್ದು ಒಂದೇ ಸಲ ನೋಡಲಾಗುವುದಿಲ್ಲ ಎಂಬ ಕಾರಣಕ್ಕೆ
ತೆಗೆದಿಟ್ಟಿರಲಿಲ್ಲ. ಇಂದು ಮತ್ತೊಮ್ಮೆ ಆರಾಮಾಗಿ ನೋಡಲು  ಕುಳಿತರೆ  ಆದದ್ದೇ ಬೇರೆ. ಆ ದಿನ ನಮ್ಮೆಲ್ಲರ ಗಮನ ಮದುಮಕ್ಕಳ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿಯೇ  ಸೀಮಿತ ವಾದ್ದರಿಂದಲೋ ಏನೋ ಬರಿ ಸಂತಸದ ಗಳಿಗೆಗಳನ್ನು ಕೇಂದ್ರೀಕರಿಸಿ ಫೋಟೋ ನೋಡಿರಬಹುದು ನಾವು.
ಇಂದು ತೆಗೆದರೆ ಢಾಳಾಗಿ ಈ ಇಪ್ಪತ್ತು ವರ್ಷಗಳಲ್ಲಿ ನಮ್ಮನ್ನು ಬಿಟ್ಟು ಹೋದವರು ಎದ್ದು ಕಾಣುತ್ತಿದ್ದರು.
ಬಡತನವಿದ್ದರೂ ಸ್ವಾಭಿಮಾನ ಧನನಾದ ಅಪ್ಪ /ಕೈಯಲ್ಲಿ ಏನೂ ನೀಗದಿದ್ದರೂ
 ' ಅವ್ವಾ' ಎಂದು ಕರೆದಾಗ ಹಾಜರಾಗುತ್ತಿದ್ದ ಅವ್ವ,/ ಅವ್ವನ ಚಿಕ್ಕ ಅನುಪಸ್ಥಿತಿಯಲ್ಲಿ ಅವಳ ಕೊರತೆ ಒಂದಿಷ್ಟೂ ಆಗದಂತೆ ನೋಡಿಕೊಂಡ ಚಿಕ್ಕಮ್ಮ/ ಚಿಕ್ಕಪ್ಪಂದಿರು,  ಆಪತ್ಕಾಲದಲ್ಲಿ ಸದಾ ಸಾಥ್ ನೀಡುತ್ತಿದ್ದ ಬಂಧುಗಳು ಎಲ್ಲ ಸೇರಿ ಸಂಖ್ಯೆ ಹತ್ತಿರ ಹತ್ತಿರ
ಇಪ್ಪತ್ತೈದು ಮೀರಿದಾಗ ಒಂದು ರೀತಿಯ
ಸಂಕಟ ಶುರುವಾಯಿತು. ಸಮಾರಂಭಗಳಲ್ಲಿ  ಅವರೆಲ್ಲರ ಸ್ವ ಪ್ರೇರಣೆಯಿಂದ ಭಾಗವಹಿಸುವಿಕೆ/ ಮುಂದಾಳತ್ವ/ ಅಮೂಲ್ಯವಾದ  ಸಲಹೆಗಳು/ ಹಿರಿತನ ಎಲ್ಲ ಕಣ್ಣುಮುಂದೆಯೇ ಸಧ್ಯ ನಡೆದ ಸಿನೆಮಾ ರೀತಿಯಲ್ಲಿ ತೆರೆದು ಕೊಂಡಿತು. ಮದುಮಕ್ಕಳ ಉಪಸ್ಥಿತಿ, ಸಂತಸ, ಹುರುಪು ಸಂಪೂರ್ಣವಾಗಿ ಗಮನ ಕಳೆದುಕೊಂಡು ಯಾವಾವುದೋ ಕಾರಣಗಳಿಗೆ ನಮ್ಮಿಂದ
ಶಾಶ್ವತವಾಗಿ ದೂರವಾಗಿ ಹೋದವರ
ಗುಂಗಿನಲ್ಲಿ ಮನಸ್ಸು ಖಿನ್ನವಾಗತೊಡಗಿತು. ಸುಮಾರು ವರ್ಷವೊಂದು ಮಿಕ್ಕಿ ಸಾವಿನ ಸುದ್ದಿಗಳನ್ನು ಕೇಳುತ್ತಲೇ ಕಳೆಯುತ್ತಿರುವ ಇಂದಿನ ದಿನಗಳಿಗೆ ಮನಸ್ಸು ಮರಳಿತು.
ಕುಟುಂಬ ಸದಸ್ಯರು/ಬಂಧುಗಳು/  ಸ್ನೇಹಿತರು/ ನೆರೆಹೊರೆಯವರು/ ಪರಿಚಯಸ್ಥರು/ ಸಹೋದ್ಯೋಗಿಗಳು/
ಯಾರೆಲ್ಲ ನಮ್ಮನ್ನು ಅಗಲಿದ್ದರೋ ಅವರೆಲ್ಲರ ನೆನಪುಗಳು/ ಒಡನಾಟ ಗಳು/ ಘಟನೆಗಳು/ ಮಾತುಗಳು 
ಮನಸ್ಸನ್ನು ಗಾಸಿಗೊಳಿಸಿ ಹಣ್ಣಾಗಿಸಿದವು. ಮದುವೆಗಳು ಸಾವಿರ ಬರುತ್ತವೆ, ಹೆಚ್ಚು ಹೆಚ್ಚು ಸಂಭ್ರಮದಿಂದ
ಆಚರಿಸಲ್ಪಡುತ್ತವೆ, ವಿಜ್ರಂಭಣೆಯೂ ಹತ್ತಾರು ಪಟ್ಟು ಹೆಚ್ಚೂ ಇರಬಹುದೇನೊ!!! ಆದರೆ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ, ತಮ್ಮ ಹೊಣೆಗಾರಿಕೆಯನ್ನು ಹೊರಲೇಬೇಕಾದ 
ಅನಿವಾರ್ಯತೆಯಿಂದಾಗಿ ಕುಟುಂಬದ ಸದಸ್ಯರು ನಿರಾಳವಾಗಿ ಒಂದುಕಡೆ ಹೆಚ್ಚಾಗಿ ಸೇರಲು ಸಮಯದ ಅಭಾವವೂ ಒಂದು ಕಾರಣವಾಗಿದೆ. ಉಪಾಯವಿಲ್ಲದೇ ಸಮಾರಂಭಗಳು Event management ದವರ ಪಾಲಾಗಿ ಆಗಿನ ಮುಕ್ತ ವಾತಾವರಣ ಇಂದಿನ ದಿನಗಳಲ್ಲಿ ಒಂದು ಕನಸು. ಯಾವುದನ್ನೂ ಪ್ರತಿಪಾದಿಸುವದಾಗಲೀ/ ವಿರೋಧಿಸುವದಾಗಲೀ ನನ್ನ ಉದ್ದೇಶ ವಲ್ಲ. ಒಂದೊಂದು ಕಾಲಘಟ್ಟದ ದಿನಗಳು ಸರಿದಂತೆ ಆಗುವ ಬದಲಾವಣೆಗಳನ್ನು ನನ್ನ ನೋಟವಷ್ಟೇ..

  




Saturday 10 July 2021

ತುಣುಕು- ಮಿಣುಕು..


    
       ‌‌‌‌‌‌       "  ಇತ್ತೀಚೆಗೆ ಮನೆಯಲ್ಲಿ ಅಡುಗೆ ಮಾಡುವದು ತುಂಬಾ ಕಡಿಮೆಯಾಗಿದೆ. ಹೆಣ್ಣುಮಕ್ಕಳೂ ಸಹ ದುಡಿಯುತ್ತಿರುವದರಿಂದ 
ಹೊರಗಿನ ಊಟವೇ ಪ್ರಧಾನವೆನಿಸುತ್ತಿದೆ. ನಮ್ಮ ಹಿರಿಯರಿಗೆ ಹೊರ ಊಟದ concept ಇರಲೇಇಲ್ಲ. ಅಡುಗೆ ಮಾಡುವದೂ ಒಂದು ಕಲೆ...
ಅದೊಂದು ಪೂಜೆ, ಧ್ಯಾನ. ಅದಕ್ಕೇ ಅದಕ್ಕೆ ' ಪ್ರಸಾದವೆಂಬ ಹೆಸರೂ ಇದೆ...ಅದನ್ನರಿತು ಮಾಡುವ ಅಡುಗೆ ಉಣ್ಣುವವರಿಗೆ ಸಾತ್ವಿಕ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ." 

ಬ್ರಹ್ಮ ಕುಮಾರಿ  ಶಿವಾನಿಯವರ ಮಾತು ಹಾಗೆಯೇ ಸಾಗಿತ್ತು..

ಅವರ ಮಾತುಗಳು ಮುಗಿದರೂ ಅವರೆತ್ತಿದ ವಿಷಯದ ಗುಂಗು ನನ್ನನ್ನು ಬಿಡಲೇಯಿಲ್ಲ...ಅದೇ ಧಾಟಿಯಲ್ಲಿ ಸಾಗಿದಾಗ ನನಗೆ ಅನಿಸಿದ್ದಿಷ್ಟು...

ಈಗ ಎಲ್ಲರ ಮನೆಯಲ್ಲೂ ಅಡುಗೆ ಮಾಡುವವರೇ ಇರುವದು ಜಾಸ್ತಿ...ಹಣಕ್ಕೆ ಬೇಯಿಸಿಟ್ಟು ಹೋದದ್ದರಲ್ಲಿ ಮನೆಯಡಿಗೆಯ ಆರೋಗ್ಯ, ಪ್ರೀತಿ, ಉಳಿತಾಯ, ರುಚಿ, ಸ್ವಚ್ಛತೆ  ಎಲ್ಲವೂ ಕಡಿಮೆ...
ವಿಶೇಷ ಸಂದರ್ಭಗಳಲ್ಲಿ ಅಡಿಗೆ ಮಾಡಿಸುವದು ಖಂಡಿತ ಅಡ್ಡಿಯಿಲ್ಲ. ಸಮಯಾಭಾವದ ನೆವವೊಡ್ಡಿ ದಿನಾಲೂ ಹೊರಗೆ ಊಟಮಾಡುವದು ಅಥವಾ ಯಾರೋ,  ಯಾವಾಗಲೋ ಬೇಯಿಸಿಟ್ಟದ್ದು ದಿನಾಲೂ ತಿನ್ನುವದೆಂದರೆ ಅಪಾಯ ಆಹ್ವಾನಿಸಿ ಕೊಂಡಂತೆ... ಈಗಿರುವ ಪರಿಸ್ಥಿತಿ ನೋಡಿದರೆ _ kitchenless homes ಬರಬಹುದು...ಮಕ್ಕಳಿಗೆ ಅಡಿಗೆ ಏನೋ ನಮ್ಮದಲ್ಲದ ಪರಕೀಯ ವ್ಯವಸ್ಥೆ ಎನಿಸುವ ದಿನಗಳು  ದೂರವಿಲ್ಲ...
ನಾನು ಅಮೆರಿಕೆಯ Boston ದಲ್ಲಿ  ಊಟಕ್ಕೆ ಹೋದ ಹೋಟೆಲ್ ಹೆಸರು clay oven...( ಮಣ್ಣಿನ ಒಲೆ) ನೈಜವಾಗಿ ಕಳೆದುಕೊಂಡದ್ದನ್ನು ಹೆಸರಿನಲ್ಲಿ ಹುಡುಕುವ ಹವಣಿಕೆ. " ಮನಪಸಂದ್'' 'ರಸೋಯಿ'  'ರಂಗೋಲಿ' 'ಹಳ್ಳಿಮನೆ'
ಇಂಥ ಭಾವನಾತ್ಮಕ ಹೆಸರಿನಡಿಯಲ್ಲಿ ' ನಮ್ಮತನ' ದ ಹುಡುಕಾಟ... 'ಬಾಲವಿಹಾರಕ್ಕೆ' ಎಂದೋ ಕಳೆದುಕೊಂಡ 'ಅಜ್ಜಿಮನೆ' ಅಂದು ಕೊಂಡು  ಖುಶಿಪಟ್ಟಂತೆ...
               ಯಾವುದೂ  ತಪ್ಪಲ್ಲ...
ಅನಿವಾರ್ಯವೆಂದಾದಲ್ಲಿ ಕೆಲಮಟ್ಟಿಗೆ ಅಪೇಕ್ಷಣೀಯವೂ ಹೌದು. ಅಷ್ಟೇ ಏಕೆ? ಕೆಲವೊಂದು  ಪರ್ಯಾಯ ವ್ಯವಸ್ಥೆಗಳು( ಬೆಂಗಳೂರಿನ ' ಅಜ್ಜೀ ಮನೆ) ಅಸಲನ್ನು ಮೀರಿಸಿ ಉತ್ತಮವಾಗಿರಲೂ ಬಹುದು
...ಹಾಗೆಂದು ಮೂಲ ವ್ಯವಸ್ಥೆ ಮರೆತು ಅದಕ್ಕೇ ಅಂಟಿಕೊಳ್ಳುವದು ಅವಶ್ಯಕವೂ ಇರುವದಿಲ್ಲ,
ಅನಿವಾರ್ಯವೂ ಇರುವದಿಲ್ಲ ...ಅತಿಯಾದರೆ ಅಮೃತವೂ ವಿಷವಂತೆ ..ಹಾಗಾಗದೆ ನಡುವಿನ golden mid point ನ ಆಯ್ಕೆ ಮಾಡುವದು ಪರ್ಯಾಯವೆನಿಸಬಹುದು...

      ‌‌     ಹಾಗೇ fb ತಿರುವಿಹಾಕುವಾಗ ಸಾಧ್ವಿ  ಶಿವಾನಿಯವರ ಭಾಷಣ ಕೇಳಿದಾಗ ತಲೆಯಲ್ಲಿ ಹಾದುಹೋದ ವಿಚಾರಗಳಿವು..ನನ್ನವು..ಕೇವಲ ನನ್ನ ದೃಷ್ಟಿಯಿಂದ...

Tuesday 29 June 2021

BUY ONE...GET ONE FREE...

"ಒಂದು ಕೊಂಡರೆ ಇನ್ನೊಂದು ಉಚಿತ..."
Buy one... Get one free...
ಇದೊಂದು ಇತ್ತೀಚಿನ  ವ್ಯಾಪಾರ ತಂತ್ರ ಎಂಬುದು ಎಲ್ಲರಿಗೂ ಗೊತ್ತು. 

ಆದರೆ ನಿಜ ಜೀವನದಲ್ಲೂ ಇದು ಸುಳ್ಳಲ್ಲ. ಅನೇಕ ರೀತಿಯಲ್ಲಿ 'ಇದೇ ಸರಿ' 
ಎಂದು ಸಾಬೀತು ಆಗಿದೆ.

ಬೇಕಾದರೆ ಪರೀಕ್ಷಿಸಿ,

'ಸಿಟ್ಟು' ಮಾಡಿ 'ಕೊಳ್ಳಿ'  
acidity free.

ಹೊಟ್ಟೆಕಿಚ್ಚು ಪಟ್ಟು'ಕೊಳ್ಳಿ' :
ತಲೆಶೂಲೆ free.

ಇತರರ ಬಗ್ಗೆ, ತಿರಸ್ಕಾರ ಪಟ್ಟು'ಕೊಳ್ಳಿ,
ಅಲ್ಸರ್ free.

ಮಾನಸಿಕ ಒತ್ತಡ ದೊಂದಿಗೆ,
blood pressure free.

ಹಾಗೆಂದು ಗಾಬರಿಯಾಗಬೇಕಿಲ್ಲ.
ಇದರ ಇನ್ನೊಂದು ಮಗ್ಗಲೂ ಕೂಡ ಇದೆ.

It's about better buy:

ನಂಬಿಕೆ 'ಕೊಳ್ಳಿ',
ಗೆಳೆತನ free.

ವ್ಯಾಯಮದೊಂದಿಗೆ
ಆರೋಗ್ಯ free.

ಮಾನಸಿಕ ನೆಮ್ಮದಿ ಕೊಳ್ಳಿ, 
ಸಮೃದ್ಧಿ (prosperity) free.

ಪ್ರಾಮಾಣಿಕತೆ ಕೊಳ್ಳಿ, 
ಸುಖ ನಿದ್ರೆ free.

ಪ್ರೀತಿಯನ್ನು ಕೊಳ್ಳಿ,
ಬಯಸಿದ್ದೆಲ್ಲ free.

ಕಾರಣ ಸರಿಯಾದ ಜ್ಞಾನದಿಂದ ಸರಿಯಾದದ್ದನ್ನೇ  ಕೊಂಡು 
ಆರೋಗ್ಯ/ ನೆಮ್ಮದಿ (ಆನೆ) ಯ ಬದುಕು ನಮ್ಮದಾಗಿಸಿಕೊಳ್ಳೋಣ ❤️👍🙏

Saturday 26 June 2021

ಅವ್ವ...

ಅವ್ವ

ನೀನಂದುಕೊಂಡಂತೆ
ನೀನೇನೂ  
ಕಡಿಮೆಯಲ್ಲ...
ನಿನ್ನ ಮೇಲೆ ನಿನಗೆ
ಅಸಡ್ಡೆ ಸಲ್ಲ...

ನೀನಿದ್ದರೆ 
ಮಮತೆಯ ವೃಷ್ಟಿ..
ಬಿಸಿಬಿಸಿ ರೊಟ್ಟಿ...
ಪ್ರೀತಿಯು ಗಟ್ಟಿ...

ನೀನಿದ್ದರೆ
ಮನೆಗೆ ಮರಳುವ 
ಮನಸು..
ಬೇಕೆಂದುದನ್ನು
ಉಣ್ಣುವ 
ಕನಸು...

ನೀನಿದ್ದರೆ
ಸಂಬಂಧಗಳ 
ಬಂಧ...
ನೆರೆಹೊರೆಯವರು 
ಚಂದ...

ನೀನಿದ್ದರೆ 
ಹಬ್ಬ...
ದೀವಳಿಗೆಯ 
ದೀಪ..
ಹೋಳಿಯ 
ರಂಗು-ರೂಪ...

ನೀನಿದ್ದರೆ
ಬರುವವರಿಗೆ
ತೆರೆದ ಬಾಗಿಲು..
ಮಮತೆ ತುಂಬಿದ 
ಮುಗಿಲು...
ಪ್ರೀತಿಯ 
ಕಡಲು...

ನೀನಿಲ್ಲದೇನಿಲ್ಲ
ಆದರೆ 
 ನೀನಿರುವವರೆಗದು
ತಿಳಿಯುವದಿಲ್ಲ.....

( ಹಿಂದಿಯಿಂದ)

Monday 21 June 2021

ಹೀಗೊಂದು ಸುಂದರ ಸಂಜೆ...

ಹೀಗೊಂದು ಸುಂದರ  ಸಂಜೆ...

     ‌ ‌ ಇದು ಇಪ್ಪತ್ತು ವರ್ಷಕ್ಕೂ ಹಿಂದಿನ ಮಾತು. ನನಗಾಗ ಐವತ್ತೈದು ವರ್ಷ. ಹೈಸ್ಕೂಲಿನಲ್ಲಿಯೂ ಹಿರಿಯ ಶಿಕ್ಷಕಿ ಪಟ್ಟ. ಮನೆಯಲ್ಲಿಯೂ 'ಅಜ್ಜಿ'ಯಾಗಿ ಆಗಿತ್ತು.ಈ ಎಲ್ಲ ಕಾರ್ಯಭಾರದಿಂದ
ತಲೆಭಾರವೆನಿಸಿ, ಒಂಚೂರು ಬದಲಾವಣೆಗೆ ಹಪಹಪಿಸಿದಾಗ ಅದಕ್ಕೊಂದು ಪರಿಹಾರ ಭೂಮಿಕಾ ತಂಡದ " ಮಾಯಾಮೃಗ" ಧಾರಾವಾಹಿಯಿಂದ ಸಿಕ್ಕಿದ್ದು ನನ್ನ ಪುಣ್ಯವಿಶೇಷವೆಂದೇ ಹೇಳಬೇಕು. .ಆಕಾಶವೇ ಬೀಳಲಿ ಮೇಲೆ, ಭೂಮಿಯೇ ಬಾಯ್ಬಿಡಲೀ ಇಲ್ಲೇ, ನಾ ನಿನ್ನ ನೋಡದೇ ಬಿಡೆನು '-  ಅನ್ನುವಂತೆ , ಅದೂ ಒಂದು ವೃತವೇನೋ ಎನ್ನುವ ಹಾಗೆ ಟೀವಿಯ ಮುಂದೆ ಪ್ರತಿಷ್ಠಾಪಿತಳಾಗುತ್ತಿದ್ದೆ. ಎಲ್ಲ ವರ್ಗಗಳ ,ಎಲ್ಲ ಹಂತಗಳ , ಎಲ್ಲ ವಯೋಮಾನದವರ ,ಸಾಮಾನ್ಯವಾಗಿ ಎಲ್ಲ ರೀತಿಯ ಸಮಸ್ಯೆಗಳನ್ನು ಒಳಗೊಂಡ ಆ ಧಾರಾವಾಹಿ ನನ್ನೊಳಗೆ ಅದೆಷ್ಟು ಒಳಗೆ ಇಳಿದಿತ್ತೆಂದರೆ , ಕೊನೆಗೊಮ್ಮೆ ಮುಗಿದಾಗ ಏನೋ ಕಳೆದುಕೊಂಡ ಭಾವನೆ. ದಟ್ಟದೊಂದು ಮೌನ ಹಾಸಿ ಹೊದ್ದು ಕೊಂಡಂತೆ ಭಾಸವಾಗುತ್ತಿತ್ತು . ಯಾವುದೋ ಒಂದು
ಸಮಸ್ಯೆ ಕಾಡತೊಡಗಿದರೆ ಆ ಧಾರಾವಾಹಿಯಲ್ಲಿ ದಿಢೀರನೇ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ
ಸಮಾಧಾನ ಸಿಗುತ್ತದೆ ಎಂಬ ಭಾವ ನನ್ನದು.
              ಇಂಥದೊಂದು ಧಾರಾವಾಹಿ ಮತ್ತೊಮ್ಮೆ ನೋಡಲು ಸಿಗುವದಿದೆ ಎಂದಾಗ ನಾನು ಮಾಡಿದ ಮೊದಲ ಕೆಲಸ, ಗುರುತು-ಪರಿಚಯವಿದ್ದ ಎಲ್ಲರಿಗೂ ಅದರ link share ಮಾಡಿದ್ದು. ತಪ್ಪದೇ ನೋಡಲು ಆಗ್ರಹಿಸಿದ್ದು.

             ಇದು ಎರಡು ವಾರಗಳ ಹಿಂದಿನ ಮಾತು. ಆ  ಹತ್ತೂ ಎಪಿಸೋಡುಗಳನ್ನು ಮತ್ತೆ ಮತ್ತೆ ನೋಡಿದ್ದೇನೆ.ನೋಡಿದವರೊಂದಿಗೆ ಚರ್ಚಿಸಿಯಾಗಿದೆ.ಆಗಾಗ ಅದಕ್ಕೆ comments ಬರೆಯುವುದೂ ಉಂಟು.
ಆದರೆ ಕಳೆದ ವಾರ ನನಗೊಂದು pleasant surprise ಕಾದಿತ್ತು.' 'ಮಾಯಾಮೃಗ' ದಲ್ಲಿ ನಿಮಗೆ ಅತಿ ಮೆಚ್ಚುಗೆಯಾದ ಐದು ಅಂಶಗಳನ್ನು ಬರೆದು ಕಳಿಸಿ ಎಂಬ quiz ಗೆ ಎಂದಿನಂತೆ ಬರೆದು post ಮಾಡಿದ್ದೆ.
ಅದು ಉತ್ತಮ review ಎಂದು select ಆಗಿದೆ ಎಂದೂ, ವಾರಾಂತ್ಯದ online reunion  zoom  ಕಾರ್ಯಕ್ರಮದಲ್ಲಿ  ನಾವು ಭಾಗವಹಿಸಿ ನಿರ್ದೇಶಕರು/ ಪಾತ್ರಧಾರಿಗಳೊಂದಿಗೆ ಸಂವಾದದಲ್ಲಿ ಚರ್ಚಿಸುವ ಅವಕಾಶವಿದೆಯಂದೂ ತಿಳಿಸಲಾಗಿತ್ತು.

    ‌             ಓದಿದ ಕೂಡಲೇ ಹೇಗೆ    
ಪ್ರತಿಕ್ರಯಿಸಬೇಕೆಂದೇ ನನಗೆ
ಗೊಂದಲವಾಯಿತು.ಒಂದುಕಡೆ ಸಂಭ್ರಮ, ಇನ್ನೊಂದೆಡೆ  ದಿಗಿಲು. ನನಗೆ ಬರವಣಿಗೆ ಹೊಸದಲ್ಲ.ನೂರಾರು ರೆಡಿಯೋ ಕಾರ್ಯಕ್ರಮಗಳು, ಇಂಗ್ಲಿಷ್/ ಹಿಂದಿಯಿಂದ ಅನುವಾದಗಳು, ಒಂದೆರಡು ಪುಸ್ತಕಗಳನ್ನೂ ಬರೆದ ಅನುಭವಗಳೇನೊ ಇದೆ. ಪರಿಚಯದವರೊಂದಿಗೆ  ಮಾತಿಗೂ ಸೈ.ಆದರೆ  modern technology is definitely not my cup of tea. ಸರಿಹೊಂದದೇ ಇದದ್ದು ಮಾಡಲು ತುಂಬಾನೇ ಭಯ, ಅದೂ ಪ್ರತಿಷ್ಠಿತ ನಿರ್ದೇಶಕರು, ಜನಪ್ರಿಯ ಹಿರಿಯ ನಟರು, ವಾಗ್ಮಿಗಳು ಇದ್ದರಂತೂ ಇದ್ದಲ್ಲೇ ನಡುಕ ಶುರು. ಏನಾದರೂ ಅಚಾತುರ್ಯವಾದರೇ...
ಅಲ್ಲದ್ದು  ಘಟಿಸಿದರೇ...ಇಂಥವೇ ಅನುಮಾನಗಳ ಸರದಿ ನನ್ನ ನಡೆಯನ್ನು ಹಿಮ್ಮೆಟ್ಟಿಸುತ್ತವೆ. ಇದಕ್ಕೆ ಇವತ್ತು T.N Seetharam ಸರ್ ತುಂಬಾ ಚೆಂದದ ಕಾರಣ ಕೊಟ್ಟರು," ಗೌರವದಿಂದ ಹುಟ್ಟುವ ಭಯ", ಭಯದಿಂದ ಹುಟ್ಟುವ ಗೌರವ" ಎಂದು. ಇದಕ್ಕೂ ಚೆಂದದ ವಿವರಣೆ ನನಗೆ ದಕ್ಕಲಿಕ್ಕಿಲ್ಲ. ಖಂಡಿತಕ್ಕೂ  ಇದೇ ನಾನು ಭಾಗವಹಿಸದೇ ಇದ್ದುದಕ್ಕೆ ಕಾರಣ. ಇದು ಹದಿನಾರಾಣೆ ಸತ್ಯ. ಬಾಗಿಲಿಗೆ ಬಂದ ಅದೃಷ್ಟ ನಾನು ಬಳಸಿಕೊಳ್ಳಲು ಆಗಲಿಲ್ಲ. ಆ ಬಗ್ಗೆ ನನಗೆ ಪಶ್ಚಾತ್ತಾಪವಿದೆ.
                 ಆದರೆ ಒಂದು ಮಾತು.ನಾನದನ್ನು ಒಪ್ಪಿಕೊಂಡಿದ್ದರೆ, ಅದನ್ನು ನಿಭಾಯಿಸುವ ಒತ್ತಡದಲ್ಲಿ ಆ ಎಲ್ಲ ಇತರರ ಸ್ವಾರಸ್ಯಕರ, ಸ್ವಾನುಭವದ
ಮಾತುಗಳನ್ನು ಒಮ್ಮನಸ್ಸಿನಿಂದ
ನಿರಾಳವಾಗಿ ಆಸ್ವಾದಿಸುವ ಅವಕಾಶ ಬಹುಶಃ ಕಳೆದುಕೊಳ್ಳುವ ಸಾಧ್ಯತೆಯಿತ್ತು. ಮೊದಲೇ ಕಾರಣ ಹೇಳಿ team ನ ಒಪ್ಪಿಗೆ ಪಡೆದ ಕಾರಣಕ್ಕೆ ನಿಶ್ಚಿಂತಳಾಗಿ ಅಂಥ ಸಹಜ, ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಖುಶಿ ನನ್ನದು.

       ‌‌ ಹಿಂದೆಯೂ ನಾನದನ್ನು ಬಿಡದೇ ನೋಡಿದ್ದೆ.ಆದರೆ ಆಗಿನ ನನ್ನ ಮಾನಸಿಕ, ಬೌದ್ಧಿಕ, ಅನುಭವಕ್ಕೆ ನಿಲುಕಬಹುದಾದಷ್ಟು ಮಾತ್ರವೇ ಅರ್ಥವಾಗಿತ್ತು. ಈಗಿನ ನನ್ನ ಅನುಭವದ ವ್ಯಾಪ್ತಿಯ ವಿಸ್ತಾರದಲ್ಲಿ ಇನ್ನೂ ಹೆಚ್ಚು ಹೆಚ್ಚು  ವ್ಯಾಪಕವಾದ ರೀತಿಯಲ್ಲಿ ಧಾರಾವಾಹಿ ಬಿಚ್ಚಿ ಕೊಳ್ಳುತ್ತಿದೆ.ಆ ಕಾರಣಕ್ಕೆ ಅದು ಎಂದಿಗೂ ಹಳತಾಗುವದಿಲ್ಲ. ಅಂತೆಯೇ ಎಲ್ಲರೂ ನೋಡಿ ಆನಂದಿಸಲಿ ಎಂಬ ಕಾರಣಕ್ಕೆ ನಾನು ಎಲ್ಲರಿಗೂ ಅದನ್ನು ತಲುಪಿಸಲು
ಪ್ರಯತ್ನಿಸಿದ್ದು. ನಾನೂ ಹೊಸದೇ ಉತ್ಸಾಹದಿಂದ ಪ್ರತಿವಾರ ಅದನ್ನು ಕಾಯುತ್ತಿದ್ದುದು....ಕಾಯುತ್ತಲೇ ಇರುವುದು...
         ‌ 





Saturday 19 June 2021

ಹಾಗೇ ಸುಮ್ಮನೇ..
        
ಅದೊಂದು ಕಾಲ...ಇದೂ ಒಂದು ಕಾಲ....

            ಸುಮ್ಮನೇ ಫೇಸ್ ಬುಕ್ ನೋಡುತ್ತ ಕುಳಿತಿದ್ದೆ...ಅದೊಂದು ಪುಟ್ಟ ಪ್ರಪಂಚದಂತೆ ಕಂಡರೂ  ವ್ಯಾಪ್ತಿ  ದೊಡ್ಡದು...ವಿಕ್ರಮನ ಹೆಗಲನೇರಿದ ಬೇತಾಳ... ಇದಿಲ್ಲದಿದ್ದಾಗ ಹೇಗಿದ್ದೆವು? ಎಂದು ನನಗೆ ನಾನೇ ಕೇಳಿಕೊಂಡೆ..' ಹೆಚ್ಚು ಚನ್ನಾಗಿ" ಎಂದು ಉತ್ತರ ಬಂತು...internet ಬಳಕೆ ಒಂದು ಅತ್ಯದ್ಭುತ ಆವಿಷ್ಕಾರ..ಅದರಲ್ಲಿ  ಎರಡು ಮಾತಿಲ್ಲ...ಅದು  ಇಡಿ ಜಗತ್ತನ್ನೇ ಅಂಗೈಯಲ್ಲಿ ಸೆರೆ ಹಾಕಿದೆ...ಜಗತ್ತಿನ ಇಂಚಿಂಚು ಮಾಹಿತಿಯೂ ನಡೆದ ಸ್ಥಳದಷ್ಟೇ ಕ್ಷಿಪ್ರವಾಗಿ ಕಣ್ಣೆದುರು ತೆರೆದುಕೊಳ್ಳುತ್ತದೆ...ಆದರೆ ದೀಪದ ಬುಡದಲ್ಲೇ ಕತ್ತಲೆಯೂ ಉಂಟು...ಅದರ ಇನ್ನೊಂದು ಮುಖ ಅಷ್ಟೊಂದು ಆಕರ್ಷಕವಾಗಿರದೇ ಕರಾಳವಾಗಿದೆ...ಆದರೆ ಸಿಗರೇಟು ಪ್ಯಾಕ್ಮೇಲೆ ಚಂದ ಚಂದದ  ಸಿಗರೇಟು ತೋರಿಸಿ  " smoking is injurious to health" ಅನ್ನುವದನ್ನು ದುರ್ಬೀನು ಹಿಡಿದೇ ನೋಡುವಂತೆ 
(ಕಂಡೂ ಕಾಣದಂತೆ) ಕೊನೆಯಲ್ಲಿ ಬರೆದಿರುತ್ತಾರೆ....ಅದನ್ನು ಬೆನ್ನು ಹತ್ತಿ ನಮ್ಮ ಕ್ರಿಯಾಶಕ್ತಿ ಜಡವಾಗಿ ಕೈ ಕೊಡುತ್ತದೆ...ತಾಸುಗಟ್ಟಲೇ ಕುಳಿತೇ ಇರುವದರಿಂದ ಸೋಮಾರಿತನ ವೃದ್ಧಿಸುತ್ತಿದೆ...ಮನೆಯ ಜನರೊಂದಿಗೇನೇ ಸಂಪರ್ಕ,ಸಂವಹನ ಕಡಿಮೆಯಾಗುತ್ತಿದೆ..ಒಂದು ಫ್ಲೋರ್ದಿಂದ  ಇನ್ನೊಂದು ಫ್ಲೋರ್ಗೆ ಮಾತಿನ ಬದಲು ಸಂದೇಶಗಳು ರವಾನೆಯಾಗುವದೇ ಹೆಚ್ಚು.....ಮೆದುಳು ಚುರುಕಾದಷ್ಟೂ ಹೃದಯ ಮಿಡಿತ ಮಂದವಾಗುತ್ತದೆ...ಎಲ್ಲರೂ ಸುಖದ ಭ್ರಮೆಯಲ್ಲಿ ಬದುಕುತ್ತಿದ್ದಾರೆ...ಆದರೆ ಒಳಗೆಲ್ಲೋ ಎಲ್ಲವೂ ಸೋರಿಹೋದ ಹತಾಶೆ ಕಾಣುತ್ತಿದೆ..
ಇದೆಲ್ಲವೂ ಪರ್ಯಾಯವಾಗಿ fb ಯಲ್ಲಿ  ಪ್ರದರ್ಶಿತವಾಗುತ್ತಿರುವದು
ಗುಟ್ಟಾಗಿಯೇನೂ ಉಳಿದಿಲ್ಲ...ಜನರಲ್ಲಿ ಸಹನಶಕ್ತಿ ಕಡಿಮೆಯಾಗಿ
ಅಸಹನೆ,ಅಪನಂಬಿಕೆ,ಅವಿಶ್ವಾಸ,ಅಪರಿಹಾರ್ಯ ಸಮಸ್ಯೆಗಳು ತಲೆ ಎತ್ತುತ್ತಿವೆ...ಸಣ್ಣ ಸಣ್ಣ ವಿಷಯಗಳನ್ನು ಹಿಗ್ಗಿಸುವದು,ವಾದಗಳನ್ನು ಬೆಳೆಸುವದು,ಅನವಶ್ಯಕ ಅಪನಂಬಿಕೆಗಳು ಹೆಚ್ಚಾಗಿ ಉದ್ವೇಗದಲ್ಲಿ ಸಲ್ಲದ ನಿರ್ಣಯಕ್ಕೆ ಬಂದು ಮನಸ್ಸು ಕಹಿ ಮಾಡಿಕೊಳ್ಳುವದು ಹೆಚ್ಚಾಗಿದೆ..ಇವೆಲ್ಲ ಇಲ್ಲದ ಕಾಲಕ್ಕೆ ಎಲ್ಲವೂ ಸರಿಯಿತ್ತು ಎಂದೇನೂ ಅಲ್ಲ..ಆದರೆ ಹೆಚ್ಚು ಜಿದ್ದಿಗೆ ಬೀಳದೇ ಸ್ವಲ್ಪೇ ಹೊತ್ತಿನಲ್ಲಿ ಸರಿ ಪಡಿಸಿಕೊಳ್ಳುವ ತಾಳ್ಮೆಯಿತ್ತು..'ಕಹಿ' ಹೆಚ್ಚು ಹೊತ್ತು ಕಹಿಯಾಗಿಯೇ ಆಗ ಉಳಿಯುತ್ತಿರಲಿಲ್ಲ ಅನಿಸುತ್ತದೆ..
    ‌‌‌‌‌    ಅದೇ fb ನೋಡುತ್ತಿದ್ದೆ ಅಂದೆನಲ್ಲ...ಅದರಲ್ಲಿಯ ಕೆಲವು post ಗಳನ್ನು ನೋಡಿದಾಗ ಹೀಗೆಲ್ಲ ವಿಚಾರಬಂತು..ಬಾಲ್ಯದ ಅಮಾಯಕತೆ ಕಳೆದುಕೊಂಡು , ನಮ್ಮನ್ನು ನಾವೇ ಅರ್ಥೈಸಿಕೊಳ್ಳ ತೊಡಗಿದಾಗಿನ ಫಲಿತಾಂಶವಿದು...ಬಹುಶಃ ಎಲ್ಲರಿಗೂ ಒಮ್ಮಿಲ್ಲ ಒಮ್ಮೆ ಅನಿಸುವಂಥದ್ದೇ...
      ‌‌‌ಎರಡು ತಾಸಿನ ಹಿಂದೆ
ನಾನೊಂದು post ಹಾಕಿದ್ದೆ..,

_ಅವನು  ಬಸವ...
_ ಅವಳು ಕಮಲ...
_ಕಮಲ ಬಸವನ ತಂಗಿ....

                ಇಷ್ಟೇ ನಾನು ಬರೆದದ್ದು..ತಾಸೊಂದರಲ್ಲಿ ಅರವತ್ತರಷ್ಟು ಜನ ಆ ದಿನಗಳಿಗೆ ಹೋಗಿ ಆ ಇಡೀ ಪಾಠವನ್ನು,ಆ ಪಠ್ಯದ ಕವಿತೆಗಳನ್ನು ಹಾಕಿ ಅಂದಿನ ದಿನಗಳನ್ನು ಮರು ಜೀವಿಸಿದ್ದಾರೆ..ಮೂಲಾಕ್ಷರಗಳ ಕಲಿಕೆ ಮುಗಿದ ಮೇಲೆ ವಾಕ್ಯ ರಚನೆಗಳನ್ನು ಪರಿಚಯಿಸುವಾಗಿನ ಕನಿಷ್ಠ ಶಬ್ದ ಬಳಕೆಯ ವಾಕ್ಯಗಳು ಅವು..
ಅದರಲ್ಲಿ ಜಾಣತನವಿಲ್ಲ..
ಹೆಗ್ಗಳಿಕೆಯಿಲ್ಲ...ನೆನಪಿರಲೇ ಬೇಕೆಂಬ ಅಂಶಗಳಿಲ್ಲ..
ಆದರೆ ಅಮಾಯಕ ಬಾಲ್ಯದ ಮುಗ್ಧತೆಯಿದೆ..ಕಲಿಕೆಯ
ಜಂಭವಿದೆ...ಕಲಿತ ಆನಂದವಿದೆ...ಸುಂದರ ನೆನಪಿನ  ಭಂಡಾರವೇ ಇದೆ..ಅದಕ್ಕೊಂದು ಆತ್ಮೀಯ ಸಂವೇದನೆಯಿದೆ...ಅಂತೆಯೇ ಅರವತ್ತು/ ಎಪ್ಪತ್ತರ ವಯಸ್ಸಿನವರೂ ಚಿಕ್ಕವರಾಗಿ, ಬಾಲ್ಯಕ್ಕೆ ಮರಳಿ ಸ್ಪಂದಿಸಿದ್ದಾರೆ..ಸ್ಪಂದಿಸುತ್ತಲೇ ಇದ್ದಾರೆ...ಬಾಲ್ಯವೊಂದು golden era ಎಲ್ಲರ ಪಾಲಿಗೆ...
          ನಾವು ಎಷ್ಟೇ ದೊಡ್ಡವರಾಗಲೀ ,ಎಷ್ಟೇ ಮುಖವಾಡ ಧರಿಸಲೀ, ಅದು ಹೇಗೋ ಒಮ್ಮೊಮ್ಮೆ ತಂತಾನೇ ಅನಾವರಣ ವಾಗಿ ಗೊತ್ತಿಲ್ಲದೇ ಬತ್ತಲೆಯಾಗಿ ಬಿಡುತ್ತೇವೆ...ಹಾಗೆ ಮಾಡಿಸುವದೊಂದು ಶಕ್ತಿ  ಅದೆಲ್ಲೋ ಅದಮ್ಯವಾಗಿದ್ದು ಕಾಲ ಬಂದಾಗ ಹೊರಬರುತ್ತದೆ...
            ಒಟ್ಟಿನಲ್ಲಿ ಇದುವರೆಗಿನ ಬದುಕಿನಲ್ಲೊಂದು  ಸುತ್ತು ಹೋಗಿ ಬಂದಾಗ "ಮಾನಸಿಕ google search" ನಲ್ಲಿ 
ನನಗೆ ಅನಿಸಿದ ಭಾವನೆಗಳಿವು...ನನ್ನೊಡನೆ ಬಾಲ್ಯಕ್ಕೆ ಮರಳಿದ ಎಲ್ಲರಿಗೂ ಧನ್ಯವಾದಗಳು/ ಅಭಿನಂದನೆಗಳೂ ಸಹ..

Wednesday 16 June 2021

ತನ್ನಂತೆ ಪರರ ಬಗೆದೊಡೆ....

ತನ್ನಂತೆ ಪರರ ಬಗೆದೊಡೆ...

