Wednesday, 5 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ...

...ಈ ಭವರೋಗಕ್ಕೆ ಮದ್ದಿಲ್ಲ....

"ಟ್ರಿಣ್....ಟ್ರಿಣ್....ಟ್ರಿಣ್..."

*ಹಲೋ, ಯಾರು?"

" ನಾನು....."

"ಓ ಏನಿದು ಅಪರೂಪ...ಏನೂ ಸುದ್ದೀನ ಇದ್ದಿದ್ದಿಲ್ಲ....ಪೂರಾ ಗಾಯಬ್.."

"ನನಗ ಆರಾಮss ಇದ್ದಿದ್ದಿಲ್ಲ...ಎರಡು ತಿಂಗಳಿನಿಂದ..."

"ಏನಾಗಿತ್ತು? "

"ಶುಗರ್,ಬಿಪಿ ಎರಡೂ ಏರಿತ್ತು..."

"ಡಾಕ್ಟರಿಗೆ ತೋರ್ಸಿದೇನು? ಏನಂತಾರ?"

ಏನನ್ಬೇಕು?  ನೂರಾಎಂಟು test ಮಾಡ್ಸಿ ರೊಕ್ಕ ಎಳಕೊಂಡು ಆದಮ್ಯಾಲ "Diet ಮಾಡ್ರಿ..walking ಬಿಡಬ್ಯಾಡ್ರಿ...ಔಷಧಿ regular ತೊಗೋರಿ...ಇದsss. ಇದು ನಮಗೂ ಗೊತ್ತಿರ್ತದ.."

" ಗೊತ್ತಿರ್ತದ..ಆದ್ರ ಏನೂ ಪಾಲಿಸೋದಿಲ್ಲ..ಹೌದಲ್ಲೊ?"

" ಹತ್ತು- ಹದಿನೈದು ವರ್ಷದ ಮ್ಯಾಲಾತು...ಎಷ್ಟೂಂತ ಇದೆಲ್ಲ ಮಾಡೋದು..ಬ್ಯಾಸರಾಗೂದಿಲ್ಲನ?"

"ಹಂಗಂದ್ರ ಹೆಂಗ... ಅಕ್ಕೀನೂ ಖರ್ಚ ಆಗಬಾರ್ದು...ನೆಂಟರೂ ಉಣಬೇಕೂ ಅನ್ನೋ ಲೆಕ್ಕದು..
ಮತ್ತ walking ಸುರು ಮಾಡು...ಎಲ್ಲ ಸರಿಹೋಗ್ತದ.."

" ಎಲ್ಲೆ ಹೋಗಲೆವಾ..ಈ ಮೈ ಹೊತ್ಗೊಂಡು...ನಾಕ ಹೆಜ್ಜಿಗೆ ದಮ್ ಹತ್ತದ... ಕಾಲು ಬ್ಯಾರೆ ಬ್ಯಾನಿ ಆಗ್ಯಾವ...ಬಾಯತಾವ.."

" ಮದಿವ್ಯಾಗ್ದ ಹುಚ್ಚು ಬಿಡಂಗಿಲ್ಲ...ಹುಚ್ಚಬಿಡ್ದ ಮದಿವ್ಯಾಗಂಗಿಲ್ಲ..ಆ ಲೆಕ್ಕ ಆತದು...ನನಗೊತ್ತದ ಆ ದರಿದ್ರ serials ಬಿಡಬೇಕಾಗ್ತದ..ಆ ಸಂಕಟ ನಿಂಗ..."

"ಅದರ ಮ್ಯಾಲ್ಯಾಕ ಎಲ್ಲಾರ ಕಣ್ಣೊ ಗೊತ್ತಿಲ್ಲ...ಮನ್ಯಾಗೂ ಇದss ರಾಗ...ಇದss ಹಾಡು"

"ಮತ್ತಬಿಡ್ತಾರೇನು?? ಒಂದ ಕಡೆ ತಾಸಗಟ್ಟಲೇ ಕೂಡೋದು,ಕುರುದಿನಸಿ ಕುರುಕೋದು...ಜಡ್ಡ ಬರಬ್ಯಾಡಂದ್ರ ಹೆಂಗ???ಸಂಜಿಗೆ ಆಗದಿದ್ರ ಬೆಳಿಗ್ಗೇ ಎದ್ದು ಸ್ವಲ್ಪರ walking ಮಾಡದಿದ್ರ ಹೆಂಗ....

" ನನ್ನ ಸಂಕಟ ನನಗ...
ಬ್ಯಾರೆದವ್ರಿಗೆ ಅರ್ಥ ಆಗೂದಿಲ್ಲ..ನಸಕಿನ ತಂಪಿನ್ಯಾಗ ತಲಿಸೂಲಿ ಏಳ್ತದ....ಒಂದ ಸಮನ ಸೀನು ಸುರುವಾಗ್ತಾವ..."
    
