Tuesday, 21 August 2018

ಏಳು! ಎದ್ದೇಳು!! ದ್ರೌಪದಿ....!!!

ನಿನ್ನ ವಸ್ತ್ರಗಳನ್ನು
ನೀನೇ ಸಂಭಾಳಿಸಿಕೋ..
ಇನ್ನಾವ ಕೃಷ್ಣನೂ ಈಗ ಬರುವದಿಲ್ಲ....

ಎಲ್ಲಿಯವರೆಗೆ
ಆಸೆಯಿಟ್ಟುಕೊಂಡು ಕಾಯುತ್ತಿ..
ಸ್ವಂತ ನಿಯತ್ತನ್ನೇ ಮಾರಿಕೊಂಡವರಿಗಾಗಿ....??

ದುಶ್ಶಾಸನರದೇ
ದರ್ಬಾರದಲ್ಲಿ
ಯಾರಿಂದ ರಕ್ಷಣೆ ಬೇಡುವಿ??

ಸ್ವಂತ ಲಜ್ಜಾಹೀನರು
ನಿನ್ನ ಮರ್ಯಾದೆ _
ಯನ್ನೇನು ಕಾಯಬಲ್ಲರು???

ಏಳು! ಎದ್ದೇಳು!! ದ್ರೌಪದಿ..
ನಿನ್ನ ವಸ್ತ್ರ ನೀನೇ ಉಳಿಸಿಕೋ....

ಹಿಂದಿನವ ಕೇವಲ
ಕುರುಡು ರಾಜನಾಗಿದ್ದ...
ಇಂದಿನವರು ಮೂಕ,ಹಾಗೂ
ಕಿವುಡರೂ ಆಗಿದ್ದಾರೆ....

ಪ್ರಜೆಗಳ ತುಟಿಗಳನ್ನು
ಹೊಲಿಯಲಾಗಿದೆ...
ಹೇಳು- ಕೇಳುವದರ ಮೇಲೆ ಪಹರೆಯಿದೆ...

ನೀನೇ ಯೋಚಿಸು...
ನಿನ್ನ ಅಸಹಾಯಕ ಕಣ್ಣೀರು
ಯಾರ ಮನ ಕರಗಿಸಬಲ್ಲದು?

ಏಳು! ಎದ್ದೇಳು!! ದ್ರೌಪದಿ...
ನಿನ್ನನ್ನು ನೀನೇ ಸಂಭಾಳಿಸಿಕೋ....

ಜೂಜಿನ ಹಾಸು ಹಾಸಿ
ಶಕುನಿಗಳು ಕುಳಿತಿರುವಾಗ
ಉಳಿದವರ ಬುದ್ಧಿ  ಓಡಿತೇ...?

ಏಳು! ಎದ್ದೇಳು !!ದ್ರೌಪದಿ.

ನಿನ್ನ ಮಾನ ಉಳಿಸಿಕೊಳ್ಳುವ
ಹೊಣೆ  ಈಗ ನಿನ್ನದೇ...
ಯಾವ ಕೃಷ್ಣನೂ ಇನ್ನಿಲ್ಲಿ ಬರುವದಿಲ್ಲ.....

ಏಳು ! ಎದ್ದೇಳು!! ದ್ರೌಪದಿ!!!

( ಶ್ರೀ, ಅಟಲ್ ಬಿಹಾರಿ ವಾಜಪೇಯಿಯವರ ಹಿಂದಿ ಕವನದ ಅನುವಾದ...)

No comments:

Post a Comment

One thought that...         "All my children have crossed fifty/all celebrated their silver Jubilee year of marriage/ All the Kids are ...