ಧಾರವಾಡದ  ಹೆಂಬ್ಲಿಿ  ಓಣಿಯ  ನಮ್ಮ ಮನೆ ಅತಿ ದೊಡ್ಡದು. ಅದಕ್ಕೆ ತಕ್ಕಂತೆ ಹಿತ್ತಲವೂ ಇತ್ತು. ನನಗೂ ಹೂ ಗಿಡಗಳ ಹುಚ್ಚು. ಹೀಗಾಗಿ ಎಲ್ಲ ರೀತಿಯ ಹೂಬಳ್ಳಿಗಳು, ಹೂವಿನ/ಹಣ್ಣಿನ ಗಿಡಗಳೂ ಇದ್ದವು. ನಿಂಬೆ, ಕರಿಬೇವು, ಹಸಿಮೆೆಣಸಿನಕಾಯಿ, ಪೇರಲ,   ಇನ್ನೂ
ಏನೇನೋ..." ಶ್ರೀಮತಿ, ಸ್ವಲ್ಪ ಎಣ್ಣೆ, ರವಾ ಇಟ್ಟುಬಿಡು.ಬಂದವರು ಉಪ್ಪಿಟ್ಟು
ಮಾಡಿಕೊಂಡು ತೋಟದಲ್ಲಿಯೇ
ತಿಂದು ಹೋಗುತ್ತಾರೆ" ಎಂದು ತಮಾಷೆಯಾಗಿ ಹೇಳುವವರೂ ಇದ್ದರು. 

       ಅನಿವಾರ್ಯವಾಗಿ ಬೆಂಗಳೂರಿಗೆ ಬಂದಮೇಲೂ ನನಗೇನೂ  ಹೆಚ್ಚು ವ್ಯತ್ಯಾಸವಾಗಲಿಲ್ಲ. ಏಕೆಂದರೆ  ನಾವು ಇಲ್ಲಿಯೂ ಅಪಾರ್ಟ್ಮೆಂಟ್ನಲ್ಲಿ  ಇರದೇ  ಸ್ವತಂತ್ರ ಮನೆಗಳಲ್ಲಿಯೇ
ಇದ್ದುದರಿಂದ ತೋಟದ ಸಂಸ್ಕೃತಿಗೆ
ಧಕ್ಕೆಯಾಗದಂತೆ ನಡೆದುಹೋಯಿತು. ನನ್ನನ್ನು ಹೊರತುಪಡಿಸಿ ಎಲ್ಲರೂ ಸದಾ busy ಇರುತ್ತಿದ್ದುದರಿಂದ ತೋಟದ ಚಿಕ್ಕ ಪುಟ್ಟ ಕೆಲಸಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ/ತ್ತಿದ್ದೇನೆ. ನನಗೆ ಮೀರಿದ್ದು ಇದ್ದರೆ ಮೆಂಟೇನನ್ಸ  ವಿಭಾಗದಿಂದ ತೋಟದ ಉಸ್ತುವಾರಿ ಮಾಡುವವರಿಗೆ ಹೇಳಿ ಮಾಡಿಸಿಕೊಳ್ಳಬೇಕು/ ಮಾಡಿಸಿಕೊಳ್ಳುತ್ತೇವೆ...

           ‌.      LOCKDOWN ಅವಧಿಯಲ್ಲಿ  ಹೊರಗಿನವರಿಗೆ
ಮನೆಯ ಒಳಗೆ ಪ್ರವೇಶ ಸಂಪೂರ್ಣ ನಿಷೇಧವಿದ್ದುದರಿಂದ ತೋಟದ ಕೆಲಸ ತುಂಬಾ ದಿನಗಳಿಂದ ಬಾಕಿ ಇತ್ತು. ನಿನ್ನೆಗೆ lockdown ನಿಯಮ  ಸಡಿಲಿಸಿದ್ದರಿಂದ ಕೆಲಸದವರೆಲ್ಲ ಹಾಜರಾದರು .ನಾನೂ mask ಹಾಕಿಕೊಂಡು ದೂರದಿಂದಲೇ ಅವರಿಗೆ guide ಮಾಡಲು ನಿಂತೆ,

 " ಎಲ್ಲ ಒಣಗಿನಿಂತ ಗಿಡಗಳನ್ನೂ ,ಇನ್ನು
ಚಿಗುರುವದಿಲ್ಲ ಅನಿಸುವ ಗಿಡಗಳನ್ನು ತೆಗೆದು ಬಿಡಿ, ಈಗ ಮಳೆಗಾಲ. ಬೇರೆ ಹಚ್ಚೋಣ. ಅವುಗಳ ಜಾಗ ಖಾಲಿಯಿಡಿ.
ದೊಡ್ಡ ಗಿಡಗಳಲ್ಲಿ ಯಾವುದೇ ಟೊಂಗೆ ಒಣಗಿ ಬಾಡಿದ್ದರೆ ಕತ್ತರಿಸಿಬಿಡಿ. ಒಟ್ಟಿನಲ್ಲಿ
ತೋಟ ಹಸಿರಾಗಿ ನಳನಳಿಸಬೇಕು, ಹಾಗಿರಲಿ. ಖಾಲಿ ಜಾಗದ ಮಣ್ಣು ಸಡಿಲಿಸಿ ಎರಡು ದಿನ ಮಳೆ ಬಾರದಿದ್ದರೆ ನೀರು ಹಾಕಿ ಮೆದು ಮಾಡಿ - ಹೊಸ ಗಿಡಗಳನ್ನು ತಂದು ನಡೋಣ,"-
ಮುಂತಾಗಿ ಸಲಹೆ ಕೊಟ್ಟು  ಎಲ್ಲ ಕಡೆ ಓಡಾಡುವ ಅವರ ಜೊತೆಗೆ  ಹೆಚ್ಚು ಕಾಲ ಇರುವುದು ಕ್ಷೇಮವಲ್ಲಾ ಅನಿಸಿ ಒಳಗೆ ಬಂದೆ.
‌‌           ಕೊನೆಗೊಮ್ಮೆ ಮತ್ತೆ  ಹೋಗಿ ನೋಡುವುದು ಇದ್ದುದರಿಂದ  ತಾತ್ಕಾಲಿಕ
ಕೆಲಸವೇನಾದರೂ ಇದ್ದದ್ದಾದರೆ ಮಾಡೋಣವೆಂದರೂ ಏಕೋ
ಮನಸ್ಸಾಗದೇ ಹಾಗೇ ಕುಳಿತೆ. ನಾನು ಅವರಿಗೆ ಹೇಳಿದ ಕೆಲಸಗಳನ್ನು ನೆನೆದು ಮತ್ತೇನಾದರೂ ಹೇಳಲುಂಟೇ ಎಂದು ನಿಧಾನವಾಗಿ ಯೋಚನೆ ಮಾಡತೊಡಗಿದಾಗ ಮನಸ್ಸಿನಲ್ಲಿ ಏನೋ ವಿಚಾರ ಬಂದು ಬೆಚ್ಚಿದೆ.

ಯಾರೋ ಒಬ್ಬರು, 

" ಈ ವಯಸ್ಸಾದ ಹಿರಿಯರಿಂದ ಏನೂ ಆಗುವುದಿಲ್ಲ,  ಸುಮ್ಮನೇ ಸಾಕುವುದು ಭಾರ, ಇವರಿಗೆ ಔಷಧೋಪಚಾರ ದಂಡ.
ಪ್ರಯೋಜನವಿಲ್ಲ, ಇಂಥವರಿಂದ ಮುಕ್ತರಾಗಲು ಏನು ಮಾಡಬೇಕು"-
ಎಂದು ಎಲ್ಲ ತರುಣ ಪೀಳಿಗೆ ಯೋಚಿಸತೊಡಗಿದರೆ ನಿಮ್ಮಂಥವರ ಗತಿ ಮುಂದೆ ಏನಾಗಬಹುದು? ಯೋಚಿಸಿದ್ದೀರಾ? " -ಎಂದು ಕೇಳಿದಂತೆ
ಭಾಸವಾಗಿ ವಿಷಣ್ಣಳಾದೆ. ಕಣ್ಣೆದುರು ಇತರರ/ ಮಕ್ಕಳ  ಅವಕೃಪೆಗೆ ಒಳಗಾಗಿ ಅಸಹಾಯಕರಾಗಿ ಸಾಲುಸಾಲಾಗಿ  ವೃದ್ಧರು ಕಾಣಿಸಿದಂತಾಗಿ , ಅವರನ್ನು ಒತ್ತಾಯದಿಂದ ಮನೆಯಿಂದ ಹೊರಡಿಸಿ ವೃದ್ಧಾಶ್ರಮಕ್ಕೆ ಸೇರಿಸಿ ಕೈತೊಳೆದು ಕೊಂಡಂತೆ  ಅನಿಸತೊಡಗಿ ತಲೆ ತಿರುಗಿದಂತಾಗ ತೊಡಗಿತು.

           ಒಣಗಿದ ಹಾಗೂ  ಹೂ - ಕಾಯಿಗಳನ್ನು ಬಿಡದ ಗಿಡಮರಗಳು ಹಿತ್ತಲಕ್ಕೆ, ನಮಗೆ, ಭಾರವೆನಿಸಿ  ಅವುಗಳನ್ನೆಲ್ಲ ಕಡಿದು ,ಟೊಂಗೆ ಕತ್ತರಿಸಿ ಒಗೆದು ಹೊಸದಕ್ಕೆ ದಾರಿಮಾಡುವದಕ್ಕೂ ಮೇಲಿನ ವಿಚಾರಕ್ಕೂ ವ್ಯತ್ಯಾಸವೇ ಅನಿಸಲಿಲ್ಲ.
ಎಲ್ಲೋ ಮನದಲ್ಲಿ ಕಳಮಳ/ ಸಂಕಟ.
ಕೂಡಲೇ ಹೊರಹೋಗಿ ಅವರಿಗೆ ಹೇಳಿದೆ,  
             " ಒಣಗಿದ ಯಾವುದನ್ನೂ ಕಡಿಯಲು ಹೋಗಬೇಡಿ, ಸ್ವಲ್ಪ ದಿನ ಕಾಯೋಣ,  ತಾನೇ ಕಳಚಿ ಬಿದ್ದಾಗ ಮುಂದಿನದು ನೋಡೋಣ.ಉಳಿದ ಭಾಗ clean ಮಾಡಿಬಿಡಿ ಸಾಕು."

           ‌ಕೆಲಸದ ಬಗ್ಗೆ ಜೋರು ದನಿಯಲ್ಲಿ  ಇಷ್ಟುದ್ದ ಪಟ್ಟಿ ಕೊಟ್ಟ ಇವರಿಗೆ ಇಷ್ಟರಲ್ಲಿ  ಏನಾಯಿತು? ಎಂದು ನನ್ನನ್ನೇ ನೋಡುತ್ತಾ ನಿಂತಿದ್ದ ಕೆಲಸದವರ ಕಣ್ತಪ್ಪಿಸಿ ಒಳಗೆ ಜಾರಿಕೊಂಡೆ...

                ನನ್ನ ಈ ನಡೆಗೆ  ಕಾರಣ, ನಿಜವಾದ  ಪರಿಸರ ಪ್ರೀತಿಯೋ, ಅಥವಾ
ಅದರೊಳಗಡಗಿದ ನನ್ನದೇ ಮನದ ಭೀತಿಯೋ ಇನ್ನೂ ಸ್ಪಷ್ಟವಾಗಿಲ್ಲ.




                  

Tuesday 15 June 2021

ಬದುಕು ಬದಲಿಸಬಹುದು...

ಹುಟ್ಟು 'ಹಬ್ಬ'ವಾಗಬಹುದಿತ್ತು,
ಬದುಕು 'ಕಬ್ಬ'ವಾಗಬಹುದಿತ್ತು,
ಅದರ ಸಂಗದಲಿ ಸುಖವಿತ್ತು,
ದುಃಖದಿಂದ ಬಹುದೂರ
ನನ್ನ ಮುಖವಿತ್ತು,

ಇಜ್ಜಲೊಲೆಯ ಕೆಂಡದಲ್ಲಿ
ಬಿಸಿಬಿಸಿ ಚಹಾ/ಕಾಫಿಯಿತ್ತು,
ಯಾವುದು, ಎಷ್ಟು ಕುಡಿದರೂ 
ಮಾಫಿ ಇತ್ತು...

ಪುಟ್ಟ ಪುಟ್ಟ ಖುಶಿ- ಗಳಿಗೂ 
ರೆಕ್ಕೆ ಗಳಿದ್ದವು...
ಅಲ್ಲಿ,ಇಲ್ಲಿ ಇದ್ದ ಚಿಂತೆಗಳೂ ಬೇರೆಯವರ ತೆಕ್ಕೆಗಳಲ್ಲಿದ್ದವು...

ಹಕ್ಕಿಗಳ ಕೊರಳುಗಳಲ್ಲಿ
ಹಾಡುಗಳಿದ್ದವು...
ಎಲ್ಲರಿಗೂ ತಮ್ಮವೇ ಆದ
'ಪಾಡು'ಗಳಿದ್ದವು..

ಇದ್ದುದೆಲ್ಲವ ಮರೆತು
ಬಿಡಬೇಕಿರಲಿಲ್ಲ...
ಇಲ್ಲದಿರುವುದಕ್ಕೆ
ತುಡಿಯಬೇಕಿರಲಿಲ್ಲ...
ವಿಷಾದ ಗೀತೆಗಳಿಗೆ
ತಲೆ ಕೆಡಿಸಿಕೊಳ್ಳ
ಬೇಕಿರಲಿಲ್ಲ...

ಬದುಕು ಎಲ್ಲರನ್ನೂ, 
ಯಾವಾಗಲೂ ಬಡಿಯುವದಿಲ್ಲ...
ಧೂಳೆಬ್ಬಿಸಿ ಹಾರುವ
ಚಿಂತೆಗಳನ್ನು ವಿನಾಕಾರಣ
ಹಿಡಿಯುವುದಿಲ್ಲ...

Sunday 13 June 2021

ನಿಂಗಮ್ಮ ಹಾಗೂ ಉದ್ದ ಕೂದಲು...

" ‌‌ಏ! ಯವ್ವಾ, ಈ ನನ್ನ ಕೂದಲು ಉದುರಿ ಬಿದ್ದು ಹೋಗೊಕಿಷ್ಟು  ಏನರ ಔಸ್ದಿ ಹೇಳಬೇ, ಸಾಕಾಗಿ ಹೋಗೇತಿ ನಂಗ" - ನಿಂಗಮ್ಮನ ದಿನನಿತ್ಯದ ಅಳಲು ಇದು.

ನಿಂಗಮ್ಮ ಎಪ್ಪತ್ತರ ದಶಕದಲ್ಲಿ ನಮ್ಮ ಧಾರವಾಡದ ಹೆಂಬ್ಲಿ ಓಣಿಯ ನಮ್ಮನೆಯ ಕೆಲಸದಾಳು. ತುಂಬಾ ಚೆಲುವೆ ಇದ್ದಿರಬೇಕು ಯೌವನದ ದಿನಗಳಲ್ಲಿ. ಕೆಂಪು ಬಣ್ಣ, ಚೂಪು ಮೂಗು, ನೀಳವಾದ ಮೈಕಟ್ಟು, ಆಗಲೂ ಇತ್ತು ಅವಳಿಗೆ. ಅರವತ್ತು ವರ್ಷಗಳಿರಬೇಕು. ಅದೂ ಅವಳಿಗೆ ಗೊತ್ತಿಲ್ಲ. "ನಿಂಗೆಷ್ಟು ವರ್ಷಗಳು ನಿಂಗಮ್ಮ?" ಅಂದರೆ "ಯಾರಿಗೆ ಗೊತ್ತsss ನನ್ನವ್ವಾ, ನಾ ಹುಟ್ಟಿದಾಗ ಆ ಹುಣಚೀಮರ ಈಟಿತ್ತಂತ ನೋಡು"- ಇದು ಅವಳ ಉತ್ತರ, ಜೊತೆಗೆ ಒಂದು ಅಳತೆಯಲ್ಲಿ ಅದರ ಎತ್ತರದ ಕೈತೋರಿಸುವದು. ಅಲ್ಲಿಗೆ ವಯಸ್ಸು ಕೇಳಿದವರು ಹುಣಶಿಮರದ ಹುಟ್ಟು, ಬೆಳವಣಿಗೆಯ ಲೆಕ್ಕ ಹಾಕಿಕೊಂಡು ಅವಳ ವಯಸ್ಸು ಅಂದಾಜು ಮಾಡಿಕೊಳ್ಳಬೇಕು.😂

              ನಿಂಗಮ್ಮ ಒಂದು ರೀತಿಯಲ್ಲಿ  ಸಂಸಾರವಿದ್ದ ಸನ್ಯಾಸಿನಿ. ಗಂಡನಿಲ್ಲದ ಅನಾಥೆಯಾದರೂ  ತಂಗಿಯ ಮಗನನ್ನು
ಸಾಕಿಕೊಂಡಿದ್ದಳು. ಅವನೋ ಹುಟ್ಟು ಸೋಮಾರಿ, ಅವನ ಸಂಸಾರವೂ ಇವಳದೇ ಹೆಗಲಿಗೆ. ಹೀಗಾಗಿ ದುಡಿತ ಈ ವಯಸ್ಸಿನಲ್ಲಿಯೂ ಬೆನ್ನು ಬಿಡದಾಗಿತ್ತು ಅವಳಿಗೆ.

       ಒಂದೇ ಓಣಿಯಲ್ಲಿ ಕೆಲವು ಮನೆಗಳ  ಕೆಲಸ  ಮಾಡುತ್ತಿದ್ದರೂ ಸರಕಾರೀ ಅಧಿಕಾರಿಗಳ ಶಿಸ್ತು.( ಆಗಿನ ಕಾಲದಲ್ಲಿ) ಅವಳನ್ನು ನೋಡಿ ಗಡಿಯಾರ ಬದಲಿಸಬಹುದಾದಷ್ಟು ಸಮಯಪ್ರಜ್ಞೆ
ಅವಳದು. ಬೆಳಿಗ್ಗೆ ಏಳು/ ಮಧ್ಯಾನ್ಹದ ಒಂದು ಗಂಟೆಗೆ ಬಾಗಿಲಲ್ಲಿ ಪ್ರತ್ಯಕ್ಷ. ಒಂದೇ ಒಂದು ದಿನ ತಪ್ಪಿಸಿಕೊಳ್ಳುವವಳಲ್ಲ.
ಸದಾ ನಗುಮೊಗದ ಚೆಲುವೆ.' ಯವ್ವಾ!' ಎಂದರೆ ಆ ಆರ್ದ್ರತೆಗೆ ಎಂಥ ಮನಸ್ಸೂ ಕರಗಬೇಕು. ಬೆನ್ನು ಬಾಗಿಸಿಕೊಂಡು  ಭಿರಭಿರನೇ ನಡೆದರೆ ನಮ್ಮ ಆಲಸ್ಯಕ್ಕೆ ನಮಗೇ ನಾಚಿಕೆಯಾಗಬೇಕು.
          
           ಇಂತಿಪ್ಪ ನಿಂಗವ್ವಳಿಗೂ ಒಂದು ಚಿಂತೆ. ಅವಳ ಉದ್ದ ಕೂದಲದ್ದು. ಆ ವಯಸ್ಸಿನಲ್ಲೂ ಗಂಟು ಕಟ್ಟಿದರೆ ಅವಳ ತಲೆಯ ಆಕಾರವನ್ನು ಮೀರಿಸುತ್ತಿತ್ತು ಅದು.ಅದರ ಆರೈಕೆ, ಅವಳ ಹೊಟ್ಟೆಯ ಪಾಡಿನಲ್ಲಿ ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ಅವು ಸಿಕ್ಕು ಬೀಳುವುದು, ತಲೆಯಲ್ಲಿ ಹೇನುಗಳಾಗುವದು ಇದೆಲ್ಲದರ ಕಿರಿಕಿರಿ." ಎವ್ವಾ! ಎಲ್ಲಾರ್ನೂ ಕೇಳ್ದೆ, ಹೇಳಿದ್ದೆಲ್ಲ ಮಾಡ್ದೆ, ಯಾರೋ 
ಉಪ್ಪು ನೀರಾಗ ಕೂದಲಾ ತೊಳೀ ಅಂದ್ರು.ಅದೂ ಆತು. ಏನೂ ಉಪಯೋಗ ಆಗ್ಲೇಯಿಲ್ಲಬೇ, ಜೀವನ ರೋಸಿ ಹೋಗೇತಿ ನನಗ, ನಿಮ್ಮಂಥವರಿಗೆ ಇದ್ರ ಉಪಚಾರ ಕಾಣ್ತಾವು. ನಮ್ಮಂಥಾ ಪಾಪಿ/ ಪರದೇಶಿ ಗಳಿಗೆ ಯಾಕೆ ಬೇಕು?"- ಇದು ಅವಳ ನಿತ್ಯ ಸುಪ್ರಭಾತ.
ಅವಳ ದೃಷ್ಟಿಯಲ್ಲಿ ಕೂದಲಿನ ಆರೈಕೆಗೆ ಹಾಕುವ ಸಮಯದಲ್ಲಿ ಮತ್ತೆರಡು ಮನೆ ಕೆಲಸಮಾಡಿದರೆ ರೊಟ್ಟಿಗೆ ಕಾರಬ್ಯಾಳಿ ಜೊತೆ ಒಂದು ಪಲ್ಯಾನೂ ಮಾಡಿ ಉಣಲಿಕ್ಕಾದೀತು, ಎಂಬುದು ಅವಳ ಲೆಕ್ಕ. ಅದು 'ಬದುಕಿನ' ಲೆಕ್ಕವಾಗಿತ್ತು.
     ‌‌ 
ಇಂದು ರವಿವಾರ. ನನ್ನ ತಲೆಸ್ನಾನದ ದಿನ.ಕೂದಲು ತೊಳೆದುಕೊಂಡು ಹೊರಗೆ ಒಣಗಿಸುತ್ತ ನಿಂತಿದ್ದೆ.
ದಿನೇ ದಿನೇ ತೆಳ್ಳಗೆ/ ಬೆಳ್ಳಗೇ ಆಗುತ್ತ ನಡೆದಿರುವ ನನ್ನ ಕೂದಲನ್ನು ಕಂಡಾಗ ಆದ ನನ್ನ ಚಡಪಡಿಕೆ, ನನ್ನನ್ನು ಐವತ್ತು ವರ್ಷಗಳ ಹಿಂದಿನ ನಿಂಗವ್ವಳ ಚಡಪಡಿಕೆಗೆ ಕೊಂಡೊಯ್ದು ಕಾಡಿದ್ದು ಹೀಗೇ...

#Sundaysnacks.

ಚಿತ್ರ ಕೃಪೆ: ಗೂಗಲ್.

Monday 7 June 2021

ಅಮ್ಮನ ಮನೆ...

ಆ ಮನೆಯ  ತೊರೆದು,
ಈ ಮನೆಯ ಪೊರೆದು,
ವರ್ಷಗಳೇ ಕಳೆದವು...
ಯಾಕೋ ದಿನಗಳೆದಂತೆ 
ಮರಮರಳಿ ನೆನಪುಗಳೇ 
ಬೆಳೆದವು...

ಹೊತ್ತೇರಿದಂತೆ ದಿನವೂ
ಕಿವಿಯಲ್ಲಿ ಅಮ್ಮನ ಇನಿದನಿ...
ಅವಳ ಅಡಿಗೆಯ ಘಮಲು...
ಆ ಗೌಜು, ಗದ್ದಲ ,ನಗು,
ಕೇಕೆಗಳ ಅಮಲು...

ಅಪ್ಪ ಬಂದನೋ 
ಚಹಾದ ಹಾವಳಿ...
ಆ ದಿನದ ದಿನಚರಿ 
ಒಪ್ಪಿಸಲು ಪಾಳಿ...
ಬಂಧು ಬಾಂಧವರ 
ನಿಲ್ಲದ ಭೇಟಿ...
ಮಾತು, ಹರಟೆಗಳೋ 
ಎಲ್ಲ ಭಾಷೆ, ಗಡಿಗಳ ದಾಟಿ...

ಕಳೆದ ದಿನಗಳೀಗ 
ಬರಿ  ಕನಸುಗಳು...
ಮನದಲ್ಲಿ ಅಮ್ಮನವೇ 
ನೆನಹುಗಳು...
ಅವಳ ಮಾತುಗಳನ್ನು
ಇಂದಿಗೂ ಪಾಲಿಸುತ್ತೇನೆ.
ನನ್ನ ದುಃಖ ನುಂಗಿ
ಇತರರ ಲಾಲಿಸುತ್ತೇನೆ...

ಒಮ್ಮೊಮ್ಮೆ ಹಂಬಲಿಸುತ್ತೇನೆ...
ಸಂಜೆಯಾಗದಿರಲಿ,
ಇಲ್ಲವೇ...
ಅಮ್ಮನ ಮನೆಯೇ
ನೆನಪಾಗದಿರಲಿ...

Thursday 3 June 2021

ಮಕ್ಕಳು-(ಕವಿತೆ)

ಮಕ್ಕಳು...

ನಿಮ್ಮ ಮಕ್ಕಳು ನಿಮ್ಮವಲ್ಲ...
ನಿಮ್ಮ 'ಬಯಕೆ'ಯ ಕೂಸುಗಳು...
ನಿಮ್ಮ ಮುಖಾಂತರ ಬಂದಿರಬಹುದು...
ನಿಮಗಾಗಿಯೇ ಅಲ್ಲ,
ನಿಮ್ಮ ಜೊತೆಗಿರಬಹುದು, 
ಆದರೂ ನಿಮ್ಮವರಲ್ಲ.

ಅವರಿಗೆ ನಿಮ್ಮ ಪ್ರೀತಿ ಕೊಡಬಲ್ಲಿರಿ...
ನಿಮ್ಮ ಯೋಚನೆಗಳನ್ನಲ್ಲ...
ಅವರಿಗೆ ತಮ್ಮವೇ ವಿಚಾರಗಳುಂಟು.
ನೀವವರ ಶರೀರಗಳಿಗೆ ಆಸರೆ ಕೊಡಬಲ್ಲಿರಿ...ಮನಸ್ಸುಗಳಿಗಲ್ಲ.
ಅವರ ಆತ್ಮ/ ಮನಸ್ಸುಗಳು 
ಅವರ 'ನಾಳೆ' ಗಳಲ್ಲಿವೆ...

ನೀವು ತಪ್ಪಿಯೂ ಕನಸಿನಲ್ಲಿಯೂ
ಅವುಗಳನ್ನು ಮುಟ್ಟಲಾರಿರಿ.
ಅವರಂತೆ ನಿಮಗೆ ಆಗಬೇಕೆನಿಸುವಷ್ಟು
ಚಂದದ ಬದುಕು ಅವರದಾಗಬಹುದು.
ಬದುಕೆಂದೂ ಹಿಮ್ಮುಖವಾಗಿ ಹರಿಯಲಾರದು, 
ಅದಕ್ಕೆ  ಕಿಂಚಿತ್ತೂ 'ನಿನ್ನೆ'ಯ ಹಂಗಿಲ್ಲ...

ಮುಂದೆ ಚಿಮ್ಮುವ ಬಾಣಗಳಿಗೆ 
ನೀವು ಬರೀ 'ಬಿಲ್ಲು' ಮಾತ್ರ...
ನಿಮ್ಮ ಮಕ್ಕಳದು ಮುಂದಿರುವ ತಮ್ಮ ಗುರಿಯತ್ತ ನೆಟ್ಟ ನೋಟ, 
ತಮಗೆ  ಬೇಕಾದಂತೆ ನಿಮ್ಮನ್ನು 
ಬಾಗಿಸಿ ಆದಷ್ಟೂ ದೂರ
ತಮ್ಮ ಬಾಣ ಚಿಮ್ಮಿಸುವ ಆಶೆಯವರದು...

ಗುರಿಕಾರನ ಮರ್ಜಿಗೆ 
ಬಾಗುವದೊಂದೇ ನಿಮ್ಮ ಖುಶಿ...
ಆ ದೇವರಿಗೂ ತಾ ಬಿಡುವ ಬಾಣ 
ದೂರ ಹೋಗಲೇಬೇಕು ಎಂದು
ಇದ್ದಂತೆ, ಅದನ್ನು ಚಿಮ್ಮಿಸುವ ಬಿಲ್ಲೂ
ಗಟ್ಟಿಯಾಗಿರಬೇಕೆಂಬಾಸೆ...🙏🙏🙏

ಮೂಲ:ಖಲೀಲ್ ಗಿಬ್ರಾನ್...
ಕನ್ನಡಕ್ಕೆ: ಶ್ರೀಮತಿ, ಕೃಷ್ಣಾ ಕೌಲಗಿ...

Saturday 29 May 2021

ಫೋನಾನುಬಂಧ...

ಫೋನಾನುಬಂಧ...

ನಾನು ಸಾಮಾನ್ಯವಾಗಿ ನನ್ನ ಸ್ನೇಹಿತರು/ ಸಂಬಂಧಿಕರೆಲ್ಲರ ನಂಬರ್ಗಳನ್ನು ಹೆಸರು ಹಾಕಿಯೇ ಸಂಗ್ರಹಿಸಿದ್ದೇನೆ. ನೆನಪಿಡಲಾಗುವದಿಲ್ಲ ಎಂಬುದು ಮುಖ್ಯ ಕಾರಣವಾದರೂ ಈಗೀಗ ಯಾರು/ ಯಾವ ಸಂಖ್ಯೆಗಳಿಂದ 
Fake calls ಮಾಡ್ತಾರೋ ಅನ್ನುವುದೂ ಒಂದು ಆತಂಕದ ಅಂಶ. ಮೂರನೇಯದಾಗಿ ಹೆಸರು ನೋಡಿ ಸಧ್ಯ ತೆಗೆದುಕೊಳ್ಳಲೇಬೇಕಾ? ಅರ್ಜೆಂಟ್ ಅಂತ ಇಲ್ಲದಿದ್ದರೆ ಕಾಯಬಹುದಾ? ಎಂಬುದೂ ತಿಳಿಯುತ್ತದೆ. ಆದರೆ Lock down ಆದಾಗಿನಿಂದ ನನ್ನ ಈ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತ ವಾಗಿ ಹೋಗಿದೆ. ನಮ್ಮ ಹುಟ್ಟೂರಿನ ಬಾಲ್ಯದ ಗೆಳತಿಯರಿಂದ ಹಿಡಿದು, ನನ್ನ ಸಂಬಂಧಿಕರು, ಸಹೋದ್ಯೋಗಿಗಳು, ಪರಿಚಯಸ್ಥರು, ನಾವು ಇದ್ದು ಬಂದ ಎಲ್ಲ ಮನೆಗಳ  ಹಳೆಯ ಸ್ನೇಹಿತೆಯರು ನೆನಪಿಸಿಕೊಂಡು, ಫೇಸ್ಬುಕ್ ನಲ್ಲಿ ನೋಡಿ, ಸ್ನೇಹಿತರ common friends' list ನಲ್ಲಿಂದ ಮಾಹಿತಿ ಪಡೆದು ಸಂಪರ್ಕಿಸುತ್ತಿದ್ದಾರೆ.ಒಂದು ವರ್ಷಕ್ಕೂ ಮೇಲ್ಪಟ್ಟು  ಭೇಟಿಯಾಗದೇ, ಮಾತಾಡಲೂ ಆಗದೇ,ಪರಸ್ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂ ಆಗದೇ ಸದಾ ಒಂದು ರೀತಿಯ ಆತಂಕದಲ್ಲಿಯೇ ಅಕ್ಷರಶಃ ಏಕಾಂಗಿ ಬದುಕನ್ನು ಕಳೆಯುತ್ತಿರುವ ಎಲ್ಲರಿಗೂ ಹತಾಶ ಭಾವ ಕಾಡುವದು ತಾರಕ್ಕೇರುತ್ತಿದೆ.
ಮನೆಯಲ್ಲಿ ಜನವಿದ್ದರೂ ಎಲ್ಲರಿಗೂ ತಮ್ಮ ತಮ್ಮ  ಆದ್ಯತೆಗಳ ಕಾರಣದಿಂದಾಗಿ ಒಬ್ಬರಿಗೊಬ್ಬರು ವೇಳೆ ಕೊಡಲಾಗುತ್ತಿಲ್ಲ.

   ‌ ಇದೂ ಅನಿವಾರ್ಯತೆ  ಎಂದು ಅಂದುಕೊಂಡರೂ ಅನಿಶ್ಚಿತತೆ ದಿನದಿಂದ ದಿನಕ್ಕೆ ಬೆಳೆಯುತ್ತಾ ದೀರ್ಘವಾಗುತ್ತಲೇ ‌ ಇರುವದೊಂದು ತೀರದ ಸಮಸ್ಯೆಯಾಗಿದೆ. ಕಾರಣ ಒಳಒತ್ತಡದ ಪರಿಹಾರೋಪಾಯವಾಗಿ ಈ ಕರೆಗಳು,(calls) ಎಂಬುದು ಸರ್ವವಿದಿತ... ಡಾಕ್ಟರುಗಳು/ ಮಾನಸಿಕ ತಜ್ಞರದೂ ಇದೇ ಅಭಿಪ್ರಾಯವಾಗಿದ್ದು ಅದು ಧನಾತ್ಮಕವಾಗಿ  ಕೆಲಸ ಮಾಡುತ್ತಿದೆ. ಆ ಕಾರಣಕ್ಕಾಗಿಯೇ ಯಾವುದೇ  ಕರೆ ಬಂದರೂ ತೆಗೆದುಕೊಂಡು ಅರ್ಜೆಂಟ್ ಇಲ್ಲದಿದ್ದರೆ / ನಾನು ವ್ಯಸ್ತಳಿದ್ದರೆ  ಮತ್ತೆ ವೇಳೆ ತಿಳಿಸಿ ಕರೆ ಮಾಡುತ್ತೇನೆ. ಅದು ಉಭಯತರಿಗೂ refresh ಆದಂತೆ ಆಗುತ್ತದೆ. ಸಧ್ಯ ಬಹುತೇಕರಿಗೆ ಫೋನ್ ಆಪತ್ಭಾಂದವ/ ಆಪ್ತಮಿತ್ರ. ಮೊನ್ನೆ ಒಂದೇ ಒಂದು ಗಳಿಗೆ ಈ ಹೊತ್ತಿನಲ್ಲಿ  phone ಎಂಬುದೇ ಇರದಿದ್ದರೆ ಎಂದು  ಯೋಚಿಸಿದಾಗ ಅಕ್ಷರಶಃ ಬೆಚ್ಚಿಬಿದ್ದೆ. ಹೆಚ್ಚು ಆ ವಿಚಾರದಲ್ಲಿ ಕಳೆದುಹೋಗದೇ  ಎಚ್ಚರಗೊಂಡೆ..

Wednesday 26 May 2021

ನಾವಿರುವುದು...

ನಾವಿರುವುದು...

ನಾವು ಪ್ರದರ್ಶನಕ್ಕಿಲ್ಲ,
ನಾವು ಮಾರಾಟಕ್ಕಿಲ್ಲ

ನಾವಿರುವಿದು ಕುರುಹಾಗಿ,
ನಾವಿರುವುದು ನೆನಹಾಗಿ,

ನಾವಿರುವುದು ಹೆಮ್ಮೆಯಾಗಿ,
ನಾವಿರುವುದು ಗೆಲ್ಮೆಯಾಗಿ...

ನಾವಿರುವುದು ಮಾದರಿಯಾಗಿ,
ನಾವಿರುವುದು ಮುಂದಾರಿಯಾಗಿ...

ನಾವಿರುವುದು ಶಕ್ತಿ ರೂಪವಾಗಿ...
ನಾವಿರುವುದು ಭಕ್ತಿ ಸಾಧನೆಯಾಗಿ.

ನಾವಿರುವುದು ಉತ್ತೇಜನಕ್ಕಾಗಿ.
ನಾವಿರುವುದು ಸತ್-ಚೇತನಕ್ಕಾಗಿ.

ನಾವಿರುವುದು ಗುಣ ಮಾನ್ಯತೆಗಾಗಿ.
ನಾವಿರುವುದು ಬಾಳ ಧನ್ಯತೆಗಾಗಿ.



Sunday 23 May 2021

ನಿಮಗೆ ನೀವೇ ವೈದ್ಯರು...

ನಿಮಗೆ ನೀವೇ ವೈದ್ಯರು
ನೀವೇ ನಿಮ್ಮನ್ನು ಗುಣಪಡಿಸಬಲ್ಲಿರಿ...

ಸೂರ್ಯನ  ಬೆಳಕಿನಲ್ಲಿ,
ಚಂದ್ರನ ಶೀತಲ ಕಿರಣಗಳಲ್ಲಿ
ಹರಿಯುವ ನದಿಯ ಕಲಕಲದಲ್ಲಿ,
ಜಲಪಾತಗಳ ಅಬ್ಬರದಲ್ಲಿ,
ಕಡಲಿನ ಮೊರೆತದಲ್ಲಿ,
ಹಕ್ಕಿಗಳ ರೆಕ್ಕೆಗಳ ಬಡಿತದಲ್ಲಿ
ನಿಮಗೆ  ನೀವೇ
'ಉಪಚಾರ' ಮಾಡಬಲ್ಲಿರಿ...

ನಿಮ್ಮಂಗಳದ ಗಿಡಮೂಲಿಕೆಗಳಲ್ಲಿ,
ಸಕ್ಕರೆಯ ನುಡಿಗಳಲ್ಲಿ,
ಅಕ್ಕರೆಯ ಆಲಿಂಗನದಲ್ಲಿ,
ನಕ್ಷತ್ರಗಳ ಬೆಳಕಿನಲ್ಲಿ ಆಸ್ವಾದಿಸುವ
ಚೊಕ್ಕ ಪೇಯಗಳಲ್ಲಿ,
ನಿಮಗೆ ನೀವೇ ಆರೈಕೆ ಕೊಡಬಲ್ಲಿರಿ...

ತಂಗಾಳಿಯ ತಂಪು ಚುಂಬನಗಳಲ್ಲಿ,
ಮಳೆಹನಿಗಳ ಮತ್ತಿನಲ್ಲಿ,
ಹಸಿರು ಹುಲ್ಲ ಮೇಲಿನ
ಬರಿಗಾಲ ನಡಿಗೆಯಲ್ಲಿ,
ನಿಮ್ಮಂತರಂಗದ ಪಿಸುದನಿಯಲ್ಲಿ,
ವಿಶ್ವ ದರ್ಶನ ಮಾಡಿಸುವ
ಮೂರನೇ ಕಣ್ಣಿನಲ್ಲಿ,
ನಿಮ್ಮನ್ನೇ ನೀವು
ಗುಣಪಡಿಸಬಲ್ಲಿರಿ...

ಮಾತು,ಮೌನ,ಹಾಡು, ಕುಣಿತಗಳಲ್ಲಿ,
ಪ್ರೀತಿ,ಪ್ರೇಮ,ಕರುಣೆ ಅನುಕಂಪಗಳಲ್ಲಿ,
ಸರಳ,ಸುಂದರ,ಸುಲಲಿತ ಜೀವನ ಶೈಲಿಯಲ್ಲಿ,
ನಿಮಗೆ ನೀವೇ ವೈದ್ಯರಾಗ ಬಲ್ಲಿರಿ...❤️❤️❤️...

ಸೂರ್ಯನ  ಬೆಳಕಿನಲ್ಲಿ,
ಚಂದ್ರನ ಶೀತಲ ಕಿರಣಗಳಲ್ಲಿ
ಹರಿಯುವ ನದಿಯ ಕಲಕಲದಲ್ಲಿ,
ಜಲಪಾತಗಳ ಅಬ್ಬರದಲ್ಲಿ,
ಕಡಲಿನ ಮೊರೆತದಲ್ಲಿ,
ಹಕ್ಕಿಗಳ ರೆಕ್ಕೆಗಳ ಬಡಿತದಲ್ಲಿ
ನಿಮಗೆ  ನೀವೇ
'ಉಪಚಾರ' ಮಾಡಬಲ್ಲಿರಿ...

ನಿಮ್ಮಂಗಳದ ಗಿಡಮೂಲಿಕೆಗಳಲ್ಲಿ,
ಸಕ್ಕರೆಯ ನುಡಿಗಳಲ್ಲಿ,
ಅಕ್ಕರೆಯ ಆಲಿಂಗನದಲ್ಲಿ,
ನಕ್ಷತ್ರಗಳ ಬೆಳಕಿನಲ್ಲಿ ಆಸ್ವಾದಿಸುವ
ಚೊಕ್ಕ ಪೇಯಗಳಲ್ಲಿ,
ನಿಮಗೆ ನೀವೇ ಆರೈಕೆ ಕೊಡಬಲ್ಲಿರಿ...

ತಂಗಾಳಿಯ ತಂಪು ಚುಂಬನಗಳಲ್ಲಿ,
ಮಳೆಹನಿಗಳ ಮತ್ತಿನಲ್ಲಿ,
ಹಸಿರು ಹುಲ್ಲ ಮೇಲಿನ
ಬರಿಗಾಲ ನಡಿಗೆಯಲ್ಲಿ,
ನಿಮ್ಮಂತರಂಗದ ಪಿಸುದನಿಯಲ್ಲಿ,
ವಿಶ್ವ ದರ್ಶನ ಮಾಡಿಸುವ
ಮೂರನೇ ಕಣ್ಣಿನಲ್ಲಿ,
ನಿಮ್ಮನ್ನೇ ನೀವು
ಗುಣಪಡಿಸಬಲ್ಲಿರಿ...

ಮಾತು,ಮೌನ,ಹಾಡು, ಕುಣಿತಗಳಲ್ಲಿ,
ಪ್ರೀತಿ,ಪ್ರೇಮ,ಕರುಣೆ ಅನುಕಂಪಗಳಲ್ಲಿ,
ಸರಳ,ಸುಂದರ,ಸುಲಲಿತ ಜೀವನ ಶೈಲಿಯಲ್ಲಿ,
ನಿಮಗೆ ನೀವೇ ವೈದ್ಯರಾಗ ಬಲ್ಲಿರಿ...❤️❤️❤️

Saturday 22 May 2021

ನಿನ್ನೆ_ಇಂದು_ ನಾಳೆ..

