Monday, 19 March 2018

ವಿರಹಿಗೆ

ಭಾವನದಿ ಬತ್ತಿರಲು
ಭಾವರಸವೊಣಗಿರಲು
ಜೀವ ತಲ್ಲಣಿಸುವದು ಸಹಜವಹುದು..
ಕಾವದೇವನಿಗವಗೆ
ಭಾವೂಡಲುಗೊತ್ತು
ಕಾವ್ಯಕಾಸರೆ ತಾನೇ ಒದಗಿ ಬರಬಹುದು..
ನಸು ಮುನಿಸು,ತುಸುಪ್ರೀತಿ
ಉಪ್ಪು ಸಕ್ಕರೆಯಂತೆ
ಎರಡರದೂ ಜೊತೆ ಬೇಕು ಬಾಯಿರುಚಿಗೆ...
ಬಿಸಿಯುಸಿರು,ವಿರಹದುರಿ
ಪಿಸುಮಾತು ಸಾಂತ್ವನದ
ಮೇಳವಿದ್ದರೆ ಸೊಗಸು ಮನದ ಶುಚಿಗೆ...
ಮುಗಿಲ ಮುಸ್ಸಂಜೆಯದು
ನಿನಗೆ ಚಿಂತೆಯೇ ಬೇಡ
ಕಾರ್ಮುಗಿಲ ಕೊನೆಗೊಂದು ಬೆಳ್ಳಿಯಂಚು...
ಮತ್ತೊಂದು ಹೊಸದಿನವು
ಹೊಸಿಲಬಳಿಯಲೇ ಉಂಟು
ಗುಡುಗು ಸಿಡಿಲಿನ ಜೊತೆಗೆ ಹೊಳೆವ ಮಿಂಚು...
ಬಣ್ಣದಾಗಸದಿಂದ
ಸೂರ್ಯ ಸರಿದರೆಯೇನು?
ಮನಮುದುಡಿ ಕೂಡಲಿದು ಸಮಯವಲ್ಲ...
ಬೆಣ್ಣೆ ಮನಸಿನ ಹುಡುಗ
ಇಂದಿಲ್ಲದಿರೆ ನಾಳೆ
ಬಂದು ಕೆಂಪಾಗಿಸುವ ನಿನ್ನ ಗಲ್ಲ....

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...