Wednesday, 30 July 2025

ರಕ್ಷಾ ಬಂಧನ...

ಕೈಗೆ ಕಟ್ಟುವ ಎಳೆಗೆ
ನೂರೆಂಟು ನೂಲುಗಳು..
ಮೇಲೆರೆಡು ಗಂಟುಗಳು ಬಿಗಿಯಾಗಲು...
ನೂರಾರು ನೂಲುಗಳೆ
ನೂರಾರು ಭಾವಗಳು..
ಹೃದಯ- ಹೃದಯದ ಬೆಸುಗೆಗಣಿಯಾಗಲು...

ಹಣೆಗಿಡುವ ತಿಲಕವದು
ಸೂರ್ಯತೇಜದ ಕೆಂಪು..
ಮನಸೆಂಬ ಮೋಹದಲಿ 
ಆರಕ್ತ ಗೊಳಿಸೆ...
ದೀಪ- ಧೂಪವ ದಾಟಿ
ಪ್ರೀತಿ ಎಳೆಗಳ ಮೀಟಿ
ಆರತಿಯ ತಟ್ಟೆಗಳ ಸಜ್ಜುಗೊಳಿಸೆ...

ಬಾಯೊಳಗೆ ಇಡುವ ಸಿಹಿ
ಬರಿಸಿಹಿಯು ತಾನಲ್ಲ...
ಹೃದಯ-ಭಾವಗಳೆ ಪಾಕರೂಪತಾಳಿ
ಮಧುರ ಬಾಂಧವ್ಯವದು
ಚಿಗುರೊಡೆದು ಪಲ್ಲವಿಸೆ
ಪ್ರತಿಮಾತು  ಮಧುವಾಗದಿದ್ದರ್ಹೇಳಿ

ಅಣ್ಣ- ತಮ್ಮರ ಕೊಡುಗೆ
ಇಂದ್ರ ಸಂಪತ್ತು ಸಿರಿ..
ಬೇರೇನು ಕೇಳೀತು 
ತೃಪ್ತ ಮನಸು....
ವರುಷದಲಿ ಒಂದೆಸಲ
ಬರುತಿರುವ ಈ ಗಳಿಗೆ
ಪ್ರತಿದಿನವು ಬರಲೆಂಬ ಮಧುರ ಕನಸು...

ಶ್ರೀಮತಿ ಕೃಷ್ಣಾ ಕೌಲಗಿ...

No comments:

Post a Comment

  ಮತ್ತದೇ ಸಂಜೆ...ಮತ್ತದೇ ಬೇಸರ...           ನಿನ್ನೆ ಸ್ವಲ್ಪು ಬೇಗ ಮಲಗಿದ್ದೆ.ರಾತ್ರಿ ನಿದ್ರೆಯೂ ಚನ್ನಾಗಿ ಬಂದು ಬೇಗ ಎಚ್ಚರವಾಯ್ತು..ನಿನ್ನಿನ ಮಳೆ/ ಥಂಡಿಯಿಂದಾಗಿ ...