'ನಿನ್ನೆ'  'ನಾಳೆ ' ಹೇಗೋ ಎಂದು ಚಿಂತಿಸಿದ ದಿನವೇ-' ಇಂದು' ,
ಈ ದಿನ ಎಷ್ಟು ಸುಂದರವಾಗಿತ್ತೆಂದರೆ
ನಿನ್ನೆ ಇಂದಿನ ಬಗ್ಗೆ ಅದೇಕೆ ಅಷ್ಟೊಂದು
ಯೋಚಿಸಿದೆ, ತಿಳಿಯುತ್ತಿಲ್ಲ.
ಕಾರಣ, ಇಂದು ನಾನು ನಾಳೆಯ ಬಗೆಗೆ
ಚಿಂತಿಸುವುದಿಲ್ಲ.
ನಾಳೆ ಎಂಬುದೇ ಇಲ್ಲವೆಂಬಂತೆ
ಈ ದಿನವನ್ನು ಕಳೆಯುತ್ತೇನೆ...

'ನಾಳೆ' ಅನಿಸಿಕೊಂಡ 'ಇಂದಿ'ನ ಬಗ್ಗೆ 
'ನಿನ್ನೆ'  ಎಷ್ಟೊಂದು ಯೋಜನೆಗಳನ್ನು ಹಾಕಿಕೊಂಡಿದ್ದೆ.
ಬಹಳಷ್ಟು ನಿನ್ನೆ ಅಂದುಕೊಂಡಂತೆ
 ಇಂದು  ನಡೆಯಲೇಯಿಲ್ಲ.
ಕಾರಣ ಇಂದು' ನಾಳೆ' ಎಂಬುದೇಯಿಲ್ಲ ಎಂಬಂತೆ ಇರಬಯಸಿದ್ದೇನೆ...
ಕೇವಲ ಇಂದಿನ ಬಗ್ಗೆ
ಮಾತ್ರ ಯೋಚಿಸುತ್ತೇನೆ...
ನಾಳೆಯಂಬುದನ್ನು ಸಂಪೂರ್ಣ ಮರೆತು...

'ನಾಳೆ' ಎಂದು 'ನಿನ್ನೆ' ಅನಿಸಿಕೊಂಡಿದ್ದ 'ಇಂದಿಗೆ' ಎಷ್ಟೊಂದು ಹೆದರಿದ್ದೆ...
ಇಂದು ಅಂಥದೇನೂ ನಡೆಯದೇ ಕಳೆಯಿತು, ಕಾರಣ, ಇಂದಿನಿಂದ ಕಾಣದ್ದಕ್ಕೆ ಹೆದರುವುದು 
ಬಿಟ್ಟು, ಅದೊಂದು ಅನುಭವ ,ಕಲಿಕೆ ಎಂದು ಭಾವಿಸುತ್ತೇನೆ...
ನಿನ್ನೆಯಂತೆ ಇಂದು ಖಂಡಿತಾ ನಾಳೆಯ ಬಗ್ಗೆ  ಅಂಜುವುದಿಲ್ಲ...

'ನಾಳೆ' ಅನಿಸಿಕೊಂಡ 'ಇಂದಿ'ನ ಬಗ್ಗೆ 
ನಿನ್ನೆ ಹಲವು ಕನಸುಗಳ ಕಂಡಿದ್ದೆ, 
ಕೆಲವು ಇಂದು ನನಸಾಗಿವೆ...
ಕಾರಣ, ಇಂದೂ ನಾಳಿನ ಬಗ್ಗೆ ಕನಸು
ಕಾಣುತ್ತಿದ್ದೇನೆ, ಇಂದಿನ ಕೆಲವಾದರೂ ನಾಳಿನ ಮಟ್ಟಿಗೆ ನಿಜವಾಗಬಹುದು...

'ನಾಳೆ ' ಅನಿಸಿಕೊಂಡ 'ಇಂದಿನ' ಬಗ್ಗೆ 'ನಿನ್ನೆ' ನನ್ನ  ಕೆಲ ಗುರಿಗಳಿದ್ದವು...
ಕೆಲವನ್ನು ಇಂದು ಸಫಲವಾಗಿ ಮುಟ್ಟಿದ್ದೇನೆ, ಕಾರಣ, 'ಇಂದು' 
ಕೆಲ ಹೆಚ್ಚಿನ ಗುರಿಗಳನ್ನು ನಾಳೆಗಾಗಿ ಯೋಜಿಸುತ್ತಿದ್ದೇನೆ,
ಇಂದಿನಂತೆಯೇ ನಾಳೆಯೂ ನನ್ನ ಗುರಿಗಳು ಸಫಲವಾದದ್ದಾದರೆ,
ಮುಂದೊಂದು ದಿನ
'ನಿನ್ನೆ - ಇಂದು - ನಾಳೆ'ಗಳ ಹಂಗೇ ಇಲ್ಲದೇ ಒಂದು ದಿನ ಸಂಪೂರ್ಣವಾಗಿ
ಸಫಲನಾಗಬಹುದು..

ಗೆದ್ದೇ ಗೆಲ್ಲುತ್ತೇವೆ ನಾನು...

ಗೆದ್ದೇ  ಗೆಲ್ಲುತ್ತೇನೆ 
ನಾನು...
ಎಲ್ಲೆಡೆಗೂ ಗಾಢ ಕತ್ತಲು,
ತೀರದ  ಭಯ,
ಆದರೂ ಗೆದ್ದೇ
ಗೆಲ್ಲುತ್ತೇನೆ ನಾನು...

ಸೋತವರ ದನಿ
ಕಿವಿಯಲ್ಲಿ 
ಕೇಳುತ್ತಲೇ ಇದೆ,
ಆದರೂ ಗೆದ್ದೇ
ಗೆಲ್ಲುತ್ತೇನೆ ನಾನು...

ಏನೇ ಆಘಾತ 
ಬಂದಪ್ಪಳಿಸಲಿ, 
ಎದ್ದು ನಿಲ್ಲುತ್ತೇನೆ ನಾನು...
ಕಾರಣ ಗೆದ್ದೇ
ಗೆಲ್ಲುತ್ತೇನೆ ನಾನು...

ಕಾರ್ಗತ್ತಲು 
ಎಷ್ಟೇ ಗಾಢವಿರಲಿ,
ಕತ್ತಲು, ಚುಕ್ಕಿಗಳ
ಹೊತ್ತು ತರುವುದು
ನನಗೆ ಗೊತ್ತು, 
ಹಾಗಾಗಿ ಗೆಲ್ಲುತ್ತೇನೆ ನಾನು...

ಜಗದ ಯಾವುದೇ
ಶಕ್ತಿ ನನ್ನನ್ನು ವಿಚಲಿತ
ಗೊಳಿಸದು...
ಪ್ರತಿ ಗಳಿಗೆ, ಪ್ರತಿ  ನಿಮಿಷ
ನಾನು ಹೆಚ್ಚುಹೆಚ್ಚು
ಬಲಗೊಳ್ಳುತ್ತೇನೆ.
ಹೀಗಾಗಿ ಗೆದ್ದೇ
ಗೆಲ್ಲುತ್ತೇನೆ ನಾನು...

'ಗೆದ್ದೇ ಗೆಲ್ಲುತ್ತೇನೆ'
ಎಂಬ ಛಲಗಾರ
ಗೆದ್ದೇ ಗೆಲ್ಲುತ್ತಾನೆ...
ಹಾಗಾಗಿ ಗೆದ್ದೇ
ಗೆಲ್ಲುತ್ತೇನೆ ನಾನೂ...👍👍👍.

ದೋಷ...

ಮನುಷ್ಯನೊಬ್ಬ
ಕೋಗಿಲೆಗೆ
ಹೇಳಿದ,
"ನೀನು 
ಕಪ್ಪಗಿರದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

ಕಡಲಿಗೆ
ಹೇಳಿದ,
"ನಿನ್ನ ನೀರು
ಉಪ್ಪಾಗಿರದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

ಗುಲಾಬಿಗೆ
ಹೇಳಿದ,
"ಛೆ!  ನಿನ್ನ ಸುತ್ತಲೂ
ಮುಳ್ಳುಗಳಿರದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

ಮೂರೂ ಸೇರಿ
ಅವನಿಗೆ
ಹೇಳಿದವು,
"ಅಯ್ಯಾ!
ನಿನಗೆ ಬರೀ
ಲೋಪಗಳನ್ನೇ
ಹುಡುಕುವ
ಗುಣವಿಲ್ಲದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

Friday 21 May 2021

ಹೀಗೊಂದು ಹಗಲು...

    ‌‌    " ಈ ಕೋವಿಡ್ ಸಮಯದಲ್ಲಿ ಅನೇಕ ಬಂಧು-ಬಳಗದವರನ್ನೋ, ಆತ್ಮೀಯರನ್ನೋ, ದೂರದ ಸಂಬಂಧಿಗಳನ್ನೋ, ಸ್ನೇಹಿತರನ್ನೋ ಕಳೆದು ಕೊಂಡಿರುತ್ತೀರಿ. ಆಗ ನಿಮ್ಮ ಬದುಕು ಹೇಗಿರುತ್ತದೆ?  ನೀವು ನಿಮ್ಮನ್ನು ಹೇಗೆ ಸಂಭಾಳಿಸುತ್ತೀರಿ? " ಅಂತೆಲ್ಲಾ ಪರಿಚಯಸ್ಥರು ಕೇಳುತ್ತಲೇ ಇರುತ್ತಾರೆ.
ತಕ್ಷಣಕ್ಕೆ ಏನು ಉತ್ತರಿಸಬೇಕೆಂದು ನನಗೆ ತೋಚುವುದಿಲ್ಲ. ನಮ್ಮ ದುಃಖ ಆ ದಿನಕ್ಕೆ, ಆ ಕ್ಷಣಕ್ಕೆ ಹೇಗಿರಬೇಕೋ ಹಾಗಿರುತ್ತದೆ ಅಷ್ಟೇ. ನಿನ್ನೆ ತುಂಬಾ ಖಿನ್ನಳಾಗಿದ್ದೆ, ಈ ದಿನ ಕೊಂಚ ಪರವಾಗಿಲ್ಲ, ನಾಳೆ ಹೇಗಿರುತ್ತದೋ ನನಗೇ ಗೊತ್ತಿಲ್ಲ ... ಹೀಗೆ ನಮ್ಮ ಉತ್ತರ ಗಳಿರುತ್ತವೆ/ ಇರಬಹುದು. ದುಃಖ ಅಂದರೇನು  ಏಂಬುದು ನಿಜವಾಗಿ ನನಗೆ ಈಗೀಗ ಸ್ವಲ್ಪ ಅರ್ಥವಾಗುತ್ತಿದೆ.

  ‌‌      ‌ ದುಃಖವೆಂಬುದೂ
ಒಂದು ಅನಿಯಂತ್ರಿತ ಶಕ್ತಿಯ ರೂಪ. ಅದನ್ನು ನಿಯಂತ್ರಿಸುವದಾಗಲೀ, ಶಬ್ದಗಳಲ್ಲಿ ಅದನ್ನು ವಿವರಿಸುವದಾಗಲೀ ಶಕ್ಯವಿಲ್ಲದ ಮಾತು.ಅದು ಅನುಭವಕ್ಕೆ ಮಾತ್ರ ಸಿಗುವಂಥದು. ತನಗೆ ಬೇಕಾದಂತೆ, ಬೇಕಾದಾಗ ಕಾಣಿಸಿಕೊಳ್ಳುತ್ತದೆ, ಯಾವಾಗೆಂದರೆ ಆಗ ತಂತಾನೇ ಶಮನವಾಗುತ್ತದೆ. ಅದೆಂದಿಗೂ ನಿಮ್ಮ ಮರ್ಜಿಗನುಗುಣವಾಗಿ ನಡೆಯುವುದಿಲ್ಲ. ಅದು ನಡೆಯುವುದು ತನ್ನಿಚ್ಛೆಯಂತೆ ಮಾತ್ರ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಥೇಟ್ ಪ್ರೀತಿಯ ಹಾಗೆಯೇ. ಪ್ರೀತಿಯ ವಿಷಯದಲ್ಲಿ ನಾವು ಹೇಗೆ ಏನನ್ನೂ ಮಾಡಲು ಸಾಧ್ಯವಿಲ್ಲವೋ ಥೇಟ್ ಹಾಗೆಯೇ ದುಃಖದ ವಿಷಯ ಕೂಡ. ಸಂಪೂರ್ಣ ವಿಧೇಯರಾಗಿ ಅದರೆದುರು ಮಂಡಿಯೂರಿ ಶರಣಾಗುವುದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ ಎಂದು ಅರಿತಾಗ
 ಮಾತ್ರ ಅದು ನಮ್ಮ ಸೂಕ್ತ ಪ್ರತಿಕ್ರಿಯೆಯಾಗಿ ಅಥವಾ ಪ್ರಾರ್ಥನೆಯಾಗಿ ಪರಿವರ್ತನೆಗೊಳ್ಳಲು ಸಾಧ್ಯ...

            ಅದು ಒಮ್ಮೆ ಸಾಧ್ಯವಾದರೆ ದುಃಖ ನಮ್ಮೊಂದಿಗೆ ಸಂಭಾಷಿಸಲು ಶುರು ಮಾಡುತ್ತದೆ. ನಮ್ಮ ಪ್ರೀತಿಯನ್ನು ವಿಶ್ಲೇಷಿಸುತ್ತದೆ, ಎಷ್ಟು ನಿಜ ಎಂಬುದರ ಅರಿವು  ಮಾಡಿಸುತ್ತದೆ,     ಬಿಟ್ಟು ಹೋದ ಆತ್ಮೀಯರು ಮುಂದೆಂದೂ ಬರುವುದಿಲ್ಲ, ಅವರ ನಗೆ ,ಮಾತು, ಸ್ಪರ್ಶ  ನಮಗಿನ್ನು ಸಿಗುವುದಿಲ್ಲ ಎಂಬುದನ್ನು ಮನಗಾಣಿಸುತ್ತದೆ.
ನಮ್ಮನ್ನು  ಮೀರಿದ ಶಕ್ತಿಯದುರು ನಾವು ಅಸಹಾಯಕರು, ಅದರೆದುರು ಮಂಡಿಯೂರಿ ಶರಣಾಗುವದೊಂದೇ ನಮಗೆ ಉಳಿಯುವ ಮಾರ್ಗವೆಂದು ಬುದ್ಧಿ ಹೇಳುತ್ತದೆ

               ನಮ್ಮನ್ನು ಬಿಟ್ಟು ಹೋದವರು ನಂತರ ಎಲ್ಲಿ ಹೋಗುತ್ತಾರೆ? ಹೇಗೆ ಇರುತ್ತಾರೆ ಎಂಬುದರ ಅರಿವು ನಮಗಾಗುವದಿಲ್ಲ, ಆಗಿ ಪ್ರಯೋಜನವೂ ಇಲ್ಲ...

             ನಮಗೆ ಗೊತ್ತಿರಬೇಕಾದದ್ದು ಒಂದೇ :  

           ನಾವು ನಮ್ಮನ್ನು
ಬಿಟ್ಟು ಹೋದವರನ್ನು ತುಂಬ ಪ್ರೀತಿಸುತ್ತಿದ್ದೆವು,ಈಗಲೂ ಪ್ರೀತಿಸುತ್ತೇವೆ, ಮುಂದೆಯೂ ಈ ಪ್ರೀತಿ ಮಾಸುವುದಿಲ್ಲ, ಅದು ಸದಾ ಸದಾ ಹಸಿರೇ...ಅವರನ್ನು ಪ್ರೀತಿಸುವ ಅವಕಾಶ ಬದುಕಿನಲ್ಲಿ ಒಮ್ಮೆ ಸಿಕ್ಕಿತ್ತು ಎಂಬ ಮಾತು ಸಹ ಸಣ್ಣದೇನಲ್ಲ.
ಅಲ್ಲವೇ?

Thursday 20 May 2021

ತಿಳಿಯುತ್ತಿಲ್ಲ...

ತಿಳಿಯುತ್ತಿಲ್ಲ...

ಮುಂಜಾನೆ  ಬಿಸಿಲು,
ಮಧ್ಯಾಹ್ನ  ಬಿರುಗಾಳಿ,
ಸಂಜೆಯಾಯಿತೋ
ಮಳೆಧಾರೆ...
ಇದಾವ ಋತು?
ತಿಳಿಯುತ್ತಿಲ್ಲ...

ದಿನವೊಂದು ಮಗ್ಗಲು
ಬದಲಾಯಿಸಿದರೂ
ನಿನ್ನೆಯಂತೆಯೇ-
ಬಹುಶಃ ಮುಂಬರುವ
ನಾಳೆಯಂತೆಯೇ-
ಎಂದಾದಾಗ 
ಇಂದಿನ ದಿನ
ಯಾವುದೆಂಬುದೇ
ತಿಳಿಯುತ್ತಿಲ್ಲ...

ಹಲವಾರು ಚಿತ್ತಭ್ರಮೆಗಳು ನರಕವೊಂದನ್ನು ಸೃಷ್ಟಿಸಿ,
ಕವಿದ  ಆ  ಮಬ್ಬಿನಲ್ಲಿ
ಮನಸು ಮರಗಟ್ಟಿದರೆ
ಆ ಮನಸ್ಥಿತಿಗೆ
ಏನೆನ್ನಬೇಕು
ತಿಳಿಯುತ್ತಿಲ್ಲ...

ಅಸ್ಪಷ್ಟ ಭಾವಗಳ ಮಧ್ಯೆ
ಅಳಿದುಳಿದ ಸತ್ಯದ
ಅವಶೇಷಗಳೂ,
ಮೂಲ ನಿಜವನ್ನೇ
ಮರೆಮಾಚುವಂತಾದರೆ
ಆ ಜಗವೆಂತಹದು
ತಿಳಿಯುತ್ತಿಲ್ಲ...

Tuesday 11 May 2021

MOTHER... ಅಮ್ಮ.( ಕವಿತೆ)

ಅಮ್ಮ ( ಕವಿತೆ)

Do you know
As a child
You curled up
On her lap
You grizzled in hunger
Cried in anger
Scratched her nose
Pulled her hair
She bore it all
With a smile 
And felt the thrill of pleasure 
In no small measure. 

Do you know
As a toddler
You rumbled
Behind her
You tripped 
And fell down
Many a time 
But bounced up
On your feet 
With a grin
After mom's warm hug.

Do you know
As a teenager 
You threw up tantrums 
You bloomed
In your teens
Groomed to look
A picture fair
And nestled
In the garden
Of your dreams 
As Mother's pride.

Do you know 
When you grew up
As a matured adult
She stood by you
To tide over
The trammels of life
She helped you herald
A NEW DAWN
With your loving partner 
On the bosom of LIFE.

HAPPY MOTHER'S DAY!

ತೊಡೆಯ ಮೇಲೆ 
ಹಾಲೂಡುವಾಗಲೇ
ಅವಳ ಕೂದಲು ಹಿಡಿದೆಳೆದೆ...
ಅಳುತ್ತಲೇ ಬಿಕ್ಕಳಿಸಿದೆ...
ಮುಖ ಪರಚಿದೆ,
ಆದರೂ ಅವಳು 
ನೋವು ನುಂಗಿ ನಕ್ಕಳು...
ಮನದಲ್ಲೇ  ಅಂದಳು,"
" ಹೀಗೇ ಅಲ್ಲವೇ ಮಕ್ಕಳು"-

ತೊಡರುಗಾಲಿಡುತ್ತ
ಅವಳನ್ನೇ ಸುತ್ತುತ್ತಿದ್ದೆ,..
ನಡುವೆ  ಆಯತಪ್ಪಿ
ಧಡಾರನೇ ಬೀಳುತ್ತಿದ್ದೆ,
ಅಮ್ಮ  ಕೈ ಚಾಚುತ್ತಲೇ
ಹನಿಗಣ್ಣಲ್ಲೇ ಅವಳ
ತೋಳು  ಸೇರುತ್ತಿದ್ದೆ...
ನಿನ್ನೊಂದಿಗೆ ಅವಳಿಗೂ
 'ಬಾಲ್ಯ'...
ಸಿಕ್ಕ ಹಾಗೆ ಬದುಕಿನ 
'ಮೌಲ್ಯ'...

'ಯೌವನದಲ್ಲಿ ನೀನಾಡದ ಆಟವಿಲ್ಲ,
ಕಾಣದ ನೋಟವಿಲ್ಲ,
ಅಮ್ಮನ ಕಂಗಳಲ್ಲಿಯೂ
ನಿನ್ನವೇ  ಕನಸು...
ಅವಳದು ಸದಾ
ನಿನ್ನತ್ತಲೇ  ಮನಸು...

ಬದುಕು ಹಸನಾದಾಗ,
ನಿನ್ನ 'ಗೂಡು' ಕಟ್ಟುವ 
ಬಯಕೆ...
ನಿನಗೆ ಸಂಗಾತಿ ಹುಡುಕಿ
ಜೊತೆ ಮಾಡುವ 
ನೆನಕೆ...
ಮನೆ ನಂದನವಾಗಿ.
ಆಡುಂಬೊಲವಾಗಲೆಂಬ
ಹಾರೈಕೆ...

ಇದಕೆಲ್ಲ ಒಂದೇ ಹೆಸರು...
'ಅಮ್ಮ'
ಅವಳಿಂದಲೇ ಬದುಕು 
ಹಸಿರು...

Friday 16 April 2021

ಅಡಿ ಜಾರಿ ಬೀಳುವುದು...
ತಡವಿಕೊಂಡೇಳುವುದು...

       ‌‌‌          I.B.S ಎಂಬ ಪಚನಕ್ರಿಯೆಗೆ ಸಂಬಂಧಿಸಿದ  ಒಂದು ಆರೋಗ್ಯದ ತಕರಾರಿದೆ.  Irritable  Bowel
syndrome_ ಅದರ ಪೂರ್ಣ ಹೆಸರು... ಅತಿ ಹೆಚ್ಚು ಪ್ರೋಟೀನಯುಕ್ತ ಆಹಾರ, ಅತಿ ಮಸಾಲೆ, ಕರಿದ ಪದಾರ್ಥಗಳು, ಹೈನು/ ಮೈದಾದಂಥ ನಿರ್ದಿಷ್ಟ ವಿಶಿಷ್ಟ ಆಹಾರಗಳನ್ನು  ಹೊಟ್ಟೆ  ಮಾನ್ಯ ಮಾಡುವದಿಲ್ಲ. ಅದು ಅತಿ ಗಂಭೀರ  ಆರೋಗ್ಯ ತಕರಾರೇನೂ ಅಲ್ಲ . ಆದರೆ ಗ್ಯಾಸ್, ಹೊಟ್ಟೆಯುಬ್ಬರ, ಮಲಬದ್ಧತೆ ಯಂಥ ಕಿರಿಕಿರಿ ಹೆಚ್ಚು ಮಾಡುತ್ತದೆ. ಹೀಗಾಗಿ ಅದನ್ನು  ಅಲಕ್ಷಿಸುವ, ಅಮಾನ್ಯ ಮಾಡುವ ಧೈರ್ಯ ಬರುವ ಪ್ರಮೇಯವೇಯಿಲ್ಲ.
ಹಾಗೇನಾದರೂ ಮಾಡಿದಿರೋ ಎರಡೇ ದಿನಗಳಲ್ಲಿ ಮಂಡೆಯೂರಿಸಿ ಕಿವಿ ಹಿಡಿಸಿ ಬಿಡುತ್ತದೆ...ಮುಂದೆ ಅದನ್ನು ಎಚ್ಚರತಪ್ಪಿಯೂ ಮರೆಯುವ ಹಾಗೇಯಿಲ್ಲ...
                           ನನಗೂ ಇತ್ತೀಚೆಗೆ I.B.S problem,  but  here  'B 'stands for  BRAIN...not  IRRITABLE  BOWEL...but irritable brain syndrome.  ಹಹಹ! ಗಾಬರಿ ಬೇಡ, ಅತಿ  ಹೆಚ್ಚು  ಸಾರವಿದ್ದು , ಗಂಭೀರ ವಿಷಯಗಳುಳ್ಳ ಲೇಖನಗಳು , ಪುಸ್ತಕಗಳು  ತಲೆಯೊಳಗೆ ಹೋಗಲು strike ಮಾಡುತ್ತಿವೆ. ಒತ್ತಾಯಿಸಿ ಒಳಹಾಕ ಹೋದರೆ ತಲೆ ನೋವು ಶುರುವಾಗುತ್ತದೆ,  ಇಲ್ಲವೇ ಕಣ್ಣುಗಳು ಓದುತ್ತವೆ- ಬುದ್ಧಿ  ಗ್ರಹಿಸುವದೇಯಿಲ್ಲ.
ಇಂಥ ಆಗ್ರಹದೋದು ಖುಶಿ ತರುವದರ ಬದಲು ಕಿರಿಕಿರಿ  ಎನಿಸಲು ಸುರುವಾಗುತ್ತದೆ.  ಓದಬೇಕೆಂದು ಆಶೆಯಿಂದ ಖರೀದಿಸಿದ ಪುಸ್ತಕರಾಶಿ ದಿನಾಲೂ  ಅಣಕಿಸುತ್ತದೆ. " ನಿನ್ನ ಯೋಗ್ಯತೆ ಗೊತ್ತಾಯಿತೇ" ಎಂದು ಛೇಡಿಸತೊಡಗುತ್ತವೆ,  ತಲೆದಿಂಬಿನ ಹತ್ತಿರದ ಪುಸ್ತಕ  ಒತ್ತತೊಡಗುತ್ತದೆ.
ಇದು ತಾತ್ಕಾಲಿಕವಾಗಿರಬಹುದು ಎಂದುಕೊಂಡು ಸಮಾಧಾನ  ಮಾಡಿಕೊಳ್ಳುತ್ತಿದ್ದೇನೆ. ಕೆಲವರಂತೂ  ಇತ್ತೀಚೆಗೆ   ತಮಗೂ ಹಾಗೇ ಆಗುತ್ತದೆ ಎಂದು ನನ್ನೊಂದಿಗೆ ಸ್ವರ ಜೋಡಿಸಿದಾಗ ಮನಸ್ಸಿಗೆ ಅದೇನೋ ಕೊಂಚ ಸಮಾಧಾನ. ಸಮಸ್ಯೆಗೆ ಪರಿಹಾರ ವಿರಬಹುದೆಂಬುದೊಂದು ದೂರದ ಆಶೆ. ದಿನಕ್ಕೊಂದು ಪುಸ್ತಕ ಜಿದ್ದಿಗೆ ಬಿದ್ದು ಓದಿದವಳು ನಾನು. ಈಗೀಗ ಒಂದು ವಾರವಾದರೂ ಅರ್ಧಮುಗಿಯುವದಿಲ್ಲ.
ಒಮ್ಮೆ ಹೆಚ್ಚುತ್ತಿರುವ ವಯಸ್ಸನ್ನು ಬಯ್ದು ಕೊಂಡರೆ, ಮತ್ತೊಮ್ಮೆ ಇತ್ತೀಚೆಗಿನ fb ಯು ಮುಗಿಯಲಾರದ ಗೀಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೇನೆ.

             ಕೋವಿಡ್ನಿಂದಾಗಿ ಕಣ್ಣುಪೊರೆಯ operation ಬಹುಕಾಲ ಮಾಡಿಸಲಾಗದೇ ಅನಿವಾರ್ಯವಾಗಿ ಓದುವುದು ನಿಂತಿದ್ದರಿಂದ ಆದ ಆಲಸ್ಯದ ಪರಿಣಾಮವೇ ಗೊತ್ತಾಗುತ್ತಿಲ್ಲ.‌ ಯಾವುದೇ ಕಾರಣದಿಂದ ಓದಿಗೆ ಹಿನ್ನಡೆಯಾಗಿರಬಹುದು ಎಂದುಕೊಂಡರೂ ನನ್ನ ಅತಿ ಮೆಚ್ಚಿನ ಹವ್ಯಾಸವೊಂದು  ನನಗೆ ಹೀಗೆ ಕೈಕೊಡುತ್ತಿರುವದು ಸಹಿಸಲಾಗುತ್ತಿಲ್ಲ..
 ಅಷ್ಟು ಸುಲಭವಾಗಿ ನಾನಾದರೂ ಸೋಲೊಪ್ಪಿಕೊಳ್ಳುವದಾದರೂ ಹೇಗೇ?? ಒಪ್ಪಿಕೊಂಡದ್ದೇ ಆದರೆ ವೇಳೆ ಕಳೆಯುವದಾದರೂ ಹೇಗೆ? ಬೆಂಗಳೂರಿನಲ್ಲಿ ಹೀಗೆ ಕಾಲಾಡಿಸಿಕೊಂಡು , ಕೆಲವರಿಗೆ Hi, Bye  ಹೇಳಿ ಅರ್ಧಗಂಟೆ ಕಳೆಯುವ ಮಾರ್ಗಗಳಿಲ್ಲ...ಪಕ್ಕದವರದೇ ಒಂದೊಂದು ವಾರ ಕಳೆದರೂ ಮುಖ ದರ್ಶನವಾಗುವ ಮಾತಿಲ್ಲ. ಈಗಂತೂ  ಕೋವಿಡ್ ನ ಎರಡನೇ ಅಲೆ ಸುರುವಾಗಿ ಸುದ್ದಿಗಳೂ ಗುಂಪಿನ WhatsApp ಮೂಲಕ ತಲುಪಬೇಕಾದ ಅನಿವಾರ್ಯತೆ. ಮನೆಯಲ್ಲಿ ನನ್ನಂತೆ ಒಬ್ಬರಾದರೂ ಲಭ್ಯವಿದ್ದರೆ ಆಗಾಗ ಫೋನ್ ಮಾಡಬಹುದಾದ ಮಹತ್ ಅವಕಾಶವಾದರೂ ಸಿಗುವದುಂಟು. ಇಲ್ಲದಿದ್ದರೆ  ಅದೂ ಇಲ್ಲದಾಗಿ ಬಹಳಷ್ಟು ಜನ TV ಮೊರೆಹೋಗುತ್ತಾರೆ...ನನಗದು
ಇತ್ತೀಚೆಗೆ  ತೀವ್ರ ಅಲರ್ಜಿ...ಕಥೆಯ ಗುಂಗು ಹಿಡಿಸಿಕೊಂಡು, ನೋಡಲು ಸಿಗದಾಗ ಏನೋ ಕಳೆದುಕೊಂಡಂತೆ  ವ್ಯಥೆ ಹಚ್ಚಿಕೊಂಡು ವರ್ಷಗಟ್ಟಲೇ ಮರುಗುವ ಜಾಯಮಾನ ನನ್ನದಲ್ಲ...ಅಲ್ಲದೇ ಎಲ್ರೂ ಒಟ್ಟಾಗಿ ಕೂತು ಟೀವಿ ನೋಡುತ್ತಿದ್ದ ಆ ಕಾಲ ಎಂದೋ ಇಲ್ಲದಾಗಿದೆ. ಹೀಗಾಗಿ ಆ ದಾರಿಯೂ ನನಗೆ ಬಂದ್...

 My never failing friends are they, With whom I converse day by day...

         _ ಎಂಬಂತೆ  ಓದು/ ಪುಸ್ತಕಗಳೇ  ನನ್ನ all time favourite ಆಗಿದ್ದು, ಆ ಹವ್ಯಾಸ  ಈಗ ನನ್ನ ಚಾಳಿ ಠೂ ಬಿಡಲು ಹೊಂಚು ಹಾಕುತ್ತಿದೆ. ಅಷ್ಟು ಸುಲಭವಾಗಿ ಕೈ ಚಲ್ಲಲು ಪುಸ್ತಕಗಳೇನು ಚುನಾವಣೆಯ ರಾಜಕೀಯ ವಿದ್ಯಮಾನಗಳನ್ನೊಳಗೊಂಡ ಕಲಸು ಮೇಲೋಗರದ ಪತ್ರಿಕೆಗಳೇ?

       ‌‌‌        ಕೆಲಕಾಲ ನನ್ನನ್ನು ಸೋಲಿಸಿದ  ಭ್ರಮೆಯ  ಸುಖವನ್ನು ಮನಸ್ಸೂ  ಒಂದಿಷ್ಟು  ಅನುಭವಿಸಲಿ...ನಾನೂ ನೋಡುತ್ತೇನೆ...ಎಷ್ಟು ದಿನ ಹೂಂಕರಿಸೀತು ಈ IBS_ Irritable  Brain Syndrome...( ನಾನೇ  ಕೊಟ್ಟ ಹೆಸರು, ಮೆದುಳಿನ ಆಲಸ್ಯ ರೋಗ)...ಹ..ಹ..ಹ.

ದುಡುಕಿ ಮತಿ ತಪ್ಪುವುದು,
ತಪ್ಪನೊಪ್ಪೆನ್ನುವದು
ಬದುಕೆಂದರಿದು ತಾನೇ??? 

ಎಂದು ಡಿವಿಜಿಯವರೇ ' ಕಗ್ಗದಲ್ಲಿ'
ಹೇಳಿಲ್ಲವೇ? ಅಂದ ಮೇಲೆ ನಮ್ಮದೇನು ಹೆಚ್ಚುಗಾರಿಕೆ?

Sunday 11 April 2021

ಹೀಗೂ ಒಂದು ಯುಗಾದಿ...

ಹೀಗೂ ಒಂದು ಯುಗಾದಿ...

ಯುಗಾದಿ...
ಹಿಂದೆಯೂ ಬಂದಿತ್ತು,
ಇಂದೂ ಬಂದಿದೆ,
ಮುಂದೂ ಬರುತ್ತದೆ,
ಹೊಸದೇನನ್ನೋ ತರುತ್ತದೆ...

ಈ ಸಲ...
ಬೇವಿಗೆ ಕಹಿ ಹೆಚ್ಚಿದೆ,
ಬೆಲ್ಲಕ್ಕೆ ಸಿಹಿಯಿನ್ನೂ ಬೇಕಿದೆ,
ಇರಬೇಕೊಂದಿಷ್ಟು ಸಂಯಮ,
'ಪರಿವರ್ತನೆ'  ಜಗದ ನಿಯಮ...

ಬದುಕು...
ನಿರಂತರ ಕಲಿಸುತ್ತದೆ,
ಅತ್ತು-ಅಳಿಸಿ  ತಿಳಿಸುತ್ತದೆ,
ನಕ್ಕು-ನಗಿಸಿ ಹರಸುತ್ತದೆ,
ಬೇವು-ಬೆಲ್ಲ 'ಸಮ'ವಿರಿಸುತ್ತದೆ

ಹೊಸವರ್ಷ,
ಬರುತ್ತಲೇ ಇರುತ್ತದೆ, 
ಹೊಸಲೆಕ್ಕ ಇಡುತ್ತದೆ,
ಮತ್ತೇನೋ ಬದಲಿಸುತ್ತದೆ,
ನಮ್ಮನ್ನೂ ಮಣಿಸುತ್ತದೆ.

ಅಂತೆಯೇ...
'ಕೊರೋನಾ ಚಿಂತೆ ಬಿಡೋಣ,
ಅಂತೆ-ಕಂತೆಗಳ  ಸರಿಸಿಡೋಣ,
ನಾವು-ನಾವೇ ಹಬ್ಬಮಾಡೋಣ,
ಒಳ್ಳೆಯದಾಗಲೆಂದು ಬೇಡೋಣ...

ಕಾರಣದನು
ಬರಮಾಡಿಕೊಳ್ಳೋಣ,
ಒಳ್ಳೆಯದ ನೆನೆಯೋಣ,
ಬೇಡದುದ ಮರೆಯೋಣ,
ಮುಂದ್ಮುಂದೆ ನಡೆಯೋಣ...

    ***   ***  ***  ***  ***  ***
        





















Saturday 10 April 2021

ಹಾಗೇ ಸುಮ್ಮನೇ...

ದಾರಿಯಾವುದಯ್ಯಾ ಸಂತೋಷಕೆ..

             ಮಕ್ಕಳದೆಲ್ಲ ಪರೀಕ್ಷೆ ಮುಗಿದು   ಬೇಸಿಗೆ ರಜೆ ಪ್ರಾರಂಭವಾಗಿದೆ..ಹಾಗೆಯೇ ಬೇಸಿಗೆಯ ಚಟುವಟಿಕೆಗಳು ಸಹ...ಬೆಂಗಳೂರಿನಲ್ಲಿ ಬೇಸಿಗೆಯ ಶಿಬಿರಕ್ಕೆ ಮಕ್ಕಳನ್ನು  ಕಳಿಸುವದು ಸುಲಭವಲ್ಲ...ಕಾರಣ  ಪಾಲಕರದೇ ಒಂದು group ಮಾಡಿಕೊಂಡು ,ಒಬ್ಬೊಬ್ಬರು ಒಮ್ಮೊಮ್ಮೆ  lead ತೆಗೆದುಕೊಂಡು ಮಕ್ಕಳನ್ನು ರಂಜಿಸುವ plan ಮಾಡುತ್ತಾರೆ...ಬಹಳ ದಿನಗಳ ರಜೆಯಲ್ಲಿ ಇಷ್ಟು ಸಾಕಾಗುವದಿಲ್ಲ..ಆವಾಗ sleep over ಅಂದರೆ ಒಂದೆರಡು ದಿನಗಳು ಸ್ನೇಹಿತರ ಮನೆಯಲ್ಲಿಯೇ ಇರುವ ಯೋಜನೆ ಹಾಕುತ್ತಾರೆ...
     ‌          ಹಾಗೇ ನಮ್ಮ ಮನೆಯಲ್ಲೂ ಎರಡು ದಿನಗಳಿಂದ ಮಕ್ಕಳಿದ್ದರು...ಅವರನ್ನು ಸಹಜವಾಗಿ ಮಾತಾಡಿಸಿದಾಗ ಒಬ್ಬ ಹೇಳಿದ ,"ಒಂದು ಹದಿನೈದು ದಿನ‌ Italy ಗೆ‌ ಹೋಗುತ್ತಿದ್ದೇವೆ ಆಂಟಿ." ಮತ್ತೊಬ್ಬ ಹೇಳಿದ, ನಮ್ಮ cousin ನ convocation ಗೆ US ಗೆ ಹೋಗ್ತೀವಿ next week...
            ನಾನೇನೂ ಬೆಚ್ಚಿ ಬೀಳಲಿಲ್ಲ ...ಯಾಕಂದರೆ ನನ್ನ ಒಬ್ಬ ಮೊಮ್ಮಗ ರಜೆಗೆಂದು London ನಲ್ಲಿ ಇದ್ದು ಹತ್ತು ದಿನಗಳ ನಂತರ ಸಧ್ಯ ವಾಪಸ್ ಬರಲು flight ನಲ್ಲಿ ಇದ್ದಾನೆ...ಇನ್ನೊಬ್ಬ ಮೊಮ್ಮಗ ಇನ್ನೆರಡು ತಾಸಿಗೆ   ರಜೆಗೆ Zurich ಗೆ ಹೋಗಲು Air port taxi ಹಿಡಿಯುವವನಿದ್ದಾನೆ..ಇದು ಇಪ್ಪತ್ತು  ದಿನಗಳ Schedule..
             ಇದನ್ನೆಲ್ಲ ನೋಡಿದಾಗ ನಾವು ಅಜ್ಜಿಯ ಮನೆಗೆ  ಸೂಟಿಗೆ ಹೋಗುತ್ತಿದ್ದುದು ನೆನಪಾಯಿತು...ರಟ್ಟೀಹಳ್ಳಿಯಿಂದ ಐದು ಮೈಲು ಮಾಸೂರು..ಅದೇ ಅಜ್ಜಿಯ ಮನೆ...ಅಲ್ಲಿ ಹೊರಡುವಾಗಿನ ಉತ್ಸಾಹ ನೆನಸಿಕೊಂಡರೆ, ನಂತರದ ವಿದೇಶ ಪ್ರವಾಸಗಳೂ  ಸಪ್ಪೆ..ಸಪ್ಪೆ..ಕಾರಣಗಳನ್ನು ವಿಶ್ಲೇಷಿದಾಗ  ಎರಡು ಕಾರಣಗಳು ಸ್ಪಷ್ಟವಾಗಿ ಕಂಡವು...
   ‌‌           ಅದು ಬಾಲ್ಯ...ಗಂಗೆ ಗಂಗೋತ್ರಿಯಲ್ಲಿ ಮಾತ್ರ ಶುದ್ಧ ಅಂತಾರಲ್ಲ ಹಾಗೆ..ಮನಸ್ಸಿನಲ್ಲಿ ರಾಗ ,ದ್ವೇಷಗಳಿಲ್ಲ...ಸಣ್ಣ ಸಣ್ಣ ಖುಶಿಯೂ ನೇರ ಹೃದಯದಾಳಕ್ಕೆ...ಮಾತು,ಕತೆ,ಊಟ,ತಿಂಡಿ, ಎಲ್ಲವೂ ಸಾರ್ವಜನಿಕ..ಸಾಮೂಹಿಕ...' ನಾನು' ಅಂದದ್ದು ನೆನಪೇಯಿಲ್ಲ.. ಎಲ್ಲೆಲ್ಲಿಯೂ,ಎಲ್ಲ ಕಾಲಕ್ಕೂ ನಾವು...ನೇರ ಸಂಬಂಧಿಕರಲ್ಲದಿದ್ದರೂ ಆಪ್ತೇಷ್ಟರ ಮನೆಗೂ ಹೋಗಿ ಕೆಲದಿನ ಯಾವುದೇ ಮುಲಾಜಿಲ್ಲದೇ ಹೋಗಿ ಬರುವಷ್ಟು ಆಪ್ತತೆ...ಎಷ್ಟೋಸಲ ಆಡಲು ಹೋದ ಮಕ್ಕಳು ಆಟದ ಬಯಲಿನಿಂದಲೇ ಯಾವುದೋ ಮಾಮಾ,ಚಾಚಾರ ಮನೆಗೆ ಹೋದ ಸಮಾಚಾರ ಸಂಬಂಧಿತರ ಮುಖಾಂತರ ಮನೆ ತಲುಪುವದೂ ಇತ್ತು...ಬಟ್ಟೆ ಬರೆಯ ಯೋಚನೆಯೂ ತಲೆಯಲ್ಲಿ ಹೋಗದಷ್ಟು ಎಲ್ಲರೂ ನಿರಾಳ...ಎಲ್ಲರವೂ ಉಳಿದವರಿಗೆ  ಮಾನ್ಯ...
      ‌‌‌        ಇದು ನಮ್ಮ ಬಾಲ್ಯ...ಈಗ ಬೆಂಗಳೂರಲ್ಲಿ ಯಾರನ್ನು ಯಾರೂ ನಂಬದಷ್ಟು ಅಪನಂಬಿಕೆ...ಅದು ಬ್ರಹತ್ ನಗರಗಳ  ಸಾಮಾನ್ಯ ಗುಣಲಕ್ಷಣ...ಕೆಲ ಆತ್ಮೀಯರು ಅಂತಾದರೆ ಮೇಲೆ ಹೇಳಿದ ಹಾಗೆ ಒಂದೆರಡು ದಿನಗಳ sleep over ಭಾಗ್ಯ...ಇಲ್ಲದಿದ್ದರೆ ಯಾವುದಾದರೂ day care ಇಲ್ಲವೇ full time maid ಗಳ ಉಸ್ತುವಾರಿ..ಅದೂ ಸಂಪೂರ್ಣ ನಿಶ್ಚಿಂತೆಯಿಂದಲ್ಲ...ಒಂದು ಡೆಮೊಕ್ಲಸ್ ಕತ್ತಿ ಸದಾ ನೆತ್ತಿಯ ಮೇಲೆ...ಯಾರು ಹೇಗೋ,ಜೊತೆಗಿರುವ ಮಕ್ಕಳು ಎಂಥವೋ...ಎಂಬಂಥ ಹತ್ತು,ಹಲವು ಯೋಚನೆಗಳು ಸದಾ ಒತ್ತಡ,ಭಯ,ಅಕಾಲಿಕ ವೃದ್ಧಾಪ್ಯಗಳಲ್ಲಿ ಪರ್ಯಾವಸಾನ....
               ಓಡುವ ಸಮಾಜದೊಂದಿಗೆ ಓಡಿ ಕಾಲಕ್ಕೆ ಶರಣಾಗುವದೋ,ಅದನ್ನು ನಿರಾಕರಿಸಿ ಹಿಂದುಳಿದು ಬದುಕಿನ ಅವಕಾಶಗಳಿಂದ ವಂಚಿತರಾಗಿ ಜೀವನ ಪರ್ಯಂತ  ಪರಿತಪಿಸುವದೋ ನಿರ್ಣಯ ಸುಲಭವಿಲ್ಲ...ಬಹುಕಾಲ ತಮ್ಮದೇ ವರ್ತುಲದಲ್ಲಿ ತಮಗೆ ಬೇಕಾದಂತೆ ಜೀವನ ಕಳೆದ ಪಾಲಕರಿಗೆ ವೃದ್ಧಾಪ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ಬದಲಿಸಿಕೊಂಡು ಮಕ್ಕಳ ಬಳಿ ಇರುವದು ಸುಲಭವೂ ಅಲ್ಲ...ಎಲ್ಲರಿಗೂ ಮನಸ್ಸು ಇರುವದಿಲ್ಲ..ಹೀಗಾಗಿ ಅಜ್ಜ ಅಜ್ಜಿ ಇದ್ದರೂ ಮಕ್ಕಳಿಗೆ ಅವರ ಸಾಂಗತ್ಯ ಸಿಗುವದಿಲ್ಲ..ಭಾಷಾ ತೊಂದರೆ, ಯಾವಾಗಲಾದರೂ ಬರುವಿಕೆ,ವಿಚಾರ ಸಾಮ್ಯತೆ ಗಳ  ಅಂತರಗಳಿಂದಾಗಿ ಉಭಯತರಲ್ಲೂ ಅನ್ಯೋನ್ಯತೆಯ ಕೊರತೆಯ ಸಾಧ್ಯತೆ ಹೆಚ್ಚು...ಒಂದುವೇಳೆ ಹೇಗೋ ಹಿರಿಯರೂ ಹೊಂದಿಕೊಂಡರೆನ್ನಿ...,ಮಕ್ಕಳ ಲಕ್ಷ್ಯ ಸೆಳೆಯುವ ಹತ್ತಾರು gadgets ಗಳಿಂದಾಗಿ ಪಕ್ಕದಲ್ಲಿದ್ದರೂ ಮೈಲು ದೂರ...
              ಕೂಡಿಸುವ ಒಂದೇ ಒಂದು  ದಾರಿ  ಒಂದೆಡೆ... 
 ಬೇರ್ಪಡಿಸುವ ಹಲವಾರು ದಾರಿಗಳು ಇನ್ನೊಂದೆಡೆ..
   ‌‌‌‌             ಇದೆಲ್ಲವನ್ನೂ ಗೆದ್ದು  ಇಂದಿನ ಅವಕಾಶಗಳ ಜೊತೆ ಹಿಂದಿನ ಆಪ್ತತೆ ಬೆಸೆಯುವ ಕೆಲಸ ಹೇಗೆ? ಯಾರಿಂದ,? ಯಾವಾಗ ? ಎಂಬ ಯಕ್ಷಪ್ರಶ್ನೆಗಳಿಗೆ ಉತ್ತರಿಸಲು ಯುಧಿಷ್ಟಿರನೊಬ್ಬ  ಉದಯಿಸಿ ಬರಬೇಕೇನೋ..!!!