" ಹಸ್ತು ಕಾಲೇಳೂದಿಲ್ಲ....ಉಂಡು ಹೊಟ್ಟಿ ಬಗ್ಗೂದಿಲ್ಲ ಅಂದ್ಲಂತ ಹೊಸಾಸೊಸಿ ಮನಿಗೆ ಬಂದಾಗ... ನಾ ಏನೂ ಬದಲಾಗೂದಿಲ್ಲ...ನನಗೆಲ್ಲ ಬದಲಾಗ್ಬೇಕು -ಲೆಕ್ಕ ಆತು ನಿಂದು...ಏನರ ಮಾಡ್ಕೊ ತಾಯಿ...ನನಗೇನೂ ಹೇಳಬ್ಯಾಡ..."

" ನಾ ಆರಾಮ ದಿನ ತಗೀತೇನಿ ಅಂದ್ರ ಎಷ್ಟು ಮಂದಿಗೆ ಹೊಟ್ಟೆ ಉರಿ ಅಂತೇನಿ... ಎಲ್ಲಾ ಬಿಟ್ಟು ಸನ್ಯಾಸಿ ಆಗಲೇನು?...ಎಲ್ಲಾರೂ ಉಪದೇಶ ಮಾಡೋರ...

"ಮಾಡೂದಿಲ್ಲ...ಇನ್ನಮುಂದ ನಮ್ಮ ಮುಂದ ನಿನ್ನ ಜಡ್ಡಿನ ಸುದ್ದಿ ಬಿಲ್ಕುಲ್ ತಗಿಯೋಹಂಗಿಲ್ಲ..."

" ಇದೇನ್ ಹೊಸಾ ವರಸೆ ನಿಂದು...ನಮ್ಮವರು, ತಮ್ಮವರು ಅಂತ ಯಾಕ ಇರ್ಬೇಕು?"

"ನಮ್ಮವರು ಅಂದಮ್ಯಾಲ ಒಂದು ಮಾತ ಹೇಳಿದ್ರ ಕೇಳ್ಬೇಕಿಲ್ಲೋ..ಗಂಡಾ,ಮಕ್ಳು ಎಲ್ಲರ್ನೂ ಹೆದರ್ಸ್ಗೋತಿದಿ...ನಾವು ಹೇಳಿದ್ದೂ ದರ್ದಿಲ್ಲ... ಡಾಕ್ಟರೇನು ಅನ್ನೋ ಉಡಾಫೆ.."

"ಏನss ನಮ್ಮವ್ವಾ ಸುಂಕದವರಮುಂದ ಸುಖಾ ದುಃಖ ಹೇಳ್ಕೊಂಡಂಗಾತು..ಏನೋ ಪಾಪ ಅಂತಿಯನೋ ಅಂದ್ರ ,ಹೇಳಿದ್ದsss  ಪಾಪ ಅನ್ನೋಹಂಗ  ಆತಿದು.."
         
                 ನಾನು ಮಾತಾಡದೇ bye ಹೇಳಿ ಫೋನ್ ಇಟ್ಟೆ..ಇದು ನಮ್ಮಿಬ್ಬರ ನಡುವಿನ ಕಾಯಂ ಬಡದಾಟ...ಹಗ್ಗ ಹರಿಯೋಹಂಗಿಲ್ಲ...ಕೋಲು ಮುರಿಯೋಹಂಗಿಲ್ಲ...ಆಕಿ ಹೇಳಿದ್ದು ಕೇಳೋ ಹಂಗಿಲ್ಲ..ನಾ ಹೇಳೋದು ಬಿಡೋಹಂಗಿಲ್ಲ...ಮಂದೀದು ಬಿಡಲಿ..ಸ್ವಂತ ಕಾಳಜೀನೂ ಇಲ್ಲಂದ್ರ ...." ಎಲ್ಲಾ ಬಿಟ್ಟು ಬದಕ್ಬೇಕರ ಯಾಕ? ಅನುಭವಿಸೇನsss ಹೋಗೋದು " ಅನ್ನೋ ತತ್ವ ಸಿದ್ಧಾಂತ...ಇದೂ ಒಂದು ಭವರೋಗ...

.**** **** **** ****  ****
            ಇಂದು ಇಂಥ ಜನರೇ ಹೆಚ್ಚು.,ಮನಬಂದಂತೆ ಬದುಕು...ನವಮಾಸವಿಲ್ಲ...ಪ್ರಸವ ವೇದನೆಯಿಲ್ಲ...ಧಿಡೀರ್ ಡೆಲಿವರಿಯ ಆಸೆ..ಇರುಳೇ ಇಲ್ಲದ ಹಗಲ್ಗನಸುಗಳ ಅಕ್ಷಯ ಪಾತ್ರೆ ಎಲ್ಲರ ಬಳಿ..ಅವರದೇ ಚಿತ್ರೀಕರಣ..ಅವರದೇ ತಾರಾಗಣ...ಎಲ್ಲೆಲ್ಲೂ ಮುಳ್ಳಿಲ್ಲದ ಗುಲಾಬಿಗಳ ಕನಸುಗಳು....ವಿಲಾಸದ ವಿಳಾಸಗಳು...

( ಕೊನೆಯ ಪ್ಯಾರಾಗ್ರಾಪ್ 'ಎರವಲು')

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...