ರಕ್ಷಾ ಬಂಧನ...
ಕೈಗೆ ಕಟ್ಟುವ ಎಳೆಗೆ
ನೂರೆಂಟು ನೂಲುಗಳು..
ಮೇಲೆರೆಡು ಗಂಟುಗಳು ಬಿಗಿಯಾಗಲು...
ನೂರಾರು ನೂಲುಗಳೆ
ನೂರಾರು ಭಾವಗಳು..
ಹೃದಯ- ಹೃದಯದ ಬೆಸುಗೆಗಣಿಯಾಗಲು...
ಹಣೆಗಿಡುವ ತಿಲಕವದು
ಸೂರ್ಯತೇಜದ ಕೆಂಪು..
ಮನಸೆಂಬ ಮೋಹದಲಿ
ಆರಕ್ತ ಗೊಳಿಸೆ...
ದೀಪ- ಧೂಪವ ದಾಟಿ
ಪ್ರೀತಿ ಎಳೆಗಳ ಮೀಟಿ
ಆರತಿಯ ತಟ್ಟೆಗಳ ಸಜ್ಜುಗೊಳಿಸೆ...
ಬಾಯೊಳಗೆ ಇಡುವ ಸಿಹಿ
ಬರಿಸಿಹಿಯು ತಾನಲ್ಲ...
ಹೃದಯ-ಭಾವಗಳೆ ಪಾಕರೂಪತಾಳಿ
ಮಧುರ ಬಾಂಧವ್ಯವದು
ಚಿಗುರೊಡೆದು ಪಲ್ಲವಿಸೆ
ಪ್ರತಿಮಾತು ಮಧುವಾಗದಿದ್ದರ್ಹೇಳಿ
ಅಣ್ಣ- ತಮ್ಮರ ಕೊಡುಗೆ
ಇಂದ್ರ ಸಂಪತ್ತು ಸಿರಿ..
ಬೇರೇನು ಕೇಳೀತು
ತೃಪ್ತ ಮನಸು....
ವರುಷದಲಿ ಒಂದೆಸಲ
ಬರುತಿರುವ ಈ ಗಳಿಗೆ
ಪ್ರತಿದಿನವು ಬರಲೆಂಬ ಮಧುರ ಕನಸು...
ಶ್ರೀಮತಿ ಕೃಷ್ಣಾ ಕೌಲಗಿ...
No comments:
Post a Comment