Thursday 1 April 2021

ಹಾಗೇ ಸುಮ್ಮನೇ...

ದೇವರಿದ್ದಾನೆ...

                    "ಒಂದು ದಿನ ದೇವರು,ಹಾಗೂ ಮನುಷ್ಯನ ಮುಖಾಮುಖಿಯಾಯಿತು..ಇಬ್ಬರ ಬಾಯಿಂದಲೂ ಉದ್ಗಾರ ಹೊರಟಿತು,
   "Oh!!!!! HERE IS MY  CREATOR"...
                  ಇದನ್ನು ಯಾರು ಮೊದಲು ಬರೆದರೋ ಗೊತ್ತಿಲ್ಲ...ಆದರೆ ಹೇಳಿಕೆ ಮಾತ್ರ ಹದಿನಾರಾಣೆ ಸತ್ಯ...ದೇವರು ಜಗನ್ನಿಯಾಮಕ, ಸೃಷ್ಟಿಕರ್ತ ,ಜಗನ್ನಾಥ ಅಂತ
ಏನೆಲ್ಲ ಹೇಳುವದರ ಹಿಂದೆ ನಮ್ಮ ಅಚಲ ವಿಶ್ವಾಸವಿದೆ..ಅಲುಗಾಡದ ನಂಬಿಕೆ ಇದೆ..ಇನ್ನು ಆ ದೇವರು ಯಾರು ಎಂಬುದು ಅವರವರಿಗೆ ಬಿಟ್ಟ ವಿಷಯ..ಕೆಲವರು ಗುರುದ್ವಾರ,ಮಂದಿರ,ಚರ್ಚು,ಮಸೀದಿಗಳಲ್ಲಿ ಅವನ ನೆಲೆ ಕಂಡರೆ ,ಇನ್ನು ಕೆಲವರು ಸತ್ಕರ್ಮ,ಸದ್ವಿಚಾರ,ಸದಾಚಾರ ಗಳ ನೆಲೆಯಲ್ಲಿ ದೈವತ್ವ ಕಾಣುವದು ಇದೆ...ದೇವರೆಂದರೆ positive energy..ಒಳ್ಳೆಯದು ಎಲ್ಲಿದೆಯೋ,ಅಲ್ಲೆಲ್ಲ ದೇವರಿದ್ದಾನೆ..ಸತ್ಯಂ,ಶಿವಂ,ಸುಂದರಂ ಅನ್ನುವದು ಅದಕ್ಕೇನೆ...ಸತ್ಯ,ದೇವರು, ಸುಂದರವಾದ,ಅನಂತವಾದ ಸೃಷ್ಟಿ ಎಲ್ಲವೂ ಭಗವಂತನ ಇನ್ನೊಂದು ರೂಪ..A thing of beauty is joy for ever - ಎಂಬುದು ತ್ರಿಕಾಲ ಸತ್ಯ...
                ನಮ್ಮದೊಂದು  ಹಳ್ಳಿ....ಪುಟ್ಟದೊಂದು ಜಗತ್ತು...ಅಲ್ಲಿ ಕೇಳಿ ಕಲಿಯುವದಕ್ಕಿಂತ ನೋಡಿ ಕಲಿಯುವದೇ ಬಹಳವಿತ್ತು..ದೇವರೆಂದರೆ ಏನು‌ ಎಂದು ಗೊತ್ತಾಗುವ ಮೊದಲೇ ಇತರರನ್ನು ನೋಡಿ ಗುಡಿಗೆ ಹೋಗುವದು,ಭಜನೆಗಳಲ್ಲಿ ಭಾಗವಹಿಸುವದು,ಸರತಿಯಲ್ಲಿ ನಿಂತು ತೀರ್ಥ,ಪ್ರಸಾದ ಸೇವಿಸುವದು ಮುಂತಾದವುಗಳನ್ನು ಮಾಡುತ್ತಿದ್ದರೂ ಏಕೆಂಬುದು ನಮಗೇ ಗೊತ್ತಿರಲಿಲ್ಲ...ಕ್ರಮೇಣ ಸ್ವಲ್ಪು ಸ್ವಲ್ಪು ಅರಿವಾಗತೊಡಗಿದಂತೆ ನಮ್ಮಲ್ಲೇ ಪ್ರಶ್ನೆಗಳು ಏಳತೊಡಗಿದವು..ಇನ್ನೂ ದೊಡ್ಡವರಾದಂತೆ ಯಾರನ್ನು ಮಾದರಿ ಎಂದುಕೊಂಡಿದ್ದೆವೋ ಅಂಥವರ ಮಾತು,ಕೃತಿಗಳ ನಡುವಿನ ಅಂತರ ನಮಗೇ ದಿಗಿಲು , ಅಪನಂಬಿಕೆ ಹುಟ್ಟಿಸುತ್ತಿತ್ತು..ದೇವರ ಹೆಸರಿನಲ್ಲಿ ನಡೆವ ರಾಜಕೀಯ,ಧಾರ್ಮಿಕ ಸಂಘರ್ಷಗಳ ಅತಿರೇಕ,ದೇವರದೇ ಮೂರ್ತಿಗಳ ,ಆಭರಣಗಳ ಕಳವಿನ ಪ್ರಕರಣಗಳು , ದೇವಾಲಯದ ಆಸ್ತಿ ಕಲಹಗಳು,ಕೊಲೆಗಳು, ಪ್ರಸಾದದಲ್ಲಿ ವಿಷ ಸೇರಿಸುವದು,ಇಂಥ ಪ್ರಕರಣಗಳನ್ನು ಓದಿ,ಕೇಳಿ,ನೋಡಿ ಅನುಭವಿಸಿದಾಗ  ನಂಬಿಕೆಯ ಮರ ಬುಡಕಡಿದು ಬಿತ್ತು...ಎಲ್ಲರೂ ಹಾಗೇ ಇರುವದಿಲ್ಲ...ಸಾತ್ವಿಕ ಹಾಗೂ ಧಾರ್ಮಿಕ ಜೀವಿಗಳೂ ಇಂಥ ಸಂದರ್ಭದಲ್ಲಿ ಬಲಿಪಶುವಾಗಿದ್ದಾರೆ..ಆಗುತ್ತಿದ್ದಾರೆ...ಆದರೆ  ಅಂಥವರೇ ಇವರಂಥವರ ಮಧ್ಯೆ  ನಮಗೆ ದಾರಿ ದೀಪವೂ ಆಗಿದ್ದಾರೆ...ಆದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವಂಥ "ಭಗವಾನ" ರು ಇರುವವರೆಗೆ ಭಯ,ಅವಿಶ್ವಾಸ,ಆತಂಕಗಳಿಗೇನೂ ಬರವಿಲ್ಲ...
"ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನ...ದೇಗುಲದಿ ಕೂಡಿದನು ವೈದಿಕನು ಅವನ.." ಎಂಬಂಥ ಕವಿತೆಗಳ ಹುಟ್ಟಿಗೂ ಕಾರಣವಾಗುವದನ್ನು  ತಪ್ಪಿಸುವಂತೆಯೇ ಇಲ್ಲ...
            ‌‌ಅಂತಿಮವಾಗಿ ನನಗನನಿಸಿದ್ದು_
ದೇವರು ಒಂದು ಶಕ್ತಿ,ಒಂದು ಭಕ್ತಿ,ಒಂದು ಏಕಾಂತ..ಒಂದು ಸಂಕೇತ...ದೇವರು  ಅವರವರ ಭಾವಕ್ಕೆ...ಅವರವರ ಭಕುತಿಗೆ...ಎಲ್ಲಿ ಒಳ್ಳೆಯದಿದೆಯೋ ಅಲ್ಲಿ ಖಂಡಿತ ದೇವರಿದ್ದಾನೆ...ನಮ್ಮ  ಆತ್ಮೀಯರೊಬ್ಬರ ವಿಷಯವನ್ನಿಲ್ಲಿ ಬರೆಯಲೇಬೇಕು...ಅವರ ಮಟ್ಟಿಗೆ ಸಾತ್ವಿಕವಾದುದು,ಒಳ್ಳೆಯದು,ಆನಂದ ನೀಡುವ ಪ್ರತಿಯೊಂದೂ ದೇವರೇ...ದೇವರ ಸಾನಿಧ್ಯವೇ..." ನನಗೆ ದೇವರೆಂದರೆ ಬೇರೆಯೇ.ಆದರೆ ಯಾವುದಾದರೂ ಸಜ್ಜನೊಬ್ಬರು ಪೂಜೆ,ಆರಾಧನೆಗೆ ನನ್ನನ್ನು ಆಮಂತ್ರಿಸಿದರೆ ಅವರು ಹೇಳಿದ ಹಾಗೆ ಕೇಳಿ ,ಅವರು ಬಯಸಿದಂತೆ ಇದ್ದು ಅವರ ಮುಖದ ಮೇಲೊಂದು ಕಿರುನಗೆ ಮೂಡಿಸಲು ನಾನು ಸಿದ್ಧನಿದ್ದೇನೆ...ನನ್ನದೊಂದು ಚಿಕ್ಕ ಕಾರ್ಯದಿಂದ ಬೇರೊಬ್ಬರಿಗೆ ಸಂತಸ ಸಿಗುವಂತಾದರೆ  ನಾನದಕ್ಕೆ ಸದಾ ರೆಡಿ".. ಇದೂ ಒಂದು ದೈವತ್ವ...'ದೇವ ಮಾನವ' ರೆನ್ನುವದು ಇಂಥವರಿಗೇ...
ಅಂತೆಯೇ ನಾವು ದೇವರನ್ನು ಕಾಣಬಹುದಾದ ಇನ್ನಿತರ ತಾಣಗಳೆಂದರೆ,_

ಏನೂ ಅರಿಯದ ಹಸುಗೂಸಿನಲ್ಲಿ,..
ಒಂದು ಉದಾತ್ತ ಭಾವದಲ್ಲಿ,..
ಒಂದು ಸಹಾಯ ಹಸ್ತದಲ್ಲಿ,..
ಅನುಕಂಪ,ಸಹಾನು ಭೂತಿಗಳಲ್ಲಿ,..
ಅಳುವವರಿಗೆ ಹೆಗಲು ಕೊಟ್ಟವರಲ್ಲಿ..
ಇತರರ ಅಳಲಿಗೆ ಕಿವಿಯಾಗುವವರಲ್ಲಿ..
ಅಸಹಾಯಕರ ಊರುಗೋಲಾಗುವದರಲ್ಲಿ..
ಅಶಕ್ತರ ಕಣ್ಣೊರೆಸುವಲ್ಲಿ...

 ದೇವರಿದ್ದಾನೆ...

ಎಲ್ಲ ಕಡೆಯಲ್ಲೂ...
ಎಲ್ಲ ಕಾಲಕ್ಕೂ..
ಎಲ್ಲರಿಗೂ..

Monday 29 March 2021

‌ ನಿನ್ನೆ ಪೇಪರ್ ಓದುತ್ತಿದ್ದೆ, print ದೋಷವೋ,ನನ್ನ ಕಣ್ಣಿನ ಆಭಾಸವೋ ಕೆಲ ಭಾಗ ಸ್ಪಷ್ಟವೆನಿಸಲಿಲ್ಲ. ಆ ಭಾಗವನ್ನು ZOOM ಮಾಡಲು ನೋಡಿ ವಿಫಲಳಾದೆ. ಅದು ಪೇಪರ್, ಅದನ್ನು zoom ಮಾಡಲಾಗದು ಎಂಬುದು ನಂತರ ಹೊಳೆಯಿತು .ಮೊನ್ನೆ ಒಂದು ದಿನ mobile ಕೈಲಿ ಹಿಡಿದು TV on ಮಾಡುವ ಪ್ರಯತ್ನ ಮಾಡಿಯೂ ಆಗಿತ್ತು. ಹಿಂದೆಂದೋ ಒಂದಿನ ಕೂದಲು ಬಾಚುತ್ತ ಮುಖ ಕಾಣುವದಿಲ್ಲ ಎಂದು ಪೇಚಾಡಿದೆ. ನಿಂತದ್ದು ಕನ್ನಡಿಯ ಮುಂದಲ್ಲ, ಬಟ್ಟೆಯ cupboard ಮುಂದೆ. ಎದುರಿಗಿದ್ದ ಕುಕ್ಕರ್ ಸೀಟಿ ಹೊಡೆದರೆ, ಯಾರದಾದರೂ ಕರೆಗಂಟೆ ಬಾರಿಸಿದರೆ mobile ರಿಂಗಣಿಸಿತೆಂದು ಗೋಡೆ ಗೋಡೆ ಹಾಯುವದು.. ‌‌ಈ ಅಭ್ಯಾಸ ಹೊಸದಲ್ಲ. ನಾನು ನೌಕರಿ ಮಾಡುವಾಗ ನನ್ನ ಶಾಲೆಯಲ್ಲಿ ಮರೆವಿಗೆ ನನ್ನ ಹೆಸರು ಪರ್ಯಾಯವಾಗಿ ಬಳಕೆಯಾಗುತ್ತಿತ್ತು. ಹಲವಾರು ಸಲ ಮೋಜಿಗೆ, ಕೆಲವೊಮ್ಮೆ ಪೇಚಿಗೆ ಸಿಗಿಸುತ್ತಿತ್ತು. ನನ್ನ ಸಣ್ಣ ಪುಟ್ಟ ದೋಷಗಳು ಸಲೀಸಾಗಿ ಇತರರಿಂದ ಮಾನ್ಯವಾಗಿಬಿಡುತ್ತಿದ್ದವು. ನನಗೇ ಮುಜುಗರವಾಗುತ್ತಿತ್ತು. ನನ್ನ ಲೋಪವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದೇನೆಂದು ಅವರು ಅರ್ಥೈಸಿದರೆ ಎಂದು ಒಂದು ರೀತಿಯ ಮುಜುಗರವೆನಿಸುತ್ತಿತ್ತು. ರಿಟೈರ್ ಆಗುವವರೆಗೂ ಅಂಥ ಅವಘಡ ವೇನೂ ಸಂಭವಿಸದೇ ನನ್ನನ್ನು ಸರಳವಾಗಿ ನಿವೃತ್ತಿಯಾಗುವಂತೆ ಆಗಿದ್ದು ನನ್ನ ಪುಣ್ಯ. ಸಹೋದ್ಯೋಗಿಗಳ ದಯೆ.. ‌ಇದೇಕೆ ಹೀಗಾಗುತ್ತದೆ??. ಆಗಿನದು ಅರ್ಥವಾಗುತ್ತದೆ. ಏಕಾಏಕಿ single parent ಆಗಿ ಮೂರು ಚಿಕ್ಕಚಿಕ್ಕ ಮಕ್ಕಳನ್ನು ನಿಭಾಯಿಸಬೇಕಾಗಿ ಬಂದಾಗಿನ ಮಾನಸಿಕ ಗೊಂದಲ, ಅಧೈರ್ಯ, ಅನಿವಾರ್ಯತೆಯಿಂದ ಹಾಗಾಗುತ್ತಿತ್ತು ಎಂದು ಅರ್ಥೈಸಬಹುದಿತ್ತು. ಈಗ ಆ ಕಾರಣ ಕೊಡುವಂತೆಯೇ ಇಲ್ಲ. ಈಗಿನದೇ ಬೇರೆ...ಆಧುನಿಕ ಶೈಲಿಯ ಜೀವನದಿಂದಾಗಿ multi task life style ನ ಪರಿಣಾಮವಿದು...ಇದು ನಾನು ಹೇಳಿದಾಗಲೆಲ್ಲ ನನ್ನ ಪರಿಚಯಸ್ಥರು ಅಚ್ಚರಿಪಡುವದಿಲ್ಲ..ಅಸಡ್ಡೆ ಮಾಡುವದಿಲ್ಲ...ನನ್ನದೂ ಇದೇ ಹಣೆಬರಹ ಎಂದು ಸಮ್ಮತಿಸುತ್ತಾರೆ...ಅದೇ ಸಮಾಧಾನ..ಎಲ್ಲರ ಬದುಕಿಗೂ ತನ್ನದೇ ವೇಗ...ಧಾವಂತ...ಕೆಲಸದ ದರ್ದು...traffic ಬೇಗ ದಾಟುವ ತರಾತುರಿ....ಮಕ್ಕಳ ದಿನಚರಿಯ follow ಮಾಡುವಿಕೆ, ಆಗಾಗ ಕಾಣಿಸಿಕೊಳ್ಳುವ ಅತಿಥಿಗಳ ಉಪಚಾರ.... ಹೀಗಾಗಿ ಬೇಕಾಗಿಯೋ,ಬೇಡವಾಗಿಯೋ ಎಲ್ಲರೂ ಚಕ್ರವ್ಯೂಹದ ಅಭಿಮನ್ಯುಗಳೇ...ಒಳಹೋದವರಿಗೆ ಹೊರಬರುವ ದಾರಿಕಾಣದೇ ಕಂಗಾಲು...ಆಗ ಬೇಡವಾದ ಸರಕುಗಳ ಗೋಡೌನ್ ಆದ ತಲೆ ಕಾರ್ಯ ನಿರ್ವಹಣೆಯಲ್ಲಿ ಎಡುಹುವದು ಸಹಜ.... ‌ ಮೇಲಿನ ಯಾವೂ ಕಾರಣಗಳು ನನಗೀಗ ನೆವಗಳಲ್ಲ..ಅದು ನನಗೆ ಗೊತ್ತು..." ಕೃಷ್ಣಾ,ನಿನಗೆ ವಯಸ್ಸಾಯ್ತು"_ ಎಂಬುದರ ಸ್ಪಷ್ಟ ಸೂಚನೆ ಒಂದು ಕಡೆಯಾದರೆ, ಏಕ ಕಾಲಕ್ಕೆ ಹಲವು ಕೆಲಸಮಾಡಬಲ್ಲೆವೆಂಬ over-confidence ಸಮಯಕ್ಕೆ ಸರಿಯಾಗಿ ಕೈ ಕೊಡುವದು ಇನ್ನೊಂದು ಕಾರಣ...ನನಗೆ ಈ ಬಗ್ಗೆ ಅಪಮಾನವಾಗಲಿ,ಅಸಡ್ಡೆಯಾಗಲಿ ಖಂಡಿತ ಇಲ್ಲ...ದೇಹ,ಮನಸ್ಸು,ಇಚ್ಛಾಶಕ್ತಿ,ಮನಸ್ಸಿದ್ದರೂ ಮಾಡಲಾಗದ ಅಸಹಾಯಕತೆ, ದೇಹ- ಮನಸ್ಸುಗಳ 'ಜಗಳ'ಬಂದಿ ಇಂಥ ,ಹೇಳಬಲ್ಲ,ಹೇಳಲಾಗದ ಹತ್ತು ಹಲವು ಕಾರಣಗಳು...ಹೀಗಾದಾಗಲೆಲ್ಲ ನನ್ನ ತಲೆಯನ್ನು ನಾನೇ ಮೊಟಕಿಕೊಂಡು,ಒಮ್ಮೆ ಹುಸಿನಗೆ ನಕ್ಕು, ಹಗುರಾಗಿ ಮುನ್ನಡೆದು ಕಂಡಕ್ಟರನಂತೆ ' right...right..' ಅನ್ನುವದನ್ನು ರೂಢಿಸಿಕೊಂಡಿದ್ದೇನೆ...' ಕಾಲಾಯ ತಸ್ಮೈನಮಃ'...

Thursday 25 March 2021

ಬುಧವಾರ ರಾತ್ರಿ ನನ್ನ ಮೂರನೇ ಮೊಮ್ಮಗ ನಿಕ್ಷೇಪನ JEE ಪರೀಕ್ಷೆಯ ಎರಡನೇಯ attempt ನ ಫಲಿತಾಂಶ ಬಂತು. 99.78 ರಷ್ಟು ಗುಣಗಳು ಸಿಕ್ಕಿದ್ದವು. ಆ ಸಂಭ್ರಮ ಮರುದಿನವೂ ಇದ್ದು ಮನೆಯಲ್ಲಿ ಕೆಲಕಾಲ ಹರಕೆ, ಹಾರೈಕೆ,' ಅಭಿನಂದನೆಗಳ 'ಗಲಗಲ' ಗಳೆಲ್ಲ ಮುಗಿದಮೇಲೆ ಅವನನ್ನು ನಾನು ಕೇಳಿದೆ " ಬಹಳಷ್ಟು ಜನ ನಮ್ಮನ್ನು ನಿನ್ನ ಅಭ್ಯಾಸಕ್ರಮ, ಅಭ್ಯಾಸದ ಅವಧಿ, ಮುಂತಾಗಿ ಕುರಿತು ಕೇಳುತ್ತಿದ್ದಾರೆ, ನಾನು ಹಲವು ಪ್ರಶ್ನೆಗಳನ್ನು ಕೇಳುತ್ತೇನೆ, ನೀನು ಅವುಗಳನ್ನು ಉತ್ತರಿಸು, ಅದರ ವೀಡಿಯೋ ಕೇಳಿದವರಿಗೆ ಕಳಿಸುತ್ತೇನೆ ಅಂದೆ."ಅದೆಲ್ಲ ಬೇಡ, ಅವುಗಳ ಬಗ್ಗೆ ನನಗನಿಸಿದ್ದು ನಾಲ್ಕು points ಗಳನ್ನು ಹೇಳುತ್ತೇನೆ, ನಿನಗೆ ಸರಿಯನಿಸಿದಂತೆ ಎಲ್ಲಿ ಬೇಕಾದರೂ ಹಾಕಿಕೋ" ಎಂದಾಗ ಅದೂ ಸರೀನೇ ಅನಿಸಿತು ನನಗೆ.'ಸರಿ ಸರಿ' ಅಂದೆ. ಅವನು ಹೇಳಿದ್ದು ಈ ಕೆಳಗಿದೆ... ಯಾವುದೇ ಕಾರಣಕ್ಕೂ ಮಕ್ಕಳ ಅಭ್ಯಾಸದ ಕ್ರಮ, ಹಾಗೂ ವೇಳೆಯನ್ನು ಕುರಿತು ಚರ್ಚಿಸಲಾಗದು . ಅವರಿಗೆ ಸರಿಕಂಡ ರೀತಿಯಲ್ಲಿ ಅಭ್ಯಾಸ ಮಾಡುವ , ಅದನ್ನು ಬೇಕೆಂದಾಗ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯ ಅವರಿಗೇ ಬಿಡಬೇಕು. ಮುಂದೆ ಆಯ್ದುಕೊಳ್ಳುವ ವಿಷಯಗಳ ಬಗ್ಗೆ ಬೇರೆಯವರು ಸಲಹೆ ನೀಡಬಹುದೇ ಹೊರತು ಒತ್ತಾಯ ಖಂಡಿತ ಕೂಡದು. ಅವರನ್ನು ಅವರಿಗಿಂತ ಹೆಚ್ಚು ,ಕಡಿಮೆ ಇದ್ದವರೊಡನೆ ತುಲನೆ ಮಾಡಿ ಅಭಿಪ್ರಾಯಗಳನ್ನು ಅವರು ತಲೆಯಲ್ಲಿ ತುಂಬಬಾರದು. ಪರೀಕ್ಷೆಯ ಸಮಯದಲ್ಲಿ ಮುಗಿದು ಹೋದ ವಿಷಯಗಳ ಪೋಸ್ಟಮಾರ್ಟಂ ಯಾವಕಾಲಕ್ಕೂ ಸಲ್ಲದು. ಓದಿದ್ದನ್ನು ಅದರ ಪಾಡಿಗೆ ಅದನ್ನು ಬಿಟ್ಟು ಮುಂದಿನದ್ದು ಕಡೆ ಗಮನ ಹರಿಸಲು ಹೇಳುವದು ಉತ್ತಮ. ಕೊನೆಯದಾಗಿ ಪರೀಕ್ಷಾ ದಿನಗಳಲ್ಲಿ ಮನೆಯ ವಾತಾವರಣ ಅಧ್ಯಯನ ಯೋಗ್ಯವಾಗಿರಬೇಕು. ಇಲ್ಲಸಲ್ಲದ ಗಲಾಟೆ, ವಾದ ವಿವಾದ, ಬಿಸಿಬಿಸಿ ವಿಷಯಗಳ ಚರ್ಚೆ ಮನೆಯ ವಾತಾವರಣವನ್ನು ಕೆಡಿಸುವದೇ ಹೆಚ್ಚು. ಕೊನೆಯದಾಗಿ ಮನೆಯ ಸದಸ್ಯರೆಲ್ಲರ ಸಹಕಾರ, ಅತಿಮುಖ್ಯವಾದ ಅಂಶ. ತಪ್ಪು ಮಾಡಿದಾಗ ಹೇಳುವುದನ್ನು ಹಿತಮಿತವಾಗಿ ಹೇಳಬೇಕೇ ಹೊರತು ಮಕ್ಕಳ ಮೂಡು ಕೆಡುವಂತೆ ಮಾಡಬಾರದು. ಹಾಗೆ ಮಾಡುವುದರಿಂದ ಅದರ ಪರಿಣಾಮ ಋಣಾತ್ಮಕ ( negative) ಸಾಗುವುದೇ ಹೆಚ್ಚು. ಮಕ್ಕಳು ಪ್ರಶಂಸಾರ್ಹವಾದದ್ದೇನಾದರೂ ಮಾಡಿದರೆ ಕಂಜೂಷತನ ತೋರಿಸದೇ ಅವರನ್ನು ಪ್ರೋತ್ಸಾಹದ ಮಾತುಗಳಿಂದ ಉತ್ತೇಜಿಸುವ ಕೆಲಸ ಮಾಡಬೇಕು. ಕೊನೆಯದಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ವ್ಯಕ್ತಿತ್ವ ಅಥವಾ ವ್ಯಕ್ತಿತ್ವ ದೋಷವಿರುತ್ತದೆ. ಕಾರಣ ಎಲ್ಲರನ್ನೂ ಏಕರೀತಿಯಲ್ಲಿ ಸಂಭಾಳಿಸುವ ಸಿದ್ಧ ಸೂತ್ರವಿಲ್ಲಿ ಕೆಲಸ ಮಾಡಲಾರದು .ಅಂಥ ವೇಳೆಯಲ್ಲಿ ನಿಗದಿತ ವಿದ್ಯಾರ್ಥಿಯ ವಿಷಯವನ್ನು ಪ್ರತ್ಯೇಕವಾಗಿ ಗಮನದಲ್ಲಿಟ್ಟುಕೊಂಡು ವ್ಯವಹರಿಸುವದು ಮುಖ್ಯವಾಗುತ್ತದೆ. ಇಂಥ

Wednesday 24 March 2021

ಬಹಳ ದಿನಗಳ ಹಿಂದೆ, ಮರಾಠಿ ಮೂಲದ ಕನ್ನಡ ಅನುವಾದ ,' ನಮ್ಮ ಮನೆ ನಮ್ಮದೆಷ್ಟು ' ಲೇಖನವನ್ನು ಕಸ್ತೂರಿ ಮಾಸ ಪತ್ರಿಕೆಯಲ್ಲಿ ಓದಿದ್ದೆ. ಅಷ್ಟೊಂದು ಆಸೆಪಟ್ಟು, ದುಡಿದ ಹಣವನ್ನೆಲ್ಲ ವ್ಯಯಿಸಿ, ಕಟ್ಟಿಸಿದ ಮನೆಯಲ್ಲಿ ಒಬ್ಬ ಮನುಷ್ಯ ಎಷ್ಟು ಕಾಲ ಇರುತ್ತಾನೆ ಎಂಬುದರ ವಿಶ್ಲೇಷಣೆಯಿತ್ತು ಅದರಲ್ಲಿ. ಒಬ್ಬ ಮನುಷ್ಯ ಪೂರ್ಣವಾಗಿ ನೂರು ವರ್ಷ ಬದುಕಿದರೂ ಬದುಕಿನ ಹೋರಾಟ, ಬದುಕಿಗಾಗಿ ಸಂಪಾದನೆ, ಅನ್ನುತ್ತ ಬೆಳಿಗ್ಗೆ ಹತ್ತರಿಂದ ಸಾಯಂಕಾಲ ಆರರವರೆಗೆ ಅಂದರೆ ಮೂರರ ಒಂದು ಭಾಗ ( ಇಪ್ಪತ್ನಾಲ್ಕು ಗಂಟೆಗಳಲ್ಲಿ ಎಂಟು ಗಂಟೆಗಳು) ಮನೆಯಿಂದ ಹೊರಗೆ ಇರುತ್ತಾನೆ. ಆಗ ಅವನ ಬದುಕಿನ ಮೂವತ್ಮೂರು ವರ್ಷಗಳು ಲೆಕ್ಕ ಕಳೆದುಕೊಳ್ಳುತ್ತವೆ. ರಾತ್ರಿ ಹತ್ತರಿಂದ ಬೆಳಗಿನ ಆರು ಗಂಟೆಯ ವರೆಗೆ ನಿದ್ರೆಯ ಸಮಯ. ನಿದ್ರೆಯೆಂದರೆ 'ತಾತ್ಕಾಲಿಕ ಸಾವು' ಇದ್ದ ಹಾಗೆ...ಸಾವು 'ದೀರ್ಘ ನಿದ್ರೆ'. ಅದಕ್ಕೇ ವರಕವಿ ಬೇಂದ್ರೆಯವರು :ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ" ಎಂದಿರಬೇಕು...ಆ ಸುಷುಪ್ತಿ ಸ್ಥಿತಿಯಲ್ಲಿ ಐಷಾರಾಮೀ ಮಹಲಿನಲ್ಲಿ ಮಲಗುವವನಿಗೂ, ಫುಟ್ಪಾತ ಮೇಲೆ ಮಲಗಿರುವವನಿಗೂ ವ್ಯತ್ಯಾಸವೇ ಇರುವುದಿಲ್ಲ. ಹೊರಗಿನ ಅರಿವಿಗೆ ಹೊರತಾದ 'ಅವಸ್ಥೆ 'ಯದು. ಅಲ್ಲಿಗೆ ಮತ್ತೆ ಮೂರರಲ್ಲಿ ಒಂದರಷ್ಟು ಅಂದರೆ ಮೂವತ್ಮೂರು ವರ್ಷಗಳು ನಮ್ಮವಲ್ಲ. ಇನ್ನು ಉಳಿದ ಮೂರರ ಕೊನೆಯ ಭಾಗದಲ್ಲಿಯೂ ಎಲ್ಲ ಗಳಿಗೆಗಳೂ ನಮ್ಮವೇ ಆಗಿ ಮನೆಯಲ್ಲಿ ಕಾಲುಚಾಚಿ ನಿಶ್ಚಿಂತೆಯಾಗಿ ,ಮನೆಯವರೊಂದಿಗೆ ಕಳೆದ ದಿನಗಳಾಗಿ ನಮಗೆ ದಕ್ಕುತ್ತವೆ ಎಂಬ ಮಾತು ಸುಳ್ಳು. ನಮ್ಮ ಸ್ವಂತದ, ಇತರರ ,ಅನಿವಾರ್ಯ ಕೆಲಸ , ಕಾರ್ಯಗಳಿಗಾಗಿಯೂ ಮನೆಯಿಂದ ದೂರವಿರುವ ಪ್ರಸಂಗಗಳು ಬರದಿರುತ್ತವೆಯೇ? ಅದರಲ್ಲಿ ಅಷ್ಟಿಷ್ಟು ಕಳೆದರೆ ನಮ್ಮವೆಂದು ಉಳಿದ ಗುಣಾತ್ಮಕ ಬದುಕಿನ ವರ್ಷಗಳೆಷ್ಟೆಂದು ನೋಡಿದರೆ ಬೆಚ್ಚಿ ಬೀಳಬಹುದು. ಎಷ್ಟೋ ಮನೆಗಳಲ್ಲಿ ಮಾಲಿಕರಿಗಿಂತ ಆಳು ಕಾಳುಗಳು, ಅವರು ಸಾಕಿದ ನಾಯಿ , ಬೆಕ್ಕುಗಳೇ ಹೆಚ್ಚು ಆರಾಮವಾಗಿ ಇರುವದು ಕಾಣ ಬರುತ್ತದೆ ಎಂಬುದು ಲೇಖನದ ಉದ್ದೇಶವಾಗಿತ್ತು. ಇದು ಸಧ್ಯದ soft ware ಜನಕ್ಕಂತೂ ನಿತ್ಯದ ಗೋಳು. ಮನೆ , ಆಫೀಸಿಗಿಂತ ಬೆಂಗಳೂರಿನ ರಸ್ತೆಗಳ ಸಿಗ್ನಲ್ಗಳಲ್ಲೇ ಬದುಕು ಕಳೆದು ಹೋಗಿಬಿಡುತ್ತದೆ ಎಂದೆನಿಸಿದ್ದು ಕನಿಷ್ಟ ನೂರು ಸಲ. ವಿಶ್ವದಾದ್ಯಂತ ಕೊರೋನಾ ವೈರಸ್ ಎಬ್ಬಿಸಿದ ಬಿರುಗಾಳಿ ಏನೆಲ್ಲ ಅನಿಷ್ಟಗಳಿಗೆ ಜನರನ್ನು ಗುರಿಯಾಗಿಸಿದೆ. ನಿಜ. ಆದರೆ ಎಲ್ಲೋ ಕಳೆದುಕೊಂಡಿದ್ದ ಮನೆಯ ,ಮನೆಜನರೊಂದಿಗಿನ ಸಹವಾಸದ ಸುಖವನ್ನು ಅಪರೂಪಕ್ಕೆ ಮರಳಿಸಿದೆ. Every thing happens with a reason ಎಂಬುದೊಂದು ಮಾತಿದೆ. ನಾವು ಚಿಕ್ಕವರಿದ್ದಾಗ ಯಾವುದೋ ಹನುಮಪ್ಪನ ಮೂರ್ತಿಯೊಂದು ಬೆಳೆಯುತ್ತ ಹೋಯಿತು.ಅದನ್ನು ತಡೆಯಲು ನೆತ್ತಿಗೆ ಹಾರಿ ಬಡೆಯಬೇಕಾಯಿತು ಎಂದು ಹೇಳುತ್ತಿದ್ದುದನ್ನು ಕೇಳಿದ್ದು ನೆನಪಿದೆ. ಅದು ಸುಳ್ಳೋ,ನಿಜವೋ ಜಿಜ್ಞಾಸೆ ಬಿಟ್ಟುಬಿಡೋಣ. ಆಧುನಿಕ ಮನುಷ್ಯನು ವಿಜ್ಞಾನದ ಸಹಾಯದಿಂದ ಪ್ರಕೃತಿಯಮೇಲೆ ನಡೆಸಿದ, ಈಗಲೂ ನಡೆಸುತ್ತಿರುವ ಅತಿಯಾದ ಅತ್ಯಾಚಾರಕ್ಕೊಂದು ಪ್ರತಿಭಟನೆ ಈಗೀಗ ಅನೇಕ ರೂಪಗಳಲ್ಲಿ ವ್ಯಕ್ತವಾಗುತ್ತಿದೆ, ಹಲವಾರು ಪ್ರಕ್ರತಿ ವಿಕೋಪಗಳ ಮುಖಾಂತರ... ಕೊರೋನಾ ಅಂಥದೇ ಒಂದು ನೈಸರ್ಗಿಕ ಪ್ರತಿರೋಧ ಎನ್ನಬಹುದು...ಕಣ್ಣಿಗೆ ಕಾಣದ ವೈರಸ್ಸೊಂದು ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕೈಬೆರಳುಗಳಲ್ಲಿ ತನಗೆ ಬೇಕಾದಂತೆ ಕುಣಿಸುತ್ತಿದೆ. ಮನೆಬಿಟ್ಟು ಅಲ್ಲಾಡದಂತೆ ನಿಯಂತ್ರಿಸುತ್ತಿದೆ. ಸ್ವಲ್ಪು ಅವಿಧೇಯರಾದರೂ ಅಂಥವರ ಬಲಿ‌ ನಿರ್ದಯವಾಗಿ ನಡೆಯುತ್ತಿದೆ. ‌‌ಗೃಹಬಂಧನಕ್ಕೆ ಬೇಸತ್ತು ಮನೆಯಲ್ಲಿ ಕೈದು ಆಗಿ ಒದ್ದಾಡುತ್ತಿರುವವರು ಈ ಲೇಖನದ ಪೂರ್ವ ಭಾಗ ಓದಿ ನೋಡಿ ಮತ್ತೊಮ್ಮೆ. ಕಷ್ಟಪಟ್ಟು , ಸಾಲಮಾಡಿ, ಅನೇಕ ಕನಸುಗಳ ಹೊತ್ತು ಕಟ್ಟಿಸಿದ ಮನೆಗಳಲ್ಲಿ ಕಾಲುಚಾಚಿ ಹೊತ್ತು ಕಳೆವ ಸದವಕಾಶ ಮತ್ತೆ ಮತ್ತೆ ನಿಮಗೆ ಬರಲಾರದು ಎಂಬುದನ್ನು ಮನಗಂಡು, ಅಲಭ್ಯ ಲಾಭ ಎಂದು ತಿಳಿದು Enjoy ಸಿ. ನಮ್ಮ ಮನೆ ನಮ್ಮದೆಷ್ಟು ಅನ್ನದೇ, ನಮ್ಮ ಮನೆ ಪೂರಾ ನಮ್ಮದೇ ಎನ್ನಿ..

Monday 22 March 2021

೪೩ . ಪುಷ್ಟಿ ಮೈಗಾಗುವದು, ಹೊಟ್ಟೆ ಜೀರ್ಣಿಸುವಷ್ಟೇ... ' ಗದ್ಯಂ ವದ್ಯಂ ಪದ್ಯಂ ಹೃದ್ಯಂ ' ಎಂಬ ತತ್ವವನ್ನು ಓದಿ ನಿಜವೆನಿಸಿ ಒಪ್ಪಿ ಅಪ್ಪಿಕೊಂಡದ್ದು ನಾನು. ನಮ್ಮನೆಯಲ್ಲಿ ಎಲ್ಲರಿಗೂ ಸಾಹಿತ್ಯಾಸಕ್ತಿ ನಮ್ಮಪ್ಪನ ಬಳುವಳಿ. ಎಲ್ಲರಿಗೂ ವಿಪರೀತ ಓದಿನ ಹುಚ್ಚು. ಮನೆಯಲ್ಲಿ ಎಷ್ಟೇ ಇತರ ಕೊರತೆ ಇದ್ದರೂ ಪುಸ್ತಕಗಳ ಕೊರತೆ ಇರಲಿಲ್ಲ. ತಮ್ಮ ತಮ್ಮ ಓದಿನ ಆಸಕ್ತಿಯನ್ನು ಮನೆಯವರೆಲ್ಲರೂ ತಮ್ಮ ತಮ್ಮ ಆಸಕ್ತಿಯ ಹವ್ಯಾಸಗಳಿಗಾಗಿ ಬಳಸಿಕೊಂಡರು. ತಮ್ಮ , ಭಾಷಣಕ್ಕೆ ಒತ್ತು ಕೊಟ್ಟರೆ, ತಂಗಿ 'ಸಣ್ಣ ಕಥಾ' 'ಪ್ರಕಾರವನ್ನು ಆಯ್ದುಕೊಂಡಳು . ನಾನು ಕವನಕ್ಕೆ ಒಲಿದೆ. ನನ್ನ SSLC ಬೀಳ್ಕೊಡುಗೆ ಸಮಾರಂಭದಲ್ಲಿ ನಾ ಬರೆದ ಕವನವೊಂದನ್ನು ನನ್ನೊಬ್ಬ ಆತ್ಮೀಯ ಗೆಳತಿ ಹಾಡಿ ಇಬ್ಬರೂ ಬೆನ್ನು ತಟ್ಟಿಸಿಕೊಂಡಾಗ ನನ್ನ ಆಶೆ ಮೊಳಕೆಯೊಡೆಯಿತು. ಕವನ ಸಂಕಲನಗಳನ್ನು ಕೂಡಿಸುವುದು, ಅವುಗಳನ್ನು ಅನುಸರಿಸಿ ಕವನದ ಸಾಲುಗಳನ್ನು ಗೀಚುವುದು, ಯಾರೋ ಒಬ್ಬರು ನೋಡಿ ಮೆಚ್ಚಿದರೆ ಕವಯಿತ್ರಿ ಯಾಗಿ ಬಿಟ್ಟಂತೆ, ಸತ್ಕಾರ ಸಮಾರಂಭಗಳಾದಂತೆ ಕನಸು ಕಾಣುವುದು , ಮುಂತಾದ ಎಲ್ಲ 'ಹದಿನಾರರ ಹುಚ್ಚು ಖೋಡಿ ಮನಸ್ಸಿನ ಮಂಗಾಟಗಳನ್ನೂ' ಆಡುತ್ತಿದ್ದೆ. ಎಂಟನೇ ಕ್ಲಾಸಿನಲ್ಲಿ ABCD ತಿದ್ದಿದವಳು ನಾನು .ಇಂಗ್ಲಿಷ್ ಸಾಹಿತ್ಯದ ಅಭ್ಯಾಸಕ್ಕೆ ಒಲಿಯುವ ಭಂಡಧೈರ್ಯ ಮಾಡಿದೆ. ಆಗ class ನಲ್ಲಿ ಒಟ್ಟು ಬರಿ ಹತ್ತು ಗಂಡು ಹುಡುಗರು,ನಾನೊಬ್ಬಳೇ ವಿದ್ಯಾರ್ಥಿನಿ. ಆದರೂ ನನ್ನ ನಿರ್ಧಾರ ಸಡಿಲಾಗಲಿಲ್ಲ. ಅಣ್ಣನೂ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು ಅವನ ಗೆಳೆಯರು ನನ್ನ ಗುರುಗಳಾದದ್ದು ಒಂದು ಹೆಚ್ಚುವರಿ ಅನುಕೂಲವಾಗಿತ್ತು . ಮನಸ್ಸಿಗೆ ಬಂದದ್ದು ಗೀಚುವುದು ಬೇರೆ. ಬರೆಯುವುದೇ ಬೇರೆ, ಬರೆಯುವುದಕ್ಕೂ ಮೊದಲು ಹೆಚ್ಚು ಹೆಚ್ಚು ಓದಬೇಕು, ಅರಗಿಸಿಕೊಳ್ಳಬೇಕು, ಅನುಭವಗಳೂ ಬೆಂದು ಗಟ್ಟಿ ಪಾಕವಾಗಬೇಕು, ಎಂಬ ಅಂಶಗಳು ಕ್ರಮೇಣ ಅರ್ಥವಾಗತೊಡಗಿದವು. ನನ್ನ ಕಲಿಕೆ ಹಳ್ಳಿಯಲ್ಲಿ ಆದ್ದರಿಂದ ಇಂಗ್ಲೀಷ್ ತುಂಬಾ ತುಟ್ಟಿಯಾಗಿತ್ತು. ಓದಿದ್ದೆಲ್ಲವನ್ನೂ ಮೊದಲು ಕನ್ನಡಕ್ಕೆ ಮನಸ್ಸಿನಲ್ಲೇ ಭಾಷಾಂತರಿಸಿಕೊಂಡು, ನನಗೆ ತಿಳಿದಂತೆ ಸಾದಾ ಇಂಗ್ಲೀಷ್ನಲ್ಲಿ ಕಾಪಿ ಮಾಡುತ್ತಿದ್ದೆ. ನನ್ನ ಪ್ರಯತ್ನ ಪ್ರಾಮಾಣಿಕವಾಗಿತ್ತೋ, ಒಬ್ಬಳೇ ಹುಡುಗಿ ಎಂಬ ಅನುಕಂಪದ ಪರಿಣಾಮವೋ ಯಾವುದೋ ಒಂದು ಕೆಲಸಮಾಡಿ ನನ್ನ ಆಸಕ್ತಿ ಉಸಿರು ಕಳೆದುಕೊಳ್ಳದಂತೆ ಸಹಕರಿಸಿದವು. ಮೊದಲೇ ಹೇಳಿದಂತೆ ನಾನು ಕವಿತೆಯ ಕಡೆಗೆ ಹೆಚ್ಚು ವಾಲಿದೆ. ಆದರೆ ಅದು ಸುಲಭವಲ್ಲ ಎಂಬ ಸತ್ಯ ಗೊತ್ತಿದ್ದರೂ ಹಿಂಜರಿಯಲಿಲ್ಲ. ಆಗಿನ ಕಾಲದಲ್ಲಿ ಅನಾವಶ್ಯಕ ಪೈಪೋಟಿ ಇರಲಿಲ್ಲ ಎಂಬುದೊಂದು ಧನಾತ್ಮಕ ಅಂಶ ನನಗೆ. ಆಂಗ್ಲ ಕವಿ Keats ಹೇಳಿದಂತೆ," poetry is a spontaneous overflow of feelings recollected in TRANQUILITY ಎಂಬುದನ್ನು ನಮ್ಮ ಆಂಗ್ಲ ಶಿಕ್ಷಕರು ಮನಸ್ಸಿಗೆ ನಾಟುವಂತೆ ಮಾಡಿದ್ದರಿಂದ ನನ್ನ ಕಲಿಕೆಗೂ ವೇಗವಿರಲಿಲ್ಲ. ಅಂತೂ ಒಮ್ಮೆಯೂ ನಪಾಸ ಆಗದಂತೆ ಪದವಿ ಮುಗಿಯುತ್ತಿದ್ದಂತೆಯೇ ಅಲ್ಪ- ಸ್ವಲ್ಪ poetic vocabulary, ಪ್ರಾಸ ಬದ್ಧ ರಚನೆ, Meter, Rythm ಗಳ ಜ್ಞಾನವಿಲ್ಲದೇ ಕೆಲಸ ಸುಲಭವಿಲ್ಲ ಎಂಬ ಅರಿವು ನನ್ನ ಧೈರ್ಯಗುಂದಿಸಿತ್ತು. ನನಗೆ ಬಂದ ರೀತಿಯಲ್ಲಿ ಬರೆದು ಬಲ್ಲವರಿಗೆ ತೋರಿಸಿ ಸಲಹೆ ಪಡೆಯುವುದು, ಇತರ ಭಾಷೆಗಳ ಅನುವಾದ ,ಇಂಥ ಕೆಲಸವಲ್ಲದ ಕೆಲಸದಲ್ಲಿ ತೊಡಗಿಕೊಂಡು ಕ್ರಮೇಣ ಅಂಬೆಗಾಲಿಡುವದನ್ನು ಸುರು ಮಾಡಿದೆ. ನಂತರ ಶಿಕ್ಷಕಿಯಾಗಿ ಮಕ್ಕಳಿಗೆ ಕಲಿಸುತ್ತ, ಜೊತೆಜೊತೆಗೆ ಕಲಿಯುತ್ತಾ ಈಗ ಎಡವುತ್ತ ನಡೆಯುತ್ತಿದ್ದೇನೆ. ಅಷ್ಟಕ್ಕೂ ಇಂದಿಗೂ ಈ ನನ್ನ ಹವ್ಯಾಸ ನನ್ನ fb ಗೆ ಸೀಮಿತವಾಗುವಷ್ಟಾದರೂ ಕೈಹಿಡಿದು ನಡೆಸಿದ್ದು ಆಕಾಶವಾಣಿ ಹಾಗೂ 'ಸ್ವರಚಿತ ಕವನವಾಚನ' ಕಾರ್ಯಕ್ರಮಗಳು .ನವ್ಯ ಪದ್ಯಗಳನ್ನು ಆಸ್ವಾದಿಸುತ್ತೇನಾದರೂ ನನ್ನ ವೈಯಕ್ತಿಕ ಆಯ್ಕೆ ಗೇಯಪದ್ಯಗಳು. ಕಾವ್ಯ ವಾಚನ ಕ್ಕಿಂತಲೂ ಕಾವ್ಯ ಗಾಯನಕ್ಕೆ ನನ್ನ ಆದ್ಯತೆ. ಪ್ರಾಸ-ಪ್ರಸ್ತಾರದ ಕಡೆಗೆ ಒಲವು. ನಾವು ಎಷ್ಟೇ ಹೇಳಲಿ, ಬರೆಯಲೀ, ಪ್ರತಿಯೊಬ್ಬರಿಗೂ ಅವರದೇ ಆಯ್ಕೆಯ ಸ್ವಾತಂತ್ರ್ಯವನ್ನಂತೂ ಎಂದಿಗೂ ಅಲ್ಲಗಳೆಯಲಾಗದು.'ಕವಿತಾ ದಿನ ' ಅಂದ ಕೂಡಲೇ ನನ್ನ ಕವಿತಾಯಾನದ( ಹಾಗೆಂದು ಕರೆಯಬಹುದೇ- ಅನ್ನುವುದೂ ಒಂದು ಪ್ರಶ್ನೆ) ಒಂದು ಝಲಕ್ ಮನಸ್ಸಿನಲ್ಲಿ ಬಂದು ಕ್ಷಣಕಾಲ ಕಾಡಿದ್ದು ಹೀಗೇ...

Friday 19 March 2021

ಉಗ್ರ ಪ್ರತಾಪಿಯ ಭುಜಬಲದ
ಪರಾಕ್ರಮ??

         ಮೊನ್ನೆ ಮೈಸೂರಿಗೆ ಒಂದು ವಾರ ಹೋಗಿದ್ದೆ. ಕೊರೋನಾ ಗಲಾಟೆಯಿಂದಾಗಿ ಮರಳಿ ಬರುವ ವರೆಗೂ ಇಡೀ  ಊರು ಒಂದು ರೀತಿಯ ಜಡತ್ವದಲ್ಲಿತ್ತು .  ಅದು ನಮ್ಮನ್ನು ನಿಯಂತ್ರಿಸಲು  ತೊಡಗಿದಾಗ  ಮುಂಜಾಗ್ರತಾ ಕ್ರಮವಾಗಿ ಮೈ ಕೊಡವಿಕೊಂಡು ಏಳುವ ದಾರಿ ಹುಡುಕಲೇ ಬೇಕಾಯಿತು. ಸಿನೆಮಾಗಳಿಲ್ಲ, ನೆಂಟರ ಮನೆ ಮಾತೆತ್ತುವ  ಹಾಗಿಲ್ಲ, ಹೋಟೆಲು, ಪಾರ್ಕುಗಳೂ safe ಅಲ್ಲ.ಉಳಿದದ್ದು ಪೇಟೆಯಲ್ಲಿ ಒಂದು ರೌಂಡು ."ಕತ್ತೆ ತಪ್ಪಿಸಿಕೊಂಡರೆ ಹಾಳುಗೋಡೆ"  _ ಹೆಂಗಸರು ಕಾಣದಿದ್ದರೆ  ಸೀರೆ ಅಂಗಡಿ _ ಎಂತಾಯ್ತು, ಒಂದು ರೌಂಡು ಸೀರೆಗಳನ್ನಾದರೂ  ನೋಡಿದರಾಯಿತು, ಎಂದುಕೊಂಡು ಮಗಳೊಂದಿಗೆ ಒಂದು ಅಂಗಡಿಗೆ ಹೋದದ್ದಾಯಿತು  . ವ್ಯಾಪಾರ ಮಂದವಾಗಿದ್ದ ಕಾರಣ  sales boy ಆರಾಮಾಗಿ ತುಂಬ variety ಸೀರೆಗಳನ್ನು ಒಂದೊಂದಾಗಿ  ತಂದು ನಮಗೆ ತೋರಿಸುತ್ತಿದ್ದ. ನಮಗೋ ಅವನು ತೋರಿಸುತ್ತಿದ್ದ ಆದರ,  ಆಸಕ್ತಿ ಕಂಡು ಏನೋ VIP feelingಉ. ಅದನ್ನು ಸ್ವಲ್ಪ ಹೆಚ್ಚಾಗಿಯೇ ಆನಂದಿಸಿ ಬಿಡುವ ಲಾಲಚಿ ಮನಸ್ಸಾದದ್ದು ಸ್ವಾಭಾವಿಕ. ಆಗ ಅದೆಲ್ಲಿಂದ ಒಕ್ಕರಿಸಿತೋ  _ ಬಹುಶಃ  ನನಗಿದ್ದ AC/ FAN,  ಅಲರ್ಜಿ ಕಾರಣದಿಂದಾಗಿ ಇರಬೇಕು_ ಜೋರಾಗಿ ಸೀನು ಬಂತು. ತಗೊಳ್ಳಿ, ಜೇನು ಹುಟ್ಟಿಗೆ ಬೆಂಕಿ ಬಿದ್ದಂತೆ ಎಲ್ಲರೂ  ಕ್ಷಣಾರ್ಧದಲ್ಲಿ ಚೆಲ್ಲಾಪಿಲ್ಲಿ... ದೂರ  ಓಡಿಹೋಗಿ ನನ್ನನ್ನೇ 'ಕೊರೋನಾ virus' ನಂತೆ ಭಯಭೀತರಾಗಿ ಕಣ್ಣು ಅರಳಿಸಿ ನೋಡತೊಡಗಿದರು. ಕರೆದರೆ ಪ್ರತಿಕ್ರಿಯೆನೇ ಇಲ್ಲ.' ಎಲ್ಲ ಅಲ್ಲೇ ಇವೆ,  ನೋಡಿಕೊಳ್ಳಿ,  ನೀವು ಹೇಳಿದ range ನಲ್ಲಿ ಅಷ್ಟೇ ಇರೋದು' ಎಂದು ಹೇಳುವದರಲ್ಲಿ ಬೆವರಿಟ್ಟರು. ಇನ್ನು ಲಕ್ಷಗಟ್ಟಲೇ ಖರೀದಿಸಿದರೂ ಅವರಾರೂ ಸಮೀಪ ಸುಳಿಯುವದಿಲ್ಲ ಎಂಬುದು ಖಾತ್ರಿಯಾಗಿ  ನಾವೂ  ಮೆಟ್ಟಲು ಇಳಿಯಲೇಬೇಕಾಯಿತು..

           ‌‌‌ ' ಸಮಾನರಾರಿಹರು? ನಮ್ಮ ಸಮಾನರಾರಿಹರು? ಸಮಸ್ತ ಜಗದಲಿ, ಯುಗ ಯುಗಗಳಲಿ ನಮ್ಮ 
ಸಮಾನರಾರಿಹರು? ಹಳೆ ಚಿತ್ರಗೀತೆ ನೆನಪಾಗಿ, ನಗುಬಂತು. 

"ನಾನಾದರೂ 
ಏನು ಮಾಡಲೀ?
'ನಾನು'_ 
ಯಾವಾಗಲೂ
'ಉತ್ತಮ (ಪ್ರಥಮ)
ಪುರುಷ"...
ಎಂಬ ,

ಎಂದೋ ಓದಿದ ಹನಿಗವನ ನೆನಪಾಯ್ತು. ಸದಾ ' ಅಹಂ ಬ್ರಹ್ಮಾಸ್ಮಿ'
Pose ಕೊಟ್ಟು ಕೊಂಡಿರುವ ಮನುಷ್ಯ
ಪ್ರಾಣಭಯದ  ಮುಂದೆ ಎಷ್ಟೊಂದು ಅಲ್ಪನಾಗಿಬಿಡುತ್ತಾನೆ  ಎಂಬುದರ ಸಜೀವ ದೃಷ್ಟಾಂತ ಕಣ್ಣೆದುರಿಗೇ ಇತ್ತು.
ಬರಿಗಣ್ಣಿಗೆ ಕಾಣದ virus ಒಂದು ಇಂಥ ಭೂಪರನ್ನು ಮಂಡಿಯೂರಿಸಿದ ಪರಿ ನೋಡಿ, ಹೇಗಿದೆ?

           ‌   ಲೈಫು ಇಷ್ಟೇನೆ...

Friday 12 March 2021

26.ಆ ಸಮಯ... ಆನಂದಮಯ...



"ಎಷ್ಟೊತ್ತಾಯ್ತು ಬಂದು?'

" ಚಹ ಅಥವಾ ಕಾಫಿ?"

"ಇಲ್ಲ , ಇಲ್ಲ, ಬೇಡ..."

"ಮಜ್ಜಿಗೆಯಾದರೂ ತೆಗೆದುಕೊಳ್ಳಿ"

"ನಾಯಿಗೆ  ಹೆದರುತ್ತೀರಾ?  ಇಲ್ಲಾಂದ್ರೆ 'ಗೋಪೀ'ನ  ಇಲ್ಲಿಗೇ  ಕರೆಸಿಕೊಳ್ಳುತ್ತೇನೆ'

   ‌‌           ಹೀಗೆ ಪ್ರಾರಂಭವಾದ  , ನಮ್ಮ ಮಾತುಕತೆಯನ್ನು  ನಿರಾಳವಾಗಿ ಮುಗಿಸಿ ಹೊರಬಂದಾಗ  ಅರ್ಧ ಗಂಟೆ ಮೀರಿತ್ತು. "ದೊಡ್ಡವರ ಭೇಟಿ,  ಹೇಗೆ ನಡೆದುಕೊಂಡರೆ  ಹೇಗೋ ಏನೋ ಎಂಬ ಅಳುಕು ಅದಾಗಲೇ ಮಾಯವಾಗಿ  ಹೋಗಿತ್ತು. ಅಲ್ಲಿದ್ದಷ್ಟು ಹೊತ್ತೂ ಒಂದೇ ಒಂದು ನಿಮಿಷ ಅವರ ಸ್ಥಾನಮಾನದ ಅರಿವು ಮೂಡದಂತೆ, ಎಷ್ಟೋ ವರ್ಷಗಳ ಪರಿಚಯವಿದ್ದವರ ಹಾಗೆ,  ತಮ್ಮ ಹಣ, ಅಧಿಕಾರ,
ಅಂತಸ್ತು, ವಿದ್ಯೆ, ಬಿಸಿನೆಸ್ ಯಾವುದರ ಬಗ್ಗೆ ಒಂದಕ್ಷರವೂ  ಅವರ ಮಾತುಗಳಲ್ಲಿ ಇಣುಕದಂತೆ , ನಮ್ಮ ಬಗ್ಗೆ, ನಾನು ಅವರಿಗೆ  ಕೊಟ್ಟ' ನೀರ ಮೇಲೆ ಅಲೆಯ ಉಂಗುರ ' ಪುಸ್ತಕದ ಬಗ್ಗೆ, ನಮ್ಮೂರು  ಹುಬ್ಬಳ್ಳಿ ,  ಶಿಗ್ಗಾಂವ ಬಗ್ಗೆ, ಆಶ್ಚರ್ಯವೆಂದರೆ  ನನ್ನೂರು ರಟ್ಟೀಹಳ್ಳಿಯಲ್ಲಿರುವ ತಮ್ಮ ಪರಿಚಿತರ ಬಗ್ಗೆ,  ಅಲ್ಲಿಯ ಕುಮದ್ವತಿ ನದಿ, ಕದಂಬೇಶ್ವರ ದೇವಸ್ಥಾನಗಳ ಬಗ್ಗೆ, ಶಿಗ್ಗಾಂವಿಯ ತಮ್ಮ ಜೀವನದ ಬಗ್ಗೆ ತುಂಬ nostalgic ಆಗಿ ಮಾತನಾಡಿದ್ದಲ್ಲದೇ  ನಮಗೂ ಭೇಟಿಯನ್ನು ಅತ್ಯಂತ ಸರಳ, ಸುಲಭ, ಸಹಜವಾಗಿಸಿದ್ದು ಅವರ  ವಿಶೇಷ." ನಾನು ಕೊಟ್ಟ  ಪುಸ್ತಕವನ್ನು ಒಂದರೆಕ್ಷಣ ತಿರುವಿಹಾಕಿ " ನೀರ ಮೇಲೆ ಅಲೆಯ ಉಂಗುರ '_ಇದು "ಬೇಡಿ ಬಂದವಳು " ಚಿತ್ರಗೀತೆಯ ಸಾಲು. ಚಂದ್ರಕಲಾ ಅದರ ನಾಯಕಿ ,ಆ ಚಿತ್ರ ____ ಇಂಗ್ಲಿಷ  ಸಿನೆಮಾದ ( ಹೇಳಿದ ಹೆಸರು ನೆನಪಿಲ್ಲ) ಕನ್ನಡ 
ರೂಪಾಂತರ  ಆಧಾರಿತ  ಎಂದು ನೆನೆಸಿ ಆ ಹಾಡಿನ ಇನ್ನೂ ಎರಡು ,ಮೂರು ಸಾಲುಗಳನ್ನು  ಹಾಡಿದರು." ಖಂಡಿತ ಓದುತ್ತೇನೆ, ಪೂರ್ತಿಯಾಗಿಯೇ ಓದುತ್ತೇನೆ , ನಾನು ಓದುವದು  ನನ್ನ ವಿಮಾನ ಪಯಣದಲ್ಲಿ  ಮಾತ್ರ, ಉಳಿದಂತೆ  ಸಮಯದ ಕೊರತೆ' ಎಂದು ಹೇಳಿ, ತಮ್ಮ  ಇತ್ತೀಚೆಗಿನ ' soft ಮನ'  ಪುಸ್ತಕವನ್ನು ಸಹಿಯೊಂದಿಗೆ  ನನ್ನ ಕೈಗಿತ್ತರು.
               ‌ಇದಿಷ್ಟೂ ಯಾರ ಬಗ್ಗೆ ಎಂಬುದು ನಿಮಗೀಗ ಅರ್ಥವಾಗಿರಬಹುದು ಎಂದುಕೊಳ್ಳುತ್ತೇನೆ. ಅವರೇ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಕನ್ನಡತಿ ಶ್ರೀಮತಿ ಸುಧಾ ಮೂರ್ತಿಯವರು.
 ನಾನವರ ಊರು ಶಿಗ್ಗಾಂವಿಗೆ  ತೀರಾ ಹತ್ತಿರದವಳು. ಅವರದೇ ಹುಬ್ಬಳ್ಳಿ_ ಧಾರವಾಡದ ಗಂಡು ಕನ್ನಡದಲ್ಲಿ ಮಾತು. ಅದೇ ಕಾರಣಕ್ಕೆ  ನನಗೂ ಅವರಿಗೂ ಹೋಲಿಕೆ  ಕಂಡ ಹಲವರಿದ್ದಾರೆ. ಅದರ ಬಗ್ಗೆ ಹೇಳಿ ನಕ್ಕಾಗ ಅವರು ," ನನಗೂ ಒಂದಿಬ್ಬರು  ನೀವು  ಥೇಟ್  ಸುಧಾ ಮೂರ್ತಿಯವರಂತೆಯೇ ಕಾಣುತ್ತೀರಿ ಎಂದು ಹೇಳಿದ್ದಿದೆ'  ಎಂದು  ನಸುನಕ್ಕರು. ನಾನು  ಅವರ  ಗುಂಪಿನ follower. ಅವರ ಭಾಷಣ, ವಿಡಿಯೋಗಳನ್ನು
ತಪ್ಪದೇ  follow  ಮಾಡುತ್ತೇನೆ. ಅವರ ಅನೇಕ ಪರಿಚಯಸ್ಥರು ನಮಗೂ ಚನ್ನಾಗಿ ಪರಿಚಯ. ಆದರೂ ಭೇಟಿಗೆ ಮೊದಲು ಕೊಂಚ ಅಳುಕಿತ್ತು. ಮಾತನಾಡಲು ಪ್ರಾರಂಭಿಸಿದ ಮೇಲೆ ಆ ಅಡ್ಡಗೋಡೆಯೂ ಬಿದ್ದುಹೋಗಿ ನಿರಾಳವಾಗಿ ನಡೆದ  ಅವರೊಂದಿಗಿನ ಸಂಭಾಷಣೆಯ  ಒಂದೊಂದು ಮಾತೂ ಒಂದೊಂದು ಮುತ್ತು. ಮತ್ತೊಂದು ನಾನು ಅವರಲ್ಲಿ  ಗಮನಿಸಿದ ಅಂಶವೆಂದರೆ,  ಅವರ ಬಗೆಗೆ ಅಕಸ್ಮಾತ್ತಾಗಿ  ಬಂದ ಯಾವುದೇ  ಪ್ರಶಂಸೆಯ  ಮಾತುಗಳನ್ನು  ಪ್ರಯತ್ನ ಪೂರ್ವಕವಾಗಿ ಜಾಣತನದಿಂದ ಮರೆಸಿ ಮಾಡುತ್ತಿದ್ದ  ವಿಷಯಾಂತರ. ಅಂಥ ವಿಷಯಗಳಿಗೆ ಮುದ್ದಾಂ ಆಗಿ ತೋರುತ್ತಿದ್ದ ನಿರಾಸಕ್ತಿ.  ನಮ್ಮ  ಅತ್ಯಂತ  ಚಿಕ್ಕ ಸಾಧನೆಯನ್ನೂ ಹಿರಿದಾಗಿಸಿ, ವೈಭವೀಕರಿಸಿ, ಹೆಚ್ಚು ಮಹತ್ತರವಾಗಿ ಪ್ರದರ್ಶಿಸುವ 'ರೋಗ' ಇದ್ದ ನಮ್ಮಂಥವರು ಕಲಿಯಬೇಕಾದ್ದು ಬೆಟ್ಟದಷ್ಟಿದೆ." ಎಂಬುದನ್ನು ಕಂಡುಕೊಂಡೆ ." ಅವರೇ ಸ್ವಂತಕ್ಕೆ ಒಂದು ವಿಶ್ವ ವಿದ್ಯಾಲಯವಿದ್ದಂತೆ"  ಎಂಬುವ ಮಾತನ್ನು  ಓದಿದ್ದೆ...ಕೇಳಿದ್ದೆ... ಇಂದು ಕಣ್ಣಾರೆ ಕಂಡೆ...ಹತ್ತು ಪುಸ್ತಕಗಳ ಓದು ಕೊಡಲಾರದಷ್ಟು ಬಂಡವಾಳವನ್ನು ನನ್ನ ಇಂದಿನ  ಭೇಟಿ  ಕೊಟ್ಟದ್ದು  ಮಾತ್ರ ನಿಜ...ನಮಗೆ ಕೊಟ್ಟ ಹದಿನೈದು ನಿಮಿಷದ ಅವಧಿ  ಇಮ್ಮಡಿಯಾಗಿ  ಅರ್ಧಗಂಟೆ  ಅದಾಗಲೇ ಮಿಕ್ಕಿ ಹೋದದ್ದು  ಗೊತ್ತಾದದ್ದು ಅವರ ಮುಂದಿನ ಭೇಟಿಯ schedule  ಅವರ ಗಮನಕ್ಕೆ ಅವರ ಸೆಕ್ರೆಟರಿ   ತಂದಾಗಲೇ. ' ಇನ್ನು ಸಾಕು' 'ಹೋಗಿಬನ್ನಿ' 'Time ಆಯ್ತು'  'ಮತ್ತೆ ಭೇಟಿಯಾಗೋಣ' ಇಂಥ  ಯಾವ ಮಾತುಗಳಿಲ್ಲದೇ ನಿಧಾನವಾಗಿ  ಸೋಫಾದಿಂದ  ಎದ್ದು , ಕೈಮುಗಿದು, ಬಾಗಿಲವರೆಗೆ ಬಂದು   ಸೌಜನ್ಯದಿಂದ  ಬೀಳ್ಕೊಟ್ಟದ್ದರಲ್ಲೂ  ನಮಗೊಂದು  ಘನವಾದ  ಕಲಿಕೆ...

               ಈ ಜನ್ಮದಲ್ಲಿ ಕಲಿಕೆಗೆ ಕೊನೆಯಿಲ್ಲ, ನಾವಿನ್ನೂ  ಏನೂ ಕಲಿತೇಯಿಲ್ಲ, ಅಥವಾ ಇನ್ನೂ ಕಲಿಯುವುದು ಸಾಕಷ್ಟಿದೆ   ಎಂಬ ನಮ್ರ ಭಾವವನ್ನು ಬಿತ್ತಿದ ಇಂಥ ಭೇಟಿಗಳು ನನಗೆ ಲಭಿಸುತ್ತಲೇ  ಇರಲಿ ಎಂಬ  ಸದಾಶಯ ಹೊತ್ತು ಸುಧಾ ತಾಯಿಯಿಂದ ಬೀಳ್ಕೊಂಡು ಬಂದೆ. ನಾನು 'ನೀರಮೇಲೆ ಅಲೆಯ ಉಂಗುರ ' ಬರೆಯುವಾಗ ಪ್ರೇರಣೆಯಾದದ್ದು ಅವರ ' ಸಾಮಾನ್ಯರಲ್ಲಿ ಅಸಾಮಾನ್ಯರು' ಕೃತಿ. ಅದರಲ್ಲಿ 'ನಾನೂ ಅವರಾಗಬಾರದಿತ್ತೇ?' ಹಾಗೂ' ಕಡಲೆ ಮತ್ತು ಹಲ್ಲುಗಳು' ಇವೆರಡೂ ಲೇಖನಗಳಿಗೆ ಅವರದೇ  ಬದುಕಿನ ಪ್ರೇರಣೆಯಿದೆ. ಮುದ್ರಣವಾದ ಕೂಡಲೇ ಅದರದೊಂದು ಪ್ರತಿ ಅವರ ಕೈಗಿತ್ತು ಆಶೀರ್ವಾದ ಪಡೆಯುವ ಚಿಕ್ಕ ಹಂಬಲವಿತ್ತು. ಆದರೆ ಅವರು ಇನ್ಫೋಸಿಸ್ ಪ್ರತಿಷ್ಠಾನದ ಕಾರ್ಯಕ್ರಮವೊಂದರಲ್ಲಿ ಸಂಪೂರ್ಣ ವ್ಯಸ್ತರಾದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಪುಸ್ತಕ ಬಿಡುಗಡೆಗೆ ನನ್ನ ಹುಟ್ಟುಹಬ್ಬ ಮೊದಲೇ ತಳುಕು ಹಾಕಿಕೊಂಡದ್ದರಿಂದ ಮುಂದೆ ಹಾಕುವಂತಿರಲಿಲ್ಲ. ಕಾರಣ ಅವರಿಗೆ ಪ್ರತಿ ಕೊಡುವದಾಗದೇ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಕೊಟ್ಟು ಮುಗಿಸಿ ಸಾಂಕೇತಿಕ ಬಿಡುಗಡೆ ಮಾಡಿ ಆಯಿತು. ನಂತರ ಅವರ ಭೇಟಿಯ ದಿನಾಂಕ ನಿಗದಿಯಾಗಿ  ಅವರಿಗೆ ಭೇಟಿಯಾಗಿ ಪ್ರತಿಕೊಟ್ಟು ಬಂದೆ. ಆದರೆ ಕೆಲವೇ ಕೆಲವು ನಿಮಿಷಗಳ  ಈ ಭೇಟಿಯ ಗುಂಗು ಸುಲಭವಾಗಿ ಮನಸ್ಸಿನಿಂದ ಅಳಿಯುವಂಥದ್ದಲ್ಲ. Thank you Sudha Murthy Madam...

ಬದುಕು ಜಟಕಾ ಬಂಡಿ...ವಿಧಿ ಅದರ ಸಾಹೇಬ...

"ಬದುಕು ಜಟಕಾ ಬಂಡಿ...ವಿಧಿಯದರ ಸಾಹೇಬ..."

        " ನಾಳೆ ನಮ್ಮನೆಯಲ್ಲಿ  ಶಿವರಾತ್ರಿಯ  ವಿಶೇಷ ಕಾರ್ಯಕ್ರಮ. ಬೆಳಿಗ್ಗೆ ಬೇಗನೇ ಕೆಲವು ಪೂಜೆಗಳನ್ನು 
 ಇಟ್ಟುಕೊಂಡಿದ್ದೇವೆ  ನೀವು ಹಿರಿಯರು ಮುಂದೆ ನಿಂತು ನಡೆಸಿಕೊಡಬೇಕು, ಆದಷ್ಟು ಬೇಗನೇ ಮುಗಿಸುವ ವಿಚಾರವಿದೆ, ಇಲ್ಲದಿದ್ದರೆ ಯಾರಿಗೂ ವಿಶ್ರಾಂತಿಯಾಗುವದಿಲ್ಲ. ಬೇಗನೇ ಬಂದು ಬಿಡಿ." 

            ಇದು ನಮ್ಮಕ್ಕನಿಗೆ ಬಂದ ಆಗ್ರಹದ ಆಮಂತ್ರಣ. ಅವಳಿಗೋ ಇಂಥದಕ್ಕೆಲ್ಲ ಸಂಭ್ರಮವೋ ಸಂಭ್ರಮ. ಅತಿ ಅನಿವಾರ್ಯ ಕಾರಣಗಳಿಲ್ಲದೇ ಯಾವುದನ್ನೂ ತಪ್ಪಿಸಿಕೊಳ್ಳುವ ಸ್ವಭಾವ ಅವಳದಲ್ಲವೇ ಅಲ್ಲ. ಬರುವದಾಗಿ ಭರವಸೆ ಕೊಟ್ಟು, ಮರುದಿನ ಉಡಬೇಕಿದ್ದ ಸೀರೆ, ಕುಪ್ಪುಸಗಳನ್ನು ಗಳದ ಮೇಲೆ ಕೊಡವಿ ಹಾಕಿಯಾಯಿತು.

             ಮರುದಿನ ಐದು ಗಂಟೆಗೇ ಮನೆಯ ದೀಪ ಹತ್ತಿದವು. ಮನೆಯಂಗಳ ಗುಡಿಸಿ, ಸಾರಿಸಿ ಗುಡಿಗೆ ಬೇಗ ಹೋಗಬೇಕು. ಮಾಸೂರಿನಲ್ಲಿ ಅವರದೇ ಮನೆತನದ ಒಂದು ದೇವಸ್ಥಾನವಿದೆ. ಸೋದರರು ಪಾಳಿಯ ಮೇಲೆ ಪೂಜೆ, ಉತ್ಸವಗಳ ಜವಾಬ್ದಾರಿ ಹೊರುವದು ರೂಢಿ. ಆ ವರ್ಷ ಅವರದೇ ಸರದಿ. ನಸುಕಿನಲ್ಲಿಯೇ ಎದ್ದು, ಗರ್ಭಗುಡಿ , ಒಳಾಂಗಣ ಹೊರಾಂಗಣಗಳನ್ನು ಉಡುಗಿ, ತೊಳೆದು, ರಂಗೋಲಿ ಹಾಕಿ, ನಂದಾ ದೀಪಕ್ಕೆ ಎಣ್ಣೆ ಎರೆದು ಬಂದು ಬಿಟ್ಟರೆ ಮುಂದಿನ ಪೂಜೆಯ ಜವಾಬ್ದಾರಿ ಮನೆಯ ಗಂಡಸರಿಗೆ ರವಾನೆ.
            ‌ಬೇಗಕಾರ್ಯಕ್ರಮಕ್ಕೆ ಸಿದ್ಧವಾಗುವ ಯೋಚನೆ-
ಯೊಂದಿಗೆ ಮನೆಯ ಬಾಗಿಲು ತೆರೆದಾಯಿತು. ಆಗ ಕಾಲ್ಬೆರಳುಗಳಿಗೆ ಏನೋ ಚುಚ್ಚಿದ ಹಾಗಾಗಿ, ಫಕ್ಕನೇ ದೀಪ ಹೊತ್ತಿಸಿ ನೋಡಿದರೆ ಏನೇನೂ ಇಲ್ಲ. ಮಣ್ಣಿನ ಮನೆ, ಕಮತದ ಹಿತ್ತಲು, ಕಾಳುಕಡಿಗಳ ದಾಸ್ತಾನು, ಇಲಿಗಳಿಗೇನೂ ಬರವಿಲ್ಲ. ಒಳಗೆ ಹೋಗಿ, ರಕ್ತ ಒರೆಸಿ, ಅದಕ್ಕಿಷ್ಟು ಅರಿಷಿಣ ಬಳಿದು, ಒಂದು ಬಟ್ಟೆ ಸುತ್ತಿ , ಗುಡಿಗೆ ಹೋಗಿ ಸಾಂಗವಾಗಿ ಅಂದುಕೊಂಡದ್ದು, ಮಾಡ- ಬೇಕಾದ್ದು ಮಾಡಿಮುಗಿಸಿ ಮನೆಗೆ ಹೊರಡಬೇಕು, ಏನೋ ಸಂಕಟ, ಗಲಿಬಿಲಿ, ಅರ್ಥವಾಗದ ಕಳವಳ, ಕಣ್ಣು ಪಟಪಟ ಹೊಡೆಯುವದು ಎಲ್ಲ ಸುರುವಾಯ್ತು. ಎರಡು ಹೆಜ್ಜೆ ಹೇಗೋ ಬಂದವಳಿಗೆ ಮನೆಯವರೆಗೂ ನಡೆಯಲಾಗಿಲ್ಲ. ಯಾರದೋ ಕಟ್ಟೆಗೆ ಸುಧಾರಿಸಿಕೊಳ್ಳಲು ಕುಳಿತಾಗ ಅವರಿವರು ವಿಷಯ ತಿಳಿದು ತುರ್ತಾಗಿ ದವಾಖಾನೆಗೆ ಒಯ್ಯುವ ಸಿದ್ಧತೆ ನಡೆದಾಗ ಅವಳು ಹೇಳಿದ್ದು," ನನಗೇನೂ ಆಗಿಲ್ಲ, ಒಬ್ಬರು ನನ್ನ ಜೊತೆ ಸಾಕು, ಬೆಳಗಿನ ಹೊತ್ತು, ನಿಮ್ಮ ನಿಮ್ಮ ಕೆಲಸ ಮಾಡಿಕೊಳ್ಳಿ". 
                ಅವಳ ಹೆಸರೇ ' ವಸುಮತಿ', ಭೂಮಿ ತೂಕದ ತಾಳ್ಮೆ. ಮಾತಿನಲ್ಲೂ. ಕೃತಿಯಲ್ಲೂ...

    ‌ ಆದರೆ ಕೆಲವರು ತುರ್ತು ಅವಳನ್ನು ಆಟೋ ದಲ್ಲಿ ಕರೆದುಕೊಂಡು ಹೊರಟಾಗ ನಿಧಾನವಾಗಿ ಕಣ್ಣುಮುಚ್ಚಿ ಪ್ರಜ್ಞೆ ತಪ್ಪಿದವಳನ್ನು ದವಾಖಾನೆಗೆ ಕರೆದೊಯ್ದಾಗ ಏನೂ ಉಳಿದಿರಲೇ ಇಲ್ಲ, ಅವಳ ಉಸಿರು, ಕರೆದೊಯ್ದವರ ಭರವಸೆ, ಉಪಚಾರದ ಯಾವುದೇ ವಿಧಾನ, ಎಲ್ಲವೂ ವ್ಯರ್ಥವಾಗಿತ್ತು. ನೂರಾರು ಜನರನ್ನು ಹಾವಿನ ಕಡಿತದ  ನಂತರವೂ  ಬದುಕಿಸಿದ  ಸ್ವ್ವ್ವ್
ಡಾಕ್ಟರ್,  ಮನೆಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪರಿತಪಿಸಿದ ರೀತಿ ಎಲ್ಲರನ್ನೂ ಕಂಗೆಡಿಸಿತ್ತು.
             ಕಡಿದದ್ದು ಏನು ಎಂಬುದು ಮೊದಲೇ ತಿಳಿಯದಿದ್ದುದು, ಎಂದೂ ಯಾವುದಕ್ಕೂ,ಯಾರನ್ನೂ
ಬೇಡದ ನಮ್ಮಕ್ಕನ ಅಂತರ್ಮುಖಿ ಸ್ವಭಾವ, ಅಂಥ ಹಳ್ಳಿಯ ಮನೆಗಳಲ್ಲಿ ಅದೂ ಇದೂ ಕಚ್ಚುವದು ಅತ್ಯಂತ ಸಾಮಾನ್ಯವೆಂಬ ಅನಿಸಿಕೆ ಇವುಗಳಲ್ಲಿ ಯಾವುದಕ್ಕೆ ಅವಳ ಜೀವ ಬೇಕಿತ್ತೋ ಇಂದಿಗೂ ಅರ್ಥವಾಗಿಲ್ಲ. ವಿಷಯವೆಂದರೆ, ಅಂದು ಅವಳ ಉಸಿರು ನಿಲ್ಲಿಸಿದ್ದು ಹಾವೋ, ವಿಷದ ಚೇಳೋ, ಅಥವಾ ಬೇರಿನ್ನೇನು ಎಂಬುದು ನಮಗಿನ್ನೂ ಗೂಢ. ಕಣ್ಣಿಗೆ ಕಂಡಿದ್ದರೆ 
ಏನಾದರೂ ಮಾಡಬಹುದಿತ್ತು. ಅದರಲ್ಲೇ ಅವಳ ಕೊನೆ ಇರುವಾಗ ದೈವ ಅವಳಿಗೆ ಆ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ಅನಸ್ಥೇಸಿಯಾ Dose ಹೆಚ್ಚಾದರೆ ನಿದ್ರೆಗೆ ಜಾರಿದವರು ಚಿರನಿದ್ರೆಗೆ ಜಾರಿದಂತೆ ,ಅವಳು ಹಾಕಿದ ಅಂಗಳದ ನೀರು ಆರುವ ಮೊದಲೇ, ಇಟ್ಟ ರಂಗೋಲಿ ಅಳಿಸುವ ಮೊದಲೇ, ತೆಗೆದಿಟ್ಟ ಸೀರೆಯುಟ್ಟು ಸಂಭ್ರಮಿಸುವ ಮೊದಲೇ, ಪೂರ್ವದಲ್ಲಿ ಕಂಡ ಸೂರ್ಯ ಇಡಿಯಾಗಿ ಮೇಲೇಳುವ ಮೊದಲೇ ,ಎಲ್ಲರಿಗೂ ಇದು ಏನಾಗಿದೆ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸದಾ ಶಾಂತಸ್ವಭಾವದ,
ಯಾವುದೇ ಸದ್ದು ಗದ್ದಲ ಗೊತ್ತಿರದ, ಆಳ ನೀರಿನಂತೆ ಗಂಭೀರವಾಗಿಯೇ ಇದ್ದು, ಇಲ್ಲವಾದವಳ ಕಥೆ
ನಮ್ಮ ಬದುಕಿನ ದುರಂತ ಅಧ್ಯಾಯವಾದದ್ದು ಮಾತ್ರ ನಮ್ಮನ್ನು ಸತತ ಕಾಡದೇ ಬಿಡದು.
          ಇದು ನಡೆದದ್ದು ೨೦೦೭ ರಲ್ಲಿ. ಹದಿಮೂರು ವರ್ಷಗಳ ಹಿಂದೆ. ಮುಂದೆ ಹರಿಯುವ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವದಿಲ್ಲ. ಕೆಲವೊಮ್ಮೆ ಬೇಡವಾದುದನ್ನು ನಮ್ಮೆದುರೇ ದಂಡೆಗೆ ಎಳೆದು ಹಾಕಿ ನಮ್ಮನ್ನು ಕಾಡುತ್ತಲೇ ಇರುತ್ತದೆ.
         ನಿಜ, ಬದುಕು ಜಟಕಾಬಂಡಿ...ವಿಧಿಯದರ ಸಾಹೇಬ, ಮದುವೆಗೋ...
ಮಸಣಕೋ ಅದರದೇ ಚಿತ್ತ...😒😒😒😒😒. ನೀವು ಹಿರಿಯರು, ಮುಂದೆ ನಿಂತು ನಡೆಸಿಕೊಡಬೇಕು, ಆದಷ್ಟು ಬೇಗನೇ ಮುಗಿಸುವ ವಿಚಾರವಿದೆ, ಇಲ್ಲದಿದ್ದರೆ ಯಾರಿಗೂ ವಿಶ್ರಾಂತಿಯಾಗುವದಿಲ್ಲ. ಬೇಗನೇ ಬಂದು ಬಿಡಿ." 

            ಇದು ನಮ್ಮಕ್ಕನಿಗೆ ಬಂದ ಆಗ್ರಹದ ಆಮಂತ್ರಣ. ಅವಳಿಗೋ ಇಂಥದಕ್ಕೆಲ್ಲ ಸಂಭ್ರಮವೋ ಸಂಭ್ರಮ. ಅತಿ ಅನಿವಾರ್ಯ ಕಾರಣಗಳಿಲ್ಲದೇ ಯಾವುದನ್ನೂ ತಪ್ಪಿಸಿಕೊಳ್ಳುವ ಸ್ವಭಾವ ಅವಳದಲ್ಲವೇ ಅಲ್ಲ. ಬರುವದಾಗಿ ಎಂದುಭರವಸೆ ಕೊಟ್ಟು, ಮರುದಿನ ಉಡಬೇಕಿದ್ದ ಸೀರೆ, ಕುಪ್ಪುಸಗಳನ್ನು ಗಳದ ಮೇಲೆ ಕೊಡವಿ ಹಾಕಿಯಾಯಿತು.

             ಮರುದಿನ ಐದು ಗಂಟೆಗೇ ಮನೆಯ ದೀಪ ಹತ್ತಿದವು. ಮನೆಯಂಗಳ ಗುಡಿಸಿ, ಸಾರಿಸಿ ಗುಡಿಗೆ ಬೇಗ ಹೋಗಬೇಕು. ಮಾಸೂರಿನಲ್ಲಿ ಅವರದೇ ಮನೆತನದ ಶ್ರೀರಾಮ ದೇವಸ್ಥಾನವಿದೆ. ಸೋದರರು ಪಾಳಿಯ ಮೇಲೆ ಪೂಜೆ, ಉತ್ಸವಗಳ ಜವಾಬ್ದಾರಿ ಹೊರುವದು ರೂಢಿ. ಆ ವರ್ಷ ಅವರದೇ ಸರದಿ. ನಸುಕಿನಲ್ಲಿಯೇ ಎದ್ದು, ಗರ್ಭಗುಡಿ , ಒಳಾಂಗಣ ಹೊರಾಂಗಣಗಳನ್ನು ಉಡುಗಿ, ತೊಳೆದು, ರಂಗೋಲಿ ಹಾಕಿ, ನಂದಾ ದೀಪಕ್ಕೆ ಎಣ್ಣೆ ಎರೆದು ಬಂದು ಬಿಟ್ಟರೆ ಮುಂದಿನ ಪೂಜೆಯ ಜವಾಬ್ದಾರಿ ಮನೆಯ ಗಂಡಸರಿಗೆ ರವಾನೆ.
            ‌ಬೇಗಕಾರ್ಯಕ್ರಮಕ್ಕೆ ಸಿದ್ಧವಾಗುವ ಯೋಚನೆ-
ಯೊಂದಿಗೆ ಮನೆಯ ಬಾಗಿಲು ತೆರೆದಾಯಿತು. ಆಗ ಕಾಲ್ಬೆರಳುಗಳಿಗೆ ಏನೋ ಚುಚ್ಚಿದ ಹಾಗಾಗಿ, ಫಕ್ಕನೇ ದೀಪ ಹೊತ್ತಿಸಿ ನೋಡಿದರೆ ಏನೇನೂ ಇಲ್ಲ. ಮಣ್ಣಿನ ಮನೆ, ಕಮತದ ಹಿತ್ತಲು, ಕಾಳುಕಡಿಗಳ ದಾಸ್ತಾನು, ಇಲಿಗಳಿಗೇನೂ ಬರವಿಲ್ಲ. ಒಳಗೆ ಹೋಗಿ, ರಕ್ತ ಒರೆಸಿ, ಅದಕ್ಕಿಷ್ಟು ಅರಿಷಿಣ ಬಳಿದು, ಒಂದು ಬಟ್ಟೆ ಸುತ್ತಿ , ಗುಡಿಗೆ ಹೋಗಿ ಸಾಂಗವಾಗಿ ಅಂದುಕೊಂಡದ್ದು, ಮಾಡ- ಬೇಕಾದ್ದು ಮಾಡಿಮುಗಿಸಿ ಮನೆಗೆ ಹೊರಡಬೇಕು, ಏನೋ ಸಂಕಟ, ಗಲಿಬಿಲಿ, ಅರ್ಥವಾಗದ ಕಳವಳ,ಕಣ್ಣು ಪಟಪಟ ಹೊಡೆಯುವದು ಎಲ್ಲ ಸುರುವಾಯ್ತು. ಎರಡು ಹೆಜ್ಜೆ ಹೇಗೋ ಬಂದವಳಿಗೆ ಮನೆಯವರೆಗೂ ನಡೆಯಲಾಗಿಲ್ಲ. ಯಾರದೋ ಕಟ್ಟೆಗೆ ಸುಧಾರಿಸಿಕೊಳ್ಳಲು ಕುಳಿತಾಗ ಅವರಿವರು ವಿಷಯ ತಿಳಿದು ತುರ್ತಾಗಿ ದವಾಖಾನೆಗೆ ಒಯ್ಯುವ ಸಿದ್ಧತೆ ನಡೆದಾಗ ಅವಳು ಹೇಳಿದ್ದು," ನನಗೇನೂ ಆಗಿಲ್ಲ, ಒಬ್ಬರು ನನ್ನ ಜೊತೆ ಸಾಕು, ಬೆಳಗಿನ ಹೊತ್ತು, ನಿಮ್ಮ ನಿಮ್ಮ ಕೆಲಸ ಮಾಡಿಕೊಳ್ಳಿ". 
                ಅವಳ ಹೆಸರೇ ' ವಸುಮತಿ', ಭೂಮಿ ತೂಕದ ತಾಳ್ಮೆ...ಮಾತಿನಲ್ಲೂ...ಕೃತಿಯಲ್ಲೂ...

    ‌ ಆದರೆ ಕೆಲವರು ತುರ್ತು ಅವಳನ್ನು ಆಟೋ ದಲ್ಲಿ ಕರೆದುಕೊಂಡು ಹೊರಟಾಗ ನಿಧಾನವಾಗಿ ಕಣ್ಣುಮುಚ್ಚಿ ಪ್ರಜ್ಞೆ ತಪ್ಪಿದವಳನ್ನು ದವಾಖಾನೆಗೆ ಕರೆದೊಯ್ದಾಗ ಏನೂ ಉಳಿದಿರಲೇ ಇಲ್ಲ,ಅವಳ ಉಸಿರು, ಕರೆದೊಯ್ದವರ ಭರವಸೆ, ಉಪಚಾರದ ಯಾವುದೇ ವಿಧಾನ, ಎಲ್ಲವೂ ವ್ಯರ್ಥವಾಗಿತ್ತು. ನೂರಾರು ಜನರನ್ನು ಬದುಕಿಸಿದ ಸ್ವತಃ ಡಾಕ್ಟರ್,ಮನೆಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪರಿತಪಿಸಿದ ರೀತಿ ಎಲ್ಲರನ್ನೂ ಕಂಗೆಡಿಸಿತ್ತು.
             ಕಡಿದದ್ದು ಏನು ಎಂಬುದು ಮೊದಲೇ ತಿಳಿಯದಿದ್ದುದು, ಎಂದೂ ಯಾವುದಕ್ಕೂ,ಯಾರನ್ನೂ
ಬೇಡದ ನಮ್ಮಕ್ಕನ ಅಂತರ್ಮುಖಿ ಸ್ವಭಾವ, ಅಂಥ ಹಳ್ಳಿಯ ಮನೆಗಳಲ್ಲಿ ಅದೂ ಇದೂ ಕಚ್ಚುವದು ಅತ್ಯಂತ ಸಾಮಾನ್ಯವೆಂಬ ಅನಿಸಿಕೆ ಇವುಗಳಲ್ಲಿ ಯಾವುದಕ್ಕೆ ಅವಳ ಜೀವ ಬೇಕಿತ್ತೋ ಇಂದಿಗೂ ಅರ್ಥವಾಗಿಲ್ಲ. ವಿಷಯವೆಂದರೆ, ಅಂದು ಅವಳ ಉಸಿರು ನಿಲ್ಲಿಸಿದ್ದು ಹಾವೋ, ವಿಷದ ಚೇಳೋ, ಅಥವಾ ಬೇರಿನ್ನೇನು ಎಂಬುದು ನಮಗಿನ್ನೂ ಗೂಢ. ಕಣ್ಣಿಗೆ ಕಂಡಿದ್ದರೆ 
ಏನಾದರೂ ಮಾಡಬಹುದಿತ್ತು. ಅದರಲ್ಲೇ ಅವಳ ಕೊನೆ ಇರುವಾಗ ದೈವ ಅವಳಿಗೆ ಆ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ಅನಸ್ಥೇಸಿಯಾ Dose ಹೆಚ್ಚಾದರೆ ನಿದ್ರೆಗೆ ಜಾರಿದವರು ಚಿರನಿದ್ರೆಗೆ ಜಾರಿದಂತೆ ,ಅವಳು ಹಾಕಿದ ಅಂಗಳದ ನೀರು ಆರುವ ಮೊದಲೇ, ಇಟ್ಟ ರಂಗೋಲಿ ಅಳಿಸುವ ಮೊದಲೇ, ತೆಗೆದಿಟ್ಟ ಸೀರೆಯುಟ್ಟು ಸಂಭ್ರಮಿಸುವ ಮೊದಲೇ, ಪೂರ್ವದಲ್ಲಿ ಕಂಡ ಸೂರ್ಯ ಇಡಿಯಾಗಿ ಮೇಲೇಳುವ ಮೊದಲೇ ,ಎಲ್ಲರಿಗೂ ಇದು ಏನಾಗಿದೆ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸದಾ ಶಾಂತಸ್ವಭಾವದ,
ಯಾವುದೇ ಸದ್ದು ಗದ್ದಲ ಗೊತ್ತಿರದ, ಆಳ ನೀರಿನಂತೆ ಗಂಭೀರವಾಗಿಯೇ ಇದ್ದು, ಇಲ್ಲವಾದವಳ ಕಥೆ
ನಮ್ಮ ಬದುಕಿನ ದುರಂತ ಅಧ್ಯಾಯವಾದದ್ದು ಮಾತ್ರ ನಮ್ಮನ್ನು ಸತತ ಕಾಡದೇ ಬಿಡದು.
          ಇದು ನಡೆದದ್ದು ೨೦೦೭ ರಲ್ಲಿ. ಹದಿಮೂರು ವರ್ಷಗಳ ಹಿಂದೆ. ಮುಂದೆ ಹರಿಯುವ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವದಿಲ್ಲ. ಕೆಲವೊಮ್ಮೆ ಬೇಡವಾದುದನ್ನು ನಮ್ಮೆದುರೇ ದಂಡೆಗೆ ಎಳೆದು ಹಾಕಿ ನಮ್ಮನ್ನು ಕಾಡುತ್ತಲೇ ಇರುತ್ತದೆ.
         ನಿಜ, ಬದುಕು ಜಟಕಾಬಂಡಿ...ವಿಧಿಯದರ ಸಾಹೇಬ, ಮದುವೆಗೋ...
ಮಸಣಕೋ ಅದರದೇ ಚಿತ್ತ...😒😒😒😒😒ರ್ಯಕ್ರಮ. ನೀವು ಹಿರಿಯರು, ಮುಂದೆ ನಿಂತು ನಡೆಸಿಕೊಡಬೇಕು, ಆದಷ್ಟು ಬೇಗನೇ ಮುಗಿಸುವ ವಿಚಾರವಿದೆ, ಇಲ್ಲದಿದ್ದರೆ  ಯಾರಿಗೂ ವಿಶ್ರಾಂತಿಯಾಗುವದಿಲ್ಲ. ಬೇಗನೇ ಬಂದು ಬಿಡಿ." 

            ಇದು ನಮ್ಮಕ್ಕನಿಗೆ  ಬಂದ ಆಗ್ರಹದ ಆಮಂತ್ರಣ. ಅವಳಿಗೋ ಇಂಥದಕ್ಕೆಲ್ಲ ಸಂಭ್ರಮವೋ ಸಂಭ್ರಮ. ಅತಿ ಅನಿವಾರ್ಯ ಕಾರಣಗಳಿಲ್ಲದೇ ಯಾವುದನ್ನೂ ತಪ್ಪಿಸಿಕೊಳ್ಳುವ ಸ್ವಭಾವ ಅವಳದಲ್ಲವೇ ಅಲ್ಲ. ಬರುವದಾಗಿ ಭರವಸೆ ಕೊಟ್ಟು, ಮರುದಿನ ಉಡಬೇಕಿದ್ದ ಸೀರೆ, ಕುಪ್ಪುಸಗಳನ್ನು  ಗಳದ ಮೇಲೆ ಕೊಡವಿ ಹಾಕಿಯಾಯಿತು.

             ಮರುದಿನ ಐದು ಗಂಟೆಗೇ ಮನೆಯ ದೀಪ ಹತ್ತಿದವು. ಮನೆಯಂಗಳ ಗುಡಿಸಿ, ಸಾರಿಸಿ ಗುಡಿಗೆ ಬೇಗ ಹೋಗಬೇಕು. ಮಾಸೂರಿನಲ್ಲಿ ಅವರದೇ ಮನೆತನದ ಶ್ರೀರಾಮ ದೇವಸ್ಥಾನವಿದೆ. ಸೋದರರು ಪಾಳಿಯ ಮೇಲೆ ಪೂಜೆ, ಉತ್ಸವಗಳ ಜವಾಬ್ದಾರಿ ಹೊರುವದು ರೂಢಿ. ಆ ವರ್ಷ ಅವರದೇ ಸರದಿ. ನಸುಕಿನಲ್ಲಿಯೇ ಎದ್ದು, ಗರ್ಭಗುಡಿ , ಒಳಾಂಗಣ ಹೊರಾಂಗಣಗಳನ್ನು ಉಡುಗಿ, ತೊಳೆದು, ರಂಗೋಲಿ ಹಾಕಿ, ನಂದಾ ದೀಪಕ್ಕೆ ಎಣ್ಣೆ ಎರೆದು ಬಂದು ಬಿಟ್ಟರೆ ಮುಂದಿನ ಪೂಜೆಯ ಜವಾಬ್ದಾರಿ ಮನೆಯ ಗಂಡಸರಿಗೆ ರವಾನೆ.
            ‌ಬೇಗಕಾರ್ಯಕ್ರಮಕ್ಕೆ ಸಿದ್ಧವಾಗುವ  ಯೋಚನೆ-
ಯೊಂದಿಗೆ ಮನೆಯ ಬಾಗಿಲು ತೆರೆದಾಯಿತು. ಆಗ ಕಾಲ್ಬೆರಳುಗಳಿಗೆ ಏನೋ ಚುಚ್ಚಿದ ಹಾಗಾಗಿ, ಫಕ್ಕನೇ ದೀಪ ಹೊತ್ತಿಸಿ ನೋಡಿದರೆ  ಏನೇನೂ ಇಲ್ಲ. ಮಣ್ಣಿನ ಮನೆ, ಕಮತದ ಹಿತ್ತಲು, ಕಾಳುಕಡಿಗಳ ದಾಸ್ತಾನು, ಇಲಿಗಳಿಗೇನೂ ಬರವಿಲ್ಲ. ಒಳಗೆ ಹೋಗಿ, ರಕ್ತ ಒರೆಸಿ, ಅದಕ್ಕಿಷ್ಟು ಅರಿಷಿಣ ಬಳಿದು, ಒಂದು ಬಟ್ಟೆ ಸುತ್ತಿ , ಗುಡಿಗೆ  ಹೋಗಿ ಸಾಂಗವಾಗಿ ಅಂದುಕೊಂಡದ್ದು, ಮಾಡ- ಬೇಕಾದ್ದು ಮಾಡಿಮುಗಿಸಿ ಮನೆಗೆ ಹೊರಡಬೇಕು, ಏನೋ ಸಂಕಟ, ಗಲಿಬಿಲಿ, ಅರ್ಥವಾಗದ  ಕಳವಳ,ಕಣ್ಣು ಪಟಪಟ ಹೊಡೆಯುವದು ಎಲ್ಲ ಸುರುವಾಯ್ತು. ಎರಡು ಹೆಜ್ಜೆ ಹೇಗೋ ಬಂದವಳಿಗೆ ಮನೆಯವರೆಗೂ ನಡೆಯಲಾಗಿಲ್ಲ. ಯಾರದೋ ಕಟ್ಟೆಗೆ ಸುಧಾರಿಸಿಕೊಳ್ಳಲು ಕುಳಿತಾಗ ಅವರಿವರು ವಿಷಯ ತಿಳಿದು ತುರ್ತಾಗಿ ದವಾಖಾನೆಗೆ ಒಯ್ಯುವ ಸಿದ್ಧತೆ ನಡೆದಾಗ ಅವಳು ಹೇಳಿದ್ದು," ನನಗೇನೂ ಆಗಿಲ್ಲ, ಒಬ್ಬರು  ನನ್ನ ಜೊತೆ ಸಾಕು, ಬೆಳಗಿನ ಹೊತ್ತು, ನಿಮ್ಮ ನಿಮ್ಮ ಕೆಲಸ  ಮಾಡಿಕೊಳ್ಳಿ". 
     ‌‌‌           ಅವಳ ಹೆಸರೇ ' ವಸುಮತಿ', ಭೂಮಿ ತೂಕದ ತಾಳ್ಮೆ...ಮಾತಿನಲ್ಲೂ...ಕೃತಿಯಲ್ಲೂ...

    ‌‌‌‌      ‌‌‌    ಆದರೆ  ಕೆಲವರು ತುರ್ತು ಅವಳನ್ನು ಆಟೋ ದಲ್ಲಿ  ಕರೆದುಕೊಂಡು ಹೊರಟಾಗ ನಿಧಾನವಾಗಿ ಕಣ್ಣುಮುಚ್ಚಿ  ಪ್ರಜ್ಞೆ ತಪ್ಪಿದವಳನ್ನು  ದವಾಖಾನೆಗೆ ಕರೆದೊಯ್ದಾಗ  ಏನೂ ಉಳಿದಿರಲೇ ಇಲ್ಲ,ಅವಳ ಉಸಿರು, ಕರೆದೊಯ್ದವರ ಭರವಸೆ, ಉಪಚಾರದ ಯಾವುದೇ ವಿಧಾನ, ಎಲ್ಲವೂ ವ್ಯರ್ಥವಾಗಿತ್ತು. ನೂರಾರು ಜನರನ್ನು ಬದುಕಿಸಿದ ಸ್ವತಃ ಡಾಕ್ಟರ್,ಮನೆಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪರಿತಪಿಸಿದ ರೀತಿ ಎಲ್ಲರನ್ನೂ ಕಂಗೆಡಿಸಿತ್ತು.
             ಕಡಿದದ್ದು ಏನು ಎಂಬುದು ಮೊದಲೇ ತಿಳಿಯದಿದ್ದುದು, ಎಂದೂ ಯಾವುದಕ್ಕೂ,ಯಾರನ್ನೂ
ಬೇಡದ ನಮ್ಮಕ್ಕನ ಅಂತರ್ಮುಖಿ ಸ್ವಭಾವ, ಅಂಥ ಹಳ್ಳಿಯ ಮನೆಗಳಲ್ಲಿ ಅದೂ ಇದೂ ಕಚ್ಚುವದು ಅತ್ಯಂತ ಸಾಮಾನ್ಯವೆಂಬ ಅನಿಸಿಕೆ ಇವುಗಳಲ್ಲಿ ಯಾವುದಕ್ಕೆ ಅವಳ ಜೀವ ಬೇಕಿತ್ತೋ  ಇಂದಿಗೂ ಅರ್ಥವಾಗಿಲ್ಲ. ವಿಷಯವೆಂದರೆ, ಅಂದು ಅವಳ ಉಸಿರು ನಿಲ್ಲಿಸಿದ್ದು ಹಾವೋ, ವಿಷದ ಚೇಳೋ, ಅಥವಾ ಬೇರಿನ್ನೇನು ಎಂಬುದು ನಮಗಿನ್ನೂ ಗೂಢ. ಕಣ್ಣಿಗೆ ಕಂಡಿದ್ದರೆ 
ಏನಾದರೂ ಮಾಡಬಹುದಿತ್ತು. ಅದರಲ್ಲೇ  ಅವಳ ಕೊನೆ ಇರುವಾಗ  ದೈವ ಅವಳಿಗೆ ಆ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ಅನಸ್ಥೇಸಿಯಾ Dose ಹೆಚ್ಚಾದರೆ ನಿದ್ರೆಗೆ ಜಾರಿದವರು ಚಿರನಿದ್ರೆಗೆ ಜಾರಿದಂತೆ ,ಅವಳು ಹಾಕಿದ ಅಂಗಳದ ನೀರು ಆರುವ ಮೊದಲೇ, ಇಟ್ಟ ರಂಗೋಲಿ ಅಳಿಸುವ ಮೊದಲೇ, ತೆಗೆದಿಟ್ಟ ಸೀರೆಯುಟ್ಟು ಸಂಭ್ರಮಿಸುವ ಮೊದಲೇ, ಪೂರ್ವದಲ್ಲಿ ಕಂಡ ಸೂರ್ಯ ಇಡಿಯಾಗಿ ಮೇಲೇಳುವ ಮೊದಲೇ ,ಎಲ್ಲರಿಗೂ ಇದು ಏನಾಗಿದೆ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸದಾ ಶಾಂತಸ್ವಭಾವದ,
ಯಾವುದೇ ಸದ್ದು ಗದ್ದಲ ಗೊತ್ತಿರದ, ಆಳ ನೀರಿನಂತೆ ಗಂಭೀರವಾಗಿಯೇ ಇದ್ದು, ಇಲ್ಲವಾದವಳ  ಕಥೆ
ನಮ್ಮ ಬದುಕಿನ ದುರಂತ ಅಧ್ಯಾಯವಾದದ್ದು ಮಾತ್ರ ನಮ್ಮನ್ನು ಸತತ ಕಾಡದೇ ಬಿಡದು.
      ‌‌‌    ಇದು ನಡೆದದ್ದು ೨೦೦೭ ರಲ್ಲಿ. ಹದಿಮೂರು ವರ್ಷಗಳ ಹಿಂದೆ. ಮುಂದೆ ಹರಿಯುವ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವದಿಲ್ಲ. ಕೆಲವೊಮ್ಮೆ  ಬೇಡವಾದುದನ್ನು ನಮ್ಮೆದುರೇ ದಂಡೆಗೆ ಎಳೆದು ಹಾಕಿ  ನಮ್ಮನ್ನು ಕಾಡುತ್ತಲೇ ಇರುತ್ತದೆ.
         ನಿಜ, ಬದುಕು ಜಟಕಾಬಂಡಿ...ವಿಧಿಯದರ ಸಾಹೇಬ, ಮದುವೆಗೋ...
ಮಸಣಕೋ  ಅದರದೇ ಚಿತ್ತ...😒😒😒😒😒. ನೀವು ಹಿರಿಯರು, ಮುಂದೆ ನಿಂತು ನಡೆಸಿಕೊಡಬೇಕು, ಆದಷ್ಟು ಬೇಗನೇ ಮುಗಿಸುವ ವಿಚಾರವಿದೆ, ಇಲ್ಲದಿದ್ದರೆ  ಯಾರಿಗೂ ವಿಶ್ರಾಂತಿಯಾಗುವದಿಲ್ಲ. ಬೇಗನೇ ಬಂದು ಬಿಡಿ." 

            ಇದು ನಮ್ಮಕ್ಕನಿಗೆ  ಬಂದ ಆಗ್ರಹದ ಆಮಂತ್ರಣ. ಅವಳಿಗೋ ಇಂಥದಕ್ಕೆಲ್ಲ ಸಂಭ್ರಮವೋ ಸಂಭ್ರಮ. ಅತಿ ಅನಿವಾರ್ಯ ಕಾರಣಗಳಿಲ್ಲದೇ ಯಾವುದನ್ನೂ ತಪ್ಪಿಸಿಕೊಳ್ಳುವ ಸ್ವಭಾವ ಅವಳದಲ್ಲವೇ ಅಲ್ಲ. ಬರುವದಾಗಿ ಎಂದುಭರವಸೆ ಕೊಟ್ಟು, ಮರುದಿನ ಉಡಬೇಕಿದ್ದ ಸೀರೆ, ಕುಪ್ಪುಸಗಳನ್ನು  ಗಳದ ಮೇಲೆ ಕೊಡವಿ ಹಾಕಿಯಾಯಿತು.

             ಮರುದಿನ ಐದು ಗಂಟೆಗೇ ಮನೆಯ ದೀಪ ಹತ್ತಿದವು. ಮನೆಯಂಗಳ ಗುಡಿಸಿ, ಸಾರಿಸಿ ಗುಡಿಗೆ ಬೇಗ ಹೋಗಬೇಕು. ಮಾಸೂರಿನಲ್ಲಿ ಅವರದೇ ಮನೆತನದ ಶ್ರೀರಾಮ ದೇವಸ್ಥಾನವಿದೆ. ಸೋದರರು ಪಾಳಿಯ ಮೇಲೆ ಪೂಜೆ, ಉತ್ಸವಗಳ ಜವಾಬ್ದಾರಿ ಹೊರುವದು ರೂಢಿ. ಆ ವರ್ಷ ಅವರದೇ ಸರದಿ. ನಸುಕಿನಲ್ಲಿಯೇ ಎದ್ದು, ಗರ್ಭಗುಡಿ , ಒಳಾಂಗಣ ಹೊರಾಂಗಣಗಳನ್ನು ಉಡುಗಿ, ತೊಳೆದು, ರಂಗೋಲಿ ಹಾಕಿ, ನಂದಾ ದೀಪಕ್ಕೆ ಎಣ್ಣೆ ಎರೆದು ಬಂದು ಬಿಟ್ಟರೆ ಮುಂದಿನ ಪೂಜೆಯ ಜವಾಬ್ದಾರಿ ಮನೆಯ ಗಂಡಸರಿಗೆ ರವಾನೆ.
            ‌ಬೇಗಕಾರ್ಯಕ್ರಮಕ್ಕೆ ಸಿದ್ಧವಾಗುವ  ಯೋಚನೆ-
ಯೊಂದಿಗೆ ಮನೆಯ ಬಾಗಿಲು ತೆರೆದಾಯಿತು. ಆಗ ಕಾಲ್ಬೆರಳುಗಳಿಗೆ ಏನೋ ಚುಚ್ಚಿದ ಹಾಗಾಗಿ, ಫಕ್ಕನೇ ದೀಪ ಹೊತ್ತಿಸಿ ನೋಡಿದರೆ  ಏನೇನೂ ಇಲ್ಲ. ಮಣ್ಣಿನ ಮನೆ, ಕಮತದ ಹಿತ್ತಲು, ಕಾಳುಕಡಿಗಳ ದಾಸ್ತಾನು, ಇಲಿಗಳಿಗೇನೂ ಬರವಿಲ್ಲ. ಒಳಗೆ ಹೋಗಿ, ರಕ್ತ ಒರೆಸಿ, ಅದಕ್ಕಿಷ್ಟು ಅರಿಷಿಣ ಬಳಿದು, ಒಂದು ಬಟ್ಟೆ ಸುತ್ತಿ , ಗುಡಿಗೆ  ಹೋಗಿ ಸಾಂಗವಾಗಿ ಅಂದುಕೊಂಡದ್ದು, ಮಾಡ- ಬೇಕಾದ್ದು ಮಾಡಿಮುಗಿಸಿ ಮನೆಗೆ ಹೊರಡಬೇಕು, ಏನೋ ಸಂಕಟ, ಗಲಿಬಿಲಿ, ಅರ್ಥವಾಗದ  ಕಳವಳ,ಕಣ್ಣು ಪಟಪಟ ಹೊಡೆಯುವದು ಎಲ್ಲ ಸುರುವಾಯ್ತು. ಎರಡು ಹೆಜ್ಜೆ ಹೇಗೋ ಬಂದವಳಿಗೆ ಮನೆಯವರೆಗೂ ನಡೆಯಲಾಗಿಲ್ಲ. ಯಾರದೋ ಕಟ್ಟೆಗೆ ಸುಧಾರಿಸಿಕೊಳ್ಳಲು ಕುಳಿತಾಗ ಅವರಿವರು ವಿಷಯ ತಿಳಿದು ತುರ್ತಾಗಿ ದವಾಖಾನೆಗೆ ಒಯ್ಯುವ ಸಿದ್ಧತೆ ನಡೆದಾಗ ಅವಳು ಹೇಳಿದ್ದು," ನನಗೇನೂ ಆಗಿಲ್ಲ, ಒಬ್ಬರು  ನನ್ನ ಜೊತೆ ಸಾಕು, ಬೆಳಗಿನ ಹೊತ್ತು, ನಿಮ್ಮ ನಿಮ್ಮ ಕೆಲಸ  ಮಾಡಿಕೊಳ್ಳಿ". 
     ‌‌‌           ಅವಳ ಹೆಸರೇ ' ವಸುಮತಿ', ಭೂಮಿ ತೂಕದ ತಾಳ್ಮೆ...ಮಾತಿನಲ್ಲೂ...ಕೃತಿಯಲ್ಲೂ...

    ‌‌‌‌      ‌‌‌    ಆದರೆ  ಕೆಲವರು ತುರ್ತು ಅವಳನ್ನು ಆಟೋ ದಲ್ಲಿ  ಕರೆದುಕೊಂಡು ಹೊರಟಾಗ ನಿಧಾನವಾಗಿ ಕಣ್ಣುಮುಚ್ಚಿ  ಪ್ರಜ್ಞೆ ತಪ್ಪಿದವಳನ್ನು  ದವಾಖಾನೆಗೆ ಕರೆದೊಯ್ದಾಗ  ಏನೂ ಉಳಿದಿರಲೇ ಇಲ್ಲ,ಅವಳ ಉಸಿರು, ಕರೆದೊಯ್ದವರ ಭರವಸೆ, ಉಪಚಾರದ ಯಾವುದೇ ವಿಧಾನ, ಎಲ್ಲವೂ ವ್ಯರ್ಥವಾಗಿತ್ತು. ನೂರಾರು ಜನರನ್ನು ಬದುಕಿಸಿದ ಸ್ವತಃ ಡಾಕ್ಟರ್,ಮನೆಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪರಿತಪಿಸಿದ ರೀತಿ ಎಲ್ಲರನ್ನೂ ಕಂಗೆಡಿಸಿತ್ತು.
             ಕಡಿದದ್ದು ಏನು ಎಂಬುದು ಮೊದಲೇ ತಿಳಿಯದಿದ್ದುದು, ಎಂದೂ ಯಾವುದಕ್ಕೂ,ಯಾರನ್ನೂ
ಬೇಡದ ನಮ್ಮಕ್ಕನ ಅಂತರ್ಮುಖಿ ಸ್ವಭಾವ, ಅಂಥ ಹಳ್ಳಿಯ ಮನೆಗಳಲ್ಲಿ ಅದೂ ಇದೂ ಕಚ್ಚುವದು ಅತ್ಯಂತ ಸಾಮಾನ್ಯವೆಂಬ ಅನಿಸಿಕೆ ಇವುಗಳಲ್ಲಿ ಯಾವುದಕ್ಕೆ ಅವಳ ಜೀವ ಬೇಕಿತ್ತೋ  ಇಂದಿಗೂ ಅರ್ಥವಾಗಿಲ್ಲ. ವಿಷಯವೆಂದರೆ, ಅಂದು ಅವಳ ಉಸಿರು ನಿಲ್ಲಿಸಿದ್ದು ಹಾವೋ, ವಿಷದ ಚೇಳೋ, ಅಥವಾ ಬೇರಿನ್ನೇನು ಎಂಬುದು ನಮಗಿನ್ನೂ ಗೂಢ. ಕಣ್ಣಿಗೆ ಕಂಡಿದ್ದರೆ 
ಏನಾದರೂ ಮಾಡಬಹುದಿತ್ತು. ಅದರಲ್ಲೇ  ಅವಳ ಕೊನೆ ಇರುವಾಗ  ದೈವ ಅವಳಿಗೆ ಆ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ಅನಸ್ಥೇಸಿಯಾ Dose ಹೆಚ್ಚಾದರೆ ನಿದ್ರೆಗೆ ಜಾರಿದವರು ಚಿರನಿದ್ರೆಗೆ ಜಾರಿದಂತೆ ,ಅವಳು ಹಾಕಿದ ಅಂಗಳದ ನೀರು ಆರುವ ಮೊದಲೇ, ಇಟ್ಟ ರಂಗೋಲಿ ಅಳಿಸುವ ಮೊದಲೇ, ತೆಗೆದಿಟ್ಟ ಸೀರೆಯುಟ್ಟು ಸಂಭ್ರಮಿಸುವ ಮೊದಲೇ, ಪೂರ್ವದಲ್ಲಿ ಕಂಡ ಸೂರ್ಯ ಇಡಿಯಾಗಿ ಮೇಲೇಳುವ ಮೊದಲೇ ,ಎಲ್ಲರಿಗೂ ಇದು ಏನಾಗಿದೆ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸದಾ ಶಾಂತಸ್ವಭಾವದ,
ಯಾವುದೇ ಸದ್ದು ಗದ್ದಲ ಗೊತ್ತಿರದ, ಆಳ ನೀರಿನಂತೆ ಗಂಭೀರವಾಗಿಯೇ ಇದ್ದು, ಇಲ್ಲವಾದವಳ  ಕಥೆ
ನಮ್ಮ ಬದುಕಿನ ದುರಂತ ಅಧ್ಯಾಯವಾದದ್ದು ಮಾತ್ರ ನಮ್ಮನ್ನು ಸತತ ಕಾಡದೇ ಬಿಡದು.
      ‌‌‌    ಇದು ನಡೆದದ್ದು ೨೦೦೭ ರಲ್ಲಿ. ಹದಿಮೂರು ವರ್ಷಗಳ ಹಿಂದೆ. ಮುಂದೆ ಹರಿಯುವ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವದಿಲ್ಲ. ಕೆಲವೊಮ್ಮೆ  ಬೇಡವಾದುದನ್ನು ನಮ್ಮೆದುರೇ ದಂಡೆಗೆ ಎಳೆದು ಹಾಕಿ  ನಮ್ಮನ್ನು ಕಾಡುತ್ತಲೇ ಇರುತ್ತದೆ.
         ನಿಜ, ಬದುಕು ಜಟಕಾಬಂಡಿ...ವಿಧಿಯದರ ಸಾಹೇಬ, ಮದುವೆಗೋ...
ಮಸಣಕೋ  ಅದರದೇ ಚಿತ್ತ...😒😒😒😒😒

Saturday 6 March 2021

 "ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿದೆ..."
        ‌‌‌‌‌    
          ‌‌‌‌‌  ಸುಮಾರು ಎರಡು ದಿನಗಳ ಹಿಂದೆ ಬೆಳಿಗ್ಗೆ ನನ್ನ  mobile ಸದ್ದಾಯಿತು. ಎತ್ತಿ 'ಹಲೋ' ಎಂದೆ.

" ನಮಸ್ಕಾರ ಮ್ಯಾಡಮ್, ಕೃಷ್ಣಾ ಕೌಲಗಿಯವರು ಬೇಕಾಗಿತ್ತು".

" ನಮಸ್ಕಾರ ಸರ್, ನಾನೇ ಮಾತಾಡ್ತಿರೋದು, ಹೇಳಿ"

" ನಿಮ್ಮ  ಪುಸ್ತಕ ಬಂದು ಮುಟ್ಟಿದೆ  ಮ್ಯಾಡಮ್. ತುಂಬ ಚನ್ನಾಗಿದೆ. ಸುಲಭವಾಗಿ  ಓದಿಸಿಕೊಂಡು  ಹೋಗ್ತಿದೆ. ಅಭಿನಂದನೆಗಳು ನಿಮಗೆ".

" ಸರ್, ಧನ್ಯವಾದಗಳು , ನಿಮ್ಮ ಅಭಿಪ್ರಾಯಕ್ಕೆ. ಖುಶಿಯಾಯ್ತು".

" ಇನ್ನೊಂದು ಮಾತು ಹೇಳಬಹುದಾ ಮ್ಯಾಡಮ್, ತಪ್ಪು ಭಾವಿಸಬಾರದು".

" ಇಲ್ಲ , ದಯವಿಟ್ಟು  ಹೇಳಿ"

"ನೀವು ಕನ್ನಡ ಲೇಖನಗಳಲ್ಲಿ ಇಂಗ್ಲಿಷ/ ಹಿಂದಿ ಶೀರ್ಷಿಕೆ, ಹಾಗೂ  ಪದಗಳ ಬಳಕೆ ಮಾಡಬಾರದಿತ್ತು" .

"ಊಟ  ಅಚ್ಚ  ಕನ್ನಡದ್ದೇ ಸರ್.  ಭಾಷೆಯ ಬಳಕೆ ಬರಿ  ಉಪ್ಪಿನಕಾಯಿ/ ಚಟ್ನಿಯಿದ್ದ ಹಾಗೇ".

" ಅದೂ ಬೇಡವಾಗಿತ್ತು. ನೀವು ಶಿಕ್ಷಕಿ. ಮೇಲಾಗಿ  ಹಿರಿಯರು.
ನೀವೇ ಕನ್ನಡ ಪೋಷಿಸದಿದ್ದರೆ ಹೇಗೆ? ಅಲ್ವಾ?"

" ಅದು ಕನ್ನಡದ ಅವಗಣನೆ ಅಲ್ಲ ಸರ್. ಕನ್ನಡಕ್ಕಿಷ್ಟು ಅಲಂಕಾರ. ಅಲ್ಲದೇ ಪ್ರತಿವರ್ಷ ಸಾವಿರಾರು ಕನ್ನಡ ಪದಗಳು ಆಕ್ಸಫರ್ಡ ಶಬ್ದಕೋಶದಲ್ಲಿ
ಇದ್ದ ರೀತಿಯಲ್ಲೇ ಒಪ್ಪಿತವಾಗುತ್ತಿವೆ. ಸರ್ವಸಮ್ಮತವೆನಿಸುತ್ತವೆ.  ವಿವಿಧ ಭಾಷೆಗಳ ನಡುವಣ ಅಡ್ಡಗೋಡೆ ಶಿಥಿಲವಾಗ್ತಿದೆ. ರೈಲು ನಿಲ್ದಾಣ, ದ್ವಿಚಕ್ರವಾಹನ, ಮಹಾವಿದ್ಯಾಲಯ, ಉಗಿಬಂಡಿ ,ವರ್ತಮಾನ ಪತ್ರಿಕೆಗಳು  ಹೀಗೆ ಬಳಸಿದರೆ ಸುಲಭಕ್ಕೆ ಅರ್ಥವಾಗದಷ್ಟು railway station, bicycle, college, University, Train , ಪೇಪರ್ಗಳು  ಕನ್ನಡದಲ್ಲಿ  ಹಾಸು ಹೊಕ್ಕಾಗಿವೆ. ಅಲ್ವಾ?"

"ಇರಬಹುದು  ಮ್ಯಾಡಮ್, ಆದರೂ ಅವೇ ಶಬ್ದಗಳನ್ನು ಕನ್ನಡ ಲಿಪಿಯಲ್ಲಿ ಬರೆಯೋಣ, ನಮ್ಮ ಊರಲ್ಲಿ ಸರಕಾರೀ ಕನ್ನಡ ಶಾಲೆಯಲ್ಲಿ ಇಂಗ್ಲಿಷ ಅಂಕಿಗಳನ್ನು ಬರೆಯುತ್ತಿದ್ದರು, ನಾನು ದಿನಾಲೂ ಶಾಲೆಗೆ ಹೋಗಿ ಕನ್ನಡದಲ್ಲಿ  ಕಲಿಸಲೇ
ಬೇಕೆಂದು ಆಗ್ರಹಿಸಿದೆ. ಈಗ ಅದನ್ನು  ಮಾಡುತ್ತಿದ್ದಾರೆ.
ನಾವು ಕೆಲ ಹಿರಿಯರಾದರೂ ಕನ್ನಡ ಉಳಿಸಲು ಪ್ರಯತ್ನಿಸೋಣ ಮ್ಯಾಡಮ್, ನಾಳಿನ ಪೀಳಿಗೆಗೆ ' ಬಿತ್ತಲು ಕನ್ನಡದ ಬೀಜಗಾಳುಗಳನ್ನು ಕಾಯ್ದಿಡೋಣ. ಇಲ್ಲದಿದ್ದರೆ  ನಮ್ಮ ಕನ್ನಡ ಬಹುಕಾಲ
ಉಳಿಯುವುದಿಲ್ಲ ಅಲ್ಲವೇ
ಮ್ಯಾಡಮ್?."

              ‌ನಿಜವಾದ ಅರ್ಥದಲ್ಲಿ ಯಾವುದೇ ಪ್ರಚಾರದ ಗೀಳಿಗೆ ಬೀಳದೇ  ಮನದಾಳದಿಂದ ಕನ್ನಡಕ್ಕಾಗಿ ಮಿಡಿಯುವ  ಹಿರಿಯ ,ಪ್ರಬುದ್ಧ ಹೃದಯವೊಂದನ್ನು ವೈಚಾರಿಕವಾಗಿ ವಾದಕ್ಕಿಳಿಸಿ  ಗಾಸಿಗೊಳಿಸಲು ಮನಸ್ಸಾಗಲಿಲ್ಲ. ಅವರು "' ನವೆಂಬರ್ ತಿಂಗಳಿಗೆ" ಮಾತ್ರ ಸೀಮಿತರಾದ ಕನ್ನಡಿಗರಾಗಿರಲಿಲ್ಲ. ಹುಟ್ಟಾ ಕನ್ನಡಿಗರಾಗಿದ್ದರು. ಅವರನ್ನು ಎದುರಿಸುವ ಯಾವುದೇ ಸಮರ್ಥವಾದ ಅಸ್ತ್ರ ನನ್ನ ಬತ್ತಳಿಕೆಯಲ್ಲಿ ಇರಲಿಲ್ಲ.ಬುದ್ಧಿ ಮಾತಾಡಿದ್ದರೆ ನನ್ನಮೆದುಳೂ ಉತ್ತರಿಸುತ್ತಿತ್ತು .ಅಲ್ಲಿ ಮಾತಾಡಿದ್ದು ಹೃದಯ. ಎರಡಕ್ಕೂ ತಾಳಮೇಳವಿರುವದಿಲ್ಲ ಎಂದೆನಿಸಿ ಅವರಿಗೆ ' ಆಯಿತು' ಎಂದು ಹೇಳಿ ಮಾತು ಮುಗಿಸಿ ಫೋನಿಟ್ಟೆ.
              'ಇಂಗ್ಲಿಷ  ಗೀತಗಳು' ಎಂಬ ಹೆಸರಿನಲ್ಲಿ ಅನೇಕ ಇಂಗ್ಲಿಷ ಭಾಷೆಯ ಅತ್ಯಮೂಲ್ಯ ಕವನಗಳನ್ನು ಕನ್ನಡಕ್ಕೆ ಕೊಟ್ಟ ಬಿ.ಎಮ್.ಶ್ರೀಯವರೇ ' ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ'_ ಎಂದಿದ್ದಾರೆ. ಇಂಗ್ಲಿಷ್ ಬೀಜಗಳನ್ನು ಬಿತ್ತಿ ಕನ್ನಡದ ಸಮೃದ್ಧ ಫಸಲು ತೆಗೆಯುವ ಕೆಲಸ ಮಾಡಿದ್ದಾರೆ. "ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು" ದಂಥ ಹಲವಾರು ಕವನಗಳು ಇಂಥ ಪ್ರಯತ್ನಗಳ ಫಲಶ್ರುತಿ.    ನಾನು ಅವರ ಪರಮ ಭಕ್ತೆ. ನನಗೆ ಕನ್ನಡದ ಬಗ್ಗೆ ಅಸಡ್ಡೆ ಇಲ್ಲ. ಇಂಗ್ಲಿಷ/ ಹಿಂದಿ  ನನ್ನ ಪದವಿಯ ವಿಷಯಗಳಾದರೂ ನನ್ನ ಬರಹಗಳಿಗೆ  ಕನ್ನಡವೇ ಆದ್ಯ.
ಏನಾದರೂ ಬೇರೆ ಭಾಷೆಯ ಒಲವಿದ್ದರೆ ಅದು ನನ್ನ ಕನ್ನಡವನ್ನು ಅಲಂಕರಿಸಿ ಚಂದಗೊಳಿಸಲಿಕ್ಕೆ ಮಾತ್ರ.
ಅನೇಕರು ' ನೀರ  ಮೇಲೆ ಅಲೆಯ ಉಂಗುರ" ದ ಅನ್ಯ ಭಾಷೆಯ ಶೀರ್ಷಿಕೆಗಳನ್ನು  ಮನಸಾರೆ ಮೆಚ್ಚಿದ್ದಾರೆ. ಪ್ರಶಂಶಿಸಿದ್ದಾರೆ. ಹಾಗೆಂದ ಮಾತ್ರಕ್ಕೆ  ನನಗೆ ಫೋನು ಮಾಡಿ ಸಲಹೆಯೊಂದನ್ನು ಕೊಟ್ಟ ಹಿರಿಯರನ್ನು ಧಿಕ್ಕರಿಸಿದೆ ಅಂತಲ್ಲ. ಅವರಿಗೆ  ನತಮಸ್ತಕಳಾಗಿ ಒಂದು ಮಾತು, _
   ‌‌‌     ಸರ್, ನೀವು ನೂರಕ್ಕೆ ನೂರು ಸರಿ...ನಿಮಗೆ ನತಮಸ್ತಕಳಾಗಿ ವಂದನೆಗಳನ್ನು ಸಲ್ಲಿಸುತ್ತೇನೆ, ಆದರೆ ನನ್ನದೂ ತಪ್ಪಲ್ಲ...🙏🙏🙏🙏🙏

                ‌ಭಾಷೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುತ್ತವೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಜಗತ್ತೇ ಒಂದು ಹಳ್ಳಿಯಂತೆ ಬದಲಾಗುತ್ತಿರುವ ಈ  ಪರ್ವಕಾಲದಲ್ಲಿ ಕಾಲ ಹಾಗೂ ಸಮಯದ ಜೊತೆ ಹೆಜ್ಜೆ ಹಾಕಲು ಸಹಕಾರಿಯಾಗಲಿವೆ. ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯ ಅಂಗವಾಗಿ ಕ್ರಮೇಣ ಕಿರಿದಾಗುತ್ತ ಹೊರಟು Global village ಎಂದು ಗುರುತಿಸಿಕೊಂಡಿರುವ  ಹೊಸ ಜಗತ್ತನ್ನು ಎಲ್ಲರಿಗೂ ಸರಿ ಸಮಾನ
ವಾಗಿ ತೆರೆದಿಡುವ ಬೆಳಕಿಂಡಿಗಳಾಗಿವೆ. ಬಡ, ಪ್ರಾಚೀನ, ಹಿಂದುಳಿದ,ಎಂಬ ಸಲ್ಲದ ನಾಮಾಂಕಿತಗಳಿಂದ ಒಂದು ಕಾಲಕ್ಕೆ ಅವಹೇಳನಕ್ಕೆ ಗುರಿಯಾಗುತ್ತಿದ್ದ ಭಾರತವೀಗ ವಿಶ್ವಗುರುವಾಗಿ ಗುರುತಿಸಿ ಕೊಳ್ಳುತ್ತಿದೆ. ಅನೇಕ ದೇಶಗಳಲ್ಲಿ ಭಾರತೀಯರೇ ಆಯಕಟ್ಟಿನ ಪ್ರಮುಖ ಹುದ್ದೆಗಳಿಗೆ  ಆಯ್ಕೆಯಾಗಿರುವದನ್ನು
ನೋಡುತ್ತಿದ್ದೇವೆ. ಸಂಸ್ಕೃತ , ಆಯುರ್ವೇದ ಚಿಕಿತ್ಸಾ ಪದ್ಧತಿ, ಯೋಗಾಭ್ಯಾಸಗಳು Indian Image ಕಳಚಿಕೊಂಡು ವಿಶ್ವ ಮಾನ್ಯವಾಗುತ್ತಿವೆ.
ಇಂತಹ ವೇಳೆಯಲ್ಲಿ ಕಣ್ಣುಮುಚ್ಚಿ ಕುಳಿತರೆ ನಷ್ಟ ನಮಗೇ ಹೊರತು ಅನ್ಯರಿಗಲ್ಲ. 
         
‌   ಕಾರಣ ಎಲ್ಲವೂ ಬೇಕು. ನಮ್ಮದನ್ನು
ಭದ್ರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಯೊಂದಿಗೆ ಅನ್ಯರದು ಎಷ್ಟು? ಎಲ್ಲಿ? ಏಕೆ? ಹೇಗೆ? ಯಾವಾಗ? ಎಂಬುದನ್ನು ಚೆನ್ನಾಗಿ ಅರಿತು ನಡೆದರೆ ಯಾರೂ ನಮ್ಮನ್ನು, ನಮ್ಮದನ್ನು, ನಮ್ಮಿಂದ ಯಾವಕಾಲಕ್ಕೂ ಕಸಿಯಲಾರರು... 

  ಇದು ನನ್ನ ಅನಿಸಿಕೆ...

Monday 1 March 2021

ಉಯಿಲು...

ಉಯಿಲು...

ನನ್ನ ಮರಣದ ನಂತರ
ನನ್ನ ಮನೆಯಲ್ಲಿ,
ನನ್ನ ಕೋಣೆಯಲ್ಲಿ
ಅಲ್ಲಿಲ್ಲಿ ಚದುರಿ ಬಿದ್ದ 
ನನ್ನದೆನ್ನುವ ಎಲ್ಲವನ್ನೂ 
ಒಮ್ಮೆ  ಜಾಲಾಡಿಬಿಡಿ ...

ಶತ ಶತಮಾನಗಳಿಂದ
ಹೊರಜಗತ್ತನ್ನೇ ಮರೆತು
ಅಡಿಗೆ ಹಾಗೂ ಮಲಗುವ 
ಕೋಣೆಗಳಲ್ಲಿ ಬಂದಿಯಾಗಿ
ಸ್ವಂತ ಬದುಕನ್ನೇ  ಮರೆತ
ಮಹಿಳೆಯರಿಗೆ 
ನನ್ನೆಲ್ಲ ಕನಸುಗಳನ್ನು 
ದಾನ ಮಾಡಿಬಿಡಿ ...

ದೇಶ-ವಿದೇಶಗಳ 
ಥಳಕು ಬಳಕಿಗೆ 
ಮನಸೋತು,
ವೃದ್ಧಾಶ್ರಮದಲ್ಲಿ
ಹೆತ್ತವರನ್ನು ಅನಾಥರನ್ನಾಗಿಸಿ 
ಹಾರಿಹೋದ  ಮಕ್ಕಳ
ತಾಯಂದಿರಿಗೆ ನನ್ನ
ಮುಕ್ತ ನಗೆಯನ್ನಿಷ್ಟು
ಸಮನಾಗಿ
ಹಂಚಿಬಿಡಿ...

ನಿನ್ನೆಯ ದಿನವಷ್ಟೇ
'ತ್ರಿವರ್ಣ ಧ್ವಜ' ದಲ್ಲಿ
ಸುತ್ತಿ ತಂದ ಆ ತರುಣ
ಯೋಧನ ಹೆಂಡತಿಯ 
ಸೀರೆಯ ತುದಿಗಂಟಿದ
ರಕ್ತದ ಕಲೆಗಳು ಕಾಣದಂತೆ
ನನ್ನ ಮೇಜಿನ ಮೇಲಿನ
ಬಣ್ಣಗಳಿಂದ ರಂಗು
ಬಳಿದು ಬಿಡಿ...

ನನ್ನ ಪ್ರತಿ ಕಣ್ಣಹನಿಯನ್ನೂ
ಸುಂದರ ಕವನವಾಗಿಸಬಲ್ಲ
ಕವಿಮನಸುಗಳಿಗೆ
ನನ್ನ ಕಂಬನಿಗಳನೆಲ್ಲ
ಬಿಟ್ಟು ಬಿಡಿ...

ನಾ ಹಿಡಿದಿಟ್ಟ ಕ್ರೋಧವನ್ನೆಲ್ಲ
ಯುವಜನತೆಯಲ್ಲಿ ತುಂಬಿ
ಸಕಾರಣವೊಂದಕ್ಕೆ
 ಕ್ರಾಂತಿಕಾರಿಯಾಗಿ 
ಹೊರಹೊಮ್ಮುವಂತೆ
ಅವರನ್ನು 
ಹುರಿದುಂಬಿಸಿಬಿಡಿ...

ಕೊನೆಗೆ ಉಳಿದದ್ದು,
ನನ್ನ-

ಮತ್ಸರ. 
ದುರಾಸೆ.
ಸಿಟ್ಟು.
ಸುಳ್ಳುಗಳು.
ಸ್ವಾರ್ಥ.

ಇವುಗಳನ್ನು ನನ್ನೊಂದಿಗೆ
ಆಳದಲ್ಲಿ 
ಹೂಳಿಬಿಡಿ...

(ಹಿಂದಿ ಕವನವೊಂದರ  ಕನ್ನಡ ಭಾವಾನುವಾದ...
ಶ್ರೀಮತಿ, ಕೃಷ್ಣಾ ಕೌಲಗಿ)

ಜೀವನ ದೃಷ್ಟಿ...



* ನನಗೆ ಆಹಾರವೆಂದರೆ ತುಂಬಾ ಪ್ರೀತಿ.

* ಚಿಕ್ಕ ಮಕ್ಕಳು ಭಗವಂತನ ಅದ್ಭುತ ಸೃಷ್ಟಿ.

*ನಾನು ನಕ್ಕು, ನಕ್ಕು ಸಾಯುತ್ತೇನೆ ಎಂದು ಅನಿಸುತ್ತದೆ.

* ದೇವರು ನನ್ನನ್ನು ಹುಟ್ಟಿಸಿ ಮರೆತೇ ಬಿಟ್ಟಿದ್ದಾನೆ.

* ನಾನು ಎಷ್ಟು ನಗುತ್ತೇನೆ  ಅಂದ್ರೆ ಕೊನೆಗೆ ಅದು ಅಳುವಿನಲ್ಲಿ ಮುಗಿಯುತ್ತದೆ.

* ನಿಮಗೆ ಜೀವನದಲ್ಲಿ ಏನಾದರೂ ಬದಲಾಯಿಸಲಾಗದಿದ್ದರೆ ಅದನ್ನು ಮರೆತುಬಿಡಿ.

* ಸದಾಕಾಲವೂ ಇರುವ ನನ್ನ ಮುಖದ ಮೇಲಿನ ಮುಗುಳ್ನಗೆಯೇ ನನ್ನ ದೀರ್ಘ ಆಯುಷ್ಯದ ಗುಟ್ಟು.

* ನನಗೀಗ ಕಣ್ಣು ಕಾಣುವುದಿಲ್ಲ, ಕಿವಿ ಕೇಳಿಸುವುದಿಲ್ಲ, ಆದರೂ ಚೆನ್ನಾಗಿಯೇ
ಇದ್ದೇನೆ.

* ಸಾವು ತಾನಾಗಿಯೇ ಬರುವವರೆಗೂ ನಾನು ಬದುಕಬೇಕು. 

* ನನ್ನವು ಉಕ್ಕಿನ 
ಕಾಲುಗಳು, ಆದರೆ ಇತ್ತೀಚಿಗೆ ಸ್ವಲ್ಪವೇ ಜಂಗು ಹಿಡಿಯುತ್ತಿವೆ.

* ನಾನು ಇದುವರೆಗೂ ಸ್ವಚ್ಛ, ಪಶ್ಚಾತ್ತಾಪ ರಹಿತ  ಆನಂದದ ಬದುಕನ್ನೇ ಬದುಕಿದ್ದೇನೆ. ಈ ವಿಷಯದಲ್ಲಿ ನಾನು ಅದೃಷ್ಟವಂತೆ.

* ಮಾನಸಿಕವಾಗಿ ಸದಾ ತಾರುಣ್ಯದಿಂದಿರುವದು
ಸಾಧ್ಯ .ನಾನೀಗಲೂ ತರುಣಿಯೇ. ಈಗ 70 ವರ್ಷಗಳಿಂದ ಸ್ವಲ್ಪ ಹಾಗೆ ಕಾಣುತ್ತಿಲ್ಲ ಅಷ್ಟೇ.

ಇದು 122ವರ್ಷ,164 ದಿನಗಳ ಕಾಲ (  ಇತಿಹಾಸದಲ್ಲೇ ಇದುವರೆಗಿನ ದೀರ್ಘ ಆಯುಷ್ಯ...)  ಬದುಕಿದ , ಮ್ಯಾಡಮ್ ಜೇನ್ ಲೂಯಿಸ್ ಕಾರ್ಮೆಲ್ ಎಂಬ ಫ್ರೆಂಚ್ ಮಹಿಳೆಯ  ಜೀವನದೃಷ್ಟಿ.

ಅವಳ  ಮರಣ ಪೂರ್ವ ಸಂದರ್ಶನವೊಂದರ ವೇಳೆಯಲ್ಲಿ ಸಂದರ್ಶನಕಾರ 
"ಆಯ್ತು ಮೇಡಮ್, ಮತ್ತೊಮ್ಮೆ ಭೇಟಿಯಾಗೋಣ ಅಂದಾಗ ,
ಅವಳು ಹೇಳಿದ್ದು," ಅವಶ್ಯವಾಗಿ ಆಗೋಣ, ನಿನಗೇನೂ ಇನ್ನೂ ಅಷ್ಟು  ಹೆಚ್ಚು  ವಯಸ್ಸಾಗಿಲ್ಲ, ನೀನಿನ್ನೂ ಕೆಲವರ್ಷ ಬದುಕಬಲ್ಲೆ."

*****   *****   *****   *****   *****
 
ಎಂತಹ positive thinking!!!
ಗೊತ್ತು, ಇದು ಎಲ್ಲರ ಅಂಗೈ ನೆಲ್ಲಿಯಲ್ಲ. ಹಾಗಿರುವದಕ್ಕೆ ತುಂಬಾ ಧೈರ್ಯ, ಮನೋಸ್ಥೈರ್ಯ ಬೇಕು. ಅದನ್ನು ಗಳಿಸುವುದಕ್ಕೆ ತಪಸ್ಸು ಬೇಕು. ಆದರೆ ಇಂಥ ವಿಚಾರಗಳನ್ನು ಬೆಳೆಸಿಕೊಳ್ಳುವುದೂ ಅಥವಾ ಅದರ ಬಗ್ಗೆ ಯೋಚಿಸುವುದೂ ಕೂಡ ಕಡಿಮೆಯೇನೂ ಅಲ್ಲ... ಸ್ವಲ್ಪರ ಮಟ್ಟಿಗಿನ ಪ್ರಯತ್ನ ಕೂಡ ಧನಾತ್ಮಕ ಬದಲಾವಣೆಯೇ. ನಮ್ಮಲ್ಲಿ ನಮಗೇ ಗೊತ್ತಾಗದೇ ಬೆಳೆಯುವ ನಕಾರಾತ್ಮಕ ಯೋಚನೆಗಳನ್ನು ತಡೆದರೂ ಮೊದಲ ಹೆಜ್ಜೆಯಾಗಿ ಬೇಕಾದಷ್ಟಾಯಿತು. ನಾನು ಇಂತಹದನ್ನು ಯೋಚಿಸುವುದು, ಅಂತಹದೊಂದರ ಬಗ್ಗೆ ಬರೆಯುವದು ನನಗಾಗಿಯೇ. ಸಾಧ್ಯವಾದರೆ ಇತರರಿಗೂ ಸಹಾಯವಾಗಲಿ ಎಂಬ ಕಾರಣಕ್ಕೆ ಮಾತ್ರ Loud thinking ಈ ರೂಪದ ಬರಹಗಳಲ್ಲಿ... ನಿಜವಾಗಿಯೂ ಅದು ನನಗೆ ನೆಮ್ಮದಿ ತರುತ್ತದೆ. ಎಪ್ಪತೈದರ ಬೆಂಗಳೂರಿನ ವಾಸ್ತವ್ಯವನ್ನು
ಸಹನೀಯವಾಗಿಸಿದೆ. Covid ಕಾರಣದಿಂದಾಗಿ ಒಂದು ವರ್ಷದಿಂದ ನಡೆದಿರುವ ವನವಾಸ/ ಅಜ್ಞಾತವಾಸಗಳು ನನ್ನನ್ನು ಕಿಂಚಿತ್ತೂ ಬೆದರಿಸಿಲ್ಲ. ಬದಲಿಗೆ ವಿವಿಧ ಚಟುವಟಿಕೆಗಳಲ್ಲಿ ಮನಸ್ಸು ತೊಡಗಿಸುವಂತೆ ಪ್ರಚೋದಿಸುತ್ತಿವೆ.
ಹಾಗೆ ತೊಡಗಿಸಿಕೊಂಡಾಗ ನಾ ಕಂಡ  ಸುಲಭ, ಸರಳ, ಸತ್ಯಗಳನ್ನು ಸಹೃದಯರೊಂದಿಗೆ  ಹಂಚಿಕೊಳ್ಳಲು  
ನಮ್ಮ "ಧಾರವಾಡದ ಬೆಸುಗೆ" ಒಂದು 
ವೇದಿಕೆಯಾಗಿ ನನ್ನ ಜೊತೆಗಿದೆ. ಅನೇಕರ ಧನಾತ್ಮಕವಾದ  ಪ್ರತಿಕ್ರಿಯೆಗಳು  ನನ್ನ ಹುರುಪನ್ನು ಹೆಚ್ಚಿಸಿವೆ...

ಮತ್ತೇನೂ ಬೇಕೆನಿಸುವದಿಲ್ಲ ನನಗೆ...


Thursday 18 February 2021

೪೦: ನಿಲ್ಲಿ ನೆನಪುಗಳೇ, ಎಲ್ಲಿ ಹೋಗುವಿರಿ...

.    
                                      ‌   ‌ಒಂದು  ಪದ್ಯವನ್ನು  ಭಾಮಿನಿ ಷಟ್ಪದಿಯಲ್ಲಿ  ಬರೆಯಲು ಪ್ರಯತ್ನಿಸುತ್ತಿದ್ದೆ. ಅದೇ ಆಗ ಆ  ಕಾವ್ಯ ಪ್ರಕಾರ  ಕಲಿಯುತ್ತಿರುವ  ನನಗೆ      ಅದರಲ್ಲಿ  ತಿದ್ದುಪಡಿಗಳು  ಜಾಸ್ತಿ ಇರುತ್ತಿದ್ದವು . ನಾನು  direct   type ಮಾಡುವದೇ ಹೆಚ್ಚು,  ಆದರೆ ಈ  ಪದ್ಯ ಪ್ರಕಾರ ಕಠಿಣವಾದುದರಿಂದ ಹಾಳೆಯ ಮೇಲೆ  ಬರೆದು, ಬೇಕಾದ ತಿದ್ದು ಪಡಿಗಳು ಮುಗಿದಮೇಲೆ post ಮಾಡುವದನ್ನು ಮಾಡಬೇಕಿತ್ತು .ಇಂದು ಬರೆದಾದಮೇಲೆ ನೋಡುತ್ತೇನೆ , ಕೈಯ ಬೆರಳು ಸಂದುಗಳಲ್ಲಿ ಪೆನ್ನು ಸೋರಿ ಮಸಿ ಇಳಿದಿದೆ. ಒಮ್ಮೆಲೇ ಅದು ಏನು ಕಲೆ ಹೊಳೆಯಲಿಲ್ಲ.  ಹೊಳೆದಾಗ  ಕಂಗಳಲ್ಲಿ ಝಗ್ಗನೇ  ಮಿಂಚು. ಏನೇನೋ ನೆನಪುಗಳ ಸರಮಾಲೆ.  ಅರವತ್ತು ವರ್ಷಗಳ  ಹಿಂದಿನ  flash back ಲೀಲೆ... ಮನದ ಪರದೆಯ ಮೇಲೆ...  

ಆಗಿನ್ನೂ refill pen ಗಳ ಬಳಕೆ ಬಂದಿರಲಿಲ್ಲ. ಮಸಿಯ pen ಎಂಥದೇ ಖರೀದಿಸಿದರೂ  ಪೆನ್ನಿನ 'ನಾಲಿಗೆ' ಗೆ ಇನ್ನಿಲ್ಲದ ಚಪಲ. ಬೆರಳು ಸೋಂಕಿದರೆ  ಸಾಕು, 'ಜೊಲ್ಲು' ಸುರಿಸಿಯೇ ಬಿಡುತ್ತಿತ್ತು...ಊಟದ ವೇಳೆ "ಸ್ವಚ್ಛವಾಗಿ  ಕೈ ತೊಳೆದುಕೊಂಡು ಬಂದರೆ ಮಾತ್ರ ಊಟ" ಇದು ಅವ್ವನ ತಾಕೀತು. ಎಷ್ಟು  ಉಜ್ಜಿದರೂ ಹೋಗದ ಮಸಿಯ ಕಲೆ . ನೆನಪಿದ್ದ ಹಾಗೆ ಮಲ್ಲಿಗೆಯಂತೆ  ಅರಳಿದ  ಬಿಳಿ ಅನ್ನ ಉಂಡ ನೆನಪೇಯಿಲ್ಲ. ಪ್ರತಿನಿತ್ಯ ನೀಲಿ, ಕೆಂಪು ಬಣ್ಣಗಳ ಓಕುಳಿಯಾಟ ತಪ್ಪಿದ್ದೇ ಇಲ್ಲ.  ಇದೂ ಅಲ್ಲದೇ ಸರಿಯಾಗಿ ಟಿಪ್ಪಣಿ ಬರೆದುಕೊಳ್ಳಬೇಕೆನ್ನುವಾಗಲೇ  ಮಸಿ ತೀರುವದು ಅತಿ ಸಾಮಾನ್ಯ. ಅವರಿವರ ಪೆನ್ನಿನಿಂದ ಒಂದಿಷ್ಟು ಎರವಲು ಪಡೆಯುವ ಪ್ರಯತ್ನ ಮಾಡುವದು, ಅದು ಇಬ್ಬರಿಗೂ ದಕ್ಕದಂತೆ desk ಮೇಲೆ ಚಲ್ಲಿಹೋಗಿ ಹಾಳಾಗುವದು ಏನೇನೋ  ಅವಾಂತರಗಳು. ಆಗಲೂ ಮೂಡದಿದ್ದರೆ ಪೆನ್ ಮತ್ತೆ ಮತ್ತೆ  ಝಾಡಿಸಿ, ಮುಂದೆ  ಕುಳಿತವರ  ಯುನಿಫಾರ್ಮ್ಗೆ ಅದು ಸಿಡಿದು, ಪುಟ್ಟದೊಂದು 'ಪಾಣಿಪತ್ ' ಯುದ್ಧವಾಗಿ ಶಿಕ್ಷಕರ  ' ಜನತಾ ನ್ಯಾಯಾಲಯ' ದಲ್ಲಿ 'ನ್ಯಾಯ ' ಖುಲಾಸೆಯಾಗಬೇಕು. ಒಮ್ಮೊಮ್ಮೆ ಶಿಕ್ಷಕರ mood ಕೈಕೊಟ್ಟರೆ ಮಸಿ ಸಿಡಿಸಿದವರನ್ನು  ತಿರುಗಿಸಿ ನಿಲ್ಲಿಸಿ, ಮಸಿ ಸಿಡಿಸಿಕೊಂಡವರಿಂದ ಅವರಿಗೆ  ತಿರುಗಿ ಮಸಿ ಪ್ರೋಕ್ಷಣೆ ಮಾಡಿಸಿದ  ಅನೇಕ ಪ್ರಕರಣಗಳೂ  ಉಂಟು. ಅದರ ನೋವು ಇಬ್ಬರಿಗೂ ಸರಿಸಮವಾಗಿ ಹಂಚುವ ಪ್ರಾಮಾಣಿಕ ಪ್ರಯತ್ನದ ‌ ‌‌‌ಅಂಗವಾಗಿ... ಇನ್ನು ಯಾರಾದರೂ  ಮಕ್ಕಳು desk ಮೇಲೆ ಮಲಗಿ ಅರೆಗಳಿಗೆ  ಕಣ್ಮುಚ್ಚಿದರೋ ಆಯಿತು ಅವರ ಅವಸ್ಥೆ...ಮಸಿ ಪೆನ್ನು ಬಳಸಿ  ಅವರು ಕಣ್ಣು ಬಿಡುವದರಲ್ಲಿ ಪಾಕಿಸ್ತಾನದ ಭಯೋತ್ಪಾದಕರಂತೆ ಗಡ್ಡ, ಮೀಸೆ   ಬರೆದು , ಕಣ್ಣು ತೆರೆದಾಗ' ತಾನಾರೆಂದು ' ಅವರಿಗೇನೇ  ತಿಳಿಯದ' ಅಯೋಮಯ ಸ್ಥಿತಿಯುಂಟಾಗುವದೂ ಇತ್ತು. ಹುಡುಗಿಯರ desk ಮೇಲೆ ಕಂಡೂ ಕಾಣದಂತೆ ಕೆಂಪು ಮಸಿ ಸಿಡಿಸಿ ,ಅದರ ಮೇಲೆ ಕುಳಿತಮೇಲೆ ಹೇಗೋ ಗೊತ್ತಾಗಿ ,ಅವರನ್ನು ಗಾಬರಿಗೆ ಸಿಲುಕಿಸಿ ಸಮೀಪದ ಗೆಳತಿಯರ ಮನೆಗೆ ಹೋಗಿ ಯುನಿಫಾರ್ಮ್ ಬದಲಿಸಿ ಬರಬೇಕಾದ ಸಂದರ್ಭಗಳೂ ಅಪರೂಪಕ್ಕೆ ಆದದ್ದುಂಟು . 
ಇನ್ನು ವಾರ್ಷಿಕ ಪರೀಕ್ಷೆ ಮುಗಿಯಿತೋ  ಕೊನೆಯ ದಿನ ಎರಡು ಮೂರು ಪೆನ್ನುಗಳಿಗೆ ಮಸಿ ತುಂಬಿಸಿ ತರುತ್ತಿದ್ದುದೂ ಉಂಟು. ಕೊನೆಯ ಗಂಟೆ ಯಾಗುತ್ತಲೇ ಹುಡುಗರು ಶಾಲೆಯ ಮುಂದೆ ಜಮಾಯಿಸಿ ಒಬ್ಬರಿಗೊಬ್ಬರು ಮಸಿ ಎರಚಾಟ ಅತಿ ಸಾಮಾನ್ಯ ವಿಷಯ...  ಕೆಲವು ಬಡಮಕ್ಕಳು Uniform ಮುಂದಿನ ವರ್ಷಕ್ಕೆ ಕಾಪಾಡಿಕೊಳ್ಳುವ ಉದ್ದೇಶದಿಂದ  ಸ್ವಲ್ಪು ಮೊದಲೇ paper ಕೊಟ್ಟು ಹೋದರೆ, ಕೆಲವು ಜಾಣ ಮಕ್ಕಳು ಓಕಳಿಗೆ ಸಿದ್ಧರಾಗಿ ಬರುವಂತೆ ಒಂದು  ವರ್ಷ  ಹಳೆಯ uniform ಕಾದಿರಿಸಿದ್ದುಕೊಂಡು ಆ ದಿನ ಧರಿಸಿ ಬರುತ್ತಿದ್ದುದೂ ಇತ್ತು.  ಬಹುತೇಕ  ಇಂದಿನ ಬಹಳಷ್ಟು ಪ್ರಸಿದ್ಧ cartoonist/ ಚಿತ್ರಕಾರರ ತರಬೇತಿ , ಮಸಿಯಿಂದ desk ಮೇಲೆ ಗೀಚಿದ ಹುಡುಗಿಯರ/ ಗುರುಗಳ caricatures ದಿಂದಲೇ ಶುರುವಾದದ್ದು ಎಂಬ  ಅನುಮಾನ ನನಗೆ. ಬೇಸರ ತರಿಸುವ ಅಥವಾ ಕಬ್ಬಿಣದ ಕಡಲೆಯಂತಹ  ಕಠಿಣ ವಿಷಯಗಳನ್ನು ಕಡ್ಡಾಯವಾಗಿ ಕೇಳಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತೋ ಶುರು, ಅವರ ಸೃಜನ ಶೀಲತೆಗೆ ಬಾಗಿಲು ಮುಕ್ತವಾಗಿ ತೆರೆದಂತೆ...ಅವಧಿಯೊಂದು ಕಳೆಯುವದರಲ್ಲಿ desk ಗಳ ಮೇಲೆ , ನೋಟಪುಸ್ತಕಗಳಲ್ಲಿ , ಕೆಲವೊಮ್ಮೆ ಅಪರೂಪಕ್ಕೆ ಮುಂದೆ ಕುಳಿತವರ ಬಿಳಿ ಶರ್ಟು ಗಳ ಮೇಲೂ  ಕುಜರಾಹೋ, ಅಜಂತಾ, ಕೊನಾರ್ಕ, ಬೇಲೂರು, ಹಳೆಬೀಡುಗಳಲ್ಲೂ ನೋಡಲು ಸಿಗದ ಕಲಾಕೃತಿಗಳ  ಸೃಷ್ಟಿಗಳು... ' ಮಸಿ ಬಳಿಯುವ ಕೆಲಸ' ಅನ್ನುವದು ಅಲ್ಲಿಯವರೆಗೆ ಬಯ್ಗಳು ಎನ್ನುವದು ನಮಗೆ ಗೊತ್ತಿತ್ತು. ಅದೂ ಒಂದು 'ಕಲೆ' ಎಂಬುದು ಅರಿವಾದದ್ದು ವಿದ್ಯಾರ್ಥಿಯಾಗಿದ್ದಕ್ಕೂ ಹೆಚ್ಚಾಗಿ ಶಿಕ್ಷಕಿಯಾದ ಮೇಲೇಯೇ ಹೆಚ್ಚು.         ಕುಂಕುಮ ಮರೆತುಬಂದರೆ ಕೆಲವು ಶಿಕ್ಷಕ, ಶಿಕ್ಷಕಿಯರ  ಹೆದರಿಕೆಗಾಗಿ ಮಸಿಯಿಂದ ಹಣೆಯಮೇಲೆ Red ink ನಿಂದ ಗುರುತು ಮಾಡುವದು, ಕೂದಲಿಗೇನಾದರೂ ಎದ್ದು ಕಾಣುವಂಥ ಕಲೆ ಹತ್ತಿದರೆ ನೀಲಿ  ಅಥವಾ ಕಪ್ಪು  ಮಸಿಯಿಂದ ಅದನ್ನು ಮುಚ್ಚುವದೂ ಮುಂತಾದ ' ಮುದ್ದಾಂ' ತುರ್ತು ಉಪಯೋಗಗಳೂ ಇಲ್ಲದಿರಲಿಲ್ಲ. "ಒಂದು ಹನಿ ಮಸಿ ಚಿತ್ತಾರ ನುಂಗಿತು"  ಎಂಬ ಗಾದೆ ಮಾತು ಗೊತ್ತಿತ್ತು, ಆದರೆ ಒಂದು ಮಸಿ ಪೆನ್ನಿನಿಂದ ನೂರು ಚಿತ್ತಾರಗಳು ರೂಪುಗೊಳ್ಳುತ್ತಿದ್ದುದನ್ನು ಪ್ರತಿನಿತ್ಯ ಕಾಣುವ ಭಾಗ್ಯ ಶಿಕ್ಷಕ, ಶಿಕ್ಷಕಿಯರ  ಪಾಲಿಗೆ ಲಭ್ಯವಿರುತ್ತಿತ್ತು.

    ‌ಇಂದು ಅಕಾಸ್ಮಾತ್ ಆಗಿ ಬೆರಳುಗಳ ಸಂದು ಮಸಿಯಿಂದ ನೀಲಿಯಾದಾಗ ಅದು ಮಸಿಯ ನೀಲಿಯಾಗಿ ಕಾಣಲೇಯಿಲ್ಲ. ಹೃದಯಕ್ಕೆ ಹತ್ತಿರವಾದ ಆಕಾಶದ ನೀಲಿ, ಶಾಂತ ಸಮುದ್ರದ ಮನ ಮುದದ ನೀಲಿಯಾಗಿ ಕಂಡದ್ದು ರೋಮಾಂಚಕ ಅನುಭವಲ್ಲದೇ ಮತ್ತೇನು?? 
 
ಮನಸ್ಸಿನ ಮೇಲೆ  ಮಾಯದ ' ಕಲೆ' ಅಂದರೆ ಇದೇನಾ????

Friday 12 February 2021

೩೯- 'ಬಹುರೂಪ ದರ್ಶಕ'ದ ಸಪ್ತವರ್ಣ ಬಿಂಬಗಳು...



ಬಿಂಬ-೧
ಗೆಲುವು...

ನನ್ನ  ಮನಶ್ಯಾಸ್ತ್ರದ  ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ  ನಿನ್ನ ದೃಷ್ಟಿಯಲ್ಲಿ ಯಾವುದು?" ನಿನ್ನ ಕಳೆದುಹೋದ ಬದುಕನ್ನೊಮ್ಮೆ ನೀನೇ ಹಿಂದಿರುಗಿ ನೋಡಿದಾಗ 
ಆ ನೆನಪುಗಳು ನಿನ್ನ ಮುಖದ ಮೇಲೆ  ಒಂದು ಸುಂದರವಾದ ಮುಗುಳ್ನಗೆ ಮೂಡಿಸಬೇಕು". ಅದು ಗೆಲುವು. ಯಶಸ್ಸು...

ಬಿಂಬ -೨.
ನೋವು...

ನನ್ನ ಸಾಕು ನಾಯಿ ಒಂದು ಕಾರಿನ ಗಾಲಿಗೆ ಸಿಕ್ಕು ಕೊನೆಯ  ಉಸಿರು ಎಳೆಯುವಾಗ ಅದನ್ನು ಅಪ್ಪಿ  ರಸ್ತೆಯ ಬದಿಗೆ ಕುಳಿತು  ಅಳುತ್ತಿದ್ದೆ. ಸಾಯುವ ಕೊನೆಯ ಗಳಿಗೆಯಲ್ಲಿ ಅದು ಕಷ್ಟ ಪಟ್ಟು,  ನನ್ನ ಗಲ್ಲದ ಮೇಲೆ ಇಳಿಯುತ್ತಿದ್ದ ಕಣ್ಣೀರು ನೆಕ್ಕಿ ಒರೆಸಲು  ಹವಣಿಸುತ್ತಿತ್ತು.

ಬಿಂಬ-೩.
ಒಂದುಗೂಡುವಿಕೆ...

ನನ್ನ ತಂದೆ, ಅವರ ಮೂರು ಜನ ಅಣ್ಣ-ತಮ್ಮಂದಿರು, ಇಬ್ಬರು ಅಕ್ಕ ತಂಗಿಯರು ಆಸ್ಪತ್ರೆಯಲ್ಲಿ  ನಮ್ಮಮ್ಮನ  ಹಾಸಿಗೆಯ ಸುತ್ತ ನೆರೆದಿದ್ದರು. "ನನ್ನ  ಮನಸ್ಸಿಗೆ ಎಷ್ಟೊಂದು ಹಿತವೆನಿಸುತ್ತಿದೆ ಈಗ . ಈ ಮೊದಲೂ ಹೀಗೆಯೇ ಹಲವು ಬಾರಿ  ನಾವೆಲ್ಲರೂ ಕೂಡ ಬಹುದಿತ್ತು." - ಇವು ನಮ್ಮಮ್ಮನ ನುಡಿಗಳು...

ಬಿಂಬ-೪.
ಪ್ರೀತಿ...
 
ದವಾಖಾನೆಯ ಹಾಸಿಗೆಯಲ್ಲಿ ನನ್ನ ತಂದೆಯ ಪಾರ್ಥಿವ ಶರೀರ ಇನ್ನೂ  ಇತ್ತು .ಕೊನೆಗೆ ಎಂಬಂತೆ  ನಾನು ಅವರ ಮುಖವನ್ನೊಮ್ಮೆ ಚುಂಬಿಸಿದೆ.ಆಗಲೇ ನನಗೆ ನೆನಪಾಗಿದ್ದು, ನನ್ನ ಬಾಲ್ಯ ಕಳೆದ ಮೇಲೆ ನಾನವರಿಗೆ ಕೊಟ್ಟ ಮೊತ್ತ ಮೊದಲ ,ಹಾಗೂ ಕಟ್ಟ ಕಡೆಯ ಮುತ್ತು ಅದಾಗಿತ್ತು😒😒😒

ಬಿಂಬ-೫.
ಖುಶಿ...

ಇಪ್ಪತ್ತೇಳು ವರ್ಷಗಳ ಕ್ಯಾನ್ಸರ್ ಪೀಡಿತ ಯುವಕನೊಬ್ಬ ತನ್ನ ಎರಡು ವರ್ಷಗಳ ಮಗಳ ತುಂಟಾಟಗಳನ್ನು ನೋಡುತ್ತಾ ಗಹಗಹಿಸಿ ನಗುತ್ತಿದ್ದ. ಇನ್ನು ನನ್ನ ಬದುಕಿನ ಅಪಸವ್ಯಗಳ ಬಗ್ಗೆ ಗೊಣಗುಟ್ಟದೇ ಅದನ್ನು ಇದ್ದಂತೆಯೇ ಆನಂದಿಸಬೇಕೆಂದು  ಆಗಲೇ ನಿರ್ಧರಿಸಿದೆ.


ಬಿಂಬ-೬.
ಕರುಣೆ...

ನಾನು ಎರಡೂ ಬಗಲಲ್ಲಿ 
ಊರುಗೋಲುಗಳನ್ನು ,ಹಾಗೂ  ಪುಸ್ತಕ ಗಳನ್ನು ಹಿಡಿದು ಕೊಂಡು fracture ಆದ ಕಾಲಿನೊಂದಿಗೆ ನಡೆಯುವುದಕ್ಕೆ ಹೆಣಗುತ್ತಿರುವದನ್ನು ಕಂಡ  ಗಾಲಿ ಕುರ್ಚಿಯಲ್ಲಿ ಹೋಗುತ್ತಿದ್ದ ಎರಡೂ ಕಾಲಿಲ್ಲದ ವಿದ್ಯಾರ್ಥಿ ನನ್ನ  ಪುಸ್ತಕಗಳನ್ನು ಹಾಗೂ ಬೆನ್ನು ಮೇಲಿದ್ದ ಚೀಲವನ್ನು ನನ್ನಿಂದ ಪಡೆದು ನನ್ನನ್ನು ನನ್ನ ವರ್ಗದ ಕೋಣೆಯವರೆಗೂ ತಲುಪಿಸಿ ಮರಳಿ ಹೋಗುವಾಗ ನನಗೆ ಹೇಳಿದ," ಚಿಂತಿಸಬೇಡಿ, ಬೇಗನೇ ಗುಣವಾಗಿ ಮೊದಲಿನಂತೆ ನಡೆಯುತ್ತೀರಿ."

ಬಿಂಬ-೭.
ಹಂಚಿಕೊಳ್ಳುವಿಕೆ...

ನಾನು ಕೆನ್ಯಾದ ಪ್ರವಾಸದಲ್ಲಿದ್ದೆ. ಒಮ್ಮೆ ಜಿಂಬಾಬ್ವೆಯಿಂದ ವಲಸೆ ಬಂದ ಪ್ರವಾಸಿಯೊಬ್ಬನ ಭೇಟಿಯಾಯಿತು. ತುಂಬಾ ತೆಳ್ಳಗೆ, ತೀರಾ ಅಶಕ್ತನಂತೆ ಕಂಡ ಅವನು ಮೂರು ದಿನಗಳಿಂದ ಏನನ್ನೂ ತಿಂದಿಲ್ಲ ಎಂಬುದು ತಿಳಿದು ಬಂದಾಗ, ನನ್ನ ಗೆಳೆಯ ತನ್ನ ಕೈಯಲ್ಲಿದ್ದ  ಅರ್ಧ sandwichನ್ನು  ಅವನಿಗೆ ಕೊಟ್ಟ. ತಕ್ಷಣ  ಆ ಮನುಷ್ಯ ಹೇಳಿದ್ದು,"
ನಾವಿದನ್ನು ಹಂಚಿಕೊಂಡು ತಿನ್ನಬಹುದು."😍

(ಇಂಗ್ಲಿಷ ಮೂಲ)

Thursday 11 February 2021

೩೮ . Relationships...As you sow, so you may not reap...

In1990 ,we the family members had gone on a tour.
Our daughter Maitri was  of only ten months baby at the time. Many people wondered how we could manage that.

After a week Maitri became sick. She used to cry all the time when ever we got into our Van and it was non-stop till we came back to our home. but to our surprise, after coming home she used be happy enough to crawl around the whole house and we could not make her sleep easily.

This is how we develope  attachements  in life right from our childhood . Many times some relationships disappear by themselves.In some case new relationships take over the old ones automatically. What ever may be the cause, ultimate ly we are the ones, who suffer emotionally.

 Our childhood experiences find their roots deep into our hearts and make us feel comfortable and cool  when ever we visit  those places ,meet those childhood friends, revive  those childhood memories. It will be still more intense if the life ,we are leading now is totally of different kind.

Especially those people, who are more emotional kind of persons, suffer more, feel more, fear more as and when  nothing works according to their expectations.

FEAR means something  like  our inability to face a new situation and skill to handle it. The only way to get rid of it  is ," to get into it and tackle boldly".

That FEAR is like a ghost which we have never seen, but always think it is THERE and may harm us ANY TIME/ANYWAY.

To get ourselves free from this fear ,there are only TWO WAYS.

One, to be ready physically and mentally to face ,and fight it whatever may come next .

 Second, to accept what ever comes on our way,( to  leave it to our fate or destiny) when we could do nothing about it.

While doing this, two things matter a lot. Do the family members ,whom we claim as OURS,  support us, or stand against our policy. How  they behave, how they analyse  our  stand , affect us EMOTIONALLY.

*  Difference between husband and wife.

* Differences between in laws.

* Differences between colleagues in workplaces.

* Non acceptance with friends.

* Fights with Neighbours.

* Lack of trust between lovers

All these are day- today  happenings  of our lives.

More threatening is, when OUR OWN PEOPLE  cheat us  by  supporting  the other group and joining  in their foul play.

Now it is THE RIGHT TIME  to  decide whether or how much we have to be in such relationships.

It's very difficult to decide it when/ if we are driven by emotions. One more difficult thing is to get into someone's shoes.We don't think from their angle most of the times, but get stuck into self woven webs. We will be successful when we are un biased ,more so in relationships.Then only relationships can last long

There is not any thing new in it, we know it ,but don't adapt it easily. We don't think, what we expect from others, may be vice versa . We  forget  such things intentionally or otherwise.

 This is life. All relationships are bound to perish one or the other day. It's BARE TRUTH. We have to accept it, and act accordingly. Memories are the  "only companions" till death
In life. We should know it.

Our life has " priorities " They go on changing as life goes on. Nothing is permanent in life. Everything just adds to our experiences ands helps us to move on...
 
That's how life is to be  moulded into shape. Take the example of Mahatma Gandhi.
His recklass childhood, western life style in South Africa, experience of being thrown out
from the railway bogi, all such experiences  moulded him into a totally different person.

 It's clear, we can't aim at such a big thing, but definitely
can dream of something within our capacity level and do whatever best we can...

So , not crying anymore for the relationships  gone,
doing whatever  possible for a 
 happy and healthy life, utilising the the time the WAY WE WANT is the only possible solution to solve such problems permanent ly.

(My Translation of Kannada article, "Sabmbandhagalu" by. Shri Nagesh-.a columnist, on 
a demand by a friend.)

Monday 8 February 2021

೩೭.' ಹಬ್ಬ'ಗಳೇ 'ಹುಟ್ಟಿದ ದಿನ'ಗಳಾಗುತ್ತಿದ್ದ ' ಕಾಲ' ನಮ್ಮದು...

ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ'  ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ  ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ, ನನ್ನ  ಶತಾಯುಷ್ಯದ ಗುಟ್ಟೆಂದರೆ ನೂರು ವರ್ಷಗಳ ಹಿಂದೆ ನಮ್ಮವ್ವ ನನ್ನನ್ನು ಹಡೆದದ್ದು" ಎಂದಿದ್ದರಂತೆ.

" ಒಂದು ವರ್ಷ ನಮ್ಮ  ಆಯುಷ್ಯದಲ್ಲಿ ಹೆಚ್ಚಾಗುವದೆಂದರೆ ನಮ್ಮ ಸಾವಿಗೆ  ಒಂದು ವರ್ಷ ನಾವು ಹತ್ತಿರವಾದಂತೆ. ಆಗ ಸಂಭ್ರಮ ವಿಚಿತ್ರವಲ್ಲವೇ? _ಹೀಗೆಂದು ನಮ್ಮ ಗುರುಗಳನ್ನು ಕೇಳಿದ್ದೆ.
" ಎಷ್ಟೋ ಮಕ್ಕಳು ಹುಟ್ಟುತ್ತವೆ, ಬೆಳಕು ಕಾಣುವ ಮೊದಲೇ ಕಣ್ಣು ಮುಚ್ಚುತ್ತವೆ.
ಅನೇಕ ಮಕ್ಕಳಿಗೆ ತಾಯಿ ,ತಂದೆಯ ಭಾಗ್ಯವಿರುವದಿಲ್ಲ. ಲಾಲಿಸಿ, ಪಾಲಿಸುವವರಿರುವದಿಲ್ಲ.ಅನೇಕ ಮಕ್ಕಳು ಹುಟ್ಟುವಾಗಲೋ, ನಂತರ ವೋ  ಅಂಗವಿಕಲರಾಗಿರುತ್ತಾರೆ.
ಇದಾವುದೂ ಇಲ್ಲದೇ ದೈವೀ ಕೃಪೆಯಿಂದ
ಕೆಲವರ್ಷಗಳನ್ನು ಕಳೆಯುವಂತಾದರೆ
ಅದು ಸಂಭ್ರಮವಲ್ಲವೇ?"- ಎಂದಿದ್ದರು
ಗುರುಗಳು. ಮರುಮಾತಾಡದೇ ಒಪ್ಪಿಕೊಂಡಿದ್ದೆ.

ಅಪರೂಪಕ್ಕೆ ಒಂದು ಮಗುವಾದರೆ ನಿತ್ಯ ಸಂಭ್ರಮ. ಹತ್ತು/ಹನ್ನೆರಡು ಮಕ್ಕಳ ಮಧ್ಯೆ ಇನ್ನೊಂದಾದರೆ ಅದು ಆಕಸ್ಮಿಕ. ನಮ್ಮ ವೇಳೆಯಲ್ಲಿ ಆಗುತ್ತಿದ್ದುದು ಅದೇ. 'ಬರಗಾಲದಲ್ಲಿ  ಅಧಿಕಮಾಸ' ಅಂದ ಹಾಗೆ, 'ಹತ್ತರ ಕೂಡ ಹನ್ನೊಂದು' ಅಂದ ಹಾಗೆ , ನಮ್ಮನ್ನು ನಮ್ಮ ಪಾಲಕರು ಬಹುಶಃ ಸ್ವೀಕಾರ ಮಾಡಿದ್ದು. ಅಂದಮೇಲೇ 'ಹುಟ್ಟು' 'ಹಬ್ಬ'ವಾಗುವದು ಕಲ್ಪನಾತೀತ. ಇದು ಆಗಿನ ಕಾಲದ ಬಹುತೇಕ ಮನೆಗಳಲ್ಲೂ ಕಂಡುಬಂದ ಸತ್ಯ.( ಕನಿಷ್ಠ ನನ್ನ ಪಾಲಿಗೆ).

  ನಮ್ಮ ಹೆಸರಲ್ಲೂ ಹುಟ್ಟುಹಬ್ಬ- ಗಳಾಗುತ್ತಿದ್ದವು.  ಆದರೆ ಅದಕ್ಕೆ ಮುಂಬರುವ ಹಬ್ಬಕ್ಕಾಗಿ ನಾವು ಕಾಯಬೇಕಾಗುತ್ತಿತ್ತು.
'ಎರೆದುಕೊಳ್ಳುವವರ ನಡುವೆ ಡೊಗ್ಗಿದಂತೆ'  ಅಂದೊಂದು ದಿನ ನಮ್ಮನ್ನು ಕೂಡಿಸಿ ,ನೆತ್ತಿಗೆ ಎಣ್ಣೆವೊತ್ತಿ,
'ಆಯುಷ್ಯವಂತಳಾಗು.
'ಭಾಗ್ಯವಂತಳಾಗು.
'ಕಲ್ಲು ಖನಿಯಾಗು.
'ಕರಕಿ ಬೇರಾಗು.
-'ಮೂಡಿ'ದ್ದರೆ ಇನ್ನೂ ಇಷ್ಟು'ಏನೇನೋ ' ಆಶೀರ್ವದಿಸಿ ಸ್ವಲ್ಪ ಹೆಚ್ಚು ನೀರು ಹಾಕಿ  ಎರೆದರೆ ಅದೇ ಹಬ್ಬ.ಅಂದು ಧಾರ್ಮಿಕ ಹಬ್ಬವೂ ಆದದ್ದರಿಂದ  ಸಹಜವಾಗಿಯೇ ಮಾಡುವ ಸಿಹಿ ತಿಂಡಿಯೇ  ನಮ್ಮ' ಹುಟ್ಟು ಹಬ್ಬದ' ಮೆನ್ಯೂ'.

ಆಶ್ಚರ್ಯವೆಂದರೆ ಯಾವ ಕಾಲಕ್ಕೂ ನಾವು ಹೆಚ್ಚು ಏನನ್ನೂ  ಬಯಸುತ್ತಲೇ ಇರಲಿಲ್ಲ ಎಂಬುದು.ಒಂದು ರೀತಿಯಲ್ಲಿ ಬದುಕನ್ನೇ  'pre - programming ' ಮಾಡಿಟ್ಟ ಹಾಗೆ. ' ನಿರೀಕ್ಷೆ ಇಲ್ಲದೆಡೆ ನಿರಾಶೆಯೂ' ಇರುವುದಿಲ್ಲ ಎಂದು ಯಾರೂ ಹೇಳಿಕೊಡದಿದ್ದರೂ  ನಾವು ಕಲಿತಿದ್ದು ನಮ್ಮ ಪಾಲಕರನ್ನು ,ಅವರ ಬದುಕನ್ನು , ನೋಡಿಯೇ...

ಇಂದು ಚಿತ್ರ ಸಂಪೂರ್ಣ ತದ್ವಿರುದ್ಧವಾಗಿ ಬದಲಾಗಿದೆ. ಆಗ  'scarcity' (ಕೊರತೆ) ಯ ಸಮಸ್ಯೆಯಿತ್ತು. ಇಂದು 'abundance'- 'ವಿಪುಲತೆ'ಯ  ಸಮಸ್ಯೆ. Software  ಕ್ರಾಂತಿಯಿಂದಾಗಿ   ಎಲ್ಲರಿಗೂ, ಯಾವುದಕ್ಕೂ ಒಂದಿಷ್ಟೂ ಕಡಿಮೆಯಿಲ್ಲ. ಎಲ್ಲರಿಗೂ ತಮ್ಮ, ತಮ್ಮ status ತೋರಿಸುವ ಹಂಬಲ. ಹೀಗಾಗಿ ಅವಶ್ಯಕತೆ ಇರಲಿ, ಬಿಡಲಿ  ವಿಪರೀತ ಖರ್ಚು  ಮಾಡಬೇಕೆಂಬ ಹುಚ್ಚು. ಹೀಗಾಗಿ ಮದುವೆ, ಮುಂಜಿವೆಗಳಂತೆ  ಹುಟ್ಟು ಹಬ್ಬವೂ ಒಂದು Event ಅನ್ನುವ ಮಟ್ಟಕ್ಕೆ ಬಂದು ತಲುಪಿದೆ. ಖಂಡಿತ ನಾನದನ್ನು ಟೀಕಿಸುತ್ತಿಲ್ಲ. ಆದರೆ  ಸಾಧ್ಯವಿರಲಿ, ಬಿಡಲಿ, ಒದ್ದಾಡಿ ಕೊಂಡಾದರೂ ಮಾಡಲೇಬೇಕು ಅನ್ನುವವರು ಒಮ್ಮೆ ಯೋಚಿಸುವುದು ಒಳಿತು ಎಂಬುದು ನನ್ನ ಅನಿಸಿಕೆ. ಅಲ್ಲದೇ ಕೌಟುಂಬಿಕ ನೆಲೆಯಲ್ಲಿ , ಮನೆ ಜನರ ಸಮ್ಮುಖದಲ್ಲಿ  ಆಚರಿಸುವ ಹಬ್ಬದ ಆಪ್ತತೆ ಇಂಥ Big and Fat function ಗಳಲ್ಲಿ ಕಂಡುಬರುವುದಿಲ್ಲ ಎಂಬುದು ಮಾತ್ರ ಅನುಭವ ವೇದ್ಯ...

ಇಂದಿಗೆ ನಾನು  'ಎಪ್ಪತ್ತೈದು' ಮುಗಿಸಿ ಎಪ್ಪತ್ತಾರಕ್ಕೆ ಕಾಲಿಟ್ಟೆ. ನಿನ್ನೆಯಿಂದ ಮನೆಯಲ್ಲಿ ಮೊಮ್ಮಕ್ಕಳ ಚರ್ಚೆ,"ಅಜ್ಜಿ, ಏನು ಮಾಡೋಣ?" ಎಂದು. ಈ  ೭೫ ರ ಅವಧಿಯಲ್ಲಿ ನಾನು ಕಂಡ  ಎಲ್ಲ ರೀತಿಯ ಹುಟ್ಟುಹಬ್ಬಗಳ ಒಂದು ಚಿತ್ರಣ 
ಹಾಗೆಯೇ ಕಣ್ಣಮುಂದೆ ಸುಮ್ಮನೇ ಹಾದು ಹೋದದ್ದು ಹೀಗೆ, ಇದೇ  ಸಮಯದಲ್ಲಿ.  ಸುಮ್ಮನಿರಲಾರದೇ ಅದಕ್ಕೊಂದು ಶಬ್ದರೂಪ ಕೊಟ್ಟೆ.
ಅಷ್ಟೇ  ವಿಷಯ, ಬೇರಿನ್ನೇನೂ ಇಲ್ಲ..
ಒಟ್ಟಿನಲ್ಲಿ, ಹುಟ್ಟುಹಬ್ಬವೆಂದರೆ,
10 % Functions...
90% Emotions...ಇದು ನನ್ನ ಭಾವನೆ.

ಒಂದು ಹೊಸ ಉಡುಪು,
ಎರಡು ಮನ್ ಪಸಂದ್ ಖಾದ್ಯಗಳು...
ಮೂರು/ನಾಲ್ಕು  ಆತ್ಮೀಯ ಕರೆಗಳು...
ಮನೆ ಜನರೊಡನೆ ಒಂದಿಷ್ಟು  ರಸಗಳಿಗೆಗಳು...
THAT'S  IT...





Tuesday 2 February 2021

೩೬..'ಅಳಿದ' ಮೇಲೆ ಉಳಿವುದೇನು???

" ನನ್ನ ತಂದೆ ಸದಾ  ಹಸನ್ಮುಖಿ. ಎಂಥ ಕಷ್ಟಗಳಲ್ಲೂ  ಮುಖ ಮುದುಡಿದವರಲ್ಲ.
ಸದಾ ವಿನೋದಪ್ರಿಯರು. ನಗುವ, ನಗಿಸುವ   ಅತಿಶಯದ ಧರ್ಮ ಅವರದು. ನಗುತ್ತಾ ಈ ಲೋಕ ತೊರೆದು ಹೋದವರು. ಅಂಥವರ ಪುಣ್ಯತಿಥಿಗೆ ಜನ ಬಿಳಿ ಬಟ್ಟೆಯಲ್ಲಿ ಬಂದು ತಲೆ ಕೆಳಗೆ ಹಾಕಿ  ಸಂತಾಪದ ನುಡಿಯಾಡುವದು ಬೇಡ. ನಕ್ಕು ,ನಗಿಸಿ, ಖುಶಿಯಿಂದ ಹೋಗುವಂತಾಗಲಿ.ಅಂದರೆ ನನ್ನ ತಂದೆಗೂ ತೃಪ್ತಿಯಾಗುತ್ತದೆ ಅಂದೆ. ಮನೆಯವರೆಲ್ಲರೂ  ತಕ್ಷಣ ಅನುಮೋದಿಸಿದರು. ಅದಕ್ಕಾಗಿಯೇ ಈ ಹಾಸ್ಯ ಗೋಷ್ಠಿ. ನಮ್ಮ ತಂದೆಯವರ
ಪರೋಕ್ಷ ಸಾನಿಧ್ಯದಲ್ಲಿ..."

ಇದು ಹಿಂದಿ ನಟ ಅನುಪಮ್ ಖೇರ್ ತಮ್ಮ ತಂದೆಯ ಮರಣಾನಂತರದ ಹದಿಮೂರನೇ ದಿನ  ಮಾಡಿದ ಭಾಷಣ.

ಹಾಗೆಯೇ ನಮ್ಮ ದೂರದ ಸಂಬಂಧಿಕರೊಬ್ಬರಿದ್ದರು. ಗಂಡ ,ಹೆಂಡತಿ ಆದರ್ಶ ದಾಂಪತ್ಯಕ್ಕೊಂದು ಅದ್ಭುತ ಮಾದರಿ. ಅನಿವಾರ್ಯತೆ ಹೊರತುಪಡಿಸಿದರೆ ಅವರನ್ನು ಬೇರೆ ಬೇರೆ ಕಂಡಿದ್ದೇ ಇಲ್ಲ.ಅಷ್ಟು ಹೊಂದಾಣಿಕೆ  ಅವರಲ್ಲಿ.ಜಗಳವಂತೂ ಕಂಡರಿಯದ್ದು. ಮಕ್ಕಳೇ ಅವರಿಗೆ forever honeymoon pair ಎಂದು ಛೇಡಿಸುತ್ತಿದ್ದರು. ಕೆಲವರ್ಷಗಳ ನಂತರ ಗಂಡ ಹೃದಯ ಸ್ಥಂಬನದಿಂದ ತೀರಿಕೊಂಡಾಗ ಕೆಲ ದಿನ ಸ್ವಾಭಾವಿಕ ವಾಗಿಯೇ ಹೊರಗೆ ಕಾಣಿಸಿಕೊಳ್ಳಲಿಲ್ಲ. ಕೊನೆಗೊಮ್ಮೆ ಹೊರಬಂದಾಗ ಅವರಲ್ಲಿ ಕಿಂಚಿತ್ತೂ ಬದಲಾವಣೆ ಇರಲಿಲ್ಲ. ಅದೇ ಶಾಂತ ಮುಖ, ಅದೇ ಇರುವಿಕೆ, ಅದೇ ಆರ್ದ್ರತೆ...ಎಲ್ಲರಿಗೂ ತೀವ್ರ ಅಚ್ಚರಿ. ಬೇರೆಯದನ್ನೇ ಊಹಿಸಿಕೊಂಡು ಸಂತೈಸಲು ತಯಾರಾದವರು  ಕಂಗಾಲು.

" ಹೌದು, ನನಗೆ ದುಃಖವಾಗಿದೆ. ಅದು ನನ್ನ ಸ್ವಂತ ಭಾವನೆ. ಅದನ್ನು ಸದಾ ಮುಖದ ಮೇಲೆ  ಹೊತ್ತು  ಇತರರ ಮೇಲೂ ಹೇರುವ ಅಧಿಕಾರ ನನಗಿಲ್ಲ. ಅದೆಲ್ಲ ನನ್ನ ವೈಯಕ್ತಿಕ ವಲಯಕ್ಕೆ / ಅತಿ ಆತ್ಮೀಯರೊಂದಿಗೆ  ಸೀಮಿತ.  ನನ್ನ ಖಿನ್ನ ಮುಖ, ಕಣ್ಣೀರು, ಅಸ್ತವ್ಯಸ್ತ ಇರುವಿಕೆ
ಹೊರಗಿನ ಜನಕ್ಕೆ  ತಪ್ಪು ಅಂದಾಜನ್ನೇ 
ಕೊಡಬಹುದು. " ಪಾಪ, ಎಷ್ಟು ಚನ್ನಾಗಿದ್ದರು, ಈಗ ನೋಡಿ ಏನು ಅವಸ್ಥೆ!!  ಮಕ್ಕಳು ಒಂದಿಷ್ಟು ಚನ್ನಾಗಿ  ನೋಡಿ ಕೊಳ್ಳಬಾರದೇ?" ಅಂದರೆ  ನಾನು  ಇದ್ದೂ ಸತ್ತಂತೆ. ಮೊದಲ ಸಲ ಹೃದಯಾಘಾತವಾದಾಗಲೇ  ನನ್ನವರು ನನ್ನಿಂದ ವಚನ ತೆಗೆದುಕೊಂಡಿದ್ದರು. ಅವರ ಇಚ್ಛೆಯಂತೆ ಇರಬೇಕಾದ್ದು ನನ್ನ ಮೊದಲ ಆದ್ಯತೆ." - ಇದು ಆತ್ಮೀಯರೆದುರು  ಅವರು ತೆರೆದಿಟ್ಟ ಸತ್ಯ.

ಮೇಲಿನ ಎರಡೂ ನಿಲುವುಗಳು ಮೇಲ್ನೋಟಕ್ಕೆ ಅಸಂಗತ. ಆದರೆ ಸ್ವಲ್ಪವೇ ಒಳಹೊಕ್ಕರೂ  ಇದನ್ನೇ ಅಲ್ಲವೇ ನಮ್ಮ ದಾರ್ಶನಿಕರು ,ತಿಳಿದವರು, ಪುರಾಣಗಳು ಹೇಳಿದ್ದು, ಹೇಳುತ್ತಲೇ ಬಂದಿದ್ದು. ನಿಜ, ಬದುಕು ಪುಸ್ತಕ ಓದಿ, ಪುರಾಣ ಕೇಳಿ , ರೂಪಿಸಿಕೊಳ್ಳವಷ್ಟು ಸುಲಭ ಸಾಧ್ಯವಲ್ಲ.ಆದರೆ ಕೆಲವರಾದರೂ ಆ ಮಟ್ಟಕ್ಕೆ ತಲುಪುವ ಸಾಮರ್ಥ್ಯ ತೋರಿಸಿದರೆ ಖಂಡಿತ ಖಂಡಿಸಬಾರದು.
ಒಳಹೊಕ್ಕು ಬೇರೆ ಬೇರೆ ಆಯಾಮದಿಂದಲೂ ಯೋಚಿಸಿ, ನಮಗಾಗದ್ದನ್ನು ಅವರು  ಮಾಡಿ ತೋರಿಸಿದ್ದಕ್ಕಾಗಿ ಅಭಿನಂದಿಸಬೇಕು.
"ಪರಿವರ್ತನೆ ಜಗದ ನಿಯಮ"  ಎಂದು
ಭಗವದ್ಗೀತೆಯ ಸಾರವೇ ಹೇಳಿದ್ದನ್ನು ನಾವು  ಒಪ್ಪಲಿ, ಬಿಡಲಿ, ಒಪ್ಪಿದವರನ್ನು 
ಪ್ರಶ್ನಿಸುವ ಹಕ್ಕಂತೂ ಖಂಡಿತ  ನಮಗಿಲ್ಲ.

Wednesday 27 January 2021

೩೪. ದೇವರ ಆಟ ಬಲ್ಲವರಾರು? ಆತನ ಎದುರು ನಿಲ್ಲುವರಾರು??



" ನನಗೂ ನಮ್ಮನೇಯವರಿಗೂ ಹದಿಮೂರು ವರ್ಷಗಳ ಅಂತರ ಕೃಷ್ಣಾ..."

"ಆಗೆಲ್ಲ ಹಾಗೇ ಅಲ್ವಾ ಇದ್ದದ್ದು...ನಮಗೂ ಹತ್ತು ವರ್ಷಗಳ ಅಂತರವಿತ್ತು. ಆಗ ವಯಸ್ಸು ನೋಡುತ್ತಲೇ ಇರಲಿಲ್ಲ, ವರನ ಗುಣ, ಶಿಕ್ಷಣ, ಮನೆತನ, ಸಂಸ್ಕಾರ, ಇದು ಹೆಚ್ಚು ಮುಖ್ಯವಾಗ್ತಾಯಿತ್ತು. ಕೂಡು ಕುಟುಂಬದಲ್ಲಿ ಹೊಂದಿಕೊಂಡು ಹೋಗುವುದಕ್ಕೆ ಆದ್ಯತೆ ಹೆಚ್ಚಾಗಿತ್ತು ಅಲ್ವಾ? "

"ಹೌದು, ಹಾಗಂತಲೇ ನಮಗೂ ಅದು
ಚಿಂತೆಯ ವಿಷಯವೇ ಆಗಿರಲಿಲ್ಲ." 
         "ಒಂದು ಗಂಡು, ಒಂದು ಹೆಣ್ಣು ಹೇಗೋ ಏನೋ ಕೂಡಿ ಕೊಂಡು" ಅಂತಾರಲ್ಲಾ, ಆ ಥರಾ".

"ಅದೂ  ಒಂದು ರೀತಿಯಲ್ಲಿ  ಸರೀನೇ ಅನಿಸುತ್ತದೆ ಅಲ್ವಾ, ಕೆಲವೊಂದು ಸಲ..."

"ಹೌದು ಕೃಷ್ಣಾ, Everything happens with a reason, ಅನ್ನೋ ಹಾಗೆ ಪ್ರತಿಯೊಂದು ವಿಷಯಕ್ಕೂ ಎರಡು ಮಗ್ಗಲು ಇದ್ದೇ ಇರುತ್ತವೆ ,- ಒಂದು ಒಳ್ಳೆಯದು, ಇನ್ನೊಂದು ಕೆಟ್ಟದ್ದು. ಸುಧಾರಿಸಿ ಕೊಂಡು, ಅನುಸರಿಸಿಕೊಂಡು ಹೋಗಲೇಬೇಕಾದುದೇ ಅಂತಿಮ ಸತ್ಯ. ಬದುಕು ಸಹ್ಯವಾಗಬೇಕು ಎಂದರೆ  ಸ್ವಲ್ಪ ಮಟ್ಟಿಗೆ ರಾಜಿಯಾಗದೇ ಅನ್ಯ ಮಾರ್ಗವಿಲ್ಲ."

ಹೀಗೇ  'ಹಾಗೇ ಸುಮ್ಮನೇ' ನಡೆದ ಇಬ್ಬರು ಗೆಳತಿಯರ ಹರಟೆಯ ಮಂಥನದಿಂದ ಹೊರಟ ನವನೀತ ಶುಭ್ರವಷ್ಟೇ ಅಲ್ಲ, ರುಚಿಯೂ ಹೆಚ್ಚಿದ್ದುದು ಗಮನಕ್ಕೆ ಬಂದಾಗ ನಿಜವಾಗಿಯೂ ಚಿಂತನೆಗೆ ಹಚ್ಚಿದ್ದು ಸುಳ್ಳಲ್ಲ...

ನನ್ನ, ಈ ಗೆಳತಿಯ ಪರಿಚಯ  ಆರು ವರ್ಷಗಳಷ್ಟು ಹಳೆಯದು. ಈ ಮನೆಗೆ ಹೊಸದಾಗಿ ಬಂದಾಗ, ಕಾಲನಿಯ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಆದ ಪರಿಚಯ, ಹೂವಾಗಿ, ಹಣ್ಣಾಗಿ, ಪಕ್ವವಾದದ್ದು. ಒಬ್ಬರ ಮನೆಗೊಬ್ಬರು ಹೋಗಿ, ಬಂದು ಮಾಡಿ ಪರೀಕ್ಷಿಸಿ ನೋಡಿದ್ದು. ಗಟ್ಟಿಯಾಗಿ ಉಳಿಯುತ್ತದೆ ಎಂಬ ನಂಬುಗೆಗೆ  ಇಂಬು ಕೊಟ್ಟಿದ್ದು. ಹೀಗಾಗಿ ನಮ್ಮ ಮಾತುಗಳು ಔಪಚಾರಿಕತೆಯ ಪರಿಧಿ ಮೀರಿ  ವೈಯಕ್ತಿಕವಾಗಿ ವ್ಯಾಪ್ತಿ ಹೆಚ್ಚಿಸಿ ಕೊಂಡದ್ದು...

     ಅವರ ಮನೆಯೊಂದು 'ನಂದಗೋಕುಲ' ಅಂತಾರಲ್ಲಾ ,ಹಾಗೇ. ಎಲ್ಲರೂ ಸದಾ ಹಸನ್ಮುಖಿ ಗಳು. ಅಂತೆಯೇ ಸದಾ ಸುಖಿಗಳು. ಒಬ್ಬರಿಗೊಬ್ಬರು ಮಿಡಿಯುವ ರೀತಿ ನೋಡಿಯೇ ಕಲಿಯಬೇಕು. 'ಪಡೆಯುವದಕ್ಕೆ'  ಅಲ್ಲ, 'ಬಿಟ್ಟು ಕೊಡುವುದಕ್ಕೆ' ಸದಾ  ಪೈಪೋಟಿ.
ಯಾರೇ ,ಯಾಕಾಗಿಯೇ, ಯಾವಾಗಲೇ ಅವರ ಮನೆಗೆ  ಹೋಗಲಿ, ಮನದಾಳದ ಆತಿಥ್ಯ ಗ್ಯಾರಂಟಿ...
  
 "ಮೊದಮೊದಲು ನಮಗೆ ನಮ್ಮ ವಯಸ್ಸಿನ ಅಂತರ ಕಾಡುವದು ಸ್ವಾಭಾವಿಕ. ದಿನಗಳೆದಂತೆ  ಹಾಗಿರುವದಕ್ಕೂ ಅರ್ಥವಿದೆ ಅನಿಸುತ್ತದೆ. ಹಿಂದಿನಕಾಲದವರು ದಡ್ಡರಲ್ಲ. ಯೋಚಿಸಿಯೇ ಪದ್ಧತಿಗಳನ್ನು ರೂಪಿಸಿದ್ದಾರೆ. ಗಂಡ , ಹೆಂಡತಿ ಹೇಗಿದ್ದರೂ ಯೌವನದ ದಿನಗಳು , ತಂತಾನೇ ಕಳೆದು ಹೋಗುತ್ತವೆ. ಮನೆ, ಮಕ್ಕಳು, ಉದ್ಯೋಗದಂಥ ಅವಶ್ಯಕತೆಗಳಿಗೆ  ಸಮಯದ ಹೆಚ್ಚಿನ  ಪಾಲು ಕೊಡಲೇ ಬೇಕಾಗುವುದರಿಂದ  ಉಳಿದ ಕೊರತೆಗಳು ತಾತ್ಕಾಲಿಕವಾಗಿ ಹಿನ್ನೆಲೆಗೆ ಸರಿಯುತ್ತವೆ. ಪ್ರಶ್ನೆ ಬರುವುದು ಜವಾಬ್ದಾರಿ ಎಂಬುದು ಒಂದು ಹಂತಕ್ಕೆ ಬಂದು ಇಬ್ಬರಿಗೂ ವಯಸ್ಸಾಗತೊಡಗಿದಾಗ... ಒಬ್ಬರಿಗೊಬ್ಬರು ಅರಿತುಕೊಂಡು ಮನೆಯ ಸಮಸ್ಯೆಗಳನ್ನು ಗ್ರಹಿಸಿ ಸಾಮರಸ್ಯ ಕಾಯ್ದುಕೊಳ್ಳಲು ಶ್ರಮಿಸಬೇಕಾಗುವ ಹಂತ (ಪ್ರಸಂಗ) ಬಂದಾಗ. ಆಗ ಹಟ , ಅಹಂ, ದುರಭಿಮಾನ ಕಿಂಚಿತ್ತೂ ಉಪಯೋಗಕ್ಕೆ ಬರುವುದಿಲ್ಲ. ಕೊಳ್ಳುವದಕ್ಕಿಂತಲೂ ಕೊಡುವುದು ಹೆಚ್ಚಾಗಬೇಕಾಗುತ್ತದೆ. ಅಂದಾಗ ಮಾತ್ರ ಸಂಸಾರ ಒಗ್ಗಾಲಿ ಆಗುವುದಿಲ್ಲ. ಈಗ ನೋಡಿ, ನಮ್ಮ  ವಯಸ್ಸಿನ  ಅಂತರ ಕಡಿಮೆ ಇದ್ದು  ನನಗೂ ಅವರಷ್ಟೇ ವಯಸ್ಸಾಗಿದ್ದರೆ ಯಾರು ಯಾರಿಗೆ ಆಪತ್ಕಾಲದಲ್ಲಿ /ಅನಾರೋಗ್ಯದಲ್ಲಿ ಮಾಡಬೇಕಾಗಿತ್ತು.? ಹೇಳಿ. ಚಿಕ್ಕವಳಾಗಿದ್ದಕ್ಕೆ ತಾನೇ ನಾನು ಅವರಿಗೆ ಮಾಡಬಲ್ಲೆ, ಮಕ್ಕಳಿಗೂ ಅವರವರ ಬದುಕು, ತಮ್ಮವೇ ಜವಾಬ್ದಾರಿ ಇರುವುದಿಲ್ಲವೇ? ಅವರೂ ಎಷ್ಟೂಂತ  ಮಾಡಬಹುದು?" ದೇವರು ಜಾಣ. ಯಾರನ್ನು ಹೇಗಿಡಬೇಕು ಎಂಬುದನ್ನು ಅವನಷ್ಟು ಚೆನ್ನಾಗಿ ಬಲ್ಲವರಾರು? ಅಲ್ವಾ!?

ಹೀಗೆ ನನ್ನ ಆ ಗೆಳತಿ ಹೇಳುತ್ತಾ ಹೋದರೆ
ಯಾರೂ ಆ ಕ್ಷಣಕ್ಕೆ ಅದನ್ನು ಒಪ್ಪಲೇಬೇಕು, ಹಾಗಿರುತ್ತದೆ ಅವರ ಮಾತುಗಳು.ನಾನು ಅವರ ಮನೆಯಲ್ಲಿ ಇದನ್ನು ಕಣ್ಣಾರೆ ಕಂಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಗಂಡನ ಆರೋಗ್ಯ ಸಮಸ್ಯೆ ಶುರುವಾದ ಮೇಲಂತೂ  ಅವರು ' 'ಮಗು'ವಾಗಿ ಬಿಟ್ಟಿದ್ದರು.ಹೆಂಡತಿಯ ಮೇಲೆ ಮಾನಸಿಕವಾಗಿ ಸಂಪೂರ್ಣ ಅವಲಂಬಿಸುವಂತಾಗಿತ್ತು. ಹೆಂಡತಿ ಅರೆಕ್ಷಣ ಆಚೀಚೆ ಆದರೂ ಗಾಬರಿ ಬೀಳುತ್ತಿದ್ದರು. ಅವರು ಎದುರಿಗೆ ಕಂಡಾಗ  ಗಂಡನ ಅರಳಿದ ಕಣ್ಣುಗಳನ್ನೊಮ್ಮೆ ನೋಡಬೇಕು. ತಮ್ಮಿಂದ  ಹೆಂಡತಿಗೆ ಸ್ವಲ್ಪ ತೊಂದರೆಯಾಗುತ್ತದೆ ಎಂಬುದು ತಿಳಿಯುತ್ತಿತ್ತು, ಆದರೆ ಅದನ್ನು ಗೆಲ್ಲುವುದು ಅವರ ಸಾಮರ್ಥ್ಯಕ್ಕೆ ಮೀರಿದ ಮಾತಾಗಿತ್ತು.ನನ್ನ ಗೆಳತಿಯೂ ಕೂಡ ಗಂಡನನ್ನು ಆರಾಮವಾಗಿರಿಸಲು ಸದಾ ಯಾವ ತ್ಯಾಗಕ್ಕೂ ಸಿದ್ಧರಿರುವದು  ಅಚ್ಚರಿ ತರುತ್ತಿತ್ತು .ಅವರ ಕಿರಿಕಿರಿ, ಕೊಂಚ ಪ್ರಮಾಣದ ಹಟ, ನೋಡುವವರಿಗೆ 
ಅತಿ ಅನಿಸಿದರೂ ಹೆಂಡತಿ ಮಾತ್ರ  ಅದನ್ನೇ ಅಕ್ಕರೆ, ಕಕ್ಕುಲಾತಿಯಿಂದ ನಮಗೆ  ಹೇಳುವಾಗ ಆ ಮಹಾತಾಯಿ ತಾನು ಹುಟ್ಟಿದ್ದು ಸಾರ್ಥಕವಾಯಿತೆಂಬಂತೆ ಧನ್ಯರಾಗುತ್ತಿದ್ದರು. ಆಗ ನನಗನಿಸಿದ್ದು 
" ಸುಖ, ನೆಮ್ಮದಿ  ಒಂದು ಮಾನಸಿಕ ಸ್ಥಿತಿ.  ಅದನ್ನು ಹೊರಗೆ ಹುಡುಕಲಾಗದು"  ಎಂದು.

ಇಂದು ಆ ಹಿರಿಯರು ತೀರಿಕೊಂಡು ಹತ್ತನೇ ದಿನ. ವೈಕುಂಠ ಸಮಾರಾಧನೆಗೆ
ಆಮಂತ್ರಣ ಬಂತು. ಹಾಗಾಗಿ ನೆನಪಿನ ಗಾಲಿ ಒಂದು ಸುತ್ತು ತಿರುಗಿ ನಿಂತಿದ್ದು ಹೀಗೇ.

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...